'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ನನ್ನ ಸ್ನೇಹಿತರೊಬ್ಬರು ನನಗೆ ಕನ್ನಡಪ್ರಭವೆನ್ನುವ ಒಂದು ಕನ್ನಡ ದಿನಪತ್ರಿಕೆಯ ಒಂದು ಅಂಕಣವನ್ನು ಓದಲು ತೋರಿಸಿದರಿಂದು. ಕನ್ನಡಕ್ಕೆ ಶಾಸ್ತ್ರೀಯ ಭಾಷಾಸ್ಥಾನಮಾನವನ್ನು ಆಗ್ರಹಿಸಿ ಸಲ್ಲಿಸಿದ ಪ್ರಾರ್ಥನೆಯು ಪರಿಶೀಲನೆಗೆ ಹೋಗಿದೆಯೆಂದು. ನನಗೆ ಈ ವಿಷಯದಲ್ಲಿ ಆಸಕ್ತಿಯು ಕುಂದಿ ಹೋಗಿತ್ತು. ಆದರೂ ಹಳೆಯದನೆಲ್ಲ ಜ್ಞಾಪಿಸಿಕೊಂಡು ನನ್ನ ಅಭಿಪ್ರಯನಿಸಿಕೆಗಳನ್ನು ಒಂದೆಡೆ ಹರಡಿಬಿಡೋಣ ಎಂಬ ಅಂತರಭಿಲಾಷೆಯೆದ್ದಿತು. ಆ ಅಭಿಲಾಷೆಯ ಫಲವೇ ಈ ಬ್ಲಾಗು. ನನ್ನ ಪರಿಜ್ಞಾನದ ಸೀಮಿತ ಸೀಮೆಯೊಳಗೆ ನನಗರಿವಾದವುಗಳನ್ನು ಅರುಹಿಕೊಂಡಿದ್ದೇನೆ. ಕಿಂಚಿತ್ತೂ ದೋಷಜ್ಞಾತವಾದರೆ ಅದಕ್ಕೆ ಕ್ಷಮೆಯನ್ನು ಮುನ್ನವೇ ಕೋರುವೆನು.
ಈ ಕಥೆಯು ಇಂತು ಸಾಗುವುದು. ಆಂಗ್ಲರ ಕಾಲದೊಳು ನಮ್ಮ ಭಾರತದೇಶದಲ್ಲಿ ಮೂರನ್ನು ಶಾಸ್ತ್ರೀಯಭಾಷೆಗಳೆಂದು ಪರಿಗಣಿಸಲ್ಪಟ್ಟಿತ್ತು. ಅವು ಸಂಸ್ಕೃತ, ಆರಬ್ಬೀ ಹಾಗು ಪಾರಸೀ. ಆಗಲೇ ನಮ್ಮ ದ್ರಾವಿಡರ( ತಮಿಳರ ) ರಕ್ತನೇತ್ರಕ್ಕೆ( ಕೆಂಗಣ್ಣಿಗೆ ) ಗುರಿಯಾಗಿದ್ದ ವಿಷಯವಿದು. ತತ್ಕಾಲದಲ್ಲೇ ದ್ರಾವಿಡರು ತಮಿಳೂ ಶಾಸ್ತ್ರೀಯ ಭಾಷೆಯೇ, ಅದು ಸಂಸ್ಕೃತಾದಿಗಳಿಗಿಂತೇನು ಕಡಮೆಯಿಲ್ಲವೆಂದು ಆಗ್ರಹಿಸಿ, ಶಾಸ್ತ್ರೀಯಭಾಷಾಸ್ಥಾನಕ್ಕೆ ಬೇಡಿಕಯೊಡ್ಡಿದ್ದರಂತೆ. ಈ ದ್ರಾವಿಡರಿಗೆ ಸಂಸ್ಕೃತವು ತಮಿಳಿಗಿಂತ ಮೇಲ್ನುಡಿ, ಶೇಷ್ಠವೆನ್ನುವದನ್ನು ತಿರಸ್ಕರಿಸಿ, ತಮಿಳೇ ಎಲ್ಲ, ಎಂಬ ಬೃಹದಭಿಮಾನ ಆಗಲೇ ಬಂದುಬಿಟ್ಟಿತ್ತಂತೆ. ಇತರರು ಇವರನ್ನು ಅನುಕರಣಿಸಿದೇ, ಬೆಂಬಲಿಸದೇ, ಈ ದ್ರಾವಿಡರು ಏಕಾಂಗಿಯಾಗೇ ತಮ್ಮ ಸಾಹಸಧೋರಣೆಯನ್ನು ಮುಂದುವಿರಿಸಿದರಂತೆ.
