ಉತ್ತರ ಕರ್ನಾಟಕದ ಕಟಿರೊಟ್ಟಿ
ಉತ್ತರ ಕರ್ನಾಟಕದ ಭಾಷೆಯಂತೆಯೇ ಅಲ್ಲಿಯ ಊಟವೂ ವೈಷಿಷ್ಟವಾದುದು. ಇಲ್ಲಿಯ ವೈವಿಧ್ಯತೆಗೆ ಮಿತಿ ಇಲ್ಲ.
ಊರಿನಲ್ಲಿ ನಡೆಯುವ ಕಾರಣಗಳಲ್ಲಿ ಊಟದ ನೋಟವೇ ಬಲು ಚಂದ. ಊಟ ಬಲು ಆನಂದ.
ಮದುವೆ,ಮುಂಜಿ,ನಾಮಕರಣ, ಕುಬುಸ (ಸೀಮಂತ) ಇತ್ಯಾದಿ ಸಂಭ್ರಮದ ದಿನಗಳಿಗೆ ಇಲ್ಲಿ ಕಾರಣಗಳು ಎನ್ನುತ್ತರೆ. 'ನಮ್ಮ ಮನಿಯ ಕಾರಣಕ್ಕೆ ,ಬಿನ್ನ ಕೊಡಲಿಕ್ಕೆ ಬಂದೀನಿ' ಎಂದು ನಿಮ್ಮ ನೆರೆಯಾತ ಹೇಳಿದರೆ ಆತ ತನ್ನ ಮನೆಯಲ್ಲಿ ಏನೋ ಕಾರ್ಯಕೃಮ ಇಟ್ಟುಕೊಂಡಿದ್ದು ಊಟಕ್ಕೆ ನಿಮ್ಮನ್ನು ಅಹ್ವಾನಿಸುತ್ತಿದ್ದಾನೆ(ಬಿನ್ನವಿಸಿಕೊಳ್ಳುತಿದ್ದಾನೆ?) ಎಂದು ತಿಳಿದುಕೊಳ್ಳಬೇಕು.
ಇಲ್ಲಿ ಭೋಜನ ಎಂದರೆ ಹೊಟ್ಟೆ ತುಂಬಲೇ ಬೇಕು. ಕಾಟಾಚಾರಕ್ಕೆ ಊಟವಲ್ಲ.ಕೆಲವರ್ಷಗಳ ಮೊದಲು
ಊಟದಲ್ಲಿ ಬಹು ಬಗೆ ಇರಲಿಲ್ಲ. ಬಡವರ ಮನೆಯಲ್ಲಾದರೆ ಹೊಟ್ಟೆ ತುಂಬುವಷ್ಟು ಗೋದಿಹುಗ್ಗಿ,
ಹೊಟ್ಟೆ ತುಂಬಿದಮೇಲೋಂದಿಷ್ಟು ಅನ್ನ.(ಇಲ್ಲಿ ಅನ್ನವು ದಿನನಿತ್ಯದ ತಿನಿಸು
ಅಲ್ಲ.)ಅದಕ್ಕೆ ಜೊತೆಯಾಗಿ ಗಂಗಾಳ (ಪ್ಲೇಟ್) ದಲ್ಲಿ ಹಿಡಿಯುವಷ್ಟು ಆಮ್ರ
(ಬೀಳ್ಳುಳ್ಳಿ, ಶುಂಠಿ, ಮೆಣಸಿನಕಾಯಿಗಳನ್ನು ಇತಿಮಿತಿಯಿಲ್ಲದೇ ಹಾಕಿ ರುಚಿಗೆ
ತಕ್ಕಷ್ಟು ಉಪ್ಪು ಸೇರಿಸಿ ಮಾಡಿದ ಕಟ್ಟಿನ ಸಾರು /ತಿಳಿಸಾರು)ಇದ್ದರೆ ಮುಗಿಯಿತು. ದವಳವರ / ಉಳ್ಳವರ
(ಸಿರಿವಂತರ) ಮನೆಗಳಲ್ಲಿ ಹೊಟ್ಟೆತುಂಬ ಹೋಳಿಗೆ ಅಥವಾ ಬೋಂದಿಕಾಳು ಇರುತ್ತಿದ್ದವು.ಈಗ
ಮನಸ್ಥಿತಿ ಬದಲಾಗಿದೆ. ಸಿಹಿಯ ಜಾಗವನ್ನು ಖಾರವು ಆಕೃಮಿಸಿಕೊಂಡಿದೆ.ಬಡವರ ಮನೆಯಲ್ಲಾದರೆ
ಮೊಳಕೆಕಟ್ಟಿದ ಕಾಳಿನ ಪಲ್ಯ,ಕಾರೆಳ್ಳು ಹಾಕಿದ ಬದನೇಕಾಯಿ ಪಲ್ಯ ಆಮೇಲೆ ಮಾಮೂಲಾಗಿ
