ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › keshav ರವರ ಬ್ಲಾಗ್

ಸಿ ಅಶ್ವಥ್, ಸುಗಮ ಸಂಗೀತ ಮತ್ತು ಕನ್ನಡ ಸಾಹಿತ್ಯ

July 26, 2007 - 2:44am — keshav

ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು ಲಂಕೇಶ್ ಪತ್ರಿಕೆ ಓದಲು ಶುರುಮಾಡಿದ್ದೆವು. ಕನ್ನಡ-ಕರ್ನಾಟಕದ ಸಾಹಿತ್ಯ-ಕವನ-ಜನಪದ-ಸಂಗೀತಗಳಿಗೆ ಒಮ್ಮೆಲೇ ನಾವು ತೆರೆದುಕೊಂಡಿದ್ದು ಹೀಗೆ. ಹೀಗೆ ಆ ನನ್ನ ಎಳೆಯ ವಯಸ್ಸಿನಲ್ಲೇ, ಕೆ ಎಸ್ ನರಸಿಂಹಸ್ವಾಮಿ, ಬೇಂದ್ರೆ, ಅಡಿಗರಿಂದ ಹಿಡಿದು ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ ಆರ್ ಲಕ್ಷ್ಮಣರಾವ್ ವರೆಗೆ ಕವಿಗಳ ಪರಿಚಯ ಮಾಡಿಸಿದವರು ಸಿ ಅಶ್ವಥ್.

ಸಿ ಅಶ್ವಥ್ ಮತ್ತು ರಾಜ್ ಕುಮಾರ್ ಕನ್ನಡದ unique ಹಾಡುಗಾರರು ಮತ್ತು ಅವರದು ಯಾವ ಹಿಂದಿನ ಹಾಡುಗಾರರ ಅನುಕರಣೆಯಿರದ ಗಾಯನ. ಬರೀ ಸಂಗೀತವನ್ನೇ ತೆಗೆದುಕೊಂಡು ಅವರಿಬ್ಬರನ್ನೂ ಇಷ್ಟಪಡದ ಬಹಳ ಜನರನ್ನು ನೋಡಿದ್ದೇನೆ, ಕೆಲವು ಬರಹಗಳನ್ನೂ ಓದಿದ್ದೇನೆ. ಆದರೆ ಅವರೇನೂ ಕರ್ನಾಟಕೀ ಅಥವಾ ಹಿಂದುಸ್ಥಾನೀ ಶಾಸ್ತ್ರೀಯ ಹಾಡುಗಾರರಲ್ಲ, ಸಿ ಅಶ್ವಥ್ ಭಾವಗೀತಗಾಯಕ, ರಾಜ್ ಭಾವತುಂಬಿ ಹಾಡುವ ಸಿನಿಮಾ ಗಾಯಕ (ರಾಜ್ ಬಗ್ಗೆ ಮುಂದೆ ಯಾವಾಗಲಾದರೂ ಬರೆಯುತ್ತೇನೆ). ಕನ್ನಡ ಸುಗಮಸಂಗೀತ ಪಿ. ಕಾಳಿಂಗರಾವ್ ರಿಂದ ಶುರುವಾಗಿ, ಮೈಸೂರು ಅನಂತಸ್ವಾಮಿಯಲ್ಲಿ ಕೊನೆಯಾಗುತ್ತೇನೋ ಎಂದುಕೊಳ್ಳುವಾಗ, ಹೊಸ ಧ್ವನಿ, ಹೊಸ ರಾಗ, ಹೊಸ ಭಾವ ತುಂಬಿ ನಮ್ಮನ್ನು ಕನ್ನಡ ಕಾವ್ಯಲೋಕಕ್ಕೆ ತೆರೆದಿದ್ದು ಸಿ ಅಶ್ವಥ್.

