ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › D.S.NAGABHUSHANA ರವರ ಬ್ಲಾಗ್

ನಾಗಸಂಪದ

ಸಾರ್ವತ್ರಿಕ

ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...

September 15, 2007 - 1:59pm — D.S.NAGABHUSHANA

ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...
ನಾನು ಬಾಲ್ಯದಿಂದ ಕಂಡ ಹಾಗೂ ತುಮಕೂರಿನ ನನ್ನ ಕೆಲವು ಸ್ನೇಹಿತರು ಏನೆಲ್ಲ ಪ್ರತಿಕೂಲ ಮಾಹಿತಿ ನೀಡಿದರೂ, ನಾನು ಗೌರವವನ್ನು ಕಳೆದುಕೊಳ್ಳದಿದ್ದಷ್ಟು ನನ್ನ ಕಣ್ಣಲ್ಲಿ ದೊಡ್ಡವರಾಗಿದ್ದ ಸಿದ್ಧಗಂಗಾ ಮಠಾಧೀಶರು, ಇತ್ತೀಚೆಗೆ ಶಿವಮೊಗ್ಗದಲ್ಲಿ ತಾಂತ್ರಿಕ ಕಾಲೇಜೊಂದನ್ನು ಉದ್ಘಾಟಿಸಲು ಬಂದು, ಸಮ್ಮಿಶ್ರ ಸರ್ಕಾರವನ್ನು ಹೊಗಳಿ ಹೋದಾಗ ತುಂಬ ಮುಜುಗರವೆನ್ನಿಸಿತು. ಉಪಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬ ಬೇನಾಮಿಯಾಗಿ ಹಣ ಹೂಡಿ ಆರಂಭಿಸಲಾಗಿರುವುದೆಂದು ಇಲ್ಲಿ ಜನಜನಿತವಾಗಿರುವ, ತಾಂತ್ರಿಕ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಸ್ವಾಮೀಜಿಯವರಿಗೆ ಈ ಮಾತುಗಳನ್ನಾಡುವ ಔಚಿತ್ಯದ ಕಡೆಗಷ್ಟೇ ಅಲ್ಲ, ತಾವು ಆಡಿದ ಈ ಮಾತು ಇಂದಿನ ಜಾತಿವಾದಿ ರಾಜಕೀಯ ಸಂದರ್ಭದಲ್ಲಿ ಯಾವ ಯಾವ ಅರ್ಥಗಳನ್ನು ಪಡೆಯಬಹುದು ಎಂಬುದರ ಕಡೆಗೂ ಗಮನವಿರಬೇಕಿತ್ತು ಎಂದು ನನ್ನಂತಹ ಯಾರಿಗಾದರೂ ಅನ್ನಿಸದಿರದು.

ನಾನು ನನ್ನ ಬಾಲ್ಯದಿಂದ ನೋಡಿದಂತೆ, ಸಿದ್ಧಗಂಗಾ ಮಠ ಲಿಂಗಾಯ್ತರ ಮಠವಾದರೂ, ಲಿಂಗಾಯ್ತರದೇ ಮಠ ಎಂದು ಹೇಳುವಂತಿರಲಿಲ್ಲ. ಆದಿ ಚುಂಚನಗಿರಿ ಮಠ ಸ್ಥಾಪನೆಯಾಗುವವರೆಗೂ, ಆ ಮಠವನ್ನು ಲಿಂಗಾಯ್ತರಷ್ಟೇ ಒಕ್ಕಲಿಗರೂ ಪೋಷಿಸಿದರು. ಅಷ್ಟೇ ಅಲ್ಲ, ದಕ್ಷಿಣ ಬಯಲು ಸೀಮೆಯ ಎಲ್ಲ ಜಾತಿಗಳವರೂ ಆ ಮಠಕ್ಕೆ ವಾರ್ಷಿಕವಾಗಿ ತಮ್ಮ ಕೈಲಾದಷ್ಟು ದವಸ - ಧಾನ್ಯ, ಸೌದೆ, ಹಣ ಒದಗಿಸುತ್ತಾ ಬಂದು, ಅದರ ಅಪ್ರತಿಮ ರೀತಿಯ ವಿದ್ಯಾ ಸೇವೆಗೆ ಕಾರಣಕರ್ತರಾದರು. ಮೊದಮೊದಲು ಮಠ ಉಟೋಪಚಾರದ ವಿಷಯಗಳಲ್ಲಿ ಜಾತಿ ಭೇದದ ಟೀಕೆಯನ್ನು ಎದುರಿಸಿತದಾರೂ, ನಂತರ ಕಾಲಕ್ಕೆ ತಕ್ಕಂತೆ ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳನ್ನಲ್ಲದಿದ್ದರೂ, ಸಮಾನ ಅನುಕೂಲಗಳನ್ನೊದಗಿಸುವ ವಿದ್ಯಾಕೇಂದ್ರವಾಗಿ ಬೆಳೆಯಿತು. ನನ್ನ ಬಾಲ್ಯ ಸ್ನೇಹಿತರಲ್ಲಷ್ಟೇ ಅಲ್ಲ, ನನ್ನ ಶಾಲಾ ಅಧ್ಯಾಪಕರಲ್ಲೂ ಅನೇಕರು ಆ ಮಠದ ಅನ್ನ ಉಂಡವರು. ಇವರಲ್ಲಿ ಬಹುಪಾಲು ಲಿಂಗಾಯ್ತರೇ ಆಗಿದ್ದರೂ, ಅವರೆಂದೂ ಜಾತಿವಾದಿಗಳಾಗಿರಲಿಲ್ಲ. ಸ್ವತಃ ಸ್ವಾಮೀಜಿ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಎಂದೂ ವಚನಗಳನ್ನು ಉದ್ಧರಿಸಿದ ನೆನಪು ನನಗಿಲ್ಲ. ಹೆಚ್ಚಾಗಿ ಅವರದ್ದು ಸ್ವಾಮಿ ವಿವೇಕಾನಂದರ ಉಲ್ಲೇಖಗಳು - ಅದೂ ಇಂಗ್ಲಿಷಿನಲ್ಲಿ! ನಮಗಾಗ ಸ್ವಾಮೀಜಿಯೊಬ್ಬರು ಇಂಗ್ಲಿಷ್ ಮಾತುಗಳನ್ನು ಉಲ್ಲೇಖಿಸುವುದೇ ಬೆರಗಿನ, ರೋಮಾಂಚನದ ಸಂಗತಿ.

