ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ತನ್ನ ಹೆಸರಿಗೆ ತಕ್ಕಂತೆ ಅಮರ ಚಿತ್ರ ಕಥೆ ಇವತ್ತಿಗೂ ಭಾರತದ ಸಂಸ್ಕೃತಿಯ ಮಜಲುಗಳನ್ನು ಹೊತ್ತು ಎಂದಿನ ಕಳೆಯನ್ನು ಉಳಿಸಿಕೊಂಡಿದೆ. ಚಿಕ್ಕವನಿದ್ದಾಗ ನನಗೆ ಈ ಪುಸ್ತಕಗಳನ್ನು ಕೊಳ್ಳಲಾಗುತ್ತಿರಲಿಲ್ಲ. ಅಮ್ಮನ ಕೈಗೆ ಎಟುಕದ ಬೆಲೆ ಇರುತ್ತಿತ್ತು ಈ ಪುಸ್ತಕಗಳಿಗೆ (ಅಪ್ಪ ನನಗೆ ಎಂದಿಗೂ ಪುಸ್ತಕ ಕೊಡಿಸುವ ಗೋಜಿಗೆ ಹೋಗುತ್ತಿರಲಿಲ್ಲ). ಹೀಗಾಗಿ ಇವುಗಳು ಎಟುಕುತ್ತಿದ್ದುದು ಲೈಬ್ರೆರೀಲೆ. ಮಳೆ ಬರುತ್ತಿದ್ದರೂ ದೂರದ ಲೈಬ್ರೆರೀಗೆ ಛತ್ರಿ ಹಿಡಿದು ಅರ್ಧ ನೆಂದು ತೊಪ್ಪೆಯಾಗಿ ಹೋಗುತ್ತಿದ್ದೆ - ಅಷ್ಟೊಂದು ಹುಚ್ಚಿರುತ್ತಿತ್ತು. ಆದರೆ ನನ್ನ ಅಣ್ಣ ಅಕ್ಕನ ಮಕ್ಕಳಿಗೆ ಹೀಗಿಲ್ಲ - ನಾವೆಲ್ಲರೂ ಯಾವುದಾದರೊಂದು ಪುಸ್ತಕ ಕಂಡ ಕೂಡಲೆ ಕೊಂಡು ಮನೆಗೆ ತರುತ್ತಿರುತ್ತೇವೆ. ತಮಾಷೆಯೆಂದರೆ ನನ್ನ ಅಣ್ಣನ ಮಗನಿಗೆ ಈ ಪುಸ್ತಕ ಓದೋದಕ್ಕಿಂತ ನಿಕಲೋಡಿಯನ್ ಚ್ಯಾನಲ್ಲಿನಲ್ಲಿ ಬರೋ "ಹತ್ತೋರಿ", ಪೋಗೋ ಚ್ಯಾನಲ್ಲಿನಲ್ಲಿನ "ನಾಡ್ಡಿ", "ಮಿ. ಬೀನ್" ಮುಂತಾದವೇ ಬಲು ಇಷ್ಟ!
ಟಾಟಾ ಸ್ಕೈ ಹೊತ್ತು ತರುವ ಡಿಜಿಟಲ್ ಸಿಗ್ನಲ್ಲು ಕ್ಲಾರಿಟಿ ಇರುವ ಚೆಂದದ ಚಿತ್ರಗಳನ್ನು ಮೂಡಿಸಿ ಪುಸ್ತಕ ಓದು ಇನ್ನಷ್ಟು ದೂರ ಮಾಡಿಬಿಟ್ಟಿದೆ.
ಇವತ್ತಿನ ದಿ ಹಿಂದೂ ಪತ್ರಿಕೇಲಿ ಬಂದಿದ್ದ ಒಂದು ಸುದ್ದಿ ಓದಿದಾಗ ಇವತ್ತು ಅಮರ ಚಿತ್ರ ಕಥೆಯ ಬಗೆಗಿನ ಹಳೆಯ ನೆನಪುಗಳೆಲ್ಲ ಮರುಕಳಿಸಿದ್ವು. ಅಮರಚಿತ್ರಕಥೆ ಸಿರೀಸ್ ನಲ್ಲಿ ಸುಮಾರು ಟೈಟಲ್ಲುಗಳು ಬರುತ್ತಿದ್ವು. ಅದೆಲ್ಲವನ್ನೂ ಓದಬೇಕಲ್ಲ! ಲೈಬ್ರೆರಿಯಲ್ಲಿ ಎಲ್ಲ ಪುಸ್ತಕಗಳನ್ನು ತೆಗೆದು ಹೆಕ್ಕಿ ಓದಿಲ್ಲದ ಪುಸ್ತಕಗಳಿಗೆ ಹುಡುಕೋದು. ಸಿಗದಿದ್ದರೆ ಓದಿದ ಪುಸ್ತಕವನ್ನೇ ಹಿಡಿದು, ಯಾರಾದರೂ ಪುಸ್ತಕ ರಿಟರ್ನ್ ಮಾಡೋರು ಇರ್ತಾರಾ ಅಂತ ಹೊಂಚು ಹಾಕಿ ಕುಳಿತುಕೊಳ್ಳೋದು - ಹೀಗೆಲ್ಲ ಮಾಡುತ್ತಿದ್ದೆವು. ಅಮರಚಿತ್ರಕಥೇಲಿ ನನಗೆ ಬಹಳ ಇಷ್ಟವಾಗುತ್ತಿದ್ದುದು ಕನ್ನಡದಲ್ಲಿ ಬರುತ್ತಿದ್ದ ಪುಸ್ತಕಗಳು. ಯಾರೋ ಬಹಳ ಚೆನ್ನಾಗಿ ಅನುವಾದ ಮಾಡುವವರಿಗೇ ಆ ಕೆಲಸ ಕೊಟ್ಟಿದ್ರು ಅನ್ಸತ್ತೆ ಓದೋಕ್ಕೆ ತುಂಬಾ ಒರಿಜಿನಲ್ ಆಗಿ ಇರುತ್ತಿತ್ತು. ಒಂದೊಂದು ಸಾರಿ ಮೊದಲು ಕನ್ನಡದಲ್ಲೇ ತಂದು ಆಮೇಲೆ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೇನೋ ಅನ್ನಿಸಿಬಿಡುತ್ತಿತ್ತು!

'ಅಮೃತ ಮಂಥನ'ದ ಕುರಿತು ಒಂದು ಪುಸ್ತಕ ಓದಿದ್ದೆ. ನಾನೋದಿದ ಅಮರ ಚಿತ್ರ ಕಥೆಯ ಪುಸ್ತಕಗಳಲ್ಲಿ ನನಗೆ ಚೆನ್ನಾಗಿ ನೆನಪಿರುವ ಪುಸ್ತಕ ಅದು. ಯಾಕೆ ಗೊತ್ತ? ಅದನ್ನು ಸುಮಾರು ಸಲ ಓದಿಬಿಟ್ಟಿದ್ದೆ! ನನ್ನ ಸ್ವಂತದ ಕಲೆಕ್ಷನ್ನಿನಲ್ಲಿದ್ದ ಕೆಲವೇ ಅಮರ ಚಿತ್ರ ಕಥೆ ಪುಸ್ತಕಗಳಲ್ಲಿ ಅಪ್ಪ ಅಮ್ಮನ ಹತ್ತಿರ ಹಠ ಮಾಡಿ ಕೊಡಿಸಿಕೊಂಡಿದ್ದ ಕೆಲವೇ ಪುಸ್ತಕಗಳಲ್ಲಿ ಇದೂ ಒಂದಾಗಿತ್ತು. ಪುಸ್ತಕದ ಒಡೆಯ literally ನಾನೇ ಆದ್ರೂ, ನಮ್ಮಣ್ಣ ಅಪ್ಪ ಅಮ್ಮ ಕೊಡಿಸಿದ ಪುಸ್ತಕ ಅಂತ ತನ್ನ ಹಕ್ಕೂ ಚಲಾಯಿಸುತ್ತಿರುವಂತೆ ಅದರ ಮೇಲೆ ಪೆನ್ನಿನಲ್ಲಿ ಗೀಜುತ್ತಿದ್ದ, ಓದೋಕೆ ಅಷ್ಟು ಇಷ್ಟವಿಲ್ಲದಿದ್ದರೂ. ಹೀಗೆ ನನ್ನ ಬಳಿ ಇದ್ದ ಹಲವು ಪುಸ್ತಕಗಳು ನಾನು ಇಂಜಿನೀಯರಿಂಗ್ ಮಾಡಲು ಬೆಂಗಳೂರಿಗೆ ಬರುವ ಹೊತ್ತಿಗೆ ನನ್ನ ಉಳಿದ ಪುಸ್ತಕಗಳೊಂದಿಗೆ ನನ್ನ ಅಕ್ಕನ ಮಗಳಿಗೆ ಕೊಟ್ಟೆ. ಆ ಪುಸ್ತಕಗಳ ನೆನಪಾದಾಗ ನಾನೇ ಇಟ್ಟುಕೊಳ್ಳಬೇಕಿತ್ತು ಅನ್ನಿಸಿದ್ದುಂಟು, ಆದರೆ ಅದು ನಮ್ಮ ಹತ್ತಿರದವರೊಬ್ಬರಿಗೆ ಉಪಯೋಗವಾಗುತ್ತದೆ ಎಂಬ ವಿಷಯ ಆ ಅನಿಸಿಕೆಯನ್ನು ಹೊಸೆದುಹಾಕುವಂತದ್ದು.
ನನ್ನ ಮಾಮಂದಿರು (ಮಾವಂದಿರು - ಅಮ್ಮನ ಕಡೆ) ಸಾಕಷ್ಟು ಕನ್ನಡ ಪುಸ್ತಕಗಳನ್ನು ಓದುತ್ತಿದ್ದರು. ಅವರು ಓದಿ ಮುಗಿಸಿದ ಪುಸ್ತಕಗಳು ನನಗೇ ಎಂಬಂತೆ. ಅಂತಹ ಪುಸ್ತಕಗಳಲ್ಲಿ ಹಲವನ್ನು ನಾನು ಎತ್ತಿಕೊಂಡು ಬರುತ್ತಿದ್ದೆ. ಹೀಗಾಗಿ ನನ್ನ ಪುಟ್ಟ ಲೈಬ್ರೆರಿ ಇಕ್ಕಟ್ಟಿನ ಮನೆಯಲ್ಲಿ ಕಷ್ಟದ ಪ್ರಜೆಯಾಗಿ ಕಷ್ಟವಾದರೂ ಎರಡು ಬಾಕ್ಸುಗಳಿಗಿಂತ ಕಡಿಮೆ ಪುಸ್ತಕಗಳು ಇದ್ದದ್ದಿಲ್ಲ! ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ನಾನು ಬೆಳೆಸಿಕೊಂಡದ್ದೂ ನಮ್ಮ ಸೋದರಮಾವಂದಿರಿಂದಲೇ.
