ಕರಿಹೈದನ ಬಟ್ಟೆ
ನಾನ್ ಹಟ್ಟಿ ಬಿಟ್ ವಸಿ ಕಾಲ ಆಯ್ತಲ್ಲ ಅದ್ಕೇ ನನ್ ಭಾಸೆ ವಸಿ ಮೈಸೂರ್ ಸೀಮೆನವ್ರ್ ಥರಾ ಕೇಳ್ಸ್ತೈತೆ. ಸ್ವಲ್ಪ "ಅಡ್ಜಸ್ಟ್' ಮಾಡ್ಕೊಳಿ.
ಕವಲ್ ದಾರಿ
ನಾನ್ ಹಟ್ಟಿ ಬುಟ್ಟಿ ಏಷ್ಟ್ ವರ್ಸ ಆಯ್ತು ಅಂತ್ ನಂಗೇ ಜ್ಞಾಪ್ಕ ಇಲ್ಲ. ಮೊದ್ಲಿಗೆ ಒಟ್ಟೆ ಪಾಡು, ಆಮೇಲೆ ಹಿಂತಿರುಗಕ್ಕೆ ಏನೋ ಮುಜುಗ್ರ. ನನ್ನ್ ವೇಸ, ಭಾಸೆ, ಆಡು-ಪಾಡು ಎಲ್ಲಾ ಬದಲಾಗದೆ. ಶುರೂಲಿ ತಿಂಗ್ಳಿಗ್ ಒಂದ್ಸಾರಿ ಹೋಗ್ತಿದ್ದೆ. ಓದಾಗ ಏನೇನೋ - ಬಟ್ಟೆ, ಆಟಸಾಮಾನು, ತಿಂಡಿ, ಪಾತ್ರೆ ಎಲ್ಲಾ ಕೊಂಡ್ಕೊಂಡು ಹೋಗಿ ಕೊಡ್ತಿದ್ದೆ. ಅವ್ರಿಗೆ ಖುಷಿಯಾಗೋದು. ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ ಕೇಳಿ ತಮ್ಮ ಪಾಡ್ಗೆ ತಾವು ಓಯ್ತಾರೆ. ಏನಾದ್ರು ತೊಗೊಂಡ್ ಹೋದ್ರೆ, ಒಂದ್ಸಾರಿ ಕಣ್ ಹಾಯ್ಸಿ ಅಲ್ಲೇ ಇಡ್ತಾರೆ. ಮನ್ಸಿಗ್ ಯಾಕೋ ಬೋ ಬೇಸರ ಆಗತ್ತೆ.
ಹಂಗಂತ ಹಟ್ಟಿಗ್ ಹೋಗೋದು, ಬಿಡಕ್ ಆಯ್ತದ? ಯೋಳಿ! ಹಂಗೇ ಯೋಚ್ಸ್ಕೊಂಡ್ ಹೋದೆ ಹಟ್ಟಿ ಕಡೆ ಈ ಬಾರಿನು. ಈ ಸಾರಿ, ಎರಡ್ ವರ್ಷ ಆಮೇಲೆ ಹೋಯ್ತಿರೋದು ಹಟ್ಟಿಗೆ. ಎಂಗೆಂಗಾಗೈತೋ, ಎಂಗೆಂಗವ್ರೋ ವಸಿ ನೋಡಾಣ ಅಂತ ಹೊರಟೆ. ನಮ್ ಪಟ್ಟಣದಾಗೆ ಒಂದ್ ಬಸ್ ಹಿಡ್ಕಂಡ್ ಹೋದ್ರೆ ನಮ್ ಕಾಡಿನ್ತವ ಇರೋ ಒಂದ್ ಹಳ್ಳಿಗ್ ತಂದ್ ನಿಲ್ಸ್ತಾನೆ. ಅಲ್ಲಿಂದ ಬೋ ದೂರ ನಡ್ಕಂಡ್ ಹೋಗ್ಬೇಕು. ಅರ್ಧ ದಿನಾನೆ ಬೇಕು ನಡ್ಯಾಕ್ಕೆ. ಒಬ್ಬನೇ ಬೇರೆ. ಅಭ್ಯಾಸ ಬೇರೆ ತಪ್ಪಿ ಹೋಗದೆ. ಉಸ್ಸಪ್ಪ ಅನ್ಕೋಂಡ್ ಹೋಗ್ಬೇಕಲ್ಲಪ್ಪ ಅಂತ ಯೋಚ್ಸ್ಕೊಂಡು ಬಸ್ ಹತ್ದೆ. ಒಂದೆರಡ್ ಗಂಟೆ ಕಳೀತು. ಒಳ್ಳೆ ನಿದ್ದೆ ಮಾಡಿದ್ದೆ. ಕಂಡಕ್ಟ್ರಪ್ಪಾ ನನ್ ಮುಖ್ದಾಗೆ ಸೀಟಿ ಊದಿ ಎಬ್ರಸ್ದ. "ನಿನ್ ಹಳ್ಳಿ ಬಂದೈತೆ ಇಳ್ಕಳಣ್ಣೌ" ಅಂದ. ನಾನು ನನ್ ಗಂಟು, ಮೂಟೆನೆಲ್ಲಾ ಹಿಡ್ದು ಇಳ್ದೆ. ನಾನು ಇಳ್ದ್ ತಕ್ಷಣ ಬಸ್ನವ ಮುಂದಕ್ ಹೊಂಟ್ಬಿಟ್ಟ.