ಬಾಲ್ಯದ ಸುಮಾರು ಮುವ್ವತ್ತು ವರ್ಷಗಳ ನಂತರ ಮತ್ತೆ ಅವರನ್ನು ನಾನು ನೋಡಿದಾಗ, ಅವರಾಗಲೇ ವೃದ್ಧಾಪ್ಯ ಪ್ರವೇಶಿಸಿ ಹಣ್ಣಾಗಿದ್ದರು. ನಮ್ಮ ಗೆಳೆಯರ ಆಹ್ವಾನದ ಮೇರೆಗೆ ತುಮಕೂರಿನಲ್ಲಿ ಅವರ ಸಮ್ಮುಖದಲ್ಲಿ ನನ್ನ ಪತ್ನಿ ಬುದ್ಧನನ್ನು ಕುರಿತ ಪುಸ್ತಕವೊಂದನ್ನು ಬಿಡುಗಡೆ ಮಾಡಿದ ಸಮಾರಂಭದಲ್ಲಿ ನಾನು ಅವರನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡು ನಮಸ್ಕರಿಸಿದೆ. ಹೆಚ್ಚಾಗಿ ದಲಿತ ಗೆಳೆಯರೇ ತುಂಬಿದ್ದ ಆ ಸಮಾರಂಭದಲ್ಲಿ ಅವರು, ಅಂಗೂಲಿ ಮಾಲಾನನ್ನು ಬುದ್ಧ ಪರಿವರ್ತಿಸಿದ ರೀತಿಯನ್ನು ಎಷ್ಟು ಹೃದಯಂಗಮವಾಗಿ ವರ್ಣಿಸಿದರೆಂದರೆ, ಬುದ್ಧನ ಸಮಸ್ಥಿತಿಯನ್ನು ಒಂದರೆಗಳಿಗೆಯಾದರೂ ಅನುಭವಿಸದ ಮನುಷ್ಯ ಆ ರೀತಿ ಮಾತಾಡಲಾರ ಎಂದು ನನಗನ್ನಿಸಿ, ಸ್ವಾಮೀಜಿ ಕುರಿತ ನನ್ನ ಗೌರವ ಬೇರೆ ನೆಲೆಯನ್ನೇ ತಲುಪಿತು. ವಿದ್ಯಾರ್ಥಿಗಳನ್ನು ಬೆಳಗಿನ ಝಾವಕ್ಕೇ ಎಬ್ಬಿಸಿಕೊಂಡು ಕಾಡಿಗೆ ಹೋಗಿ ಸೌದೆ ತರುವ, ಬಾಲ ವಿದ್ಯಾರ್ಥಿಗಳಿಗೆ ಸ್ವತಃ ತಾವೇ ಸ್ನಾನ ಮಾಡಿಸಿ ಬಟ್ಟೆ ಹಾಕುವ, ಪಾಠ ಹೇಳುವ, ಆಲಸಿ ಹಾಗೂ ತುಂಟ ಹುಡುಗರಿಗೆ ನಿರ್ದಾಕ್ಷಿಣ್ಯವಾಗಿ ಬಡಿದು ಬುದ್ಧಿ ಕಲಿಸುವ ಗುರುವಾಗಿದ್ದ ಈ ಸ್ವಾಮೀಜಿ, ಜ್ಞಾನದಲ್ಲೂ ಉನ್ನತ ಹಂತಕ್ಕೆ ಏರಿದವರಾಗಿದ್ದರು. ಕರ್ಮಯೋಗದ ಮೂಲಕವೇ ಜ್ಞಾನಯೋಗ ಸಾಧಿಸಿದ್ದವರು ಅವರು. ಆದರೆ ಅಂಥವರಿಗೇಕೆ ಈಗ ಈ ಇಳಿವಯಸ್ಸಿನಲ್ಲಿ ರಾಜಕಾರಣಿಗಳನ್ನು ಓಲೈಸಿ ಮಾತನಾಡುವ ಒತ್ತಡ? ಕಾಲ ಧರ್ಮ ಗುರುಗಳನ್ನೂ ಬಿಡದೆ?

