ಕಲ್ಪನಾಲೋಕ
ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...
ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾರತದಿಂದ ಬಂದ ಕವಿಗಳು/ಕಥೆಗಾರರು ಮುನ್ನುಡಿ ಬರೆದು, ಪುಸ್ತಕ ಬಿಡುಗಡೆ ಮಾಡಿ, ಶುಭಹಾರೈಸಿ ಹೋಗುವುದು ನಡೆಯುತ್ತಲೇ ಇದೆ. ಇವೆಲ್ಲ ಈ ಲೇಖಕರು ತಾವೇ ಸ್ವಂತ ಖರ್ಚು ಹಾಕಿ ಪ್ರಕಟಿಸಿರುವ ಪುಸ್ತಕಗಳು. ಹಾಗಿದ್ದ ಮೇಲೆ, ಇದರ ಗುಣಮಟ್ಟ ಎಂತಹದ್ದಿರಬಹುದು ಎಂಬ ಪ್ರಶ್ನೆ ಏಳುವುದು ಸಹಜವೆ. ನನಗನ್ನಿಸುವ ಹಾಗೆ ಇವೆಲ್ಲ ಸುಮಾರು ಒಳ್ಳೆಯ "ಟೈಮ್ ಪಾಸ್" ತರಹದ ಮುದ ನೀಡುವ ಕೃತಿಗಳು. ಆದರೆ, ಯಾವುದೇ "ಆವರಣ" ದಂತಹ ಗಂಭೀರ ಚರ್ಚೆಗೆ ಗುರಿಪಡಿಸುವಂತಹ ಮೇರುಕೃತಿಯಲ್ಲ. ಹೀಗೆ ಬರೆದ ಮರುಕ್ಷಣ ಅನ್ನಿಸಿದ್ದು, ನಾನೇಕೆ ಆವರಣದ ಜೊತೆ ಎನ್.ಅರ್.ಐ. ಕೃತಿಗಳನ್ನು ತಾಳೆ ಹಾಕುತ್ತಿದ್ದೇನೆ? ಇವಕ್ಕೆ ಇವರದ್ದೇ ಒಂದು ಸ್ವಂತ ಸ್ಥಾನವಿಲ್ಲವೇ?
ಹೌದು, ಇವರಿಗೆ ಒಂದು ಸ್ಥಾನವಿದೆ. ಅದೇನೆಂದರೆ, ಒಂದು ಪುಟ್ಟ ಮಗು ಚೆನ್ನಾದ ಚಿತ್ರ ಬಿಡಿಸಿದಾಗ, ದೊಡ್ಡವರು- ಚೆನ್ನಾಗಿದೆ ಮರಿ, ಇನ್ನೂ ಬರೆ, ನಿನಗೆ ಒಳ್ಳೆಯ ಭವಿಷ್ಯವಿದೆ- ಎಂದು ಬೆನ್ನು ತಟ್ಟಿ ಮುಂದೆ ಹೋಗುವ ಸ್ಥಾನ. ಯಾರೂ ಕನ್ನಡ ಸಾಹಿತ್ಯದಲ್ಲಿ ಇವರದೂ ಒಂದು ಪಾತ್ರವಿದೆಯೆಂದು ಗುರುತಿಸದ ಸ್ಥಾನ. ಭಾರತದಲ್ಲಿ ನಡೆಯುವ ಕನ್ನಡ ಕೃಷಿ "ಮೇಯಿನ್ ಸ್ಟ್ರೀಮ್", ಇಲ್ಲಿ ನಡೆಯುವುದು ಸಂತೃಪ್ತ ಮನಸ್ಸು ತಿಂದು ತೇಗಿ, ಬೀಗಿ ಬರೆಯುವ "ಹಾಬಿ" ಯ ಬರಹ. ಹೀಗಂತ ಬೆನ್ನ ಹಿಂದೆ ಹೇಳಿರುವ ಭಾರತದ ಲೇಖಕರು ಇದ್ದಾರೆ. ಹೌದಪ್ಪ ಹೌದು ಎಂದು ಅವರ ವಾಕ್ಯವೆಲ್ಲ ವೇದವೆನ್ನುವಂತೆ ಅಮೆರಿಕನ್ನಡಿಗರು ಸಹ ಅದಕ್ಕೆ ತಲೆಯಲ್ಲಾಡಿಸಿದ್ದಾರೆ. ಇದು ನಿಜವೇ? ಹಾಗಿದ್ದರೆ ನಾವೇಕೆ ಅವರನ್ನು ಮೆಚ್ಚಿಸಲು ಬರೆಯಬೇಕು? ನಾವೇಕೆ ಇವರ ಕಣ್ಣಲ್ಲಿ ಬೆಳಗಬೇಕೆಂದು ಒದ್ದಾಡಬೇಕು? ಗುಡಿಸಲಲ್ಲಿ ಮಲಗಿ, ಕೊಳಚೆಗೇರಿಯಲ್ಲಿ ಜೀವನ ಸವಿಸುವ ಪಾತ್ರಗಳು ಮಾತ್ರ ಪ್ರಶಸ್ತಿಗೆ ಲಾಯಕ್ಕೋ? ಹವಾನಿಯಂತ್ರಿತ ಕ್ಯೂಬಿಕಲ್ನಲ್ಲಿ ಕುಳಿತಿದ್ದು, ಕಾರಿನಲ್ಲಿ ಮನೆಗೆ ತೆರಳುವ ಪಾತ್ರಗಳ ಬದುಕಿನಲ್ಲಿ ಗೋಳೇ ಇಲ್ಲವೋ? ಹಾಗಿದ್ದಲ್ಲಿ ಇಲ್ಲಿನ ಮಾನಸಿಕ ಆಸ್ಪತ್ರೆಗಳಲ್ಲಿ ಕ್ಯೂ ಯಾಕಿರುತ್ತೆ?
