ನಾವಾಡುವ ನುಡಿ.....
ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |
ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ
ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |
ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.
ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.
ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.
ಚಿಂತೆ
ಚಿಂತೆಯ ಸಂತ್ಯಾಗ, ಸಿಗತಾರ ಎಲ್ಲಾರು,
ಅಲ್ಲಿಲ್ಲ ಬಡವ, ಶ್ರೀಪತಿ,
ಮೇಲು, ಕೀಳೆಂಬ
ಭೂತ ಪ್ರೇತದ ಭಾವನೆಗಳು.
ಇರುವುದು ಅದು ಬಹುದೂರ
ಇವುಗಳ ಒಡೆತನದಿಂದ
ಅದಕ್ಕಿಲ್ಲ ಗಡಿಗಳು
ಅಲ್ಲಿಲ್ಲ ಯಾವುದೇ ಧರ್ಮದ ಗುಡಿಗಳು
ಭಾರತ, ಲಂಕೆ, ಅಮೆರಿಕೆಗಿರುವಂತೆ
ಅದಕ್ಕಿಲ್ಲ ಮೋಹಕ ಕಡಲ ತೀರಗಳು
ಸೌರಮಂಡಲಕೆ ಸೂರ್ಯನಿರುವಂತೆ
ಬೆಳಕ ನೀಡಲು
ಅಲ್ಲಿಲ್ಲ ಯಾವುದೇ ತಾರೆಗಳು
ಬೇಕಿಲ್ಲ ಅಲ್ಲಿ ಹೋಗಲು ಯಾವುದೇ ಪಾಸ್ಪೋರ್ಟು
ಬಸ್ಸು, ರೈಲು ಬಂಡಿಗಳ ತಿಕೀಟು
ಎಚ್ಚರ!!!
ಒಮ್ಮೆ ಒಳಹೊಕ್ಕರಲ್ಲಿಗೆ
ಹಿಂದಿರುಗಿಬರಲು,
ಅಲ್ಲಿಲ್ಲ ಬಂಡಿ, ಬೈಸಿಕಲ್ಲು
ಟಾಕ್ಸಿ, ಆಟೋರಿಕ್ಷಾಗಳು,
ಏನೋ? ಕಷ್ಟಪಟ್ಟರೆ,
ಸಿಗಬಹುದಂತೆ
ಮನಸ್ಸೆಂಬ ಒಂದು ವಿಮಾನ.
ತಪ್ಪಿ ಅಲ್ಲೇನಾದರು, ಸಿಕ್ಕಿಬಿದ್ದರೆ
ದೇವರೇ!!!
ಕಡಲು, ಹೊಳೆಗಳ ಸುಳಿಯಲ್ಲಿ
ಸಿಕ್ಕಿಕೊಳ್ಳುವುದಕ್ಕಿಂತಲೂ ಬಲು ಭೀಕರ
ಆಗ, ಅದು ತೋರದಿರದು
ತನ್ನ ವಿಧ ವಿಧವಾದ
ಬಣ್ಣ ಬಣ್ಣದ ರೂಪಗಳ ಆಕಾರ
ಕಗ್ಗತ್ತಲ ಕೋಣೆಯೊಳಗಿರುವುದಕ್ಕಿಂತಲೂ
ಬಲು ಅಪಾಯಕರ.
ಮನ ಮುರ್ಕ ಚಿಂತೆ
ಮನೆ ಮುರ್ಕ ಚಿಂತೆ
ಸರ್ವೋದ್ಧಾರಕ ಚಿಂತೆ
ಸರ್ವ ವಿನಾಶಕವೂ ಅಹುದು
ಅಬ್ಬಾ!
ಇದೆಂತಾ ವಿಸ್ಮಯಕರ.
ಅದು ಏನೇ ಇರಲಿ
ಹರಿ-ಹರ, ಅಲ್ಲ, ಅಲ್ಲಮ, ಗೌತಮ, ಮಹವೀರ , ಏಸು
ಯಾರನ್ನಾದರೂ ಬೇಡಿ
ಇರಲೆನ್ನ ಮನ
ಚಿಂತೆಯಿಂ ಬಲು ದೂರ.....
- ಜಯಪ್ರಕಾಶ ನೇ ಶಿವಕವಿ

- jp.nevara ರವರ ಬ್ಲಾಗ್
- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: