ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?
ಕೆಲವರು ಹಳೆಗನ್ನಡ, ನಡುಗನ್ನಡದ ಬಗ್ಗೆ ಮೂಗು ಮುರಿಯುತ್ತಾರೆ, ಅದರ ಬಗ್ಗೆ ತಾತ್ಸಾರ, ಉಡಾಫೆಯ ಭಾವವನ್ನೂ ತೋರಿಸುತ್ತಾರೆ. ಮೊನ್ನೆ ಒಬ್ಬರು ಹಳೆಗನ್ನಡವನ್ನು ಓದುವುದು "ಅರ್ಥಹೀನ ಶ್ರಮ"ಎಂದು ಹೀಯಾಳಿಸಿಬಿಟ್ಟರು. ಹಿಂದೆ ಒಂದು ಸುದ್ದಿ ಪೇಪರಿನ ಒಂದು ಬರಹದಲ್ಲಿ "ಹಳೆಗನ್ನಡ ಸಾಹಿತ್ಯದಲ್ಲಿ ಬದುಕಿಗೆ ಬೇಕಾದುದು ಏನೂ ಇಲ್ಲ" ಎಂದು ಒಬ್ಬ ಮಹಾಶಯ ದೊಡ್ಡ ಸುಳ್ಳುಹೇಳಿದ್ದರು. ಹೀಗೆ ಮತ್ತೊಬ್ಬರು ಹಳೆಗನ್ನಡ "ಬೂಸಾ" ಎಂದಿದ್ದರಂತೆ. ಈ ಅಂತೆ-ಕಂತೆಗಳನ್ನು ನಾವೆಲ್ಲ ಓದಿಕೊಂಡಿದ್ದೀವಿ. ಆದರೆ ಹೀಗೆ ಬರೆದ ಹಲವರು ಹಳೆಗನ್ನಡ ಓದಿಲ್ಲ ಎಂದು ತಿಳಿದಾಗ ನಮಗೆ ಬಲು ಸಂಕಟವಾಗುವುದು. ಹಳೆಗನ್ನಡದ ಬಗ್ಗೆ ಅರಿಯದೇ ಹೀಗೆ ಹಗುರವಾಗಿ ಮಾತಾಡುವುದು ತಪ್ಪಲ್ವಾ! ಹಳೆಗನ್ನಡವಿಲ್ಲದೇ ಹೊಸಗನ್ನಡ ಹೇಗೆ ಇರಲು ಸಾಧ್ಯ? ಇವೊತ್ತು ನಮ್ಮ ಹೊಸಗನ್ನಡ ಇಷ್ಟು ಚೆಲುವಾಗಿದೆ ಅಂದರೆ ಅದರ ಬೇರಾದ ಹಳೆಗನ್ನಡ, ನಡುಗನ್ನಡ ಇದಕ್ಕೆ ಎಷ್ಟು ಸತ್ವವನ್ನು ಕೊಟ್ಟಿರಬೇಕು?
ಹಳೆಗನ್ನಡದಲ್ಲಿ ಏನೇನಿದೆ? ಅದು ನಮ್ಮ ಕನ್ನಡ ಭಾಷೆಯ ಸೊಗಡನ್ನು, ಅದರ ಬೆಳವಣಿಗೆಯನ್ನು, ಹೇಳೇ ಹೇಳುವುದು. ಇದಲ್ಲದೇ ಹಳೆಗನ್ನಡ ನೀಡುವ ಬೆಲೆಬಾಳುವ ಅರಿವೆಂದರೆ, ನಮ್ಮ ಕನ್ನಡ ನಾಡಲ್ಲಾದ ರಾಜಕೀಯ, ಧಾರ್ಮಿಕ ಕೋಲಾಹಲಗಳು, ಚಳುವಳಿಗಳು, ಹೋರಾಟಗಳು, ಜಂಜಾಟಗಳು. ಇದೂ ಅಲ್ಲದೇ ಕೆಲವು ಹಳಗನ್ನಡ ಕಬ್ಬಗಳೂ ನಮ್ಮ ಉಡುಗೆ-ತೊಡುಗೆ-ಅಡುಗೆ ಹೇಗಿತ್ತು? ನಮ್ಮ ಕನ್ನಡ ನಾಡಲ್ಲಿ ಏನೇನು ಹಣ್ಣು-ಹಂಪಲು-ಹೂಗಾಯಿಗಳಿವೆ/ಇತ್ತು? ನಮ್ಮ ಕನ್ನಡದ ಜನರ ಬದುಕು ಹೇಗಿತ್ತು, ಅವರ ನಡೆ-ನುಡಿ ಹೇಗಿತ್ತು? ಕನ್ನಡದಲ್ಲಿ ಎಂತೆಂತ ಕವಿಕೋಗಿಲೆಗಳು, ರಸ ಋಷಿಗಳು, ಧೀರ ನಾಡಾಳುಗಳು, ವ್ಯಾಕರಣ-ಗಣಿತ-ವಿಜ್ಞಾನ-ವೈದ್ಯ-ಜ್ಯೋತಿಷ್ಯ-ಸಂಗೀತ ಚದುರ ಕಲಿಗಳಿದ್ದರು? ಜೈನ-ವೈದಿಕ-ಲಿಂಗಾಯತ-ಜಾನಪದ ಮುಂತಾದ ನಂಬಿಕೆಗಳು ಕನ್ನಡ ನೆಲದಲ್ಲಿ ಹೇಗೆ ಇದ್ದವು?"