ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಈ ಹಾಡನ್ನು ಚಿಕ್ಕವನಾಗಿದ್ದಾಗಿನಿಂದ ನಾನು ಕೇಳುತ್ತ ಬಂದಿದ್ದೇನೆ. ಈ ಹಾಡನ್ನು ಕೇಳುತ್ತಲೆ, ನಮ್ಮ ಸಂಗೀತದಲ್ಲಿ ಶತಮಾನಗಳು ಉರುಳಿದಂತೆ ಬೇರೆಬೇರೆ ರಾಗಗಳು ಚಾಲ್ತಿಗೆ ಬರುವುದೂ ಹೋಗುವುದೂ ನನ್ನ ಮನಸ್ಸಿನ ಮುಂದೆ ಬಂದು ನಿಲ್ಲುತ್ತದೆ. ಆಯಾ ಕಾಲಕ್ಕೆ ತಕ್ಕಂತೆ, ಹೊರಗಿನ ಪ್ರಭಾವಗಳು ಶಾಸ್ತ್ರ್ರೀಯ ಸಂಗೀತದ ಮೇಲೆ ಪ್ರಭಾವ ಬೀರುವುದೂ, ನಿದಾನವಾಗಿ ಶಾಸ್ತ್ರೀಯವಾದ್ದು ಯಾವುದು ಎನ್ನುವುದರ ವಿವರಣೆಯೇ ಬದಲಾಗಿ ಹೋಗಿರುವುದೂ ಉಂಟು.
ಮುಸಲ್ಮಾನರು ವಾಯುವ್ಯ ಭಾಗದಿಂದ ನಮ್ಮ ದೇಶದ ಮೇಲೆ ದಂಡೆತ್ತಿ ಬಂದಾಗ ಅವರೊಡನೆ ಬಂದ ಅವರ ಸಂಗೀತ ಆವತ್ತು ಭಾರತದಲ್ಲಿದ್ದ ಸಂಗೀತದ ಮೇಲೆ ತನ್ನ ಪ್ರಭಾವವನ್ನು ಬೀರಿತು. ಇದರಿಂದಲೇ, ನಮ್ಮಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದೂ ಸ್ತಾನಿ ಸಂಗೀತ ಎಂಬ ಎರಡು ಪ್ರಕಾರಗಳುಂಟಾಗಿರುವುದೂ ತಿಳಿದ ವಿಷಯವೇ. ಹೆಜ್ಜುಜ್ಜಿ, ನವರೋಜು ಮೊದಲಾದ ರಾಗಗಳಲ್ಲಿ, ನಮ್ಮಲ್ಲಿಗೆ ಬಂದಮೇಲೂ ಮೊದಲಿನ ಹೆಸರನ್ನೇ ಅಥವ ಮೊದಲ ಹೆಸರನ್ನೇ ಹೋಲುವ ಹೆಸರನ್ನು ಇಡಲಾಯಿತು.