ನಾನೇನು ಕನ್ನಡ ಪಂಡಿತೆಯಲ್ಲದಿದ್ದರೂ ನನಗನ್ನಿಸುವುದು, ಇಲ್ಲಿನ ಬರಹಗಾರರು ತಮ್ಮ ಭಾರತದ ಸಂಕೋಲೆ ಕಳಚಿ, ಸ್ವತಂತ್ರವಾಗಿ ತಮ್ಮ ಆತ್ಮವನ್ನು ಮಾತ್ರ ಮೆಚ್ಚಿಸಲು ಬರೆಯುವ ಸಮಯ ಬಂದಿದೆ. ಕಥಾವಸ್ತುಗಳಿಗೇನು ಇಲ್ಲಿ ಬರವಿಲ್ಲ. ಬರವಿರುವುದು ಅವನ್ನು ಮನಮುಟ್ಟುವಂತೆ ರೂಪಿಸುವ ಕಥೆಗಾರರದು. ಇಲ್ಲಿ ಸ್ವಲ್ಪ "ಫ಼ೀಲ್ ಗುಡ್" ಶೈಲಿಯಲ್ಲಿ ಬರೆಯುವ ಜನ ಜಾಸ್ತಿ. ಸ್ವಂತದ್ದು ಬರೆಯುವ ತೊಂದರೆ ತೆಗೆದುಕೊಳ್ಳದೆ, ಬರೀ ಇಂಗ್ಲಿಷ್ ಅನುವಾದಗಳನ್ನು ಮಾಡುವ ಸೋಮಾರಿಗಳು ಜಾಸ್ತಿ. ಕೆಲವರು ಒಂದೇ "ರಟ್" ನಲ್ಲಿ ಸುತ್ತುತ್ತಿರುತ್ತಾರೆ. ಇಲ್ಲವೇ ಭಾರತದ ತಮ್ಮ ಮೆಚ್ಚಿನ ಲೇಖಕರನ್ನು ಅನುಕರಿಸಲು ಹೊರಟಿರುತ್ತಾರೆ. ಇವರೆಲ್ಲಾ ಮುಂದೆ ಬಂದು ಸೃಜನಾತ್ಮಕ ಕೃತಿ ರಚನೆ ಮಾಡಿದಲ್ಲಿ ಅನಿವಾಸಿಗಳ ಕನ್ನಡ ಲೇಖನಗಳಲ್ಲಿ ಸತ್ವ ಕಂಡುಬರುವುದರಲ್ಲಿ ಸಂಶಯವೇ ಇಲ್ಲ. ನಾವೆಲ್ಲಾ ಭಾರತದಿಂದ ಆಮದು ಮಾಡಿಕೊಂಡು ನಮ್ಮ ಪುಸ್ತಕ ಭಂಡಾರವನ್ನು ಹೆಚ್ಚಿಸುವುದರ ಬದಲು, ನಮ್ಮ ಹಿತ್ತಲಲ್ಲೆ ಬೆಳೆದ ಶುದ್ಧ ತಳಿಯಿಂದ ಭಂಡಾರವನ್ನು ತುಂಬಬಹುದು.

- kalpana ರವರ ಬ್ಲಾಗ್
- Login or register to post comments
- 913 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ನಿಮ್ಮ ವಿಚಾರಧಾರೆ ತುಂಬಾ ಚೆನ್ನಾಗಿದೆ..ಹೊಸದೊಂದು ಒಳನೋಟ..
ಬದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಪ್ರತಿಕ್ರಿಯೆಗೆ ಧನ್ಯವಾದಗಳು ಅಭಿಮಾನಿ, ಮತ್ತೊಮ್ಮೆ ನನ್ನೀ ಹೊಸಮನೆಗೆ ತಪ್ಪದೆ ಬನ್ನಿ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಅಮೇರಿಕನ್ನಡಿಗರು ಅಮೇರಿಕೆಯನ್ನು ಕನ್ನಡಿಗರ ಎರಡನೇ ಮನೆಯನ್ನಾಗಿಸಿದ್ದಾರೆ. ತುಂಬಾ ನನ್ನಿ. ಕರ್ನಾಟಕದ ಕೊಂಡಿಯನ್ನು ಕಳಚಿದರೂ ಕನ್ನಡದ ಕೊಂಡಿ ಬಿಗುವಾಗಿರಲಿ, ಕನ್ನಡದ ದೀವಿಗೆ ಎಂದೆಂದೂ ಎದೆಗುಂಡಿಗೆಯಲಿ ಬೆಳಗುತಿರಲಿ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಧನ್ಯವಾದಗಳು ಸಂಗನಗೌಡರೆ, ಮತ್ತೆ ಭೇಟಿ ನೀಡಿ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಚನ್ನಾಗಿದೆ ನಿಮ್ಮ ಅನಿಸಿಕೆಗಳು!
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಧನ್ಯವಾದಗಳು ಮಹೇಶ, ಮತ್ತೆ ಸಿಗೋಣ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ನಿಮ್ಮ ಅಭಿಪ್ರಾಯ ಮಂಡನೆ ಸೊಗಸಾಗಿದೆ...
ಅಮರ್
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಧನ್ಯವಾದಗಳು ಅಮರನಾಥ್, ಮತ್ತೆ ತಪ್ಪದೆ ಬನ್ನಿ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಕಲ್ಪನಾ ಅವರಿಗೆ ನಮಸ್ಕಾರ.
ನಾನು ತಿಳಿದಿರುವಂತೆ ಡಾ|ಗುರುಪ್ರಸಾದ್ ಕಾಗಿನೆಲೆ ಅವರು ಅಮೆರಿಕದ ಜೀವನಶೈಲಿಯ ವಸ್ತುಗಳನ್ನೇ ಬಹುಮಟ್ಟಿಗೆ ಆರಿಸಿ ಕಥೆಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಅವರ ಕಥಾಸಂಕಲನಗಳನ್ನು ಓದಿರುವಿರಾ? ( ಶಕುಂತಳಾ ತಂದ ಹೊಸ ಹುರುಪು - ಪ್ರೊ|.ಎಂ.ಎಸ್.ಶ್ರೀರಾಮ್ ಅವರಿಂದ ಡಾ|ಗುರು ಕಾಗಿನೆಲೆಯವರ ಕಥಾಸಂಕಲನದ ಬಗ್ಗೆ ವಿಮರ್ಶೆ ನೋಡಿ.)
ಹಾಗೆಯೇ ಅಮೆರಿಕದಲ್ಲಿನ ’ಕನ್ನಡ ಸಾಹಿತ್ಯರಂಗ’ವು ಎರಡುವರ್ಷಗಳ ಹಿಂದೆ ’ಆಚೀಚೆಯ ಕಥೆಗಳು’ ಎಂಬ ಕಥಾಸಂಕಲನವನ್ನು ಹೊರತಂದಿತ್ತು. ಅದರಲ್ಲಿನ ಹೆಚ್ಚಿನ ಕಥೆಗಳು ಇಲ್ಲಿನ ಬರಹಗಾರರು ರಚಿಸಿದವೇ ಅಗಿವೆ. ಈ ಕಥಾಸಂಕಲನಕ್ಕೂ ವಿವಿಧಕಡೆಗಳಿಂದ ಮೆಚ್ಚುಗೆ (ತೋರಿಕೆಗೆ ಅಲ್ಲ, ನಿಜವಾಗಿ) ಬಂದಿರುವುದನ್ನು ಗಮನಿಸಿದ್ದೇನೆ.
ನೀವು ಪ್ರಸ್ತಾಪಿಸಿದ ಇಂಗ್ಲಿಷ್ ಅನುವಾದಿತ ಕಥೆಗಳ ವಿಚಾರ ನನಗೆ ಅಷ್ಟೇನೂ ಗೊತ್ತಿಲ್ಲ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
"ಹವಾನಿಯಂತ್ರಿತ ಕ್ಯೂಬಿಕಲ್ನಲ್ಲಿ ಕುಳಿತಿದ್ದು, ಕಾರಿನಲ್ಲಿ ಮನೆಗೆ ತೆರಳುವ ಪಾತ್ರಗಳ ಬದುಕಿನಲ್ಲಿ ಗೋಳೇ ಇಲ್ಲವೋ? ಹಾಗಿದ್ದಲ್ಲಿ ಇಲ್ಲಿನ ಮಾನಸಿಕ ಆಸ್ಪತ್ರೆಗಳಲ್ಲಿ ಕ್ಯೂ ಯಾಕಿರುತ್ತೆ?" - ಒಳ್ಳೇ ಪ್ರಶ್ನೆ... ಉತ್ತರಿಸಲು ನೀವೂ ಪ್ರಯತ್ನಿಸಬಾರದೇಕೆ? ನಮ್ಮೆಲ್ಲರ ಪ್ರೋತ್ಸಾಹ (ಓದುವುದರ ಮೂಲಕ) ಇದ್ದೇ ಇರುತ್ತೆ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ನಮಸ್ಕಾರ. ನಿಮ್ಮ ಲೇಖನದಲ್ಲಿ ವಿಷಯ ಮಂಡನೆಯ ರೀತಿ, ನಿರೂಪಣೆ ಚೆನ್ನಾಗಿದೆ.
ಒಂದು ಪ್ರಶ್ನೆ, ನೀವು ಎಷ್ಟು ಅಮೆರಿಕನ್ನಡ ಲೇಖಕರನ್ನು, ಅವರ ಪುಸ್ತಕಗಳನ್ನು ಓದಿದ್ದೀರಿ?
ಡಾ. ಗುರುಪ್ರಸಾದ್ ಕಾಗಿನೆಲೆ, ಡಾ. ಮೈ.ಶ್ರೀ. ನಟರಾಜ್, ಡಾ. ನಂಜುಂಡ ಸ್ವಾಮಿ, ಪ್ರೊ. ವೈ.ಆರ್. ಮೋಹನ್, ಶಶಿಕಲಾ ಚಂದ್ರಶೇಖರ್, ಡಾ. ಅಶ್ವಥ್ ರಾವ್, ನಳಿನಿ ಮಯ್ಯ, ಅಲಮೇಲು ಅಯ್ಯಂಗಾರ್, ಸಂಧ್ಯಾ ರವೀಂದ್ರನಾಥ್, ಮಂಗಳಾ ಕುಮಾರ್, ಸುಕುಮಾರ್ ರಘುರಾಮ್, ಶ್ರೀವತ್ಸ ಜೋಶಿ,.... ಇನ್ನೂ ಹಲವಾರು ಅಮೆರಿಕನ್ನಡಿಗರು ಕನ್ನಡದ ಅಂತಃಸತ್ವ ಉಳಿಸಿಕೊಂಡು ಅಮೆರಿಕನ್ ಜೀವನದಲ್ಲಿ ಅದನ್ನು ಬೆರೆಸಿಕೊಂಡು ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಅದನ್ನು ನೀವು ಗಮನಿಸಿದಂತೆ ನಿಮ್ಮ ಲೇಖನದಲ್ಲಿ ಕಂಡುಬಂದಿಲ್ಲ. ಅವನ್ನೆಲ್ಲ ಓದಿ, ಆ ನಂತರ ವಿಶ್ಲೇಷಣಾತ್ಮಕವಾಗಿ ಬರೆದಿದ್ದರೆ ಇನ್ನೂ ಒಳ್ಳೆಯ ಪ್ರಬಂಧ ಆಗಿರುತ್ತಿತ್ತು.
ವೈಚಾರಿಕತೆ ಮುಂದುವರಿಯಲಿ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ನಮಸ್ಕಾರ ಜ್ಯೋತಿಯವರೆ, ಪುಸ್ತಕಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟಿರಲ್ಲ ?
) ನಾನು ಮೇಲಿನ ಎಲ್ಲರ ಪುಸ್ತಕಗಳನ್ನು ಓದಿಲ್ಲ, ಅಲ್ಲೊಂದು, ಇಲ್ಲೊಂದು ಕಥೆ ಓದಿದ್ದೇನೆ. ಶಶಿಕಲಾರ ಪುಸ್ತಕ ಪೂರ್ತಿ ಓದಿದ್ದೇನೆ, ಇಷ್ಟವಾಗಿದೆ. ಸಾದ್ಯವಾದರೆ ಎಲ್ಲರ ಕೃತಿಗಳನ್ನು ಓದಿ, ನಂತರ ಮತ್ತೆ ಬರೆಯುತ್ತೇನೆ. ಆದರೆ, ಸಧ್ಯಕ್ಕೆ ಅನ್ನಿಸಿದ್ದು, ನಾವು ಭಾರತದ ಲೇಖಕರನ್ನು "yardstick" ತರಹ ಬಳಸಿಕೊಂಡು ಬರೆಯುವ ಅವಶ್ಯಕತೆ ಇಲ್ಲವೇನೋ ಎಂದು. ಇರಲಿ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಪುನ: ಬರಲು, ಬರೆಯಲು ಮರೆಯಬೇಡಿ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಕಲ್ಪನಾ ಅವರಿಗೆ ನಮಸ್ಕಾರ.
ನಿಮಗೆ ಶಶಿಕಲಾ ಚಂದ್ರಶೇಖರ್ ಅವರ ಪುಸ್ತಕವೂ ("ದೀಪವು ನಿನ್ನದೆ ಗಾಳಿಯು ನಿನ್ನದೆ..." ತಾನೆ?) ಇಡೀಯಾಗಿ ಇಷ್ಟವಾಗಿದೆಯೆಂದು ತಿಳಿದು ನನಗೆ ಮತ್ತಷ್ಟು ಸಂತೋಷವಾಯಿತು! ಅವರು (ಶಶಿಕಲಾ) ಇಲ್ಲಿ ನಮ್ಮೂರಿನವರೇ! ಒಳ್ಳೆಯ ಬರಹಗಾರ್ತಿಯೆಂದು ಹೆಸರುಪಡೆದಿದ್ದಾರೆ.
