ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಏನ್ ಗುರು ಮತ್ತು ದೆಲ್ಲಿಯ ದರ್ಬಾರು
ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ, ಸ್ವಲ್ಪ ಚುಚ್ಹೋ ಹಾಗೇ, ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು. ನಾನಂತೂ, ಅಲ್ಲಿಯ ಬರಹಗಳನ್ನ ತಪ್ಪದೇ ಓದ್ತಿದೀನಿ.
ಇದೇನಪ್ಪ ವಟವಟ ಅಂತ ಬೇರೆ ಬ್ಲಾಗ್ ಬಗ್ಗೆ ಜಾಹೀರಾತು ಕೊಡಕ್ಕೆ ಶುರು ಮಾಡ್ಬಿಟ್ಯಲ್ಲ ಅನ್ಬೇಡಿ. ಅಷ್ಟಕ್ಕೂ, ನನ್ಗೂ ಬನವಾಸಿ ಬಳಗಕ್ಕೂ ಯಾವ ಸಂಬಂಧವೂ ಇಲ್ಲ. ಮತ್ತೆ, ಅಲ್ಲಿ ಬರಹ ಯಾರ್ಯಾರು ಬರೀತಾರೆ ಅಂತ್ಲೂ ನಂಗೆ ಗೊತ್ತಿಲ್ಲ. ಮತ್ಯಾಕೆ ಅವರ ವಿಷ್ಯ ಮಾತಾಡ್ತಿದೀನಿ ಅಂತೀರಾ? ಇವತ್ತು ಎಲ್ಲೋ ಏನ್ನೋ ಓದ್ತಿದ್ದಾಗ ಒಂದು ಸಂಸ್ಕೃತ ಸುಭಾಷಿತ ಕಣ್ಗೆ ಬಿತ್ತು. ಅದು ಯಾರು, ಯಾವಾಗ ಬರ್ದಿದ್ದು ಅಂತ ನನ್ಗೆ ಸುತರಾಂ ಗೊತ್ತಿಲ್ಲ. ಆದ್ರೆ, ಅದು ಓದ್ದಾಗ, ದೇವ್ರೆ, (ಕಮ್ಮಿ ಅಂದ್ರೆ) ನೂರಾರು ವರ್ಷಗಳಿಂದ ಇದೇ ಸ್ಥಿತಿ ಇದ್ಯಲ್ಲಪ್ಪ? ಯಾವಾಗ ಸರೀ ಹೋಗತ್ತೇ? ಅನ್ನಿಸ್ತು. ಅದಕ್ಕೇ ಏನ್ಗುರು ಮಾಡ್ತಿರೋ ಕೆಲ್ಸನ ಹೊಗಳ್ದೆ ಅಷ್ಟೆ.
ಆ ಸುಭಾಷಿತ ಹೀಗಿದೆ ನೋಡಿ.
ದಿಲ್ಲೀಶ್ವರಃ ವಾ ಜಗದೀಶ್ವರಃ ವಾ ಮನೋರಥಾನ್ ಪೂರಯಿತುಂ ಸಮರ್ಥಃ |
ಅನ್ಯೈಃ ನೃಪಾಲೈಃ ಪರಿದೀಯಮಾನಂ ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್ ||
ಅದನ್ನೆ ನಮ್ಮ ಮಾತಲ್ಲೇ ಹೇಳ್ಬೇಕೂಂದ್ರೆ,
ದಿಲ್ಲಿಯ ಅರಸ, ಅಥ್ವಾ ಆ ಜಗದೊಡೆಯ ಮಾತ್ರ
ಮನಸ್ಗೆ ಬೇಕಾದ್ದನ್ನೆಲ್ಲ ಬಿಡದೇ ಕೊಡಬಲ್ಲ!
ಕೊಟ್ರೆ ಅವ್ರು ಇವ್ರು ಚಿಲ್ರೆ ಪಲ್ರೆ ರಾಜ್ರೆಲ್ಲ
ಉಪ್ಪಿಗೆ ಸಾಕಾಯ್ತೂಂದ್ರೆ, ಸೊಪ್ಪಿಗೆ ಸಾಲೋದಿಲ್ಲ! **
(**ಅನುವಾದ ಮಾಡೋವಾಗ, ಮೂಲ್ದಲ್ಲಿರೋ ಶಾಕ = ತರ್ಕಾರಿ ಅನ್ನೋದ್ನ , ನಾನು ಸ್ವಲ್ಪ ಪ್ರಾಸ್ವಾಗಿರ್ಲಿ ಅಂತ ಸೊಪ್ಪು ಮಾಡ್ಬಿಟ್ಟಿದೀನಿ ಸ್ವಾಮೀ. ಎಷ್ಟೇ ಅಂದ್ರೂ, ನಮ್ಮ ಕರ್ನಾಟಕ್ದಲ್ಲಿ ಇರೋ ಅಷ್ಟು ಬೇರ್ಬೇರೆ ಸೊಪ್ಪು ಇನ್ನೆಲ್ಲೂ ಸಿಕ್ಕಲ್ಲವಲ್ಲ!)