ಹಾಗೆ ಬಂದ ರಾಗಗಳಲ್ಲೊಂದು ಇಮನ್. ಅಥವ, ಎಮನ್, ನಮ್ಮ ದೇಶದ ಸಂಗೀತದ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ಎಮನ್, ಇಮನ್ ಎಂದರೆ blessed ಎಂಬ ಅರ್ಥವನ್ನು ವಿಕಿಪಿಡಿಯಾ ಹೇಳುತ್ತದೆ. ಈ ರಾಗವನ್ನು ನಮ್ಮ ಸಂಗೀತಗಾರರು ತೆಗೆದುಕೊಂಡಾಗ, ಅದೇ ಅರ್ಥ ಬರುವ ಕಲ್ಯಾಣ ಎಂಬ ಹೆಸರನ್ನು ಇದಕ್ಕಿಟ್ಟದ್ದು ಸರಿಯೇ ಆಗಿದೆ ಎಂದು ಮಿತ್ರರೊಬ್ಬರಿಂದ ತಿಳಿದುಬಂತು. ಇಂದು ಈ ರಾಗ ಹಿಂದೂಸ್ತಾನಿಯಲ್ಲಿ, ಯಮನ್ ಅಥವಾ ಕಲ್ಯಾಣ್ ಎಂದೂ, ಕರ್ನಾಟಕ ಸಂಗೀತದಲ್ಲಿ ಅದರದೇ ಹೆಣ್ಣು ರೂಪವಾದ ಕಲ್ಯಾಣಿ ಎಂದೂ ನೆಲೆ ನಿಂತಿದೆ
ಸಂಗೀತ ಗ್ರಂಥಗಳಲ್ಲಿ ೧೫೫೦ರ ಹೊತ್ತಿಗೆ ಕಲ್ಯಾಣಿ, ಕಲ್ಯಾಣ, ಇಮನ್ ಎನ್ನುವ ಹೆಸರುಗಳು ಕಾಣಿಸಿಕೊಳ್ಳತೊಡಗುತ್ತೆ. ಒಬ್ಬ ಕನ್ನಡಿಗ ಸಂಗೀತ ಶಾಸ್ತ್ರಜ್ಞ ರಾಮಾಮಾತ್ಯ ತನ್ನ ಸ್ವರಮೇಳಕಲಾನಿಧಿಯಲ್ಲಿ ಈ ಹೆಸರನ್ನು ಪ್ರಸ್ತಾಪ ಮಾಡುವುದಿಲ್ಲ. ಇವನ ನಂತರ ೩೦-೪೦ ವರ್ಷಗಳನ ನಂತರ ಬಂದ ಇನ್ನೊಬ್ಬ ಕನ್ನಡಿಗ ಸಂಗೀತ ಶಾಸ್ತ್ರಜ್ಞ ಪುಂಡರೀಕ ವಿಟ್ಠಲ ಕಲ್ಯಾಣವೆಂಬ ಹೆಸರನ್ನು ಹೇಳುತ್ತಾನಾದರೂ, ಅವನು ಹೇಳುವ ರಾಗ ಸ್ವರೂಪ ಈಗಿನದ್ದಕ್ಕಿಂತ ಸ್ವಲ್ಪ ಬೇರೆಯದ್ದಾಗಿದೆ. ಇವನ ನಂತರ ೪೦-೫೦ ವರ್ಷಗಳ ನಂತರ ಬಂದ ವೆಂಕಟ ಮಖಿ, ತನ್ನ ಚತುರ್ದಂಡಿ ಪ್ರಕಾಶಿಕೆಯಲ್ಲಿ ವೆಂಕಟಮಖಿ "ಕಲ್ಯಾಣಿಯಂತಹ ರಾಗಗಳು, ಕೋಟಿಗಟ್ಟಲೆ ಇವೆ. ಆದರೆ, ಅದು ಪ್ರಬಂಧಗಳ ರಚನೆಗೆ ಸೂಕ್ತವಲ್ಲ" ಎನ್ನುತ್ತಾನೆ. ಜೊತೆಯಲ್ಲೇ, ಇದು ಮುಸಲ್ಮಾನರಿಗೆ ಪ್ರಿಯ ಎಂದೂ ಹೇಳುತ್ತಾನೆ. ಇದರಿಂದಾಗಿ, ಈ ರಾಗಕ್ಕೆ ಪರ್ಶಿಯನ್ನರ ಮೂಲ ಎಂಬ ಮಾತಿಗೆ ಪುಟ ದೊರೆಯುತ್ತದೆ.
ಆದರೆ, ಇವರುಗಳಿಗಿಂತ ಮೊದಲೇ ಬಂದ ಹರಿದಾಸರಾದ ಶ್ರೀಪಾದರಾಯರು (ಕ್ರಿ.ಶ.೧೪೦೪-೧೫೦೨) ಒಂದು ರಚನೆಯಲ್ಲಿ "ಮಂದಗಮನೆಯರೆಲ್ಲ ತೂಗಿದರು ಕಲ್ಯಾಣಿ ರಾಗದಿಂದ" ಎಂದು ಹಾಡಿದ್ದಾರೆ. ಪುರಂದರದಾಸರು (ಕ್ರಿ.ಶ. ೧೪೮೪-೧೫೬೪) ಎರಡು ಮೂರು ರಚನೆಗಳಲ್ಲಿ ಕಲ್ಯಾಣಿ ರಾಗದ ಪ್ರಸ್ತಾಪ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಕರ್ನಾಟಕ ಸಂಗೀತದ ಅಭ್ಯಾಸದ ಬಾಲಪಾಠಗಳಲ್ಲಿಯೂ ಪುರಂದರ ದಾಸರೇ ರಚಿಸಿರುವ ಕಮಲಜಾದಳ ವಿಮಲ ಸುನಯನ ಎಂಬ ಗೀತೆಯೂ ಪ್ರಸಿದ್ಧವೇ ಆಗಿದೆ.
ಇದರಿಂದ, ಕಲ್ಯಾಣಿ ರಾಗ ಲಕ್ಷ್ಯದಲ್ಲಿ ಸುಮಾರು ಹದಿನೈದನೇ ಶತಮಾನದ ಮೊದಲಿನಿಂದಲೇ ಬಳಕೆಗೆ ಬಂದರೂ, ಅದನ್ನು ಲಕ್ಷಣಕಾರರು ಗಣನೆಗೆ ತೆಗೆದುಕೊಂಡು, ಅದನ್ನು ಗ್ರಂಥಸ್ಥವನ್ನಾಗಿ ಮಾಡುವುದಕ್ಕೆ ಸುಮಾರು ಎರಡು ಶತಮಾನಗಳಿಗಿಂತ ಹೆಚ್ಚು ಕಾಲ ಬೇಕಾಯಿತು ಎನ್ನಬಹುದು.
ಕಲ್ಯಾಣಿ ರಾಗ ಇಂದು ಬಹಳ ಜನಪ್ರಿಯ ರಾಗಗಳಲ್ಲೊಂದು. ಚಿತ್ರಗೀತೆ, ಭಾವಗೀತೆ, ಗಜಲ್, ಮೊದಲಾದುವುಗಳಲ್ಲೂ ಇದು ಬಹಳ ಜನಪ್ರಿಯವೇ. ಇದರ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುತ್ತೇನೆ. ಆದರೆ, ಇವತ್ತು ಪೀಠಿಕೆಯಂತೆ, ಕಲ್ಯಾಣಿ ರಾಗದಲ್ಲಿ ನಿಯೋಜಿಸಿರುವ ರಾಜ್ ಕುಮಾರ್ ಅವರ ಒಂದು ಸುಪ್ರಸಿದ್ಧ ಚಿತ್ರಗೀತೆಯನ್ನು ಇಲ್ಲಿ ಕೇಳಿ. ಚಿತ್ರ: ಶ್ರಾವಣ ಬಂತು.
ಮುಂದಿನ ಭಾಗದಲ್ಲಿ ಮತ್ತಷ್ಟು........
-ಹಂಸಾನಂದಿ
- hamsanandi's blog
- Login or register to post comments
- 880 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಚನ್ನಾಗಿದೆ. ಒಳ್ಳೆ ಅರಿಮೆಗಳು. 'ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ....." ಹಾಡು ತುಂಬ ದಿನ ಕಳೆದ ಮೇಲೆ ಕೇಳಿ ನನಗೆ ನಲಿವಾಯಿತು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಹಾಗೆಯೆ 'ತೋಡಿ' ರಾಗದ ಬಗ್ಗೆ ತಿಳಿಸ್ಕೊಟ್ರೆ ತುಂಬ ನೆರವಾಗಾವುದು. ಅನಕ್ರು ರವರ "ಸಂದ್ಯಾರಾಗ" ಓದಿದ ದಿನದಿಂದ ನನಗೆ ಇದು ಕಾಡುತ್ತಿದೆ. :(
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ನಗೆ:
ಏನನ್ನಾದರೂ ತೋಡಿಕೊಳ್ಳಲು( ನೋವು ನಲಿವು ಅಗಲಿಕೆ ಅಪ್ಪುಗೆ ) ಬಲು ತಕ್ಕ ರಾಗವೇ ತೋಡಿ.. ತೋಡಿ, ತೋಡೀಈಈಈ ಪಾಡಿ !
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಆದ್ರೆ ನಾನು ಕೇಳಿದಂಗೆ, ತೋಡಿ ರಾಗವನ್ನು ದುಃಖದ ಸನ್ನಿವೇಶಗಳಲ್ಲಿ ಮಾತ್ರ ಉಪಯೋಗಿಸುತ್ತಾರೆ.
ಹಂಸಾನಂದಿಯವರೇ,
ಆಕಾಶವಾಣಿ, ದೂರದರ್ಶನಗಳಲ್ಲಿ ಶೋಕಾಚರಣೆ ಸಂದರ್ಭಗಳಲ್ಲಿ ಇದನ್ನೇ ಅಲ್ವಾ ನುಡಿಸೋದು?
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಶ್ರೀನಿವಾಸರೆ,
ಇಲ್ಲಿ ಒಂದು ವಿಷಯವನ್ನು ತಿಳಿಯಪಡಿಸುವೆ.
ಹಿಂದೂಸ್ತಾನಿ ಪದ್ಧತಿ ಮತ್ತು ಕರ್ನಾಟಕ ಪದ್ದತಿಯಲ್ಲಿ ರಾಗಗಳ ಹೆಸರು ಬೇರೆಬೇರೆಯಾಗಿರುತ್ತವೆ. ಕೆಲವೊಮ್ಮೆ, ಸರಿಸುಮಾರು ಒಂದೇ ರಾಗಕ್ಕೆ ಬೇರೆಬೇರೆ ಹೆಸರುಗಳು ಇದ್ದರೆ (ಉದಾ: ಹಿಂದೋಳ - ಮಾಲಕೌಂಸ್, ಕಲ್ಯಾಣಿ- ಯಮನ್, ವಕುಳಾಭರಣ - ಬಸಂತ್ ಮುಖಾರಿ, ಚಕ್ರವಾಕ - ಆಹಿರ್ ಭೈರವ್, ಕಾಮವರ್ಧನಿ- ಪೂರಿಯಾ ಧನಾಶ್ರೀ)) - ಮತ್ತೆ ಕೆಲವು ಬಾರಿ ಒಂದೇ ಹೆಸರಿನ ರಾಗಗಳ (ಹಿಂದೋಳ, ತೋಡಿ, ಭೈರವಿ, ಭೈರವ್, ಶ್ರೀ) ರೂಪ ಪೂರ್ತಿ ಬೇರೆಯಾಗಿರುತ್ತೆ. ಈಗ ತೋಡಿ ರಾಗದ ವಿಷಯವೂ ಹಾಗೆಯೇ.
ನೀವು ಹೇಳಿದ, ಶೋಕಾಚರಣೆಯ ಸಮಯದಲ್ಲಿ ರೇಡಿಯೋ ಟಿವಿಗಳಲ್ಲಿ ಬಿತ್ತರವಾಗುವುದು (ಬಹುಪಾಲು) ಹಿಂದೂಸ್ತಾನಿಯ ತೋಡಿ ಎಂಬ ರಾಗ. ಅದಕ್ಕೆ ಕರ್ನಾಟಕ ಸಂಗೀತದಲ್ಲಿ ಶುಭಪಂತುವರಾಳಿ ಎನ್ನುತ್ತೇವೆ. ಅದು ಶೋಕರಸ ಪ್ರಧಾನರಾಗ. ಚಲನಚಿತ್ರಗಳಲ್ಲೂ ಇದು ಹಲವು ಗೀತೆಗಳಲ್ಲೂ, ಮತ್ತ್ತು ದುಃಖದ ಸನ್ನಿವೇಶಗಳಲ್ಲಿ ಹಿನ್ನಲೆಯಲ್ಲೂ ಬಹಳವೇ ಉಪಯೋಗವಾಗಿದೆ.
