ಕಲ್ಪನಾಲೋಕ
ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...
ಯುಗ ಯುಗಾದಿ ಕಳೆದರೂ
ಜಗಳ ಮರಳಿ ಬರುತಿದೆ
ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ!
ಇಲ್ಲಿ ಕೆಲವು ಬ್ಲಾಗಿಗರು ಕನ್ನಡಿಗರ ಮೇಲಿನ ತಮಿಳರ ಪುರಾತನ ಕ್ರೌರ್ಯಗಳನ್ನು ಪಟ್ಟಿ ಮಾಡಿದ್ದಾರೆ. ಮತ್ತೊಬ್ಬರು ತಮಿಳರ ದತ್ತು ಪುತ್ರ ರಜನಿಯನ್ನು ಬೆಂಬಲಿಸಿದ್ದಾರೆ. ಇದೆಲ್ಲ ಸರಿ, ಆದರೆ ಕನ್ನಡ-ತಮಿಳು ಜಗಳದಲ್ಲಿ ಇಬ್ಬರ ಕೂಸುಗಳೂ ಬಡವಾಗುವುದಿಲ್ಲವೆ? ಅದರ ಬಗ್ಗೆ ಯಾರು ಯೋಚಿಸಿತ್ತಿದ್ದಾರೆ? ದಿನನಿತ್ಯ ಕುಡಿಯುವ ನೀರಿಗೆ ಮೈಲಿಗಟ್ಟಲೆ ನಡೆಯುವ ಜನರಿಗೆ ಗಡಿ ವಿವಾದ ಕಟ್ಕೊಂಡು ಏನಾಗಬೇಕು ಸ್ವಾಮಿ?
ಹಳೆಯದೆಲ್ಲ ಮರೆತು, ಹೀಗೆ ಮಾಡಿದರೆ ಹೇಗೆ? ಅದೇನು ಯೋಜನೆ ಮಾಡ್ತಾರೋ, ಅದರ ಖರ್ಚು ಕರ್ನಾಟಕ-ತಮಿಳುನಾಡು ಅರ್ಧ-ಅರ್ಧ, ಅದರ ಫಲ ಅರ್ಧ-ಅರ್ಧ. ನಾನು ಇಬ್ಬರು ಮಕ್ಕಳ ತಾಯಿಯಾದ್ದರಿಂದ ನನ್ನ ತಲೆಗೆ ಹೊಳೆಯೋದು ಏನಿದ್ರೂ ಈ ತರಹದ ಸಿಂಪಲ್ ಸೊಲ್ಯೂಶನ್
ಖಂಡಿತ, ಆ ಭಾರತ ಮಾತೆಯೂ ಹೀಗೇನೇ ಯೋಚಿಸುತ್ತಿರುತ್ತಾಳೆ ಅಂತ ನನ್ನ ಊಹೆ. ಆದರೆ, ಏನು ಪ್ರಯೋಜನ? ಪಾಪ, ಭಾರತ ನಡೆಸೋ ಆ ಭಾರತ ಪಿತ ಹೇಗೆ ಯೋಚಿಸುತ್ತಾನೋ ಯಾರಿಗೆ ಗೊತ್ತು? ![]()

- kalpana ರವರ ಬ್ಲಾಗ್
- Login or register to post comments
- 438 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಯುಗ ಯುಗಾದಿ ಕಳೆದರೂ
ಕಲ್ಪನಾರವರೇ
ನಿಮ್ಮ ಸಿಂಪಲ್ ಸೊಲ್ಯೂಷನ್ ಮಕ್ಕಳು ದೊಡ್ಡವರಾದಾಗ ಅನ್ವಯಿಸುವುದಿಲ್ಲ.
ಅವರವರು ದುಡಿದದ್ದು ಅವರವ್ರಿಗೆ ಹಾಗೆ ಆಗ ಎರೆಡೂ ರಾಜ್ಯಗಳ ಪಾಲಿಗೆ ಬಂದದ್ದು ಆ ರಾಜ್ಯಗಳಿಗೆ ಮೀಸಲು.