ಅನ್ನಾ ಆಮ್ರ.ಹೆಸರಿಗೊಂದು ಸ್ವೀಟು. ಸಾಹುಕಾರನಮನೆಯಲ್ಲಿ (ಯಾರು ಯಾವಾಗಲೂ ಶುಬ್ರವಾದ ಬಿಳಿ ಧೋತರ ಉಡುತ್ತಾರೆಯೋ ಅವರೆಲ್ಲಾ ಸಾಹುಕಾರಗಳೇ) ಘಟ್ಟಿ ಪೀಟಲಾ (ಕಡಲೇಹಿಟ್ಟು ಉಪಯೋಗಿಸಿಮಾಡಿದ ವ್ಯಂಜನ), ಮಿರ್ಚಿಭಜಿ, ಕಾಂದಾಬಜಿ, ಶೇಂಗಾಹಿಂಡಿ, ಗೂರೆಳ್ಲುಚಟ್ನು, ಹಲವುಬಗೆಯ ಉಪ್ಪಿನಕಾಯಿಗಳು ಪಚಡಿ((ಸಲಾಡ) ಹಾಗೂ ಮಟರ್ಪನೀರ್, ಪಾಲಕ್ಪನೀರ್,ಭೇಡಿಮಸಾಲಾ ಇತ್ಯಾದಿಗಳಜೊತೆಗೆ ಘಟ್ಟಿ ಮೊಸರು ಬೆಣ್ಣೆಗಳೂ ಇರಬಹುದು. ಇವುಗಳು
ಸೈಡ್ಸ್. ನಿಜವಾದ ಮೇನ್ ಪುಡ್ ಬೇರೆಯೇ ಇದೆ.ಕಟಿರೊಟ್ಟಿ ಮತ್ತು ಬಿಸಿಬಿಸಿ ಚಪಾತಿ ಅಥವಾ
ಪೂರಿ ಇಲ್ಲಿಯ ಮೇನ್ ಪುಡ್. ಕಟಿರೊಟ್ಟಿಯನ್ನು ಮೊದಲೇ ತಯಾರಿಸಿ
ಇಟ್ಟುಕೊಳ್ಳಬಹುದು.ಮಾರುಕಟ್ಟೆಯಲ್ಲೂ ಅದು ದೊರಕುತ್ತದೆ. ಆದರೆ ಹೋಳಿಗೆ ಚಪಾತಿ
ಪೂರಿಗಳು ಬಿಸಿ ಬಿಸಿಯಾಗಿಯೇ ಇರಬೇಕು.
ಒಟ್ಟಿಗೆ
ಊಟಕ್ಕೆ ಕುಳಿತ ಅಥವಾ ನಿಂತ( ಬಫೆ ಊಟ) ನೂರಾರು ಮಂದಿಗೆ ಹೀಗೆ ಬಿಸಿ ಬಿಸಿ ತಯಾರಿಸಿ
ಬಡಿಸುವುದು ಸಿಲಭದ ಕೆಲಸವಲ್ಲ. ಹಳ್ಳಿಗಳಲ್ಲಿ ಕಾರ್ಯಕರ್ತರು ಸದಾ
ಸಿದ್ದವಾಗಿರುತ್ತಾರೆ.(ಫೋಟೋ ನೋಡಿ)ನಗರದಲ್ಲಾದರೆ ಅಡಿಗೆ ಕೂಲಿಗ್ಗಳೂ ಸಿಗುತ್ತಾರೆ.
ಫೋಟೋಗಳನ್ನು
ನೋಡಿ, ಚಪಾತಿ ಹಾಗೂ ಅದನ್ನ ಮಾಡುವ ಹಂಚಿನ ಗಾತ್ರವನ್ನು ಗಮನಿಸಿ, ಇಷ್ಟು ದೊಡ್ಡ
ಚಪಾತಿಯನ್ನು ಹೇಗೆ ತಿನ್ನುವುದಪ್ಪಾ ಎಂದು ದಡ್ಡ ಪ್ರಶ್ನೆಯನ್ನು ಕೇಳಬೇಡಿರಿ,
ಬಡಿಸುವಾಗ ಇದನ್ನು ಚೂರು ಚೂರು ಮಾಡಿಯೇ ಗಡಿಸುತ್ತಾರೆ. ಒಂದು ಚಪಾತಿಯನ್ನು ೪ / ೮ /೧೬
ಅಥವಾ ಆದರ ಎರಡರಷ್ಟು ಭಾಗಮಾಡಿ ಬಡಿಸುತ್ತಾರೆ..ಅಳತೆ ಪಟ್ಟಿ ಹಿಡಿದುಕತ್ತರಿಸಿದಂತೆ
ನೀಟಾಗಿ ಇದು ಇರುತ್ತದೆ. ಬಫೆಗಳಲ್ಲಿ ಇದನ್ನು ಆಕರ್ಶಕವಾಗಿ ಒಪ್ಪ ಓರಣವಾಗಿ
ಜೋಡಿಸಿರುತ್ತಾರೆ. ಕುಳಿತು ಊಟ ಮಾಡುವವರಿಗೆ ಬೇಡಿದಷ್ಟು ನೀಡುತ್ತಾರೆ (ಕೇಳಿದಷ್ಟು ಬಡಿಸುತ್ತಾರೆ.) ಭಾವಿಸಿ ನೋಡಿ. ಚಪಾತಿ ಲಟ್ಟಸಲು ಲಟ್ಟಣಿಗೆ ಸಾಕಾಗದೆಂದು ಪಿ.ವಿ.ಸಿ. ಪೈಪನ್ನು ಬಳಸುತ್ತಿದ್ದಾರೆ. ಪೋಳ್ಪಾಟ್
(ಲಟ್ಟಿಸುವ ಮಣೆ) ಬದಲು ದೊಡ್ಡ ಡಬರಿಯ ಮುಚ್ಚಳವನ್ನು ಬಳಸುತ್ತಿದ್ದಾರೆ.
