ನಾವಾಡುವ ನುಡಿ.....
ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |
ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ
ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |
ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.
ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.
ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.
ಇಳೆಗಿಳಿದಿದೆ ನಾಕ
ಅದೋ, ಬಾಂದಳದಲಿ ಮಿನುಗುತ್ತಿದೆ
ಬಿಳಿ ಬೆಳ್ಳಿಯ ಚುಕ್ಕಿ,
ಬೆಳಗಾಯಿತು, ಬೆಳಕಾಯಿತು
ಎಂದುಲಿಯುತ್ತಿವೆ ಹಕ್ಕಿ.
ಕಪ್ಪಿದ್ದದು ಕೆಂಪಾಯಿತು
ಮೂಡಣದಂಗಳದಿ.
ರಂಗವಲ್ಲಿಯ ಕಂಡಾಯಿತು
ಮನೆ-ಮನೆಯಂಗಳದಿ.
ಎಳೆ ಕುಡಿಯಲಿ, ಗಿಡದೊಡಲಲಿ
ಹರಡಿದ ಇಬ್ಬನಿಯು.
ಕರಗುತ್ತಿವೆ ಎಳೆಬಿಸಿಲಿಗೆ
ಆ ಮುತ್ತಿನ ಹನಿ-ಹನಿಯು.
ಬಿರಿಯುತ್ತಿವೆ ಗಂಟಿಕ್ಕಿದ
ಮೊಗ್ಗವು ಮುನಿ ಮರೆತು.
ಹರಿಯುತ್ತಿದೆ ತಂಗಾಳಿಲಿ
ಹೂ-ಗಂಧವು ತಾ ಬೆರೆತು.
ಬೆಳ್ಳಕ್ಕಿಯು ಸಾಲುಗಟ್ಟಿ
ಹೊರಟಿದ್ದವು ವಲಸೆ.
ಏರುತ್ತಾ-ಇಳಿಯುತ್ತಾ ತೋರುತ್ತಿದ್ದವು
ತರ-ತರದ ವರಸೆ.
ಬೆಳ-ಬೆಳಗ್ಗೆ ಇಳೆಗಿಳಿದೆದೆ
ಆ ಹೊಸ ಹಸಿ ನಾಕ.
ಇದ ಕಂಡ ಕವಿಯಮನಸು
ಮಾತನಾಡದೆ ತಾನಾಯಿತು ಮೂಕ.
-- ಜಯಪ್ರಕಾಶ ನೇ ಶಿವಕವಿ

- jp.nevara ರವರ ಬ್ಲಾಗ್
- Login or register to post comments
- 454 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಇಳೆಗಿಳಿದಿದೆ ನಾಕ
ಮನಗಂಡ...
ಗುಡಿ ಗುಂಡಾರಗಳಲಿ
ಮೊಳಗಿದೆ ಗಂಟೆಯ ಸದ್ದು,
ದೇವರಿಗೆ ಮುಗಿಯ ಬಂದಿಹರು
ಮಂದಿ ಬೆಳಗಾಗೆ ಎದ್ದು,
ಹರಿಯಿಸಿ ರವಿ ತಾ ಬೆಳಕನು
ಹರಿದು ಹಾಕಿದ ಕತ್ತಲೆಯನು,
ಇದನವನು ಕಾಣುವನೋ ಕಾಣನೋ,
ಕವಿಯು ತಾ ಕಂಡು ಬೆರಗಾದನು.
ಹೆಂಗ್ ಐತ್ರಿ? ಕವಿಗಳೇ?
ಉ: ಇಳೆಗಿಳಿದಿದೆ ನಾಕ
ಭಾಳ ಛಲೋ ಅಯ್ ತ್ರೀ.
ಉ: ಇಳೆಗಿಳಿದಿದೆ ನಾಕ
ಇಬ್ರು ನಲುವಾಗೇ ಒರೆದಿದ್ದೀರಿ!!