ಕುಸುಮಾಕರ ದೇವರಗೆಣ್ಣೂರು

ನಾವೆಲ್ಲ ಹೆಗಲಿಗೆ ಚೀಲ ಸಿಕ್ಕಿಸಿಕೊಂಡು, ಪ್ರೀತಿಯ ಅಮ್ಮ, ತಮ್ಮನನ್ನು ಮನೆಯಲ್ಲೇ ಬಿಟ್ಟು, ಗೊತ್ತೇ ಇಲ್ಲದ ಹುಡುಗರು, ಭಯ ಹುಟ್ಟಿಸುವ ಮಾಸ್ಟ್ರು, ಟೀಚರ್ರು ಎಲ್ಲ ಇರುವ ನಿಗೂಢ ಶಾಲೆಗೆ ಹೋಗತೊಡಗಿದ್ದು, ಕ್ರಮೇಣ ಅದೆಲ್ಲ ನಮಗೆ ಅಭ್ಯಾಸವಾಗಿದ್ದು ಮತ್ತೆ ಅದೇ ಶಾಲೆ ಬಿಟ್ಟು ಹೈಸ್ಕೂಲಿಗೋ ಕಾಲೇಜಿಗೋ ಬೇರೆ ಕಡೆ ಹೋಗಬೇಕಾದಾಗ ಬಿಟ್ಟು ಹೋಗಬೇಕಲ್ಲ ಎಂದು ಅತ್ತಿದ್ದು.....ಎಲ್ಲ ಹಳೆಯ ನೆನಪುಗಳು.

ಅಲ್ಲೆಲ್ಲೋ ನಮಗೆ ಬದುಕಿನ ಸ್ಪರ್ಧಾತ್ಮಕ ಗುಣದ ಅಸ್ಪಷ್ಟ ಪರಿಚಯವಾಗಿರುತ್ತದೆ. ಅದು ಮಾರ್ಕುಗಳ ಲೆಕ್ಕದಲ್ಲಿ, ಆಟದ ತೀರ್ಪುಗಳಲ್ಲಿ, ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳಲ್ಲಿ ತನ್ನ ಕ್ರೂರ ಹಲ್ಲನ್ನು ಮಸೆದ ಶಬ್ದ ಕೇಳಿಸದಿದ್ದರೂ ಕೇಳಿಸಿದಂತಿರುತ್ತದೆ. ಮುಂದೆ ಉದ್ಯೋಗದ ಬೇಟೆಗೆ ತೊಡಗಿದಾಗ, ಅಲ್ಲಿ ಇಲ್ಲಿ ನಮ್ಮ ಜೊತೆಯವರು ನಮಗಿಂತ ಮುಂದೆ ಸಾಗಿ ಹೋದ ಸುದ್ದಿ ಕೇಳಿದಾಗ, ಕೊನೆಗೂ ಬದುಕಿನ ಹಾದಿ ಬದಲಿಸಲಾಗದ ಮಧ್ಯವಯಸ್ಸಿನಲ್ಲಿ ನಿಂತಿರುವಾಗ ನಮ್ಮದೇ ಓರಗೆಯ ಅವರಿವರ ಯಶಸ್ಸು, ಅಪಯಶಸ್ಸುಗಳನ್ನು ಕಾಣುವಾಗ....  ಮುಂದೆ ಓದಿ »

Ornamental seperator

'ದೇಶಕಾಲ'ಕ್ಕೆ ಮೂರು ವರ್ಷ

ದೇಶ ಕಾಲ - ವಿವೇಕ್ ಶಾನಭಾಗರ ತ್ರೈಮಾಸಿಕ ಪತ್ರಿಕೆಗೆ ಮೂರುವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಸದ್ದಿಲ್ಲದೆ ಅದು ಸಾಧಿಸಿರುವುದು ಬಹಳ. ಅಲ್ಲಿ ಪ್ರಕಟವಾದ ಕತೆ, ಕವನ, ಲೇಖನ, ಪರಿಚಯಿಸಲ್ಪಟ್ಟ ಬರಹಗಾರರು, ವಿಚಾರಗಳು ವೈವಿಧ್ಯಮಯ ಎಂತೋ ಮುಂದಿನ ಸಂಚಿಕೆ ಬರುವ ಮುನ್ನಿನ ಮೂರು ತಿಂಗಳ ಕಾಲ ತಲೆಗೆ ಸಾಕಷ್ಟು ಕೆಲಸ ಕೊಡಬಲ್ಲವು ಕೂಡ ಆಗಿದ್ದವು. ಇಂಥ ಗುಣಮಟ್ಟವನ್ನು ಕಾಯ್ದುಕೊಂಡು ಬರುವ, ಅಂಥ ಬರಹಗಾರರನ್ನು, ಲೇಖನಗಳನ್ನು ಹುಡುಕಿಕೊಂಡು ಹೋಗಿ ಹೆಕ್ಕಿ ತಂದು ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು ಓದುಗರ ಕೈಗಿಡುವ ಕೆಲಸ ಸುಲಭವಲ್ಲದ್ದು. ಆದರೆ ವಿವೇಕ್ ಈ ಬಗ್ಗೆ ಮಾತನಾಡಿದ್ದೇ ಇಲ್ಲವೆನ್ನಬಹುದು. ತಮ್ಮಷ್ಟಕ್ಕೆ ಕೆಲಸ ಮಾಡುತ್ತ ಹೋಗುವುದು ಅವರ ಗುಣ.

ದೇಶಕಾಲ ಸುರುವಾದಾಗ ಕನ್ನಡದ ಉತ್ತಮ ಕತೆಗಾರ ಎಂ.ಎಸ್.ಶ್ರೀರಾಮ್ ತಮ್ಮ ಬ್ಲಾಗ್ ಕನ್ನಡವೇ ನಿತ್ಯದಲ್ಲಿ ಕನ್ನಡದ ಸಣ್ಣಪತ್ರಿಕೆಗಳ ಬಗ್ಗೆ ಬರೆದಿದ್ದರು. ಮಯೂರ(ಜೂನ್ ೨೦೦೬)ದಲ್ಲಿ ಕೂಡ ಅಂತಹುದೇ ಒಂದು ಲೇಖನವನ್ನು ಸಂಪಾದಕ ಜಿ.ಪಿ.ಬಸವರಾಜು ಬರೆದಿದ್ದರು. ಆದರೆ ಈಗ ಬರುತ್ತಿರುವ ಸಂಚಯ, ಸಂಕಲನ, ಸಂಕ್ರಮಣ, ಮಾತುಕತೆ, ಅಭಿನವ, ಕನ್ನಡ ಅಧ್ಯಯನ, ಗಾಂಧಿ ಬಜಾರ್ ಮುಂತಾದ ಇನ್ನೂ ಅನೇಕ ಸಣ್ಣಪತ್ರಿಕೆಗಳ ಕಾಣ್ಕೆ, ಸಮಸ್ಯೆಗಳ ಬಗ್ಗೆ ಹೇಳುವವರಿಲ್ಲ. ಆಸಕ್ತರಿಗೆ ಸರಿಯಾದ ಮಾಹಿತಿ ಕೂಡ ನೀಡುವವರಿಲ್ಲ. ಅವು ನಿಂತು ಹೋದರೆ, ಪುನರಾರಂಭಗೊಂಡರೆ ಸ್ವತಃ ಚಂದಾದಾರರಿಗೂ ತಿಳಿಯುವುದಿಲ್ಲ! ಯಾಕೆಂದರೆ, ಜೀವಂತ ಇರುವಾಗಲೂ ಇವು ನಿಯಮಿತ ಕಾಲಕ್ಕೆ ಮುಖ ತೋರಿಸುವುದು ಸ್ವಲ್ಪ ಅನುಮಾನವೇ! ವಾರದಾಗ ಒಂದು ಸರತಿ ಬಂದು ಹೋಗಾಂವ ಎಂದು ಖಚಿತವಾಗಿ ಹೇಳುವಂತಿಲ್ಲ!  ಮುಂದೆ ಓದಿ »

Ornamental seperator

ಮಹಿಳಾ ಸಾಹಿತ್ಯ ಯಾಕೆ ಹೀಗಿದೆ?

"ಮಾನಸ" ಎಂಬ ಹೆಸರಿನಿಂದ ಒಂದು ಮಾಸಪತ್ರಿಕೆ ನನಗೆ ತಿಳಿದಂತೆ ಸುಮಾರು ೧೯೯೮ರಿಂದಲೂ ಬರುತ್ತಾ ಇತ್ತು. ಕಳೆದ ಎರಡು ವರ್ಷದ ಹಿಂದೆ ಅದು ಇದ್ದಕ್ಕಿದ್ದಂತೆ ನಿಂತು ಹೋಯಿತು. ಇದೀಗ ಮತ್ತೆ "ನಮ್ಮ ಮಾನಸ" ಎಂಬ ಹೆಸರಿನಿಂದ ಮತ್ತಷ್ಟು ಮೈತುಂಬಿಕೊಂಡು, ಹೊಸ ಗುರುತ್ವವನ್ನೂ ಮೈಗೂಡಿಸಿಕೊಂಡು ಹೊರಬರುತ್ತಿದೆ. ಈಚಿನ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಂಡ ಬರಹಗಾರರ ಹೆಸರು ಗಮನಿಸಿದರೆ ಇದು ನಿಮಗೇ ಅರ್ಥವಾದೀತು: ನೀಲಾಂಜನ ಬಿಸ್ವಾಸ್, ಎಚ್ ಎಸ್ ದೊರೆಸ್ವಾಮಿ, ಡಾ.ಚಂದ್ರಮತಿ ಸೋಂದಾ, ಎನ್ ಎಸ್ ಶ್ರೀಧರ ಮೂರ್ತಿ, ಪ್ರತಿಭಾ ನಂದಕುಮಾರ್, ಮಲತಿ ಬೇಳೂರು, ಕೋ.ಚೆನ್ನಬಸಪ್ಪ, ಡಾ.ಪಿ.ಚಂದ್ರಿಕಾ, ಎಸ್ ಮಾಲತಿ ಸಾಗರ, ಡಾ. ನಿರಂಜನ ವಾನಳ್ಳಿ, ವಿ.ಗಾಯತ್ರಿ, ಪ್ರೊ.ಎಂ.ಎಚ್ ಕೃಷ್ಣಯ್ಯ, ಯು.ಮಹೇಶ್ವರಿ, ಸಿ.ಜಿ.ಮಂಜುಳಾ, ಬಿ.ಎಸ್.ಪೂರ್ಣಿಮಾ, ಕಮಲಾ ಭಾಸಿನ್, ಮಮತಾ ಜಿ.ಸಾಗರ, ಕೆ.ಸತ್ಯನಾರಾಯಣ ಇತ್ಯಾದಿ. ರಾಜೇಶ್ವರಿ ಎಚ್ ಎಸ್ ನಿರ್ವಹಿಸುತ್ತಿರುವ ಈ ಪತ್ರಿಕೆಯ ಹಿಂದೆ ಹಲವರಿದ್ದಾರೆ. ವೆಂ. ವನಜ ಬೇರೆ ಭಾಷೆಗಳ ಮಹತ್ವದ ಲೇಖನಗಳನ್ನು ಕನ್ನಡಕ್ಕೆ ತರುತ್ತಿದ್ದಾರೆ. (ವಾರ್ಷಿಕ ಚಂದಾ ಕೇವಲ ನೂರು ರೂಪಾಯಿ. ವಿಳಾಸ: ನಮ್ಮ ಮಾನಸ, ೧೧೪/೫, ೯ನೆಯ ತಿರುವು, ೨ನೆಯ ಮುಖ್ಯ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು- ೫೬೦ ೦೧೮)