ಕರ್ಣಾಟ ಬಲ" ಎಂದು ಮೆರೆದ ಕನ್ನಡ ಸೇನೆಯ ವೀರಾಳುಗಳು ಹೇಗಿದ್ದರು, ಅವರಿಗಾಗಿ ಎದ್ದು ವೀರಗಲ್ಲುಗಳೂ, ಅವರ ಹೆಣದ ಜೊತೆ ಮಹಾಸತಿಯರ ಮಾಸ್ತಿಗಲ್ಲುಗಳು ಹೇಗಾದವು?............. ಹೀಗೆ ಸಾವಿರಾರು ಪ್ರಶ್ನೆಗಳಿಗೆ ಉತ್ತರಗಳು.
ಹೀಗೆ ನಮ್ಮ ಇಡೀ ಕನ್ನಡ ಜನಾಂಗದ, ಕನ್ನಡ ದೇಶದ, ಕನ್ನಡ ರಾಷ್ಟ್ರದ, ಕನ್ನಡ ಸಂಸ್ಕೃತಿ/ನಡಾವಳಿಯ, ಬೇರುಗಳನ್ನು ತಿಳಿಯಲು ಇರವ ಅಮೂಲ್ಯ ಸಿರಿಯೇ ನಮ್ಮ ಹಳೆಗನ್ನಡ. ಅದರಲ್ಲೂ ಲೆಕ್ಕವಿಲ್ಲದಷ್ಟು ವಿಸ್ಮಯ ರಚನೆಗಳು ಈಗಾಗಲೇ ಹಾಳಾಗಿ ಹೋಗಿವೆ. ಉಳಿದು ಸಿಕ್ಕ ಕಾವ್ಯ ಅರ್ಧಕ್ಕಿಂತ ಕಡಮೆ ಎಂದೇ ಹೇಳಬೇಕು.
ಈಗ ಸಿಕ್ಕಿರುವ ಕನ್ನಡದ ಕಾವ್ಯಗಳಲ್ಲಿ ಅತಿ ಹಳೆಯದು "ಕವಿರಾಜಮಾರ್ಗಂ". ಈ ಸುಮಾರು ಕ್ರಿ.ಶ. ಎಂಟನೇ ಶತಮಾನದ ಕಾಲದ್ದು. ಈ ಕಾಲದಲ್ಲಿ ಭಾರತದಲ್ಲೇ ಇಂತಹ ಬರೀ ಕನ್ನಡ ಮತ್ತು ಸಂಸ್ಕೃತ/ಪ್ರಾಕೃತದಲ್ಲಿ ಇತ್ತೆನ್ನಬಹುದು. ಇದು ಎಂತಹ ಹೊತ್ತಗೆ, ಇದರ ಗುರಿ, ತಿರುಳುಗಳು ಸೋಜಿಗ ಹುಟ್ಟಿಸುವಂತಹದ್ದು. ಈ ಕಾವ್ಯದಲ್ಲೇ
"ಕಾವೇರಿಯಿಂದಮಾ ಗೋ-
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯವಿಲೀನವಿಶದ ವಿಷಯ ವಿಶೇಷಂ"
ಇರ್ಪ ಅಂದರೆ ಇರುವ. ಹಾಗಾದರೆ ಈ ಪದ್ಯವು ನಮ್ಮ ಕನ್ನಡ(ನಾಡು) ಕವಿರಾಜಮಾರ್ಗದ ಹೊತ್ತಲ್ಲಿ ಕಾವೇರಿಯಿಂದ ಗೋದಾವರಿಯ ವರೆಗೆ ಇತ್ತು ಎಂದು ಹೇಳುವುದು. ಆ ನಾಡಿನ ಹೆಸರೇ ’ಕನ್ನಡ’, ನುಡಿಯ ಹೆಸರೂ "ಕನ್ನಡ", ಆ ನಾಡಿನ ಜನರರು "ಕನ್ನಡರು". ಅಂತಹ ಹಿರಿನಾಡನ್ನು ಕನ್ನಡ ಜನರು ಈ ಭೂಮಿಯಲ್ಲೇ ವಿಶೇಷವಾದ ವಿಷಯ(ಪ್ರಾಂತ್ಯ) ಎಂದು ಭಾವಿಸಿದ್ದರು; ಎಂದು ಹೇಳುವುದು. ಇದು ಎಂತಹ ಹೆಮ್ಮೆ ತರುವುದು ನಮ್ಮಲ್ಲಿ.