ಅಂತೂ ನಿಮಗೆ ಇಷ್ಟವಾದ ಕಥಾಸಾಹಿತ್ಯ ಇಲ್ಲಿ ಬೆಳೆದದ್ದಿದೆಯೆಂಬ ಸಂಗತಿ ನಿಮ್ಮ ಮೂಲಲೇಖನಕ್ಕಿಂತಲೂ ಈನಿಮ್ಮ ಪ್ರತಿಕ್ರಿಯೆಗಳಲ್ಲಿ ಒಂದೊಂದಾಗಿ ತಿಳಿದುಬರುತ್ತಿದೆ! ಅದು ಸಂತಸದ ಸಂಗತಿ. ಆ ಸಂತಸ ಹೆಚ್ಚಾಗಲಿ/ಹೆಚ್ಚಾಗುತ್ತದೆ ಎಂದು ಆಶಯ.
ಇತಿ
ಶ್ರೀವತ್ಸ ಜೋಶಿ
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ನಮಸ್ಕಾರ ಜೋಶಿಯವರೆ,
ನನ್ನ ಮೂಲಲೇಖನದಲ್ಲಿ ಎರಡನೇ ಪ್ಯಾರದಲ್ಲಿರುವ, ಇಲ್ಲಿನ ಬರಹ "main stream" ಅಲ್ಲವೆಂಬ ಕಾಮೆಂಟು- ಕೇಳಿದ್ದು, ನನ್ನ ಸ್ವಂತದ್ದಲ್ಲ. ಆದರೆ ನಾನು ಇಲ್ಲಿ ಓದಿರುವುದು "feel good" variety ಅನ್ನುವುದು ಸುಳ್ಳಲ್ಲ. ನೀವೆಲ್ಲ ಹೇಳಿದ ಮೇಲೆ, ನಾನು ಮತ್ತೆ ಬರೆಯುವ ಮುನ್ನ ಇನ್ನೂ ಹೆಚ್ಚು ಇಲ್ಲಿನ ಲೇಖನಗಳನ್ನು ಓದಬೇಕೇನೋ ಅನ್ನಿಸುತ್ತಿದೆ..
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಕಲ್ಪನಾ ಅವರಿಗೆ, ನಮಸ್ಕಾರ.
ಸರಿ. ಹೆಚ್ಚುಹೆಚ್ಚು ಪ್ರತಿಕ್ರಿಯೆಗಳಿಗೆ ನೀವು ಉತ್ತರಿಸುತ್ತಿದ್ದಂತೆ ನೀವೇನು ವ್ಯಕ್ತಪಡಿಸಹೊರಟಿದ್ದಿರಿ ಎಂದು ಸ್ವಲ್ಪಸ್ವಲ್ಪವಾಗಿ ತಿಳಿಯತೊಡಗಿದೆ.
ಪರವಾ ಇಲ್ಲ, ಹೊಸದಾಗಿ ಬ್ಲಾಗ್ ಬರೆಯಲಾರಂಭಿಸಿದ್ದೀರಷ್ಟೇ. ಕ್ರಮೇಣ ನಿಮ್ಮ ಯೋಚನಾಲಹರಿಗಳು ಅಚ್ಚುಕಟ್ಟಾಗಿ ಅಕ್ಷರರೂಪಕ್ಕಿಳಿಯುವುದು ಅಭ್ಯಾಸವಾಗುತ್ತದೆ. ಅದಕ್ಕಾಗಿ ಬರವಣಿಗೆಗೆ ಬಿಡುವು ಸಾರಲು ಮಾತ್ರ ಹೋಗಬೇಡಿ. ನೀವೇ ಹೇಳಿಕೊಂಡಂತೆ ಇನ್ನಷ್ಟು ಪ್ರಾತಿನಿಧಿಕ ಸಾಮಗ್ರಿಯನ್ನು ಓದಿಕೊಂಡು ನಿಮ್ಮ ಪ್ರಸ್ತುತ ವಿಚಾರವನ್ನು ಪುಷ್ಟೀಕರಿಸಿದರೆ ಒಳ್ಳೆಯದೇ. ನಾನು ಪಿಯುಸಿಯಲ್ಲಿ ಓದಿದ ಸಂಖ್ಯಾಶಾಸ್ತ್ರ (statistics) ಹೀಗೆ ಹೇಳುತ್ತದೆ: "The bigger the sample size is, more are the chances that it truely represents the entire population". ಬಹುಶಃ ಈ ಮಾತು ನಿಮಗೂ ಒಪ್ಪಿಗೆಯಿದೆ.