ಮತ್ತೊಬ್ಬರ ಆಸ್ತಿಗೆ ನಾವು ಬಾಯಿ ಬಿಡುತ್ತಿಲ್ಲ. ನಮ್ಮ ಆಸ್ತಿ ನಮಗುಳಿದರೆ ಸಾಕು. ಅದಕ್ಕೆ ಈ ಹೋರಾಟ. ಹೊಗೆನಕಲ್ ನಡುಗಡ್ಡೆ ಕರ್ನಾಟಕ ರಾಜ್ಯದ ನೆಲವಾಗಿದ್ದು ಅದನ್ನು ಅವರು ಹೇಗೆ ಅತಿಕ್ರಮಣ ಮಾಡಲು ಬಿಡುವುದು?
ಪಕ್ಕದಮನೆಯವರ ಬಗ್ಗೆ ಎಷ್ಟೆ ಪ್ರೀತಿ ಇದ್ದರೂ ಅವರಿಗೆ ನಮ್ಮ ಮನೆಯನ್ನು ಅವರೆದೆಂದು ಹೇಗೆ ಕೊಡುವುದು ?
ಕನ್ನಡಿಗರ ಬಗ್ಗೆ ಕಟು ಹೇಳಿಕೆ ನೀಡಿ ಅವರನ್ನು ಕೆರಳಿಸುವ ಬುದ್ದಿ ಅವರಿಗೇಕೆ?
ರೂಪ
ಉ: ಯುಗ ಯುಗಾದಿ ಕಳೆದರೂ
ನಿಮ್ಮ ಬೆನ್ದನಿ ನಮ್ಮದು!
ಒಂದು ಸಂತಸ ಇಬ್ಬರು ಸಂಪದತಿಯರ ಮಾತುಕತೆಯ ನಿಬ್ಬರ, ಅಪರೂಪ..
ಇಬ್ಬರಿಗೂ ಹಿರಿನನ್ನಿ!
ಉ: ಯುಗ ಯುಗಾದಿ ಕಳೆದರೂ
ನನಗೇನೋ ಈ ಸಮಸ್ಯೆ ಪರಿಹಾರವಾಗುವ ಹಾಗೆ ಕಾಣುತ್ತಿಲ್ಲ. ಕನ್ನಡಿಗರೂ, ತಮಿಳರೂ ಒಮ್ಮತದಿಂದ ಒಪ್ಪುವ ನ್ಯಾಯಂಗ ವರದಿ ಬರುವ ವೇಳೆಗೆ ಎಷ್ಟು ಜನರು ಸಾವು, ನೋವನ್ನಪ್ಪಿರುತ್ತಾರೋ ಗೊತ್ತಿಲ್ಲ. ನಾನೇನೋ ಇಲ್ಲಿ ದೂರದಲ್ಲಿ ಕೂತು ಮಾತನಾಡುತ್ತಿದ್ದೇನೆ. ಅಲ್ಲಿನ ನೆಲದಲ್ಲಿದ್ದಿದ್ದರೆ ಬಹುಶಃ ನನ್ನಲ್ಲೂ ನಿಮ್ಮಷ್ಟೇ ಕೆಚ್ಚಿರುತ್ತಿತ್ತೇನೋ? ಈಗಂತೂ ಇದು ಮಕ್ಕಳ ಜಗಳದ ಹಾಗೇ ಅನ್ನಿಸುತ್ತೆ.