"ಮುಂದಕ್ಕೆ? ಇದು ಹೆಂಗೆ ಅಂತ? ಮುಂದಕ್ಕೆ ಬರೀ ಕಾಡ್ದಾರಿ ಅಲ್ವ? ಅಲ್ಲಿ ಬಸ್ ಎಂಗ್ ಬುಡ್ತಾನವ?" ಅಂತ ನಾನ್ ಬಾಯ್ಬಾಯ್ ಬಿಟ್ಕೊಂಡ್ ನೋಡ್ಬೇಕಾದ್ರೆ ನನ್ ಮೂತಿ ನೋಡಿ, ಅದೇ ಹಳ್ಳಿಯವ್ನಾದ ಅನುಮ್ಯ ಕೂಗ್ದ.
"ಏನ್ಲಾ ಹಂಗ್ ಬಾಯ್ ತೆಕ್ಕೋಂಡ್ ನೋಡ್ತಿದ್ದಿ? ಮೊದ್ಲು ಮುಚ್ಚು. ಸೊಳ್ಳೆ ಗಿಳ್ಳೆ ಹೋಗ್ಬುಟ್ಟಾತು!!" ಅಂದ. ನಾನು, "ಅಲ್ಲ, ಅನುಮ್ಯ! ಈ ಬಸ್ನವ ಕಾಡ್ನಾಗ್ ಯಾಕ್ಲಾ ಓಗ್ತಾವ್ನೆ? ಅವ್ನಿಗೆ ಏನ್ ತಲೆಗಿಲೆ ಕೆಟ್ಟೈತೋ ಏನು?" ಅಂದೆ. ಅದಕ್ಕವ "ಅಯ್ಯೋ ನಿನ್ನ! ಯಾಕೋ? ನಿಂಗೆ ಗೊತ್ತಿಲ್ಲ್ವ ಕಾಡೊಳಾಕ್ ರಸ್ತೆ ಮಾಡಿದ್ದು? ನಿಮ್ ಹಟ್ಟಿ ತನ್ಕಾನು ಓಯ್ತಾನಲ್ಲೋ ಬಸ್ಸು! ಇಲ್ಯಾಕ್ ಇಳ್ಕೊಂಡೆ?" ಅಂದ. "ಅಯ್ಯೋ! ಹೌದೇನೋ, ಆ ಕಂಡಕ್ಟ್ರಪ್ಪಾ ಯೋಳ್ಲೆ ಇಲ್ಲ ನಂಗೆ!! ಯಾವಾಗಿಂದಾನೋ ಈ ರಸ್ತೆ ಆಗಿರೋದು?" ಅಂತ ಕೇಳ್ದೆ. ಅವ, "ಅಯ್ತು ಓಂದ್ ವರ್ಸ. ಓದ್ ಸಾರಿ ಹಳ್ಳಿ ಜಾತ್ರೆ ಹೊತ್ಗೆ ಆಗ್ ಹೋಗಿತ್ತಲ್ಲೋ!!" ಅಂದ.
ಸರಿ, ಇನ್ನು ಅವ್ನ್ ಜೊತೆ ಮಾತಾಡ್ತಿದ್ರೆ ಇನ್ನೇನು ಆಶ್ಚರ್ಯ ತಪ್ಪೋಯ್ತದೋ ಅಂತ ನಡ್ಕೊಂಡ್ ಹೊರ್ಟೆ ಕಾಡೊಳಕ್ಕೆ, ನಮ್ ಹಟ್ಟಿಗೆ.