ಆಂಗ್ಲರು ರಾಜ್ಯಭಾರವನ್ನು ಮುಂದುವರಿಸಿದ್ದರೆ, ತಮಿಳಿಗಂದೇ ಈ ಸ್ಥಾನಮಾನ ದಕ್ಕಿ ಹೋಗುತ್ತಿತ್ತೇನೋ. ಆದರೆ ಕಾಲವಶಾತ್ ಭಾರತವು ಸ್ವತಂತ್ರತೆಯೆಂಬುದನ್ನು ಹೊಂದಿ, ಆಡಳಿತದಲ್ಲಿ ವಿಪರ್ಯಯವಾಗಿ, ನವರಾಜ್ಯಾಡಳಿತವು ಬಂದ ಗಡಿಬಿಡಿ ಗದ್ದಲದಲ್ಲೀ ಶಾಸ್ತ್ರೀಯ ಭಾಷಾ ವಿಷಯದ ಧ್ವನಿ ಕ್ಷೀಣಿಸಿ ಹೋಯಿತು. ಆದರೂ ಇದು ಆಗಾಗಾ ದ್ರಾವಿಡದೇಶದಲ್ಲಿ ಹಿಂದಿ ವಿರೋಧಾಂದೋಳನ ಮುಂತಾದ ಸಂದರ್ಭಗಳಲ್ಲಿ ಪದೇ ಪದೇ ಕೇಳಿಸಿಕೊಂಡಿತ್ತು.
ಈ ಆರುವತ್ತು ಸಂವತ್ಸರಗಳಲ್ಲಿ, ದ್ರಾವಿಡರು ತಮ್ಮ ತಮಿಳಿಗೆ ಯಥಾಕಥಾ ಶಾಸ್ತ್ರೀಯ ಸ್ಥಾನಮಾನವನ್ನು ಲಭಿಸಿಸಿಯೇ ತೀರಬೇಕೆಂದು ಪಣತೊಟ್ಟವರಂತೆ, ಜಗತ್ತಿನ ನಾನಾ ಮೂಲೆಗಳಿಗೆ ಹೋಗಿ, ಅನೇಕ ದೇಶಗಳಲ್ಲಿ ಇವರ ವಲಸೆಯಿಂದ, ಆ ಆ ದೇಶದ ರಾಷ್ಟ್ರಭಾಷೆಯನ್ನಾಗಿ ತಮಿಳನ್ನಾಗಿಸಿ, ತಮಿಳಿನ ಹಳೆಯ ಸಾಹಿತ್ಯವನ್ನೆಲ್ಲ ಕೆದುಕಿ, ಅವರ ಚಂಗ ಸಾಹಿತ್ಯ, ತೊಲ್ಕಾಪ್ಪಿಯಂ, ಚಿಲಪ್ಪದಿಗಾರಂ ಮುಂತಾದವಗಳ ಬಗ್ಗೆ ದೊಡ್ಡ ಆರಯ್ಯಗಳನ್ನು ಚೋರಾಗಿ ನಡೆಸಿ, ಶುದ್ಧ ತಮಿಳಿನ, ಸೆಂದಮಿಳಿನ ವೈಭವನ್ನು ಮರೆಸುತ್ತಾ ಹೋದರು.
ಈ ತಮಿಳು ವೈಭವದ ಬೃಹದಭಿಮಾನದ ಫಲವೇ ದ್ರಾವಿಡ ರಾಜಕೀಯ ಪಕ್ಷಗಳು. ಈ ರಾಜಕೀಯದ ಕಟ್ಚಿಗಳು ಹುಟ್ಟಿಕೊಂಡ ಬಳಿಕವಂತೂ ಒಬ್ಬರಿಂತ ಒಬ್ಬರು ಸ್ಫರ್ಧೆಗೆ ಸೆಣಸುವವರಂತೆ, ತಮಿಳು ತಮಿಳು ಎಂದು ಸರ್ವಂ ತಮಿಳುಮಯಂ ಮಾಡಿದರು. ಇದರಿಂದ ತಮಿಳು ಭಾಷೆಗೆ ರಾಜಕೀಯದ, ಸಂಸದರ, ಹೆಬ್ಬೆಂಬಲ ದೊರೆಕಿತು. ಈ ಕಟ್ಸಿಗಳ ಒಳಜಗಳ ಏನೇ ಇರಲಿ, ಎಷ್ಟೇ ಇರಲಿ, ಇವರು 'ತಮಿಳು' ಎಂಬ ವಿಷಯದಲ್ಲಿ ಒಕ್ಕೂಡೇ ಒಕ್ಕೂಡುತ್ತಾರೆ, ಒಂದೇ ಧ್ವನಿ ಸೇರಿಸುತ್ತಾರೆ. ಈ ಪಕ್ಷಗಳ ಚುನಾವಣಾಪ್ರಣಾಳಿಕೆಯಲ್ಲೂ "ತಮಿಳನ್ನು ಚಮ್ಮೋಳಿ" ಮಾಡೇ ಮಾಡುವೆವು ಎಂಬುದೊಂದು ಇದ್ದೇ ಇತ್ತಂತೆ.
