ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಗಂಡ-ಹೆಂಡಿರು ಮತ್ತು ಪುರಂದರ ದಾಸರು
ನೀವು ಏನು ಬೇಕಾದ್ರೂ ಹೇಳಿ, ಪುರಂದರ ದಾಸರು ಅಂದ್ರೆ ನಂಗಿಷ್ಟ. ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಅನ್ನೋ ಮಾತಿದೆ. ಅಂದ್ರೆ, ವ್ಯಾಸರು ಹೇಳಿ ಬಿಟ್ಟುಳಿದದ್ದೇ ಈ ಜಗತ್ತಲ್ಲಿರೋದೆಲ್ಲ ಅಂತ. ಮಹಾಭಾರತ ಬರೆಯೋದಲ್ದೆ, ವೇದಗಳನ್ನ ನಾಕು ಪಾಲು ಮಾಡಿ ವಿಂಗಡಿಸಿದ್ದೇ ವ್ಯಾಸರು, ಮತ್ತೆ ಹದಿನೆಂಟು ಪುರಾಣಗಳನ್ನೂ ಬರ್ದಿದ್ದೂ ಅವರೇ ಅಂತ ನಂಬಿಕೆ ಇದೆಯಲ್ಲ. ನನಗೆ ಬಿಡಿ - ವೇದ ಓದಿದರೆ ನೇರವಾಗಿ ಅರ್ಥವಾಗೋಲ್ಲ. ಪುರಾಣ ಓದೋದಕ್ಕೆ ವೇಳೆ ಸಾಲದು. ಅದಕ್ಕೇ ನಾನು ’ದಾಸೋಚ್ಛಿಷ್ಟಂ ಜಗತ್ಸರ್ವಂ’ ಅಂದ್ಕೊಂಡ್ಬಿಡ್ತೀನಿ. ಯಾಕೆ ಅಂತೀರಾ? ’ದಾಸರೆಂದರೆ ಪುರಂದರ ದಾಸರಯ್ಯ” ಅನ್ನೋ ಮಾತನ್ನ ಅವರ ಗುರುಗಳೇ ಹೇಳಿಬಿಟ್ಟಿರೋದ್ರಿಂದ, ಈ ದಾಸರು ಯಾರು ಅಂತ ನಾನು ಬಿಡಿಸಿ ಹೇಳ್ಬೇಕಿಲ್ಲ. ಅಲ್ವಾ?
ಪುರಂದರ ದಾಸರು ಬರ್ದಿರೋದೆಲ್ಲ ಕನ್ನಡದಲ್ಲಿ. ಓದಿದ್ರೆ, ನನಗೆ ಅರ್ಥವಾಗೋದೇನೂ ಕಷ್ಟವಿಲ್ಲ. ಅಲ್ದೆ, ಅವ್ರೇನೂ ಸರ್ಗದ ಮೇಲೆ ಸರ್ಗ ಕವಿತೆ ಹೊಸೆದಂತ ಕಾಳಿದಾಸನ ಹಾಗೆ ದೊಡ್ಡ ದೊಡ್ಡ ಕಾವ್ಯಗಳನ್ನೂ ಬರೆದಿಲ್ಲ. ಅದು ಬಿಡಿ ಕುಮಾರವ್ಯಾಸ ಹರಿಹರ ರಾಘವಾಂಕ ರತ್ನಾಕರವರ್ಣಿಯರ ಹಾಗೆ ಸಾಂಗತ್ಯ ರಗಳೆ ಷಟ್ಪದಿಯ ಗೊಡವೆಗೂ ಅವರು ಹೋಗಿಲ್ಲ. ಏನಿದ್ರೂ ಅವರು ಬರೆದಿರೋದು ಸಣ್ಣ ಸಣ್ಣ ಹಾಡುಗಳು. ಒಂದು ಓದಿದ್ಮೇಲೆ ಇನ್ನೊಂದು ಇದನ್ನೇ ಓದ್ಬೇಕು ಅನ್ನೋದಕ್ಕೆ ಅಲ್ಯಾವ ಕಥೇನೂ ಇರೋದಿಲ್ಲ. ಅಲ್ದೆ ಸರಿಸುಮಾರು ಅರ್ಥವಾಗ್ದಿರೋ ಪದಗಳೂ ಅಲ್ಲೊಂದು ಇಲ್ಲೊಂದು ಹೊರತು ನಾನೇನೂ ಪಕ್ದಲ್ಲಿ ನಿಘಂಟು ಇಟ್ಕೊಂಡು ಕೂರ್ಬೇಕಾಗಿಲ್ಲ. ಇದೇಕಾರಣಕ್ಕೆ ಆದಾದಾಗ ಒಂದೊಂದು ಹೊಸ ಹಾಡನ್ನ ಓದಿ ನೋಡೋದು ಅಂದ್ರೆ ನನಗಂತೂ ಬಹಳ ಹಿಡಿಸುತ್ತೆ.