ಇರಲಿ ಬಿಡಿ. ಸಂಪದದಲ್ಲಿ ಬೇರೆ ಯಾವ ಹೊರನಾಡು ಕನ್ನಡಿಗರೂ ಈ ವಿಷಯದಲ್ಲಿ ಚಕಾರವೆತ್ತಿದ ಹಾಗಿಲ್ಲ. ನಾನೂ ಸಹ ಇದು ನನಗೆ ಅರ್ಥವಾಗದ ಅಥವಾ ನನ್ನ ಪ್ರತಿಕ್ರಿಯೆಗೆ ಬೆಲೆಯಿಲ್ಲದ ಸಮಸ್ಯೆ ಅಂತ ಸುಮ್ಮನಿದ್ದುಬಿಡುವುದೇ ಲೇಸು. ಏಕೆಂದರೆ, ಎಷ್ಟಾದರೂ ದಿನನಿತ್ಯ ಅಲ್ಲಿನ ನ್ಯಾಯ-ಅನ್ಯಾಯಗಳ ಜೊತೆ ಏಗುವವರು ನೀವುಗಳು ತಾನೇ? (ಇದು ದಯವಿಟ್ಟು ವ್ಯಂಗ್ಯವೆಂದು ತಿಳಿಯಬೇಡಿ, ನಿಜವಿಷಯ ಹೇಳಿದ್ದೇನೆ ಅಷ್ಟೇ)
ಉ: ಯುಗ ಯುಗಾದಿ ಕಳೆದರೂ
ಕಲ್ಪನಾರವರೇ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕಾವ್ಯವೇ ಇರುವಾಗ (ಮಹೇಶರವರೇ ಇದು ನನ್ನ ಸ್ವಂತದಲ್ಲ , ಕುವೆಂಪು ಅವರದು ಎಂದು ಹೇಳಿ ಮುಂದುವರೆಸುವೆ:))
ಎಲ್ಲೇ ಇದ್ದರೂ ಕನ್ನಡದಲ್ಲಿ ಕೀಲಿಸಿ ಖುಶಿಪಡುವ ನಿಮ್ಮ ಈ ಅಭಿಮಾನ ನಮ್ಮ ಕನ್ನಡಮ್ಮನ ಬೆನ್ನಿಗಿದ್ದರೇ ಸಾಕು.
ಅವಳ ಸಮಸ್ಯೆಗೆ ಪರಿಹಾರ ಕೊಡುವ ಹಕ್ಕು ಎಲ್ಲಾ ಕನ್ನಡಿಗರದ್ದಾಗಿದೆ. ಅದರ ಒಪ್ಪುತಪ್ಪಿನ ಪ್ರಶ್ನೆ ನಂತರದ್ದು
ನನ್ನ ಮುಂಚಿನ ಪ್ರತಿಕ್ರಿಯೆ ಇಂದನಿಮ್ಮ ಮನಸಿಗೇನಾದರೂ ನೋವಾಗಿದ್ದರೆ ಕ್ಷಮಿಸಿ. ಆ ಉದ್ದೇಶ ನನಗೆ ಖಂಡಿತ ಇರಲಿಲ್ಲ
ರೂಪ
ಉ: ಯುಗ ಯುಗಾದಿ ಕಳೆದರೂ
ಸಂಪದಿಗ ಸಂಪದತಿಯರು ಹಾಗೆಲ್ಲ ವಾದದ ಮಾತಿಗೆ ನೊಂದುಕೊಳ್ಳರು.. ಅಲಂ ವಿಷಾದೇಣ..!!
ಎಲ್ಲಾದರು ಇರು ಎಂತಾದರು ಎಂದೆಂದಿಗೂ ನೀ ಕನ್ನಡವಾಡ್ತಾರು.. ಆಗ ಕನ್ನಡವೇ ಸತ್ಯ ಕನ್ನಡವೇ ನಿತ್ಯ..!
ಕಡುನುಡಿಯುವುದು ಕನ್ನಡಿಗರ ಗುಣ [ಕರಾಮಾ].. ಅಲ್ವೇನೋ ಸುನಿಲ?!
ಉ: ಯುಗ ಯುಗಾದಿ ಕಳೆದರೂ
ಮಹೇಶರವರೇ,
ನಾನೂ ರೂಪಾ ಮಾತಾಡಿದರೆ ಅದ್ಯಾಕ್ರಿ ಅಷ್ಟೊಂದು ನನ್ನಿ ಹೇಳಿದ್ರಿ? ಇಬ್ಬರು ಹೆಂಗಸರು ಮಾತಾಡಿದರೆ ಅದು cat fight ಗೆ ತಿರುಗಬಹುದು ಅಂತ ಭಯಪಟ್ರಾ?
ಉ: ಯುಗ ಯುಗಾದಿ ಕಳೆದರೂ
ಬೇಜಾರ್ ಮಾಡಿಕೋ ಬೇಡಿ...
"ಹೆಣ್ಣೇ ಕಾರಣ ಹಲ ಕದನ ಕಲಹ ವಿಶೇಷಗಳಿಗೆ!
ಹೆಂಗಳ್ ಇದ್ದೊಡೆ ಅತಿಸುಲಭ ಹುಲುಜಗಳ ಕಾದಾಟ"
ಅಂತ ನಾನೇನಾರ ಒಂದು ಪದ್ಯ ಬರೆದ್ರೆ, ನನ್ ಕತೆ... ದೇವಾ!!!