ಅಲ್ಲೇ ಸ್ವಲ್ಪ ಬಗ್ಗಿ ಉರಿಯುತ್ತಿರುವ ಸೌದೆ ಒಲೆಯನ್ನು ನೋಡಿ- ಹರಿಶ್ಚಂದ್ರ ಘಾಟಿನ ಚಿತಾಗಾರ ನೆನಪಿಗೆ ಬರುತ್ತಿದೆಯಾ?

- ishwar.shastri ರವರ ಬ್ಲಾಗ್
- Login or register to post comments
- 560 hits
- Email this blog




RSS:
ಪ್ರತಿಕ್ರಿಯೆಗಳು
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಮೊನ್ನೆ ಮೆಜೆಸ್ಟಿಕಲ್ಲಿರೋ ಕಾಮತ್ ಹೋಟಲಲ್ಲಿ ಮೊದಲಿಗೆ ಬಡಗುಕನ್ನಡದ ಊಟ ಉಂಡು ನಲಿವಾಯ್ತು..
ತುಂಬಾ ಚನ್ನಾಗಿರ್ತದೆ.
ಆದ್ರೆ ನಮಗೆ ಊಟ ಅಂದ್ರೆ ರಾಗಿಮುದ್ದೆ, ಇಲ್ವೇ ಅನ್ನ ಅಂತ ಆಗೋರಿದ್ರಿಂದ, ಆ ಊಟ ಸಿಕ್ಕಾಪಟ್ಟೆ ಬೇರೆ ತೆರ ಎಂಬಂತೆ ಕಾಣ್ತದೆ.
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ನಮ್ಮಲ್ಲಿ ಮಾಡೋ ಜೋಳದ ರೊಟ್ಟಿಗಳು ಸ್ವಲ್ಪ ದಪ್ಪವಾಗಿರುತ್ತವ. ಆದ್ರೆ ಈ ಉತ್ತರ ಕರ್ನಾಟಕದ ಮಂದಿಯ ರೊಟ್ಟಿ ಬಹಳ ತೆಳ್ಳಗೆ. ಅಲ್ಲದೆ ರೊಟ್ಟಿಗಳನ್ನು ಸುಟ್ಟು ಶೇಖರಿಸಿಡುವ ಬಗೆ ಅವರಿಗೆ ಗೊತ್ತು. ನಮ್ಮಲ್ಲಿನ ರೊಟ್ಟಿಗಲೋ ಅಂದಿಗಂದಿಗೆ ಅಷ್ಟೆ !..
ನಾನು ಊರಲ್ಲಿ ಇದ್ದಾಗ ಸೋಮವಾರದ ದಿನ ಬೆಳಿಗ್ಗೆ ( ವಾರದ ದಿನ!!) ಮಾತ್ರ ಈ ಜೋಳದ ರೊಟ್ಟಿ ಜೊತೆಗೆ ತರಕಾರಿ ಪಲ್ಯ ಗ್ಯಾರಂಟಿ . ಉಳಿದಂತೆ ಮುದ್ದೆ-ಅನ್ನ.
ನಮ್ಮ ಕಡೆ ಇರೋ ಒಂದು ಗಾದೆ ನೆನಪಾಗುತ್ತಿದೆ. " ಕಿಸಿಲಾರದವನಿಗೆ ಅಶಂಬ್ರ ಮುದ್ದೆ!" .. ಈ ಅಶಂಬ್ರ ಮುದ್ದೆ ಕಂಬಿನೆಶನ್ ಅಂತೂ ಬೊಂಬಾಟ್ !! ( ನನಗೆ!). ಇನ್ನು ನಾವು ಕರೆಯುವ ಹೆಸರು-ಮುದ್ದೆ ಅಂತೂ ಈ ಚಲನಚಿತ್ರ ಗಳಲ್ಲಿ ಬಸಾರು-ಮುದ್ದೆ ಅಂತಾ ಫೆಮಸ್ಸೋ - ಫೇಮಸ್ಸು!.