ನನಗೆ ಸೇರಿಸಿದ್ದ ಸ್ಕೂಲುಗಳಲ್ಲಿ ಇಂಗ್ಲೀಷ್ ಪುಸ್ತಕಗಳೇ ಹೆಚ್ಚು ಸಿಗುತ್ತಿದ್ವು. ಕನ್ನಡ ಪುಸ್ತಕಗಳು ಅಪರೂಪ. ಒಂದೊಂದು ಸಾರಿ ಉತ್ತರ ಭಾರತದ ಅಚ್ಚು ಹೊಡೆದ ಚಾಚಾ ಚೌದರಿ ಮುಂತಾದ ಪುಸ್ತಕಗಳು ಸಿಗುತ್ತಿದ್ವು. ಅದೂ ನಮಗಿಷ್ಟವಾಗುತ್ತಿತ್ತು. ಟಿಂಕಲ್ ಹಾಗೂ ಟಿಂಕಲ್ ಡೈಜೆಸ್ಟ್ ಬಹಳ ಓದುತ್ತಿದ್ದೆವು. ಆಗಾಗ "ಬಾಲಮಂಗಳ" ಕೊಂಡು ತರುತ್ತಿದ್ವಿ. ಆಗ ಅದರ ಆಫೀಸು ಮಾಗಡಿ ರೋಡಿನಲ್ಲಿ ಎಂಬುದು ಗೊತ್ತಿತ್ತು (ಕೇರಳದ ಕೊಟ್ಟಾಯಂನ ಒಂದು ಪಬ್ಲಿಶಿಂಗ್ ಹೌಸ್ ರವರದ್ದು ಬಾಲಮಂಗಳ). ಆದರೂ ಈಗ ಇವೆಲ್ಲ ಪುಸ್ತಕಗಳು ಓದೋಣವೆಂದು ಕೈಗೆ ತೆಗೆದುಕೊಂಡರೆ ಸಿಲ್ಲಿಯಾಗಿವೆ ಅನ್ನಿಸಿಬಿಡುತ್ತದೆ. ಮಕ್ಕಳಿಗೇ ಚೆಂದ.
ಕೆಲವು ದಿನಗಳ ಹಿಂದೆ ಹೀಗೆಯೇ ಒಂದು ಪುಸ್ತಕದ ಅಂಗಡಿಗೆ ಹೋಗಿದ್ದಾಗ ಅಮರಚಿತ್ರಕಥೆಯ "ಅಮೃತ ಮಂಥನ" ಟೈಟಲ್ ಮತ್ತೆ ಸಿಕ್ಕಿತ್ತು. ಆದರಿದು ಇಂಗ್ಲೀಷಿನಲ್ಲಿತ್ತು "Churning of the Ocean" ಎಂಬ ಹೆಸರಲ್ಲಿ. ಆದರೆ ಹಿಂದೆ ನಾನು ಕನ್ನಡದಲ್ಲಿ ಓದಿದ್ದ ಪುಸ್ತಕವೇ ಉತ್ತಮ ಅನಿಸಿತು. ಕನ್ನಡದಲ್ಲಿರುವ ಕಾಪಿಗೆ ಹುಡುಕಾಡಿದೆನಾದರೂ ಸಿಗದೆ ಇದನ್ನೇ ನನ್ನ ಅಣ್ಣನ ಮಗನಿಗೆ ಕೊಂಡು ತಂದಿದ್ದೆ. ಬಹುಶಃ ಕನ್ನಡದಲ್ಲಿ ಅಮರಚಿತ್ರಕಥೆ ಈಗ ಸಿಗುತ್ತಿಲ್ಲ ಅನ್ಸತ್ತೆ. ಒಂದು ಕಾಲದಲ್ಲಿ ನನ್ನ ಹತ್ತಿರ ಸಂಸ್ಕೃತದಲ್ಲಿರುವ ಅಮರಚಿತ್ರಕಥೆ ಪುಸ್ತಕ ಇತ್ತು! ಸಂಸ್ಕೃತ ಅಷ್ಟಿಷ್ಟು ಕಲೆತರೂ ಓದಿ ಸಂಪೂರ್ಣ ಅರ್ಥ ಮಾಡಿಕೊಳ್ಳಲಾಗದೆ ಸಂಸ್ಕೃತ-ಕನ್ನಡ ನಿಘಂಟು ಹಿಡಿದು ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದು ನೆನಪಿದೆ. ಅಕ್ಕ ತಂದುಕೊಟ್ಟಿದ್ದಳು ಅನ್ಸತ್ತೆ ಆ ಪುಸ್ತಕವನ್ನ.
ಆದರೆ ಯಾವತ್ತೇ ಆಗಲಿ, ಭಾರತದ ಪುರಾಣಕಥೆಗಳು, ಇತಿಹಾಸ ಹಾಗೂ ಪ್ರಸಿದ್ಧ ವ್ಯಕ್ತಿಗಳ ಕುರಿತ ಅಮರಚಿತ್ರಕಥೆ ಮಕ್ಕಳಿಗೆ ಕೊಡಬಹುದಾದ ಒಳ್ಳೆಯ ಪುಸ್ತಕದ ಉಡುಗೊರೆ. ಹತ್ತೋರಿ, ಪೋಕೆಮಾನ್ ಅಥವ ಯೋ-ಯೋ ಗಿಂತ ಭಾರತದ ಬಗ್ಗೆ ಮೊದಲು ತಿಳಿದುಕೊಳ್ಳುತ್ತಾರೆ! ![]()

- hpn ರವರ ಬ್ಲಾಗ್
- Login or register to post comments
- 1185 hits
- Email this blog






ಪ್ರತಿಕ್ರಿಯೆಗಳು
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಹರಿ,
ನೆನಪುಗಳನ್ನು ದಟ್ಟವಾಗಿ, ನಿಚ್ಚಳವಾಗಿ ಚೆನ್ನಾಗಿ ಹಂಚಿಕೊಂಡಿದ್ದೀರ. ಕೊಳ್ಳಲಾರದೆ ಲೈಬ್ರರಿಗೆ ಹೋಗಿ ಓದುತ್ತ ದಿನಗಳ ನೆನಪು ಮರುಕಳಿಸುವಂತೆ ಮಾಡಿದಿರಿ. ಬಹುಶಃ ಮಕ್ಕಳಾಗಿದ್ದಾಗ ಹತ್ತಿಕೊಂಡು ಈ ಪುಸ್ತಕ ಹಿಡಿಯುವ ಅಭ್ಯಾಸ ಮುಂದೆಯೂ ಅಂಟಿಕೊಂಡು ಉಳಿಯುವುದು ಸೋಜಿಗವೇ ಅಲ್ಲವೇನೋ.
ಅದಕ್ಕೊಂದು ಕಡ್ಡಾಯ ಕಾಯಿದೆ ಇದ್ದರೆ ಒಳ್ಳೆಯದು ಅನಿಸುತ್ತಿದೆ
ಥ್ಯಾಂಕ್ಸ್ ಹರಿ.
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಓಹ್! ಇಷ್ಟು ಬೇಗ ಪ್ರತಿಕ್ರಿಯೆ ಬರುವುದೆಂದು ಎಣಿಸಿರಲಿಲ್ಲ.
ಹೌದ್ರಿ, ಬಹುಶಃ ಕಾಯ್ದೆ ಬೇಕು. ಅಂಟು ಬಿಟ್ಟುಹೋಗುತ್ತಿದೆ. ಈಗ ಮಕ್ಕಳಿಗೆ ಟಿವಿಯಂತೆ ನಮಗೆಲ್ಲ ಸಿನಿಮಾ ನೋಡೋ ಹುಚ್ಚು ಇದೆಯಲ್ಲ! (ಅಪ್ಪ ಅಮ್ಮಂದಿರಿಗೆ ಇರುವ ದಾರಾವಾಹಿ ಹುಚ್ಚಿನಂತೆ)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಮುಂದಿನ ಪೀಳಿಗೆಯ ಮಕ್ಕಳು ಹೀಗೆ ಬರೆಯಬಹುದು..(ತಮ್ಮ ಇಂಗ್ಲೀಷ್ ಬ್ಲಾಗ್ ಗಳಲ್ಲಿ)
ನಾನು ಚಿಕ್ಕವನಿದ್ದಾಗ ನಮ್ ಮಮ್ಮಿ ಡ್ಯಾಡಿ ಜೊತೆ ಫೋರಮ್ ಮಾಲ್ಗೆ ಹೋಗಿ ’ಹ್ಯಾರಿ ಪಾಟರ್’ ತಗೊಂಡು ಓದುತ್ತಿದ್ದೆವು..ಮನೆಯಲ್ಲಿ ಪೋಗೋ, ಮಿಕ್ಕಿ ಮೌಸ್ ನೋಡುತ್ತಿದ್ದೆವು, ಅದ್ಭುತವಾದ ’ಹೊಡಿ ಕಡಿ’ ಕಂಪ್ಯೂಟರ್ ಗೇಮ್ ಗಳನ್ನಾಡುತ್ತಿದ್ದೆವು..ಇತ್ಯಾದಿ.
ಇನ್ನು ಮಳೆಯಲ್ಲಿ ನೆನೆಯುವುದು, ಸ್ಕೂಲಿಗೆ ಪೋಗುವಾಗ ಹಳ್ಲಿದಾರಿಯ ಕೆರೆ ಏರಿ ನೋಟ ಇವೆಲ್ಲಾಹೋಗಿ..ಟ್ರಾಫಿಕ್ ಜಾಮ್ ನಲ್ಲಿ ಸ್ಕೂಲ್ ವ್ಯಾನ್ ನಲ್ಲಿ ಕುಳಿತು ಕರ್ಕಶ ಹಾರನ್ ಶಬ್ದಗಳನ್ನು ಸಹಿಸಿಕೊಂಡು ಚ್ಯೂಯಿಂಗ್ ಗಂ ಅಗೆಯುತ್ತಾ ಸಮಯ ಕಳೆಯುವುದನ್ನು ಬರೆಯುತ್ತಾರೇನೋ !
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
'ಹ್ಯಾರಿ ಪಾಟರ್' ನಾವೇ ತಗೊಂಡು ಓದಿದೀವಿ.

'ಹೊಡಿ ಕಡಿ' ವಿಡಿಯೋ ಗೇಮ್ಸ್ ನಾವೂ ಆಡಿದ್ದೀವಿ. ಆದರೆ ಕಾಲೇಜಿನಲ್ಲಿದ್ದಾಗ
ಯಾವುದು ಮೀಡಿಯದಲ್ಲಿ ಹೆಚ್ಚು ಜಾಗ ಪಡೆಯತ್ತೋ ಅದನ್ನ ಜನರ ಗಮನ ಇದ್ದೇ ಇರುತ್ತದೆ. ಬಹುಶಃ ಸ್ವದೇಶಿ ಕಾಮಿಕ್ಸ್, ಪುಸ್ತಕಗಳು ಹಾಗೂ ಗೇಮಿಂಗ್ ಉದ್ಯಮಕ್ಕೆ ಹೆಚ್ಚಿನ ಬೆಂಬಲದ ಅವಶ್ಯಕತೆಯಿದೆ. ಪೋಗೋ ಚ್ಯಾನಲ್ಲಿನಲ್ಲಿ ಭಾರತದ ಕೆಲವು ಕಥೆಗಳನ್ನು (ಸ್ವಲ್ಪ ಕೆಡಿಸಿ) ಇತ್ತೀಚೆಗೆ ಬಡಿಸುತ್ತಿದ್ದಾರೆ. ಆಗೀಗ ಜಾಹಿರಾತು ಗಮನಿಸಿರುವೆ. ಸಂಪೂರ್ಣ ಭಾರತದ್ದೇ ಸ್ವಂತದ ಚ್ಯಾನಲ್ ಬರೋ ತನಕ ಏನೂ ಮಾಡೋಕಾಗಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ನಂಗೆ (ಹಾಗೂ ನನ್ನ ತಮ್ಮನಿಗೆ)ಮಹಾಭಾರತ ಏನದ್ರೂ ಅಲ್ಪ ಸ್ವಲ್ಪ ಗೊತ್ತಿದ್ದರೆ ಅದಕ್ಕೆ ಅಮರ ಚಿತ್ರ ಕಥೆಯೇ ಕಾರಣ.ಆಗ ಪ್ರತಿ ವಾರ ಮಹಾಭಾರತದ ಒಂದೊಂದು ಸಂಚಿಕೆ ಬರುತ್ತಿತ್ತು(ಹಾಗೆಂದು ನೆನಪು).ನಮ್ಮೂರಿನಲ್ಲಿ(ಸುಳ್ಯ) ಪುಸ್ತಕಗಳು ಸಿಗುತ್ತಿರಲಿಲ್ಲ.ಪುತ್ತೂರಿನಲ್ಲಿ ತಗೋಬೇಕಿತ್ತು.ಅದು ಸ್ವಲ್ಪ ತಡವಾಗಿ ಹೋದರೆ ಪುಸ್ತಕಗಳು ಅಲ್ಲೂ ಸಿಗುತ್ತಿರಲ್ಲಿಲ್ಲ.ಮತ್ತೆ ಮಂಗಳೂರಿಗೆ ಯಾವಾಗಾದ್ರೂ ಹೋದಾಗ ತಗೋಬೇಕಿತ್ತು. ಅಪ್ಪ ಅಮ್ಮ ಮಂಗಳೂರಿಗೆ ಹೋಗುವುದಿದ್ದರೆ ಯಾವ ಸಂಚಿಕೆ(ಮಹಾಭಾರತ ಸೀರೀಸ್ನಲ್ಲಿ) ತಪ್ಪಿಹೋಗಿದೆ ಎಂದು ಅವರಿಗೆ ನೆನಪಿಸುತ್ತಿದ್ದೆವು.ಹಾಗೆ ಹುಡುಕಾಡಿ ಮಹಾಭಾರತದ ಎಲ್ಲಾ ಸಂಚಿಕೆಗಳನ್ನು(ಸುಮಾರು ೫೨ ಪುಸ್ತಕಗಳು) ಒಟ್ಟು ಮಾಡಿ ಬುಕ್ ಬೈಂಡ್ ಮಾಡಿ ಇಟ್ಟಿದ್ದೆವು.ಅದು ಈಗಲೂ ಇದೆ.ಹಾಗೆಯೇ ಕೃಷ್ಣನ ಕುರಿತಾದ ಸುಮಾರು ೧೦ ಪುಸ್ತಕಗಳನ್ನು ಬುಕ್ಬೈಂಡ್ ಮಾಡಿಟ್ಟಿದ್ದೇವೆ! ಊರಿಗೆ ಹೋದಾಗ ಯಾವಗಾದ್ರು ಒಮ್ಮೆ ಕೆಲವು ಪುಟಗಳನ್ನು ತಿರುಗಿಸುತ್ತೇನೆ.
ಚಂದಮಾಮ,ಬಾಲಮಂಗಳ ಎಲ್ಲಾ ಓದುತ್ತಿದ್ದೆ..ಅಮರಚಿತ್ರ ಕಥೆಗಳನ್ನು ಒಟ್ಟು ಮಾಡಿಟ್ಟ ಹಾಗೆ ಅವುಗಳನ್ನು ಮಾಡಲಿಲ್ಲ!
hpn, ನಿಮ್ಮ ಬರಹ ಎಲ್ಲವನ್ನೂ ನೆನಪಿಸಿತು.ಇತ್ತೇಚೆಗೆ ನನ್ನ ಮಾವನ ಮಕ್ಕಳ ಹುಟ್ಟಿದ ಹಬ್ಬಕ್ಕೆ ಉಡುಗೊರೆಯಾಗಿ ಅಮರ ಚಿತ್ರ ಕಥೆಯನ್ನು(ಇಂಗ್ಲೀಶ್) ಕೊಟ್ಟಿದ್ದೆ.ಆದರೆ ಅವರು ಅದನ್ನು ಓದಿದ ಹಾಗೆ ಇಲ್ಲ!
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಒಂದ್ಸಾರಿ ಸುಳ್ಯಕ್ಕೆ ಭೇಟಿ ಕೊಡಬೇಕಲ್ಲ ಹಾಗಾದ್ರೆ!
ಚಂದಾಮಾಮದಲ್ಲಿ ಅಡಗೋಲಜ್ಜಿ ಕಥೆಗಳು ತುಂಬಾ ಇರುತ್ತಿತ್ತು. ವೆರೈಟಿ ಇರುತ್ತಿರಲಿಲ್ಲ - ಅದೇ ಭೂತ, ಪಿಶಾಚಿ ಕಥೆಗಳು. ವರ್ಷಗಟ್ಟಲೆ ಎಳೆದ ಬೇತಾಳ-ವಿಕ್ರಮಾದಿತ್ಯನ ಸೀರೀಸ್. ಬೋರು ಹೊಡೆಸುತ್ತಿತ್ತು.
ಬಾಲಮಂಗಳ ಪರವಾಗಿಲ್ಲ - ಸ್ವಲ್ಪ ಇಲ್ಲಸ್ಟ್ರೇಶನ್ಸ್ ಇರುತ್ತಿದ್ದದ್ದರಿಂದ ಓದಬಹುದಾಗಿತ್ತು. ಅಮರಚಿತ್ರಕಥೆಯೇ ಉತ್ತಮ! ಕನ್ನಡದವರೇ ಮಾಡಿದ್ದು (ಅನಂತ ಪೈ - ಕಾರ್ಕಳದವರಂತೆ).
ದಿನಕ್ಕೊಂದು ಕಥೆಗಳು ಅಂತ ಪುಸ್ತಕಗಳ ಸಿರೀಸ್ ಬರುತ್ತಿತ್ತು (ಅನುಪಮಾ ನಿರಂಜನರದು - ಡಿ ವಿ ಕೆ ಮೂರ್ತಿ ಪ್ರಕಟಿಸುತ್ತಿದ್ದರು) ಅದು ತುಂಬಾ ಚೆನ್ನಾಗಿರುತ್ತಿತ್ತು ಆಗ ಓದೋಕೆ. ಬೇಸಿಗೆ ರಜೆ ಅಂದ್ರೆ ಅದನ್ನೆ ಹಿಡುಕೊಂಡು ತಿರುಗಾಡ್ತಿದ್ವಿ! ೩೦ ಕಥೆಗಳು ಇರುತ್ತಿದ್ವು ಒಂದೊಂದು ಡೈಜೆಸ್ಟಿನಲ್ಲಿ (ಅದೂ ಲೈಬ್ರೆರೀಲೆ ಎರವಲು ಪಡೆದು ತರುತ್ತಿದ್ವಿ).
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಬನ್ನಿ ಅದಕ್ಕೇನು..ಯಾವಾಗ ಬೇಕಾದ್ರೂ!
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಒಹ್. ನಂಗೆ ಮಯ್ಸೂರಿನ ಲಕುಮಿಪುರದ ಲಯ್ಬ್ ರರಿ ನೆನಪಿಗೆ ಬಂತು. ಬೇಸಿಗೆ ರಜೆ ಬಂದ್ರೆ ಅಲ್ಲೆ ಮೂರೊತ್ತು. ಇಂತವನ್ನ ಓದ್ತಾ. ಏನ್ ಆಗ ಹುರುಪಿತ್ತು. ಈಗ ಇಲ್ಲ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಲಕ್ಷ್ಮಿಪುರಂ ಲೈಬ್ರೆರಿ - ಗೊತ್ತಿರುವಂತಿದೆ, ಆದರೆ ನೆನಪು ಅಷ್ಟಾಗಿ ಇಲ್ಲ. ಎಲ್ಲಿ ಬರುತ್ತದೆ ಸರಿಯಾಗಿ ಇದು? ಮೈಸೂರಿನಲ್ಲಿ ಆಯುರ್ವೇದಿಕ್ ಆಸ್ಪತ್ರೆ ಪಕ್ಕ ಇದೆಯಲ್ಲ ಆ ಲೈಬ್ರೆರಿ ಹೆಸರೇನು?
(ಬಹುಶಃ ಕೇಂದ್ರ ಗ್ರಂಥಾಲಯ ಇರಬೇಕು ಇದು).
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಹರಿಯವರೇ,
ಉಹ್, ಎಂತಹ ಮನಕಲಕುವ ವಿಷಯದ ಬಗ್ಗೆ ಬರೆದುಬಿಟ್ರಿ! ಅಮರಚಿತ್ರಕಥೆಗಳ ಜೊತೆ ನನ್ನ ನಂಟಿನ ಬಗ್ಗೆ ಬರೆಯಲು ಪದಗಳೇ ಸಾಕಾಗುವುದಿಲ್ಲ. ಚಿಕ್ಕಂದಿನಲ್ಲಿ ನನ್ನ ಕುಟುಂಬದ ಅರ್ಥವಾಗದ ಸಮಸ್ಯೆಗಳಿಂದ ಮನಸ್ಸು ಗೋಜಲಾದಾಗ ನನ್ನನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯಲು ಈ ಕಥೆಗಳ ಮೊರೆ ಹೋಗುತ್ತಿದ್ದೆ. ಮನೆಯಲ್ಲಿ ಕಾಸುಕಾಸಿಗೂ ಲೆಕ್ಕ ಇಡಬೇಕಾದ ಪರಿಸ್ಥಿತಿಯಿತ್ತು. ನನ್ನ ಸೇಹಿತೆಯ ತಂದೆ, ಹೊಸ ಸಂಚಿಕೆ ಬಂದೊಡನೆ ಅವರ ಮನೆಗೆ ತಂದು ಹಾಕುತ್ತಿದ್ದರು. ಅದನ್ನು ಓದಲು ಮೊದಲು ಕಾದು ಕುಳಿತಿರುತ್ತಿದ್ದದ್ದು ನಾನೇ! ಸಂಕೋಚ, ನಾಚಿಕೆ, ಎಲ್ಲ ಬಿಟ್ಟು ಆ ಒಂದು ಕಾಪಿಗಾಗಿ ಪರಿತಪಿಸುತ್ತಿದ್ದೆ. ಬರೆಯುತ್ತಾ ಕುಳಿತರೆ ನೂರಾರು ನೆನಪುಗಳು!