ಇಲ್ರೀ.. ಸಂಪದದಲ್ಲಿ ಹೆಂಗಸ್ರು ಬರೆಯೋದು ಕಡಿಮೆ ಅಶ್ಟೆ
ಉ: ಯುಗ ಯುಗಾದಿ ಕಳೆದರೂ
ರೂಪಾರವರೇ, ನಿಮ್ಮ ಮಾತಿನಿಂದ ನನ್ನ ಮನಸ್ಸಿಗೆ ಖಂಡಿತ ನೋವಾಗಲಿಲ್ಲ. ಆದರೆ, ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತಾಯಿತು. ವರುಷಕ್ಕೊಮ್ಮೆ ನಮ್ಮ ನಾಡಿಗೆ ಭೇಟಿಯಿತ್ತು, ನಮಸ್ಕಾರ-ಚೆನ್ನಾಗಿದ್ದೀರ-ಸರಿಯಿನ್ನು-ಹೋಗಿಬರ್ತೀವಿ, ಅಂತ ಪುರ್ರನೆ ಹಾರಿಬರುವವರು ನಾವು. ಅಲ್ಲಿ, ಕನ್ನಡ, ಶಾಲೆಗಳಿಂದ, ಅಂಗಡಿಗಳಿಂದ, ಆಟೋಗಳಿಂದ, ಮನೆಗಳಿಂದ, ಹೀಗೆ ಒಂದೊಂದೇ ಕಡೆಯಿಂದ ಕಣ್ಮರೆಯಾಗುತ್ತಿರುವುದನ್ನು ದಿನನಿತ್ಯ ನೋಡುತ್ತಿರುವವರು ನೀವು. ನಿಮ್ಮ ಮನಸ್ಸು ಈ ಪರಿಸ್ಥಿತಿಯಿಂದ ನನಗಿಂತ ಹೆಚ್ಚು ಉದ್ವಿಗ್ನಗೊಂಡರೆ ಅದು ಹೆಚ್ಚೇನೆಲ್ಲ.
ಮತ್ತು, ನನಗೆ ನನ್ನ ಅಭಿಪ್ರಾಯ ತಿಳಿಸುವ ಹಕ್ಕಿದೆ ನಿಜ. ಆದರೆ, ನಾನಿಲ್ಲಿ ದೂರದಲ್ಲಿ ಕೂತು ಕೇಳುವ ಸುದ್ದಿಯನ್ನು ಆಧರಿಸಿ ನೀಡುವ ಅಭಿಪ್ರಾಯಕ್ಕೆ ಬೆಲೆಯೇನು ಅಂತ ಅನ್ನಿಸಿತು? ಅಲ್ಲಿನ ನೈಜಸ್ಥಿತಿಗೆ ಅನ್ವಯವಾಗದೇ ಇರುವಂತಹ ನನ್ನ ಮಾತುಗಳು ಉರಿವ ಬೆಂಕಿಗೆ ತುಪ್ಪ ಸುರಿದ ಹಾಗಾಗಬಾರದು ನೋಡಿ! ಆದ್ದರಿಂದ, ಸುಮ್ಮನಿರುವುದೇ ಒಳ್ಳೆಯದು ಅಂದದ್ದು. ಇದು ನನ್ನ ಸ್ವಂತ "frustration"ನಿಂದ ಬಂದ ಮಾತು, ನಿಮ್ಮ ತಪ್ಪಿಲ್ಲ
ಕಡೆಯಲ್ಲಿ, ನಾನು ತಮಿಳರನ್ನು ಸಮರ್ಥಿಸುತ್ತಿಲ್ಲ. ಆದರೆ, ಪರಸ್ಪರ ದ್ವೇಷವಿಲ್ಲದ ಸಮರಸ ಜೀವನವನ್ನು ಸಮರ್ಥಿಸುತ್ತೇನೆ. ಇದು ಬರಿಯ ನನ್ನ ಕಲ್ಪನೆಯಾಗಿರಬಹುದು. ಆದರೆ, ಕಲ್ಪನ ನನ್ನ ಹೆಸರಲ್ಲವೇ?