- karihaida ರವರ ಬ್ಲಾಗ್
- Login or register to post comments
- 363 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕವಲ್ ದಾರಿ
ಬೋ ಸಂದಾಗದೆ, ಕವಲ್ ದಾರಿ ಕಥೆ. ಆದ್ರೆ, ಈ ಬಸ್ ಬಂದಿದ್ದು, ಲೈಟು ಬಂದಿದ್ದು, ಟಿವಿ ಬಂದಿದ್ದು, ಮನೇ ತಾವ್ಕೆ ನಲ್ಲಿ ನೀರು ಬಂದಿದ್ದು ನಮ್ ಅಳಿಗಳ ಮಾರೇನೇ ಬದ್ಲಾಯ್ಸ್ ಬುಟ್ಟೈತಲ್ವಾ. ಅಂಗೇನೇ ಅಲ್ಲೀ ಜನಗೋಳ್ ರೀತಿ, ನೀತಿ, ನಡವಳ್ಕೆನೂ ಬದ್ಲಾಯಿಸ್ಬುಟ್ಟೈತೆ !!! ಅವ್ರ ಬಾಯಲ್ಲಿ ಈಗ ರಾಜ್ಕಾರ್ಣಾ ಬಿಟ್ರೆ ಬ್ಯಾರೆ ಮಾತೈತಾ? ಐವತ್ ವರ್ಸಕ್ಕೇ ನೂರ್ ವರ್ಸೋದಾರಾಗೆ ಮುದ್ಯಾಗೋಗ್ತಾ ಇದಾರಲ್ಲಾ. ಉಳೋಕಾಗೋಲ್ಲ, ನೀರ್ ಒಡೆಯೋಕಾಗೋಲ್ಲ, ದನ ಕರು ಕುರಿ ಕೋಳಿ ಸಾಕೋಕಾಗಲ್ಲ ಅಂತಾ ಈ ಆಗೋಲ್ಗಳ ಪಟ್ಟಿ ಬೆಳೀತಿದ್ಯೆ ಹೊರ್ತು ಅವ್ರಿಂದ ಏನಾಯ್ತೀತೆ ಅಂತಾ ಏಚ್ನೇನೇ ಮಾಡ್ತಾ ಇಲ್ವಾಲ್ಲಾ?? ಎಲ್ಲಾಕೂ ಸರ್ಕಾರಾನೇ ಬೇಕು, ರಾಜ್ಕಾರ್ಣಿಗಳೇ ಬೇಕು. ಬ್ಯಾಂಕು ಮಾರ್ವಾಡಿಗಳ್ ಸಾಲಾನೇ ಬೇಕು ಅಂದ್ರೆ ಎಂಗೇ? ಯೋಳಿ ಮತ್ತೆ . . .
ಉ: ಕವಲ್ ದಾರಿ
ಕರಿಹಯಿದ!!
ಏನಣ್ಣ.. ಬೊಂಬಾಟ್...!!
ನಮ್ ಮನೆ ತಾವ ಕೂಡ ಇಂಗೇ ಇತ್ತು ಒಂದ್ ಕಾಲದಾಗೆ.. ನಮ್ ಮನೆ ಮಂಡ್ಯ ಟವನ್ನ ಊರಾಚೆ ಇತ್ತು.. ಆಗ ನಾವ್ ಇಸ್ಕೂಲಿಂದ ಮನೆಗೆ ನಡೆಕ್ಕೊಂಡು ವೋತಾ ಇದ್ರೆ.. ದಾರಿ ಉದ್ದುಕ್ಕೂ ಹುತ್ತಗಳೂ, ಮುಳ್ಪುದೆಗಳೂ ಇತ್ತಿತ್ತು...
"ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ ಕೇಳಿ ತಮ್ಮ ಪಾಡ್ಗೆ ತಾವು ಓಯ್ತಾರೆ. ಏನಾದ್ರು ತೊಗೊಂಡ್ ಹೋದ್ರೆ, ಒಂದ್ಸಾರಿ ಕಣ್ ಹಾಯ್ಸಿ ಅಲ್ಲೇ ಇಡ್ತಾರೆ. ಮನ್ಸಿಗ್ ಯಾಕೋ ಬೋ ಬೇಸರ ಆಗತ್ತೆ."
ಉ: ಕವಲ್ ದಾರಿ
ಸಂದಾಕಯ್ತೆ ಕಣಣ್ಣ ಕರಿಹಯ್ದ ನಿಮ್ ಬರಹ,
ಅಂದಾಗೆ ಈ ಊರು ಯಾವುದು?
ನೀಮ್ ಯೋಳ್ದಂಗೆ ಈಗ ಅಳ್ಳೀಲಿ ಮೊದಲಿದ್ದ ಪಿರೂತಿ, ಅಕ್ಕರೆ ಇವು ಕಮ್ಮಿ ಆಗವೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕವಲ್ ದಾರಿ
ಈ ಊರು ಯಾವ್ದ್ ಬೇಕಾದ್ರು ಆಗಿರ್ಬೋದು ಕಣಣ್ಣ! ಬೆಂಗ್ಳೂರ್/ಮೈಸೂರಿಂದ ಹಿಡಿದು ನಮ್ ಕಾಕನ್ ಕೋಟೆ ತಾಕ್ಕು ಆಯ್ತದೆ.
ನನ್ ಗೆಳೆಯರ್ ಕೆಲವ್ರು ಅಮೇರಿಕದಿಂದ ಬಂದಿದ್ರು. ಅವ್ರದ್ದೂ ಇದೇ ಕಥೆ. ಏನೂ ಮಾಡಕ್ಕಾಗಲ್ಲ ಕಣಣ್ಣ, ಎಲ್ಲಾ ಯೌವ್ವನ !!