ಹಂಸ ನಾದ
ಹಂಸ ನುಡಿದರೆ, ಹಂಸನಾದ!
ನವರಾತ್ರಿಯ ಹತ್ತನೇ ದಿನ
ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.
ನೆನ್ನೆ ವಾಸುದೇವಾಚಾರ್ಯರ ಬಗ್ಗೆ ಹೇಳುವಾಗ, ಅವರ ಪ್ರಸಿದ್ಧ ಶಿಷ್ಯರೊಬ್ಬರನ್ನು ಹೆಸರಿಸಿದ್ದೆ. ಹೌದು, ಇವತ್ತು ಆ ಶಿಷ್ಯರ ರಚನೆಯನ್ನೇ ನಾನು ಕೇಳಿಸುವುದು. ಮೈಸೂರು ರಾಜ್ಯದ ಕಡೆಯ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರು, ವಾಗ್ಗೇಯಕಾರರೂ ಆಗಿದ್ದರೆಂಬುದು ಹೆಚ್ಚಾಗಿ ಜನಕ್ಕೆ ತಿಳಿದಿಲ್ಲದಿರುವುದು ದೌರ್ಭಾಗ್ಯವೇ ಸರಿ.
ಜಯಚಾಮರಾಜೇಂದ್ರ ಒಡೆಯರು ಮೊದಲು ಕಲಿತದ್ದು ಪಾಶ್ಚಾತ್ಯ ಸಂಗೀತ. ಲಂಡನ್ನಿನ್ಸ್ ಟ್ರಿನಿಟಿ ಕಾಲೇಜಿನಲ್ಲಿ ಪಿಯಾನೋ ವಿದ್ಯಾರ್ಥಿಗಳಿಗೆ ದೊರೆಯಬಹುದದ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದು ಅವರು ಹೊರಬಂದರು. ಪಟ್ಟವೇರಿದ ಮೇಲೆ, ಸುಮಾರು ಆರು ವರ್ಷ ಕಾಲ ವಾಸುದೇವಾಚಾರ್ಯರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿದರು. ೧೯೪೫ ರಿಂದ ೧೯೪೭ರ ವರೆಗೆ ಸುಮಾರು ಎರಡುವರ್ಷಗಳ ಅವಧಿಯಲ್ಲಿ ತೊಂಬತ್ತನಾಕು ಕೃತಿಗಳನ್ನು ರಚಿಸಿದ್ದಾರೆ ಒಡೆಯರು. ತಮ್ಮ ರಚನೆಗಳನ್ನು ಇವರು ಮೊದಲು ಪಿಯಾನೋದಲ್ಲೇ ನುಡಿಸಿ, ಅದನ್ನು ತಿದ್ದಿ ತೀಡಿ, ನಂತರ ತಮ್ಮ ಗುರುಗಳಿಗೂ, ಹಾಗೂ ಅರಮನೆಯ ಇತರ ವಿದ್ವಾಂಸರಿಗೂ ಕೇಳಿಸಿ, ಅವರ ಅಭಿಪ್ರಾಯವನ್ನು ಕೇಳಿ, ನಂತರ ತಮ್ಮ ಕೃತಿಗಳಿಗೆ ಪೂರ್ಣಸ್ವರೂಪವನ್ನು ಕೊಡುತ್ತಿದ್ದ ವಿಷಯವನ್ನು ಇವರನ್ನು ಹತ್ತಿರದಿಂದ ನೋಡಿದ ಸಂಗೀತವಿದ್ವಾಂಸರು ಹೇಳಿದ್ದಾರೆ.
ಇವರ ಕೃತಿಸಮೂಹದಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಒಂದು ರಾಗದಲ್ಲಿ ಕೇವಲ ಒಂದೇ ರಚನೆ ಮಾಡಿದ್ದಾರೆ. ಅಂದರೆ ೯೪ ರಚನೆಗಳಿಗೂ ಬೇರೆ ಬೇರೆ ರಾಗಗಳನ್ನೇ ಬಳಸಿದ್ದಾರೆ. ಇನ್ಯಾವ ವಾಗ್ಗೇಯಕಾರರೂ ಈ ಮೊದಲು ಹಾಗೆ ರಚಿಸಿರುವುದು ದಾಖಲಾಗಿಲ್ಲ.
ಒಡೆಯರ ರಚನೆಗಳನ್ನಾಧರಿಸಿದ ಆಕಾಶವಾಣಿ ಕಾರ್ಯಕ್ರಮದಿಂದ ಸ್ಬಲ್ಪ ವಿವರಣೆ ಇಲ್ಲಿ ಕೇಳಿ:

- hamsanandi ರವರ ಬ್ಲಾಗ್
- Printer-friendly version
- Login or register to post comments
- 674 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನವರಾತ್ರಿಯ ಹತ್ತನೇ ದಿನ
ನಮಸ್ಕಾರ,
ನಿಮ್ಮ ಮಾಲಿಕೆ ಬಹಳ ಸೊಗಸಾಗಿತ್ತು. ನವರಾತ್ರಿ ಹಬ್ಬಕ್ಕೆ ಒಳ್ಳೆಯ ಕೊಡುಗೆ.
ಧನ್ಯವಾದಗಳು.
ಉ: ನವರಾತ್ರಿಯ ಹತ್ತನೇ ದಿನ
ನಿಮಗೆ ಸರಣಿ ಹಿಡಿಸಿದ್ದು ಬಹಳ ಸಂತೋಷ!
-ಹಂಸಾನಂದಿ
ಉ: ನವರಾತ್ರಿಯ ಹತ್ತನೇ ದಿನ
ಕನ್ನಡ ರಾಗದ ಕೃತಿ - ಶ್ರೀ ಚಾಮುಂಡೇಶ್ವರಿ ದೇವಿ ಹಾಡನ್ನು ಇಲ್ಲಿಂದ ಆಸಕ್ತರು ಇಳಿಸಿಕೊಳ್ಳಬಹುದು.