24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಿಂಬೆ ಹಣ್ಣಿಗೆ ಮುಕ್ತಿ

July 15, 2007 - 5:29am
mahesha
ನಿಂಬೆ ಹಣ್ಣಿಗೆ ಮುಕ್ತಿ
ನನ್ನ ಅಡುಗೆ ಮನೆಯಲ್ಲಿ ಒಂದು ನಿಂಬೆ ಹಣ್ಣು ಬಿದ್ದುಕೊಂಡಿತ್ತು. ಅದನ್ನು ಯಾವೊತ್ತು ತಂದೆ, ಏನು ಎತ್ತ ನೆನೆಪಿಲ್ಲ ನನಗೆ. ಏನು ಒಂದು ವಾರ, ಒಂದುವರೆ ವಾರದ ಹಿಂದೆ ಸುಮ್ಮನೆ ನಮ್ಮ ಮನೆ ಹತ್ತಿರದ ಅಗ್ಗದ ಅಂಗಡಿ ’ಸುಭಿಕ್ಷಾ’ದಿಂದ ಯಾವುದೋ ಹಣ್ಣಿನ ಜೊತೆ ಇದು ಮನೆಗೆ ಬಂದಿರಬಹುದು. ಇದರ ಜೊತೆ ಇನ್ನು ಕೆಲವು ನಿಂಬೆಹಣ್ಣುಗಳೂ ಬಂದಿರಬಹುದು. ಆದರೆ ಅದು ಹೇಗೋ ಇದೊಂದೇ ಉಳಿದು ಬಿಟ್ಟಿತ್ತು. ಇಲ್ಲಿ ನನಗೂ ಅಡುಗೆಗೂ ಇರುವ ನಂಟಿನ ಗಂಟನ್ನು ಮುದಲಲ್ಲೇ ಈಗಲೇ ಬಿಡಿಸಿ ಬಿಟ್ಟರೆ ಲೇಸು. ನಾನು ಮದುವೆಯಾಗದ ಹುಡುಗನು, ಸ್ವಯಂಪಾಕವೃತವನ್ನು ನಿಷ್ಠೆಯಿಂದ, ’ತಪ್ಪದೇ’ ಅನ್ನುವಂತೆ ಅಲ್ಲದಿದ್ದರೂ, ವಾರದಲ್ಲಿ ಕಡಮೆ ಅಂದರೂ ನಾಲ್ಕೈದು ದಿನ ನಾನೇ, ಅಡುಗೆ ಮಾಡುಂಡು ಇರುವವನು. ಆದರೆ ಕಳೆದ ವಾರವೇಕೋ ಬಲು ಮನಸ್ಸಿಕ್ಕೆ ಗೋಜಲುಗಳು ಹತ್ತಿಕೊಂಡು ಬಿಟ್ಟಿದ್ದವು. ಬರೀ ಹೋಟೆಲೂಟವೇ ನಡೆದುದು. ಅದಕ್ಕೆ ಇರಬೇಕು, ತಂದ ನಿಂಬೇ ಹಣ್ಣು ಹಾಗೆ ಬಿದ್ದುಕೊಂಡಿತ್ತು. ಈ ಹಾಳು ಹುಳಿ ನಿಂಬೆ, ದರಿದ್ರ ಮುಂಡೇದು, ಅದೇನೋ ರೋಗ ಇದಕ್ಕೆ! .......ಏನಾಯ್ತಪ್ಪ ಇವನಿಗೆ ಇದ್ದಕ್ಕಿದ್ದಂತೆ ಹೀಗಾಡಕ್ಕೆ ಶುರು ಮಾಡಿದ, ಅಂತ ಅಂದುಕೋತಿದ್ದೀರ? ಸೊಲ್ಪ ಇರಿ. ಇನ್ನು ಆ ಹಾಳು ಮುಂಡೇದನ್ನ ಬೈದು ತೀರಿಲ್ಲ. :). ಈ ಒಂದು ನಿಂಬೆ ನನ್ನನ್ನು ಏಷ್ಟು ಕಾಡಿಸಿದೆ ಗೊತ್ತಾ? ಒಂದು ವಾರದಿಂದ ನಾನು ನನ್ನ, ನಾನು ಬಾಡಿಗೆ ಕಟ್ಟುವ ಮನೆಯ ಅಡುಗೆ ಮನೆಯನ್ನು ಹೊಕ್ಕಾಗಲೆಲ್ಲ, ನನ್ನ ಕಣ್ಣಿಗೆ ಬಿದ್ದೇ ಬೀಳಬೇಕು. ನನಗೆ ಮೊದಲೇ ಅಡುಗೆ ಮಾಡಲು ಒಲ್ಲದ ಮನಸ್ಸು. ತೂ ದರಿದ್ರ ಹುಳಿ ನಿಂಬೆ, ನಿನ್ನ ಜೊತೆ ಮನೆಗೆ ಬಂದಿದ್ದ ಬಾಳೆಹಣ್ಣು, ದಾಳಂಬ್ರಿಗಳೆಲ್ಲಾ ತೀರಿದರೂ, ನೀನು ಇನ್ನು ಇದ್ದೀಯ.! ನಿನ್ನ ಜನುಮಕ್ಕಿಷ್ಟು! ಎಂದು ಮನಸ್ಸಲ್ಲೇ ಗೊಣಗಿ, ಸುಮ್ಮನಾಗುತ್ತಿದೆ. ಆದರೆ ಇಂದು ಅದು ಮತ್ತೆ ಕಣ್ಣಿಗೆ ಬಿದ್ದು, "ನಾನು ಬಾಡಿ ಹೋಗುತ್ತಿದ್ದೇನೆ" ಎಂದು ಅಂಗಲಾಚಿತು. ನನಗೆ ಇದಕ್ಕೊಂದು ಗತಿ ಕಾಣಿಸಲೇ ಬೇಕು ಎಂದು ಮನೆಯಲ್ಲಿ ಅಕ್ಕಿಯಿರದಿರುವ ಕಡೆ ನನ್ನ ಗಮನ ಹರಿಸಿ, ಹೋಗಿ ಮತ್ತದೇ ’ಸುಭಿಕ್ಷಾ’ದಿಂದ ಅಕ್ಕಿ ತಂದೆ. ಹಾಗೆ ನೆಲಕಡಲೆಕಾಯೆಣ್ಣೆಯೂ ಬಂತು. ಸರಿ, ನಮ್ಮ ಪಾಕ-ರಸಾಯನಶಾಸ್ತ್ರದಲ್ಲೇ ಸುಪ್ರಸಿದ್ಧವಾದ "ನಿಂಬೆ ಚಿತ್ರಾನ್ನ"ವೆಂಬ ’ವ್ಯಂಜನ’ಸಂಧಿಯನ್ನು ರಚಿಸಲು ಅಣಿಯಾದೆ. ಅರೆರೆ!! ತಕ್ಕ ಸರಕು ಮನೆಯಲ್ಲೇ ಇದೆ. ಒಗ್ಗರಣೆಗೆ ಕಡಲೇಕಾಯೆಣ್ಣೆ, ಬೇಳೆ, ಸಾಸಿವೆ, ಒಣಮೆಣಸಿನಕಾಯಿ, ಒಣನೆಲಕಡಲೇಕಾಯಿ(ಶೇಂಗ). ಸಾಕು ಸಾಕು. ಎರಡುಹೊತ್ತಿಗೆ ಆಗುವಷ್ಟು ಚಿತ್ರಾನ್ನ ಮಾಡಿ ಬಿಡಬಹುದು. ಅನ್ನಕ್ಕೆ ಇಟ್ಟು, ಟೀವಿ ನೋಡಲು ಕೂತೆ. ಅನ್ನವಾಯಿತು.! ಸರಿ ಇನ್ನು ದಿಟವಾದ ಅಡುಗೆ ಶುರು. ಬಾಂಡಲಿಗೆ ಎಣ್ಣೆ ಹುಯ್ದೆ, ನನ್ನ ಅಡುಗೆಯಲ್ಲಿ ತುಸು ಎಣ್ಣೆ ಎಗ್ಗಳ! ಎಣ್ಣೆ ಕಾದಿದ ಬಳಿಕ ಬೇಳೆ ಹಾಕಿದೆ, ಬಳಿಕ ಸಾಸಿವೆ ಹಾಕಿ ಸಿಡಿಸಿದೆ, ತರುವಾಯಂತೆ ಒಣಮೆಣಸಿನಕಾಯಿಯನ್ನೂ ಹರಿದು ಹಾಕಿ, ತಕ್ಕ ಉಪ್ಪು ಬೆರೆಸಿ ಹುರಿದೆ. ಪಾಕಶಾಸ್ತ್ರನಿಪುಣ/ನಿಪುಣೆಯರು ಅಡುಗೆಯ ಕಲಿಗಳು ಇದನ್ನು ಓದಿ ನಗಬಹುದು. ಆದರೆ ಇದು ನಾನೇ ಸ್ವಂತವಾಗಿ ಕಂಡುಹಿಡಿದಿರುವ recipe. Patent ಅರ್ಜಿ ಸಲ್ಲಿಸುವ ದೊಡ್ಡುಂಕೂ/ಮಹದಾಲೋಚನೆಯೂ ಇದೆ :). ಅಯ್ಯೋ ಮಾತು ಎಲ್ಲೆಲ್ಲಿಗೋ ಹಾಯಿತು. ಈಗ ನಿಂಬೆ ಹಣ್ಣನ್ನು ಕುಯ್ದು, ಎರಡು ಪಕ್ಕಳ ಮಾಡಿ, ಬಿತ್ತಗಳ ತಗೆದು, ಬಾಂಡಲಿಗೆ ಒಂದಾದ ಮೇಲೊಂದು ಪಕ್ಕಳವನ್ನು ಹಿಂಡಿದೆ. ನಿಂಬೇ ಹಣ್ಣ ಹೋಳು, ನೋವಾದಂತೆ ನಾಲ್ಕು ಹನಿ ಹುಳಿಯನ್ನು ಅತ್ತಿತು. ಹಿಂಡಿ ಶೋಷಣೆಗೆ ಒಳಗಾದ, ಶೋಷಣೆ ಅಂದ್ರೆ "ಬತ್ತಿ ಹೋಗುವುದು", "ಸತ್ವಹೀರಿ ಬಿಸಾಕುವುದು" ಹೀಗೆ. ಸರಿ, ಆ ನಿಂಬೆ ಸಿಪ್ಪೆಗಳನ್ನು ಪಕ್ಕಕ್ಕೆ ಬಿಸುಟು, ಬಾಂಡಲಿಯ ಕಡೆ ನಿಗಾ ಹಚ್ಚಿಸಿದೆ. ಒಗ್ಗರಣೆಯನ್ನು ತುಸು ಹುರಿದು, ಅನ್ನ ಬೆರೆಸಿ, ಕಲಸಿ, ಹುರಿದು, ಉಪ್ಪು ಸಾಕಾ? ನೋಡಿ ಅಡುಗೆ ಮುಗಿಸಿದೆ. ಇನ್ನು ಏತಕ್ಕೆ ತಡ. ಹಾಗೆ ಒಂದು ತಟ್ಟೆಗೆ ಬಡಿಸಿಕೊಂಡು, ಹಚ್ಚಿದ್ದ ಟೀವಿ ಮುಂದೇ, ಚಕ್ಕಲಮಕ್ಕಲ ಕೂತು, ಹುಳಿಹುಳಿಯಾದ ಚಿತ್ರಾನ್ನ ತಿಂದು ಮುಗಿಸಿದೆ. ಏನು ಆನಂದ, ಬ್ರಹ್ಮಾನಂದ! ಅದೇನೋ ಆನಂದವೇ ಬ್ರಹ್ಮವೂ ಅಂತೆ, ಅದಕ್ಕೆ ನನಗೆ ಆನಂದವಾಯಿತು ಎಂದರೆ ನನಗೆ ಬ್ರಹ್ಮವಾಯಿತು ಎಂದೂ ಆಗುವುದು. :) ಇಷ್ಟೆಲ್ಲ ಮುಗಿದ ಮೇಲೆ ಪಾತ್ರ ತೊಳೆಯುವುದೆಂಬ ತಲೆನೋವು ಎದುರಾಯಿತು. ಆದರೂ ಮಾಡಲೇ ಬೇಕಲ್ಲ, ಪಾತ್ರ ತೊಳೆದು, ಒಲೆಯೊರಸಿ ಮುಗಿದ ಮೇಲೆ, ಅಲ್ಲೇ ಬಿದ್ದಿದ ದಲಿತ ನಿಂಬೇ ಸಿಪ್ಪಿಗಳನ್ನ, ( ಅಯ್ಯೋ ಮಾರಾಯ್ರೆ ದಲಿತ ಅಂದ್ರೆ ಜಜ್ಜಿ ಹೋದ, ಅಜ್ಜಂಬಜ್ಜಿಯಾದ ) ತಂದು ಮೂಲೆಯ ಕಸದ ಬುಟ್ಟಿಗೆ ಬಿಸಾಕಿದೆ. ಆಗ ಈ ನಿಂಬೆ ಹೀಗೆ ಹೇಳಿತು. "ಅಯ್ಯಾ!! ನಾನೇನು ಸೇಬೇ, ಮಾವೇ, ಬಾಳೆಯೇ, ದಾಳಿಂಬ್ರಿಯೇ. ನನ್ನಂತಹ ಕೀಳ್ಗಾಯಿಯಾದ ಹುಳಿ ನಿಂಬೆಯನ್ನು ನಿನ್ನ ವೈಶ್ವಾನರಾಗ್ನಿಯ ದಿವ್ಯಸಾನಿಧ್ಯದ ಪುಣ್ಯಪ್ರಾಪ್ತಿ ಮಾಡಿಸಿ, ನನಗೆ ಸದ್ಗತಿಯ ಮುಕ್ತಿಮಾರ್ಗವನ್ನು ದಯಪಾಲಿಸಿದೆ. ನಿನಗೆ ಅನಂತ ವಂದನೆಗಳು" ಎಂದು ಹೇಳಿತು. ನನಗೆ ನಗು ಬಂತು. ಆದರೂ ಅದರ ಮುಂದೆ ತರಲೆ ಮಾತಾಡಿದರೆ, ಸಾಯುವ ಹೊತ್ತಿನಲ್ಲಿ ಬೇಸರಪಡುವುದೆಂದು, ಕಸದ ಬುಟ್ಟಿಗೆ ಮುಚ್ಚಳ ಹಾಕಿ ಬಂದು ಯೋಚಿಸಿದೆ. "ಎಂತಹ ಮಂಕು ಮುಂಡೇದು ಈ ನಿಂಬೆ. ಇದಕ್ಕೆ ಎಲ್ಲಿಂದ ಬಂತು ಈ ಮುಕ್ತಿ, ಸದ್ದತಿಯ ಭ್ರಾಂತು! "ತ್ರ್‍ಯಂಬಕಂ ಯಜಾಮಹೇ ಸುಗಂಧೀಂ ಪುಷ್ಠಿವರ್ದನಂ ಉರ್ವಾರುಕಮಿವ ಬಂಧಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್" ಅಂದರೆ ನಾನು ತ್ರ್‍ಯಂಬಕನ್ನು ಯಜಿಸುವೆನು. ಅವನು ನಲ್ಗಂಪಿನವನೂ, ಪುಷ್ಠಿವರ್ದನನೂ ಆಗಿದ್ದಾನೆ. ಅವನು ಕಳಿತ ಸೌತೇಕಾಯಿ(ಕೊಳೆತ ಅಲ್ಲ :) ) ತನ್ನ ಬಳ್ಳಿ-ತೊಟ್ಟಿನಿಂದ ಹೇಗೆ ಬಿಡಿಸಿಕೊಳ್ಳುವುದೋ, ಹಾಗೆ ನಮ್ಮನ್ನು ಈ ಬಂಧನ/ಸೆರೆಯಿಂದ ಬಿಡಿಸು, ಅಮರ್ದುವಿನಿಂದಲ್ಲ. ಈ ಶ್ಲೋಕವನ್ನು ಹೇಳಿ ನಾವು, ನಮಗಿಂತ ದೊಡ್ಡದೊಂದು ಶಕ್ತಿಯಿದೆ, ಅದೂ ನಮ್ಮನ್ನು ಉದ್ಧಾರ ಮಾಡುವುದು ಎಂದು ಬೇಡಿಕೊಳ್ಳುವಂತೆ, ಈ ನಿಂಬೆ ನನ್ನನ್ನು ಬೇಡಿಕೊಂಡಿತು. ಇದಕ್ಕೇನು ಗೊತ್ತು ನಾನು ಇದಕ್ಕೆ ಮಾಡಿದ್ದು ಏನು ಎಂದು. ನನ್ನ ಹಸಿವು, ಇದು ಯಾವ ವೈಶ್ವಾನರನೂ ಅಲ್ಲ. ನನ್ನ ಹಸಿವು ತೀರಿಸುವ ಸಲುವಾಗಿ ಅದನ್ನು ಬಳಸಿ ಬಿಸಾಡಿದ್ದು. ಅದು ನನ್ನ ಹೊಟ್ಟೆ ಹೋದಮೇಲೆ, ಅದಕ್ಕೆ ಇನ್ನೂ ದೊಡ್ಡ ದುರ್ಗತಿ ಕಾದಿದೆ ಎಂದು ಅದಕ್ಕೆ ಅರಿವೇ ಇಲ್ಲ. :) ಮಂಕು ಮುಂಡೇದು. ಅದೂ ಅಲ್ಲದೇ ಅದು ಏನು ಪುಕ್ಸಟ್ಟೆ/ಬಿಟ್ಟಿ ಬಂದಿದ್ದೇ, ಅದಕ್ಕೆ ಒಂದು ರುಪಾಯಿ ತೆತ್ತಿಲ್ಲವೇ ನಾನು :)" ಒಟ್ಟಿನಲ್ಲಿ ಆ ನಿಂಬೆಗೆ ಮುಕ್ತಿ ಸಿಕ್ಕಿತೋ ಇಲ್ವೋ, ನನ್ನ ಹೊಟ್ಟೆ ತುಂಬಿತು ಅಷ್ಟು ಸಾಕು!! :)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Vasanth Kaje on
ಮಹೇಶರೆ, ಅದ್ಭುತ!. ವಸಂತ್ ಕಜೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ನನ್ನಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vedumaani on