ಸ್ವಾಮೀಜಿಗಳು ಆಳುವವರನ್ನು ಒಳ್ಳೆಯ ಕೆಲಸ ಮಾಡಿ ಎಂದು ಆಸೀರ್ವದಿಸುವುದು ಬೇರೆ, ಒಳ್ಳೆಯ ಕೆಲಸ ಮಾಡುತ್ತೀದ್ದೀರಿ ಎಂದು, ಅದೂ ಕರೆದವರು ಏತಕ್ಕೆ ಮತ್ತು ಎಂತಹ ಕೆಲಸಕ್ಕೆ ಕರೆದಿದ್ದಾರೆ ಎಂಬುದನ್ನರಿಯದಂತೆ ಅರ್ಹತಾ ಪತ್ರ ನೀಡುವುದು ಬೇರೆ. ಸಾಮಾನ್ಯ ಜನರಿಗೇ ಜಿಗುಪ್ಸೆ ಬರುವಷ್ಟು ವಿಕ್ಷಿಪ್ತಗೊಂಡಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಆಳುವವರಿಗೆ ಎಚ್ಚರಿಕೆಯ ಮಾತುಗಳಿಗೆ ಬದಲಾಗಿ ಅರ್ಹತಾ ಪತ್ರ ನೀಡುವುದು, ನನ್ನಂತಹ ಅವರ ಅಭಿಮಾನಿಗಳಿಗೆ ಮುಜುಗರವನ್ನುಂಟು ಮಾಡುವುದಷ್ಟೇ ಅಲ್ಲ; ಅವರ ಈ ವರ್ತನೆ ಹಲವರ ಕಣ್ಣಲ್ಲಿ ಅನುಮಾನಾಸ್ಪದ ಕೂಡಾ ಅನ್ನಿಸಿದರೆ ಆಶ್ಚರ್ಯವಿಲ್ಲ. ಇದಕ್ಕೆ ಪೂರಕವಾಗಿ, ಅಂದಿನ ಸಮಾರಂಭದಲ್ಲಿ ಯಡಿಯೂರಪ್ಪನವರು ಪ್ರಕಟಿಸಿದ ಸ್ವರ್ಣ ತುಲಾಭಾರಕ್ಕೆ, ಸ್ವಾಮೀಜಿ ತಲೆಯಲ್ಲಾಡಿಸಿ ಹೋಗಿದ್ದಾರೆ. ನಮ್ಮ ಅರ್ಥ ಮಂತ್ರಿಯೂ ಆದ ಯಡಿಯೂರಪ್ಪನವರು ಈಗಾಗಲೇ ಈ ಕಾರ್ಯಕ್ಕಾಗಿ ತಲಾ ಒಂದು ಕೇಜಿ ಚಿನ್ನ ಕೊಡಲೊಪ್ಪಿರುವ ನೂರೊಂದು ಜನರ ಪಟ್ಟಿಯನ್ನು ಸಿದ್ಧಪಡಿಸಿದ್ದಾರಂತೆ... ಇದು ವಿಪರ್ಯಾಸ! ಈ ತುಲಾಭಾರವೇನಾದರೂ ಕಾರ್ಯಗತವಾದರೆ, ಸಿದ್ಧಗಂಗಾ ಮಠದ ಸಾಧನೆಗೆ ಮಾಡಲಾಗುವ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿರಲಾರದು. ಉಳ್ಳವರ ಸಂಪತ್ತಿನ ಈ ಅಶ್ಲೀಲ ಆಡಂಬರದ ಪ್ರದರ್ಶನಕ್ಕೆ ಸ್ವಾಮೀಜಿ ನಿಮಿತ್ತವಾದರೆ, ಶ್ರೀಸಾಮಾನ್ಯನ ಆಸೆ ಭರವಸೆಗಳೊಂದಿಗೆ ಅವರೆಲ್ಲರ ಬೆವರು, ಕಣ್ಣೀರು ಹಾಗೂ ಕಾಣಿಕೆಗಳ ಮೇಲೇ ಕಟ್ಟಿರುವ ಮಹಾನ್ ಸಂಸ್ಥೆಯ ಘನತೆಗೆ ಕುಂದುಂಟಾದಂತೆಯೇ ಸರಿ. ಈ ಶತಾಯುಷಿ ಸ್ವಾಮೀಜಿ, ತಮ್ಮ ಎಂಭತ್ತು ವರ್ಷಗಳ ಅಪ್ರತಿಮ ಸಾಧನೆಯನ್ನು ಯಾವುದೋ ಒಂದು ದುರ್ಬಲ ಘಳಿಗೆಯಲ್ಲಿ ಯಾರಿಗೋ ಒತ್ತೆ ಇಟ್ಟಂತೆ ಕೂಡಾ ಆಗಿಬಿಡುತ್ತದೆ.

ಅಥವಾ ದೂರದ ಬೆಟ್ಟ ನುಣ್ಣಗೆಂಬಂತೆ, ಈ ಮಠದ ಬಗ್ಗೆ, ಈ ಮಠಾಧೀಶರ ಬಗ್ಗೆ ನನ್ನ ಕಲ್ಪನೆಯೇ ತಪ್ಪಾಗಿದೆಯೋ? ಹಾಗೆಂದು ಯೋಚಿಸಲೂ ನನಗೆ ಕಷ್ಟವಾಗುತ್ತಿದೆ. ಏಕೆಂದರೆ ಈಗಾಗಲೇ ಹಳೆಯ ನೈತಿಕತೆಯ ಬೇರುಗಳು ಅಲ್ಲಾಡುತ್ತಾ ಹೊಸದೊಂದು ನೈತಿಕತೆಯ ಉದಯವಾಗುತ್ತಿರುವಂತೆ ತೋರುತ್ತಿರುವ ಈ ಹೊತ್ತಿನಲ್ಲಿ, ನಮ್ಮ ನಿಲುವುಗಳೆಲ್ಲ ಇತರರಿಗೆ ಭೋಳೆ ಎನಿಸುತ್ತಿದಯೇ ಎಂಬ ಶಂಕೆಯ ನಡುವೆಯೇ ನನ್ನಂಥವರು ಸುತ್ತಮುತ್ತಲ ವಿದ್ಯಮಾನಗಳನ್ನು ಗಮನಿಸಬೇಕಾದ ಖಂಡನೆಯ ಹಿಂಸೆಯನ್ನು ಅನುಭವಿಸುತ್ತಿರುವುದರ ಮಧ್ಯೆಯೇ ಇಂತಹ ಹಿಂಸೆಗಳು ಮತ್ತೆ ಮತ್ತೆ ಎದುರಾಗುತ್ತಿವೆ. ಮೊನ್ನೆ ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹದ ಹೆಸರಿನಲ್ಲಿ ನಡೆದ ಗಣಿ ಹಣದ ರಾಜಕೀಯ ವಿಜೃಂಭಣೆಯ ನಡುವೆ ನಾನು ಮೆಚ್ಚಿದ ಇನ್ನೊಬ್ಬ ಸ್ವಾಮೀಜಿ ಕಾಣಿಸಿಕೊಂಡಾಗ ನನಗೆ ಉಸಿರೇ ಕಟ್ಟಿದಂತಾಯಿತು. ಇವರಿಗೇನು ದರ್ದು, ಇಂತಹ ಪರೋಕ್ಷ ರಾಜಕೀಯ ಪ್ರದರ್ಶನಗಳಲ್ಲಿ ಭಾಗವಹಿಸಿ ಆಶೀರ್ವಚನ ನೀಡಲು ಎಂಬುದು ಅರ್ಥವಾಗದ ಹಿಂಸೆಯಿದು. ಇವರೂ ಹೊಸ ನೈತಿಕತೆಯನ್ನು ಇಷ್ಟು ಸುಲಭವಾಗಿ ಒಪ್ಪಿಕೊಂಡುಬಿಟ್ಟರೆ ಎಂಬ ದಿಗ್ಭ್ರಮೆಯ ಹಿಂಸೆ. ಬಳ್ಳಾರಿಯ ಸ್ವತಃ ಅವರ ಸಾಮಾನ್ಯ ಭಕ್ತರಿಗೇ ಅಧರ್ಮವಾಗಿ ಕಾಣುವುದು, ಇವರಿಗೆ ಧರ್ಮವಾಗಿ ಕಾಣುವುದರ ರಹಸ್ಯವಾದರೂ ಏನು? ಬಹುಶಃ ಭಕ್ತರಿಗೆ ಸಾಕಲು ತಮ್ಮ ಹೆಂಡತಿ ಮಕ್ಕಳಷ್ಟೇ ಇದ್ದರೆ, ಸ್ವಾಮಿಜಿಗೆ ಸಾಕಬೇಕಾದ ದೊಡ್ಡ ಸಾಮ್ರಾಜ್ಯವೇ ಇರುವುದು ಇದಕ್ಕೆ ಕಾರಣವಿರಬಹುದು!