ಅವರ ಬರವಣಿಗೆ ಅನ್ನೋದು ಅವರ ಕಾಲಕ್ಕೊಂದು ಕನ್ನಡಿ ಅಂತ ನಂಗನ್ಸತ್ತೆ. ನಾವು ಸುಮ್ಸುಮ್ನೆ ಹೇಳ್ತಾ ಇರ್ತೀವಿ - ವಿಜಯ ನಗರ ವೈಭವದ ಕಾಲ - ರಸ್ತೆ ರಸ್ತೆಲಿ ಮುತ್ತು ರತ್ನ ಹಾಕ್ಕೊಂಡು ಸೇರಲಿ ಅಳ್ಕೊಂಡು ಮಾರ್ತಿದ್ರು ಅಂತ. ಆದ್ರೆ ಆಗ್ಲೇ ದಾಸರು ಹೇಳಿರೋದು ನೋಡಿ ’ಸತ್ಯವಂತರಿಗಿದು ಕಾಲವಲ್ಲ’ ಅಂತ! ಅಂದ್ರೆ, ಎಲ್ಲಾ ಕಾಲ್ದಲ್ಲೂ ಹುಳುಕು ಇದ್ದೇ ಇತ್ತು ಅಂತಾಯ್ತಲ್ಲ! ಅಯ್ಯೋ - ಏನೋ ಹೇಳಕ್ಹೊರ್ಟು, ಏನೋ ಹೇಳ್ತಿದೀನಿ ನೋಡಿ.
ಮತ್ತೆ ಮೊನ್ನೆ ಯಾವ್ದೋ ಚರ್ಚೆಯಲ್ಲಿ ಪುರಂದರದಾಸರು ಹೇಳಿರೋ ಮಾತುಗಳು ಹೆಣ್ಣಿನ ವಿರೋಧಿ ಅನ್ನೋ ವಿಷಯ ಬಂತು. ಎಷ್ಟೇ ಆದ್ರೂ, ಅವತ್ತಿನ ಕಾಲವನ್ನ ಇವತ್ತಿನ ಕಣ್ಣಲ್ಲಿ ನಾವು ದಿಟ್ಟಿಸಿ ನೋಡುವಾಗ, ನಮಗೆ ಅದು ಪೂರಾ ಸರಿಹೋಗೋದಿಲ್ಲ ಅನ್ನೋರಲ್ಲಿ ನನಗೇನೂ ಅನುಮಾನವಿಲ್ಲ. ಮತ್ತೆ ಅಪ್ಪ ಹಾಕಿದಾಲದ್ ಮರ ಅಂತ ಅದರ ಬಿಳಲನ್ನೇ ಎಣಿಸ್ತಾ ಇರ್ಬೇಕಿಲ್ಲ ಅನ್ನೋದೂ ನಿಜ. ಆದ್ರೇನಂತೆ, ಆಲದ ಮರದಡೀಲಿ, ನೆರಳು ಚೆನ್ನಾಗಿದ್ದಾಗ ಕೂರೋದ್ರಲ್ಲೇನಿದೆ ತಪ್ಪು? ಅಥವಾ, ಮರದ ಮೇಲೆ ಹಕ್ಕಿ ಹಾಡೋದನ್ನ ಕೇಳೋದ್ರಲ್ಲೇನಿದೆ ತಪ್ಪು? ಹಾಗೇ ಎಲ್ಲವನ್ನೂ ಒರೆಗೆ ಹಚ್ಚಿ ಒಳ್ಳೇದನ್ನ ತೊಗೋಳೋಣ. ಇವತ್ತಿಗೆ ಹೊಂದದ್ದನ್ನ ಬಿಟ್ಬಿಡೋಣ. ಅಲ್ವೇ?
ದಾಸರು ಒಂದು ಹಾಡು ಬರ್ದಿದಾರೆ - ಹೆಂಡತಿ, ಪ್ರಾಣ ಹಿಂಡುತಿ ಅಂತ ಶುರುವಾಗತ್ತೆ ಅದು. ಈಗ ಆ ಹಾಡು ಪೂರ್ತಿ ನನ್ಹತ್ರ ಇಲ್ಲ. ಅದಕ್ಕೇ ಅವರು ಅದನ್ನ ಅವರ್ಹೆಂಡ್ತಿ ಬಗ್ಗೆ ಬರ್ದ್ರೋ, ಅಥ್ವಾ ಸುಮ್ಮನೆ ಎಲ್ಲಾ ಹೆಂಗಸ್ರ ಮೇಲೆ ಬರ್ದ್ರೋ, ಅಥ್ವಾ ಏನ್ಕಥೆ ಅನ್ನೋದು ಗೊತ್ತಾಗ್ತಿಲ್ಲ. ಆದ್ರೆ, ಒಂದಂತೂ ನಿಜ. ಆ ಕಾಲದಲ್ಲಿ, ಹೆಣ್ಣಿಗೆ ಹಿಡಿಸ್ತೋ ಇಲ್ವೋ, ಯಾರೋ ಒಬ್ಬನ್ನ ಕಟ್ಟಿ ಮದುವೆ ಮಾಡಿ ತವರ್ಮನೆಯಿಂದ ಕಳಿಸ್ಬಿಟ್ರೆ ಸಾಕು ಅಂತ ಎಷ್ಟೋ ಜನ ಅಂದ್ಕೋತಿದ್ರು ಅಂತ ಕಾಣತ್ತೆ. ದಾಸರು ಒಂದು ಹಾಡಲ್ಲಿ, ಮುದಿವಯಸ್ಸಿನ ಗಂಡನ್ನ ಕೈ ಹಿಡಿದ ಒಬ್ಬ ಹುಡುಗಿಯ ಕೊರಗನ್ನ ಚೆನ್ನಾಗಿ ಚಿತ್ರಿಸಿದ್ದಾರೆ. ಇಲ್ನೋಡಿ.