ಹಾಗೆಂದು ನಾನು ಸಿ ಅಶ್ವಥ್ ರ ಎಲ್ಲ ಕ್ಯಾಸೆಟ್ ಗಳನ್ನು ಕೇಳಿದ್ದೇನೆ ಎಂದಾಗಲೀ, ಕೇಳಿದ ಎಲ್ಲ ಹಾಡುಗಳನ್ನು ಮೆಚ್ಚುತ್ತೇನೆ ಎಂದಾಗಲಿ, ಎಲ್ಲ ಶೈಲಿಗಳನ್ನೂ ಒಪ್ಪಿಕೊಳ್ಳುತ್ತೇನೆ ಎಂದಾಗಲೀ ಅಲ್ಲ. ನನ್ನದೂ ಸುಮಾರು ತಕರಾರುಗಳಿವೆ. ತಕರಾರಿಗಿಂತ ಮೊದಲು ನನಗೆ ಇಷ್ಟವಾದವುಗಳನ್ನು ಹೇಳುತ್ತೇನೆ.

ಶರೀಫರ ಮೊದಲೆರೆಡು ಕ್ಯಾಸೆಟ್ ಗಳಲ್ಲಿ ಜನಪದದೊಂದಿಗೆ ರಾಗಗಳ ಮಿಶ್ರಣ, ಅದರ ಜೊತೆ ಸಿ ಅಶ್ವಥ್ ಮತ್ತು ಶಿವಮೊಗ್ಗ ಸುಬ್ಬಣ್ಣರ ಹಾಡುಗಾರಿಕೆ ಆಗಿನ ಕಾಲದಲ್ಲಿ ನಿಂತನೀರಾಗಿದ್ದ ಭಾವಗೀತ ಪ್ರಪಂಚದಲ್ಲಿ ಹೊಸ ಅಲೆಗಳನ್ನೆಬ್ಬಿಸಿದವು. ಮುಂದೆ 'ಸಂತ ಶಿಶುನಾಳ ಶರೀಫ' ಚಲನಚಿತ್ರ ಬಂದಾಗ ಪುನಃ ಹೊಸ ಸಂಯೋಜನೆ ಮಾಡಿ ಮತ್ತೆ ಹಾಡಿದ ಕ್ಯಾಸೆಟ್ ಸಿ ಅಶ್ವಥ್ ಶರೀಫ ಸಾಹೇಬರಿಗೆ ಕೊಟ್ಟ ಶ್ರೇಷ್ಟ ಕಾಣಿಕೆ ಎನ್ನಬಹುದು. 'ಅಳಬೇಡ ತಂಗಿ ಅಳಬೇಡ', ಶಿವಮೊಗ್ಗ ಸುಬ್ಬಣ್ಣನವರ ಬಾಯಲ್ಲೇ ಕೇಳಬೇಕು. 'ತರವಲ್ಲ ತಗೀ ನಿನ್ನ ತಂಬೂರಿ', 'ಸೋರುತಿಹುದು ಮನೆಯ ಮಾಳಿಗಿ', ಸಿ ಅಶ್ವಥ್ ರ ಹಾಡುಗಾರಿಕೆಯಲ್ಲಿ ಪ್ರತಿ ಶಬ್ದದ ಅರ್ಥ ತುಂಬಿ ತುಳುಕುತ್ತದೆ. ಸಿನಿಮಾಗೆ ಹಾಡಿದ 'हम तो देखा महम्मद..', ಸಿ ಅಶ್ವಥ್ ಮಾತ್ರ ಹಾಡಲು ಸಾಧ್ಯ (ಬಹುಷಃ ಸುಖಬಿಂದರ್ ಸಿಂಗ್ ಹಾಡಬಹುದೇನೋ?). ಉತ್ತರ ಕರ್ನಾಟಕದ ಶರೀಫ ಸಾಹೇಬ ಸಮಗ್ರ ಕರ್ನಾಟಕದ ಸಂತ ಶಿಶುನಾಳ ಶರೀಫರನಾಗಿಸಿದ್ದು ನಮ್ಮ unique ಸಿ ಅಶ್ವಥ್.