ಸಂಸಾರ ಬಿಟ್ಟು ಬಂದ ಸ್ವಾಮೀಜಿಗಳೆನಿಸಿಕೊಂಡವರು ಇಂದು ಅತಿ ದೊಡ್ಡ ಸಂಸಾರಗಳ ಒಡೆಯರೇ ಆಗಿದ್ದಾರೆ. ಕೆಲವರಂತೂ ಎರಡೂ ರೀತಿಯ 'ಸಂಸಾರ'ಗಳನ್ನೂ 'ನೇಮ ನಿಷ್ಠೆ'ಗಳೊಂದಿಗೆ ಸರಿದೂಗಿಸಿಕೊಂಡು ಹೋಗುವಷ್ಟು 'ಸಮರ್ಥ'ರಾಗಿದ್ದಾರೆ! ಅನುಮಾನವಿದ್ದರೆ, ಉಡುಪಿಗೊಮ್ಮೆ ಹೋಗಿಬನ್ನಿ! ಭಕ್ತರೂ ಅದನ್ನು ಕೀಟಲೆಯ ಜೊತೆಗೋ ಅಥವ ಶಾಪ ಹಾಕುತ್ತಲೋ ಜಾತ್ಯಾಭಿಮಾನದ ಒತ್ತಡದಲ್ಲಿ ಅದನ್ನು ಒಪ್ಪಿಕೊಂಡಿಯೂ ಇದ್ದಾರೆ! ಹೀಗಾಗಿ ಮಠಗಳು ಇಂದು ಸರಳತೆಯ, ಸಭ್ಯತೆಯ ಶ್ರದ್ಧಾ ಕೇಂದ್ರಗಳಾಗದೆ, ವ್ಯಾಪಾರ - ವ್ಯವಹಾರಗಳ ದೊಡ್ಡ ಕೇಂದ್ರಗಳೆನಿಸಿಕೊಂಡಿವೆ. ಕೆಲವರದು ದೊಡ್ಡ ವ್ಯವಹಾರ, ಕೆಲವರದು ಚಿಕ್ಕ ವ್ಯವಹಾರ. ದೊಡ್ಡ ವ್ಯವಹಾರವೆಂದರೆ, ವಿದ್ಯಾ ಪ್ರಸಾರದ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರ. ಒಬ್ಬ ಸ್ವಾಮೀಜಿ ತಮ್ಮ ಹಿರಿಯ ಸ್ವಾಮೀಜಿ ಬಗ್ಗೆ ಮಾತನಾಡುತ್ತಾ, ಅವರು ಬರೀ ಹೆಣ್ಣುಮಕ್ಕಳನ್ನು (ಅಂದರೆ, ಬರೀ ಖರ್ಚಿನ ಶಾಲೆಗಳು ಮತ್ತು ಪದವಿ ಕಾಲೇಜುಗಳನ್ನು) ಹೆತ್ತು ಹೋದರೆ, ತಾವು ಗಂಡು ಮಕ್ಕಳನ್ನು (ಅಂದರೆ ಡೊನೇಷನ್ ಮೂಲದ ಇಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ ಕಾಲೇಜುಗಳನ್ನು) ಹೆತ್ತು ಕೊಟ್ಟಿರುವುದಾಗಿ ತಮ್ಮ ಆಪ್ತರೊಂದಿಗೆ ಕೊಚ್ಚಿಕೊಳ್ಳುತ್ತಾರೆಂದರೆ? ಇಂದು ಕರ್ನಾಟಕದ ಅತ್ಯಂತ ಶ್ರೀಮಂತ ಸಂಸ್ಥೆಗಳ ಪಟ್ಟಿ ತಯಾರಿಸಿದರೆ, ಅದರಲ್ಲಿ ಈ ಅನೇಕ ಮಠಗಳು ಸೇರುವುದರಲ್ಲಿ ಅನುಮಾನವಿಲ್ಲ. ಒಂದು ಕಾಲದಲ್ಲಿ ಬಡಬಗ್ಗರ ಮಕ್ಕಳಿಗೆ ಊಟ ವಿದ್ಯೆ ಒದಗಿಸುವ ಆಶ್ರಯ ಧಾಮಗಳಾಗಿ, ಜ್ಞಾನ ವೈರಾಗ್ಯ ಬೋಧನೆಗಳ ತಾಣವಾಗಿ ಆರಂಭವಾದ ಮಠಗಳು ಇಂದು ಬೃಹತ್ ಉದ್ಯಮ ಸಂಸ್ಥೆಗಳಂತೆ, ಹಣವುಳ್ಳವರ, ದೊಡ್ಡ ವ್ಯಾಪಾರಿಗಳ, ದಲ್ಲಾಳಿಗಳ, ಕಂತ್ರಾಟುದಾರರ, ಭ್ರಷ್ಟ ರಾಜಕಾರಣಿಗಳ, ಜಾತಿವಾದಿ ನಿವೃತ್ತ ಅಧಿಕಾರಿಗಳ ಸಹಕಾರಿ ಸಂಘಗಳಂತಾಗಿವೆ. ಹಾಗೇ ಇವು ಉನ್ನತ ರಾಜಕಾರಣಿಗಳ ಹಾಗೂ ಅತಿ ಶ್ರೀಮಂತರ ಅಕ್ರಮ ಸಂಪತ್ತಿನ ತಂಗುದಾಣಗಳೂ ಆಗಿವೆ ಎಂಬ ಆಪಾದನೆ ಹೊಸದೇನಲ್ಲ.