ಪಲ್ಲವಿ:
ಮುಪ್ಪಿನ ಗಂಡನ ಒಲ್ಲೆನು ನಾನು
ತಪ್ಪದೆ ಪಡಿಪಾಟ ಪಡಲಾರೆನಕ್ಕ
ಚರಣಗಳು:
ಉದಯದಲ್ಲೇಳಬೇಕು ಉದಕ ಕಾಸಲುಬೇಕು
ಬದಿಯಲ್ಲಿ ನಾನಿದ್ದು ಬಜೆ ಅರೆಯಬೇಕು
ಹದನಾಗಿ ಎಲೆ ಸುಣ್ಣ ಅಡಿಕೆ ಕುಟ್ಟಲುಬೇಕು
ಬಿದಿರುಕೋಲನು ತಂದು ಮುಂದೆ ಇಡಬೇಕಕ್ಕ
ಮೆತ್ತನೆ ರೊಟ್ಟಿ ಮುದ್ದೆಯ ಮಾಡಲುಬೇಕು
ಒತ್ತಿ ಒದರಿ ಕೂಗಿ ಕರೆಯಲುಬೇಕು
ವಾಕರಿಕೆಯು ಮೂಗಿನ ಸಿಂಬಳ
ಮತ್ತೆ ವೇಳೆಗೆ ಎದ್ದು ತೊಳೆಯಬೇಕಕ್ಕ
ಗೋಣಿ ಹಾಸಲು ಬೇಕು ಬೆನ್ನ ಗುದ್ದಲುಬೇಕು
ಗೋಣು ಹಿಡಿದು ಮೇಲಕ್ಕೆತ್ತಬೇಕು
ಶ್ರೀನಿಧಿ ಪುರಂದರ ವಿಟ್ಠಲನ್ನ ನೆನೆಯುತ್ತ
ನಾನೊಂದು ಮೂಲೇಲಿ ಒರಗಬೇಕಕ್ಕ
ಈ ಹಾಡಿಗೆ ಹೆಚ್ಚಿಗೆ ವಿವರಣೆ ಏನೂ ಬೇಕಿಲ್ಲ ಅಲ್ವೇ :( ಪುರಂದರ ವಿಠಲನ್ನ ನೆನೆಯಬೇಕು ಅನ್ನೋದು ಹಾಡಿನ ಕೊನೆಯಲ್ಲಿದ್ರೂ, ಬರೀ ಅದನ್ನ ಮಾಡ್ತಾ ಸಂಸಾರದಲ್ಲಿ ಸಂತೋಷ ಇಲ್ದೇ ಇರೋದೂ ಸರಿಯಲ್ಲ ಅನ್ನೋ ಭಾವನೆ ಕೂಡ ಹಾಡಿನ ಒಳ್ಗೇ ಸೇರ್ಕೊಂಡಿದೆ ಅಂತ ನಂಗನ್ಸತ್ತೆ. ಹಾಗೇ ಆ ಕಾಲ್ದಲ್ಲಿ ಎಷ್ಟೋ ಹೆಂಗೆಳೆಯರಿಗೆ ಈ ಪಾಡಾಗ್ತಿತ್ತು ಅಂತ್ಲೂ ಅನ್ನಿದ್ತಾ ಇದೆ.
ಆದ್ರೆ ’ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ" ಅಲ್ವೇ? ಅತ್ತೆಗೆ ಒಂದು ಕಾಲವಾದ್ರೆ, ಸೊಸೆಗೆ ಇನ್ನೊಂದು ಕಾಲ. ಇನ್ನೊಂದು ಹಾಡಿನಲ್ಲಿ, ಪಾಪ, ಖಾಯಿಲೆಗೊಳಗಾದ ಹೆಂಡತಿಯನ್ನ ಚೆನ್ನಾಗಿ ನೋಡಿಕೊಳ್ತಿರೋ ಒಬ್ಬ ಗಂಡನ ವಿಷಯ ಬರೀತಾರೆ. ಒಂದ್ಕಡೆ ಹೆಂಡತಿ ಗಂಡನ್ನ ನೋಡ್ಕೊಳೋವಾಗ, ಗಂಡನೂ ಹೆಂಡ್ತಿಯನ್ನ ಹಾಗೇ ನೋಡ್ಕೋಬೇಕು ಅನ್ನೋದು ಒಂದು ಆಶಯವಾದ್ರೆ, ಇನ್ನೊಂದ್ಕಡೆ ಬಗೆಬಗೆ ತಿನಿಸುಗಳ ಬಣ್ಣನೆ ಮಾಡ್ಬೇಕು ಅಂತಲೇ ಈ ಹಾಡನ್ನ ಬರೆದ್ಹಾಗಿದೆ! ಓದಿ ನೋಡಿ!
