ಹಂಸ ನಾದ
ಹಂಸ ನುಡಿದರೆ, ಹಂಸನಾದ!
Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ನಮ್ಮ ದೇಶದಲ್ಲಿ ಮೊದಲು ಆಕಾಶಾನ ಹನ್ನೆರಡು ರಾಶಿಗಳಾಗಿ ವಿಂಗಡಿಸೋ ಪದ್ಧತಿ ಇರಲಿಲ್ಲ. ಅದರ ಬದಲು, ಆಕಾಶವನ್ನು ಇಪ್ಪತ್ತೇಳು ಅಥವಾ ಇಪ್ಪತ್ತೆಂಟು ನಕ್ಷತ್ರಗಳಾಗಿ ವಿಂಗಡಿದಿದ್ರು. ಇದು ಚಂದ್ರ ಆಕಾಶದಲ್ಲಿ ಹೊರಟ ಸ್ಥಳಕ್ಕೇ ಮತ್ತೆ ಬರಲು ಸುಮಾರು ಇಪ್ಪತ್ತೇಳು ಚಿಲ್ಲರೆ ದಿವಸಗಳಾಗೋದ್ರಿಂದ. ಸೂರ್ಯ ಎಲ್ಲಿದೆ ಅಂತ ತೋರ್ಸಕ್ಕೂ ಇದೇ ನಕ್ಷತ್ರಗಳನ್ನೆ ಬಳಸ್ತಿದ್ರು. ಪ್ರತಿ ನಕ್ಷತ್ರವನ್ನು ನಾಕು ಭಾಗ ಮಾಡಿ, ಒಂದೊಂದಕ್ಕೂ ಒಂದು ಪಾದವೆಂದು ಕರ್ರೀತಿದ್ರು. ವಸಂತದ ಮೊದಲ ದಿನ - ಎಂದರೆ, ಚಳಿಗಾಲ ಮುಗಿಯುತ್ತಾ ಹಗಲು ಹೆಚ್ಚಲಾರಂಭಿಸಿದಾಗ ಹಗಲೂ ರಾತ್ರಿ ಸರಿಸಮಾನವಾಗಿ ಬರುವ ವಸಂತ ವಿಷುವ (vernal equinox) ದ ಸಮಯದಲ್ಲಿ ಸೂರ್ಯ ಮೃಗಶಿರಾ ನಕ್ಷತ್ರದಲ್ಲಿರುತ್ತಾನೆಂದು ಋಗ್ವೇದದಲ್ಲಿ ಬರುತ್ತೆ (ಇದು ಸುಮಾರು ಕ್ರಿ.ಪೂ. ೪೦೦೦ ರ ಸುಮಾರಿನ ಸಮಾಚಾರ. ನಂತರ ಬಂದ ಬ್ರಾಹ್ಮಣಗಳಲ್ಲ್ಲಿ ವಸಂತಾದಿ - ಇದೇ ವರ್ಷದಾದಿ - ಯುಗಾದಿಯ ದಿವ್ಸ ಸೂರ್ಯ ಕೃತ್ತಿಕಾ ನಕ್ಷತ್ರದಲ್ಲಿರ್ತಾನೆ ಅಂತ ಹೇಳದೆ. ಮತ್ತೆ ಸುಮಾರು ಕ್ರಿಸ್ತನ ಆಸುಪಾಸಿನ ಪುರಾಣಗಳು, ವಸಂತ ವಿಷುವದ ದಿನ ಸೂರ್ಯ ಅಶ್ವಿನಿ ನಕ್ಷತ್ರ ವನ್ನು ಪ್ರವೇಶಿಸ್ತಾನೆ ಅನ್ನತ್ವೆ. ಇದೇನಿದು? ಈ ರೀತಿ ನಂಬಲಾದಂತ ಬೇರೆಬೇರೆ ಮಾತನ್ನ ಹೇಳ್ತಾರಲ್ಲ ಅಂತ ಅನ್ಕೋಬೇಡಿ. ಇದ್ಯಾಕೆ ಹೀಗೆ ಅನ್ನೋದನ್ನ ಮುಂದೆ ನೋಡೋಣ.
ಚಿತ್ರ - ೬
ಚಿತ್ರ-೬ನ್ನ ಗಮನಿಸಿ. ನಾವು ಯಾವ್ದನ್ನ ಉತ್ತರ-ದಕ್ಷಿಣ ರೇಖೆ ಅಂದ್ಕೊಂಡಿದೀವೋ, ಅದೇ ಒಂದೇ ಕಡೆ ಇರಲ್ಲ. ನಿದಾನ ವಾಗಿ ಬದಲಾಗ್ತಿದೆ. ಆದ್ರೆ ಯಾವಾಗ್ಲೂ ಅದು, ಭೂಮಿ ಸೂರ್ಯನ್ನ ಸುತ್ತೋ ಪಾತಳಿಗೆ ಅರವತ್ತಾರೂವರೆ (೬೬.೫) ಡಿಗ್ರಿ ಕೋನದಲ್ಲಿರುತ್ತೆ ಅಷ್ಟೆ. ಈ ಚಲನೆಯನ್ನೆ ಅಯನಾಂಶ (precision) ಅಂತಾರೆ. ಇದು ಬಹಳ ನಿದಾನ. ಭೂಮಿಯ ಅಕ್ಷ (axis, ಉತ್ತರ-ದಕ್ಷಿಣ ರೇಖೆ) ಈ ತರಹ ಒಂದು ಸುತ್ತು ಬರಕ್ಕೆ ಸುಮಾರು ಇಪ್ಪತ್ತಾರು ಸಾವಿರ ವರ್ಷ ಆಗತ್ತೆ.
ಈಗ ಇನ್ನೊಂದು ಕುತೂಹಲದ ವಿಷಯ. ಧ್ರುವ ನಕ್ಷತ್ರದ ಬಗ್ಗೆ ನಾವೆಲ್ಲ ಕೇಳೇ ಇದೀವಿ. ಅದು ಯಾವ್ದು? ಈ ಭೂಮಿಯ ಅಕ್ಷ ಯಾವ ನಕ್ಷತ್ರದ ಕಡೆ ಬೊಟ್ಟು ಮಾಡ್ತಿರತ್ತೋ, ಅದೇ ಧ್ರುವ ನಕ್ಷತ್ರ. ಆದ್ರೆ, ಈ ಅಕ್ಷವೇ ನಿಂತಲ್ಲಿ ನಿಲ್ಲದು ಅಂತ ನಮಗೆ ಗೊತ್ತಾಯ್ತಲ್ಲ? ಹಾಗಾದ್ರೆ, ಧ್ರುವ ನಕ್ಷತ್ರ ನಿಜವಾಗಿ ಧ್ರುವ (= ಚಲನೆಯಿಲ್ಲದ್ದು, ಬದಲಾಯಿಸದ್ದು) ಅನ್ನೋದು ಸರಿಯೇ? ಇಲ್ಲ! ಕಾಲಕ್ಕೆ ತಕ್ಕ ಹಾಗೆ, ನಮ್ಮ ಅಕ್ಷ ಬೊಟ್ಟು ಮಾಡುವೆಡೆಯ ಹತ್ತಿರಕ್ಕೆ ಯಾವ ನಕ್ಷತ್ರ ಕಾಣ್ತಿದೆಯೋ ಅದಕ್ಕೆ ಧ್ರುವ ಅನ್ನೋ ನಾಮಕರಣ ಮಾಡಿಬಿಡ್ತಾರಷ್ಟೇ. ಒಬ್ಬ ಮನುಷ್ಯನ ಜೀವಮಾನದಲ್ಲಿ ಇದರಲ್ಲಿ ಯಾವ ಬದ್ಲಾವಣೆ ನೂ ಕಾಣ್ದೆ ಇರೋದ್ರಿಂದ ಪರ್ವಾಗಿಲ್ಲ ಅಷ್ಟೆ. ಆದ್ರೆ, ಒಂದು ನಿಜ. ವೇದಗಳ ಕಾಲದಲ್ಲಿ ಯಾವ ನಕ್ಷತ್ರವನ್ನ ಧ್ರುವ ಅಂತಿದ್ರೋ, ಈಗ ನಾವು ಯಾವುದನ್ನ ಧ್ರುವ ನಕ್ಷತ್ರ ಅಂತೀವೋ ಅವರಡು ಬೇರೆ ಬೇರೆ ಅನ್ನೋದನ್ನ ಮರೀಬೇಡಿ.