ಅದ್ರಲ್ಲೂ ನೋಡಿ, ದೇವ್ರಿಗಿಂತ ಮೊದಲು ದಿಲ್ಲಿ ರಾಜನ್ನ ಹೇಳ್ತಾ ಇದಾನೆ ಈ ಕವಿ. ಇದನ್ನ, ದಕ್ಷಿಣದ ಯಾರೋ ಕವಿ ಬರ್ದಿದಾನೆ ಅನ್ನೋದ್ರಲ್ಲಿ ನಂಗೆ ಯಾವ ಅನ್ಮಾನಾನೂ ಇಲ್ಲ. ಅವತ್ತೂ, ಇವತ್ತೂ, ಯಾವತ್ತೂ ದಿಲ್ಲಿಯ ಕೃಪೆಗೆ ಕಾಯೋದೇ ನಮ್ಮ ಕೆಲ್ಸ ಆಗೋಯ್ತಲ್ಲ!
ಏನ್ಗುರು ಅಂತಾವ್ರು ಹೆಚ್ಲಿ, ಜನಕ್ಕೆ ನಮ್ಮದು ಏನು, ನಮ್ಗೆ ಸಲ್ಬೇಕಾದ್ದು ಏನು ಅನ್ನೋ ಅರಿವು ಬರ್ಲಿ, ಅನ್ಯಾಯ ಕಮ್ಮಿ ಆಗ್ಲಿ (ನಿಲ್ಲಲಿ ಅಂತ ಹೇಳ್ಬೇಕೂ ಅಂತಿದ್ದೆ, ಆದ್ರೆ ಅದು ತೀರಾ ಎತ್ರದ ಆಸೆ!, ಅಲ್ವಾ) ಇನ್ನಾದ್ರೂ ಅನ್ನೋ ಆಸೆ ನಂದು.
-ಹಂಸಾನಂದಿ.

- hamsanandi ರವರ ಬ್ಲಾಗ್
- Login or register to post comments
- 396 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಏನ್ ಗುರು ಮತ್ತು ದೆಲ್ಲಿಯ ದರ್ಬಾರು
ಹಂಸಾನಂದಿಗಳೇ....
ಇಲ್ಲೇ ಏನ್ಗುರು ಬಗ್ಗೆ ಹೇಸಿಗೆ ಪಟ್ಟ ಮಂದಿ ಇದ್ದಾರೆ.. ಅವರ ವಟವಟ ಈಗ ಗಪ್ಚುಪ್
..
ಏನ್ಗುರುವಲ್ಲಿ ನಿಮ್ಮ ಕಮೆಂಟುಗಳನ್ನು ನಾನೂ ಓದಿದ್ದೀನಿ
ನಲ್ನನ್ನಿ!
ನಮ್ಮ ಹಾಸನದ ಗಾದೆ "ಕಿರುಬನಿಗೇನ್ ಗೊತ್ತು ಮರುಗದ ಗಮನ"
( ಗಾದೆ ಇರೋದು ’ಕುರುಬನಿಗೇನ್’ ಅಂತ, ಆದ್ರೆ ಇಂದು ಕುರುವ/ಬ ಅನ್ನೋದು ಒಂದು ಪಂಗಡದ ಹೆಸರಾಗಿರೋದ್ರಿಂದ, ಮತ್ತೂ ಒಂದು ಗೇಯ್ಮೆಯನ್ನು ಕೀಳುಗಂಡಂತಾಗುವುದರಿಂದ, ಕುರುವ ಬಿಟ್ಟು ಕಿರುಬ ಮಾಡಿದ್ದೀನಿ )
ಉ: ಏನ್ ಗುರು ಮತ್ತು ದೆಲ್ಲಿಯ ದರ್ಬಾರು
ಬೇರೆಯವರನ್ನ ಗಪ್ಚುಪ್ಪಾಗಿಸಲು, ನಾನಾವ ಗಿಡದ ತೊಪ್ಪಲು ಸ್ವಾಮೀ!
ಋಗ್ವೇದದಲ್ಲಿ ಹೀಗೆ ಹೇಳಿದೆಯಲ್ಲ : "ಒಳ್ಳೆ ವಿಚಾರಗಳು ನಮಗೆ ಎಲ್ಲ ಕಡೆಯಿಂದಲೂ ಬರಲಿ" ಅಂತ - ಹಾಗಾಗಿ, ಎಲ್ಲೇ ಆಗ್ಲಿ, ಒಳ್ಳೇ ವಿಷಯ ಕಂಡರೆ, ಅದನ್ನು ಹೇಳೋದಕ್ಕೆ ಹಿಂಜರಿಯೋದೇಕೆ? ಅಲ್ಲವೆ?
-ಹಂಸಾನಂದಿ
ಉ: ಏನ್ ಗುರು ಮತ್ತು ದೆಲ್ಲಿಯ ದರ್ಬಾರು
"ನಾನಾವ ಗಿಡದ ತೊಪ್ಪಲು ಸ್ವಾಮೀ!"