ಇಷ್ಟೆಲ್ಲ ಹಿನ್ನೆಲೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದ ದ್ರಾವಿಡರಿಗೆ, George L Hart ಅನ್ನುವ ಒಬ್ಬ Berkeley ವಿಶ್ವವಿದ್ಯಾನಿಲಯದ ಪ್ರಾಚಾರ್ಯನು, "Statement on the Status of Tamil as a Classical Language" ಎಂಬ ಲೇಖನವನ್ನು ಆ ವಿಶ್ವವಿದ್ಯಾನಿಲಯದಿಂದಲೇ April 11, 2000 ಪ್ರಕಟಿಸಿದ್ದು ದೊಡ್ಡ ವರದಾನವೇ ಆಯಿತು.
ಇದಕ್ಕೆ ಸುಯೋಗದಂತೆ UPA ಸರಕಾರವೂ ಬಂದು, ಅದರಲ್ಲಿ ದ್ರಾವಿಡ ಪಕ್ಷವೊಂದು ಪ್ರಮುಖ ಅಂಗಪಕ್ಷವಾಯಿತು. ಮೊದಲೇ ಸಕಲಸಿದ್ಧತಾಪೂರ್ಣಸಂಪೂರ್ಣರಾಗಿದ್ದ ದ್ರಾವಿಡರು ಕಾಲದ ಹದವನ್ನು ನೋಡಿ, ತಮಿಳಿಗೆ ಶಾಸ್ತ್ರೀಯ ಸ್ಥಾನಮಾನವನ್ನು ಸಂಸತ್ತಿನಲ್ಲೇ ಆಗ್ರಹಿಸಿ ಬಿಟ್ಟರು, ಆ ಆಗ್ರಹಕ್ಕೊಲಿದ ಕೇಂದ್ರದ UPA ಸರಕಾರ 'ತಥಾಸ್ತು' ಎಂದು ವರವಿತ್ತಿತು.
ಇಷ್ಟೆಲ್ಲ ಘಟನಾನುಘಟನೆಗಳು ಆಗುವ ವರೆಗೂ ಸುಖನಿದ್ರಾಮೋದದಲ್ಲಿ ತಲ್ಲೀನರಾಗಿ, ತನುವಿಸ್ಮರರಾದ, ಸಂಸ್ಕೃತ, ಕನ್ನಡ, ತೆಲುಗು ಭಾಷಿಕರು, ದುಸ್ಸಪ್ನಿಸಿದಂತೆ ಎಚ್ಚರಗೊಂಡು, ತಮ್ಮ ತಮ್ಮ ಭಾಷೆಗಳ ತಲನೆಯನ್ನು ತಮಿಳಿನ ಜೊತೆಗೆ ಮಾಡಲು ಪ್ರಾರಂಭಿಸಿದರು. ಅದರಲ್ಲೂ ಎಲ್ಲರ ಒಕ್ಕೊರಲ ಇರುಸುಮುರುಸು ಸಂಸ್ಕೃತದ ಮುನ್ನವೇ ಹೇಗೆ ತಮಿಳಿಗೆ ಈ ಶಾಸ್ತ್ರೀಯಭಾಷಾಸ್ಥಾನಮಾನ ಸಿಕ್ಕಿಬಿಟ್ಟಿತು, ಗಿಟ್ಟಿತು ಎಂದು.
ಇವೆಲ್ಲ ಘಟನಾವಳಿಗಳಲ್ಲಿ ಗಮನಿಸ ಯೋಗ್ಯಾವಾದುದು ತಮಿಳರು ನಾಲುವತ್ತು-ಆರುವತ್ತು ವರ್ಷದಿಂದ ಹೂಡಿಕೊಂಡು ಕುಳಿತಿದ್ದ ಉಪಾಯವನ್ನು ಕೇವಲ ಅಧ್ಯಯನ, ಸಂಶೋಧನೆಗಳು ಸಾಲದೆಂದು, ಅದಕ್ಕೆ ರಾಜಕೀಯ ಒತ್ತನ್ನೂ ಒದಗಿಸಿಕೊಂಡು, ಕಾದು ಕಾರ್ಯಸಾಧಿಸಿಕೊಂಡಿದ್ದು. ಆದರೆ ಮಿಕ್ಕವರು ಯುದ್ಧಕಾಲೇ ಶಸ್ತ್ರಾಭ್ಯಾಸವೆಂದು, ಇತ್ತೀಚೆಗೆ ಶಾಸ್ತ್ರೀಯಭಾಷಾಸ್ಥಾನದ ಪ್ರಾರ್ಥನೆಗೆ ಬೇಕಾದ, ಸಾಮಗ್ರಿಯ ಸಂಚಯದಲ್ಲಿ ತೊಡಗಿದ್ದು.
ಈ ಹಲವು ಭಾಷಿಕರ ಆಗ್ರಹವನ್ನು ಗಮನಿಸಿದ ಕೇಂದ್ರ ಸರಕಾರ, ನಾಲ್ಕು ನಿಬಂಧನೆಗಳನ್ನು ಹೂಡಿ, ಈ ನಾಲ್ಕು ನಿಬಂಧನೆಗಳನ್ನು ಪೂರಯಿಸುವ ಭಾಷೆಗಳನ್ನು ಮಾತ್ರ ಶಾಸ್ತ್ರೀಯಭಾಷೆಯೆನ್ನಲಾಗುವುದೆಂದು ಕಾನೂನು ಮಾಡಿತು. ಈ ನಾಲ್ಕು ನಿಬಂಧನೆಗಳು George L Hart ಅವರ ಪ್ರಬಂಧದ ಸಾರವೇ ಆಗಿರುವುವು; ಆದುದರಿಂದ ತಮಿಳು ಯಾವ ಅಡ್ಡಿಯಿಲ್ಲದೇ, ಈ ಚತುರ್ನಿಬಂಧನಿಗಳನ್ನು ಪೂರಯಿಸಿಕೊಂಡಿತು.
ಒಂದು ವರ್ಷದ ಬಳಿಕ ಸ್ವಾಭಾವಿಕವಾಗೇ ಸಂಸ್ಕೃತವೂ "ಶಾಸ್ತ್ರೀಯ ಭಾಷಾ" ಎಂದು ಘೋಷಿಸಿಕೊಂಡಿತು. ಸಂಸ್ಕೃತಕ್ಕೆ ಈ ಗದ್ದುಗೆಗೆ ದಾರಿ ಬಲು ಸುಗಮ, ಎಂದಿನಿಂದಲೋ ಅದು ಶಾಸ್ತ್ರೀಯತ್ವವನ್ನು ಪಡೆದುಬಿಟ್ಟಿದೆ.
ಈಗ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯತ್ವಾಗ್ರಹವಿದೆ. ಕೇಂದ್ರ ಸರಕಾರವು ಅದನ್ನು ಅನುಗ್ರಹಿಸುವುದು ಎಂಬ ವಿಶ್ವಾಸವೂ ಇದ್ದಂತಿದೆ. ಬರಲಿ, ಸಿಗಲಿ ಸಂತೋಷ.
ಸರಿ ಈಗ ದ್ರಾವಿಡರ ಬಾಣಕ್ಕೆ ತುತ್ತಾದ ಹಕ್ಕಿಗಳ ಸಮಾಚಾರ ನೋಡೋಣ. ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದರಿಂದ ಏನೇನು ಲಾಭನಷ್ಟಗಳು, ಯಾರುಯಾರಿಗೆ ಎಷ್ಟೆಷ್ಟು. ಒಂದು ವೇಳೆ ಕನ್ನಡವೂ ಶಾಸ್ತ್ರೀಯಭಾಷೆಯಾದರೆ, ಅದಕ್ಕೇನು ಲಾಭನಷ್ಟ, ಜನರ ವಿಚಾರದಲ್ಲಾದ/ಗುವ ಮಾರ್ಪಾಟುಗಳನ್ನು ಗಮನಿಸಬೇಕು.
ಸಂಸ್ಕೃತಕ್ಕೆ - ಇದಕ್ಕೆ ಯಾವ ಲಾಭವೂ ನಷ್ಟವೂ ಇಲ್ಲ. ಇದು ಶಾಸ್ತ್ರಿಯಭಾಷಾಸಿಂಹಾಸನದ ಬಲು ಹಳೆಯದ ಪಟ್ಟಾಭಿಷಿಕ್ತಭಾಷೆ. ಇದನ್ನು ನಮ್ಮ ಕೇಂದ್ರ ಸರಕಾರದ ಮುನ್ನವೇ UNIESCO ಶಾಸ್ತ್ರೀಯಭಾಷೆಯೆಂದು ಘೋಷಿಸಿದ್ದು, ವಿಶ್ವದ ಹಲವು ದೇಶಗಳಲ್ಲಿ ಬಲು ಹಿಂದಿನಿಂದಲೂ, ಇದನ್ನು ಪಾಠಿಸಲಾಗುತ್ತಿದೆ.
ತಮಿಳು - ಇದಕ್ಕೆ ಭಾರಿ ಲಾಭ.
೧) ತಮಿಳನ್ನು ಸಂಸ್ಕೃತಕ್ಕೆ ಸಮ(ಮಿಗಿಲು?) ಎಂದಾಗಿಸುವ ದ್ರಾವಿಡರ ಆಂದೋಳನವು ಸಫಲವಾಯಿತು
೨) ತಮಿಳರು ಪದಗಳಿಗಾಗಿ, ತಮ್ಮ ಹಳೆಯ ತಮಿಳನ್ನು ನೋಡಿ, ಅದರಿಂದ ಪಡೆಯುವರು. ಹೆಚ್ಚೆಹೆಚ್ಚು ಶಾಸ್ತ್ರೀಯ ತಮಿಳಿನಿನ ಅಧ್ಯಯನ, ತಮಿಳಿಗೆ ಹೆಚ್ಚುಹೆಚ್ಚು ಬಲಕೊಡುವುದು ಮತ್ತು ಅದನ್ನು ಇನ್ನೂ ವಿಭಿನ್ನವಾಗಿಸುವುದು. ವ್ಯಾವಹಾರಿಕ ತಮಿಳಿಗೆ ನೆರವಾಗುವುದು.