ಈಗ ಅಯನಾಂಶದ ಪರಿಣಾಮ ಸೂರ್ಯನ ಚಲನೆಯ ಮೇಲೆ ಹೇಗಾಗುತ್ತೆ ಅನ್ನೋದನ್ನ ನೋಡೋಣ. ಈ ಉತ್ತರ ದಿಕ್ಕು ಅನ್ನೋದೇ ಬದ್ಲಾಗೋದ್ರಿಂದ, ಸೂರ್ಯ ನಮಗೆ ಉತ್ತರಕ್ಕೆ ತಿರುಗೋದು ಬೇರೆ ಸಮಯದಲ್ಲಿ ಅಂತ ಭಾಸವಾಗುತ್ತೆ. ವರ್ಷಾನುಗಟ್ಟಲೆ, ನೋಡಿ ಆದ್ಮೇಲೆ, ಅದ್ರಿಂದ ಏನು ಗೊತ್ತಾಯ್ತು ಅಂದ್ರೆ, ವಸಂತ ವಿಷುವದ ದಿನ ಸೂರ್ಯ ಮೇಷರಾಶಿಯ ಆರಂಭದಲ್ಲಿ ( First point of Aries, ಮೇಷಾದಿ ಬಿಂದು) ಇಲ್ವೇ ಇಲ್ಲ! ಅದರ ಬದಲು ಮೀನ ರಾಶಿಯಲ್ಲೇ ಇದು ಆಗಿ ಬಿಡುತ್ತೆ. ಇದನ್ನ ಕೆಳಗಿನ ಚಿತ್ರದಲ್ಲಿ ತೋರ್ಸಿದೀನಿ. ಎರಡು ಸಾವಿರ ವರ್ಷದ ಹಿಂದೆ ಇದ್ದ ಸೂರ್ಯನ ಹಾದಿ ಹಳದಿ ಬಣ್ಣದಲ್ಲಿದೆ. ಇವತ್ತಿನ ಸೂರ್ಯನ ದಾರಿ ಕೇಸರಿ ಬಣ್ಣದಲ್ಲಿದೆ.
ಚಿತ್ರ - ೭
ಈಗ ನೋಡಿ. ಸೂರ್ಯನ ಪಥ ಆಕಾಶಮಧ್ಯರೇಖೆಯನ್ನ ದಕ್ಷಿಣದಿಂದ ಉತ್ತರಕ್ಕೆ ದಾಟೋದು ಸುಮಾರು ಹನ್ನೆರಡನೇ ಮೀನ ರಾಶಿಯ ಆರಂಭದಲ್ಲೇ ಆಗಿಹೋಗುತ್ತೆ. ಇದು ನಡೆಯೋದು ಪ್ರತಿ ವರ್ಷ ಮಾರ್ಚ್ ೨೧ರ ಸುಮಾರಿಗೆ. ಹಾಗೇ, ಸೂರ್ಯ ತನ್ನ ಅತೀ ದಕ್ಷಿಣದ ತುದಿಯಿಂದ ಉತ್ತರಕ್ಕೆ ಬರೋದು ಸೂರ್ಯ ೯ ನೆ ರಾಶಿಯಲ್ಲಿರೋವಾಗ್ಲೆ ಆಗಿಹೋಗುತ್ತೆ. ಇದೇ ನಿಜವಾದ ಉತ್ತರಾಯಣ ಪುಣ್ಯಕಾಲ. ಇದು ಈಗ ಡಿಸೆಂಬರ್ ೨೧ಕ್ಕೆ ಜರುಗತ್ತೆ ಪ್ರತೀ ವರ್ಷ.
ಪಾಶ್ಚಾತ್ಯ್ರರು ಏನು ಮಾಡ್ಕೊಂಡಿದಾರೆ ಅಂದ್ರೆ, ಪ್ರತಿ ವರ್ಷ ಆರಂಭವಾಗೋದು ಮೇಷಾದಿ ಬಿಂದುವಿನಿಂದ (First point of Aries) ಅಂತ ಹೇಳ್ತಾ, ಈ ಬಿಂದುವೇ ವರ್ಷೇ ವರ್ಷೆ ಹಿಂದಕ್ಕೆ ಹೋಗ್ತಿದೆ ಅಂತಾರೆ. ಅಂದ್ರೆ, ಮೇಷಾದಿ ಬಿಂದುಗೂ, ನಿಜವಾದ ಮೇಷರಾಶಿಗೂ ಸಂಬಂಧವನ್ನ ಅವರು ಕಡಿದು ಹಾಕಿಬಿಟ್ಟಿದಾರೆ. ಇದಕ್ಕೆ ಸಾಯನ ಪಂಚಾಂಗ ಅಂತ ಹೆಸರು. ಈಗ ಮೇಷಾದಿ ಬಿಂದು ಮೀನ ರಾಶಿಯಲ್ಲಿದೆ. ಇನ್ನು ಕೆಲವು ನೂರು ವರ್ಷಗಳಾದ್ಮೇಲೆ ಅದು ಕುಂಭ ರಾಶಿಗೆ ಹೋಗುತ್ತೆ. ಆದ್ರೆ, ಆಗ್ಲೂ ಅದನ್ನ ಮೇಷಾದಿ ಬಿಂದು ಅಂತ್ಲೇ ಕರ್ಯೋದು.
ಭಾರತದಲ್ಲಿ ನಾವು ನಿರಯನ ಪಂಚಾಂಗವನ್ನ ಉಪಯೋಗಿಸ್ತಿದೀವಿ. ಇದರಲ್ಲಿ ಮೇಷಾದಿ ಬಿಂದುವನ್ನ ನಾವು ಬದ್ಲಾಯಿಸ್ತಾ ಇಲ್ಲ. ಅದರ ಬದಲು ಸೂರ್ಯ ಇಂತಹ ನಕ್ಷತ್ರಕ್ಕೆ ಬಂದಾಗ ವರ್ಷದ ಆದಿ ಅಂತ ಹೇಳ್ತಾ ಇದೀವಿ. ಅದಕ್ಕೇ ವೇದಗಳಲ್ಲಿ ಅದು ಮೃಗಶಿರಾ ಆಗಿತ್ತು. ಬ್ರಾಹ್ಮಣಗಳಲ್ಲಿ ಕೃತ್ತಿಕಾ ಆಗಿತ್ತು. ಪುರಾಣಗಳಲ್ಲಿ ಅಶ್ವಿನಿ ಆಗಿತ್ತು. ಮತ್ತೆ ಈಗ ಇಪ್ಪತ್ತೊಂದನೆ ಶತಮಾನದಲ್ಲಿ ಅದು ಪೂರ್ವಾಭಾದ್ರ ಆಗಿದೆ!