ಪಲ್ಲವಿ:
ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು
ಚರಣಗಳು:
ಬೇಳೆ ಬೆಲ್ಲವ ತಂದು ಹೋಳಿಗೆಯನು ಮಾಡಿ ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ
ಹಾಲು ಸಕ್ಕರೆ ಹದ ಮಾಡಿ ತಂದಿಡು ಎರಕದ ಗಿಂಡಿಲಿ ನೀರ ತಾರೊ ಗಂಡ
ಗಸಗಸೆ ಲಡ್ಡಿಗೆ ಹಸನಾದ ಕೆನೆ ಹಾಲು ಬಿಸಿಯ ಹುರಿಗಡಲೆ ಬಿಳಿಯ ಬೆಲ್ಲ
ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷ ವಿಷವೆಂದು ನಾ ತಿಂಬೆನೊ
ಹಪ್ಪಳ ಕರಿದಿಡು ಸಂಡಿಗೆ ಹುರಿದಿಡು ತುಪ್ಪದಿ ನಾಲ್ಕು ಚಕ್ಕುಲಿ ಕರಿದು
ಬಟ್ಟಲೊಳು ತುಪ್ಪ ಕೆನೆ ಮೊಸರ ಹಾಕಿಡು ಬಚ್ಚಲಿಗೆ ಬರುತೇನೆ ನೀರ ಹದಮಾಡೊ
ಎಣ್ಣೆ ಬದನೆಕಾಯಿ ಬೆಣ್ಣೆ ಸಜ್ಜಿಯ ರೊಟ್ಟಿ ಸಣ್ಣಕ್ಕಿಬೋನ ಬದಿಯಲಿಟ್ಟು
ಸಣ್ಣ ತುಂಚಿಯ ಲಿಂಬೆ ಲಲಮಾಗಡಿಬೇರು ಉಣ್ಣುಣ್ಣು ಎಂದರೆ ಉಂಬೆನೊ ಗಂಡ
ಗಂಧ ಕುಂಕುಮವನು ಬದಿಯಲಿ ತಂದಿಡು ಮಡಿಯಲಿ ತಂಬಿಗೆ ನೀರ ತಾರೋ
ಮಣೆಯನ್ನೆ ಹಾಕಿ ಕೆಳಗೆ ಬಟ್ಟಲಿಡು ತೀರ್ಥವನೆ ತೊಕ್ಕೊಂಡು ನಾ ಬರುತೇನೆ ಗಂಡ
ನಾನುಂಡು ಇದ್ದದ್ದು ಬಾಲರಿಗುಣಲಿಕ್ಕೆ ಮೇಲಿಟ್ಟು ಮುಚ್ಚಿಡೋ ಎನ್ನ ಗಂಡ
ಸ್ನಾನ ಮಾಡಿಕೊಂಡು ಸೀರೆಯ ತೆಕ್ಕೊಟ್ಟು ತಾಂಬೂಲ ತೆಕ್ಕೊಂಡು ಬಾರೊ ನನ್ನ ಗಂಡ
ಸಣ್ಣ ನುಚ್ಚು ಇಟ್ಟುಕೊ ಗೊಡ್ಹುಳಿ ಕಾಸಿಕೊ ದೊನ್ನೆಯೊಳಗೆ ತುಪ್ಪ ಬಡಿಸಿಕೊ
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ
ಹೋಳಿಯ ಹುಣ್ಣಿಮೆ ತಣ್ಣನೆ ತಂಗಾಳಿ ಚಳಿ ಬಹಳ ಗಂಡ ಕದವ ಮುಚ್ಚೊ
ಮಂಚದ ಮೇಲೆ ಮಲಗಿದೆನ್ನನು ಸಕಲಾದಿ ಹಚ್ಚಡ ಬಿಗಿ ಬಿಗಿದ್ಹೊಚ್ಚೊ
ಸದ್ದು ಮಾಡದ ಹಾಗೆ ಎದ್ದು ಕದವ ಮುಚ್ಚೊ ಮುದ್ದು ಸ್ವಾಮಿಯನ್ನೆ ನೆನವುತಲಿ
ಮುದ್ದು ಶ್ರೀ ಪುರಂದರ ವಿಟ್ಟಲನ ನೆನೆವುತ ನೀನೊಂದು ಮೂಲೆಲಿ ಬಿದ್ದುಕೊಳ್ಳೋ ಗಂಡ
ಅದೆಷ್ಟು ತರಹೇವಾರಿ ತಿಂಡಿಗಳಪ್ಪ! ಕೆಲವಂತೂ ನಾನು ಇಲ್ಲೀ ವರೆಗೇ ಕೇಳೂ ಇಲ್ಲ ನೋಡೂ ಇಲ್ಲ!
ಈ ಹಾಡು ಓದಿ ನಿಮ್ಮಗಳಿಗೂ ಬಗೆಬಗೆ ತಿಂಡಿ ತಿನ್ನೋ ಆಸೆ ಆದ್ರೆ, ಅದಕ್ಕೆ ನಾನಲ್ಲ ಕಾರಣ! ದಾಸರ ನಿಂದಿಸಬೇಡ ಅಂತ ಅವರೇನೋ ಹೇಳ್ಬಿಟ್ರು. ಆದ್ರೆ, ಈಗ ನಾನು ಹೇಳೋದು ಕೇಳಿ. ಈ ಹಾಡು ಓದಿದ್ಮೇಲೆ ಗಂಡಸರು ನಿಮಗೆ ಇದ್ರಲ್ಲಿರೋ ಹೊಸತೋ ಹಳತೋ ಯಾವ್ದಾದ್ರೂ ಸರಿ; ತಿಂಡಿ-ತಿನಿಸು ತಿನ್ನೋ ಆಸೆ ಆದ್ರೂ, ಅಲ್ಲದೆ ತಿಂಡಿ ಸಿಗದೆ ನಿರಾಸೆ ಏನೇ ಆದ್ರೂ, ದಾಸರನ್ನೇ ನಿಂದಿಸಿ! ಹೆಂಗೆಳೆಯರು? ಅದಕ್ಯಾಕೆ ಚಿಂತೆ ಮಾಡ್ತೀರಾ? ನಿಮ್ಮ ಗಂಡಂದ್ರು ಇರೋದು ಯಾಕೆ?