ಹೀಗೆ ಒಂದು ಜನಾಂಗದ ಬಗ್ಗೆ, ಒಂದು ನಾಡಿನ ಬಗ್ಗೆ ಹೀಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಜಗತ್ತಿನ ಕೃತಿಗಳಲ್ಲಿ, ಇದೇ ಅತಿ ಹಳೆಯದಂತೆ. ಈ ಕಾವ್ಯದಲ್ಲೀ ಕವಿ ತನಗಿಂತ ಹಿಂದಿನ ಎಂಟು ಕವಿಗಳ ಹೆಸರು ಹೇಳುವನು. ಅಂದರೆ ಎಂಟನೇ ಶತಮಾನದ ಹೊತ್ತಿಗೆ ನಿಶ್ಚಿತವಾಗಿ ಕನ್ನಡ ನುಡಿ ಮೇಲ್ಮಟ್ಟ ತಲುಪಿ, ಕಾವ್ಯಾ ಭಾಷೆಯಾಗಿ ಬಿಟ್ಟಿತ್ತು.
ಇನ್ನು ಪಂಪ, ರನ್ನ, ಪೊನ್ನ. ಚಾವುಂಡರಾಯ, ಮುಂತಾದವರು; ನಡುಗನ್ನಡದ ನೇಮಿಚಂದ್ರ, ಜನ್ನ, ಕೇಶೀರಾಜ, ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸ, ಬಸವಣ್ಣರು; ಅಚ್ಚಕನ್ನಡದ( ಸಂಸ್ಕೃತದ ತತ್ಸಮ-ಪದಗಳನ್ನು ಬಳಸದೇ ಬರೆದ ಕಬ್ಬಗಳು ) ಆಂಡಯ್ಯ, ನಯಸೇನರು, ಇಂತಹ ಹಿರಿಯದಾದ ಉನ್ನತ ಕಾವ್ಯಪರಂಪರೆ ನಮ್ಮದು.
ಇಂತಹ ಮಹತ್ವದ ಅರಿವು ಹೊತ್ತಿರುವ ಹಳಗನ್ನಡದಲ್ಲಿ ಏನು ಇಲ್ಲವಾ? ಅದನ್ನು ಓದುವುದು ಅರ್ಥಹೀನ ಶ್ರಮವೇ?
ಕನ್ನಡಿಗರಾದ ನಾವು ಇದರ ಬಗ್ಗೆ ಉಡಾಫೆ, ತಾತ್ಸಾರ ತೋರುವುದು ಸರಿಯೇ? ಯೋಚಿಸಿರಿ.
========================================================
ಇದನ್ನು ನಾನು ನನ್ನ ಗೆಳೆಯ ಸೇರಿ ಬಲು ಹಿಂದೆ ಬರೆದಿದ್ದ ಪ್ರಬಂಧ! ಎಂದು ಬರೆದುದು ಎಂದು ಮರೆತು ಹೋಗಿದೆ.

- mahesha ರವರ ಬ್ಲಾಗ್
- Login or register to post comments
- 461 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?
ತುಂಬ ಚೆನ್ನಾಗಿ ಬರೆದಿದ್ದೀರಿ, ಥ್ಯಾಂಕ್ಸ್.
ಕೇಶವ
Visit my blog:
http://kannada-nudi.blogspot.com
ಉ: ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?
ಥ್ಯಾಂಕ್ಸ್.
ಉ: ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?
ನಾಡಾದಾ ಅಲ್ಲ. ನಾಡದಾ ಸರಿ. ಛಂದಸ್ಸಿಗೂ ಸರಿ. ಅರ್ಥಕ್ಕೂ ಸರಿ. ನಾಡಾಗಲಿಲ್ಲ. ನಾಡಿತ್ತು ಆಗ.