ರಾಶಿಗಳು ಮಾತ್ರ ಎಲ್ಲಿದ್ದವೋ ಅಲ್ಲೇ ಇವೆ. ಅದಕ್ಕೇ, ಸೂರ್ಯ ಈಗಲೂ ಮೇಷ ರಾಶಿಯನ್ನ ಏಪ್ರಿಲ್ ಹದಿನಾಕಕ್ಕೇ ಸೇರ್ತಾನೆ. ಮಕರ ರಾಶಿಯನ್ನ ಜನವರಿ ಹದ್ನಾಕಕ್ಕೇ ಸೇರ್ತಾನೆ. ಅವೇ ಸಂಕ್ರಮಣಗಳು. ಅದಕ್ಕೇ ಮಕರ ಸಂಕ್ರಮಣ ಜನವರಿ ಹದಿನಾಕಕ್ಕೆ.
ಆದ್ರೆ, ಹೀಗೆ ಮಾಡಿರೋದ್ರಿಂದ ಏನಾಯ್ತಪ್ಪ ಅಂದ್ರೆ, ಮೊದಲಿಗೆ ಆ ಹಬ್ಬವನ್ನ ಆಚರಿಸ್ತಿದ್ದ ಕಾರಣವೇ ಮರೆತುಹೋಗೋ ಸಾಧ್ಯತೆ ಇದೆ! ಉತ್ತರಾಯಣ ಪ್ರಾರಂಭವಾಗುತ್ತೆ ಅಂತ ಮಕರ ಸಂಕ್ರಮಣವನ್ನ ಆಚರಿಸ್ತಿದ್ವಿ. ಈಗ ಜನವರಿ ೧೪ರ ಬದಲು ಡಿಸೆಂಬರ್ ೨೧ಕ್ಕೆ ನಿಜವಾದ ಉತ್ತರಾಯಣ ಶುರುವಾಗಿ ಹೋಗಿರತ್ತೆ. ಇದೊಂದೇ ತೊಂದ್ರೆ. ಜನವರಿ ಹದ್ನಾಕರ ದಿವಸ ನಾವು ಹಬ್ಬ ಆಚರಿಸಿದರೆ, ಅದು ಮಕರ ಸಂಕ್ರಮಣ ಆಗುತ್ತೆ- ಉತ್ತರಾಯಣ ಪುಣ್ಯಕಾಲ ಅಂತೂ ಆಗಲ್ಲ.
ಆದ್ರೆ, ಎಳ್ಳು ಬೆಲ್ಲ ತಿಂದು ಒಳ್ಳೇ ಮಾತಾಡಕ್ಕೆ, ಯಾವ ದಿನ ಆದ್ರೇನು? ಪರ್ವಾಗಿಲ್ಲ ಅಂತೀರಾ? ಅದು ನಿಜವೇ!
ಉತ್ತರಾಯಣವೇ ಆಗ್ಲಿ, ಮಕರ ಸಂಕ್ರಮಣವೇ ಆಗ್ಲಿ ; ಎಳ್ಳುತಿನ್ನಲಿ ಅಥವಾ ತಿನ್ನದೇ ಇರ್ಲಿ.
ಒಳ್ಳೇ ಮಾತಂತೂ, ಮರೀದೇ, ಆಡ್ತಾ ಇರೋಣ!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 487 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ






RSS:
ಪ್ರತಿಕ್ರಿಯೆಗಳು
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಹಂಸಾನಂದಿಯವರೇ,
ಲೇಖನ ಚೆನ್ನಾಗಿದೆ; ಬಹುಪಾಲು ಸತ್ಯಕ್ಕೆ ಹತ್ತಿರವಾದ ಲೇಖನ. ಆದರೆ ಸತ್ಯವಲ್ಲದ ಕೆಲ ಸಂಗತಿಗಳೂ ಸೇರಿಕೊಂಡಿರುವುದರಿಂದ ತಿದ್ದುಪಡಿಯನ್ನು ಸೇರಿಸುತ್ತಿದ್ದೇನೆ:
೧. ನಮ್ಮ ದೇಶದಲ್ಲಿ ರಾಶಿಚಕ್ರದ ವಿಂಗಡನೆ ಇರಲಿಲ್ಲ; ಅದು ನಮಗೆ (ರೋಮನ್ನರಲ್ಲ) ಗ್ರೀಕರ ಕೊಡುಗೆ ಎಂಬುದು ಪಾಶ್ಚಾತ್ಯ ಪೂರ್ವಾಗ್ರಹಿಗಳ ಮತ. ಈ ಅಂಶ ಭಾರತೀಯರ ಕಾಲವನ್ನು ಮಧ್ಯಪ್ರಾಚ್ಯಕ್ಕಿಂತ ಹಿಂದೆ ಒಯ್ಯುವುದರಿಂದ, ಅದನ್ನು ತಡೆಯಲು ಇದರ ಹಿಂದೆ ಭಾರೀ ಕುತಂತ್ರವೇ ಪೂರ್ವಯೋಜಿತ ರೀತಿಯಲ್ಲಿ ನಡೆದಿರುವುದು ಭಾರತೀಯ ವಿದ್ವಾಂಸರ ಅಧ್ಯಯನದಿಂದ ಹೊರಬಂದಿದೆ, ಹೊರಬರುತ್ತಿದೆ. ಇರಲಿ, ಪಿತೃ - ಪೇಟರ್ - ಫಾದರ್ ಇವುಗಳಲ್ಲಿ ಸಾಮ್ಯತೆ ಇರುವುದರಿಂದ ಹೇಗೆ ಸಕ್ಕದ - ಗ್ರೀಕ್ - ಲ್ಯಾಟಿನ್ಗಳು ತಮ್ಮದೇ ಹಳೆಯಭಾಷೆಯೆಂದು ಹೇಳಿಕೊಳ್ಳುತ್ತವೆಯೋ ಹಾಗೆಯೇ,
ದ್ರೇಕ್ಕಾಣ - ಡ್ರೇಕೋನ್, ಹೋರಾ - ಹ(ಅ)ವರ್ ಇತ್ಯಾದಿ ಜ್ಯೋತಿಷ ಪದಸಾಮ್ಯತೆ, ಲಕ್ಷಣಸಾಮ್ಯತೆಗಳಿಂದ ರಾಶಿಚಕ್ರವಿಭಾಗ ಭಾರತದಿಂದ ಗ್ರೀಸ್ ಗೆ ಹೋಯಿತೋ, ಅಲ್ಲಿಂದ ಇಲ್ಲಿಗೆ ಬಂದಿತೋ ಎಂಬ ಊಹೆಯಲ್ಲಿ ಜನರಿದ್ದಾರೆ. ಇಷ್ಟು ಮಾತ್ರ ಸತ್ಯ. ಮಿಕ್ಕಿದ್ದೆಲ್ಲ ಪೂರ್ವಾಗ್ರಹ.