ಈ ರಾಜಾಜಿನಗರ, ವಿಜಯನಗರ ಗಳ ಸುತ್ತಮುತ್ತ ಅಂತೂ ನಿಮಗೆ ಬೇಕಾದಷ್ಟು ಉತ್ತರಕರ್ನಾಟಕದ ಊಟ ಸಿಗುವ ಮೆಸ್ಸುಗಳು ಸಿಗುತ್ತವೆ.
ಬೆಂಗಳೂರಿನ ಹೋಟೆಲ್ಲುಗಳಲ್ಲಿ ಸಿಗುವ ಊಟದಲ್ಲಿ ನಂಗೆ ತುಂಬಾ ಇಷ್ಟವಾಗುವುದು ಈ ರೊಟ್ಟಿ ಊಟವೇ!.
ಸವಿತೃ
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಬೆಂಗಳೂರೂ ಸೇರಿದಂತೆ ನಾನು ಅನಿವಾರ್ಯವಾದಾಗ ದಕ್ಷಿಣ ಕರ್ನಾಟಕದ ಹೋಟೇಲನಲ್ಲಿ (ಉಡಪೀ ಹೋಟೇಲಗಳೂ ಸೇರಿ) ಊಟ ಮಾಡಿದ್ದೇನೆ. ಅಲ್ಲಿ ನೀಡುವ ಚಪಾತಿ ಚಪಾತಿಯೋ ಬಾಳೇಹಣ್ಣಿನ ಹಪ್ಪಳವೂ ಗೊತ್ತಾಗುವುದಿಲ್ಲ. ಹೀಗಾಗಿ ನಾನು ಹೋಟೆಲ್ ನಲ್ಲಿ ಯಾವತ್ತೂ ಪುರಿ ಊಟವನ್ನೇ ಅಥವಾ ಕೇವಲ ಪುರಿಯನ್ನು ಮಾತ್ರ ತೆಗೆದುಕೊಳ್ಳುತೇನೆ. ನಾನು ಅನ್ನದ ಮಗನಾದರೂ ಊರನ್ನು ಬಿಟ್ಟನಂತರ ಜೋಳ ಗೋದಿ ರಾಗಿಗಳೇ ಮುಖ್ಯ ಆಹಾರಾವಾಗಿ ಅನ್ನ ಇದ್ದರೂ ನಡೆಯುತ್ತದೆ ಇಲ್ಲದಿದ್ದರೂ ತೊಂದರೆ ಇಲ್ಲ ಎನ್ನುವ ನಾನು ಹೆಂಡತಿ ಊರಿಗೆಹೋದರ ಅವಳು ಮರಳಿಬರುವವರೆಗೂ ತಿಂಗಳುಗಟ್ಟಲೆ ಸ್ವಯಂಪಾಕ ಮಾಡಿಕೊಂಡರೂ ಒಂದೇ ಒಂದು ದಿನ ಅನ್ನವನ್ನು ಬೇಯಿಸಿಕೊಳ್ಳುವವನಲ್ಲ.
ಸವಿತೃರವರೇ , ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಮಾಡಿದಬಗ್ಗೆ ಹೇಳಿರುವಿರಿ ನೀವು ಹೋದಲ್ಲಿ ನಾನು ಹೋಗಿದ್ದಿಲ್ಲ. ಆದರೆ ಮೆಜಿಸ್ಟಿಕ ಹಾಗೂ ಇನ್ನಿರರ ಕೆಲವು ಕಡೆಯ ಪ್ರಸಿದ್ಧ ಉತ್ತರ ಕರ್ನಾಟಕದ ಊಟಕ್ಕೆ ಗೆಳೆಯರ ಆಹ್ವಾನದ ಮೇಲೆ ಹೋಗಿದ್ದಿದೆ. ಗೆಳೆಯರು ರೊಟ್ಟಿಯನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿರುವಾಗ ನಾನು ಅದನ್ನು ಅನಿವಾರ್ಯವಾಗಿ ಬಾಯಿಗೆ ತುರುಕುತ್ತಿದ್ದೆ.ಗುಲುಬರ್ಗಾ ಬಿಜಾಪುರದ ರುಚಿಹತ್ತಿಸಿಕೊಂಡವರಿಗೆ ಬೆಂಗಳೂರು ಊಟ ಬಲು ಮೋಸ.
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಘಟ್ಟಿ ಪೀಟಲಾ - ಧುಣಕ , ಝುಣಕ ಅಂತಲೂ ಅನ್ನುತ್ತಾರೆ ಇದಕ್ಕೆ . ಮಾಡುವದು ಬಹಳ ಸುಲಭ ; ಒಗ್ಗರಣೆ ಮಾಡಿ ನೀರು ಹಾಕಿ ಕುದಿಯುತ್ತಿದ್ದಂತೆ ಕದಲೆಹಿಟ್ಟು ಹಕಿ , ಒಂದಿಷ್ತು ಖಾರಪುಡಿ , ಉಪ್ಪು ಹಾಕಿದರೆ ಆಗಿಬಿಟ್ಟಿತು , ನೀರಾಗಿದ್ದರೆ ಅನ್ನದ ಜತೆಯೂ ಬಳಸಬಹುದು .