ಕೆ ಎಸ್ ನರಸಿಂಹಸ್ವಾಮಿ, 'ಕ್ಯಾಸೆಟ್ ಕವಿ'ಗಳು ಹುಟ್ಟುವ ಮೊದಲು, ಭಾವಗೀತಹಾಡುಗಾರರ ಅಚ್ಚುಮೆಚ್ಚಿನ ಕವಿ; ಅದಕ್ಕೆ ಸಿ ಅಶ್ವಥ್ ಏನೂ ಹೊರತಲ್ಲ. ಮೈಸೂರು ಅನಂತಸ್ವಾಮಿ ಹಾಡಿದ 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...' ಹಾಡು ಕೇಳದ ಭಾವಗೀತಪ್ರೀಯನಿಲ್ಲ, ಆದರೆ ಮೈಸೂರು ಅನಂತಸ್ವಾಮಿ ಹೆಂಡತಿಯನ್ನು ಬಿಟ್ಟು ಮುಂದೆ ಹೋಗಲೇಯಿಲ್ಲ. ಸಿ ಅಶ್ವಥ್, ಕೆ ಎಸ್ ನ ರ ಕವನಸಂಕಲನಗಳಿಂದ ಭಾವಗೀತೆಗಳನ್ನು ಹೆಕ್ಕಿ ಹೆಕ್ಕಿ ಹಾಡಿದರು, ಹಾಡಿಸಿದರು. ಮುಂದೆ ' ಮೈಸೂರು ಮಲ್ಲಿಗೆ' ಚಿತ್ರವಾದಾಗ ಮರುಸಂಯೋಜನೆ ಮಾಡಿ, ಎಸ್ ಪಿ ಬಾಲಸುಬ್ರಮಣ್ಯಂ ಧ್ವನಿಗೂಡಿಸಿದಾಗ, ಪ್ರತಿ ಕವನವೂ ಭಾವದುಂಬಿ ಹರಿಯಿತು. 'ಬಳಿಗಾರ ಚನ್ನಯ್ಯ', 'ಒಂದಿರುಳು ಕನಸಿನಲಿ', 'ಕತ್ತಲೆ ತುಂಬಿದ', ' ನಿನ್ನ ಪ್ರೇಮದ ಪರಿಯ' ಚಿತ್ರದ ಪ್ರತೀ ಹಾಡೂ ಭಾವವಾಗಿ ಹಾರಿತು.

ಬೇಂದ್ರೆಯನ್ನು ಮೆಚ್ಚದ ಕಾವ್ಯರಸಿಕರುಂಟೇ? ಬೇಂದ್ರೆ ತಮ್ಮ ಹಾಡುಗಳಿಗೆ ತಾವೇ ರಾಗ ಹಾಕುತ್ತಿದ್ದರು ಅಥವಾ ಸಿದ್ಧ ಧಾಟಿಯಲ್ಲಿ ಬರೆಯುತ್ತಿದ್ದರು ಎಂದು ಕೇಳಿದ್ದೇನೆ, ಆದರೆ ಆ ರಾಗಗಳನ್ನು ನಾನು ಕೇಳಿಲ್ಲ. ಧಾರವಾಡದ ಆಕಾಶವಾಣಿಯಲ್ಲಿ, ಕ್ಯಾಸೆಟ್ ಯುಗ ಶುರುವಾಗುವ ಮೊದಲು, ಬೇಂದ್ರೆ ಹಾಡುಗಳಿಗೇನೂ ಕಡಿಮೆಯಿರಲಿಲ್ಲ. ಸಿ ಅಶ್ವಥ್ ರ ' ಶ್ರಾವಣ'ದಲ್ಲಿ 'ಕುರುಡು ಕಾಂಚಾಣ', ' ಘಮ ಘಮಡಸತಾವ ಮಲ್ಲಿಗೆ' ನನಗೆ ಇಷ್ಟವಾದ compositions.

