ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಸುಲಭವಲ್ಲವೋ ಮಹದಾನಂದ ...
ಹಿಂದಿನ ಬರಹದಲ್ಲಿ, ಪುರಂದರ ದಾಸರ ಇಂದಿನ ಯೋಗ ಶುಭಯೋಗ ಎನ್ನುವ ಪದವನ್ನು ಹೆಸರಿಸಿದ್ದೆ. ಅದಕ್ಕೇ ಅವರದೇ ಇನ್ನೊಂದು ದೇವರನಾಮದ ಬಗ್ಗೆ ಮಾತಾಡೋಣ ಎನ್ನಿಸಿತು. ಪುರಂದರ ದಾಸರು ನಾಕು ಲಕ್ಷ ಎಪ್ಪತ್ತೈದು ಸಾವಿರ ರಚನೆಗಳನ್ನು ಬರೆದರೆಂದು ನಂಬಿಕೆ. ಈ ನಂಬಿಕೆ ಹೇಗೇ ಇರಲಿ, ನಮಗೆ ಸಿಕ್ಕಿರುವುದು ಸುಮಾರು ಎರಡು ಸಾವಿರಕ್ಕೂ ಕಡಿಮೆ ರಚನೆಗಳು. ದಾಸಸಾಹಿತ್ಯದಲ್ಲಿ ಪುರಂದರರು ಅತೀ ಮುಖ್ಯರಾಗಿ ಕಾಣಲು ಅವರ ಸರಳವಾದ, ಮನಸ್ಸಿಗೆ ಸುಲಭವಾಗಿ ನಾಟುವ ಶೈಲಿಯೇ ಕಾರಣ ಎಂದು ನನ್ನ ಭಾವನೆ.
ಇವರ ಹೆಚ್ಚಿನಂಶ ರಚನೆಗಳು ಬಹಳ ಸುಲಭವಾಗಿದ್ದರೂ, ಕೆಲವು ಒಗಟಿನಂತಹ ಪದಗಳನ್ನೂ ಪುರಂದರ ದಾಸರು ಬರೆದಿದ್ದಾರೆ. ಅರ್ಥ ಆಯಿತೋ ಇಲ್ಲವೋ ಎಂದು ತಿಳಿಯಲು ಹೆಣಗಬೇಕಾದ ಪರಿಸ್ಥಿತಿ ಈ ಪದಗಳದ್ದು. ಅಂತಹ ಒಂದು ಉದಾಹರಣೆ ಇಲ್ಲಿದೆ.
ಪಲ್ಲವಿ :
ಸುಲಭವಲ್ಲವೊ ಮಹದಾನಂದ ತನ್ನೊಳಗೆ ತಾ ತಿಳಿಯಬೇಕು ಗುರು ದಯದಿಂದ
ಚರಣ 1:
ಬೆಕ್ಕನು ಇಲಿ ನುಂಗುವ ತನಕ ಕಡುರಕ್ಕಸಿಯ ಕಂಡು ಗಿಣಿ ನುಂಗುವತನಕ
ಮಕ್ಕಳ ಭಕ್ಷಿಸುವ ತನಕ ಮದಸೊಕ್ಕಿದ ಗಜವನ್ನು ನರಿ ನುಂಗುವ ತನಕ
ಚರಣ 2:
ಇಷ್ಟದೈವತ ವಶವಾಗೋತನಕ ಮೂರು ಬೆಟ್ಟಗಳನ್ನು ನೊಣ ನುಂಗುವತನಕ
ಶಿಷ್ಟರೊಡನೆ ಸೇರುವತನಕ ಗುಬ್ಬಿ ರಾಜಹಂಸನ ನುಂಗುವತನಕ
ಚರಣ 3:
ಒಳಹೊರಗೊಂದಾಗುವತನಕ ಸಾಲ ಕಳೆಯೆಂಬುವ ಭಾವ ಬಯಲಾಗುವ ತನಕ
ಬೆಳಗಿನೊಳಗೆ ಕಾಣುವತನಕ ನಮ್ಮ ಪುರಂದರ ವಿಠಲನ ದಯವಾಗುವ ತನಕ
ಈ ಪದ ಓದಲು ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತಾ ಎಂಬ ಪದದಂತಿದೆಯಲ್ಲವೇ? ಶರೀಫರು ಹರಿದಾಸರ ಪ್ರಭಾವಕ್ಕೊಳಗಾಗಿರುವುದು ನಾವು ಇನ್ನೂ ಹಲವೆಡೆ ಕಾಣಬಹುದು.