ಇಲ್ಲಿ ನಿಮ್ಮ ವಾದ ತಪ್ಪು ಎಂದಾಗಲೀ ಅಥವಾ ನೀವು ಹಾಗೆ ಅನ್ನಲೇಬಾರದು ಎಂದಾಗಲೀ ಉದ್ದೇಶವಲ್ಲ. ನಿಮ್ಮ ಮೂಲಲೇಖನ ತುಸು ಗೊಂದಲಮಯವಾಗಿತ್ತು, ತಡವರಿಕೆ ಇತ್ತು, ಅದನ್ನೊಂದಿಷ್ಟು ಬಿಡಿಸಿನೋಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿದುಕೊಳ್ಳೋಣವೆಂಬ ಆಸಕ್ತಿಯಿಂದ ನಾನು ನಿಮಗೆ ಪ್ರತಿಕ್ರಿಯೆಗಳನ್ನು ಬರೆದದ್ದು. ಅವುಗಳಿಗೆಲ್ಲ ಉತ್ತರಿಸಿ ಈಗ ವಿಚಾರದಲ್ಲಿ ನೀವು ಹೆಚ್ಚು ಸ್ಪಷ್ಟತೆಯನ್ನು ತಂದಿರಿ; ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ಇನ್ನು, ರಹೀ ಬಾತ್ feel good factorಕೀ. ಅದನ್ನು ನಾನು ’ಹಿತಾನುಭವ’ ಎನ್ನುತ್ತೇನೆ. ಮೂರು ವರ್ಷಗಳ ಹಿಂದೆ ಭಾರತದಲ್ಲಿ ಲೋಕಸಭಾ ಚುನಾವಣೆಗಳ ವೇಳೆ ಭಾ.ಜ.ಪ ದವರ ಸ್ಲೋಗನ್ ಅದೇ ಆಗಿತ್ತು - ಫೀಲ್ ಗುಡ್ ಫಾಕ್ಟರ್. ವೈಯಕ್ತಿಕವಾಗಿ ನನಗೆ ಫೀಲ್ ಗುಡ್ ಇಷ್ಟ. ಅಂತಹ ಸಾಮಗ್ರಿ ಓದಲಿಕ್ಕೆ/ ಕೇಳಲಿಕ್ಕೆ/ ನೋಡಲಿಕ್ಕೆ ಇಷ್ಟ. ಜೀವನ ಇರುವುದೇ ಸೆಲಬ್ರೇಟ್ ಮಾಡಲಿಕ್ಕೆ, ಸಣ್ಣಸಣ್ಣ ಸಂಗತಿಗಳಲ್ಲೂ ಸ್ವಾರಸ್ಯಸಂತೋಷಗಳನ್ನು ಕಂಡುಕೊಳ್ಳಲಿಕ್ಕೆ ಎಂದು ನಂಬಿದವನು ನಾನು. ನೀವು ಡಾ|ಗುರುಕಾಗಿನೆಲೆಯವರ, ಶಶಿಕಲಾ ಅವರ ಕಥೆಗಳು ಇಷ್ಟವಾಗುತ್ತವೆಂದು ತಿಳಿಸಿದಾಗ, ನಿಮಗೂ ಖುಶಿಯಾಗಿದೆಯೆಂದು ತಿಳಿದುಬಂದಾಗ ನಾನು ಸಂತಸ ವ್ಯಕ್ತಪಡಿಸಿದ್ದು ಅದೇ ಕಾರಣಕ್ಕೆ.
ಆದರೆ ಎಲ್ಲರಿಗೂ ಹಾಗೆಯೇ ಇರಬೇಕು/ಇರುತ್ತದೆಯೆಂದೇನೂ ಇಲ್ಲ. ನೀವು ಹೇಳುವುದು (ಅಥವಾ ಹೇಳಹೊರಟಿರುವುದು) ಸರಿಯೇ. ಇಲ್ಲಿನ ಬದುಕಿನಲ್ಲೂ ಗೋಳಿದೆ, ನೋವಿದೆ, ನರಕವಿದೆ. ಅದು ಒಂದು ಕಥೆಯ ರೂಪದಲ್ಲಿ ಓದಲಿಕ್ಕೆ ಸಿಕ್ಕರೆ ತನ್ನ ದನಿಗೊಂದು ರೂಪವಾಯ್ತಲ್ಲಾ ಎಂದು ಹಾತೊರೆಯುವ ಮನಗಳಿವೆ. ಅಂಥಾದ್ದರಲ್ಲಿ ಇವರೆಲ್ಲ ಸೋಗಲಾಡಿತನದ ವೈಭವೀಕರಣ ಮಾಡುತ್ತಿದ್ದಾರಲ್ಲಾ ಎಂದು ಹಿಡಿಶಾಪ ಹಾಕುವ ನೊಂದ ಜೀವಗಳು ಅನೇಕವಿವೆ.
ಅದಕ್ಕೇನು ಉಪಾಯ? ಬೇರೆಯವರು ಬರೆಯುವುದಿಲ್ಲವಾದರೆ ಹಾಳಾಗಿಹೋಗಲಿ, ನಾನೇ ಬರೆಯುತ್ತೇನೆ ಎಂದು ಹೊರಡಿ! ನೀವೇ ಒಂದು ಹೃದಯಸ್ಪರ್ಶಿ ಕಥೆಯನ್ನು ಬರೆಯಿರಿ. ದಟ್ಸ್ಕನ್ನಡದವರು ಯಾಕೆ ಪ್ರಕಟಿಸುವುದಿಲ್ಲ ನೋಡೋಣ. ಯುನಿಕೋಡ್ ಕನ್ನಡ ಟೈಪಿಂಗ್ ಹೇಗೂ ಅಭ್ಯಾಸಮಾಡಿಕೊಂಡಿದ್ದೀರಿ. ಕಥೆ ಬರೆಯಿರಿ. ಕಾಗುಣಿತ ತಪ್ಪುಗಳಿದ್ದರೆ ನಾನು ಸರಿಪಡಿಸಿಕೊಡಲು ಸಿದ್ಧನಿದ್ದೇನೆ, ಆದರೆ ಕಥೆ ಹೇಗಿದೆ ಎಂದು ಓದಿತಿಳಿಸಲು ಮಾತ್ರ ಹೇಳಬೇಡಿ. ಕಥೆ-ಕಾದಂಬರಿ ಓದೋದು not my cup of ಕಷಾಯ (or ರಾಗಿಮಾಲ್ಟ್) ಎಂದು ನಾನು ನಸುನಗುತ್ತಲೇ ಹೇಳುತ್ತೇನೆ.
ನಿಮ್ಮ ಬರವಣಿಗೆ ಮುಂದುವರಿಸಿ.