ಗಟ್ಟಿಯಾದರೆ ರೊಟ್ಟಿ/ ಚಪಾತಿಗಳ ಜತೆಗೆ ಬಳಸಿ .
ಒಗ್ಗರಣೆ ಹಂತದಲ್ಲಿ ಈರುಳ್ಳಿ( ಉಳ್ಳಾಗಡ್ಡಿ) ಹಾಕಿದರೆ ಒಳ್ಳೇದು ,
ಖಾರಪುಡಿ ಬದಲು ಮೆಣಸಿನಕಾಯಿ ಹಾಕಬಹುದು .
ಒಂಟಿಯಾಗಿರುವವರಿಗೆ ಬಲು ಅನುಕೂಲ .
’ಕಾರ್ಯ’ - ಕಾರೇ , ಕಾರೇವು ಎಂದೂ ಅನ್ನುತ್ತಾರೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಘಟ್ಟಿ ಪೀಟಲಾ - ಧುಣಕ , ಝುಣಕ ಅಂತಲೂ ಅನ್ನುತ್ತಾರೆ ಇದಕ್ಕೆ . ಮಾಡುವದು ಬಹಳ ಸುಲಭ ; ಒಗ್ಗರಣೆ ಮಾಡಿ ನೀರು ಹಾಕಿ ಕುದಿಯುತ್ತಿದ್ದಂತೆ ಕದಲೆಹಿಟ್ಟು ಹಕಿ , ಒಂದಿಷ್ತು ಖಾರಪುಡಿ , ಉಪ್ಪು ಹಾಕಿದರೆ ಆಗಿಬಿಟ್ಟಿತು , ನೀರಾಗಿದ್ದರೆ ಅನ್ನದ ಜತೆಯೂ ಬಳಸಬಹುದು .
ಗಟ್ಟಿಯಾದರೆ ರೊಟ್ಟಿ/ ಚಪಾತಿಗಳ ಜತೆಗೆ ಬಳಸಿ .
ಒಗ್ಗರಣೆ ಹಂತದಲ್ಲಿ ಈರುಳ್ಳಿ( ಉಳ್ಳಾಗಡ್ಡಿ) ಹಾಕಿದರೆ ಒಳ್ಳೇದು ,
ಖಾರಪುಡಿ ಬದಲು ಮೆಣಸಿನಕಾಯಿ ಹಾಕಬಹುದು .
ಒಂಟಿಯಾಗಿರುವವರಿಗೆ ಬಲು ಅನುಕೂಲ .
ಮಹಾರಾಷ್ಟ್ರದಲ್ಲಿ ಅನೇಕ ಕಡೆ - ಝುಣಕಾ ಭಾಖರ ಹೆಸರಲ್ಲಿ ಹೊರಗಡೆಯೂ ಸಿಗುತ್ತದೆ .
’ಕಾರ್ಯ’ - ಕಾರೇ , ಕಾರೇವು ಎಂದೂ ಅನ್ನುತ್ತಾರೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಕ್ಯಾನ್ಸರ್ ಕಾರಕ ಕಟುಕುರೋಟಿ!
ಜೋಳದ ರೊಟ್ಟಿಯನ್ನು ಎರಡು ವಿಧದಲ್ಲಿ ಮಾಡುವರು. ತತ್ಕ್ಶಣ ಉಪಯೋಗಕ್ಕೆ ಮೃದುವಾದ ರೊತ್ತಿ. ದೀರ್ಘಕಾಲ ಸಂರಕ್ಷಿಸಿ ಉಪಯೋಗಿಸಲು ಬರುವಂತಹ ಕಟಿರೊಟ್ಟಿ ಇಲ್ಲವೇ ಕಟುಕು ರೋಟಿ! ಕಟುಕು ರೋಟಿಯ ದೀರ್ಘಕಾಲೀನ ಸೇವನೆ ಅನಾರೋಗ್ಯಕರ. ಇದು ಅನ್ನನಾಳ ಕ್ಯಾನ್ಸರ್ ಮುಂತಾದವಕ್ಕೆ ಎಡೆ ಕೊಡುತ್ತದೆ. ಈ ಮಾತಿಗ್ಗೆ ಪ್ರಾಯೋಗಿಕ ಪುರಾವೆಯಿದೆ.