ಒಂದು ಲಿಂಬೆ ಹಣ್ಣಿನ ಸುತ್ತ ಇಷ್ಟೆಲ್ಲ ಕತೆ ನೇಯ್ದದ್ದು ಇದೇ ಮೊದಲ ಬಾರಿ!!! ತಮಾಷೆಯಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ನಿಂಬೆ ಹಣ್ಣಿನ ಸುತ್ತಾ ಹೆಣೆದಿರುವ ಕಲ್ಪನೆಯಲ್ಲಿ ವಿಹರಿಸುತ್ತಿದ್ದಾಗ, ನನಗೆ ಎರಡು ಕನ್ನಡ ಹಾಡುಗಳು ನೆನಪಾದವು. ೧. ಬಿ.ಆರೆ. ಲಕ್ಷ್ಮಣರಾಯರ "ನಾ ಚಿಕ್ಕವನಾಗಿದ್ದಾಗ" ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು, ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು, ನಿಂಬೆ ಗಿಡ ತುಂಬಾ ಚೆಂದ ನಿಂಬೆಯ ಹೂವು ತುಂಬಾ ಸಿಹಿ, ಆದರೆ ನಿಂಬೆಯ ಹಣ್ಣು ಕಂದ ತಿನ್ನಲು ಬಹಳ ಹುಳಿ ಕಹಿ. ಯೌವನದಲ್ಲಿ ನಾನು ಒಂದು....... :) ಕನ್ನಡಆಡಿಯೋ.ಕಾಂನಲ್ಲಿರುವ [http://www.kannadaau...|ಸುಬ್ಬಾಭಟ್ಟರ ಮಗಳೇ] ಕಲ್ಪಿನಿಂದ(album) [http://www.kannadaau...|ಹಾಡನ್ನು] ಕೇಳುತ್ತಾ ಲೇಖನ ಓದಿದಾಗ ಸಿಗುವ ಮಜವೇ ಬೇರೆ. ನಿಂಬೆ ಹಣ್ಣಿರುವ ಬರಹ + ನಿಂಬೆ ಹಣ್ಣಿರುವ ಹಾಡು ಕೇಳಿದರೆ, ಚಿತ್ರಾನ್ನ ಸೂಪರ್ರಾಗಿರತ್ತೆ. ೨. ಪ್ರೇಮಲೋಕದ [http://www.kannadaau...|"ಈ ನಿಂಬೆ ಹಣ್ಣಿನಂತ ಹುಡುಗಿ....."] ;) ಅದೇನೋ ಈ ನಮ್ಮ ಕನ್ನಡ ಬರಹಗಾರರಿಗೆ, ನಿಂಬೆ ಹಣ್ಣು ವಿಶೇಷವಾದ ಸ್ಟಿಮುಲೇಟಿಂಗ್ ಏಜೆಂಟಿರಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ನಿಂಬೇಹಣ್ಣಿನ ಮುಕ್ತಿಪುರಾಣ ಚೆನ್ನಾಗಿದೆ ರೀ! ನಿಂಬೇಹಣ್ಣಿನ ಚಿತ್ರಾನ್ನ ಚೆನ್ನಾಗಿ ಆಗಲು ಬೇಕಾದದ್ದು ದಲಿತ ನಿಂಬೆಹಣ್ಣು ಮತ್ತು ಖಂಡಿತೆ ಹಸಿಮೆಣಸಿನಕಾಯಿ ಭಾಷೆಯಿಂದ ಭಾಷೆಗೆ ಹೋದಾಗ ಪದಾರ್ಥಗಳು (ಪದಗಳ ಅರ್ಥ, ವಸ್ತುವಲ್ಲ!) ಹೇಗೆ ಬದಲಾಗುತ್ತೆ ಎನ್ನುವುದಕ್ಕೊಂದು ಸಣ್ಣ ಉದಾಹರಣೆ :) -ಹಂಸಾನಂದಿ ದಲಿತ -> ಒತ್ತಲ್ಪಟ್ಟ, ಹಿಂಡಲ್ಪಟ್ಟ ಖಂಡಿತ -> ಕತ್ತರಿಸಿದ, ತುಂಡರಿಸಿದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ನನ್ನಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on