ಇತಿ
ಶ್ರೀವತ್ಸ ಜೋಶಿ
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ನಮಸ್ಕಾರ ಜೋಶಿಗಳೆ,
ನೀವು ಬರೆಯುವ ಹಿತಾನುಭವದ ಬರವಣಿಗೆ ನನಗೆ ರುಚಿಸಲಿಲ್ಲ ಎಂದಲ್ಲ. ಮನಸ್ಸು ಕುಗ್ಗಿದಾಗ ಈ ತರಹದ ಓದು ಆಹ್ಲಾದಕಾರಿಯಾಗಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ನಿಮ್ಮ ಬರಹವನ್ನು ಕಥೆಯ ಗುಂಪಿಗೆ ಸೇರಿಸುವುದಕ್ಕಿಂತ, ಚೇತೋಹಾರಿ ಲೇಖನದ ಸಾಲಿಗೆ ಸೇರಿಸಬಹುದೇನೋ ? ಅಥವಾ ಇದಕ್ಕೆ ಬೇರೆಯೇ unique slot ಇರಬಹುದು. ಏಕೆಂದರೆ, ನಿಜ ಹೇಳಬೇಕೆಂದರೆ, ನಿಮ್ಮ ವಿಚಿತ್ರಾನ್ನದ ತರಹದ ಊಟವನ್ನು ಈ ಮುಂಚೆ ಬೇರೆಲ್ಲೂ ಸವಿದಿರಲಿಲ್ಲ, ಈಗಲೂ ಮತ್ತೆಲ್ಲೂ ಕಂಡುಬಂದಿಲ್ಲ 
ಇದು ನನ್ನ ಜೀವನದ ಮೊಟ್ಟ ಮೊದಲ ಬ್ಲಾಗ್ ಅಂತ ಸರಿಯಾಗಿ ಊಹಿಸಿದಿರಿ
ಇಲ್ಲಿನ ಅಮೇರಿಕನ್ನಡ ಲೇಖಕರು ನಿಜಜೀವನಕ್ಕೆ ಹತ್ತಿರವಿರುವ ಕತೆಗಳನ್ನು ದಟ್ಸ್ ಕನ್ನಡದಲ್ಲಿ ಬರೆದಿರುವುದು ಓದಿದ್ದೇನೆ. ಆದರೂ ಅದೇಕೋ ಅವು either ತೀರ ಎಳಸು ಅಥವಾ ತೀರ superficial ಎಂದು ಕೆಲವೊಮ್ಮೆ ಅನ್ನಿಸಿದೆ. ಇರಲಿ, ನೀವು ಹೇಳಿದಂತೆ ಲೋಕೋ ವಿಭಿನ್ನ ರುಚಿ: . ನಿನಗೆ ಮೆಚ್ಚುಗೆಯಾಗುವಂತೆ ನೀನೆ ಬರಿ ಎಂದ್ದಿದ್ದೀರ. ಅಲ್ಲೇ ನೋಡಿ ಬಂದಿರೋದು ಪ್ರಾಬ್ಲಂ ! ಬೇರೆಯವರನ್ನು ಇಷ್ಟೊಂದು ಟೀಕಿಸುವ ನನಗೆ, ನನ್ನ ಯಾವುದೇ ಕತೆಗೂ ಪ್ರಕಟಗೊಳ್ಳುವಷ್ಟು ಯೋಗ್ಯತೆ ಇಲ್ಲ ಎನ್ನಿಸುತ್ತದ್ದೆ. ಆದ್ದರಿಂದಲೇ ಈ ಸಂಪದದ ಸಾಗರದಲ್ಲಿ ಒಂದು (ಬೆರಳು, ಅಲ್ಲ) ಬ್ಲಾಗ್ ಬಿಟ್ಟು temperature test ಮಾಡುತ್ತಿರುವುದು
ನೋಡೋಣ, ನನಗೆ ಸರಿಯೆನ್ನಿಸಿದರೆ ಒಂದು ಕತೆಯನ್ನೂ ಸೇರಿಸುತ್ತೇನೆ. ಅಲ್ಲಿಯವರೆಗೂ, ಹೀಗೇ ಬನ್ನಿ, ಬುದ್ಧಿವಾದ ಹೇಳಿ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ, ಸರೀನಾ?
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಕಲ್ಪನಾ ಅವರಿಗೆ, ನಮಸ್ಕಾರ.
ನಾನು ಹೇಳಿದ್ದು ’ವೈಯಕ್ತಿಕವಾಗಿ ನನಗೆ ಹಿತಾನುಭವದ ಸಾಮಗ್ರಿ ಇಷ್ಟ’ ಎಂದೇ ವಿನಹ ನನ್ನ ವಿಚಿತ್ರಾನ್ನ ಬರವಣಿಗೆ ನಿಮಗೆ ಹಿಡಿಸಿತೇ/ಹಿಡಿಸಬೇಕಿತ್ತು ಎಂದಲ್ಲ. ನಾವು ಚರ್ಚಿಸುತ್ತಿದ್ದದ್ದು ಕಥಾಸಾಹಿತ್ಯದ ವಿಚಾರ (ವಿಚಿತ್ರಾನ್ನಕ್ಕೂ ಅದಕ್ಕೂ ಎನೇನೂ ಸಾಮ್ಯವಿಲ್ಲ ಸಂಬಂಧವಿಲ್ಲ). ಆಫ್ಕೋರ್ಸ್, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.
ಮತ್ತೆ ಕಥೆಗಳ ವಿಚಾರಕ್ಕೆ ಬಂದರೆ, ನೀವು ಆ ನಿಮ್ಮ ಅಳುಕು/ಹಿಂಜರಿತ/ಕೀಳರಿಮೆ(?)ಗಳನ್ನು ಒಂದು ಮೂಟೆಯಲ್ಲಿ ಕಟ್ಟಿ ಸಮುದ್ರಕ್ಕೆ ಬಿಸಾಡಿದರೆ (ನಿಮಗೆ ಹತ್ತಿರದ್ದಾವುದು? ಪೆಸಿಫಿಕ್? ಅಟ್ಲಾಂಟಿಕ್? ಅಥವಾ ಪಂಚಮಹಾಸರೋವರಗಳ ಪೈಕಿ ಯಾವುದಾದರೂ?) ಒಳ್ಳೆಯದು. ಆಗ ನೋಡಿ, ಹೊಸ ಹುರುಪಿನಿಂದ ನೀವು ಬರೆದ ಕಥೆ ನಳನಳಿಸುತ್ತದೆ. ಇದು ನಿಮಗೆ ’ಜ್ಯಾಕ್’ಏರಿಸುತ್ತಿರುವುದಲ್ಲ. ಯೋಗ್ಯತೆಯಿಲ್ಲ ಎಂದು ನೀವು ಪೂರ್ವನಿರ್ಧಾರಮಾಡುವುದೇಕೆ, ಯೋಗ್ಯತೆ ಯಾಕಿಲ್ಲ ನೋಡೋಣ ಎಂಬ ಸವಾಲು (ಚಾಲೆಂಜ್)!
ಈ ಎಲ್ಲ ಪ್ರತಿಕ್ರಿಯೆಗಳನ್ನು ಬುದ್ಧಿವಾದ ಹೇಳಿದ್ದು ಎಂದು ಮಾತ್ರ ಪರಿಗಣಿಸಬೇಡಿ
ಇತಿ,
ಶ್ರೀವತ್ಸ ಜೋಶಿ
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಧನ್ಯವಾದಗಳು.
ನನ್ನ ಪಟ್ಟಿಯಲ್ಲ್ಲಿ ಎಮ್.ಆರ್. ದತ್ತಾತ್ರಿ ಅವರನ್ನೂ, ತ್ರಿವೇಣಿ ಶ್ರೀನಿವಾಸ್ ರಾವ್ ಅವರನ್ನೂ, ಇನ್ನೂ ಹಲವರನ್ನೂ ಬಿಟ್ಟಿದ್ದೇನೆ. ಬರೀ ಪಟ್ಟಿ ಮಾಡುವುದು ನನ್ನ ಉದ್ದೇಶವಲ್ಲ, ಹಾಗಾಗಿ.