ಈಗಿನ ಬಹಳಷ್ಟು ಮಠಗಳು ತಿಂಗಳ ಬಡ್ಡಿಯ ಲೇವಾದೇವಿ ಕೇಂದ್ರಗಳಾಗಿವೆ. ಅದಕ್ಕೆ ಬೇಕಾದ ಸೂಕ್ತ 'ವ್ಯವಸ್ಥೆ'ಯನ್ನೂ ಅವು ಮಾಡಿಕೊಂಡಿವೆ! ಅಸಹಾಯಕರ, ವಿಧವೆಯರ ಸಂಪತ್ತನ್ನು ಜಾಣತನದಿಂದಲೋ, ಬೆದರಿಕೆಯಿಂದಲೋ ಮಠಕ್ಕೆ ಲಪಟಾಯಿಸಿಕೊಂಡ ಎಷ್ಟು ಮಠಗಳಿಲ್ಲ? ಸಣ್ಣ ಮಠಗಳನ್ನು ದೊಡ್ಡ ಮಠಗಳು take over ಮಾಡಿದ ಎಷ್ಟು ಉದಾಹರಣೆಗಳಿಲ್ಲ? ಹೀಗೆ ಇವು, ಇತ್ತೀಚಿನ ಕಾರ್ಪೋರೇಟ್ ವಲಯದ ವ್ಯವಹಾರಗಳಿಗಿಂತ ಯಾವ ರೀತಿ ಕಡಿಮೆ ಇವೆ? ಹಾಗಾಗಿಯೇ ಇಂದಿನ ಮಠಾಧೀಶರಿಗೆ ನಿಜವಾಗಿಯೂ ಒಪ್ಪುವ ಅಭಿದಾನವೆಂದರೆ, ಕಂಪನಿ CEO! ಹೇಗೂ, ಅವು ಧಾರ್ಮಿಕ ಕೇಂದ್ರಗಳಾಗಿ ಎಂದೋ ತಮ್ಮ ಪ್ರಸ್ತುತತಯನ್ನು ಕಳೆದುಕೊಂಡಿವೆ. ಅವುಗಳಿಂದ ಇತ್ತೀಚಿನ ಇತಿಹಾಸದಲ್ಲಿ ರಾಜ್ಯದ ಜನತೆಯ ಪಾರಮಾರ್ಥಿಕ ದಾಹವನ್ನು ತೀರಿಸಬಲ್ಲ, ನಿಜವಾದ ಜ್ಞಾನಿಯೆಂದು ಕರೆಯಬಹುದಾದ ಒಬ್ಬನೇ ಒಬ್ಬ ವ್ಯಕ್ತಿ ಹೊರಬಂದಿರುವ ಉದಾಹರಣೆಯಿಲ್ಲ. ಹೀಗಿರುವಾಗ ಇವನ್ನು ಧಾರ್ಮಿಕ ಸಂಸ್ಥೆಗಳೆಂದು ಕರೆಯುವುದು ಧರ್ಮಕ್ಕೇ ಮಾಡುವ ಅಪಚಾರವಾಗುತ್ತದೆ. ಏಕೆಂದರೆ, ಜಾತಿ ಸಂಕುಚಿತತೆಯನ್ನು ಪ್ರೋತ್ಸಾಹಿಸುತ್ತಲೇ ಸಾಮಾಜಿಕ ಐಕ್ಯತೆಯನ್ನು ಸದಾ ಒಡೆದಿಟ್ಟುಕೊಂಡೇ ಬರುತ್ತಿರುವ ಈ ಮಠಗಳು, ಇಂದಿನ ಸಮಯಸಾಧಕ ಜಾತಿ ರಾಜಕಾರಣದ breeding centreಗಳಾಗಿವೆ.

ಇದೆಲ್ಲ ಗೊತ್ತಿದ್ದೂ ಜನ ಬಡ - ಶ್ರೀಮಂತರೆನ್ನದೆ, ಮಠಗಳಿಗೆ ಮುಗಿ ಬೀಳುತ್ತಿದ್ದಾರೆ. ಕೆಲವರು ತಮ್ಮ ಆಸ್ತಿ ಪಾಸ್ತಿಗಳನ್ನು ಇವುಗಳಿಗೆ ಬರೆದು ಕಣ್ಣು ಮುಚ್ಚುತ್ತಿದ್ದಾರೆ! ಇದಕ್ಕೆ ಮುಖ್ಯ ಕಾರಣ, ಜನರಿಗೆ ಬದಲಿ ಮತ್ತು ವಿಶ್ವಾಸಾರ್ಹ ಸಾಮಾಜಿಕ - ಸಾಂಸ್ಕೃತಿಕ ಸಂಘಟನೆಗಳು ಇಲ್ಲದೇ ಹೋಗಿರುವುದು. ಜೊತೆಗೆ, ಜಾತಿ ವ್ಯವಸ್ಥೆ ವಿರೋಧಿ ಆಂದೋಲನ ಮೀಸಲಾತಿ ಆಂದೋಲನದ ಗೊಂದಲದಲ್ಲ್ಲಿ ತನ್ನೆಲ್ಲ ತಾತ್ವಿಕತೆಯನ್ನು ಕಳೆದುಕೊಂಡು ಚದುರಿ ಹೋಗಿರುವುದು. ಜಾತಿಗೊಂದು ಮಠ ಮಾಡಿಕೊಟ್ಟು ಜಾತಿ ಘನತೆಯನ್ನು ಎತ್ತಿ ಹಿಡಿಯುವ, ಜಾತಿ ವ್ಯವಸ್ಥೆಯ ಹೊಸದೊಂದು ಮಾದರಿಯನ್ನು ಸೃಷ್ಟಿಸುತ್ತಿರುವ ಸ್ವಾಮೀಜಿಯೊಬ್ಬರ ಪ್ರಯತ್ನವನ್ನು 'ಪ್ರಗತಿಪರ' ಎಂದು ಮಾನ್ಯ ಮಾಡುವ ಮಟ್ಟಕ್ಕೆ ನಮ್ಮ 'ಪ್ರಗತಿಪರತೆ' ಮುಟ್ಟಿರುವುದರಿಂದಲೇ, ಮಠಗಳು ರಾಜಕಾಣಿಗಳೊಂದಿಗೆ ಸೇರಿ ಸಮಾಜವನ್ನು ಜಾತಿ ಜಾತಿಗಳಾಗಿ ಒಡೆಯಲು ಈಗ ಧೈರ್ಯವಾಗಿ ನಿಂತಿರುವುದು. ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕೆಲವು ವೀರಶೈವ ಮಠಾಧೀಶರು ಬೆದರಿಸತೊಡಗಿರುವುದು ಸೂಚಿಸುವುದಾದರೂ ಇನ್ನೇನನ್ನು?

ರಾಜಕಾರಣಿಗಳು ಮತ್ತು ಮಠಾಧೀಶರು ಸಂಪತ್ತಿನ ಅಕ್ರಮ ಗುಡ್ಡೆಗಳ ಎಡಬಲ ನಿಂತು ಮಂದಸ್ಮಿತರಾಗಿ ಪತ್ರಿಕೆಗಳಿಗೆ ಫೋಟೊ ಪೋಸು ನೀಡುವಷ್ಟು ಪರಿಸ್ಥಿತಿ ನಿರ್ಲಜ್ಜವಾಗಿದೆ. ಕೆಲವು ಕಡೆಯಂತೂ ನಮ್ಮನ್ನಾಳುವವರು ಈ ಮಠಾಧೀಶರ ಸಿಂಹಾಸನದ ಕೆಳಗೆ ಕುರ್ಚಿ ಹಾಕಿಸಿಕೊಂಡು ಕೂತು ಹಲ್ಲು ಕಿರಿಯುವುದನ್ನು ನೋಡಿದರೆ, ನಮ್ಮ ಸಂವಿಧಾನವೇ ನಮ್ಮನ್ನು ನೋಡಿ ಹಲ್ಲು ಕಿರಿದಂತಾಗುತ್ತದೆ. ಅದರೇನು ಮಾಡುವುದು, ಇಂತಹ ಸಾಮಾಜಿಕ ಹಾಗೂ ಸಾಂವಿಧಾನಿಕ ಅವನತಿಯ ವಿರುದ್ಧದ ಪ್ರತಿಭಟನೆಗೆ ವೇದಿಕೆಗಳಾಗಬೇಕಾದ ನಮ್ಮ ಮಾಧ್ಯಮಗಳೇ ಹೊಸ ಕಾಲದ ಮಠಗಳಾಗಿ ಪರಿವರ್ತಿತವಾಗತೊಡಗಿವೆಯಲ್ಲ? ಮೊನ್ನೆ, ರಾಜಕಾರಣಿಗಳ ಭ್ರಷ್ಟತೆಯನ್ನು ಬಯಲು ಮಾಡುವ ಕನ್ನಡದ 'ಕ್ರಾಂತಿಕಾರಿ' ದಿನ ಪತ್ರಿಕೆಯೊಂದು ಇಂದಿನ ಭ್ರಷ್ಟ ರಾಜಕಾರಣದ ಆಟ - ಪಾಠಗಳಿಗೆ ಅಪಾರ ಹಣ ಪೂರೈಸುತ್ತಿರುವವರೆಂದು ಹೆಸರಾದ ಗಣಿ ಉದ್ಯಮದ ಶಾಸಕರೊಬ್ಬರ ಘನ ದಾನ - ಧರ್ಮದ ಕಾರ್ಯಗಳನ್ನು ಸ್ತುತಿಸುವ ವಿಶೇಷ ಪುರವಣಿಯನ್ನೇ ಹೊರತಂದು ಕೃತಾರ್ಥವಾಗಿದೆಯಲ್ಲ? ಅಲ್ಲಮ, ಶಬ್ದದ ಲಜ್ಜೆಯ ಬಗ್ಗೆ ಹೇಳಿದ. ಶಬ್ದದ ನಿರ್ಲಜ್ಜೆಯ ಬಗ್ಗೆ ಹೇಳಬೇಕಾದ ಕಾಲವೀಗ ಬಂದಂತಿದೆ!

ಅಂದಹಾಗೆ: ಯಡಿಯೂರಪ್ಪನವರಿಗೆ, ಮೆರಿಟ್ಟಿಲ್ಲದ ಗ್ರಾಮಾಂತರ ವಿದ್ಯಾರ್ಥಿಗಳು ಇಂಜಿನಿಯರಗಳೂ, ಡಾಕ್ಟರುಗಳು ಆಗುವುದನ್ನು ನೋಡಬೇಕೆಂಬ ಆಸೆಯಂತೆ! ಈ ಗ್ರಾಮೋದ್ಧಾರದ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿಯೇ ಈಗ ಶಿವಮೊಗ್ಗದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿಸ್ತರಣಾ ಶಾಖೆಯೊಂದನ್ನು ತೆರೆದು, ವಸೂಲಿ ಆರಂಭಿಸಲಾಗಿದೆ! ಇನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನ ಜೊತೆಗೇ ಖಾಸಗಿ ಕಾಲೇಜೊಂದಕ್ಕೂ ಅನುಮತಿ ನೀಡಲಾಗಿದ್ದು, ಅಲ್ಲಿಯೂ ಗ್ರಾಮಾಂತರ ವಿದ್ಯಾರ್ಥಿಗಳ 'ಸೇವೆ' ಇಷ್ಟರಲ್ಲೇ ಆರಂಭವಾಗಬಹುದಾಗಿದೆ

  • ಪ್ರಚಲಿತ ವಿದ್ಯಮಾನ
~.~
  • D.S.NAGABHUSHANA ರವರ ಬ್ಲಾಗ್
  • Login or register to post comments
  • 343 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 17, 2007 - 12:00am — uniquesupri

ಉ: ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...

uniquesupri's picture

ಇಂದಿನ ಮಠಾಧೀಶರು ಕಂಪೆನಿಗಳ ಸಿಇಒಗಳಂತೆ ಕಾಣುತ್ತಿರುವುದು ಸತ್ಯ. ದೇವರೂ, ದೇವರ ಸೇವೆಯೂ, ಮಠಾಧೀಶ್ವರ ಪಾದ ಪೂಜೆ, ತುಲಾಭಾರಗಳೆಲ್ಲವೂ ಕಂಪೆನಿಯ ಪ್ರಾಡಕ್ಟ್ ಗಳಾಗುತ್ತಿದ್ದಾವೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 17, 2007 - 9:54am — savithru

ಉ: ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...

savithru's picture

Title!....ಹಳದಿ ಕನ್ನಡಕ ತೆಗೆಯದ ವಿಮರ್ಶಕರೂ....