- ನಾಸೋ
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಮಾಹಿತಿಗೆ ತುಂಬ ಧನ್ಯವಾದಗಳು ಡಾಕ್ಟರ್ರೇ ,
ಒಣ ರೊಟ್ಟಿಯ ಜತೆಗೆ ಬದವರು ತಿನ್ನುವ ಹಸಿ ಈರುಳ್ಳಿ ಮತ್ತು ಖಾರಪುಡಿ ಕ್ಯಾನ್ಸರ್ ಗೆ ಕಾರಣ ಅಂತ ಡಾಕ್ಯುಮೆಂಟರಿಯೊಂದರಲ್ಲಿ ನೋಡಿದ ನೆನಪಿದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಜೋಳದ ರೊಟ್ಟಿಯನ್ನು ದೀರ್ಘಕಾಲ ರಕ್ಷಿಸಿ ಇಟ್ಟಾಗ ಅದರ ಮೇಲೆ ಒಂದು ಜಾತಿಯ ಶಿಲೀಂದ್ರ ಬೆಳೆಯುತ್ತದೆ. ನಮ್ಮ ಬರಿಗಣ್ಣಿಗೆ ಇದು ಕಾಣುವುದಿಲ್ಲ. ವಿಶೇಷ ಬಣ್ಣ ಅಥವ ರುಚಿ ಇರುವುದಿಲ್ಲ. ಹಾಗಾಗಿ ಇದು ನಮ್ಮ ಗಮನಕ್ಕೆ ಬರುವುದಿಲ್ಲ. ಈ ಶಿಲೀಂದ್ರವು ಕ್ಯಾನ್ಸರಿಗೆ ಕಾರಣವಾಗುತ್ತದೆ.
- ನಾಸೋ
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಈ ವಿಷಯ ಹೇಳಿದ್ದಕ್ಕೆ ತ್ಯಾಂಕ್ಸ್ ಡಾಕ್ಟ್ರೇ ... ನಾನು, ಕಟಿ ರೊಟ್ಟಿ ಗಂಟಲಿನ ಒಳಗೋಡೆಗೆ ಚುಚ್ಚಿ ಕ್ಯಾನ್ಸರ್ ಗೆ ಕಾರಣ ಆಗುತ್ತೆ ಅಂದುಕೊಂಡಿದ್ದೆ ... ಈ ಕಟಿ ರೊಟ್ಟಿ ಸಹವಾಸ ಬೇಡ .. ಬಿಸಿ ರೊಟ್ಟಿನೇ ತಿನ್ನಿರಿ ಅಂತ ನಾನು ಇನ್ನು ಮೇಲೆ ಎಲ್ಲರಿಗೂ ಹೇಳ್ತಿನಿ ...
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಕ್ಯಾನ್ಸರ್ ಕಾರಕ ಕಟುಕುರೋಟಿ!ನಾಸೋಮೆಶ್ವರರ ಹೇಳಿಕೆಯನ್ನು ಒಪ್ಪಲೇಬೇಕಾಗಿದೆ.ಏಕೆಂದರೆ ಅದರಬಗ್ಗೆ ಪ್ರಾಯೋಗಿಕ ದಾಖಲೆಗಳು ಇರುವುದಾಗಿ ಅವರು ಹೇಳಿರುತ್ತಾರೆ.
ಸಂಶೋಧನೆಗಳಲ್ಲಿ ಹೆಚ್ಚಿನವು ಮೊದಲು ಕಳಸವಿಟ್ಟು ನಂತರ ಕಟ್ಟಿದ ಗೂಡಿಯಂತಿರುತ್ತದೆ. ಮೊದಲು ಗುರಿಯನ್ನು ನಿರ್ಧರಿಸಿಕೊಂಡು ಅನಂತರ ರಸ್ತೆಯನ್ನು ಆಯ್ದುಕೊಳ್ಳುವುದು. ಸಯಾಯಕವಾದ ದಾಖಲೆಗಳನ್ನು ಅಂಗೀಕರಿಸುವುದು. ತೋದರೆಕೊಡುವ ದಾಖಲೆಯನ್ನು ಮುಚ್ಚಿಡುವುದು.ಸಾಧ್ಯವಾದರೆ ನಾಶಮಾಡುವುದು. ಪರ ಹಾಗೂ ವಿರೋಧಿ ಲಾಭಿಗಳು ಸದಾ ಮಿಲಿಯಾಂತರ ಡಾಲರ್ ಗಳನ್ನು ಈ ಸಂಶೋಧನೆ ಎಂಬ ಭೋಗಸ್ ಕಾರ್ಯಾಚರಣೆಯ ಮೇಲೆ ಸುರಿಯುತ್ತವೆ. ಕಟಿರೊಟ್ಟಿಯ ವಿಷಯದಲ್ಲಿ ಪರ ವಿರೋಧಿ ಲಾಭಿ ಇರಲಿಕ್ಕಿಲ್ಲ.
ನಾನು ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಗ್ರಾಮಾತರ ಪ್ರದೇಶಗಳಲ್ಲಿ ಹಲವಾರು ವರ್ಷ ವಾಸವಾಗಿದ್ದವನು. ಕ್ಯಾನ್ಸರ್ ವಿಷಯದಲ್ಲಿ ಇವುಗಳಲ್ಲಿ ವ್ಯತ್ಯಾಸ ಇದೆ ಎಂದು ನನಗೆ ಅನ್ನಿಸಲಿಲ್ಲ. ಇದ್ದರೂ ಇರಬಹುದು. ಕಿದ್ಬಾಯಿ ಸಂಸ್ಥೆಯ ದಾಖಲೆಗಳು ಇದರ ಬಗ್ಗೆ ಪೂರಕವಾಗಿದೆಯೇ?