ಏನಂತೀರಾ?
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 553 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹಂಸಾನಂದಿಗಳೆ,
ಇದು ಆವತ್ತು ಪ್ರಾಮಿಸ್ ಮಾಡಿದ ಬರಹವೇ? ಚೆನ್ನಾಗಿದೆ.
ಮುಪ್ಪಿನ ಗಂಡ, ಹಿಂದಿಯ ಸಂಗಮ್ ಚಿತ್ರದ -ಮೆ ಕ್ಯಾ ಕರೂ ಹಾಯ್ ಮುಝೆ ಬುಡ್ಢ ಮಿಲ್ ಗಯಾ- ಹಾಡನ್ನು ನನಗೆ ನೆನಪಿಸಿತು
ಮತ್ತೆ, ಬೇನೆ ತಾಳಲಾರೆ ಬಗ್ಗೆ- ಸ್ವಾಮಿ, ಆ ಕಾಲದಲ್ಲಿ ಹೆಂಡತಿಗೆ ಗಂಡ ಅಷ್ಟೊಂದು ಸೇವೆ ಮಾಡ್ತಿದ್ದ ಅಂದ್ರೆ ನಾನು ಈಗ್ಲೆ ಅಲ್ಲಿಗೆ ಹಾರೊಕ್ಕೆ ತಯಾರು
ದಾಸರು ಸುಮ್ನೆ ತಮಾಷೆ ಮಾಡಿರ್ಬೇಕು ಅಷ್ಟೆ.
ಹೆಂಡತಿ ಪ್ರಾಣ ಹಿಂಡುತಿ ತುಂಬ ಕಡೆ ಇದೆಯಲ್ಲ? ಇಲ್ನೋಡಿ - http://www.geocities.com/harshala_rajesh/DasaraPadagalu.htm#hendati
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಕಲ್ಪನಾ ಅವರೆ,
ನಿಮಗೆ ಬರಹ ಹಿಡಿಸಿದ್ದು ನನಗೆ ಹಿಡಿಸಿತು
ಅವತ್ತು ನಾನು ಟಿಪ್ಪಣಿ ಬರೆದಾಗ ಈ ಹಾಡುಗಳೆ ನನ್ನ ಮನಸ್ಸಿನಲ್ಲಿದ್ದವು!
ನನ್ಹತ್ರ ಪುಸ್ತಕ ಇರ್ಲಿಲ್ಲ - ನನ್ನಲ್ಲಿದ್ದ ಹೆಂಡತಿ ಪ್ರಾಣ ಹಿಂಡುತಿ ಇದ್ದಿದ್ದ ಇ-ಟೆಕ್ಸ್ಟ್ ಏನೋ ಸರಿಯಿಲ್ಲ ಅನ್ನಿಸಿತ್ತು. ಅದಕ್ಕೇ ಹಾಗೆ ಬರ್ದಿದ್ದೆ.
ನಾನು ಸತ್ಯವಂತರಿಗಿದು ಕಾಲವಲ್ಲ ಅನ್ನೋ ಹಾಡನ್ನ ಹಾಕಿದ್ದು ನೋಡ್ಲಿಲ್ಲ್ವಾ? ಎಲ್ಲಾ ಕಾಲಗಳಲ್ಲೂ ಒಳ್ಳೆಯ ಗಂಡಂದ್ರು, ಕೆಟ್ಟ ಗಂಡಂದ್ರು ಇದ್ದೇ ಇರ್ತಾರೆ! ತಮಾಷೆ ಏನಲ್ಲ!
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಕಲ್ಪನಾ ಅವರೆ,
ಆ ಪಾಪದ ಗಂಡನ ಬಗ್ಗೆ ನೀವು ಹೀಗಂತೀರಲ್ಲ!
"ಸಣ್ಣ ನುಚ್ಚು ಇಟ್ಟುಕೊ ಗೊಡ್ಹುಳಿ ಕಾಸಿಕೊ ದೊನ್ನೆಯೊಳಗೆ ತುಪ್ಪ ಬಡಿಸಿಕೊ
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ"
ಬೇಕಾದಷ್ಟು ತಿಂಡಿ ತಿನಿಸು ಮಾಡಿಕೊಟ್ಟ ಗಂಡನಿಗೆ, ಕೊನೆಗೆ ಉಣ್ಣಲು ಸಿಕ್ಕಿದ್ದೇನು ನೋಡಿ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹಂಸಾನಂದಿ, ಪುರಂದರದಾಸರ ಕಾಲ, ಪಕ್ಕಾ ಪುರುಷಪ್ರಧಾನ ಸಮಾಜ ಅಂತ ಗೊತ್ತಾಯ್ತು ಬಿಡಿ
ಹೆಂಗಸರ ಕಷ್ಟವನ್ನು ಈ ರೀತಿ ಮುಂದಿಟ್ಟಿದ್ದಾರೆ, ನಮ್ಮ ಪುರಂದರದಾಸರು.