ಈಗ ಬೆಂಗಳೂರಿಗೆ ಹೋದಾಗಲೆಲ್ಲ ಅಮರಚಿತ್ರಕಥೆ ಪುಸ್ತಕಗಳನ್ನು ಕೊಳ್ಳುತ್ತೇನೆ. ಆವನ್ನು ಓದಿದಾಗ ಬರೀ ಚಿತ್ರಗಳು, ಅಕ್ಷರಗಳು ಕಾಣುತ್ತವೇ ವಿನಹ ಹೊಸ ಲೋಕ ಕಾಣುವುದಿಲ್ಲ.
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ನನ್ನ ತಮ್ಮ ಚಿಕ್ಕವನಿದ್ದಾಗ ಆರೋಗ್ಯ ಕೆಟ್ಟು ಮಣಿಪಾಲ್ ಆಸ್ಪತ್ರೆಯಲ್ಲಿ ಇದ್ದ. ಆಗ ಅವನಿಗೆ ಬೇಜಾರಾಗುತ್ತದೆ ಎಂದು ನಮ್ಮಪ್ಪ ಉಡುಪಿಯಿಂದ ಅಮರ ಚಿತ್ರಕಥೆ ತಂದು ಕೊಟ್ಟಿದ್ದರು. ನಮಗೆಲ್ಲ "ಅಚಿಕ" ದ ಪರಿಚಯವಾದದ್ದು ಆಗಲೇ. ಆ ಪುಸ್ತಕಗಳು ನನ್ನ ತಮ್ಮನೊಂದಿಗೆ ವಾಪಸು ಮನೆಗೆ ಬಂದವು. ಆಗ ನಮ್ಮ ಮನೆಯ ಅಟ್ಟದ ಮೇಲಿರುತ್ತಿದ್ದ ಆ ಪುಸ್ತಕಗಳು ನಮ್ಮ ಊರಿನ ನೆಂಟರ ಪೈಕಿಯ ಮಕ್ಕಳಿಗೆ ಪ್ರಮುಖ ಆಕರ್ಷಣೆ. ಮನೆಗೆ ಬಂದು ನೆಟ್ಟಗೆ ಅಟ್ಟ ಹತ್ತಿ ಬೇಕಾದ ಅಚಿಕ ತಗೊಂಡು ಯಾವುದೋ ಮೂಲೆ ಹಿಡಿದು ಹೊರ ಪ್ರಪಪಂಚದ ಜ್ಞಾನವಿಲ್ಲದೆ ಓದುತ್ತಿದ್ದ ಆ ಮಕ್ಕಳ ನೆನಪು ನನಗೆ ಇನ್ನೂ ಮರೆತಿಲ್ಲ.
ಮುಂದೆ ನನ್ನ ತಮ್ಮ ಕಾಲೇಜಿಗೆ ಅಂತ ಪಕ್ಕದೂರಿಗೆ ಹೋಗಿಬಂದು ಮಾಡುತ್ತಿದ್ದಾಗ ಮಧ್ಯಾಹ್ನ ಊಟಕ್ಕೆ ಅಂತ ಕೊಟ್ಟಿದ್ದ ದುಡ್ಡಿನಲ್ಲಿ ಅಚಿಕ ಕೊಳ್ಳುತ್ತಿದ್ದ !!
ನನ್ನ ಮಗ ಚಿಕ್ಕವನಿದ್ದಾಗ ತಿಂಗಳಿಗೆರಡು ಎಂದು ಅಚಿಕ ಕೊಳ್ಳುತ್ತಿದ್ದೆ. ಹಾಗೆ ಸುಮಾರು ಮೂವತ್ತು ಪುಸ್ತಕವಿದ್ದವು. ಅದನ್ನೆಲ್ಲಾ ನೀಟಾಗಿ ಪಾರದರ್ಶಕ ಪ್ಲಾಸ್ಟಿಕ್ ಹಾಕಿ ಬೈಂಡ್ ಮಾಡಿಟ್ಟಿದ್ದೆ. ಆದರೆ ನನ್ನ ಮಗನಿಗೆ ಆ ಪುಸ್ತಗಳ ಬಗ್ಯೆ ಅಷ್ಟು ಆಸಕ್ತಿ ಬರಲೇ ಇಲ್ಲ. ಆ ಮೇಲೆ ಅವೆಲ್ಲಾ ಪುಸ್ತಕಗಳನ್ನು ನನ್ನ ತಮ್ಮನ ಮಗಳಿಗೆ ಕೊಟ್ಟುಬಿಟ್ಟೆ.
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಹರಿ,
ಇಂತಹ ಉತ್ತಮ ಬರಹವನ್ನ ನಾನೇಕೆ ಬರೆಯಲಿಲ್ಲ ?
ಮತ್ತೆ - ನೀವು ಬರೆದ ಇಷ್ಟು ಹೊತ್ತಿನವರೆಗೆ ಇದನ್ನೇಕೆ ಓದಲಿಲ್ಲ
?
ಪುಸ್ತಕಗಳ ಹಿಂದಿನ ನಿಮ್ಮ ಸವಾರಿ ಬಹಳ ಚೆನ್ನಾಗಿ ಸಾಗಿದೆ. ನನ್ನ ಹಲವು ಅನುಭವಗಳೂ ಹೆಚ್ಚಿಗೆ ನಿಮ್ಮಂತೆಯೇ. ಒಂದು ವ್ಯತ್ಯಾಸವೆಂದರೆ, ನಾನು ಚಿಕ್ಕವನಿರುವಾಗಲೇ, ಅಣ್ಣಂದಿರು ಓದಿ ಉಳಿದಿದ್ದ ಅಮರ ಚಿತ್ರ ಕಥೆಗಳು, ಭಾರತ ಭಾರತಿ ಪುಸ್ತಕ ಸಂಪದ ಮಾಲಿಕೆಯ ಪುಸ್ತಕಗಳು ಬೇಕಾದಷ್ಟಿದ್ದವು. ಹಾಗಾಗಿ ಕಂಡ ಕಂಡ ಸಿಕ್ಕ ಸಿಕ್ಕ ಪುಸ್ತಕವನ್ನು ಓದುವ ಹುಚ್ಚು ನನಗೆ ಯಾವಾಗಲೂ ಇತ್ತು.
ನಮ್ಮೂರಿನ ಪಬ್ಲಿಕ್ ಲೈಬ್ರರಿಯಲ್ಲಿ ಅಮರ ಚಿತ್ರ ಕಥೆಯಂತಹವು ಸಿಗುವುದು ಕನಸಿನ ಮಾತೇ ಆಗಿತ್ತು. ಆ ಕಾಲದಲ್ಲಿನ್ನೂ ಖಾಸಗಿ ಲೈಬ್ರರಿಗಳು ಅಷ್ಟು ಚಲಾವಣೆಯಲ್ಲಿರಲಿಲ್ಲ್ಲ. ಹಾಗಾಗಿ, ಯಾರದಾದರೂ ನೆಂಟರ ಅಥವಾ ಗೆಳೆಯರ ಮನೆಗೆ ಹೋದರೆ, ಅವರ ಮನೆಯಲ್ಲಿ ನಾನು ಓದಿಲ್ಲದ ಯಾವ ಅಮರ ಚಿತ್ರ ಕಥೆ (ಅಥವಾ ಇನ್ಯಾವುದಾದರೂ ಒಳ್ಳೇ ಪುಸ್ತಕ) ಇದೆ ಎಂಬುದನ್ನು ಸದ್ದಿಲ್ಲದೇ ತಪಾಸಣೆ ಮಾಡಿ, ಅಲ್ಲೇ ಎಲ್ಲಾದರೂ ಮೂಲೆ ಸೇರಿ ಓದುತ್ತಾ ಕುಳಿತುಕೊಳ್ಳುತ್ತಿದ್ದೆ. ಎಷ್ಟು ಕೂಗಿದರೂ, ಓ ಎನ್ನದೇ ಇರುತ್ತಿದ್ದೆ ಎನ್ನುವ ದೂರು ನನ್ನ ಮೇಲಿತ್ತು. ಅದರಿಂದ ನನಗೇನೂ ಕೊರಗಿರಲಿಲ್ಲ
ಈಗ ಮೂರು ದಶಕಗಳ ನಂತರ: ಎಷ್ಟು ಕೂಗಿದರೂ ಓ ಎನ್ನುವುದಿಲ್ಲ ಎಂದು ನನ್ನ ಮಗನನ್ನು ಆಗಾಗ ಬೈಯುತ್ತಿರುತ್ತೇನೆ. ಆದರೆ ಅವನ ಪುಸ್ತಕ ಪ್ರೀತಿ ನೋಡಿ ನನಗೆ ಒಳಗೇ ಸಂತೋಷವಾಗುತ್ತೆ, ಮತ್ತೆ ಹಳೆಯ ನೆನಪುಗಳು ಮರುಕಳಿಸುತ್ತೆ, ಅನ್ನೋದನ್ನ ಅವನಿಗೆ ಇನ್ನೂ ಬಿಡಿಸಿ ಹೇಳಿಲ್ಲ. ಅದರ ಮಟ್ಟಿಗೆ ನಾನು ಖಂಡಿತ ಕೊರಗಲಾರೆ
ಅಂದಹಾಗೆ, ಕನ್ನಡದ ಎಷ್ಟೋ ಅಮರ ಚಿತ್ರ ಕಥೆಗಳ narrative ಬರೆದವರು ಶಿವರಾಮ ಕಾರಂತರು ಅನ್ನುವುದು ನನ್ನ ನೆನಪು. ನಿಜ ಹೇಳಬೇಕೆಂದರೆ, ಐದನೆ ತರಗತಿಯ ತನಕ ಇಂಗ್ಲಿಷ್ ಕಲಿಯದ ನನಗೆ ಯಾವತ್ತೂ ಇಂಗ್ಲಿಷ್ ನ ಅಮರ ಚಿತ್ರ ಕಥೆಗಳು ಹಿಡಿಸಲೇ ಇಲ್ಲ. ಹಳೇ ಅಭ್ಯಾಸಗಳನ್ನು ತೊಡೆಯುವುದು ಕಷ್ಟ. ಅಲ್ಲವೇ?
-ಹಂಸಾನಂದಿ
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಉತ್ತಮ ಬರಹ ಎಂದು ಕೇಳಿ ಖುಷಿಯಾಯ್ತು. ನನಗೆ ಇದು ಉತ್ತಮವಾಗಿರಬಹುದು ಅನಿಸಿರಲಿಲ್ಲ. ಏನೋ ಸುಮ್ಮನೆ ಹಾಗೆ ಬರೆದೆ.