ದಾಖಲೆ ಸಂಗೃಹಕಾರನು ಎಷ್ಟು ಬುದ್ಧಿವಂತ/ಪ್ರಾಮಾಣಿಕ ? ಕ್ಯಾನ್ಸರ್ ರೋಗಿಯಾದವನಲ್ಲಿ ಉತ್ತರಕರ್ನಾಟಕದ ಊಟದ ಪದ್ದತಿಯಲ್ಲಿ ಅವನು ಬಳಸುವ ಖಾರ ಉಪ್ಪು ಹುಳಿಗಳ ಜೊತೆಗೆ ತಂಬಾಕು ಮದ್ಯಪಾನ.ಬಡತನ ಅವಿದ್ಯಾವಂತಿಕೆ. ಪರಿಸರ ಇತ್ಯಾದಿಗಳ ಬಗ್ಗೆಯೂ ಯೋಚಿಸಿದ್ದಾನೆಯೇ? ಸಾಧಾರಣವಾಗಿ ದೀರ್ಘಕಾಲ ಕಟಿರೊಟ್ಟಿ ತಿನ್ನುವ ಪರಿಪಾಠ ಅತ್ಯಂತ ಕಡಿಮೆ ಇತ್ತು. ಇದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕಿಂತ ದಕ್ಷಿಣದಲ್ಲೇ ಕಟಿರೊಟ್ಟಿಯ ಹಾವಳಿ ಜಾಸ್ಥಿ ಇದೆ. ನಿತ್ಯ ಬಳಕೆಯಲ್ಲಿ ಉತ್ತರದಲ್ಲಿ ಬಿಸಿರೊಟ್ಟಿಗಿರುವ ಪ್ರಾಧಾನ್ಯತೆ ಕಟಿರೊಟ್ಟಿಗೆ ಇಲ್ಲ.
ಅಂಕೆ ಸಂಖ್ಯೆ ಅಥವಾ ಗೌರವಾನ್ವಿತವಾಗಿ ಕರೆಯುವ ಸ್ಟ್ಯಾಟಿಸ್ಟಿಕ ಬಗೆ ವಿವರಣೆ ಹೀಗೂ ಇದೆ.-ಸ್ಟ್ಯಾಟಿಸ್ಥಿಕ್ ಎನ್ನುವುದು ಬಿಕನಿಯಂತೆ ಸಂಪೂರ್ಣವಾಗಿ ಎಲ್ಲಾ ಸತ್ಯವನ್ನು ತೆರೆದು ತೋರಿಸುತ್ತದೆ. ಆದರೆ ಗಮ್ಮತ್ತು ಇರುವುದು ಅದು ಮುಚ್ಚಿರುವ ಭಾಗದಲ್ಲಿ ಮಾತ್ರ!
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಈ ಬಗ್ಗೆ ಸಂಶೋಧನೆಯನ್ನು ನಾಡಿನ ಪ್ರಖ್ಯಾತ ರೋಗಶಾಸ್ಥ್ರಜ್ಞರಾದ (ಪೆಥಾಲಜಿಸ್ಟ್) ಡಾ.ಎಸ್.ಜೆ.ನಾಗಲೋಟಿಮಠ ಅವರು ಮಾಡಿದ್ದಾರೆ. ಅವರು ಉತ್ತರ ಕರ್ನಾಟಕದವರೇ ಆಗಿದ್ದು, ಸ್ವಯಂ ಸಂಶೋಧನೆಯಲ್ಲಿ ತೊಡಗಿ, ತಮ್ಮ ಮಾತಿಗೆ ಪುರಾವೆಯನ್ನು ಒದಗಿಸಿರುವರು. ಅನೇಕ ವೈದ್ಯಕೀಯ ಕಾರ್ಯಕ್ರಮಗಳಲ್ಲಿ ಈ ಬಗ್ಗೆ ಸಾರ್ವಜನಿಕ ತಿಳಿವಳಿಕೆಯನ್ನು ನೀಡಿರುವರು.