ಸಂಪದಿಗರೇ, ಈಗ ಈ ಪದದ ಅರ್ಥವನ್ನು ಯಾರಾದರೂ ಬರೆಯಬಲ್ಲಿರಾದರೆ ದಯವಿಟ್ಟು ಬರೆಯಿರಿ. ನಮ್ಮೆಲ್ಲರಿಗೂ ಒಳಿತಾಗುತ್ತದೆ!

- hamsanandi ರವರ ಬ್ಲಾಗ್
- Login or register to post comments
- 556 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ







RSS:
ಪ್ರತಿಕ್ರಿಯೆಗಳು
ಉ: ಸುಲಭವಲ್ಲವೋ ಮಹದಾನಂದ ...
ಮೋಕ್ಷ?
ಉ:
ಬದುಕಿನಲ್ಲಿ ಆನಂದಕ್ಕಾಗಿಯೇ ತಾನೇ ನಾವೆಲ್ಲರೂ ಹಪಹಪಿಸುವದು - ಆನಂದವೇ ಬ್ರಹ್ಮ
ಮೊದಲನೆ ಚರಣದ "ಮಕ್ಕಳ ಭಕ್ಷಿಸುವ ತನಕ" ಪದವನ್ನು ಬಿಟ್ಟು ಮಿಕ್ಕ ಸಾಲಿನ ಅರ್ಥಗಳನ್ನು ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಸರಳವಾಗಿ ಹಾಕುತ್ತಿರುವೆ.
ಈ ಪದ್ಯವನ್ನೋದಿದಾಗ ನನಗೆ ತಿಳಿದದ್ದು, ಈ "ಸುಲಭವಲ್ಲವೋ ಮಹದಾನಂದ"ದಲ್ಲಿ ಅಡಗಿರುವದು "ಅರಿವೇ ಗುರು" ಎಂಬ ತತ್ವ. ಅದನ್ನೇ ದಾಸರು, ಮೊದಲ ಸಾಲಿನಲ್ಲಿಯೇ "ತನ್ನೊಳಗೆ ತಾ ತಿಳಿಯಬೇಕು ಗುರು ದಯದಿಂದ" ಎಂದಿದ್ದಾರೆ. "ಮುಂದೆ ಗುರಿಯಿರಲು, ಹಿಂದೆ ಗುರುವಿರಲು, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ" ನೆನಪಿಗೆ ತಂದುಕೊಳ್ಳಿ.
ಈ ಅರಿವೇ ಗುರು ಎಂಬ ತತ್ವವನ್ನು ಅನುಸರಿಸಿ ಜ್ಞಾನವನ್ನು (ತಿಳಿಯಬೇಕು) ಸಂಪಾದಿಸುತ್ತಾ, ದುರ್ಬಲರನ್ನು ತಮ್ಮ ಏಳಿಗೆಗೆ ಬಳಸಿಕೊಳ್ಳುವ ಮನಸ್ಥಿತಿಯನ್ನು ಮಟ್ಟಹಾಕಬೇಕು(ಬೆಕ್ಕನು ಇಲಿ ನುಂಗುವ ತನಕ, ಕಡುರಕ್ಕಸಿಯ ಕಂಡು ಗಿಣಿ ನುಂಗು, ಗುಬ್ಬಿ ರಾಜಹಂಸನ ನುಂಗುವತನಕ), ಸಮಾಜದಲ್ಲಿ ಇರಬಹುದಾದ ಅಹಂಕಾರದ ಗುಂಗನ್ನು ಬುದ್ಧಿವಂತಿಕೆಯಿಂದ (ನರಿ) ಕಿತ್ತೊಗೆಯಬೇಕು(ಮದಸೊಕ್ಕಿದ ಗಜವನ್ನು ನರಿ ನುಂಗುವ).
ಮೂರು ಬೆಟ್ಟಗಳನ್ನು ನೊಣ - ನಮ್ಮಲ್ಲಿನ ಜ್ಞಾನವನ್ನು ಬಳಸಿ ಹಣವನ್ನು ಸಂಪಾದಿಸುವದು(???) ಒಟ್ಟಿನಲ್ಲಿ ಎಲ್ಲರೂ ಈ ಭುವಿಯಲ್ಲಿರುವ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಸಮಾನರು ಎಂಬರ್ಥದಲ್ಲಿ.