ಮೈಸೂರು ಅನಂತಸ್ವಾಮಿ, ಅಡಿಗರ ನವೋದಯಕಾಲದ 'ಯಾವ ಮೋಹನ ಮುರಲಿ ಕರೆಯಿತು' ಶ್ರುತಿಮಾಡಿದ್ದಾರೆ; ಆದರೆ ಆ ಕವನದ 'ಓಲಿದ ಮಿದುವೆದೆ..' ಯ ಎರಡು ಸಾಲುಗಳನ್ನು ಸೆನ್ಸಾರ್ ಮಾಡಿ, ಕವನಕ್ಕೇ ಮೋಸ ಮಾಡಿದ್ದಾರೆ. ಮತ್ತು ಅಡಿಗರ ನವ್ಯ ಕಾವ್ಯವನ್ನು ಹಾಡುವ ಗೋಜಿಗೆ ಹೋಗಲಿಲ್ಲ (ಕವನವನ್ನು ಹಾಡಿ ಅರ್ಥೈಸಬಹುದೇ? - ಚರ್ಚೆಯ ವಿಷಯ). ಅಡಿಗರ 'ಅಮೃತವಾಹಿನಿ' ರಾಜ್ ಧ್ವನಿಯಲ್ಲಿ ಕೇಳುತ್ತಿದ್ದರೆ ಮೈ ಝುಂಯೆನ್ನಬೇಕು. ' ತಳದೊಳೆಲ್ಲೊ ತಳುವಿ' ಎಂಬ ಸಾಲನ್ನು ರಾಜ್ ಬಾಯಲ್ಲೇ ಕೇಳಬೇಕು. ಈ ಕವನದ composition ಸಿ ಅಶ್ವಥ್ ರ ಸೃಜನಶೀಲತೆಗೆ ಸಾಕ್ಷಿ.

ಬಿ ಆರ್ ಲಕ್ಷ್ಮಣರಾವ್, ನಾವು ಪಡ್ಡೆಹುಡುಗರ ವಯಸ್ಸಿರುವಾಗ, ಮೂಡಿಬಂದ ಯುವಕವಿ. 'ಜಾಲಿ ಬಾರಿನಲ್ಲಿ', 'ನಾ ಚಿಕ್ಕವನಾಗಿದ್ದಾಗ', 'ಬಿಡಲಾರೆ ನಾ ಸಿಗರೇಟು', 'ಬಣ್ಣಿಸಲೇ ಹೆಣ್ಣೇ' ಸಿ ಅಶ್ವಥ್ ರ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತವೆ. ಕವನಗಳ ಬಾವಗಳಿಗೆ, ಬಾಷೆಗೆ ತಕ್ಕಂತೆ ಸ್ವರಸಂಯೋಜನೆ ಅಶ್ವಥ್ ರಷ್ಟು ಇನ್ನಾವ ಭಾವಗೀತ ಸಂಯೋಜಕನೂ ಮಾಡಿಲ್ಲ.

ಮಂಕುತಿಮ್ಮನ ಕಗ್ಗ ಇತ್ತೀಚೆಗೆ ಪುರಾಣ-ಪ್ರವಚನವಾಗಿದೆ. ಸಿ ಅಶ್ವಥ್ ಅದಕ್ಕೆ ಹಾಡಿನ ಅಲಂಕಾರವನ್ನೊ ಮಾಡುವ ಪ್ರಯತ್ನ ಮಾಡಿದ್ದಾರೆ ಮಾತ್ತು ರಾಜ್ ಭಾವತುಂಬಿದ್ದಾರೆ. 'ಶ್ರೀವಿಷ್ಣುವಿಶ್ವಾದಿ ಮೂಲ'ದಿಂದ ಆರಂಭಿಸಿ 'ಶರಣುವೊಗು ಜೀವನ್ ರಹಸ್ಯದಲಿ' ವರೆಗು, ಸಿ ಅಶ್ವಥ್ ವಿಭಿನ್ನ ಪ್ರವತ್ನ ಮಾಡಿದ್ದಾರೆ.