- ನಾಸೋ
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಈಶ್ವರರೆ, ನನಗೂ ಹಾಗೆ ಅನ್ನಿಸಿತು. ಆಹಾರದ ವಿಷಯದಲ್ಲಿ ಸಂಶೋಧನೆಗಳು ದಾರಿ ತಪ್ಪಿವೆ ಅನ್ನಿಸುತ್ತೆ. ಕಟಿರೊಟ್ಟಿಯಂತೆ ಬಹುತೇಕ ಓಣ ಆಹಾರ ಪದಾರ್ಥಗಳನ್ನು ಹೆಚ್ಚಿನ ದಿನವಿಡಬಾರದು ಎಂಬುದು ಸಾಮಾನ್ಯ ಪ್ರಜ್ಞೆ. ದೇಶದ ಯಾವದೋ ಮೂಲೆಯಲ್ಲಿ ತಯಾರದ ಹಾಗು ತಿಂಗಳುಗಟ್ಟಲೆ ಅಂಗಡಿಯಲ್ಲಿರುವ ಓಣ ಬಿಸ್ಕಿಟ್ ಗಳಾಗಲಿ ಹಾಗೂ ಮಳೆಗಾಲದಲ್ಲಿ ಕೆಲವೇ ದಿನಗಳಲ್ಲಿ ಸುಕ್ಷ್ಮಾಣುಗಳು ಬೆಳೆದು ಕೆಡುವ ಬ್ರೆಡ್ಡಿನ ಬಗ್ಗೆ ಇದೇ ಕಾಳಜಿ ಇರಬೇಕು. ಸಣ್ಣ ಊರುಗಳಿಗೂ ಬಂದಿರುವ retail chains ಎಂದೋ ಪ್ಯಾಕೇಜ್ ಮಾಡಿದ ಪದಾರ್ಥಗಳನ್ನೆ ಮಾರೋದು ಹೆಚ್ಚು. ತಾಜಾ ಆಹಾರ ಪದಾರ್ಥಗಳ ಬಗ್ಗೆ ನಮಗಿದ್ದ ಪ್ರಜ್ಞೆ ಕಡಿಮೆಯಾಗ್ತಿದೆ ಅನ್ನಿಸುತ್ತೆ.
ಹೋದ ವರ್ಷ coke/pepsi ತಂಪು ಪಾನೀಯಗಳಲ್ಲಿ ಕ್ರಿಮಿನಾಶಕಗಳಿವೆ ಎಂದು CSE ಬೊಬ್ಬೆ ಹೊಡೆಯಿತು. ವಾಸ್ತವವಾಗಿ ಯದ್ವಾ-ತದ್ವಾ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆಯಿಂದ ನಮ್ಮ ಕೆರೆ, ನದಿ, ಅಂತರ್ಜಲಗಳಲ್ಲಿ ಮಿತಿಮೀರಿದ ಕ್ರಿಮಿನಾಶಕಗಳ ಪ್ರಮಾಣವಿದೆ. ನಮ್ಮ ದೇಶ್ದಲ್ಲಿ coke/pepsi ಕುಡಿಯುವ ಜನರೆಷ್ಟು? ಯಾವದೇ ಫಿಲ್ಟರ್ ಬಳಸದೆ ಕಲುಷಿತ ನೀರನ್ನು ಕುಡಿಯುವ ಜನರೆಷ್ಟು ಎಂಬುದರ ಬಗ್ಗೆ ಹೆಚ್ಚಿನ ಜನ ತಲೆ ಕೆಡಿಸಿಕೊಳ್ಳಲಿಲ್ಲ.
ಒಂದೇ ಪದಾರ್ಥವನ್ನು ಮುಂದಿಟ್ಟುಕೊಂಡು ಅದರ ಅನುಕೂಲ ಅಥವಾ ಹಾನಿಗಳನ್ನು ಪಟ್ಟಿ ಮಾಡಬಹುದು. ಆದರೆ ಒಂದೇ ಪದಾರ್ಥವನ್ನು ನಾವು ಊಟವೆಂದು ಸೇವಿಸುವುದಿಲ್ಲವಲ್ಲ. ಕಟಿರೊಟ್ಟಿಯ ಜೊತೆಗೆ ಸೇವಿಸುವ ಖಾರದ ಚಟ್ನಿ, ಪಲ್ಯ, ಇತ್ಯಾದಿಗಳ ಒಟ್ಟಿನ ಪರಿಣಾಮವೇನು? ಹಾಲು, ಕಾಫಿ, ಟೀ, ಮತ್ತು ಮದ್ಯಪಾನಗಳ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳ ಬಗ್ಗೆ ದಿನನಿತ್ಯ ಸಂಶೋಧನೆಗಳು ಹೊರಬರುತ್ತವೆ. ಎಷ್ಟು ನಂಬೋದು? ಎಷ್ಟು ಬಿಡೋದು?
ವಾಸ್ತವವೇನೇ ಇರಲಿ, ನಾನು ನಂಬಿರೋದು - moderation is the key to a healthy diet.
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಆ ಚಪಾತಿ ನೋಡಿದ್ರೇ ಹಸಿವು ಹೆಚ್ಚಾಗುತ್ತೆ .... ಉತ್ತರ ಕರ್ನಾಡಿನ ಚೆಪಾತಿನೂ ವಿಸೇಸನೇ ... ಮಸ್ತ್ ಆಗಿರತ್ತೆ ... ಮೊನ್ನೆ ನಮ್ ಕಂಪನಿ ಕ್ಯಾಂಟೀನ್ ಒಂದರಲ್ಲಿ ಚೆಪಾತಿ ಹೆಸರಲ್ಲಿ ಎನೋ ಕೊಟ್ರು .. ಅದನ್ನು ಚೆಪಾತಿ ಅಂದ್ರೆ ಚೆಪಾತಿಗೇ ಅವಮಾನ .. ಹಂಗಿತ್ರಿ ಅದು
...