೩) ಹಣ
೪) ತಮಿಳು ಪಂಡಿತರಿಗೆ ಪ್ರೋತ್ಸಾಹ
೪)ಇನ್ನೆರಡು ದೇಶಗಳು ತಮಿಳನ್ನು ಶಾಸ್ತ್ರೀಯಭಾಷೆ ಎಂದು ಘೋಷಿಸಿದರೆ, UNIESCO ಕೂಡ ತಮಿಳನ್ನು ಶಾಸ್ತ್ರೀಯ ಎಂದು ಘೋಷಿಸಬೇಕಾಗುವುದು. ಆಗ ಜಗತ್ತಿನ ಹಲವು ಸುಪ್ರಸಿದ್ಧ ಮಹಾನ್ವಿಶ್ವವಿದ್ಯಾನಿಲುಗಳಲ್ಲಿ ತಮಿಳು ವಿಭಾಗಗಳು ಬರುವುವು. ಹೀಗೆ ತಮಿಳು ಸಂಸ್ಕೃತದಂತೆ ವಿಶ್ವಮಾನ್ಯವಾಗುವುದು. ಆಗಲೇ ಸಿಂಗಾಪುರ, ಮಲಯೇಷಿಯ ಮತ್ತು ದಕ್ಷಿಣಾಪ್ರಿಕಗಳಲ್ಲಿ ತಮಿಳು ರಾಷ್ಟ್ರಭಾಷೆಯಾಗಿದೆ.
ಇನ್ನು ವಿಚಾರದಲ್ಲಿ, ತಮಿಳರಿಗೆ ತಮ್ಮ ಬಹೃದ್ಭಾಷಾಭಿಮಾನದ ಎಲ್ಲೆ ಹಿಗ್ಗಿ ಹರಡಿತು. ಭಾರತದಲ್ಲಿ ಸಂಸ್ಕೃತದ ಜೊತೆ ತಳನಯೋಗ್ಯವಾಯಿತು. ಇನ್ನು ದ್ರಾವಿಡರ ಸಂತೋಷ, ಹೆಮ್ಮೆಗೆ ಸೀಮೆಯುಂಟೇ.
ಆದರೆ ಹಲವು ಸಂಸ್ಕೃತಪ್ರಿಯರ ವಿಚಾರದಲ್ಲಿ ಬದಲಾವಣೆಯಂತೂ ಆಯಿತು. ಸಂಸ್ಕೃತದಿಂದ ಸರ್ವಭಾಷೆಗಳು ಜನಿಸಿವೆ ಎಂಬ ಭಾವನಾಸ್ವಪ್ನಗೋಪುರದ ಅಡಿಪಾಯವೇ ಕುಸಿದು ಬಿದ್ದಂತಾಗಿ ಹೋಯಿತು. ಇದನ್ನು ಸಹಿಸದ ಹಲವರು, ತಮಿಳು ಬರೀ "ರಾಜಕೀಯದ ಶಾಸ್ತ್ರೀಯಭಾಷೆ" ಗೊಣಗಿಕೊಂಡರು.
ಕನ್ನಡಕ್ಕೆ - ಇದರಿಂದ ಲಾಭವಿದೆ.
೧) ಕನ್ನಡವು ತಮಿಳು ಸಂಸ್ಕೃತಕ್ಕೆ ಸಮನಾದ ಶಾಸ್ತ್ರೀಯಭಾಷೆಯಾಗುವುದು. ಕನ್ನಡವೊಂದು ದ್ರಾವಿಡ ಭಾಷೆ, ಇದಕ್ಕೆ ಸ್ವತಂತ್ರಹುಟ್ಟಿದೆ ಎಂಬುದನ್ನು ನಮ್ಮ ದೇಶಾಡಳಿತವೇ ಒಪ್ಪಿಂತಾಗುವುದು.
೨) ಹಣ
೩) ಕನ್ನಡ ಪಂಡಿತರಿಗೆ ಪ್ರೋತ್ಸಾಹ
ಆದರೆ ಕನ್ನಡವು ಪದಗಳಿಗೆ ಹಳಗನ್ನಡ, ಶಾಸ್ತ್ರೀಯ ಕನ್ನಡದ ಕಡೆ ನೋಡವುದೇ ಇಲ್ಲ. ಏನಿದ್ದರು ನವಪದಾನ್ವೇಷಣೆಯು ಕರ್ಣಾಟದಲ್ಲಿ ಬರೀ ಸಂಸ್ಕೃತದ ಪದಪುಂಜಗಳನ್ನು ಕನ್ನಡಕ್ಕೆ ಹೊಂದಿಸುವುದರಿಂದ ನಡೆಯುವುದು. ಆದುದರಿಂದ ವ್ಯಾವಹಾರಿಕ ಕನ್ನಡಕ್ಕೇ ಅಂತ ಲಾಭವೇನು ಇಲ್ಲ.
ಹೆಚ್ಚು ಹಲವು ಸಾಮಾನ್ಯ ಕನ್ನಡಿಗರಿಗೆ ಇದರಿಂದ ಕನ್ನಡವೂ ಶಾಸ್ತ್ರೀಯವೆಂಬ ಹೆಮ್ಮೆ ಬರುವುದು.
ಕೆಲವು ಸಂಸ್ಕೃತಾಭಿಮಾನಿ ಕನ್ನಡಿಗರಿಗೆ ಇದು ಗಂಟಲಲ್ಲಿ ಇಳಿಯದ ಮೋದಕವಾಗಿ, ಗೊಂದಲಗೊಳ್ಳುವರು.
ಕೆಲವು ಪರಮಸಂಸ್ಕೃತಾಭಿಮಾನಿಗಳಿಗೆ "ಕನ್ನಡವೂ ಒಂದು ರಾಜಕೀಯ ಶಾಸ್ತ್ರೀಯಭಾಷೆ" ಎಂಬ ಅಸಮಧಾನವಿರುವುದು.
ದ್ರಾವಿಡರು ಈ ಬಾಣದಿಂದ ಸಾಧಿಸಿದ ದೊಡ್ಡ ಉದ್ದೇಶವೆಂದರೆ ಎಲ್ಲರು ತಮ್ಮ ತಮ್ಮ ಭಾಷೆಯನ್ನು ತಮಿಳಾಗಿಸಲು ತಮಿಳಂತೆ ಶಾಸ್ತ್ರೀಯವೆನಿಸಲು ಮೊಗೆಬೇಳಬೇಕು. ಸಂಸ್ಕೃತವೊಂದೇ ಶಾಸ್ತ್ರೀಯವೆಂಬುದು ಹೋಗಬೇಕು. ಸಂಸ್ಕೃತಪ್ರಿಯ ಕನ್ನಡಿಗರೂ ತಮಿಳರಂತೆ, ಕನ್ನಡವೂ ಸಂಸ್ಕೃತಕ್ಕಿಂತ ಏನು ಕಡಮೆ ಎಂದು ಪ್ರಶ್ನಿಸುವಂತೆ ನಡೆಯಬೇಕು.
ಒಟ್ಟಿನಲ್ಲಿ ಈ ಬಾಣವು ನಮ್ಮ ಕನ್ನಡಿಗರ ಭಾಷೆಗಳ ಮೇಲಿನ ಭಾವನಾವ್ಯವಸ್ಥೆಗೆ ಚನ್ನಾಗಿ ನಾಟಿದೆ, ನಾಟುವುದು.
ಎಂದು ಕನ್ನಡ ಆಗ್ರಹದಿಂದ ಮುಂದೆ ಸರಿದು, ಮಾನ್ಯತೆಯಲ್ಲಿ "ಶಾಸ್ತ್ರೀಯಭಾಷೆ"ಯಾಗುವುದೆಂದು ಹಾರೈಸುತ್ತಾ ಕಾಯೋಣ.
ಆದರೂ ಕನ್ನಡದಲ್ಲಿ ’ಶಾಸ್ತ್ರೀಯಭಾಷೆ’ ಎಂಬುದಕ್ಕೆ ಇನ್ನೂ ಒಂದು ಒರೆಹುಟ್ಟಿಸಲಿಲ್ಲ ನಮ್ಮ ಪಂಡಿತರು... ಭಲಾ! ![]()

- mahesha ರವರ ಬ್ಲಾಗ್
- Login or register to post comments
- 396 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಚನ್ನಾಗಿದೆ.
ಈಟೋಂದೆಲ್ಲ ಎಲ್ಲಿ ಓದಿದೆ ಮಾರಾಯ?
ಇನ್ನಾದರೂ ಕನ್ನಡಿಗರಿಗೆ ಕನ್ನಡ ಸಕ್ಕದಕ್ಕೆ ಸಮ ಎಂಬುದು ಮನದಟ್ಟಾಗಲಿ. ಸಕ್ಕದಕ್ಕೆ ನಾವು ಏನೂ ಮಾಡಬೇಕಾಗಿಲ್ಲ. ಈಗಾಗಲೇ ಅದಕ್ಕೆ ಬೇಕಾದುದೆಲ್ಲ ಅದಕ್ಕೆ ಇದೆ.
ನಮ್ಮ ದುಡಿಮೆ ಕನ್ನಡದ ಕಡೆ ಇರಲಿ.
ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಮಹೇಶ್ ,
ನೀವು ಹೇಳುವುದು ನಿಜ .
ಆದರೆ ಆಧುನಿಕ ಆಂಡಯ್ಯ ಆಗಿರುವ ನೀವು ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಚಂದಮಾಮಾ ಭಾಷೆಯಲ್ಲಿ ಬರೆದಿದ್ದೀರಿ. ಇದು ಒಂದು ಪ್ರಾಕ್ಟಿಕಲ್ ಜೋಕ್ ಏ?