ಈ ಬಾರಿಯ "ನಮ್ಮ ಮಾನಸ"ದಲ್ಲಿ ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಮಹಿಳಾ ಸಾಹಿತ್ಯದ ಕೆಲವು ಸಂಗತಿಗಳತ್ತ ಗಮನ ಸೆಳೆಯುವ ಒಂದು ಲೇಖನ ಬರೆದಿದ್ದಾರೆ. ಹೊಸ ಕಾಲದ ಬರಹಗಾರ್ತಿಯರಿಂದ ಹೂವಯ್ಯ, ರಾಮ, ಲಚ್ಚ, ಗುತ್ತಿ, ಚೋಮನಂಥ ಬಹುಕಾಲ ನೆನಪಿನಲ್ಲಿ ಉಳಿಯಬಲ್ಲ, ಹಾಗೆ ಉಳಿದು ಕ್ರಮೇಣ ನಮ್ಮ ನಡುವಿನ ಜೀವಂತ ವ್ಯಕ್ತಿಗಳೇ ಆಗಬಲ್ಲಂಥ ಗಟ್ಟಿ ಪಾತ್ರಗಳು ಸೃಷ್ಟಿಯಾಗಿಲ್ಲ - ಯಾಕಿರಬಹುದು ಎಂಬ ಒಂದು ಬಗೆಯ ಸ್ವಗತದ ಹಾಗೆ ಕೇಳಿಕೊಂಡ, ಮೆಲುದನಿಯ ಜಿಜ್ಞಾಸೆ ಇಲ್ಲಿದೆ. ಇದೇ ಸಂಚಿಕೆಯಲ್ಲಿ ಡಾ.ಪಿ. ಚಂದ್ರಿಕಾ ಈ ಜಿಜ್ಞಾಸೆಗೆ ತಮ್ಮ ಅನಿಸಿಕೆಗಳ ಸಾಥ್ ನೀಡಿದ್ದಾರೆ. ಅಭಿನವ ಹೊರತಂದ ಪುಸ್ತಕಗಳನ್ನು ಗಮನಿಸಿದವರಿಗೆ ಪಿ. ಚಂದ್ರಿಕಾ ಗೊತ್ತು. ಚಂದ್ರಿಕಾ ಅವರಿಗೆ ಮಹಿಳಾ ಸಾಹಿತ್ಯ ಎನ್ನುವುದು ಪುರುಷ ಸಾಹಿತ್ಯವನ್ನು ಮಾದರಿಯಾಗಿಟ್ಟುಕೊಂಡು, ಅದು ತುಳಿದ ಹಾದಿಯಲ್ಲೇ ಸಾಗಬೇಕೆಂಬ ಪುರುಷ- ನಿರೀಕ್ಷೆಯ ಕುರಿತೇ ಸಹಮತವಿಲ್ಲ. ಹೊಸ ಕಾಲದ ಬರಹಗಾರ್ತಿಯರು ಇಂಥ ಮಾದರಿಗಳಿಲ್ಲದೆ ಸ್ವತಂತ್ರವಾಗಿ ಸಾಕಷ್ಟು ಗಟ್ಟಿಯಾದ ಕೃತಿಗಳನ್ನು ಕೊಟ್ಟಿದ್ದಾರೆಂದು ಅವರು ಬರೆಯುತ್ತಾರೆ. ಈ ಚರ್ಚೆ ಕುತೂಹಲಕರವಾಗಿದೆ ಯಾಕೆಂದರೆ ಈ ಇಬ್ಬರ ಗಮನಿಸುವಿಕೆಯಲ್ಲೂ ಸತ್ಯಗಳಿವೆ, ತೀರ್ಮಾನಗಳಿಲ್ಲ. ಹಾಗೆಯೇ ಈ ಸಂವಾದ ಎಲ್ಲರಿಗೂ ಮುಕ್ತವಾಗಿರುವುದರಿಂದ ನಮ್ಮ ಸಂಪದದ ಓದುಗರು, ಸದಸ್ಯರು ಇದನ್ನು ಗಮನಿಸಲಿ, ಚರ್ಚಿಸಲಿ ಎಂದು ನನಗೆ ಆಸೆ.  ಮುಂದೆ ಓದಿ »

Ornamental seperator
Syndicate content