ನನ್ನ ಬಗ್ಗೆಯೂ ನಿಮಗೆ ಗೊತ್ತಿದೆ ಅಂದ ಮೇಲೆ ನಿಮ್ಮ ಮೂಲ ಲೇಖನದ ಉದ್ದೇಶವೇ ನನಗೆ ಗೊಂದಲಮಯವಾಗಿ ಕಾಣುತ್ತಿದೆ. ಬೆಂಗಳೂರಿನ /ಕರ್ನಾಟಕದ ಲೇಖಕರನ್ನು ಅಳತೆಗೋಲಾಗಿಟ್ಟುಕೊಂಡು ಇಲ್ಲಿಯ ಬರಹಗಾರರು ಯಾರೂ ಬರೆಯುತ್ತಿಲ್ಲ ಅನ್ನುವುದು ನನ್ನ ಅನಿಸಿಕೆ. ಅಮೆರಿಕನ್ನಡಿಗರೆಲ್ಲರೂ ತಮ್ಮೊಳಗಿನ ತುಡಿತಕ್ಕಾಗಿ ಬರೆಯುತ್ತಿದ್ದಾರೆ. ಬರೆಯಲೇಬೇಕೆಂಬ ಹಂಬಲಕ್ಕಾಗಿ ಬರೆಯುತ್ತಿದ್ದಾರೆ. ಇವರ್ಯಾರೂ ನಮ್ಮ ನೆಲದ ಲೇಖಕರೊಡನೆ ಪೈಪೋಟಿಗೆ ನಿಂತು ಬರೆಯುತ್ತಿಲ್ಲವೆಂದು ನನ್ನ ನಂಬಿಕೆ. ಬರೆದ ಮೇಲೆ, ಪುಸ್ತಕ ಬಂದ ಮೇಲೆ, ಎಲ್ಲರೂ ಅದನ್ನು ಗುರುತಿಸಲಿ, ಓದಲಿ, ಅಭಿಪ್ರಾಯ ಹೇಳಲಿ ಅನ್ನುವುದು ಸಹಜ ನಿರೀಕ್ಷೆ. ಅದು ಎಲ್ಲ ಮಟ್ಟದ ಲೇಖಕರಿಗೂ ಇದ್ದದ್ದೇ. ಆದರೆ, ಬರವಣಿಗೆಯ ಪ್ರಕ್ರಿಯೆಯೇ ಆ ಉದ್ದೇಶದಿಂದ ಪ್ರೇರಿತವಾದದ್ದಲ್ಲ ಅನ್ನಬಲ್ಲೆ.
ಯಾವ "Yardstick" ನಿಮ್ಮ ದೃಷ್ಟಿಯಲ್ಲಿತ್ತು ಅನ್ನುವುದನ್ನು ತುಸು ವಿವರಿಸುತ್ತೀರ?
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಜ್ಯೋತಿಯವರೆ,
ಅಲ್ಲಿನ ಲೇಖಕರನ್ನು ಮೆಚ್ಚಿಸಲು ಬರೆಯದಿದ್ದರೂ, ಅಲ್ಲಿನವರಿಂದ ಪುಸ್ತಕ ಬಿಡುಗಡೆ ಮಾಡಿಸಿ ಬೆನ್ನು ತಟ್ಟಿಸಿಕೊಳ್ಳುವ ಆಸೆ ಇರೋದಂತೂ ನಿಜ ತಾನೆ? ಇದು ತಪ್ಪು ಅಂತಿಲ್ಲ. ಆದರೆ, ಇದೇ ಭಾರತದ ಲೇಖಕರು ಅಮೆರಿಕನ್ನಡ ಬರಹ "amateur" ಎಂದಾಗ ನನಗನ್ನಿಸಿದ್ದು, ಅವರ ಕೈಯಲ್ಲಿ ಶಭಾಸ್ ಅನ್ನಿಸಿಕೊಳ್ಳುವ ಪ್ರಮೇಯ ಏನಿದೆ? ಅವರಿಗೆ ಹೇಗೆ ಅರ್ಥವಾದೀತು ನಮ್ಮ ವಲಸೆಹಕಿ ಭಾವನೆಗಳು ಅಂತ. (ಎರಡನೇಯ ಪ್ರ್ಯಾರದಲ್ಲಿನ ಕಾಮೇಂಟು ನಾನು ಕೇಳಿದ್ದು, ಸ್ವಂತದ್ದಲ್ಲ. ಆದರೆ, ನಾನು ಇಲ್ಲಿ ಓದಿರುವುದೆಲ್ಲ ಸುಮಾರು "feel good" ಸಾಹಿತ್ಯ, ಅದು ನನ್ನ ಕಾಮೆಂಟು) ನಾನು ನೀವು ಪಟ್ಟಿ ಮಾಡಿರುವ ಎಲ್ಲ ಪುಸ್ತಕಗಳನ್ನು ಓದಿಲ್ಲವಾದ್ದರಿಂದ ಹೀಗನ್ನಿಸಿರಬಹುದು. ನಾನು ಓದಿರುವುದೆಲ್ಲ ಇಲ್ಲಿನ ಲೇಖಕರು ದಟ್ಸ್ಕಕನ್ನಡದಲ್ಲಿ ಬರೆದ ಕಥೆಗಳು.
ನಾನು ಕನ್ನಡ ಪಂಡಿತಳಲ್ಲವೆಂಬ "disclaimer" ಹಾಕಿದ ಮೇಲೂ ನೀವು ನನ್ನನ್ನು ಚರ್ಚೆಗೆ ಎಳೆಯುವುದು ಎಷ್ಟು ತರ?
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಏನ್ರೀ ಹಿ೦ಗನ್ನ್ ತ್ತೀರಾ ? ಎಷ್ಟೊ೦ದು ಕತೆ ಬರೆಯಬಹುದು.
1> ಇಲ್ಲಿ ಗ೦ಡು ಊರು ಏನೂ ಗೊತ್ತಿಲ್ಲದೇ ಅಮೇರಿಕಾ ಗ೦ಡೇ ಬೇಕು ಅ೦ತಾ
ಹೋಗುವ ನಮ್ಮ ಹೆಣ್ಣೂ ಮಕ್ಕಳು ಅಲ್ಲಿ ಪಡುವ ಕಷ್ಟ , ನಷ್ಟ,
2> ಮಕ್ಕಳನ್ನು ದೂರ ಕಳುಹಿಸಿ ಇಲ್ಲಿ ಅವರ ಚಿ೦ತೆಯಲ್ಲಿ ಸ೦ಧ್ಯಾರಾಗ ಹಾಡೊ ವಯಸ್ಕರು.