೨. ವೇದಾಂಗ ಜ್ಯೋತಿಷದಲ್ಲಿ ಇದ್ದುದು ೨೭ ನಕ್ಷತ್ರಗಳು ಮಾತ್ರ; ಈಗಲೂ ಅಷ್ಟೇ. ಇದಕ್ಕೆ ಪುರಾವೆಗಳು ವೇದಗಳಲ್ಲಿ ಹೇರಳವಾಗಿ ಸಿಗುತ್ತವೆ. ನೀವೇ ಪರಿಗಣಿಸಿರುವ ಋಗ್ವೇದಸಂಹಿತೆಯಿಂದ ಹಿಡಿದು ಅಥರ್ವಣವೇದದ ಸೂಕ್ತಗಳವರೆಗೂ ಕಾಣಸಿಗುವುದು ೨೭ ತಾರೆಗಳು ಮಾತ್ರ. ಉದಾಹರಣೆಗೆ, ಋಗ್ವೇದಸಂಹಿತೆಯ ೨೫-೨೮ರವರೆಗಿನ ಲಾಗಧನ ತಾರಾವಳಿಯೂ,
"ಅಗ್ನಿರ್ನಃ ಪಾತು ಕೃತ್ತಿಕಾಃ..." ಎಂದು ಮೊದಲಾಗುವ ನಕ್ಷತ್ರಸೂಕ್ತವೂ (ಕೃ.ಯಜುರ್ವೇದ ಬ್ರಾಹ್ಮಣ ೪-೪-೪-೧೦)
"ಸುಹವಂ ಅಗ್ನೇ ಕೃತ್ತಿಕಾ..." ಎಂದು ಆರಂಭವಾಗುವ ಅಥರ್ವಣವೇದದ ನಕ್ಷತ್ರಸೂಕ್ತವೂ (ಅಥರ್ವಣವೇದ ೧೯-೭-೨)
೨೭ ತಾರೆಗಳನ್ನು ಮಾತ್ರ ತೋರುತ್ತವೆ. ಇನ್ನು ಕಾಲದ ಬಗ್ಗೆ ಹೇಳುವುದಾದರೆ, ಕೃತ್ತಿಕೆಯಿಂದ ಆರಂಭವಾಗುವ ವಸಂತ ವಿಷುವದ ಕಾಲವೇ ಕ್ರಿ.ಪೂ ೩೦೦೦ ಕ್ಕೆ ಹೋಗುತ್ತದೆ! (ಪ್ರಮಾಣಗಳಿಗಾಗಿ ನಾಸಾದ ಡಾ|| ಬಾಲಕೃಷ್ಣರ ಲೇಖನಗಳನ್ನು ನೋಡಬಹುದು: http://www.vedicastronomy.net/stars_bharatheeya.htm) ೨೮ನೆಯ ಅಭಿಜಿತ್ ಅನ್ನು ಸೇರಿಸಲಾಗಿದ್ದು ಕ್ರಿಸ್ತಪೂರ್ವ ೧ ರಿಂದ ಕ್ರಿ.ಶ. ೨ ರ ಸುಮಾರಿನಲ್ಲಿ (ವರಾಹಮಿಹಿರನ ಕಾಲದಲ್ಲಿ) ಎಂಬ ಅಭಿಮತ ಬಹುಜನರದು; ಅದೂ ಕೇವಲ ಪ್ರಶ್ನಫಲಜ್ಯೊತಿಷಕ್ಕಾಗಿ. ಬಹುಶಃ, ಸರ್ವತೋಭದ್ರಚಕ್ರವನ್ನು ಅಭ್ಯಾಸಮಾಡಿರುವ ಎಲ್ಲ ಜ್ಯೋತಿಷಿಗಳಿಗೂ ಇದು ಗೊತ್ತಿರುತ್ತದೆ!!
೩.ಕಾಲಕಳೆದಂತೆ ಧ್ರುವನಕ್ಷತ್ರ ಬದಲಾಗುವುದಿಲ್ಲ; ಏಕೆಂದರೆ, ಸಪ್ತರ್ಷಿಮಂಡಲದ(ಅರ್ಸಾ ಮೇಜರ್) ಕೊನೆಗೆ ಹೆಚ್ಚು ಪ್ರಕಾಶಮಾನವಾಗಿ ಕಾಣುವ ತಾರೆ ಅದೊಂದೇ ಎಂದು ನಿಮಗೂ ಗೊತ್ತು!! ಆದರೆ, ಅದರ ಸುತ್ತಲೂ ಬುಗುರಿಯಾಡುವ "ಉತ್ತರ ದಿಕ್ಕು" ಬದಲಾಗುತ್ತದೆ!
೪.ಮಕರ ಸಂಕ್ರಮಣ ಹಾಗೂ ಉತ್ತರಾಯಣ ಬೇರೆ ಬೇರೆ ಎಂದು ಜ್ಯೋತಿಷಿಗಳಿಗೆ, ಪಂಚಾಗಕರ್ತರಿಗೆ ಹಿಂದಿನಿಂದಲೂ ಚೆನ್ನಾಗಿಯೇ ತಿಳಿದಿದ್ದರೂ, ಹಬ್ಬ-ಹರಿದಿನಗಳ ಆಚರಣೆಗೆ ಬುನಾದಿಯಾಗಿರುವ ಧರ್ಮಸಿದ್ಧಾಂತಗಳ ವಾಕ್ಯಗಳಂತೆಯೇ, ಇಂದಿಗೂ ಉತ್ತರಾಯಣವನ್ನು ನಿರಯಣರೀತ್ಯಾ ಗುಣಿಸುತ್ತಿದ್ದಾರೆ. ಆದ್ದರಿಂದಲೇ ಇಂದು ಪಂಚಾಂಗ ಹೊರಬಂದಾಗ "ಸಿದ್ಧಾಂತ-ವಾಕ್ಯ-ಆರ್ಯಭಟೀಯ-ದೃಗ್ಗಣಿತ ಈ ನಾಲ್ಕೂ ಸೇರಿದ" ಎಂದು ಮುದ್ರಿಸುತ್ತಿದ್ದಾರೆ!! ಇದು ತಿಳಿಯದೆ ಆಗುತ್ತಿರುವ ತಪ್ಪು ನಿರ್ಣಯವಲ್ಲ; ತಿಳಿದೇ ಮಾಡುತ್ತಿರುವ "ಧರ್ಮಾಚರಣೆ"!!
ಮಿಕ್ಕಂತೆ ನಿಮ್ಮ ಲೇಖನ ಸೊಗಸಾಗಿದೆ! ನಾನು ಬರೆಯಬೇಕೆಂದುಕೊಂಡದ್ದನ್ನೆಲ್ಲಾ ನೀವೇ ಬರೆದಿರುವುದು ನನಗೆ ಸಂತಸವಾಗಿದೆ!!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಬೆನಕರೆ,
ನಿಮ್ಮ ವಿವರಗಳಿಗೆ ಧನ್ಯವಾದಗಳು.
ಒಂದೆರಡು ಮರುನುಡಿಗಳು:
>>೧. ನಮ್ಮ ದೇಶದಲ್ಲಿ ರಾಶಿಚಕ್ರದ ವಿಂಗಡನೆ ಇರಲಿಲ್ಲ; ಅದು ನಮಗೆ (ರೋಮನ್ನರಲ್ಲ) ಗ್ರೀಕರ ಕೊಡುಗೆ ಎಂಬುದು ಪಾಶ್ಚಾತ್ಯ
>>ಪೂರ್ವಾಗ್ರಹಿಗಳ ಮತ.