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಕಲ್ಪನ ಅವರೆ, ಎಚ್ಚರ. ಆ ಕಾಲಕ್ಕೆ ಹೋಗಿಬಿಟ್ಟೀರ ಮತ್ತೆ. ಹೆಂಗಸರು ಮನೆಯೊಳಗೇ ಇರಬೇಕಾಗತ್ತೆ
ಹೆಣ್ಣಿಗ್ಯಾಕೆ ಓದು, ಗೀದು ಅಂತಾ ಸಂಪದದಲ್ಲಿ ಬರೆಯೋ ಸ್ವಾತಂತ್ರ್ಯ ಕಿತ್ಕೊಳ್ತಾರೆ 
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಇಲ್ಲಾರಿ ಸುನಿಲರೆ(ಮತ್ತು ಹಂಸಾನಂದಿಗಳೆ), ಆ ಕಾಲವೇ ಚೆನ್ನಾಗಿತ್ತು ಅಂತ ಅನ್ಸೋದಿಕ್ಕೆ ಶುರುವಾಗಿದೆ. ಈಗ್ನೋಡಿ, ನಾನು, ರೂಪ, ವೀಣಾ, ಮನೇಲೂ ದುಡಿದು, ಆಚೆಯೂ ಕೆಲಸ ಮಾಡಿ ಒದ್ದಾಡಬೇಕು. ಹೀಗಿದ್ರೂ ಮನೆಯಲ್ಲಿ ಚೆನ್ನಾಗಿ ಅಡುಗೆ ಮಾಡುತ್ತಿಲ್ಲ, ಮಕ್ಕಳನ್ನು ನೋಡ್ಕೊಳ್ಳೊದಿಕ್ಕಾಗುತ್ತಿಲ್ಲ ಅಂತೆಲ್ಲ guilty feeling ಇರುತ್ತೆ. (ಆದ್ರೆ, ಇದು ನಮ್ಮ ಪೀಳಿಗೆಗೆ ಸೀಮಿತ ಅನ್ಸತ್ತೆ. ಮುಂದಿನ ಪೀಳಿಗೆಯ ಹೆಣ್ಣುಗಳು ಮನೆ ಬಗ್ಗೆ ತಲೆ ಕೆಡಸ್ಕೊಳ್ಳೊ ಹಾಗೆ ಕಾಣೆ.
)
ಅದೆಲ್ಲ ಇರಲಿ, ನಾನು ಇಲ್ಲಿ ಒಂದ್ಮಾತು ಹೇಳಲೇ ಬೇಕು. ನಿನ್ನೆ ನನ್ನ ಗಂಡನ ಹುಟ್ಟಿದ ಹಬ್ಬದ ದಿನ, ಅವರ ಮನೆಯವರನ್ನೆಲ್ಲ surprise ಔತಣಕ್ಕೆ ಕರೆದಿದ್ದು, ನಾನು ಕಷ್ಟಪಟ್ಟು ಮಾಡಿದ ಅಡುಗೆ ಪಟ್ಟಿ ಹೀಗಿದೆ:
ಮೆಂತ್ಯೆಸೊಪ್ಪು+ಆಲೂಗೆಡ್ಡೆ ಭಾತು, ಸೌತೆಕಾಯಿ ಪಚ್ಚಡಿ, ಸೊಪ್ಪಿನ ತೊವ್ವೆ, ದೊಣ್ಣೇಮೆಣಸಿನಕಾಯಿ ಮಜ್ಜಿಗೆಹುಳಿ, ತಿಳಿ ಸಾರು, ತರಕಾರಿ ಬಜ್ಜಿ, ಶ್ಯಾವಿಗೆ ಪಾಯಸ, ಸೇಬಿನ ಉಪ್ಪಿನಕಾಯಿ(!). ಇಷ್ಟೆಲ್ಲ ನನ್ನ ಗಂಡನಿಂದ ನನ್ನ ಹುಟ್ಟಿದಹಬ್ಬದ ದಿನ expect ಮಾಡೋದಿಕ್ಕಾಗುತ್ತ? ಭಾರಿ ಜಾಣನಾದ ನನ್ನ ಗಂಡ ನನ್ನನ್ನು ಒಳ್ಳೆಯ ಉಡುಪಿ ಹೋಟೆಲ್ಲಿಗೆ ಕರೆದೊಯ್ದು, ಏನ್ ಬೇಕೋ ತಿನ್ನು ಚಿನ್ನ, ಅಂತಾನೆ
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ವಾಹ್. ನಿಮ್ಮೆಜಮಾನ್ರು ಪುಣ್ಯ ಮಾಡಿದ್ದಾರೆ. ಆದರೆ, ಇದೇನಿದು, ಸೇಬಿನ ಉಪ್ಪಿನಕಾಯಿ(!), ಕೇಳಿಯೇ ಇರಲಿಲ್ಲ.