ಕರ್ನಾಟಕ ಸಂಗೀತದಲ್ಲೊಂದು ತೋಡಿ ರಾಗವಿದೆ. ಅದು ಪೂರ್ತಿ ಬೇರೆಯೇ. ಅದು ಅಷ್ಟಾಗಿ ಶೋಕ ಪ್ರಧಾನವಲ್ಲ. ಬದಲಿಗೆ ವಿಸ್ಮಯ, ಭಕ್ತಿ, ಅಧ್ಬುತ, ವಾತ್ಸಲ್ಯ ಮೊದಲಾದ ಬಗೆಬಗೆಯ ಭಾವಗಳನ್ನು ವ್ಯಕ್ತಪಡಿಸಲು ಉಪಯೋಗಿಸುವ ರಾಗ. ಈ ರಾಗದಲ್ಲಿರುವ ಒಂದು ಪ್ರಸಿದ್ಧ ಚಿತ್ರಗೀತೆಗೆ ಡಾ.ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು ಕೂಡ. ಯಾವುದು ತಿಳಿಯಿತೇ? ಅದೇ ನಾದಮಯ ಈ ಲೋಕವೆಲ್ಲ ಎಂಬ ಗೀತೆ. ಅದನ್ನು ನೀವು ಈ ಕೆಳಗಿನ ಕೊಂಡಿಯಲ್ಲಿ ಕೇಳಬಹುದು:
http://www.musicindi...
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕರ್ನಾಟಕ ಸಂಗೀತದ ತೋಡಿ ರಾಗಕ್ಕೆ ಸಮನಾದ (ಅದೇ ರೀತಿಯ) ರಾಗ ಹಿಂದೂಸ್ತಾನಿ ಪದ್ಧತಿಯಲ್ಲಿ ಇಲ್ಲ.
-ಹಂಸಾನಂದಿ
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ತುಂಬ ನನ್ನಿಗಳು ಹಂಸಾನಂದಿಯವರೆ.
ಬತ್ತೀಸ ರಾಗಗಳು ಎನ್ನುತ್ತಾರಲ್ಲಾ, ಅದು ಬರೀ ಕರ್ನಾಟಕ ಸಂಗೀತದಲ್ಲಿ ಮಾತ್ರವೇನಾ?
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ವೈಭವರೆ,
ಒಂದಲ್ಲ ಒಂದು ದಿನ ತೋಡಿಯ ಬಗ್ಗೆಯೂ ಬರೆಯುವೆ (ಅಂದುಕೊಂಡಿದ್ದೇನೆ)! ಸಂಧ್ಯಾರಾಗ ಓದಿ ಹತ್ತಾರು ವರ್ಷಗಳು ಕಳೆದಿವೆ - ಇನ್ನೊಮ್ಮೆ ಓದಬೇಕು.
-ಹಂಸಾನಂದಿ
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಅಯ್ಯೋ, ಎಲ್ಲಾ ಸರಿ, ಆದರೆ ಈ ಹಾಡನ್ನು ಎಲ್ಲಿ ಕೇಳೋದು ? ಹಂಸಾನಂದಿಗಳೇ, ಸ್ವಲ್ಪ ದಯೆತೋರೀಈಈಈ.
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಸಾಧ್ಯವಾದಾಗ, ಒಂದು mp3 ಮಾಡಿ ಹಾಕ್ತೀನಿ. ನನಗೆ ಗೊತ್ತಿರೋ ಹಾಗೆ, ಯಾವ್ದೂ recording ಇಲ್ಲ.
-ಹಂಸಾನಂದಿ
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಇಲ್ಲಿ ನೋಡಿ !
http://www.ecse.rpi....
ಈ ಪುಣ್ಯಾತ್ಮ ಎಲ್ಲ ಒಟ್ಟಿಗೆ ಸೇರಿಸಿ ತಾಣವೊ೦ದು ಸೃಷ್ಟಿ ಮಾಡಿದ್ದಾನೆ.
www.ecse.rpi.edu/Hom...