ಬಿ.ಆರ್‍.ಲಕ್ಷಣರಾಯರ ನಾ ಚಿಕ್ಕವನಾಗಿದ್ದಾಗ ಹಾಡಿಗೆ ’ಸ್ಪೂರ್ತಿ’ ಒಂದು ಆಂಗ್ಲ ಹಾಡು - Brothers Four ಅವರ Lemon Tree! http://artists.letss... (ಸ್ಪೂರ್ತಿಯೋ, ಅನುವಾದವೋ, ಕೃತಿಚೌರ್ಯವೋ ಬಲ್ಲವರೇ ಹೇಳಬೇಕು). ಅವರು ಮೂಲವನ್ನು ನೆನಪಿಸಿಕೊಂಡಿದ್ದಾರೆಯೋ ಗೊತ್ತಿಲ್ಲ. ಹಾಡುಗಳು ಎರಡೂ ಚೆನ್ನಾಗಿವೆ. ಆದರೆ lemon tree ಎಂದರೆ ಕನ್ನಡದ ನಿಂಬೆಯೇ? ಅದರ ಹೂವನ್ನು ಯಾರಾದರೂ ತಿನ್ನುತ್ತಾರಾ? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Khavi on
ನನಗೆ ಈಗ ಬಾಯಲ್ಲಿ ನೀರೂರತಾ ಇದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muralihr on
ಛೇ ಅಷ್ಟು ಬೇಗ ಮುಕ್ತಿ ಕೊಡಬಾರದಿತ್ತು ! ನಾನು ನಿ೦ಬೆ ಹಣ್ಣು ಉಪ್ಪಿನಕಾಯಿ ಮಾಡುವುದನ್ನು ಕಲಿಯುತ್ತಿರುವೆ. ಮೊನ್ನೆ ಸ೦ತೆಯಲ್ಲಿ 60 /- ಗೆ ನೂರು ನಿ೦ಬೆ ತ೦ದೆ. ಸದ್ಯಕ್ಕೆ ತರಕಾರಿ/ಹಣ್ನುಗಳಲ್ಲಿ ಅತ್ಯ್೦ತ ಕಡಿಮೆ ಬೆಲೆಗೆ ಸಿಗುವ ನಿ೦ಬೆಗೆ ಬೇಗ ಮುಕಿತಿಕೊಟ್ಟಿದ್ದೀರಾ. ಹೆಚ್ಚು ಬೆಲೆ ಬಾಳುವ ತರಕಾರಿಗಳಿಗೆ ಮುಕ್ತಿ ಸಿಗುವುದು ಕಷ್ಟ :) ಕಳೆದ ವಾರ ಕ್ಯಾರೆಟ್ ಬೆಲೆ ಕೆಜಿಗೆ - 60/-. ಹೊನ್ನಿನ ಅ೦ಟು ಮುಕ್ತಿಗೆ ಅಡ್ಡಿ ಅನ್ನುವುದಕ್ಕೆ ಇದೊ೦ದು ನಿದರ್ಶನ :):):) Reliance ರಿಟೆಲ್ ನವರು ಬ೦ದಿರುವುದರಿ೦ದ ಈ ರೀತಿ ವ್ಯತ್ಯಾಸ ವಾಗ್ತಿದೆ ಅ೦ದರು ಯಾರೋ . ಇವರಿ೦ದ ಬಡ ತರಕಾರಿ ಮಾರುವವರಿಗೆ ಮಾತ್ರ ಮುಕ್ತಿ. ಒಟ್ಟಿನಲ್ಲಿ ಈ ಬ೦ಡಾವಾಳ ಶಾಯಿ ಪದ್ದತಿಯಲಿ ಮುಕ್ತಿ ಸಿಗುವುದು ತರಕಾರಿಗಳಿಗೆ ಮತ್ತು ಅವನ್ನು ಗುಣದಲ್ಲಿ/ಆಕಾರದಲ್ಲಿ ಹೋಲುವ ದೊಡ್ಡ ಮನುಷ್ಯರಿಗೆ ಮುಕ್ತಿ ದುರ್ಲಭ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by benaka on