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಸುನಿಲರೇ,
ಸಿಹಿಯಾಗಿರದೆ, ಸ್ವಲ್ಪ ಒಗರಾಗಿದ್ದು, ಚೆನ್ನಾಗಿತ್ತು!
"ನಿಮ್ಮೆಜಮಾನ್ರು ಪುಣ್ಯ ಮಾಡಿದ್ದಾರೆ" - ಹುಂ, ನಾನೂ ಇದನ್ನೆ ದಿನವೂ ಹೇಳಿ ಯಜಮಾನ್ರಿಗೆ ಮನದಟ್ಟು ಮಾಡುತ್ತಿರುತ್ತೇನೆ
"ಇದೇನಿದು, ಸೇಬಿನ ಉಪ್ಪಿನಕಾಯಿ(!), ಕೇಳಿಯೇ ಇರಲಿಲ್ಲ." - ಇದು ಧಿಡೀರ್ ಉಪ್ಪಿನಕಾಯಿಗೆ ಬೇರೇನೂ ಸಿಗದೆ ಕೊನೆಗೆ ಹಿತ್ತಲಲ್ಲಿ ಬೆಳೆಯುತ್ತಿರುವ (ಇನ್ನೂ ಹಣ್ಣಾಗಿಲ್ಲದ) ಸೇಬು ಬಳಸಿದ್ದರಿಂದ ಹುಟ್ಟಿದ್ದು
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ನಮ್ಮ ಮನೆಯ ಹಿತ್ತಲಲ್ಲಿ ಬಿದ್ದು ಹೋಗುವ ಸೇಬುಗಳಿಗೆ (ಹೆಚ್ಚಾಗಿ ಕಾಯಿಗಳೇ), ಗೊಜ್ಜಾಗಿ ಮುಕ್ತಿಹೊಂದುವ ಪುಣ್ಯವಿದೆ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹೌದು ಹಂಸಾನಂದಿಗಳೇ..ಈ ದಾಸರ ಪದಗಳು ಒಂಥರ ವೇದಾಂತದ ಸಾರಗಳಿದ್ದಂತೆ. ಓದಿದಷ್ಟೂ ಮನಸ್ಸಿಗೆ ಹಿತವನ್ನೀಯುತ್ತವೆ. ಅದರಲ್ಲೂ ಅವರ ಜೀವನ ಚರಿತ್ರೆಗಳನ್ನು ಓದಿಕೊಂಡು ಹೇಗೆ ಆದರ್ಶವಾಗಿ ಬದುಕಿದರು ಎಂಬುದನ್ನು ತಿಳಿದುಕೊಂಡು ಇವುಗಳನ್ನೋದಿದರೆ ಹೆಚ್ಚು ಮಹತ್ವ ಬರುತ್ತದೆ. ಇವುಗಳನ್ನು ಜನರಿಗೆ ತಲುಪಿಸುವ ಪ್ರಯತ್ನಗಳು ಹೆಚ್ಚು ನಡೆಯಬೇಕಷ್ಟೆ.
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಓದುತ್ತಿದ್ದಂತೆ ಮನೇಲಿ ಹೋಳಿಗೆ ಮಾಡಿ ತುಂಬಾ ದಿನಾ ಆಗಿದ್ದು ನೆನೆಪಿಗೆ ಬಂತು ಇವತ್ತು ಮನೇಲಿ ಮಾಡೋಣ ಅಂತ ಅನ್ಕೊಂಡಿದೀನಿ.
ಅದಕ್ಕೆ ನಿಮಗೆ ಥ್ಯಾಂಕ್ಸ್
http://thereda-mana.blogspot.com/
ರೂಪ
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ರೂಪಾ, ನಾನು ಒಬ್ಬಟ್ಟು ಮಾಡಿಯಾದಮೇಲೆ ಗಡದ್ದಾಗಿ ತಿಂದು, ಅದಕ್ಕೆ ಏನು ಜಾಸ್ತಿಯಾಗಿದೆ, ಯಾವುದು ಕಡಿಮೆ, ಇನ್ನೂ ಏನಿರಬೇಕಿತ್ತು, ಯಾವುದು ಇರಬಾರದಿತ್ತು, ಹಿಟ್ಟನ್ನು ಇನ್ನೂ ಎಷ್ಟು ಹೊತ್ತು ಕಲೆಸಬೇಕಿತ್ತು, ಇವುಗಳನ್ನು ತಿಳಿಸಿ ಹೇಳುವುದರಲ್ಲಿ ಎಕ್ಸಪರ್ಟು. ನೀವು ಒಬ್ಬಟ್ಟುಮಾಡಿಯಾದ ಮೇಲೆ ನಮ್ಮ ಆಫೀಸಿಗೂ ಸ್ವಲ್ಪ ಕಳಿಸಿಕೊಡಿ
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹಂಸಾನಂದಿಗಳೇ, ನನ್ನಿ. ಎರಡು ಬೇಬೇರೆ ನೋಟಗಳನ್ನು ಕೊಡುವ ಒಳ್ಳೆಯ ಬರಹವನ್ನು ನೀಡಿದ್ದೀರಿ. ಊಟ ತಿಂಡಿ ಬಗ್ಗೆ ಕನ್ನಡಿಗರಿಗೆ ಹೇಳೋದೇ ಬೇಡ. ಸುಡು ಸೂಪಂ, ಘೃತಮಿಲ್ಲದೂಟವ ಅಂತ, ಸೋಮೇಶ್ವರ ಶತಕದಲ್ಲಿ ಬರುತ್ತೆ. ಅಬ್ಬಾಬ್ಬಾ. ತಿಂಡಿಪೋತರು ನಾವೆಲ್ರೂ (ಕಡೇಪಕ್ಷ ನಾನಂತೂ