ಸಕ್ಕತ್.. ಹಾಸನಕ್ಕೆ ಜಯ್!
ಉ: ಏನ್ ಗುರು ಮತ್ತು ದೆಲ್ಲಿಯ ದರ್ಬಾರು
ಬ್ಲಾಗ್ಸ್ಪಾಟ್ ನಲ್ಲಿರುವ ’ಹಂಸನಾದ’ದಲ್ಲಿದ್ದ (http://hamsanada.blogspot.com) ಇದೇ ಬರಹದ ಮೇಲೆ ಪಾರಿಜಾತ ಅವರು ಈ ಪದ್ಯವನ್ನು ಬರೆದವನು ಯಾರು ಎನ್ನುವುದರ ಬಗ್ಗೆ ಟಿಪ್ಪಣಿಯನ್ನು ಹಾಕಿದ್ದರು. ಇಲ್ಲಿ ಆಸಕ್ತರಿಗೆ ಅನುಕೂಲವಾಗಬಹುದು ಎಂದು , ಅವರ ಅನುಮತಿ ಕೋರಿ ನಂತರ, ಇಲ್ಲಿ ಅದನ್ನು ಮತ್ತೆ ಅಂಟಿಸುತ್ತಿದ್ದೇನೆ:
(ಒಟ್ಟಿನಲ್ಲಿ ಈ ಪದ್ಯವನ್ನು ಬರೆದವನು ದಕ್ಷಿಣದ ಕವಿಯೇ ಎಂಬ ನನ್ನ ಊಹೆಯೇನೂ ತಪ್ಪ್ಪಾಗಲಿಲ್ಲ
) ಕಾಮೆಂಟಿನಲ್ಲಿರುವ ಕೊಂಡಿಯಲ್ಲಿ ಜಗನ್ನಾಥ ಪಂಡಿತನ ಮೇಲೆ ಹೆಚ್ಚಿನ ವಿವರಗಳು ದೊರೆಯುತ್ತವೆ.
----------------------------------------------------------------------------------------------------------------------------------
parijata said...
ಈ ಶ್ಲೋಕವನ್ನು ಬರೆದವನು ಜಗನ್ನಾಥಪಂಡಿತ. ನಮ್ಮ ಗುರುಗಳಾದ ಗಣೇಶರ ಪ್ರಕಾರ ಪ್ರತಿಭಾವಂತ, ಆದರೆ ಹಮ್ಮು ಸ್ವಲ್ಪ ಹೆಚ್ಚು. ಇಂಥವನೇ ರಾಜಾಶ್ರಯ ದೊರೆಯದೆ (ಜಗದೀಶ್ವರನ ಕೃಪೆ ಆಯಿತೋ ಇಲ್ಲವೋ ಗೊತ್ತಿಲ್ಲ, ದಿಲ್ಲೀಶ್ವರನ ಕೃಪೆಯಂತೂ ಆಗಲಿಲ್ಲ!), ಅಸ್ಸಾಂನ ರಾಜನನ್ನು 'ಪ್ರಾಣಾಭರಣ' ಎಂದು ಕೊಂಡಾಡಿದ್ದಾನಂತೆ.
ದಿಲ್ಲಿಯ ಕೃಪೆ ಅಂದೂ ಇಂದೂ ಎಂದೆಂದೂ elusive ಏ ಸರಿ!
January 28, 2008 12:14 AM
parijata said...
ನಿಮ್ಮ ಉತ್ತರ ನೋಡಿದ ಮೇಲೆ ಜಗನ್ನಾಥಪಂಡಿತನ ಬಗ್ಗೆ ಸ್ವಲ್ಪ ಹುಡುಕಿದೆ. ಕೆಳಗಿನ ಕೊಂಡಿ ದೊರೆಯಿತು.
http://bsv.sulekha.com/blog/post/2007/06/jagannatha-pandita-raya.htm
ನಿಮ್ಮ ಊಹೆ ಸರಿಯೇ. ಜಗನ್ನಾಥಪಂಡಿತ ಆಂಧ್ರದವನು. ಶಾಹಜಹಾನನ ಆಸ್ಥಾನದಲ್ಲಿ ಒಬ್ಬ ಕವಿಯಾಗಿದ್ದ. ಅವನ ನಂತರ ಔರಂಗಜೇಬನ ಅನಾದರದಿಂದ ಅವನಿಗೆ ರಾಜಾಶ್ರಯ ತಪ್ಪಿತು. ಹಾಗಾಗಿ ಅಸ್ಸಾಮ್ ನ ದೊರೆಯನ್ನು ಆಶ್ರಯಿಸಬೇಕಾಯಿತು.
ಅಗತ್ಯವಾಗಿ ನನ್ನ ಕಾಮೆಂಟ್ ಅನ್ನು ಸಂಪದದಲ್ಲಿ ಹಾಕಿ.
----------------------------------------------------------------------------------------------------------------------------------
-ಹಂಸಾನಂದಿ