ರೋಮನ್ನರಂದದ್ದು ನನ್ನ ತಪ್ಪು. ಇದನ್ನು ಲೇಖನದಲ್ಲಿ ತಿದ್ದುತ್ತೇನೆ.
ಆದರೆ, ನಕ್ಷತ್ರಗಳ ವಿಂಗಡಣೆ ರಾಶಿಗಳಿಗಿಂತ ಬಹಳ ಹಿಂದೇ ಬಂದದ್ದು ಎನ್ನುವುದು, ರಾಮಾಯಣ ಮಹಾಭಾರತಗಳಲ್ಲೂ ರಾಶಿಗಳ ಬಗ್ಗೆ ಎಲ್ಲೂ ಹೇಳಿಲ್ಲ ಅನ್ನುವುದು ನನಗೆ ಗೊತ್ತಿರುವಂತೆ ಸತ್ಯ. ಇದು ತಪ್ಪಿದ್ದರೆ ದಯವಿಟ್ಟು ತಿಳಿಸಿ.
ಈ ವಿಷಯಗಳಲ್ಲಿ, ಪೂರ್ವಾಗ್ರಹ ಬಹಳವಾಗಿರುವುದು ನಿಜವಾದ ಮಾತೇ.
>>೨. ವೇದಾಂಗ ಜ್ಯೋತಿಷದಲ್ಲಿ ಇದ್ದುದು ೨೭ ನಕ್ಷತ್ರಗಳು ಮಾತ್ರ; ಈಗಲೂ ಅಷ್ಟೇ. ಇದಕ್ಕೆ ಪುರಾವೆಗಳು ವೇದಗಳಲ್ಲಿ
>>ಹೇರಳವಾಗಿ ಸಿಗುತ್ತವೆ. ನೀವೇ ಪರಿಗಣಿಸಿರುವ ಋಗ್ವೇದಸಂಹಿತೆಯಿಂದ ಹಿಡಿದು ಅಥರ್ವಣವೇದದ ಸೂಕ್ತಗಳವರೆಗೂ
>>ಕಾಣಸಿಗುವುದು ೨೭ ತಾರೆಗಳು ಮಾತ್ರ.
ಅಥರ್ವ ವೇದದಲ್ಲಿ ೨೮ ತಾರೆಗಳನ್ನು ಹೇಳಿದೆ ಎಂದು ಡಾ.ಬಾಲಕೃಷ್ಣರು ಹೇಳುತ್ತಾರಲ್ಲ? ಆದರೆ, ನಾನು ಜ್ಯೋತಿಷ್ಶಾಸ್ತ್ರವನ್ನೇ ಆಗಲಿ, ಫಲಜ್ಯೋತಿಷ್ಯವನ್ನಾಗಲೀ ನೇರವಾಗಿ ಕಲಿತಿಲ್ಲ. ಹಾಗಾಗಿ, ಮೊದಲು ೨೮ ಇದ್ದದ್ದು ನಂತರ ೨೭ ಆದವು ಎಂದು ಹೇಳಲು ನನಗೆ ಗಟ್ಟಿ ಆಧಾರಗಳಿಲ್ಲ ಎಂಬುದನ್ನು ಒಪ್ಪುತ್ತೇನೆ. ಇದು ನಾನು ಕೇಳಿ/ಓದಿರುವ ವಿಷಯವಷ್ಟೆ. ನೀವು ಹೇಳಿದಂತೆ, ೨೭ ಇದ್ದು, ನಂತರ ೨೮ ಆಗಿ, ಮರಳಿ ೨೭ಕ್ಕೆ ಹೋಗಿದ್ದರೂ, ಸರಿ, ನನ್ನ ಬರಹದ ಮಟ್ಟಿಗೆ ಅದರಿಂದ ಹೆಚ್ಚು ವ್ಯತ್ಯಾಸವಾಗುವುದಿಲ್ಲ ಎಂದುಕೊಂಡಿದ್ದೇನೆ.
>>೩.ಕಾಲಕಳೆದಂತೆ ಧ್ರುವನಕ್ಷತ್ರ ಬದಲಾಗುವುದಿಲ್ಲ; ಏಕೆಂದರೆ, ಸಪ್ತರ್ಷಿಮಂಡಲದ(ಅರ್ಸಾ ಮೇಜರ್) ಕೊನೆಗೆ ಹೆಚ್ಚು
>>ಪ್ರಕಾಶಮಾನವಾಗಿ ಕಾಣುವ ತಾರೆ ಅದೊಂದೇ ಎಂದು ನಿಮಗೂ ಗೊತ್ತು!! ಆದರೆ, ಅದರ ಸುತ್ತಲೂ
>>ಬುಗುರಿಯಾಡುವ "ಉತ್ತರ ದಿಕ್ಕು" ಬದಲಾಗುತ್ತದೆ!
ಇದನ್ನು ನಾನು ಒಪ್ಪಲಾರೆ. ಸದ್ಯಕ್ಕೆ ನಿಜ ಉತ್ತರ ಧ್ರುವ (True geographic north pole) ಗೆ ಹತ್ತಿರದಲ್ಲಿರುವ ನಕ್ಷತ್ರ ಆಲ್ಫ ಅರ್ಸ್ ಮೈನಾರಿಸ್ ( ಲಘು ಸಪ್ತರ್ಷಿಯ ಬಾಲದ ತುದಿಯ ನಕ್ಷತ್ರ). ಸುಮಾರು ೨-೩ ಸಹಸ್ರಮಾನಗಳು ಇದು ಈ ಖ್ಯಾತಿಗೆ ಪಾತ್ರವಾಗಿರುತ್ತೆ. ಉದಾಹರಣೆಗೆ ಇನ್ನು ನಾಕು ಸಾವಿರ ವರ್ಷ ಬಿಟ್ಟು ನೋಡಿದರೆ, ಆಗ ಈಗ ನಾವು ಯಾವುದನ್ನು ಧ್ರುವ ಎನ್ನುತ್ತೇವೋ ಅದು ನಿಜ ಧ್ರುವದಿಂದ ನಾಕೈದು ಡಿಗ್ರಿ ಆಚೆ ಇದ್ದರೆ, ಖಂಡಿತ ಅದು ಧ್ರುವವೆನ್ನಿಸಿಕೊಳ್ಳಲು ಅಯೋಗ್ಯವಾಗುತ್ತೆ. ಆ ಸಂದರ್ಭದಲ್ಲಿ, ನಿಜ ಧ್ರುವದ ಹತ್ತ್ತಿರ ಒಂದು ತಾರೆ ಇದೆಯೋ ಇಲ್ಲವೋ ಎನ್ನುವುದು ಧ್ರುವ ನಕ್ಷತ್ರವಿರುತ್ತೋ ಇಲ್ಲವೋ ಎನ್ನುವುದನ್ನು ನಿರ್ಧರಿಸುತ್ತೆ.