)
ಈ ಪುರಂದರದಾಸರಿದ್ದಾರಲ್ಲ, ತುಂಬಾ ರಸಿಕರಾಗಿದ್ದಿರಬೇಕು
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹಂಸಾನಂದಿಗಳೇ,
ಬಹಳ ಚನ್ನಾಗಿವೆ ಎರಡೂ ಪದಗಳು ಮತ್ತು ನಿಮ್ಮ ಲೇಖನ
ಪಾಪ, ಹೆಂಡತಿ ಕೇಳಿಕೊಂಡಷ್ಟು ತಿಂಡಿಗಳನ್ನು ಗಂಡ ಮಾಡಿಕೊಟ್ಟನೋ ಅಥವ ಸ್ವಲ್ಪವಾದರೂ ಅವಳ ಮಾತು ಕೇಳಬೇಕೆಂದು ಹೆಂಡತಿಗೆ ಹಚ್ಚಡ ಬಿಗಿಬಿಗಿದು ಹೊಚ್ಚಿ ತಾನೊಂದು ಮೂಲೇಲಿ ಬಿದ್ದುಕೊಂಡನೋ ಗೊತ್ತಾಗಲಿಲ್ಲ
ಬಜೆ ಯಾಕೆ ಅರೆಯಬೇಕು? ಯಾವುದಕ್ಕೆ ಉಪಯೋಗಿಸುತ್ತಾರೆ ಬಜೆ ಪುಡಿಯನ್ನ?
ಅನಿಲ
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹಂಸಾನಂದಿ, ಈ ದಿನ ಪುರಂದರದಾಸರ ಮತ್ತೊಂದು ಪದ ಸಿಕ್ಕಿತು. "ವೈದಿಕ ಗಂಡ ನಾ ಒಲ್ಲೆನೆ". ಓದಿ ಆಶ್ಚರ್ಯವಾಗುತ್ತದೆ.
@ಹೆಂಗಸರೇ, ನೋಡಿ, ನಿಮಗೆಲ್ಲ ಹೇಗೆ ಕಾಟ ಕೊಡ್ತಾ ಇದ್ರು ಗಂಡಸರು ಅಂತ
ಒಲ್ಲೆನೆ ವೈದಿಕ ಗಂಡ ನಾ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||
ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ
ಹಿಟ್ಟು ತೊಳಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟಂತ ಹೇಳಲಿ ಕಷ್ಟದ ಒಗೆತನ || ಚರಣ ೧ ||
ಕೃಷ್ಣಾಜಿವನ್ನು ರಟ್ಟೇಲಿ ಹಾಕಿಕೊಂಡು ಬೆಟ್ಟಲ್ಲಿ ಗಿಂಡಿಯ ಹಿಡಿದಿಹನೇ
ದಿಟ್ಟತನದಿ ನಾನೆದುರಿಗೆ ಹೋದರೆ ದೃಷ್ಟಿಯಿಂದಲಿ ಎನ್ನ ನೋಡನಮ್ಮ || ಚರಣ ೨ ||
ನಿನ್ನಾಣೆ ಹುಸಿಯಲ್ಲ, ಬಿನ್ನಾಣ ಮಾತಲ್ಲ, ಕಣ್ಣುಸನ್ನೆಯಂತು ಮೊದಲೆ ಇಲ್ಲಾ,
ಮುನ್ನಿನ ಜನ್ಮದಲ್ಲಿ ಪುರಂದರ ವಿಠಲನ ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮಾ || ಚರಣ ೩ ||
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಈ ಪದ, "ಹಂಸಾನಂದಿ" ರಾಗದಲ್ಲಿರುವದು ಕಾಕತಾಳೀಯವೇ ಸರಿ
:ನೆಮೇಹೊನ: - ನೆಲದ ಮೇಲೆ ಹೊಱಳಾಡಿ ನಗ್ತಾ ಇರೋದು.
ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
ಹ್ಹ ಹ್ಹ
ಓದಿದ್ದೆ ಈ ಮೊದಲೇ ಈ ಹಾಡನ್ನ..
ಮೊದಲ ಸಾಲು ಒಲ್ಲೆ ನಾ ವೈದಿಕ ಗಂಡನ ಆಗಬೇಕಿತ್ತು.
ಮತ್ತೆ ಈ ಹಾಡು ಹಂಸಾನಂದಿ ರಾಗದಲ್ಲಿರೋದು ಇತ್ತೀಚಿನ ಬೆಳವಣಿಗೆಯೇ ಸರಿ
ಯಾಕಂದ್ರೆ, ಪುರಂದರದಾಸರ ಕಾಲದಲ್ಲಿ, ಹಂಸಾನಂದಿ ಅನ್ನೋ ಹೆಸರಿನ ರಾಗವೇ ಇರ್ಲಿಲ್ಲ..
-ಹಂಸಾನಂದಿ
ಹರಿದಾಸ ಸಂಪದ:- http://haridasa.in/