ಇನ್ನು ಚೆನ್ನವೀರ ಕಣವಿ, ಜಿ ಎಸ್ ಶಿವರುದ್ರಪ್ಪ ಮೊದಲಾದ ಹಿರಿಯರ ಕವನಗಳೂ ತುಂಬ ಚೆನ್ನಾಗಿ ಮೂಡಿಬಂದಿವೆ. ಆದರೆ ಕ್ಯಾಸೆಟ್ ಕವಿಗಳ ಬಗ್ಗೆ ನನ್ನ ತಕರಾರಿದೆ ಮತ್ತು ಕನ್ನಡ ಸುಗಮಸಂಗೀತ ನಿಂತನೀರಾಗಲು ಅವರೇ ಮುಖ್ಯ ಕಾರಣರು ಎಂದು ನನ್ನ ಅನಿಸಿಕೆ.

ಸಿ ಅಶ್ವಥ್ ಕನ್ನಡಭಾವಲೋಕದಲ್ಲಿ ಹೊಸ ಅಲೆಯೆಬ್ಬಿಸಲು ಕಾರಣವಾಗಿದ್ದು ಅವರ ರಂಗಭೂಮಿ ಸಂಗೀತ. ನಾನು ಅವರ ಸಂಗೀತ ನಿರ್ದೇಶನದ ಒಂದೇ ಒಂದು ನಾಟಕವನ್ನೂ ನೋಡಿಲ್ಲ. ಆದರೆ 'ನಾಗಮಂಡಲ' ದಲ್ಲಿ ಗೋಪಾಲ ವಾಜಪೇಯಿಯ ಹುಚ್ಚು ಹಿಡಿಸುವ ಸಾಹಿತ್ಯ ಮತ್ತು ಅಶ್ವಥ್ ರ ಜನಪದದಿಂದ ಸ್ಫೂರ್ತಿ ಪಡೆದ ಮತ್ತು ಹಿಡಿಸುವ ಸಂಗೀತವಿದೆ.

ಇಷ್ಟೆಲ್ಲವಾದರೂ ಸಿ ಅಶ್ವಥ್, ಕನ್ನಡ ಚಿತ್ರರಂದ untapped ಸಂಗೀತ ನಿರ್ದೇಶಕರಾಗಿ ಉಳಿದುಹೋಗಿದ್ದು ಕನ್ನಡ ಚಿತ್ರರಂಗದ ವಿಪರ್ಯಾಸಗಳಲ್ಲಿ ಒಂದು. ಬರೀ art ಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಿದ ನಮ್ಮ ಚಿತ್ರ ನಿರ್ಮಾಪಕರು 'ನಮ್ಮೂರ ಮಂದಾರ ಹೂವೇ' ಹಾಡನ್ನು ಕೇಳಿದ್ದಾರೆಯೇ ಎಂದು ಸಂಶಯ ಬರುತ್ತದೆ. ' ನೇಸರ ನೋಡು', ಕಾಕನಕೋಟೆಯ ಹಾಡು, ಸಲೀಲ್ ಚೌಧರಿ ಸಂಗೀತವನ್ನು ನೆನಪಿಸುತ್ತದೆ.