ಅಭಿಪ್ರಯನಿಸಿಕೆ , ಅಂತರಭಿಲಾಷೆ , ದೋಷಜ್ಞಾತವಾದರೆ , ಬೃಹದಭಿಮಾನ , ಸಕಲಸಿದ್ಧತಾಪೂರ್ಣಸಂಪೂರ್ಣ, ದುಸ್ಸಪ್ನಿಸಿದ , ಪಾಠಿಸಲಾಗುತ್ತಿದೆ , ನವಪದಾನ್ವೇಷಣೆಯು ಇದೆಲ್ಲ ಏನ್ರೀ ?
ಏಡು ನಾಳುಗಳ ಬರಹದಷ್ಟೇ , ನಿಮ್ಮ ಈ ಲೇಖನ ಕಬ್ಬಿಣದ ಕಡಲೆಗಳನ್ನು ಹೊಂದಿದೆ ಎಂಬುದಂತೂ ನಿಜ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಶಾಸ್ತ್ರೀಯಭಾಷಾಸಂಬಂಧೀಲೇಖನವಾದುದರಿಂದ ಶಾಸ್ತ್ರೀಯತ್ವಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿ ಈ ಪ್ರಬಂಧವನ್ನು ಲಿಖಿಸಿದ್ದೇನೆ. ಈ ಬರಹ ಲಿಖಿಸಿರುವುದೇ ಶಾಸ್ತ್ರೀಯತೆಯನ್ನು ಆಹ್ಲಾದಿಸಿ, ಆನಂದಿಸಿ, ಪ್ರೋತ್ಯಾಹಿಸಿ, ಅದನ್ನೇ ಸರ್ವೋತ್ತಮವೆಂದು ಭಾವಿಸಿ, ಭಾವಿಸಿಸಿ, ಜೀವಿಸುವವ ಸ್ವರ್ಥಕಾರಿಮಹಾತ್ಮರ ಹೇತು.
ಅದೂ ಅಲ್ಲದೇ ಶಾಸ್ತ್ರೀಯ ಎಂಬುದು ಹೆಚ್ಚು ಪಾಂಡಿತ್ಯಪದರ್ಶನವೇ ಹೊರತು, ಅದರಿಂದ ಹಾದಿಬೀದಿಯ ಸಾಮಾನ್ಯ ನರಪಿಳ್ಳೆಗಳಿಗೆ ಬೇಕಾದ ಲೋಕೋಪಕಾರಿಯಾದ ವಿಷಯವಲ್ಲವೆಂದು ನನ್ನಾತ್ಮಾಭಿಪ್ರಾಯವು. ಸಾಮನ್ಯರಿಗೆ ಶಾಸ್ತ್ರೀಯತೆಯಿಂದ ಅಪಾಯವೇ ಹೆಚ್ಚು, ಪ್ರಯೋಜನಕ್ಕಿಂತ.
ನೀವು ಮದೀಯರು ಮಹದೀಯರು ಈ ಲೇಖನವನ್ನು ಹಾಸ್ಯವಾಗಿ ತಗೆದುಕೊಂದು ಚಂದಮಾಮಾ ಓದಿದಂತೆ ಸಂತೋಷಿಸಿಕೊಂಡಿದ್ದರೆ ಅದು ನನ್ನ ಸುಭಾಗ್ಯ. ಅದಕ್ಕೆ ನಿಮಗೆ ಅನಂತಾನಂತ ಹೃನ್ಮನಸಾ ಧನ್ಯಭಾವಗಳು.
ನಿಮಗೆ ಲೋಹದ ಕಡಲೆಯಾಗಿ, ಹಿಂಸೆಯಾಗಿದ್ದರೆ, ನೀವು ಶಾಸ್ತ್ರೀಯತ್ವವನ್ನು ಅಷ್ಟೇನು ಆಹ್ಲಾದಿಸಿವವರಲ್ಲ, ನನ್ನಂತೆ ಮೂಮೂಲಿ ಮಾಯ್ಸರಲ್ಲೊಬ್ಬರು
ನಿಮಗಾಗಿ ಏಡುನಾಳುಗಳ ಬರಹವು ಮುಂದೆ ಬರುವುವು ಹೆಚ್ಚು ಉಂಕಿಸದೇ, ನಲಿದುಕೊಂಡು ಕಾಯಿರಿ!!
ಇತಿ ಶುಭಾಭಿಲಾಷೆಗಳೊಂದಿಗೆ
ಭವದೀಯ
ಮಹೇಶ ಸರ್ವಘ್ನ
ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಅಭಿಪ್ರಯನಿಸಿಕೆ = ಅಭಿಪ್ರಾಯ ಮತ್ತು ಅನಿಸಿಕೆ
ಅಂತರಭಿಲಾಷೆ = ಅಂತಃವಾದ ಅಭಿಲಾಷೆ
ದೋಷಜ್ಞಾತವಾದರೆ = ದೋಷವು ಜ್ಞಾತವಾದರೆ
ಬೃಹದಭಿಮಾನ = ಬೃಹತ್ತಾದ ಅಭಿಮಾನ
ಸಕಲಸಿದ್ಧತಾಪೂರ್ಣಸಂಪೂರ್ಣ = ಸಕಲವಾಗಿ ಸಿದ್ಧತೆಯನ್ನು ಪೂರ್ಣಗೊಳಿಸಿಕೊಂಡು ಸಂಪೂರ್ಣತೆಯನ್ನು ಹೊಂದಿದುದು
ದುಸ್ಸಪ್ನಿಸಿದ = ದುಸ್ಸಪ್ನ ಮಾಡು/ಕಾಣು
ಪಾಠಿಸಲಾಗುತ್ತಿದೆ = ಪಾಠವನ್ನು ಮಾಡುಲಾಗುತ್ತಿದೆ
ನವಪದಾನ್ವೇಷಣೆಯು = ನವವಾದ ಪದದ ಅನ್ವೇಷಣೆಯು
ಶಾಸ್ತ್ರೀಯತೆಯ ಉದಾಹರಣೆಗಳಿವು!
ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಸಾಕು ಗುರು. ಅರಗಿಸಿಕೊಳ್ಳೋಕೆ ಆಗ್ತಾ ಇಲ್ಲ. ಕೈ ಮುಗಿತೀನಿ
ಉ: 'ಶಾಸ್ತ್ರೀಯ ಸ್ತಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
"ಅರಗಿಸಿಕೊಳ್ಳೋಕೆ ಆಗ್ತಾ ಇಲ್ಲ"
ಪಚನದೋಷವೇ? ಚೂರ್ಣಸೇವನೆ ಮಾಡಿರಿ
ಉ: 'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ನೀವು ಲೇಶಿಸಿದ್ದನ್ನು ಪಠಿಸಿ, ಉದರಕ್ಕೆ ಕ್ಷೀರಾಭಿಷೇಕವಾದಂತಾಯ್ತು.
ನೀವು ಬರೆದಿದ್ದನ್ನು ಓದಿ, ಹೊಟ್ಟೆಗೆ ಹಾಲು ಹುಯ್ದಂತಾಯ್ತು.
ಅಯ್ಯೊ, ಮಾಯ್ಸಾ, ನೋಡೋಕಾಗಲ್ಲಾ, ಏನಿದು, ಕನ್ನಡಕ್ಕೆ ಮರಳಿ ಬಾರಪ್ಪಾ.
ಉ: 'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಶ್ರೀಮಾನ್ ಸಂಗನಗೌಡರೇ.
ನಾನು ಸುಸಂಸ್ಕೃತವಾಗಿ, ಸೌಜನ್ಯವಾಗಿ, ಕನ್ನಡಭಾಷೆಯಲ್ಲೇ ಲಿಖಿಸಿರುವುದು. ನಿಮ್ಮ ಉದರಕ್ಕೆ ಕ್ಷೀರಾಭಿಷೇಕವಾದಂತಾಗಿದ್ದರೆ ಸಂತೋಷ.
ದೇಶಾಚಾರ, ಜನಾಚಾರ, ಕಂದಾಚಾರ, ಸಂಪ್ರದಾಯ, ಸಭ್ಯತೆ, ಸೌಜನ್ಯ, ಶಾಸ್ತ್ರೀಯತೇ, ಭಾಷಾಪ್ರೌಢಿಮೆ ಇವನ್ನೆಲ್ಲ ಪ್ರದರ್ಶಿಸುವುದು ಈ ಲೇಖನ.
ಕನ್ನಡಕ್ಕೆ ಶಾಸ್ತ್ರೀಯಸ್ಥಾನಮಾನ ಲಭಿಸಿದ ತದನಂತರ, ಆ ಶಾಸ್ತ್ರೀಯಸ್ಥಾನಮಾನದಿಂದ ಲಭಿಸುವ ಪ್ರಶಸ್ತಿಯನ್ನು ಆದಾಯಿಸಬೇಕಾದರೆ, ಈ ನನ್ನ ಲೇಖನದಂತೇ ಪ್ರಬಂಧಗಳನ್ನು, ಪುಸ್ತಿಕೆಗಳನ್ನು, ಸಂಶೋಧನಾ ಗ್ರಂಥಗಳನ್ನು ವಿರಚಿಸಿ ಕನ್ನಡ ಸಾರಸ್ವತಲೋಕಕ್ಕೆ ಅರ್ಪಿಸಬೇಕು.
ಇತಃ ಪರವೇ ನಾವೆಲ್ಲರೂ ಹೀಗೇ ಲಿಖಿಸುವುದನ್ನು ಪ್ರಾರಂಭಿಸಿ, ಅಭ್ಯಾಸಿಸೋಣ.
ಇತಿ ಪರಮಸ್ನೇಹದ ಧನ್ಯಭಾವಮಿಳಿತಕೃತಜ್ಞತೆಗಳೊಂದಿಗೆ
ಮಹೇಶ
ಉ: 'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಈಗೀಗ ಈ ಬರಹವನ್ನು ಓದಿಕೊಂಡು ಹಲಹಲವು ಸರತಿ ನಕ್ಕುಕೊಂಡಿದ್ದೀನಿ..!
ಅಬ್ಬಬ್ಬಾ ತಮಿಳು ತಲೆಗಳೇ!.!