3> ಅಲ್ಲಿ ಹುಟ್ಟುವ ಮಕ್ಕಳ ಬೆಳವಣಿಗೆ -ಶಿಕ್ಷಣ,ಸ೦ಸ್ಕಾರ, ಸ೦ಸ್ಕೃತಿ.
4> ಗ೦ಡ ಹೆ೦ಡತಿ ಸ೦ಬ೦ಧ .
5> ಅಮೇರಿಕಾದಲ್ಲಿ ಧರ್ಮ ಚಿ೦ತನೆ.
ನೀವೆ ಬರೆದು ಬಿಡಿ. ಬೇರೆ ಯಾರು ಮಾಡುವ೦ಗೆ ಕಾಣೋಲ್ಲಾ.
ಇನ್ನು ಸ್ವಲ್ಪ ಶೈಲಿ Improve ಮಾಡ್ಖೊ೦ಡು ಒಳ್ಳೆ ಕಾದ೦ಬರಿ ಬರೆದುಬಿಡಿ.
ಕನ್ನಡ ಜನ ಕಲ್ಪನೆ ಮಾಡದೇ ಇರುವ೦ತಹ ಪುಸ್ತಕವ೦ ಬರೆದು,
ಈ ಆವರಣ ಚರ್ಚೆ ಹಿ೦ದಕ್ಕೆ ಹೋಗಿ , ನೀವು ಬರೆದಿರುವ ಪುಸ್ತಕ "ಚರ್ಚ" ಯ ಕೇ೦ದ್ರ ಬಿ೦ದು ವಾಗಬೇಕು.
ಆಮೇಲೆ ನಿಮ್ಮ ಪುಸ್ತಕದ ಮೇಲೆ ವಿಮರ್ಷೆಯ ಹೆಸರಿನಲ್ಲಿ ಇನ್ನೈದು ಪುಸ್ತಕ ಬ೦ದರೆ, ನೀವು Seattle ಬಿಟ್ಟೂ India ದಲ್ಲಿ Settle ಆಗಬಹುದು.
Tips :
ಬ್ರಾಹ್ಮಣರನ್ನು ಬೈದು ಬರೆಯಿರಿ. ಯಾರಾದರೂ ಸರಿ - ತಮಿಳು ಬ್ರಾಹ್ಮಣ, ತೆಲುಗು ಬ್ರಾಹ್ಮಣ.. ಒಟ್ಟಿನಲ್ಲಿ ಬ್ರಾಹ್ಮಣರನ್ನು ಬೈದು ಬರೆಯಬೇಕು.
ಅಮೇರಿಕಾ ಸಾಮ್ರಾಜ್ಯ ಷಾಹಿ ಪದ್ದತಿಯಲ್ಲಿಯ ಘೋರ ಕೃತ್ಯಗಳಿಗೆ ಅಲ್ಲಿ ಯ ಭಾರತೀಯರು ನಡೆಸುತ್ತಿರುವ ಹೋರಾಟ ಮತ್ತು ಕ್ರಾ೦ತಿ.
ಅಕಸ್ಮಾತ್ ಅವರು ಹೋರಾಟ ಮತ್ತು ಕ್ರಾ೦ತಿ ಮಾಡುತ್ತಾ ಇಲ್ಲಾ ಅ೦ದರೆ ಅವರು ಭಾರತೀಯರೇ ಅಲ್ಲಾ.
ಆಮೇಲೆ ಈ ಐಶ್ವರ್ಯ ರೈ Provoked ಸಿನಿಮಾದಲ್ಲಿ ಹೆ೦ಗಸ್ಸಿನ ಕಷ್ಟ ಬಿ೦ಬಿತವಾಗಿದೆ.
ಅದೇ ರೀತಿ ಅಮೇರಿಕಾದ ಗ೦ಡಸ್ಸರ್ ಪಾಡು ಪ್ರತಿ ಬಿ೦ಬಿಸಿ ಬರೆಯಿರಿ.
ಬೇಕಾದಷ್ಟ್ ಇದೆ ಬರೆಯೋಕ್ಕೆ, ಒಳ್ಳೆ "ಮಾರ್ಕೆಟ್" ಕೂಡ ಇದೆ.
All the best !!!
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಪ್ರತಿಕ್ರಿಯೆಗೆ ಧನ್ಯವಾದಗಳು ಮುರಳಿಯವರೆ! ನೀವು ಹೇಳಿದ್ದರಲ್ಲಿ "ಅಮೇರಿಕಾದಲ್ಲಿ ಭಾರತೀಯ ಗಂಡಸರ ಪಾಡು" ಯಾರೂ ಇನ್ನೂ ಬರೆಯದ ಒಳ್ಳೆ ಟಾಪಿಕ್ ಆಗಬಹುದು
ಇಷ್ಟರಲ್ಲೇ ಬರೀತೀನಿ ಇರಿ!
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಧನ್ಯವಾದಗಳು ಮೂರ್ತಿಯವರೆ, ಖಂಡಿತ ಪ್ರಯತ್ನಿಸುತ್ತೇನೆ.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಹೌದು. ಡಾ||ಕಾಗಿನೆಲೆಯವರ ಕಥೆಗಳನ್ನು ಓದಿ, ಕೆಲವನ್ನು ಮೆಚ್ಚಿದ್ದೇನೆ. ನನ್ನ ಬ್ಲಾಗು ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಉ: ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?
ಕಲ್ಪನಾ ಅವರಿಗೆ, ನಮಸ್ಕಾರ.
ಡಾ|ಕಾಗಿನೆಲೆಯವರು ಬರೆದ ಕೆಲವು ಕಥೆಗಳು ನಿಮಗೆ ಮೆಚ್ಚುಗೆಯಾಗಿವೆಯೆಂದು ತಿಳಿದು ಬಹಳ ಸಂತೋಷವಾಯಿತು. ಹೀಗೆ ನಿಮಗೆ ಮೆಚ್ಚುಗೆಯಾಗುವ ಸಾಹಿತ್ಯ ನಿಮ್ಮ ಹಿತ್ತಲಲ್ಲೇ ಇನ್ನೂ ಸೊಂಪಾಗಿ ಬೆಳೆಯುತ್ತದೆಯೆಂದು ಆಶಿಸೋಣ.
ಇತಿ
ಶ್ರೀವತ್ಸ ಜೋಶಿ