ಮೊದಲು ಇಂಗ್ಲೀಷಿನಲ್ಲಿ ಬರೆದಿದ್ದನ್ನು ಕನ್ನಡದಲ್ಲಿ ಮತ್ತೆ ಬರೆದದ್ದು. ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಬಹುಶಃ ಇನ್ನು ಮುಂದೆ ಹೀಗೇ ಮಾಡಬೇಕು ಅನ್ಸತ್ತೆ (thought process ಇಂಗ್ಲೀಷಿನಲ್ಲೇ usually).
ಭಾರತ ಭಾರತಿ ಪುಸ್ತಕ ಸಂಪದ ಮಾಲಿಕೆಯ ಬಗ್ಗೆ ಹೆಚ್ಚು ತಿಳಿದಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳುತ್ತೀರಾ? "ಇದು ನಮ್ಮ ಭಾರತ" ಅಂತ ಬರುತ್ತಿತ್ತಲ್ಲ, ಅದು ಇದೇನಾ? ಒಮ್ಮೆ ಕಾಮೆಂಟೊಂದರಲ್ಲಿ ಈ ಬಗ್ಗೆ ಬರೆದಿದ್ದೆ.
interesting! ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದವರು ಯಾರಾದರೂ ಕೊಡುತ್ತೀರ?
ನನಗೆ ಅನಿಸಿದಂತೆ ಇಂಗ್ಲೀಷಿನಲ್ಲಿ narrative ತುಂಬಾ ಸಿಂಪಲ್ ಮಾಡಲು ಹೋಗಿ ಕೆಡಿಸಿದ್ದಾರೆ ಎಂಬುದು. ಆದರೂ ಈ ಪುಸ್ತಕಗಳ ಮಟ್ಟಿಗೆ ಇನ್ಯಾವುದೂ ಹೋಗಿಲ್ಲದರಿಂದ ಇವುಗಳ ಮೌಲ್ಯ ಇರುವಂತದ್ದೇ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಪಾರದರ್ಶಕ ಪ್ಲಾಸ್ಟಿಕ್ ಹಾಕಿದರೆ ಪಿನ್ನು ಹೊಡೆಯಬೇಕು ಅಥವ ಸೆಲ್ಲೋ ಟೇಪು ಹಚ್ಚಬೇಕು. ಇವೆರಡೂ ಪುಸ್ತಕವನ್ನು ಹಾಳು ಮಾಡುತ್ತದೆ ಅಲ್ವ? ಹಿಂದೊಮ್ಮೆ ಪ್ರಿಂಟಿಂಗ್ ಪ್ರೆಸ್ಸಿಗೆ ಕೊಟ್ಟು ಇದ್ದ ಎಲ್ಲ ಕಾಮಿಕ್ ಪುಸ್ತಕಗಳನ್ನೂ ಬೈಂಡ್ ಮಾಡಿಸಿಟ್ಟಿದ್ದೆ. ಅದೂ ಏನೋ ಅತ್ತಿತ್ತ ಕಟ್ ಮಾಡಿ ಹಾಳುಮಾಡಿದ್ದರು. ಈಗ ಯಾವ ಪುಸ್ತಕವನ್ನೂ ಬೈಂಡ್ ಮಾಡುವ ಗೋಜಿಗೆ ಹೋಗೋದಿಲ್ಲ. ತಗೊಳ್ಳುವಾಗಲೇ ಹಾರ್ಡ್ ಬೌಂಡ್ ತಗೊಳ್ಳೋಕೆ ಪ್ರಯತ್ನಿಸೋದು!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಒಂದು ರೀತೀಲಿ ನಿಮ್ಮ ಕಥೆಯೇ ನನ್ನ ಕಥೆ ಕೂಡ. ಯಾವುದರಿಂದಲೋ ದೂರ ಓಡೋದಕ್ಕೆ ಮತ್ತೊಂದರ ಶರಣು ಹೋದಂತೆ. ಕಾಲೇಜಿನಲ್ಲಿ ಅದೃಷ್ಟಕ್ಕೆ ಅದು ಪುಸ್ತಕವಾಗಿದ್ದು ಒಳ್ಳೆಯದು. ಇಲ್ಲದಿದ್ದರೆ ಸಿಗರೇಟು ಸೇದುತ್ತ ಸ್ನೇಹಿತರೊಂದಿಗೆ ತಿರುಗಾಡುತ್ತಿದ್ದೆನೇನೊ (ನಮ್ಮಣ್ಣ ಹಾಗೇ ಮಾಡುತ್ತಿದ್ದ - ಈಗ ಸಿಗರೇಟು ಕಡಿಮೆ ಮಾಡಿದ್ದಾನೆ)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಬೇಸಿಗೆ ರಜಾ ಅಂದ್ರೆ ಅಮರ ಚಿತ್ರಕಥೆ, ದಿನಕ್ಕೊಂದು ಕಥೆ, ಬಾಲಮಂಗಳ, ಚಂದಮಾಮದ ಹಳೇ ಸಂಚಿಕೆಗಳು, ಮಾವಿನಹಣ್ಣು! ಹಣ್ಣು ತೊಳೆದು ತಟ್ಟೇಲಿಟ್ಟುಕೊಂಡು ಪುಸ್ತಕ ಹಿಡಿದು ಕೂತ್ರೆ ಊಟ-ನಿದ್ದೆ ಯಾವ್ದೂ ಬೇಕಾಗ್ತಿರ್ಲಿಲ್ಲ! ನಮ್ಮನೇಲಿ ಅಪ್ಪ-ಅಮ್ಮ ಇಬ್ರೂ ಪುಸ್ತಕಪ್ರೇಮಿಗಳಾದ್ರಿಂದ ಬೇರೆ ಯಾವ್ದಕ್ಕೆ ಇಲ್ಲ ಅಂದ್ರೂ ಪುಸ್ತಕಗಳಿಗೆ ಮಾತ್ರ ಇಲ್ಲ ಅಂತಿರಲಿಲ್ಲ. ಆದ್ರೆ ನನ್ನ್ ಪುಟ್ಟ ತಮ್ಮನ ಸ್ಕೆಚ್ ಪೆನ್ ಭರಾಟೆಯಿಂದ ಪುಸ್ತಕಗಳನ್ನ ರಕ್ಷಿಸೋ ಮಹತ್ಕಾರ್ಯ ಮಾತ್ರ ನನ್ನ್ ಕೈಲಿ ಆಗ್ತಿರಲಿಲ್ಲ:)) ಮೊನ್ನೆ ಗೆಳತಿಯ ಹತ್ರ ಜಯದೇವನ ಅಷ್ಟಪದಿಯ ಬಗ್ಗೆ ಮಾತಾಡ್ತಾ ಅವನು ಹುಟ್ಟಿದ ಊರಿನ್ ಹೆಸ್ರು ನಂಗೆ ಗೊತ್ತಾಗಿದ್ದು ಅಮರಚಿತ್ರ ಕಥೆಯಿಂದ ಅಂದೆ. ಆಗ ಬಿಚ್ಚಿಕೋತು ನೋಡಿ ನಾವಿಬ್ರೂ ಓದಿದ್ ಅಮರಚಿತ್ರಕಥೆ ಟೈಟಲ್ಸ್ ಪಟ್ಟಿ!! ನಮ್ಮ ಸಂಸ್ಕೃತಿಯ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿದ್ರೆ, ಆಸಕ್ತಿ ಮೂಡಿದ್ರೆ ಅದಕ್ಕೆ ಮುಖ್ಯ ಕಾರಣ ಅಮರಚಿತ್ರಕಥೆ ಅನ್ಸುತ್ತೆ.
ಹಂಸಾನಂದಿಯವ್ರು ಹೇಳಿದ್ ಹಾಗೆ ನಂಗೂ ಯಾಕೋ ಇಂಗ್ಲಿಷ್ ಆವೃತ್ತಿಗಳು ಅಷ್ಟಾಗಿ ಹತ್ತಿರವಾಗ್ಲಿಲ್ಲ - ಮೊದಲು ಕನ್ನಡದಲ್ಲಿ ಓದೋಕೆ ಷುರು ಮಾಡಿದ್ದಕ್ಕೋ ಏನೊ, ಆ ಕತೆಗಳಿಗೆ ಕನ್ನಡವೇ ಸರಿ ಅನ್ನಿಸಿಬಿಡ್ತಿತ್ತು!
ಇಂದಿನ ಮಕ್ಕಳ ’ಪುಸ್ತಕಪ್ರೀತಿ’ಯ ಬಗ್ಗೆ ನೀವು ಹೇಳಿರೋ ಮಾತು ನಿಜ. ಮನೆಯ ಮಕ್ಕಳ ಕೈಗೆ ಪುಸ್ತಕ ತಂದಿಟ್ಟು ನಾನೂ ನಿರಾಸೆ ಅನುಭವಿಸಿದ್ದೀನಿ:)) ತಪ್ಪು ಅವರದ್ದಲ್ಲ, ಜವಾಬ್ದಾರಿ ನಮ್ಮ ಮೇಲಿರೋದು.. ಏನಾದ್ರೂ ಮಾಡ್ಬೇಕು!
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಮನೆಯಲ್ಲಿ ಸಣ್ಣವರಿಂದ ಪುಸ್ತಕಗಳನ್ನು ರಕ್ಷಿಸುವುದು ಕಷ್ಟವೇ.
ನಮ್ಮ ಅಣ್ಣನ ಮಗನಿಗೆ ಓದಲು ಇಟ್ಟುಕೊಂಡ ಪುಸ್ತಕದಲ್ಲಿ ಪೆನ್ನು ಹಿಡಿದು ಗೀಚಬಾರದು ಎಂದು ಹೇಳಿಕೊಟ್ಟಿದ್ದೀನಿ. ನಮ್ಮ ಅಣ್ಣ ದೊಡ್ಡವನಾದರೂ ಗೀಚುತ್ತಿದ್ದ ಇವ ಗೀಚೋದಿಲ್ಲ. ಈಗ ಪುಸ್ತಕಗಳನ್ನು ನೀಟಾಗಿ ಇಟ್ಟುಕೋ ಅಂತ ಆಗೀಗ ಹೇಳುತ್ತಿರುತ್ತೇನೆ, ಸ್ವಲ್ಪ ಕಲೆತಿದ್ದಾನೆ, ನಿಧಾನಕ್ಕೆ ಕಲೀತಾನೆ ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಹರಿ,
ಈ ನಿಮ್ಮ ಬರಹಕ್ಕೆ ಬಂದ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು. ಎಷ್ಟು ಜನರ ನೆನಪುಗಳನ್ನು ಕೆದಕಿತಲ್ಲ! ಒಂದು ತಲೆಮಾರಿಗೇ ಸಂತಸ ತಂದು ಕೊಟ್ಟ ಅಮರ ಚಿತ್ರ ಕತೆಯ ಮಹತ್ವ ಕಡಿಮೆಯೇನಲ್ಲ.