ನನ್ನ ಪ್ರಕಾರ ಸಿ ಅಶ್ವಥ್ ಸ್ವರಸಂಯೋಜಿತ ಹಾಡುಗಳನ್ನು ಸಿ ಅಶ್ವಥ್ ಹೊರತಾಗಿ ಇನ್ನಾರೂ ಹಾಡಲು ಸಾಧ್ಯವಿಲ್ಲ. ರಾಜ್ ಮತ್ತು ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಹೊಂದುವ ಹಾಡುಗಳನ್ನು ತುಂಬ ಸೊಗಸಾಗಿ ಹಾಡಿದ್ದಾರೆ. 'ನಮ್ಮೂರ ಮಂದಾರ ಹೂವೇ' ಎಸ್ ಪಿ ಬಿ ಯನ್ನಲ್ಲದೇ ಬೇರೆಯವರನ್ನು ಊಹಿಸಿ ನೋಡಿ; 'ಹೊತ್ತಿತೋ ಹೊತ್ತಿತು ಕನ್ನಡದ ದೀಪ' ರಾಜ್ ಹೊರತು ಇನ್ನೊಬ್ಬರು ಆ ಭಾವತುಂಬಿ ಹಾಡಿಯಾರೇ? ಶಿವಮೊಗ್ಗ ಸುಬ್ಬಣ್ಣ, ಯಶವಂತ್ ಹಳಬಂಡಿ, ಸಂಗೀತಾ ಕಟ್ಟಿ (ಈಗ ಸಂಗೀತಾ ಕುಲಕರ್ಣಿ) ಸ್ವಲ್ಪ ಮಟ್ಟಿಗೆ ನ್ಯಾಯ ಒದಗಿಸಿದ್ದಾರೆ. ಉಳಿದ ಯಾವ ಹಾಡುಗಾರರೂ (ಹೆಚ್ಚಾಗೆ ಮಹಿಳೆಯರು) (ನಾನು ಅವರ ಹೆಸರು ಹೇಳಲು ಇಷ್ಟಪಡುವುದಿಲ್ಲ) ಸಿ ಅಶ್ವಥ್ ಸಂಗೀತಕ್ಕೆ ಭಾವತುಂಬಿ ಹಾಡನ್ನು ಯಶಸ್ವಿಯಾಗಿಸುವಲ್ಲಿ ವಿಫಲರಾಗಿದ್ದಾರೆ.

ಸಿ ಅಶ್ವಥ್ ಹಾಡುಗಾರನಾಗಿ ಬಹಳ ಜನರಿಗೆ ಇಷ್ಟವಾಗದೇ ಇರಬಹುದು, ಅದರಲ್ಲೂ ಹಾಡುಗಳಲ್ಲಿರುವ ಸಾಹಿತ್ಯ ಅರ್ಥವಾಗದವರಿಗೆ ಸಿ ಅಶ್ವಥ್ ಕೂಗಿದಂತೆ ಕೇಳಿದರೂ ಅಚ್ಚರಿಪಡಬೇಕಿಲ್ಲ. ಸಾಹಿತ್ಯದ ರುಚಿಯಿರುವವರಿಗೆ ಮಾತ್ರ ಸಿ ಅಶ್ವಥ್ ಹಾಗೇಕೆ ಹಾಡುತ್ತಾರೆಯೆಂದು ಅರ್ಥವಾಗುತ್ತದೆ ಮತ್ತು ಪ್ರತಿ ಶಬ್ದಗಳ, ಸಾಲುಗಳ ಹೊಸ ಅರ್ಥಗಳನ್ನು ಹುಡುಕಲು ಅವರ ಹಾಡುಗಾರಿಕೆ ನೆರವಾಗುತ್ತದೆ. ಆದರೂ ಅವರು ಇಷ್ಟು ವರ್ಷದಿಂದ ಹಾಡುತ್ತಿದ್ದರೂ ಇನ್ನೂ ಉತ್ತರಕರ್ನಾಟಕದ 'ಅ' ಅನ್ನು 'ಆ' ಎಂದು ಹೇಳುವಿದನ್ನು ಮಾತ್ರ ಬಿಟ್ಟಿಲ್ಲದಿರುವುದು ಆಶ್ಚರ್ಯ. ಉದಾ: ಬೇಂದ್ರೆಯವರ 'ಹೊಸದ್ವೀಪಗಳಿಗೆ ಹೊರಟಾನ ಬನ್ನಿ', ಅಶ್ವಥ್ ರ ಬಾಯಲ್ಲಿ 'ಹೊಸದ್ವೀಪಗಳಿಗೆ ಹೊರಟಾನಾ ಬನ್ನಿ' ಆಗಿತ್ತದೆ. ಇದನ್ನು ಯಾಕೆ ಯಾರೂ ಅವರಿಗೆ ಹೇಳಿಲ್ಲವೋ ನಾ ಕಾಣೆ.

ಅಶ್ವಥ್ ಸುಗಮಸಂಗೀತದ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. ಪುಸ್ತಕ ಅವರ ಸಂಗೀತದಷ್ಟು ಇಷ್ಟವಾಗುವಿದಿಲ್ಲವಾದರೂ ಕನ್ನಡ ಸುಗಮಸಂಗೀತದ ಬಗ್ಗೆ ಅವರ ನಿಲುವನ್ನು ತೋರಿಸುತ್ತದೆ. ಆ ಪುಸ್ತಕದಲ್ಲಿ ಸುಗಮಸಂಗೀತದಲ್ಲಿ interlude ಬಗ್ಗೆ ಸಿ ಅಶ್ವಥ್ ನಿಲುವು ಏನೇ ಇರಬಹುದು, ಆದರೆ ಚಲನಚಿತ್ರ ಸಂಗೀತದಂತೆ ಸುಗಮಸಂಗೀತದಲ್ಲಾಗಲೀ, ಭಕ್ತಿಗೀತೆಗಳಲ್ಲಾಗಲೀ ಈ interlude ಅದೇಕೆ ಬರುತ್ತದೋ ನನಗೆ ಅರ್ಥವಾಗುವುದಿಲ್ಲ. ಸಿ ಅಶ್ವಥ್ ಪ್ರಕಾರ interlude ಹಾಡಿನ ಅರ್ಥವನ್ನು ಹೆಚ್ಚಿಸುತ್ತದೆ, ಆದರೆ ನನ್ನ ಪ್ರಕಾರ ಅದು ಹಾಡನ್ನು ಕೊಲ್ಲುತ್ತದೆ. Interlude ಹಾಡುಗಾರನಿಗೆ ಉಸಿರುತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕೇ ಹೊರತು, ಕೇಳುಗಾರನಿಗೆ ಹಾಡಿನ continuity ನೇ ಬಿಟ್ಟು ಹೋಗುವಂತಿರಬಾರದು. ಏಷ್ಟೊಂದು ಸಲ interludeನ ಸಮಯ ಹಾಡುಗಾರನ ಸಮಯಕ್ಕಿಂತ ಹೆಚ್ಚಾಗಿರುತ್ತದೆ. ಚಿತ್ರಗೀತೆಯಲ್ಲಾದರೆ interlude ಅನ್ನು ಕುಣಿತಕ್ಕೋ ಏನಕ್ಕೋ ಉಪಯೋಗಿಸಿಕೊಳ್ಳುತ್ತಾರೆ. ಕೆಲವು ಸಂಗೀತ ನಿರ್ದೇಶಕರು interludeಅನ್ನು ತಮ್ಮ ಪ್ರತಿಭೆ ಎಂದುಕೊಳ್ಳುತ್ತಾರೆ. ಸುಗಮಸಂಗೀತದ ಇನ್ನೊಂದು ಸಮಸ್ಯೆ ಹಾಡನ್ನು ೪-೬ ನಿಮಿಷ ಇರಲೇಬೇಕೆಂಬ ಅಲಿಖಿತ ನಿಮಯ; ಅದಕ್ಕಾಗಿ interludeಅನ್ನು ಹಿಗ್ಗಿಸುತ್ತಾರೆ ಅಥವಾ ಕವನದ ಕೆಲ ಸಾಲುಗಳನ್ನು ತಿನ್ನುತ್ತಾರೆ. ನನಗೆ ಇದೇಕೆ ಎಂದೇ ಅರ್ಥವಾಗಿಲ್ಲ.

ದೇವಗಿರಿ ಶಂಕರರಾವ್ ಜೋಷಿಯವರಲ್ಲಿ ಹಿಂದುಸ್ತಾನಿ ಸಂಗೀತ ಕಲಿತು, ರಂಗಭೂಮಿ ಸಂಗೀತದಲ್ಲಿ ಪಳಗಿ, ಜನಪದ ಸಂಗೀತ ಬೆರೆಸಿ ಕನ್ನಡ ಕಾವ್ಯಲೋಕವನ್ನು ಜನಸಾಮಾನ್ಯರಿಗೆ ತೋರಿಸಿದ ಸಿ ಅಶ್ವಥ್ ಕನ್ನಡ ಕಾವ್ಯ-ಸಂಗೀತ ಲೋಕದ ರಾಯಭಾರಿ. ಅಶ್ವಥ್ ಸ್ವರಸಂಯೋಜಕ, ಹಾಡುಗಾರರಷ್ಟೇ ಅಲ್ಲ, he is a great entertainer. ಕಳೆದ ವರ್ಷ ಬೆಂಗಳೂರು ಅರಮನೆ ಆವರಣದಲ್ಲಿ ನಡೆದ 'ಕನ್ನಡವೇ ಸತ್ಯ' ಕಾರ್ಯಕ್ರಮಕ್ಕೆ ನೆರೆದ ಒಂದು ಲಕ್ಷ ಜನರೇ ನಿದರ್ಶನ.

ಆದರೆ ಕನ್ನಡ ಬಾವಗೀತಲೋಕ ಕ್ಯಾಸೆಟ್ ಕವಿಗಳಿಂದಾಗಿ, ಸಿ ಅಶ್ವಥ್ ಹೊರತು ಇನ್ನೊಬ್ಬ ಸಂಗೀತಕಾರನಿಲ್ಲದೇ, ಹೊಸ ಪ್ರಯೋಗಗಳಿಲ್ಲದೇ ಸತ್ತು ಹೋಗುತ್ತಿದೆ. ಬಹುಷಃ ಅಶ್ವಥ್ ರೇ ಪುನರುಜ್ಜೀವನ ಮಾಡಬೇಕೇನೋ?

  • ಸಂಗೀತ
  • ಸಾಹಿತ್ಯ
  • ಸಿ ಅಶ್ವಥ
  • ಸುಗಮ ಸಂಗೀತ
~.~
  • keshav ರವರ ಬ್ಲಾಗ್
  • Login or register to post comments
  • 351 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನು ಗಾಂಧಿಯನ್ನು ಕೊಲ್ಲಲಿಲ್ಲ
  • ಕೆ ಎಸ್ ಅಶ್ವಥ್ ರವರ ಕುರಿತು ಪ್ರಜಾವಾಣಿಯಲ್ಲಿಂದು ಲೇಖನ...
  • ಕನವರಿಕೆಯೊಳು ಕಂಡೆ ಕಳವಳವ..!!
  • ನಿನ್ನ ನೋಟಕೆ ಜಗ ನಡುಗಿದೆ.....!!
  • ಭಾವಗೀತೆ
Syndicate content

ಲೇಖಕರು

keshav's picture

ಪರಿಚಯ

I am a radiologist (doctor) by profession, but I spend lots of time in literature, music, movies and internet.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • msudan86
    ಉ: ಜನಗಳು ಅಥವಾ ಜನನಾಯಕರ ಉದ್ದೇಶ ಸರಿಯೋ ಅಥವಾ ತಪ್ಪೋ ?
    January 9, 2009 - 1:50pm
  • asuhegde
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 1:44pm
  • gurubaliga
    ಉ: ಖಾಲಿ ಬಾಟಲಿ
    January 9, 2009 - 1:42pm
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 1:41pm
  • gurubaliga
    ಉ: ಮೌನ ಎದೆ
    January 9, 2009 - 1:40pm
  • savithasr
    ಉ: ಉದ್ದ ಕಾಲಿನ ನೊಣ ೨
    January 9, 2009 - 1:36pm
  • savithasr
    ಉ: ಉದ್ದ ಕಾಲಿನ ನೊಣ ೧
    January 9, 2009 - 1:33pm
  • gurubaliga
    ಉ: ರಾತ್ರಿಯಲ್ಲಿ: ಕಾಫ್ಕಾ ಕಥೆ
    January 9, 2009 - 1:29pm
  • savithasr
    ಉ: ಜೋಡಿಹಕ್ಕಿ
    January 9, 2009 - 1:24pm
  • Shashikanth. Birge
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 1:17pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 161 ಅತಿಥಿಗಳು ಆನ್ಲೈನ್ ಇರುವರು.


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator