ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಸಂಪದ ಆರ್ಕೈವಿನಿಂದ

hamsanandi ರವರ ಬ್ಲಾಗ್

ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು -  ನನ್ನ ಮಾತು ನನ್ನದು - ನನ್ನ ನೋಟ ನನ್ನದು - ನನ್ನ ಧಾಟಿ ನನ್ನದು ಅಂತ ಅಂದ್ಕೊಳೋದಪ್ಪ! ಆದ್ರೆ ಯಾಕೋ ಕೃಷ್ಣನಿಗೆ ಅದರ ಮೇಲೆ ಮನಸ್ಸಿಲ್ಲ ಅನ್ಸತ್ತೆ. ಯಾಕಂದ್ರೆ ಎಂತೆಂತಹವರೋ ಅವನ ಬಗ್ಗೆ ಹಾಡಿಬಿಟ್ಟಿರೋವಾಗ ನನ್ನ ನಾಕು ಸಾಲು ಇದ್ರೇನಂತೆ ಇಲ್ದಿದ್ರೇನಂತೆ ಅಂತಲೇ ಇರಬೇಕು, ಎರಡು ಮೂರು ವರ್ಷದಿಂದ ನೋಡ್ತಿದೀನಿ, ಈ ಗೋಕುಲಾಷ್ಟಮಿ ಬರೋ ಹೊತ್ತಿಗೇ ಇನ್ನೇನೋ ಜರೂರಾದ ಕೆಲಸವೋ ಮತ್ತೊಂದೋ ಅಂಟ್ಕೊಳತ್ತೆ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ತರಹ.

   ಮುಂದೆ ಓದಿ »

ಸಿರಿಯ ನೋಟ

ಮೊಗ್ಗೊಡೆದ ಲವಂಗ ಮರವನು ಮುತ್ತುವ
ಹೆಣ್ಣು ದುಂಬಿಯಂತೆ ಹರಿಯ ಬಳಿಸಾರಿ ನಲಿವಾಕೆ
ಕಣ್ಣಿನೋರೆ ನೋಟದಲೆ ಸಕಲ ಸುಖಗಳನಿತ್ತು
ಒಳ್ಳಿತನೇ ಮಾಡಿ ಕಾಯಲೆನ್ನ ಆ ಮಂಗಳದೇವತೆ

ಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ)

ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಮ್
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ

-ಹಂಸಾನಂದಿ

ಕೊ: ಇಲ್ಲಿಯವರೆಗೆ ನಾನು ಈ ಸ್ತ್ರೋತ್ರವನ್ನು ಓದಿರಲಿಲ್ಲ. ಇವತ್ತು www.sanskritdocuments.org ನಲ್ಲಿ ಓದಿದಾಗ ಕನ್ನಡಿಸಬೇಕೆನಿಸಿ ಮಾಡಿದ ಪ್ರಯತ್ನವಿದು. ನಾಳೆ ಬರುವ ವರಲಕ್ಷ್ಮೀ ಹಬ್ಬಕ್ಕೂ ಒಂದು ಒಳ್ಳೇ ಮುನ್ನುಡಿ ಎನಿಸಿ ಹಾಕುತ್ತಿದ್ದೇನೆ. ಕನ್ನಡಕ್ಕೆ ತರುವಲ್ಲಿ ಆ ಜಾಲತಾಣದಲ್ಲಿರುವ ಇಂಗ್ಲಿಷ್ ಅನುವಾದ ಉಪಯೋಗಕ್ಕೆ ಬಂತು!
 ಮುಂದೆ ಓದಿ »

’ಹರಿ’ಸ್ಮರಣೆ ಮಾಡುತ್ತಾ ಒಂದು ಸರಸತಿಯ ಸ್ತುತಿ


ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು
ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ;
ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು!
ಕಾಯೆನ್ನ ಸರಸತಿಯೆ ಎನ್ನನೆಂದಿಗೂ ಬಿಡದೆ ತೊಲಗಿಸುತ ಜಡತೆಯನ್ನು

ಸಂಸ್ಕೃತ ಮೂಲ:

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶ್ವೇತ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ

-ಹಂಸಾನಂದಿ

ಕೊ: ಸುಮಾರು ಮೂರು ವರ್ಷಗಳ ಹಿಂದೆ ಮಾಡಿದ್ದ ಅನುವಾದವಿದು, ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಹಾಕಿರುವೆ.
 ಮುಂದೆ ಓದಿ »

ಬಿಲ್ಲುಗಾರ್ತಿಗೆ

ಚೆಲುವೆ! ನಿನ್ನಂಥ ಬಿಲ್ಗಾರ್ತಿ
ಸುಲಭದಲಿ ಕಾಣಸಿಗುವುದಿಲ್ಲ;
ಬಾಣ ಹೂಡದೆ ಬರಿ ಸೆಳೆತದಲೇ**
ಮನಸುಗಳನು ಸೀಳಿಬಿಡುವೆಯಲ್ಲ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |
ಯದಾ ವಿಧ್ಯಸಿ ಚೇತಾಂಸಿ ಗುಣೇರೈವ ನ ಸಾಯಕೈಃ ||

-ಹಂಸಾನಂದಿ

ಕೊ: ** ಮೂಲದಲ್ಲಿರುವ ಶ್ಲೇಷವೊಂದನ್ನು ಕನ್ನಡದಲ್ಲೂ ತರುವ ಪ್ರಯತ್ನ ಮಾಡಿದ್ದೇನೆ. ಗುಣ ಎಂದರೆ ರೂಢಿಯಲ್ಲಿರುವ ಅರ್ಥವಲ್ಲದೆ, ಬಿಲ್ಲಿನ ಹೆದೆ, ಹೆದೆಗೆ ಕಟ್ಟುವ ದಾರ ಅನ್ನುವ ಅರ್ಥವೂ ಇದೆಯಂತೆ. ಬಾಣವನ್ನು ಬಿಡುವಾಗ ಹೆದೆಯನ್ನು ಸೆಳೆಯಬೇಕಾಗುವುದು ಸಹಜ ತಾನೇ? ಹಾಗಾಗಿ ’ಬರೀ ಸೆಳೆತದಲೇ’ ಅನ್ನುವುದು ಬಿಲ್ಲನ್ನು ಸೆಳೆಯುವ ಕ್ರಿಯೆ ಅಥವಾ ಆಕರ್ಷಣೆ ಎನ್ನುವ ಎರಡೂ ತಿಳಿವನ್ನು ಕೊಡುತ್ತದೆ ಎನ್ನಿಸಿ ಹಾಗೆ ಮಾಡಿರುವೆ.
 ಮುಂದೆ ಓದಿ »

ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ

ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದು.

ಸಿಕ್ಕಾಪಟ್ಟೆ ಬಿಳಿ ಬಣ್ಣದಲ್ಲಿ ಹೊಳೆಯೋದೇ ಬೆಳ್ಳಿ - ಅಂದರೆ ಶುಕ್ರ. ಅದಕ್ಕೆ ಸ್ವಲ್ಪ ಮೇಲೆ ಎಡಗಡೆ ಮೂಲೆಯಲ್ಲಿರೋದು ಮಂಗಳ. ಅದಕ್ಕೆ ಹತ್ತಿರವಾಗಿ ಸ್ವಲ್ಪ ಮೇಲಿರೋದು ಶನಿ.

 ಮುಂದೆ ಓದಿ »

Syndicate content