ಆದರೆ, ಈಗಿನ ಮಕ್ಕಳ ಬಾಲ್ಯದ ಬಗ್ಗೆ ಅಷ್ಟೇನೂ ಕೊರಗಬೇಕಿಲ್ಲ ಅನಿಸುತ್ತದೆ. ಏಕೆಂದರೆ, ಮಕ್ಕಳ ಮನಸ್ಸಿನ ಅದ್ಭುತ ಲೋಕ ಅಷ್ಟು ಸುಲಭದಲ್ಲಿ ದೊಡ್ಡವರಿಗೆ ಗೊತ್ತಾಗುವುದಿಲ್ಲ ಎಂದು ಸಣ್ಣವನಿದ್ದಾಗ ನನಗನಿಸಿತ್ತು!
ಹರಿಗೊಂದು ಪಿಸುಮಾತು: ಸಂಪದಿಗರೆಲ್ಲರ ನಾಸ್ಟಾಲ್ಜಿಯ ನೋಡಿ ಸಣ್ಣಗೆ ನಗುವೂ ಬಂತು
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಅನಿವಾಸಿ,
ನಿಮ್ಮ ಕಡೆಯ ಮಾತು ನೆನಪಿನಲ್ಲಿಡಬೇಕಾದ್ದೇ ! ಮಕ್ಕಳ ಕಲ್ಪನಾ ಲೋಕದ ಹರಹು ಬಹಳ್ ದೊಡ್ಡದಾಗಿರುತ್ತೆ. ಆದರೆ, ಒಂದೇ ಕೊರತೆ ಎಂದರೆ, ಟಿವಿಯ ತೆರೆಯ ಮೇಲೆ ಕಾಣೋದನ್ನು ನೋಡುವಾಗ ಒಂದೇ ಸಾಧ್ಯತೆ, ಆದರೆ ಅದೇ ಕಥೆಯನ್ನು ಓದುವಾಗ, ಅದಕ್ಕೆ ಅವರವರ ಭಾವಕ್ಕೆ ತಕ್ಕಂತಹ ನೂರಾರು ಸಾಧ್ಯತೆಗಳಿರುತ್ತವೆ. ಕೆಲವು ಪುಸ್ತಕಗಳು ಯಶಸ್ವಿಯಾಗುವುದಕ್ಕೂ, ಅದರ ಮೇಲೆ ಆಧಾರಿತ ಚಿತ್ರಗಳು ಅಂತಹ ಪ್ರಭಾವ ಬೀರದಿರುವುದಕ್ಕೂ ಅದೇ ಕಾರಣ ಎಂದು ನನ್ನನಿಸಿಕೆ. ಚಿತ್ರ,ನಾಟಕ ನಿರ್ದೇಶಕರಾದ ನೀವು ಇದರ ಬಗ್ಗೆ ಇನ್ನೂ ಹೆಚ್ಚಿನ ಬೆಳಕು ಚೆಲ್ಲಬಲ್ಲಿರಿ ಎಂದುಕೊಂಡಿದ್ದೇನೆ.
ನನ್ನ ಮಗನಿಗೂ ನನ್ನ ರೀತಿಯ ಅಭಿಪ್ರಾಯವೇ ಇದೆ ಎನ್ನಿಸುತ್ತೆ - ಹ್ಯಾರಿ ಪಾಟರ್ ಚಿತ್ರಗಳು ಪುಸ್ತಕದ ನೂರರಲ್ಲಿ ಒಂದರಷ್ಟೂ ಚೆನ್ನಾಗಿಲ್ಲ ಅಂದ :೦)
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ನಿಜ. ಕಾರಂತರ 'ಬೆಟ್ಟದ ಜೀವ'ದಲ್ಲಿನ ಮಲೆನಾಡು, "ಮಲೆಗಳಲ್ಲಿ..."ಯ ಮಲೆನಾಡು, ಹ್ಯಾರಿ ಪಾಟರ್ ನಲ್ಲಿ ಹಾಗ್ವರ್ಟ್ಸ್, ಲಾರ್ಡ್ ಆಫ್ ದಿ ರಿಂಗ್ಸ್ ನಲ್ಲಿ ಹಾಬ್ಬಿಟಾನ್, ಮಿನೆಸ್ಥಲಿಸ್, ಗಾಂಡೊರ್, ನಾರ್ನಿಯಾದ ಮಾಯಾಜಗತ್ತು ಪುಸ್ತಕದಲ್ಲಿ ಓದುವಾಗ ನಮ್ಮದೇ ಕಲ್ಪನೆಯ ಜಗತ್ತು. ಸಿನಿಮಾದಲ್ಲಿ ತೋರಿಸುವಾಗ ಹಲವೊಮ್ಮೆ ಹತಾಶೆ ಆಗುವುದುಂಟು. ಕಲ್ಪನೆಗೆ ಬೌಂಡರಿ ಇಲ್ಲ, ಸಿನಿಮಾಕ್ಕೆ ಬೌಂಡ್ಸು, ಲಿಮಿಟ್ಟು, ಬಜೆಟ್ಟು ಎಲ್ಲ ಇದೆಯಲ್ಲ
ಲಾರ್ಡ್ ಆಫ್ ದಿ ರಿಂಗ್ಸ್ ಮೊದಲ ಬಾರಿ ಸಿನಿಮಾ ಮಾಧ್ಯಮದಲ್ಲಿ ನೋಡಿದಾಗ ಬೇಸರವಾಗಿತ್ತು. ನಂತರ ಹಲವಾರು ಬಾರಿ ಮತ್ತೆ ಮತ್ತೆ ನೋಡಿ adaptationಉಗಳಲ್ಲಿ ಇರುವುದರಲ್ಲಿ ಇವರ ಕೆಲಸವೇ ಅಧ್ಭುತ ಅಂತನ್ನಿಸಿತು. ಹ್ಯಾರಿ ಪಾಟರ್ ಚಿತ್ರಗಳು ತುಂಬ ಕೆಟ್ಟದಾಗಿವೆ. ಪುಸ್ತಕ ಓದಿ ಸಿನಿಮಾ ನೋಡಿದವರಿಗೆ ಸಿಕ್ಕಾಪಟ್ಟೆ ಬೇಸರವಾಗತ್ತೆ. ಮೊದಲ ಮತ್ತು ಎರಡನೆಯ ಸಂಚಿಕೆಗಳು ಪರವಾಗಿಲ್ಲ ಎಂಬಂತಿದ್ವು. ಅಲ್ಲಿಂದ ಬಂದವೆಲ್ಲ ತುಂಬಾ ಸಾಧಾರಣ adaptationಗಳು.
ಇದೇ ವಿಷಯವಾಗಿ ಮಾತನಾಡುವಾಗ (ಕನ್ನಡದ contextನಲ್ಲಿ) ನನಗೆ ಗಿರೀಶ್ ಕಾಸರವಳ್ಳಿಯವರ "ದ್ವೀಪ" ಮಾತ್ರ (ನಾ.ಡಿಸೋಜರ) ಮೂಲ ಕಥೆಗಿಂತ ಉತ್ತಮವಾಗಿ ಸ್ಕ್ರೀನಿಗೆ ಬಂದದ್ದು ಅನ್ನಿಸಿದ್ದು. ಹೋದ ವರ್ಷ ನೋಡಿದ ಸಿನಿಮಾ "The Painted Veil" ಕೂಡ ಹೀಗೆಯೇ - ಕಾದಂಬರಿ ಮುಂಚೆ ಓದಿದ್ದೆ, ಸಿನಿಮಾ ಅಧ್ಭುತವಾಗಿದೆ ಅನಿಸಿತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಅನಿವಾಸಿ,
ಅದು observation, ಜೊತೆಗೊಂದು conclusion ಅಷ್ಟೆ!
ನನ್ನ ನೆನಪಿನಲ್ಲಿ ಸುತ್ತು ಹೊಡೆದದ್ದು ಎಲ್ಲರ ನೆನಪನ್ನೂ ಕೆದಕಿತು ಅನ್ಸತ್ತೆ. ಇಷ್ಟೊಂದು ಜನ ಸಂಪದಿಗರು ಇದಕ್ಕೆ relate ಮಾಡ್ಕೋತಾರೆ ಅಂತ ಎಣಿಸಿರಲಿಲ್ಲ, ಪ್ರತಿಕ್ರಿಯೆಗಳು ನನಗೂ ಖುಷಿ ತಂದಿತು. ಹೀಗೆಲ್ಲ proactive ಆಗಿ ಪ್ರತಿಕ್ರಿಯೆಗಳು ಬರ್ತಾ ಇದ್ರೆ ನಾವು ಏಪ್ರಿಲ್ ೧ಕ್ಕೆ ಫೂಲ್ ಮಾಡುವುದನ್ನು ಕೈ ಬಿಡೋದಕ್ಕೆ ಸಿದ್ಧ ಅಂತ ಡಿಕ್ಲೇರ್ ಮಾಡಿಬಿಡೋಣೇನ್ರಿ?
ಅದಿರಲಿ, ಕೊರಗು ಅಂತೆಲ್ಲ ಯಾಕ್ರಿ ಅನಿಸಿತು ನಿಮಗೆ?
ಜುಲೈಗೆ ಸಂಪದ ಪ್ರಾರಂಭವಾಗಿ ೩ ವರ್ಷ. ಸಂಪದದ ಮೊದಲ ದಿನಗಳೂ ಈಗ ನಾಸ್ಟಾಲ್ಜಿಯ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಯಾವುಯಾವುದೋ ಹುರುಪಲ್ಲಿ ಹಾಗೇನಾದರೂ ಮಾಡಗೀಡಿ ಬಿಟ್ಟೀರಿ... ಚಿವುಟೋದು, ಕಚಗುಳಿ ಕೊಡೋದು ಅವೆಲ್ಲಾ ತಬ್ಬೋದು, ಜಗಳ ಆಡೋದರಷ್ಟೇ ಇರಬೇಕಾದ್ದು
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಸ್ವಲ್ಪ ಟೀಮ್ ಸ್ಪಿರಿಟ್ ತೋರಿಸುತ್ತೀರ ಅನ್ಕೊಂಡಿದ್ದೆ. ಇರಲಿ ಬಿಡಿ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಅಮರ ಚಿತ್ರ ಕತೆ ನನಗೆ ತುಸು ದುಬಾರಿ, ಸಲೀಸಾಗಿ ಸಿಕ್ತಿರಲಿಲ್ಲ..
ನಾವೇನಿದ್ರು ಬಾಲಮಂಗಳ ಚಂಪಕ...
ಆದ್ರೂ ನಮ್ಮೂರಿನ ಮಹಿಳಾ ಸಮಾಜದ ಲಯಿಬ್ರರಿಯಲ್ಲಿ ಈ ಹೊತ್ತಗೆಗಳನ್ನ ಓದಿದ್ದು ನೆನೆಪಿದೆ...
ನನ್ನ ಅಚ್ಚುಮೆಚ್ಚು ಕುಂಬಕರ್ಣನ ಚಿತ್ರ ಇದ್ದುದು.
ಬೆಂಗಳೂರಲ್ಲಿ ಈಗಲೂ ಕೆಲವೊಮ್ಮೆ ಬಾಲಮಂಗಳ ಚಿತ್ರಕತೆ ನಾವ್ ಓದೋದುಂಟು.. !!
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಕುಂಬಕರ್ಣನ ಚಿತ್ರ ಇರೋದು ಅಚ್ಚುಮೆಚ್ಚು ಯಾಕಿರಬಹುದು?
ಬಾಲಮಂಗಳದಲ್ಲಿ "ಡಿಂಗ" ಈಗಲೂ ಇದಾನಾ/ಇದೆಯಾ? ಇನ್ನೊಂದು ಕಥೆ ಇರುತ್ತಿತ್ತಲ್ಲ - ಗುರುಗಳು ಶಕ್ತಿಮದ್ದು ತಯಾರಿಸುತ್ತಿದ್ದರು - ಹುಡುಗನೊಬ್ಬ ಅದನ್ನು ಕುಡಿದು ಸೂಪರ್ ಹ್ಯೂಮನ್ ಆಗುತ್ತಿದ್ದುದು (Asterix ರೀತಿ). ಈಗಲೂ ಬರುತ್ತಿದೆಯಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಬಹಳ ಸೊಗಸಾದ ಲೇಖನ. ನಾನೂ ಕೂಡ ಅಮರ ಚಿತ್ರ ಕಥೆ ಫ್ಯಾನ್. ೨ ಕ್ಲಾಸ್ ನಲ್ಲಿ ಇದ್ದಾಗ ಅಮ್ಮ ಒಂದ ಸಲ ೨ ಪುಸ್ತಕ ಸುಮ್ಮನೆ ಕೊಡ್ಸಿದ್ದ್ರು. ಅದು ಅವರ ಜಾಣ್ಮೆ. ಓದು ಅಂತಾನು ಹೇಳಲಿಲ್ಲ. ಆಮೇಲೆ ಬಿಡಿ - ಅಪ್ಪ ಅಮ್ಮ ನನಗೆ ತಿಂಗಳಿಗೆ ಇಷ್ಟೇ ಅಂತ budget ಹಾಕ್ ಬೇಕಾಯ್ತು. ಅಮರ ಚಿತ್ರ ಕಥೆ, ಚಂದಾಮಾಮ, ಪುಟಾಣಿ, ಇಂದ್ರಜಾಲ ಎಲ್ಲ ಓದಿದ್ದೆ ಓದಿದ್ದು. ಬಹಳ ಉಪಯೋಗ ಆಯ್ತು. ಪುಸ್ತಕ ಓದೋ hobby ಇದ್ರೆ boredom ಅನ್ನೋದೇ ಇಲ್ಲ.
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಧನ್ಯವಾದ, ಇಂದ್ರಜಾಲ ಕೂಡ ಕನ್ನಡದಲ್ಲಿ ಬರುತ್ತಿತ್ತಲ್ವ? ಫ್ಯಾಂಟಮ್, ಮಾಂಡ್ರೇಕ್, ಲೋಥರ್ ಮುಂತಾದವು? (ಪ್ರತಿ ಕಾಮಿಕ್ ಕೊನೆಯಲ್ಲಿ ಮೊದ್ದುಮಣಿ, ಅಥವ ಚಾಕಿ ಅನ್ನೋ ಪುಟ್ಟ ಕಾಮಿಕ್ ಕೂಡ ಸೇರಿಸಿರುತ್ತಿದ್ದರು).
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಹರಿಯವರಿಗೆ,
ನಮಸ್ಕಾರ. ನೀವು ಇಷ್ಟೊಂದು ಸೊಗಸಾಗಿ ಬರೀತೀರಿ ಅಂತ ಗೊತ್ತೇ ಇರಲಿಲ್ಲ!
ನಿಮ್ಮ ಲೇಖನ ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ ಸಂತೋಷವಾಯಿತು.
ನನ್ನ ಚಿಕ್ಕಂದಿನಲ್ಲಿ ನಾನೂ ಸಹ ಅಮರ ಚಿತ್ರ ಕಥೆಗಳನ್ನು ಓದುತ್ತಿದ್ದೆನಾದರೂ, ನನಗೇಕೋ ಅದರ ಗೀಳು ಹತ್ತಿಕೊಳ್ಳಲೇ ಇಲ್ಲ. ಚಿತ್ರ ಸಹಿತ ಕಾಮಿಕ್ಸ್ ಬುಕ್ಕುಗಳಿಗಿಂತ, ಚಿತ್ರವಿಲ್ಲದ ಅಥವಾ ಅಲ್ಲೊಂದು ಇಲ್ಲೊಂದು ಚಿತ್ರಗಳಿದ್ದ ಪುಸ್ತಕಗಳೇ ನನಗೆ ಪ್ರಿಯವೆನ್ನಿಸುತ್ತಿದ್ದವು. ಅನುಪಮ ನಿರಂಜನರ ದಿನಕ್ಕೊಂದು ಕಥೆಯ ಹನ್ನೆರಡೂ ಸಂಚಿಕೆಗೆಳು ನನ್ನಲ್ಲಿದ್ದವು. ಈಗ ಅದೇ ಕಥೆಗಳನ್ನು ನನ್ನ ಮಕ್ಕಳಿಗಾಗಿ ಮಲಗುವ ಮುನ್ನ ಓದುತ್ತಿರುತ್ತೇನೆ.
ಅಮರ ಚಿತ್ರ ಕಥೆ, ಚಂದಮಾಮ, ಟಿಂಕಲ್, ದಿನಕ್ಕೊಂದು ಕಥೆ, ಬಾಲ ಮಂಗಳ ಇವುಗಳನ್ನು ಹಲವರು ತಮ್ಮ ಪ್ರತಿಕ್ರಿಯೆಗಳಲ್ಲಿ ಪ್ರಸ್ತಾಪಿಸಿರುವುದು ಓದಿದೆ. ಆದರೆ ಯಾಕೋ ಯಾರೂ "ಬಾಲ ಮಿತ್ರ"ದ ಹೆಸರನ್ನು ನೆನಪಿಸಿಕೊಂಡೇ ಇಲ್ಲವಲ್ಲ... ಅದನ್ನು ಯಾರೂ ಓದುತ್ತಲೇ ಇರಲಿಲ್ಲವೇ? ಬಹುಷ: ನೀವುಗಳು ಓದು ಕಲಿತು ಪುಸ್ತಕ ಕೈಹಿಡಿಯುವ ಸಮಯಕ್ಕೆ ಮುನ್ನವೇ ಅದು ಕಣ್ಣು ಮುಚ್ಚಿರಬೇಕು.
ಬಾಲ್ಯದ ಓದಿನ ವಿಚಾರವಾದ್ದರಿಂದ ಪ್ರಸ್ತಾಪಿಸುತ್ತೇನೆ: ನನಗೆ ಬಾಲ್ಯದಲ್ಲಿ ಅತ್ಯಂತ ಮೆಚ್ಚುಗೆಯಾದ ಕಥೆಗಳೆಂದರೆ, ಡಾ.ರಾಜಶೇಖರ ಭೂಸನೂರುಮಠ ಬರೆಯುತ್ತಿದ್ದ ವೈಜ್ಞಾನಿಕ ಕಥೆಗಳು. ಚಂದಮಾಮ, ಬಾಲಮಿತ್ರದ ಕಥೆಗಳಿಗಿಂತ, ಮಯೂರದಲ್ಲಿ ಪ್ರಕಟವಾಗುತ್ತಿದ್ದ ಅವರ ಕತೆಗಳನ್ನು ಅತ್ಯಂತ ಉತ್ಸುಕತೆಯಿಂದ ಓದುತ್ತಿದ್ದೆ; ಪೂರ್ತಿ ಅರ್ಥವಾಗದಿದ್ದರೂ!
ವಂದನೆಗಳೊಂದಿಗೆ,
ಶೇಷಾದ್ರಿ
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಥ್ಯಾಂಕ್ಯೂ, ಥ್ಯಾಂಕ್ಯೂ!
"ಇಷ್ಟೊಂದು ಸೊಗಸಾಗಿ ಬರೀತೀರಿ" ಎಂದು ನೀವು ಬರೆದದ್ದು ಓದಿ "ಅಷ್ಟೊಂದು ಚೆನ್ನಾಗಿ ಬರೀತೀನಾ?" ಎಂದು ನನಗೆ ನಾನೇ ಪ್ರಶ್ನೆ ಹಾಕಿಕೊಂಡು ಮತ್ತೆ ಒಂದೆರಡು ಸಾರಿ ನಾ ಬರೆದದ್ದನ್ನೇ ಓದಿ ನೋಡಿವಂತಾಯಿತು.
ಈಗ ಸಮಯ ಮಾಡಿಕೊಂಡು ಒಂದೊಂದಾಗಿ ಎಲ್ಲ ಪ್ರತಿಕ್ರಿಯೆಗಳಿಗೂ ನನ್ನ ಪ್ರತಿಕ್ರಿಯೆ ಹಾಕಿ ಥ್ಯಾಂಕ್ಯೂ ಹೇಳುತ್ತಿರುವೆ. ಇಷ್ಟೊಂದು ಪ್ರತಿಕ್ರಿಯೆಗಳನ್ನು ಖಂಡಿತ ಎಣಿಸಿರಲಿಲ್ಲ.
ಬಾಲಮಿತ್ರ ಓದಿದ ನೆನಪಿದೆ. ನಾವುಗಳು ಓದುವಷ್ಟರಲ್ಲಿ ಬಹುಶಃ ಅದು ಕಣ್ಣು ಮುಚ್ಚುತ್ತಿತ್ತೇನೋ... ಅಷ್ಟಾಗಿ ಸಿಗುತ್ತಿರಲಿಲ್ಲ. ಪರಿಚಯವಿಲ್ಲದೆ ಇದರ ಬಗ್ಗೆ ಆಸಕ್ತಿವಹಿಸಿದ್ದಿಲ್ಲ ಅನ್ಸತ್ತೆ, ಲೈಬ್ರೆರಿಗಳಲ್ಲೂ ಇವು ಕಣ್ಣಿಗೆ ಬಿದ್ದ ನೆನಪಿಲ್ಲ.
ಅಲ್ಲೊಂದು ಇಲ್ಲೊಂದು ಚಿತ್ರಗಳಿರುವ ಪುಸ್ತಕಗಳು ಎಂದಾಗ ನನಗೆ ಶಾಲೆಯಲ್ಲಿ ಓದಲು ಸಿಗುತ್ತಿದ್ದ Illustrated Classics ಪುಸ್ತಕಗಳ ನೆನಪಾಯ್ತು ಮಾಬಿ ಡಿಕ್, ದಿ ಇನ್ವಿಸಿಬಲ್ ಮ್ಯಾನ್, ಡೇವಿಡ್ ಕಾಪರ್ಫೀಲ್ಡ್, . ನಾಡ್ಡಿ ಕೂಡ ಹೀಗೆಯೇ ಪುಸ್ತಕರೂಪದಲ್ಲೂ ಬರುತ್ತಿತ್ತು ಮುಂಚೆ.
ಇನ್ನು sci-fi! ಕನ್ನಡದಲ್ಲಿ ಸೈ-ಫಿ ಬರಹಗಾರರು ಯಾರು ಯಾರು ಅಂತ ಸಂಪದದಲ್ಲೇ ಒಮ್ಮೆ ಚರ್ಚೆಯಾಗಿತ್ತು. ಬಹಳಷ್ಟು ಜನ ರಾಜಶೇಖರ ಭೂಸನೂರುಮಠರವನ್ನು ನೆನಪಿಸಿಕೊಂಡಿದ್ದರು. ನನಗೆ ಪೇಪರಿನವರು ಒಂದು ಸಾರಿ ಕೇಳಿದ್ರು ಕನ್ನಡದಲ್ಲಿ ಸೈ-ಫಿ ಬರೆಯುವವರು ನಿಮಗೆ ಯಾರಾದ್ರೂ ಗೊತ್ತಿದ್ರೆ ತಿಳಿಸಿ ಅಂತ - ನಾನು ನಮ್ಮ ಮಾಮನವರಿಗೆ ಕೇಳಿ ಒಂದೆರಡು ಹೆಸರುಗಳನ್ನು ಅವರಿಗೆ ಕೊಟ್ಟಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಲೇಖನ ಚಿಂತನೀಯವಾಗಿದೆ. ಇವತ್ತಿನ ವಿದ್ಯಾವಂತ ಮಂದಿಯಲ್ಲಿ ಪುರಾಣಗಳನ್ನು ಮೂದಲಿಕೆ ಮಾಡೋ ಟ್ರೆಂಡ್ ಬೆಳೆದುಬಿಟ್ಟಿದೆ! ಆದರೆ ಪುರಾಣಕಥೆಗಳೊಳಗೆ ಅನೇಕ ಜೀವನ ಮೌಲ್ಯಗಳಡಗಿರುವುದು ಸುಳ್ಳಲ್ಲ. ಅಂದಹಾಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಡೋದು ತುಂಬಾ ಒಳ್ಳೆ ಪ್ರಯತ್ನ
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ನಿಮ್ಮ ನೆನಪಿನ ಬುತ್ತಿಯನ್ನು ಎಲ್ಲರಿಗೆ ಉಣಬಡಿಸಿದ್ದಕ್ಕೆ ಹೆನ್ನನ್ನಿ.
ನನಗಿಷ್ಟವಾದ ಪುಸ್ತಕ ಚಂಪಕ ಮತ್ತು ಪಂಚತಂತ್ರದ ಕಥಗಳು.
ನಿಕಲೋಡಿಯನ್, ಕಾರ್ಟೂನ್ ನೆಟವರ್ಕ,ಪೊಗೊ ಇನ್ನಿತರ ಚಾನಲ್ ಗಳನ್ನು ನೋಡುವ (ಅ)ಭಾಗ್ಯ ನನಗಿರಲಿಲ್ಲ.
ನಾನು ನಮ್ಮಜ್ಜಿ ಊರಿಗೆ ಹೋದಾಗ ಅಲ್ಲಿ ತರಿಸುತ್ತಿದ್ದರು..ಈಗಲೂ ಸಹ ಎಲ್ಲಿಯಾದರೂ ಪ್ರಯಾಣ ಹೊರಟರೆ ಜೊತೆಗೊಂದು ಚಂಪಕನೋ ಅಥವಾ ಬಾಲಮಂಗಳನೋ ಹಿಡಿದಿರುತ್ತೇನೆ..
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಪಂಚತಂತ್ರದ ಕಥೆಗಳು - ಪ್ರಕಟಣೆ ಯಾರದ್ದು? ಈ ಕುರಿತು ಸುಮಾರು ಪುಸ್ತಕಗಳು ಬಂದಿವೆ, ಬರುತ್ತಲೂ ಇವೆ. ಯಾವುದೂ authentic ಅನ್ನಿಸೋದೇ ಇಲ್ಲ. ಕಟ್ಟುಕಥೆ ಸುಮಾರು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಪುರಾಣಗಳನ್ನು ರಿಲೀಜಿಯಸ್ ಆಗಿ ತಗೊಂಡ್ರೆ ಮೂದಲಿಕೆಯಾಗಬಹುದು. ಪುರಾಣಕಥೆಗಳನ್ನು ಓದಲು ಪ್ರೋತ್ಸಾಹಿಸುವ ಟ್ರೆಂಡ್ ಇದೆಯೆಂಬುದು ನನಗನ್ನಿಸೋದಿಲ್ಲ. ಈಗೀಗ ದೇಶದಿಂದ ದೂರ ಹೋದವರಲ್ಲಿ ಪುರಾಣಗಳ ಬಗ್ಗೆ, ದೇಶದ ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ತಿಳಿಸುವ ಆಸಕ್ತಿ ಹೆಚ್ಚುತ್ತಿರಬಹುದು. ನಮ್ಮ ದೇಶದೊಳಗೆ ಅದು ಹೆಚ್ಚಾಗಿ ಇದ್ದಂತಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಎಚ್ಪಿ.ಪಿ.ಎನ್ ರವರೆ
ಒಮ್ಮೆ ನನ್ನ ಬಾಲ್ಯ ನೆನಪಿಗೆ ಬಂತು
ಹಸಿವಿಗಿಂತ ಹೆಚ್ಚು ಓದುವ ಹಂಬಲವಿರುವ ನನ್ಗೆ ಬಾಲ್ಯದಲ್ಲಿ ಪುಸ್ತಕ ಕೊಂಡುಕೊಳ್ಳದಷ್ಟು ಹಣಕ್ಕೆ ಪರದಾಟ ನಮ್ಮ ಮನೆಯಲ್ಲಿ
ಧಾರವಾಡ ಬಸಪ್ಪನ ಕಟ್ಟೆ ಎನ್ನುವ ಊರಿನಲ್ಲಿ ಒಂದು ಲೈಬ್ರೆರಿ ಇತ್ತು ಅಲ್ಲಿ ಬೇಸಿಗೆಯಲ್ಲಿ ದಿನಗಟ್ಟಲೇ ಕುಳಿತು ಓದುತ್ತಿದ್ದದ್ದು ಇನ್ನೂ ನೆನಪಿದೆ. ಸಂಜೆ ಶಾಲೆ ಬಿಟ್ಟೊಡನೆ ಎಲ್ಲರೂ ಆಟವಾಡಲು ಓಡುತಿದ್ದರೆ ನಮ್ಮದೊಂದು ಗ್ಯಾಂಗ್ ಆ ಲೈಬ್ರೆರಿಯಲ್ಲಿ ಹಾಜಾರು
. ಹಾಗೆ ಓದಿದ ಕೆಲವೊಂದು ಕತೆಗಳು ಈಗಲೂ ಮನಸಿನಲ್ಲಿವೆ . ಅಗ ಬಾಲಮಂಗಳ, ಚಂದಮಾಮ . ಪೂಪ್ ಕಾಡಿನಲ್ಲಿ ಪಾಪು. ಸಂಪೂರ್ಣ ರಾಮಾಯಣ, ಚಂಪಕ ಅಬ್ಬ ಒಂದೇ ಎರೆಡೆ .
ನಿಜವಾಗಲೂ ನಾವು ಓದಿದಷ್ಟನ್ನು ನಮ್ಮ ಮಕ್ಕಳು ಖಂಡಿತಾ ಓದಲಾರವು . (ಪುಸ್ತಕವನ್ನು
ಟಿವಿ , ಕಂಪ್ಯೂಟರನ ಹಾವಳಿಯಲ್ಲೂ ನಮ್ಮ ಮುಂದಿನ ಪೀಳಿಗೆ ನಮ್ಮ ಪರಂಪರೆಯನ್ನು ತಿಳಿಸುವ ಗುರ್ತರ ಜವಾಬ್ದಾರೆ ನಮ್ಮ ದಾಗಿವೆ.
ರೂಪ
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಪೂಪ್ ಕಾಡಿನಲ್ಲಿ ಪಾಪು? ಕೇಳಿರಲಿಲ್ಲ!
ಇರಿ, ಕಂಪ್ಯೂಟರ್ ಹಾವಳಿಯನ್ನೇ ಈ ಜೆನರೇಶನ್ನಿನ ಕನ್ನಡ ಮಕ್ಕಳಿಗಾಗಿ ಸದುಪಯೋಗಪಡಿಸಿಕೊಳ್ಳೋಣವಂತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ತುಂಬ ಜನರ ಮನಸ್ಸಿನ ಭಾವನೆಗಳಿಗೆ ಒಳ್ಳೆ ರೂಪ ಕೊಟ್ಟಿದ್ದೀರಿ. ನಾನೂ ಚಂದಮಾಮದಿಂದ ಸುರುಮಾಡಿ ಮಕ್ಕಳಿಗಾಗಿದ್ದ ಕೆಲವು ಪುಸ್ತಕಗಳು (ನಮ್ಮ ಹಳ್ಳಿ ಶಾಲೆಯಲ್ಲಿದ್ದವು - ’ನಡಿ ಕುಂಬಳವೇ ಟರ್ರಾ ಪುರ್ರಾ’ ಇತ್ಯಾದಿ), ಅ.ನ.ಕೃ., ತ.ರಾ.ಸು., ಶಿವರಾಮ ಕಾರಂತ, ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು, James Hadley Chase, Perry Mason ಗಳ ಮೂಲಕ ಓದುವ ’ಹುಚ್ಚು’ ಬೆಳೆಸಿಕೊಂಡವನು. ಮೊದಲು ಯಾವಾಗಲೋ ಓದಿದ ಕೆಲವು ಪುಸ್ತಕಗಳನ್ನು ಈಗ ಇನ್ನೊಮ್ಮೆ ಓದುವಾಗ ಬೇರೆಯದೇ ಅರ್ಥ ಕಾಣುತ್ತೆ. (ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮುಖ್ಯವಾಗಿ).
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ವಾವ್, ಎಂಥಾ ಸೊಗಸಿನ ಪುಸ್ತಕಗಳು.
ಇನ್ನೊಂದು ಪುಸ್ತಕ, "ಬಾಲವಿಜ್ಞಾನ" ಅಂತ ಬರ್ತಿತ್ತು. ವಿಜ್ಞಾನ ಪರಿಷತ್ ನವರ ಪ್ರಕಟಣೆ ಅನ್ನಿಸುತ್ತೆ. ಒಳ್ಳೊಳ್ಳೆ ಪುಟ್ಟ ಪುಟ್ಟ ಪ್ರಯೋಗಗಳನ್ನು ಕೊಡ್ತಿದ್ರು.
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು