ಅಹಿರ್ ಭೈರವ್
ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್ರವಾಕಕ್ಕೂ ಆಹಿರ್ ಭೈರವ್ ಗೂ ಸ್ವರಗಳು ಒಂದೇ ಆದರೂ, ಹಾಡುವ ಶೈಲಿಯಲ್ಲಿ ವ್ಯತ್ಯಾಸ ಇದೆ.
ಈಗ ಈ ರಾಗದಲ್ಲಿ ಒಂದು ಒಳ್ಳೇ ತಿಲ್ಲಾನವನ್ನು ನೋಡಿ - ಡಾ.ಬಾಲಮುರಳಿಕೃಷ್ಣ ಅವರ ರಚನೆ.
ಇದು ಹಿಂದೂಸ್ತಾನಿ ಸಂಗೀತದಿಂದ ಈಚೀಚೆಗೆ ಕರ್ನಾಟಕ ಸಂಗೀತದಲ್ಲಿ ಬಳಕೆಯಾಗುತ್ತಿರುವ ರಾಗವಾದ್ದರಿಂದ, ಇದರಲ್ಲಿ ಹೆಚ್ಚಾಗಿ ಚಿಕ್ಕ ರಚನೆಗಳು - ವಚನ-ದೇವರನಾಮ-ಭಜನ್ ಇಂತಹವುಗಳನ್ನು ಮಾತ್ರ ಹಾಡುವ ರೂಢಿ ಹೆಚ್ಚು.
ಈಗ ಇದೇ ರಾಗದಲ್ಲಿ ಒಂದು ಒಳ್ಳೇ ಚಿತ್ರ ಗೀತೆಯನ್ನು ಕೇಳಿ - ಡಾ.ರಾಜ್ ಮತ್ತು ಬೆಂಗಳೂರು ಲತಾ ಅವರ ಧ್ವನಿಯಲ್ಲಿ:
ಕರ್ನಾಟಕ ಸಂಗೀತದಲ್ಲಿ ಇನ್ನೊಂದು ರಾಗ ಇದಕ್ಕೆ ಹೋಲುವಂತೆ ಇದೆ - ಅದು ಬಿಂದುಮಾಲಿನಿ ಅನ್ನುವ ರಾಗ. ತ್ಯಾಗರಾಜರ ಎಂತ ಮುದ್ದೋ ಎಂತ ಸೊಗಸೋ ಎಂಬ ರಚನೆ ಈ ರಾಗದಲ್ಲಿ ಪ್ರಸಿದ್ಧವಾಗಿದೆ. ಇದರ ಹಲವು ಸಂಚಾರಗಳು ಅಹಿರ್ ಭೈರವ್ ಅನ್ನು ಹೋಲುತ್ತವೆ.
ಒಂದು ಮುದ್ರಿಕೆ ನೋಡಿ - ಇದು ಸುಮಾರು ೨೫ ವರ್ಷಗಳ ಹಿಂದಿನದ್ದಿರಬಹುದು. ಯು.ಶ್ರೀನಿವಾಸ್ - ಆಗ ಮಾಸ್ಟರ್ ಯು.ಶ್ರೀನಿವಾಸ್ ಅಂತಿದ್ದರು - ಅವರ ಕೈಚಳಕದಲ್ಲಿ ಮ್ಯಾಂಡೊಲಿನ್ ನಲ್ಲಿ - ಎಂತ ಮುದ್ದೋ ಎಂತ ಸೊಗಸೋ. ರಾಗಾಲಾಪನೆಯಲ್ಲಿ ಅಹಿರ್ ಭೈರವ್ ನ ನೆರಳನ್ನು ಗುರುತಿಸಿ.
-ಹಂಸಾನಂದಿ
- hamsanandi's blog
- Login or register to post comments
- 372 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಅಹಿರ್ ಭೈರವ್
ಹೌದಲ್ಲವೇ!! ಬಿಂದುಮಾಲಿನಿ ಮತ್ತು ಚಕ್ರವಾಕ ಕೆಲವೊಮ್ಮೆ ಒಂದೆ ತರ ಕೇಳುತ್ತದೆ :). ನನಗೆ ಕೆಲವೊಮ್ಮೆ ಚಕ್ರವಾಕ-ಸೌರಾಷ್ಟ್ರ ಒಂದೆ ತರಹ ಕೇಳುತ್ತಿತ್ತು :). ತಂದೆ ತಿದ್ದಿದ ಬಳಿಕ ಈಗ ವ್ಯತ್ಯಾಸ ಕಂಡುಹಿಡಿಯಬಲ್ಲೆ.
ಹಾಗೆ ಎರಡನೆ ಪದ್ಯ "ಹೇಳುವುದು ಒಂದು ಮಾಡುವುದು ಇನ್ನೊಂದು...." ಈ ಹಾಡೇ? ನಮ್ಮಲ್ಲಿ youtube ನಿಷಿದ್ಧ ಅದಕ್ಕೆ ಕೇಳಿದೆ.
ಉ: ಅಹಿರ್ ಭೈರವ್
ಬಿಂದುಮಾಲಿನಿ ರಾಗವು ಚಕ್ರವಾಕದ್ದೇ ಸ್ವರಗಳನ್ನು ಹೊಂದಿದೆ. ಚಕ್ರವಾಕದ್ದೇ ವಕ್ರ-ವರ್ಜ್ಯ ಸಂಚಾರಗಳನ್ನುಳ್ಳ ಈ ರಾಗ, ಹಾಗಾಗಿ ಚಕ್ರವಾಕವನ್ನೂ ಅಹಿರ್ ಭೈರವ್ ನ್ನು ಹೋಲುವುದು ಸ್ವಾಭಾವಿಕವೇ.
ಚಕ್ರವಾಕಕ್ಕೆ ಸ ರಿ೧ ಗ೩ ಮ೧ ಪ ದ೨ ನಿ೨ ಸ - ಸ ನಿ೨ ದ೨ ಪ ಮ೧ ಗ೩ ರಿ೧ ಸ ಎಂಬ ಕ್ರಮ ಸಂಚಾರವನ್ನು ಹೇಳಬಹುದು.
ಬಿಂದು ಮಾಲಿನಿಗೆ
ಸ ಗ೩ ರಿ೧ ಮ೧ ಪ ನಿ೨ ಸ - ಸ ನಿ೨ ಸ ದ೨ ಪ ಗ೩ ರಿ೧ ಸ ಎಂಬ ವಕ್ರ ಸಂಚಾರವನ್ನು ಹೇಳಬಹುದು. ಅಹಿರ್ ಭೈರವ್ ನಲ್ಲಿಯೂ ಈ ರೀತಿಯ ವಕ್ರ/ವರ್ಜ್ಯ ಪ್ರಯೋಗಗಳಿರುವುದೇ ಹೋಲಿಕೆಗೆ ಕಾರಣ.
ನಡುವಿನ ಹಾಡು ನೀವೆಂದುಕೊಂಡಂತೆ 'ಹೇಳುವುದು ಒಂದು ಮಾಡುವುದು ಇನ್ನೊಂದು' ನೇ.
ಉ: ಅಹಿರ್ ಭೈರವ್
ವಿವರಣೆಗೆ ಧನ್ಯವಾದಗಳು ಸರ್. ಇನ್ನೂ ಅನೇಕ ರಾಗ ಪರಿಚಯಗಳನ್ನು ನಮಗೆ ಮಾಡಿಸಿ.
ಉ: ಅಹಿರ್ ಭೈರವ್
ಚಕ್ರವಾಕ ಕರುಣಾ ರಸವುಳ್ಳ, ಸ೦ಪೂರ್ಣ ರಾಗ. ಮುತ್ತುಸ್ವಾಮಿ ದೀಕ್ಷಿರರ ಅಸ೦ಪೂರ್ಣ ಮೇಳಪದ್ಧತಿಯಲ್ಲಿ ೧೬ನೇ ಮೇಳವನ್ನು ತೋಯ ವೇಗವಾಹಿನಿ ಇನ್ನುತ್ತಾರೆ. ದೀಕ್ಷಿತರು ಚಕ್ರವಾಗ ರಾಗದಲ್ಲಿ ರಚನೆಗಳಿಲ್ಲ, ಇದರ ಜನಕವಾದ ವೇಗ ವಾಹಿನಿಯಲ್ಲಿ ರಚಿಸಿದ್ದಾರೆ. ವೇಗವಾಹಿನಿ ಎಒಬ ಜನ್ಯರಾಗದಲ್ಲಿ ಶ್ರೀ ತ್ಯಾಗರಾಜರ ಕ್ರುತಿಯಿದೆ. ಚಕ್ರವಾಕದಲ್ಲಿ ಪಟ್ನ೦ ಸುಬ್ರಹ್ಮಣ್ಯಯ್ಯರ್ ಅವರ ಜಲಜಾಕ್ಷ ಎ೦ಬ ತಾನವರ್ಣ ಇದೆ. ತ್ಯಾಗರಾಜರ "ಸುಗುಣಮುಲೇ ಚೆಪ್ಪುಕೊ೦ಟಿ" - ರೂಪಕ ತಾಳದಲ್ಲಿ ಮತ್ತು "ಎಟುಲಾ ಬ್ರೋತುವೋ" - ಮಿಶ್ರ ಛಾಪು ತಾಳದಲ್ಲಿ, ಹಾಗೂ ಮೈಸೂರು ಕರಿಗಿರಿರಾಯರ ರಚನೆ "ನೀವೇಪಾಲಿ೦ಚರಾ" - ರೂಪಕ ತಾಳದಲ್ಲಿದೆ.
ಸಿನೆಮಾ ಹಾಡುಗಳಲ್ಲಿ, ಅತಿಯಾಗಿ ಎಲ್ಲರೂ ಮೆಚ್ಚಿದ ಹಾಗೂ ಮನಸನ್ನು ತು೦ಬಾ ಕರಗಿಸುವ ಹಾಡೆ೦ದರೆ "ಪವಡಿಸೂ ಪರಮಾತ್ಮ ಶ್ರೀ ವೆ೦ಕಟೇಶ...." ಮತ್ತು "ಈ ಭೂಮಿ ಬಣ್ಣದ ಬುಗುರಿ...". ಭಾವಗೀತೆಯಲ್ಲಿ ಎ೦.ಡಿ.ಪಲ್ಲವಿ ಹಾಡಿರುವ "ನೀ ಸಿಗದೇ ಬಾಳೊ೦ದು ಬಾಳೇ ಕ್ರುಷ್ಣಾ...".
ಚಕ್ರವಾಕ ನಿಜವಾಗಿಯೂ ಎಲ್ಲರನ್ನೂ ಕರಗಿಸಬಲ್ಲ ರಾಗ. ಲಿ೦ಕ್ ಗಳಿಗಾಗಿ ಧನ್ಯವಾದಗಳು..
ಉ: ಅಹಿರ್ ಭೈರವ್
ದೀಕ್ಷಿತರ "ಗಜಾನನಯುತಮ್..." ಬಹಳ ಸುಮಧುರವಾಗಿದೆ.