ಶಿಷ್ಟರೊಡನೆ ಸೇರುವತನಕ - ಸಜ್ಜನರ ಸಂಗ ಹೆಜ್ಜೇನು ಸವಿದಂತೆ ನೆನಪಿಸಿಕೊಳ್ಳಿ
ಒಳ ಹೊರಗು ಒಂದಾಗುವ ತನಕ,
ಸಾಲ ಕಳೆಯೆ ಎಂಬುವ ಭಾವ ಬಯಲಾಗುವ ತನಕ - ಬಹುಶಃ ಇವೆರೆಡು ಮಾತನ್ನು ಜಾತಿ, ಕುಲಗಳ ಬಗ್ಗೆ ಪುರಂದರದಾಸರು ಹೀಗೆ ಹೇಳಿರಬಹುದು.
ಬೆಳಗಿನೊಳಗೆ ಕಾಣುವತನಕ - ತನ್ನತನವನ್ನು ಗುರುತಿಸಿಕೊಳ್ಳದ ಹೊರತು ಬೌದ್ಧಿಕ ಬೆಳವಣಿಗೆ ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ.
ಅಂದರೆ ನಾವು ಜ್ಞಾನವನ್ನು ಸಂಪಾದಿಸಿ, ಅಹಂಕಾರದ ಹುಟ್ಟಡಗಿಸಿ, ನಾವು ದುರ್ಬಲರು ಎಂಬ ನಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಂಡು, ಬೆಳಕಿನೆಡೆಗೆ ನಡೆಯುವ ಚೈತನ್ಯವನ್ನು ಪಡೆದುಕೊಳ್ಳಬೇಕು ಎಂಬುದೇ ಇದರ ಆಶಯ.
ಹಂಸಾನಂದಿಯವರೇ, ಈ ಪದವನ್ನು ಇಲ್ಲಿ ಹಾಕಿದ್ದಕ್ಕಾಗಿ ತುಂಬಾ ತುಂಬಾ ಸವಿಯೊದಗು. ನನಗೆ ಈ ಪದ ತುಂಬಾ ಹಿಡಿಸಿತು. ಈ ಪದ ಒಂದು ಸಾಮಾಜಿಕ ಪದ ಎಂದೆನಿಸುತ್ತದೆ, ಯಾವದೇ ಆಧ್ಯಾತ್ಮದ ಸೊಂಕಿಲ್ಲ. ಅಂದ ಹಾಗೆ, ಹಂಸಾನಂದಿಯವರೆ ಒಂದು ಡೌಟು. ಪುರಂದರ ದಾಸರ ಪದಗಳಲ್ಲಿ, ಸಾಮಾಜಿಕ ಕಲ್ಪನೆ, ಭಕ್ತಿಮಾರ್ಗ, ಕರ್ಮಮಾರ್ಗ, ಜ್ಞಾನಮಾರ್ಗ ಇವುಗಳ ಕುರಿತಾದ ವಿಶ್ಲೇಷಣೆಗಳೇನಾದರೂ ಆಗಿದೆಯೇ ?
ಉ:
ಬಹಳ ಚೆನ್ನಾಗಿ ಬರೆದಿದ್ದೀರ ಸುನಿಲ್ ಅವರೆ
ಪುರಂದರ ದಾಸರು ವಿವಿಧ ವಿಷಯಗಳ ಬಗ್ಗೆ ಬರೆದಿದ್ದಾರೆ. ಆದಾಗ ಒಂದೊಂದು ರಚನೆಯನ್ನು ನೋಡೋಣ!
-ಹಂಸಾನಂದಿ
ಉ:
ಪುರಂದರದಾಸರ ಒಟ್ಟೂ ರಚನೆಗಳನ್ನು ಪುರಂದರೋಪನಿಷತ್ ಎಂದು ಕರೆಯುವುದಲ್ಲದೇ, ನಾನು ಕೇಳಿದ ಹಾಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅದನ್ನು ಆಳವಾಗಿ ಅಭ್ಯಾಸ ಮಾಡುತ್ತಾರೆ (ಈ ವಿಷಯದ ಮೇಲೆ ಕೆಲ ಪ್ರಬಂಧ ಅಥವಾ thesisಗಳು ಸಿಕ್ಕಲೂ ಸಿಗಬಹುದು!).
ಈ ಪದ್ಯವನ್ನು ಓದಿದ ಹಾಗೆ ನನಗೆ (ಪುರಂದರ)ದಾಸರ ಇನ್ನೊಂದು ಹಾಡು ನೆನಪಿಗೆ ಬಂತು:
"ಸಾಮಾನ್ಯವಲ್ಲ ಶ್ರೀ ಹರಿ ಸೇವೆ, ಪಾಮರ ಜನರಿಗೆ
..
ಅಂತರ ಮಲಿನವು ಅಳಿಯಬೇಕು
..
ಸಂತತ ಮನದಲಿ ನಿರಂತವ ತಾ ಚಿಂತಿಸಬೇಕು .."