ನಿಮ್ಮ ಅಂಕಣವನ್ನು ಓದಿದ ಮೇಲೆ ಕೆಳಗಿನ ಗಾದೆಗಳು ನೆನಪಿಗೆ ಬರುತ್ತಿವೆ.

ಹಳದಿ ಕನ್ನಡಕ ತೆಗೆಯದ ವಿಮರ್ಶಕರೂ....
>ಮನಸಿದ್ದಂಗೆ ಮಹದೇವ!
>ಕಾಮಾಲೆ ಕಣ್ಣಿನವನಿಗೆ ಕಂಡಿದ್ದೆಲ್ಲವೂ ಹಳದಿ!
>ಅದೇನೋ ಬೊಗಳಿದರೆ ದೇವಲೋಕ ಹಾಳಾಗುವಿದಿಲ್ಲ!

ಕೆಳಗಿನ ಕೆಲವು ಸಂಗತಿಗಳನ್ನು ದಯವಿಟ್ಟು ಗಮನಿಸಿ.

ಸಿದ್ದಗಂಗಾ ಮಠದಲ್ಲಿ ಕೇವಲ ಲಿಂಗಾಯತರು ಅಷ್ಟೇ ಉಚಿತ ಊಟ ವಸತಿ ವಿದ್ಯಾಭ್ಯಾಸ ಪಡೆಯುತ್ತೀದ್ದಾರೋ ಅತ್ವಾ ಜಾತಿ- ಕುಲ ಬೇಧ ಗಳಿಲ್ಲದೆ ಎಲ್ಲರೂ ಅಲ್ಲಿದ್ಧಾರೋ ಗಮನಿಸಿ. ನಮ್ಮ ನಾಡಿನ ಅದೆಷ್ಟು ಮತಗಳ ಮಠಗಳು ಬೇರೆ ಮತದವರಿಗೆ ಪ್ರವೇಶ ನೀಡುತ್ತಿದ್ದಾರೆ?. ಅಂತವರು ಯಾರೂ ಕಾಣದೆ , ಜಾತಿ ಮತಗಳನ್ನು ಮೀರಿ ಬೆಳೆದ ಈ ತಪಸ್ವಿ ನಿಮ್ಮ ಕಣ್ಣಿಗೆ ಕಂಡರೋ?.

ನನ್ನನ್ನು ನನ್ನ ತಂದೆ ತಾಯಿಗಳೋ .. ನನಗಿಂತ ವಯಸಿನಲ್ಲಿ ತಿಳುವಳಿಕೆಯಲ್ಲಿ ದೊಡ್ಡವರಾದ ಗುರುಗಳೊ ಹೋಗಳಿದಾಗ..ನನಗೆ ಅವರು ಯಾವತ್ತೂ ನನ್ನ ಛೇಲಗಳು ಅಂತ ಅನಿಸಲ್ಲ. ನಿಮಗೆ ಅನಿಸಿರಬಹುದೇನೊ?!
ನೀವು ಒಳ್ಳೆಯ ಕೆಲಸ ಮಾಡಿದ್ದೀರಿ, ಇನ್ನೊ ಹೆಚಿನ ಕೆಲಸ ಮಾಡಿ ಅಂದ್ರೆ ತಪ್ಪೇನು? ನಿಮ್ಮ ಪ್ರಕಾರ ಅವರು ಅಲ್ಲಿಗೆ ಹೋಗಿ ನಮ್ಮ ರಾಜಕಾರಣಿಗಳನ್ನ ವಾಚಾಮಗೋಚರವಾಗಿ ಬೈದು .. ತಾವು ರಾಜಕಾರಣವನ್ನೂ ಜಾತಿಯನ್ನೂ ಮೀರೀದ್ದೇವೆಂದು ನಿಮಗೆ(!) ಪ್ರೂವ್ ಮಾಡಬೆಕಿತ್ತೇನು?

ಯಡೆಯೂರಪ್ಪನವರನ್ನು ಮರೆತು ಬಿಡಿ. ನೀವೂ ಕರೆಯಿರಿ.. ಸಮಯವಿದ್ದರೆ ಅವರು ಬರುತ್ತಾರೆ!...ನಿಮ್ಮ ಬಗ್ಗೆ ಒಳ್ಳೆಯದನ್ನೇ ಮತಾಡುತ್ತಾರೆ.. ಒಳ್ಳೆಯದನ್ನು ಬಯಸುತ್ತಾರೆ.