ಮಹೇಶರೆ, ಲೇಖನ ಚೆನ್ನಾಗಿದೆ. ನಿಂಬೆಹಣ್ಣೆಂದರೆ ನನಗೆ ಯಾವಾಗಲೂ ನೆನಪಾಗುವುದು ನಮ್ಮಜ್ಜ ಹೇಳುತ್ತಿದ್ದ ಮಾತು: "ಮಗೂ, ಮಜ್ಜಿಗೆಗೆ ಸ್ವಲ್ಪ ನಿಂಬೆ ರಸ, ಉಪ್ಪು ಬೆರೆಸಿ ಕುಡಿಯಬೇಕೋ! ರುಚಿಯೆಂದರೆ ಅದು; ದೇವೇಂದ್ರನಿಗೂ ಸಿಗದು! ಕೇಳಿಲ್ಲವೇ - ಜಂಬೀರ ರಸ ಸಂಯುಕ್ತಂ ಕಿಂಚಿತ್ ಲವಣ ಮಿಶ್ರಿತಂ | ಮಾಹಿಷಂ ಸುಷ್ಠುಮಥಿತಂ ತಕ್ರಂ ಶಕ್ರಸ್ಯ ದುರ್ಲಭಂ||" ಅಂದರೆ - ಚೆನ್ನಾಗಿ ಕಡೆದು ಉಪ್ಪು, ನಿಂಬೆ ರಸ ಸೇರಿಸಿದ ಎಮ್ಮೆಯ ಮಜ್ಜಿಗೆ ದೇವೇಂದ್ರನಿಗೂ ದಕ್ಕದು! ಮೇಲಿನ ಪದ್ಯದ ಮೊದಲ ಮೂರು ಪಾದಗಳು ಯಾಕೋ ನಮ್ಮಜ್ಜನ(?) ಸ್ವಂತ ರಚನೆಯೆನಿಸುತ್ತಿದೆ! "ತಕ್ರಂ ಶಕ್ರಸ್ಯ ದುರ್ಲಭಂ" ಎನ್ನುವುದು ಪ್ರಸಿದ್ಧ ಪ್ರಹೇಲಿಕೆಯ(ಒಗಟಿನ) ಉತ್ತರವಾದ ನಾಲ್ಕನೇ ಸಾಲು; ಅದು ಎಲ್ಲರಿಗೂ ಗೊತ್ತಿದೆಯೆನಿಸುತ್ತದೆ. ಅಂದ ಹಾಗೆ, ಜಪಾನಿನಲ್ಲಿ ನಿಂಬೆಹಣ್ಣು ಮೂಸಂಬಿಯಂತಿರುತ್ತದೆ; ಆ ನಿಂಬೆಹಣ್ಣಿಗೆ ಮುಕ್ತಿಕಾಣಿಸಲು ನನಗೆ ವಾರಗಳು ಬೇಕಾಗುತ್ತಿದ್ದವು! ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
"ತಕ್ರಂ ಶಕ್ರಸ್ಯ ದುರ್ಲಭಂ" ಇದು ಬಲು ಪ್ರಸಿದ್ಧವಾದ ಸಂಸ್ಕೃತ ಸಮಸ್ಯೆ. ಈ ಸಂಸ್ಕೃತ ಸಮಸ್ಯೇಗಳನ್ನು ಬಿಡಿಸುವುದು ಬಲು ಮೋಜು. ಹಾಗೆ ಕನ್ನಡದಲ್ಲೂ ಇಂತಹ ಸಮಸ್ಯೆ/ಪಹೇಲಿಗಳಿವೆ. "ಕನ್ನಡ ಸಾಹಿತ್ಯದ ಗೆಜ್ಜೆನಾದ" ಈ ಹೊತ್ತಗೆಯಲ್ಲೊ ಪಂಪನು ನೆಗೞ್ಚಿದ ಕೆಲವು ಪಹೇಲಿಗಳಿವೆ. ನಿಮ್ಮ ಜಪಾನಿನ ಗಜ ನಿಂಬೆ ಗಳಿಗೆ ಸಾಧಾರಣವಾದ ಮುಕ್ತಿ ಸಾಲದು. ಅವಕ್ಕೆ ಗಜೇಂದ್ರ ಮೋಕ್ಷವೇ ಬೇಕು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಮರೆತಿದ್ದೆ.. ನಿಂಬೆ/ಲಿಂಬೆ ಸಂಸ್ಕೃತದಲ್ಲಿ ನಿಂಬಕ/ಲಿಂಬಕ ಅಂತ ಒರೆ ಇದೆ ಅಲ್ವಾ? ಇಲ್ಲಾ ಅಂದರೆ ಹಿಂದಿಗೆ ನೀಂಬು, ಲೀಂಬು, ಇಂಗ್ಲೀಶ್ ಲೆಮನ್ ಇವು ನಮ್ಮ ಕನ್ನಡದಿಂದ ಹೋಗಿರಬೇಕು!! ಜಪಾನ್-ನುಡಿಯಲ್ಲಿ ಏನು ನಿಂಬೆಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by benaka on
ನಿಂಬೆಹಣ್ಣಿಗೆ ಸಕ್ಕದಪದ "ಜಂಬೀರ" ಎಂದು. "ನಿಂಬ"/"ನಿಂಬಕ" ಎಂದರೆ ಬೇವು ಎಂದರ್ಥ. ಯುಗಾದಿಯಲ್ಲಿ ಬೇವು ಬೆಲ್ಲ ತಿನ್ನುವಾಗ ಹೇಳುವ ಶ್ಲೋಕದಿಂದ ಇದು ಜನಜನಿತ. ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ| ಸರ್ವಾರಿಷ್ಟವಿನಾಶಾಯ "ನಿಂಬಕಂ"ದಲಭಕ್ಷಣಂ || ಜಪಾನೀಭಾಷೆಯಲ್ಲಿ ನಿಂಬೆಗೆ "ಯುಜು"(Yuzu) ಎನ್ನುತ್ತಾರೆ. ಆದರೆ ಅದು ಜಪಾನೀ ನಿಂಬೆ. ನಿಂಬೆಹಣ್ಣಿನ ತವರು ಭಾರತದ ಹಿಮಾಲಯವಂತೆ! ಭಾರತದ ನಿಂಬೆಗೆ ಜಪಾನಿನಲ್ಲಿ "ರೆಮೊನ್"(ಲೆಮೊನ್ ನ ಅಪಭ್ರಂಶ) ಎಂದೇ ಕರೆಯುತ್ತಾರೆ. ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹಾ!! ನಿಂಬಕ ಬೇವು ಸರಿ.. ಹೊಳೆಯಿತು!! ನನ್ನಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on
ಚೆನ್ನಾಗಿದೆ. ಅಂತೂ ಯಾವುಯಾವುದೋ ಸಿಟ್ಟನ್ನ "ಶೋಷಣೆ" "ದಲಿತ" ಪದಗಳ ಮೇಲೆ ತೀರಿಸಿಕೊಂಡು ಉಂಡು, ಸಂತೃಪ್ತರಾಗಿದ್ದೀರ! ಒಳ್ಳೇದಾಗಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ನನ್ನಿ!! ==================================== ತಿಳಿದಷ್ಟು ತಿಳಿಯಾಗುವುದು ತಿಳಿವು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಮಾಯ್ಸ ಸಕ್ಕತ್ತ್ :) ಚಿತ್ರಾನ್ನ ತಿಂದಷ್ಟೇ ಖುಷಿ ಆಯ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಓ ಸೊಲ್ಮೆಲು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.