ವೇದಗಳಲ್ಲಿ ಹೇಳಿರುವ ಧ್ರುವ ಅಲ್ಫಾ ಡ್ರೇಕೋನಿಸ್ ಇರಬೇಕೆಂದು ನಾನು ಓದಿದ್ದೇನೆ. ಕಾಲವನ್ನು ನೋಡಿದರೆ ಅದು ಸರಿ ಎನಿಸುತ್ತದೆ ನನಗೆ. ವಿಕಿಪಿಡಿಯಾ ಕೂಡ, ಗಾಮಾ ಅರ್ಸ ಮೈನಾರಿಸ್ ಮತ್ತು ಬೀಟಾ ಅರ್ಸ ಮೈನಾರಿಸ್ ಗಳು ಕೂಡ ಕ್ರಿ.ಪೂ.೧೫೦೦ ರಿಂದ್ಸ್ ಕ್ರಿ.ಶ.೫೦೦ ರವರೆಗೆ pole star ಪಟ್ಟ ಹೊಂದಿದ್ದವೆಂದು ಹೇಳುತ್ತೆ. ನನಗೆ ನಮ್ಮ ದೇಶದವರೂ ಈ ವಿಷಯ ಅರಿತಿದ್ದರೆಂದು ಖಂಡಿತ ಅನಿಸುತ್ತೆ. ನಿಮಗೆ ವೇದಾಂಗ ಜ್ಯೋತಿಷ ದಲ್ಲೇ ಆಗಲಿ, ಇನ್ನೆಲ್ಲೆ ಆಗಲಿ ಧ್ರುವವನ್ನು ಹೇಗೆ ಗುರುತಿಸುತ್ತಿದ್ದರು ಎಂದು ತಿಳಿದ್ದರೆ, ಮರೆಯದೆ ಬರೆಯಿರಿ.
ಗಾಮಾ ಅರ್ಸ ಮೈನಾರಿಸ್ ಮತ್ತು ಬೀಟಾ ಅರ್ಸ ಮೈನಾರಿಸ್ ಗಳು (ಫೇರ್ಕಾಡ್ ಮತ್ತು ಕೊಚಾಬ್) ಇಂದಿನ ಧ್ರುವ (ಪೋಲಾರಿಸ್) ಗಿಂತ ತುಂಬ ಕಮ್ಮಿ ಪ್ರಕಾಶದವೇನಲ್ಲ ( 2.1 and 3.2 magnitude, when compared to 2.0 of Polaris).
ಹಾಗಾಗಿ ಕಾಲದ ಜೊತೆಗೆ ಧ್ರುವ ನಕ್ಷತ್ರ ಬದಲಾಗಿದೆ ಅನ್ನುವ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ.
>>೪.ಮಕರ ಸಂಕ್ರಮಣ ಹಾಗೂ ಉತ್ತರಾಯಣ ಬೇರೆ ಬೇರೆ ಎಂದು ಜ್ಯೋತಿಷಿಗಳಿಗೆ, ಪಂಚಾಗಕರ್ತರಿಗೆ ಹಿಂದಿನಿಂದಲೂ
>>ಚೆನ್ನಾಗಿಯೇ ತಿಳಿದಿದ್ದರೂ, ಹಬ್ಬ-ಹರಿದಿನಗಳ ಆಚರಣೆಗೆ ಬುನಾದಿಯಾಗಿರುವ ಧರ್ಮಸಿದ್ಧಾಂತಗಳ ವಾಕ್ಯಗಳಂತೆಯೇ,
>>ಇಂದಿಗೂ ಉತ್ತರಾಯಣವನ್ನು ನಿರಯಣರೀತ್ಯಾ ಗುಣಿಸುತ್ತಿದ್ದಾರೆ. ಆದ್ದರಿಂದಲೇ ಇಂದು ಪಂಚಾಂಗ
>>ಹೊರಬಂದಾಗ "ಸಿದ್ಧಾಂತ-ವಾಕ್ಯ-ಆರ್ಯಭಟೀಯ-ದೃಗ್ಗಣಿತ ಈ ನಾಲ್ಕೂ ಸೇರಿದ" ಎಂದು ಮುದ್ರಿಸುತ್ತಿದ್ದಾರೆ!! ಇದು
>>ತಿಳಿಯದೆ ಆಗುತ್ತಿರುವ ತಪ್ಪು ನಿರ್ಣಯವಲ್ಲ; ತಿಳಿದೇ ಮಾಡುತ್ತಿರುವ "ಧರ್ಮಾಚರಣೆ"!!
ಇದರ ಬಗ್ಗೆ ನನ್ನದು ಎರಡನೇ ಮಾತಿಲ್ಲ
ಮತ್ತೊಮ್ಮೆ, ನಿಮ್ಮ ವಿವರವಾದ ಟಿಪ್ಪಣಿಗೆ ಧನ್ಯವಾದಗಳು.
-ಹಂಸಾನಂದಿ
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಮೇಲಿನ ಟಿಪ್ಪಣಿಯಲ್ಲಿ
"ಸದ್ಯಕ್ಕೆ ನಿಜ ಉತ್ತರ ಧ್ರುವ (True geographic north pole) ಗೆ ಹತ್ತಿರದಲ್ಲಿರುವ ನಕ್ಷತ್ರ ಆಲ್ಫ ಅರ್ಸ್ ಮೈನಾರಿಸ್ ( ಲಘು ಸಪ್ತರ್ಷಿಯ ಬಾಲದ ತುದಿಯ ನಕ್ಷತ್ರ). ಸುಮಾರು ೨-೩ ಸಹಸ್ರಮಾನಗಳು ಇದು ಈ ಖ್ಯಾತಿಗೆ ಪಾತ್ರವಾಗಿರುತ್ತೆ."
ಎಂಬ ಮಾತಿದೆ. ಇದರಲ್ಲಿ ೨-೩ ಸಹಸ್ರಮಾನಗಳು ಎಂಬುದು ಕಾಪಿ-ಪೇಸ್ಟ್ ಚಮತ್ಕಾರ
ಇದನ್ನು "ಸುಮಾರು ಶತಮಾನಗಳು ಇದು ಈ ಖ್ಯಾತಿಗೆ ಪಾತ್ರವಾಗಿರುತ್ತೆ" ಎಂದಿದ್ದರೆ ಇನ್ನೂ ಸರಿಯಾಗುತ್ತಿತ್ತು. ಸುಮಾರು ೧೫೦೦ ವರ್ಷಗಳು ಸರಿಯಾದ ಅಂದಾಜೆಂದೆಣಿಸುತ್ತೇನೆ.
ಹಂಸಾನಂದಿ
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಬೆನಕರೆ (ಹಾಗೂ ಇತರ ಆಸಕ್ತರೇ)
ಕಾಲದ ಜೊತೆಗೆ ಹೇಗೆ ಬೇರೆ ಬೇರೆ ನಕ್ಷತ್ರಗಳು ಧ್ರುವ ನಕ್ಷತ್ರವೆಂಬ ಕಿರೀಟ ಹೊತ್ತುಕೊಂಡಿವೆ ಎಂಬುದಕ್ಕೆ ಇಲ್ಲಿ ಒಂದು ಆಕಾಶನಕ್ಷೆ ಇದೆ. ನೋಡಿ.
http://www.world-mysteries.com/alignments/mpl_al3.htm#Polaris
http://www.world-mysteries.com/alignments/mpl_al3b.htm
-ಹಂಸಾನಂದಿ
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಯಪ್ಪಾ, ಇಬ್ಬರು "ಘಟಾನುಘಟಿಗಳ" ಚರ್ಚೆಯ ಮೂಲಕ ನಮಗೆ ಎಷ್ಟೆಲ್ಲ ಮಾಹಿತಿ ಸಿಕ್ತಾ ಇದೆ. ಬೆನಕ ಮತ್ತು ಹಂಸಾನಂದಿ, ನಿಮ್ಮಿಬ್ಬರಿಗೂ ನನ್ನ ನನ್ನಿ. ಇದನ್ನ ಪತ್ರಿಕೆಗಳವರು "ಜಿ.ಟಿ.ನಾರಾಯಣರಾವ್ ಅವರ ಲೇಖನಕ್ಕೆ ಪ್ರತಿಕ್ರಿಯೆ" ಅಂತ ಪ್ರಕಟಿಸಿದರೆ ಚನ್ನಾಗಿರತ್ತೆ.
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಹಂಸಾನಂದಿಯವರೇ,
ಒಂದೆರಡು ಅಂಶಗಳನ್ನು ತಿಳಿಗೊಳಿಸಬಯಸುತ್ತೇನೆ:
೧. ಬಹುಶಃ ಧ್ರುವತಾರೆಯ ಬಗ್ಗೆ ನಾವಿಬ್ಬರು ಹೇಳುತ್ತಿರುವುದು ಒಂದೇ; ನಾನು ಅಲುಗಾಡದ ತಾರೆಗಳ ದೃಷ್ಟಿಯಿಂದ ಅವು "ಬದಲಾಗುವುದಿಲ್ಲ" ಎನ್ನುತ್ತಿದ್ದೇನೆ; ನೀವು ಹೇಳುತ್ತಿರುವುದು ಭೂವೀಕ್ಷಕನ ದೃಷ್ಟಿಯಿಂದ "ಬದಲಾಗುತ್ತದೆ" ಎಂದು. ನಾನು ಇನ್ನೂ ಸ್ವಲ್ಪ ಸರಿಯಾದ ವಾಕ್ಯದಲ್ಲಿ ಬರೆದಿದ್ದರೆ ಚೆನ್ನಿತ್ತೇನೋ (ಬಹುಶಃ ಆ ವಾಕ್ಯ ನಿಮಗೆ ನನ್ನ ನಿಲುವು ಗಲಿಬಿಲಿಯುಂಟುಮಾಡುವಂತೆ ಇರುವುದೆನಿಸುತ್ತದೆ). ನಾನು ಹೇಳಬೇಕಿದ್ದುದು ಇದು:
-> ಭೂಮಿಯ ಉತ್ತರ 'ಅಕ್ಷವು ತೋರುವ ನಕ್ಷತ್ರವು' ಕಾಲಕಾಲಕ್ಕೆ(ಸಹಸ್ರಮಾನವೇ ಇರಲಿ) ಬದಲಾಗುತ್ತದೆ; ಆದರೆ ನಕ್ಷತ್ರವು ಖಗೋಲದಲ್ಲಿ ಇದ್ದಲ್ಲೇ ಇರುತ್ತದೆ ಎಂಬುದು. ಅರ್ಥಾತ್ "ಧ್ರುವ" ಎಂಬ ನಕ್ಷತ್ರವು ಬದಲಾಗುವುದಿಲ್ಲ; ಭೂಮಿಯ "ಉತ್ತರಧ್ರುವವು ಕೈತೋರುವ ತಾರೆ" ಬದಲಾಗುತ್ತದೆ. ಇನ್ನೂ ಸರಿಯಾಗಿ ಹೇಳಿದರೆ, "ಧ್ರುವ" ಎಂಬ ತಾರೆ ಇದ್ದಲ್ಲೇ ಇದ್ದರೂ, "ಧ್ರುವಪಟ್ಟ" ಮುಂದೆ ಬದಲಾಗುತ್ತದೆ.
-> "ಸಪ್ತರ್ಷಿಮಂಡಲದ ಕೊನೆಗೆ" ಎಂಬುದು ಬಹುಶಃ ಅಚ್ಚರಿಯಾಗಿರಬೇಕು. ಇದು "ಸಪ್ತರ್ಷಿಮಂಡಲದ ಕೊನೆಯ(ಏಳನೆಯ)" ತಾರೆ ಎಂದು ನನ್ನ ಅಭಿಪ್ರಾಯ ಅಲ್ಲ; ಸಪ್ತರ್ಷಿಮಂಡಲದ ಕೊನೆಯ ಮರೀಚಿ(?)ತಾರೆಯುದ್ದಕ್ಕೂ ಉತ್ತರಕ್ಕೆ ಹೋದರೆ ಕೊನೆಗೆ ಸಿಗುವ ತಾರೆಯೇ ಧ್ರುವನಕ್ಷತ್ರ ಎಂದು ಹೇಳಬೇಕಿತ್ತು ಅಷ್ಟೆ. ಖಂಡಿತವಾಗಿ ನೀವು ಹೇಳಿದಂತೆ ಡ್ರಾಕೋನಿಸ್ ಗೆ ಹೊಂದಿಕೊಂಡಂತಿದೆ.
-> "ಅದರ ಸುತ್ತಲೂ ಬುಗುರಿಯಾಡುವ" ಎಂದದ್ದು ಸಂಪೂರ್ಣವಾಗಿ ನನ್ನ ಮೊದಲ ಅನಿಸಿಕೆಗಳನ್ನೇ ತಿರುಚಿದಂತಾಗಿಬಿಟ್ಟಿದೆ ಮನ್ನಿಸಿ. ಹೇಳಬೇಕಿದ್ದುದು "ಧ್ರುವಬಿಂದು(ಸೆಲೆಸ್ಟಿಯಲ್ ನಾರ್ತ್ ಪೋಲ್)ವಿನ ಸುತ್ತಲೂ ಬುಗುರಿಯಾಡುವ ಉತ್ತರದಿಕ್ಕು" ಎಂದಷ್ಟೇ.
೨. ವೇದಗಳಲ್ಲಿ ಧ್ರುವನಕ್ಷತ್ರವನ್ನು ಈಗ ನಾನು ಮೇಲೆ ಹೇಳಿದಂತೆ, ಸಪ್ತರ್ಷಿಮಂಡಲದ ಕೊನೆಯ ತಾರೆಯ ಉತ್ತರಕ್ಕೆ ನೇರವಾಗಿ ನೋಡಿದರೆ ಕಾಣುವುದೆಂಬಂತೆ ಮಸುಕು ಮಸುಕಾಗಿ ಹೇಳಲಾಗಿದೆ ಎಂದು ಓದಿದ ನೆನಪು. ಅಂತೆಯೇ ಧ್ರುವಬಿಂದುವಿನ ಸುತ್ತಲೂ ಗಿರಕಿ ಹೊಡೆಯುವ ಧ್ರುವಪಟ್ಟವನ್ನು ಕೂಡ ಋಗ್ವೇದಸಂಹಿತೆಯಲ್ಲಿ ಅಲ್ಲಲ್ಲಿ ಕಾಣಬಹುದು. ಉದಾ:
"ವಿಶ್ವಸ್ಯ ನಾಭಿಂ ಚರತೋ ಧ್ರುವಸ್ಯ ಕವೇಶ್ಚಿತ್ತಂ ತು ಮನಸಾ ವಿಯಂತಃ " (ಋಗ್ವೇದ ೧೦-೫-೩-೨)
"ಸಪ್ತ ಸ್ವಸೄರರುಷೀರ್ವಾವಸಾನೋ..." (ಋಗ್ವೇದ ೧೦-೫-೫-೧)
"ಸಪ್ತ ಮರ್ಯಾದಾಃ ಕವಯಸ್ತತಕ್ಷುಃ..." (ಋಗ್ವೇದ ೧೦-೫-೬-೧)
೩. ೨೭/೨೮ ತಾರೆಗಳ ಬಗ್ಗೆ :
ನನ್ನ ಮೊದಲ ಪ್ರತಿಕ್ರಿಯೆಯಲ್ಲಿ ಲಾಗಧ ತಾರಾವಳಿಯ ನಂತರದ ಎರಡು ನಕ್ಷತ್ರಸೂಕ್ತಗಳೂ ೨೮ ತಾರೆಗಳನ್ನು ತೋರುತ್ತವೆ; ಮನ್ನಿಸಿ. ೨೭ ತಾರೆಗಳನ್ನು ತೋರುವ ಪಟ್ಟಿ ಋಗ್ವೇದದಲ್ಲಿ ಹಂಚಿಹೋಗಿದೆ. ಅದರ ಸರಿಯಾದ ಋಚೆಗಳು ತಿಳಿದರೆ ತಿಳಿಸುತ್ತೇನೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಹಂಸಾನಂದಿಯವರೇ,
ಕೊನೆಗೂ ನಾನು ಓದಿದ್ದ ಋಚೆಗಳು ಸಿಕ್ಕವು. ಭಾರತದಲ್ಲಿ "ಹನ್ನೆರಡು ರಾಶಿಗಳ ರಾಶಿಚಕ್ರ"ದ ಕಲ್ಪನೆ ಋಗ್ವೇದಕಾಲದಿಂದಲೂ ಇತ್ತೆಂಬುದಕ್ಕೆ ದೀರ್ಘತಮಸ್ ಮಹರ್ಷಿಯ ಸಂಗ್ರಹ ಇಲ್ಲಿದೆ:
ದ್ವಾದಶ ಪ್ರಧಯಶ್ಚಕ್ರಮೇಕಂ ತ್ರೀಣಿ ನಭ್ಯಾನಿ ಕ ಉ ತಚ್ಚಿಕೇತ |
ತಸ್ಮಿನ್ತ್ಸಾಕಂ ತ್ರಿಶತಾ ನ ಶಂಕವೋsರ್ಪಿತಾಃ ಷಷ್ಠಿರ್ನ ಚಲಾಚಲಾಸಃ || (ಋಗ್ವೇದ ೧-೧೬೪-೪೮)
ಈ ದ್ವಾದಶ ವಿಭಾಗಗಳು ಹಾಗೂ ಚಕ್ರ ನಿಶ್ಚಿತವಾಗಿ ಖಗೋಲದ ವಿದ್ಯಮಾನವನ್ನೇ ಹೇಳುತ್ತಿವೆಯೆಂಬುದಕ್ಕೆ ಸಾಕ್ಷಿಯೋ ಎಂಬಂತೆ ಇದೇ ವಿಭಾಗದಲ್ಲಿಯೇ "ವಿಷುವತ್" ಎಂಬ ಸಂಪೂರ್ಣ ಖಗೋಲವೈಜ್ಞಾನಿಕ ಪದವನ್ನು ಉಪಯೋಗಿಸಿರುವುದರ ಬಗ್ಗೆ ಪಾಶ್ಚಾತ್ಯ ಪಂಡಿತರು ಮೂಕವಿಸ್ಮಿತರಾಗಿದ್ದಾರೆ :
ಶಕಮಯಂ ಧೂಮಮಾರಾದಪಶ್ಯಂ ವಿಷೂವತಾ ಪರ ಏನಾವರೇಣ | (ಋಗ್ವೇದ ೧-೧೬೪-೪೩-೧)
ಅಷ್ಟೇ ಅಲ್ಲ; ಇಡೀ ೧-೧೬೪ ರ ಋಚೆಗಳೆಲ್ಲಾ ಭಚಕ್ರ-ಸಂವತ್ಸರ-ಸೂರ್ಯಾದಿಸಪ್ತಗ್ರಹಗಳು-ರಾಶಿಗಳನ್ನು ತೋರುತ್ತವೆ. ಅಲ್ಲಲ್ಲಿ ಅಚ್ಚರಿಯಾಗುವಷ್ಟು ನಿಖರವಾದ ಪದಪ್ರಯೋಗಗಳಿವೆ. ದೀರ್ಘತಮ ಔಚಥ್ಯ ಮಹರ್ಷಿಯ ಈ ಋಚೆಗಳನ್ನು ಆಂಗ್ಲಾನುವಾದ ಮಾಡಿರುವ ಡಾ|| ಡೇವಿಡ್ ಫ್ರಾಲೇ, ಹಿಂದಿನ ಪೂರ್ವಾಗ್ರಹೀ ಸಂಶೋಧಕರ ಬಣ್ಣ ಬಯಲು ಮಾಡಿದ್ದಾರೆ. ಈ ಮಹರ್ಷಿಯ ಸಂಗ್ರಹವನ್ನು ಇಡಿಯಾಗಿ ನೋಡಿದಾಗ, ಪೂರ್ವಾಗ್ರಹಿ ಹುಳಿದ್ರಾಕ್ಷಿಯ ನರಿಗಳು ತಿಳಿಯದೆ ಹೋದ ವಿಜ್ಞಾನದ ಸವಿ ವೇದಗಳಲ್ಲಿರುವುದು ಚೆನ್ನಾಗಿಯೇ ಅರ್ಥವಾಗುತ್ತದೆ.
ಆಸಕ್ತರು ಈ ಕೊಂಡಿಯನ್ನೂ ನೋಡಿ :
http://www.experiencefestival.com/a/Vedic_Origins_of_the_Zodiac/id/48910
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಹಂಸಾನಂದಿಯವರೇ, ಬಹಳ ಗಹನ ವಿಧಾರವನ್ನು ಸರಳ ಮಾತುಗಳಲ್ಲಿ ತಿಳಿಸಿದ್ದೀರ - ಧನ್ಯವಾದಗಳು.
ನಿಮ್ಮ ಲೇಖನ ದಟ್ಸ್ ಕನ್ನಡದಲ್ಲಿಯೂ ನೋಡಿದೆ.
http://thatskannada.oneindia.in/literature/articles/2008/1101-illustrate...
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಮೆಚ್ಚುಗೆಗೆ ಧನ್ಯವಾದಗಳು.
)
(ಹಾಗೂ ದಟ್ಸ್ ಕನ್ನಡ ಕೊಂಡಿಯನ್ನು ಕೊಟ್ಟದ್ದಕ್ಕೆ
-ಹಂಸಾನಂದಿ
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಇಷ್ಟಾದರೆ ಸಾಲದು, ಜಿ.ಟಿ. ನಾರಾಯಣರಾಯರ ಲೇಖನಕ್ಕೂ ಪ್ರತಿಕ್ರಿಯೆ ಕಳುಹಿಸಬೇಕು.ನಿಮ್ಮ ಲೇಖನಗಳು ಹೀಗೆಯೇ ಮುಂದುವರಿಯಲಿ.
______
ಬೊಳುಂಬು
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಹಂಸಾನಂದಿ ಹಾಗೂ ಬೆನಕ ಅವರಿಗೆ ಧನ್ಯವಾದಗಳು.
ಖಗೋಲ ಶಾಸ್ಥ್ರ ಸಂಬಂಧಿತ ಸರಳ ಪುಸ್ತಕಗಳು ಕನ್ನಡದಲ್ಲಿ ಇದ್ದರೆ, ದಯವಿಟ್ಟು ಮಾಹಿತಿಯನ್ನು ನೀಡಿ.
- ನಾಸೋ