ವಚನಗಳಲ್ಲಿ ಮತೀಯತೆ ನಿಮಗ ಅಷ್ಟೇ ಕಾಣಲು ಸಾದ್ಯ... ನೀವು ಅದೆಷ್ಟು ವಚನಗಳನ್ನು ಓದಿದ್ದೀರಾ ಸ್ವಲ್ಪ ತಿಳಿಸಿ. ವಚನಗಳಲ್ಲಿ ತುಂಬಾ ತತ್ವ ಸಿಧಾನ್ತಗಳು ಇವೆ ಎಂಬುದು ನಿಜ. ಆದರೆ ಅವು ಯಾವತ್ತೂ ಯಾರನ್ನೂ ಮತಾಂಧ ಮನಸ್ಕತೆಗೆ , ಮತೀಯತೆಗೆ, ಜಾಟೀಯಟ್‌ಗೆ ತಳ್ಳುವ ಕಡಿಮೆ ಮಟ್ಟದ ವಲ್ಲ. ವಚನಗಳನ್ನು ಉದಹರಣೆಯಾಗಿ ಕೊಟ್ಟವರು ಜಾತೀವಾದಿಗಳ?!.. ಏನೋ ತುಂಬಾ ಓದಿಕೊನ್ಡಿದ್ದೀರಿ.. ನಮ್ಮಂತಾ ಬಡ ಜೀವಗಳಿಗೆ ಅರ್ಥ ವಾಗೋಲ್ಲ!.
ವಚನಗಲ್ಲಿರುವ ಸಮಾನತೆ, ಭ್ರಾತೃತ್ವ ಭಾವ, ಸಾಮಾಜಿಕ ಕಳಕಳಿ ನಿಮಗೆ ಕಾಣಲಿಲ್ಲವೇ?

ಗಂಧದ ಮರದ ಸುತ್ತ ಹಾವುಗಳು ಇರುವುದು ಸಾಮಾನ್ಯ. ಅದಕ್ಕೆ ಶ್ರೀಗಂದ ಏನುಮಾಡಲು ಸಾಧ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 17, 2007 - 10:33am — prapancha

ಉ: ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...

prapancha's picture

ನಮ್ಮ ದೇಶದ ವ್ಯವಸ್ಥೆಯಲ್ಲಿ ಇ೦ದು ಎಲ್ಲ್ಲ ಕಡೆ ಬ್ರಷ್ಟತೆ ಹಬ್ಬಿಕೊ೦ಡಿದೆ. ಹಾಗೇನೆ ನಮ್ಮ ಮಠ ಮಾನ್ಯಗಳೂ ಕೂಡ ವರತಲ್ಲ ಬಿಡಿ. ಇ೦ದು ನಮ್ಮ ಮಠಗಳು ಹಿ೦ದಿನ೦ತೆ ಸಾ೦ಸ್ಕ್ರುತಿಕ ಮತ್ತು ದಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿಲ್ಲ. ಅವು ಇ೦ದು ಆಯಾ ಜಾತಿಗಳ ಜನರನ್ನು ಒಗ್ಗೂಡಿಸಿ ಮತ ಬ್ಯಾ೦ಕ್ ಗಳನ್ನಾಗಿ ಮಾಡಿಕೊ೦ಡು ರಾಜಕೀಯ ಮಾಡುವುದು ಮತ್ತು ಮಠದ ಹೆಸರಿನಲ್ಲಿ ಶಾಲಾ ಕಾಲೇಜುಗಳನ್ನ ನಡೆಸಿಕೊ೦ಡು ಬ್ಯುಸಿನೆಸ್ ಮಾಡುತ್ತಿರುವುದು ಸತ್ಯ.

ಆದರೆ ನೀವು ಯಡಿಯೂರಪ್ಪನವರನ್ನ ಮಾತ್ರ ಬೇರ್ಪಡಿಸಿ, ಸಮ್ಮಿಶ್ರ ಸರ್ಕಾರವನ್ನ ಮಾತ್ರ ಮೂದಲಿಸಿರುವುದು ನಿಜಕ್ಕೂ ಸೋಜಿಗ. ಆಸೆಯ ದುಖ್ಖಕ್ಕೆ ಮೂಲ ಎ೦ದು ಸಾರಿದ ಬುದ್ದನ ಅನುಯಾಯಿಗಳಾದ ಕು.ಮಾಯಾವತಿಯವರ ಬಗ್ಗೆ ಸಿ.ಬಿ.ಐ ತನಿಕೆ ನಡೆಸಿ, ಅಪರಾದಿ ಎ೦ದು ಸಾಬೀತುಪಡಿಸಿದೆಯಲ್ಲ!!!! ಕೆ.ಜಿ. ಗಟ್ಟಲೆ ಚಿನ್ನ, ಕೋಟ್ಯಾ೦ತರ ಹಣ ಇಟ್ಟದ್ದು ತಮಗೆ ತಿಳಿದಿಲ್ಲವೇನೋ?. ಇದಕ್ಕೆ ತಮ್ಮ ಉತ್ತರವೇನು ಸ್ವಾಮಿ? ನಮ್ಮ ರಾಜ್ಯ ಕಾ೦ಗ್ರೆಸ್ಸಿಗರನ್ನೇ ತೆಗೆದುಕೊಳ್ಳಿ ಸ್ವಾಮಿ!! ಎಲ್ಲರೂ ನು೦ಗಣ್ಣಗಳೇ, ನಾನು ಹೇಳುವುದು ಇಷ್ಟೆ, ಇ೦ದು ನಮ್ಮ ದೇಶದ ೯೯% ರಾಜಕಾರಣಿಗಳು ಬ್ರಷ್ಟರು!. ಇಲ್ಲಿ ನಮಗೆ ಆಯ್ಕೆಯಿರುವುದು ಕೆಟ್ಟ ಮತ್ತು ಅತಿ ಕೆಟ್ಟ ರಾಜಕಾರಣಿಗಳ ಮದ್ಯೆ, ಒಳ್ಳೆಯ ಮತ್ತು ಕೆಟ್ಟ ರಾಜಕಾರಣಿಗಳ ಮದ್ಯೆಯಲ್ಲ!. ಇದ್ದುದರಲ್ಲಿ ಈ ಸಮ್ಮಿಶ್ರ ಸರ್ಕಾರದವರನ್ನ ಕೆಟ್ಟ ಗು೦ಪಿಗ ಸೇರಿಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?
  • ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
  • ಬಜೆಟ್ ಬೂಟಾಟಿಕೆ
  • 'ಮಾಯಾವತಿ ವಿಜಯ'ದ ಹಿಂದಿನ ಸತ್ಯಗಳು
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
Syndicate content

ಲೇಖಕರು

D.S.NAGABHUSHANA's picture

ಪರಿಚಯ

A retired(Vol.) All India Radio employee. I write literary criticism. A Socialist by belief.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
  • pachhu2002
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:33am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 216 ಅತಿಥಿಗಳು ಆನ್ಲೈನ್ ಇರುವರು.


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator