ಅನಂತಮೂರ್ತಿಯವರು ಮಾತನಾಡಬಾರದೆ?
ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "ನನಗೆ ನೀವು ಅವರ ಭಾಷಣದ ಪೂರ್ಣ ಪಠ್ಯ ಒದಗಿಸಿದರೆ ನಾನದನ್ನ ಓದಿ ನನ್ನ ಅಭಿಪ್ರಾಯ ತಿಳಿಸಬಹುದೇ ಹೊರತು ಪತ್ರಿಕಾ ವರದಿಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಅಂತ ಹೇಳಿದರು.
ರಾತ್ರಿ ಸಂಪದದಲ್ಲಿ ಮುಖ್ಯವಾಗಿ ಎರಡು ಬ್ಲಾಗ್ಗಳಲ್ಲಿ "ಅನಂತಮೂರ್ತಿಯವರ ಉಪದ್ವ್ಯಾಪಿತನ ಅತಿಯಾಯಿತು" ಅಂತ ಒಬ್ಬರು, "ಆವರಣದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು" ಅಂತ ಇನ್ನೊಬ್ಬರು ಚಿಕ್ಕದಾಗಿ ಬರೆದರು. ವಾಸ್ತವವಾಗಿ ಇವರ ಬ್ಲಾಗ್ನಲ್ಲಿ ಅನಂತಮೂರ್ತಿಯವರ ಭಾಷಣದ ಯಾವ ನಿರ್ದಿಷ್ಟ ಅಂಶಗಳ ಕುರಿತೂ ಉಲ್ಲೇಖವಿಲ್ಲ. ಅಲ್ಲದೆ ಬ್ಲಾಗ್ ಬರೆದವರಾದರೂ, ಇವರಿಗೆ ಪ್ರತಿಕ್ರಿಯೆ ಬರೆದವರಾದರೂ ಅನಂತಮೂರ್ತಿಯವರ ಭಾಷಣವನ್ನು ತಾವೇ ಖುದ್ದಾಗಿ ಮತ್ತು ಸರಿಯಾಗಿ ಕೇಳಿದ್ದರೆ, ಅಥವಾ ಅದರ ಪೂರ್ತಿ ಪಠ್ಯವನ್ನಾದರೂ ಓದಿದ್ದರೆ ಎಂಬುದು ಅನುಮಾನ.
ಇತಿಹಾಸವೆಂದರೆ ತನ್ನ ಮನೋಭಾವಕ್ಕೆ ಸರಿಯಾಗಿ ಬೇಕಾಬಿಟ್ಟಿ ಬರೆಯಬಹುದಾದ ಕಥೆ ಕವನ ಕಾದಂಬರಿಯಲ್ಲವಲ್ಲ ಎನ್ನುತ್ತಾರೆ ಇವರಲ್ಲೊಬ್ಬರು. ಆವರಣವನ್ನು ಇತಿಹಾಸ ಎನ್ನುತ್ತಿದ್ದಾರೋ ಅಥವಾ ತಮ್ಮ ತಮ್ಮ ಮನೋಭಾವಕ್ಕೆ ಸರಿಯಾಗಿ ಬೇಕಾಬಿಟ್ಟಿ ಬರೆಯುವುದೆಲ್ಲ ಕಥೆ ಕಾದಂಬರಿ ಕವನ ಎನ್ನುತ್ತಿದ್ದಾರೋ ಅರ್ಥವಾಗಲಿಲ್ಲ. ಹಾಗೆಯೇ ಅನಂತಮೂರ್ತಿಯವರ ವಿಪರೀತದ ವರ್ತನೆ ಎಂದು ಇವರು ಯಾವುದನ್ನ ಕುರಿತಿಟ್ಟು ಹೇಳುತ್ತಿದ್ದಾರೆಂದೂ ತಿಳಿಯಲಿಲ್ಲ.
ಅನಂತಮೂರ್ತಿಯವರು ಮಾತೇ ಆಡಬಾರದೋ ಅಥವಾ `ಮುಸ್ಲಿಂ ದ್ವೇಷಿ ಕಂ ರಾಷ್ಟ್ರಪ್ರೇಮಿ'ಗಳಿಗೆ ಇಷ್ಟವಾಗುವುದನ್ನು ಮಾತ್ರ ಅವರು ಆಡಬೇಕೋ ಎಂದು ಪ್ರಶ್ನಿಸುವಂತೆ ಸದ್ಯದ ಬೆಳವಣಿಗೆಗಳು ಅಚ್ಚರಿಯನ್ನೂ ಅಸಹ್ಯವನ್ನೂ ಹುಟ್ಟಿಸುತ್ತಿವೆ.
ಇನ್ನು ಇತಿಹಾಸದಿಂದ ಪಾಠ ಕಲಿತು ಅಂಥ ತಪ್ಪುಗಳು ಪುನರಾವರ್ತಿಸದಂತೆ ಬದುಕಬೇಕು ಎನ್ನುವ ಇವರು ನಮಗೆಲ್ಲ ನೆನಪಿಸಬಹುದಾದ, ಭಾರತದಲ್ಲಿ ಇತ್ತೀಚೆಗೆ ಮುಸ್ಲಿಮರೇ ಭಗ್ನಗೊಳಿಸಿದ ಯಾವುದಾದರೂ ಒಂದು ದೇವಸ್ಥಾನದ ಪ್ರಕರಣವನ್ನು ಉಲ್ಲೇಖಿಸಲು ಸಾಧ್ಯವೆ?
ಅನಂತಮೂರ್ತಿಯವರ ಭಾಷಣದಲ್ಲಿ ಆವರಣದ ವಿಮರ್ಶೆಯಾಗಲೀ ಸಾಹಿತ್ಯದ ವಿಮರ್ಶೆಯಾಗಲೀ ಇರಲಿಲ್ಲ ಎಂದೂ ಕೆಲವರು ಬರೆದಿದ್ದಾರೆ. ವಾಸ್ತವವಾಗಿ ಅನಂತಮೂರ್ತಿಯವರು ತಮ್ಮ ಭಾಷಣದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿಯೇ ಮುಖ್ಯವಾಗಿ ಈ ಐದು ಅಂಶಗಳನ್ನು ಎತ್ತಿದ್ದಾರೆ.
೧. ಒಬ್ಬ ಶ್ರೇಷ್ಠ ಲೇಖಕ ತಾನು ಕಂಡುಕೊಂಡ, ಒಪ್ಪಿದ ಮತ್ತು ತನಗೆ ತಿಳಿದ ಸಂಗತಿಗಳನ್ನೂ ಪ್ರಶ್ನಿಸಿಕೊಳ್ಳುತ್ತ, ತನ್ನದೇ ಅಭಿಪ್ರಾಯಗಳಿಗೆ ವಿರುದ್ಧವಾಗಿ ಹೋಗುವ ಮುಕ್ತ ಮನಸ್ಸು ಹೊಂದಿರುತ್ತಾನೆ. ಸಾಮಾನ್ಯ ಲೇಖಕ ಜನಪ್ರಿಯವೆಂದು ತಾನು ನಂಬಿದ್ದನ್ನು ಜನರೂ ನಂಬುವ ಹಾಗೆ, ಆಕ್ರಮಣ ಮಾಡುವ ಹಾಗೆ ಬರೆಯುತ್ತಾನೆ.
೨. ಭೈರಪ್ಪನವರು ಒಬ್ಬ ಡಿಬೇಟರ್. ಅವರ ಕೃತಿಗಳಲ್ಲಿ ಅವರು ಚರ್ಚೆಯನ್ನು ಕಟ್ಟುತ್ತಾ ಅದಕ್ಕೆ ಅವರದೇ ಪ್ರತಿರೋಧವನ್ನೂ ಕಟ್ಟುತ್ತಾ ಎಲ್ಲೋ ಒಂದು ಕಡೆ ತಮಗೇ ಇಷ್ಟವಿರುವ ಉತ್ತರಗಳು ಸಿಗುವ ಹಾಗೆ ಅದನ್ನು ಕಟ್ಟುತ್ತ ಕಟ್ಟುತ್ತ ಕಟ್ಟುತ್ತ ಹೋಗುತ್ತಾರೆ.
೩. ಭೈರಪ್ಪನವರಲ್ಲಿ ಕಾವ್ಯ ಎನ್ನುವುದು ಏನೂ ಇಲ್ಲ.
೪. ಒಬ್ಬ ಒಳ್ಳೆಯ ಲೇಖಕ ಮುಕ್ತ ಮನಸ್ಸನ್ನು ಹೊಂದಿರುತ್ತಾನೆ. ತನಗೆ ಕಾಣುತ್ತಿರುವುದರ ಸನಿಹದಲ್ಲೇ ತಾನು ಕಾಣದಿರುವುದೂ ಇದ್ದಿರಬಹುದಾದ ಸೂಕ್ಷ್ಮ ಅನುಮಾನ, ಅಂಥ ಸಾಧ್ಯತೆಯ ಅರಿವು ಅವನಲ್ಲಿ ಇರುತ್ತದೆ.
೫. ಷೇಕ್ಸ್ಪಿಯರ್ಗೆ ಕೊಲೆಗಡುಕ ಮ್ಯಾಕ್ಬೆತ್ನನ್ನು ಒಬ್ಬ ಮನುಷ್ಯನನ್ನಾಗಿ ನೋಡುವುದು ಸಾಧ್ಯವಾಯಿತು, ಟಾಲ್ಸ್ಟಾಯ್ಗೆ ನೆಪೋಲಿಯನ್ನಂಥವನನ್ನೂ ಒಬ್ಬ ಸಾಮಾನ್ಯ ಮನುಷ್ಯನಂತೆ ನೋಡಲು ಸಾಧ್ಯವಾಯಿತು. ಔರಂಗಜೇಬ್ ಕೂಡಾ ನಮ್ಮ ದೇವೇಗೌಡರು, ಇಂದಿರಾಗಾಂಧಿ ಮತ್ತು ನಮ್ಮನಿಮ್ಮ ಹಾಗೇ ಒಬ್ಬ ಮನುಷ್ಯ.
ಇದಲ್ಲದೆ ಆವರಣದ ಹಿಂದೆ ಕೆಲಸ ಮಾಡಿದ ಮನೋಧರ್ಮದ ಕುರಿತಾಗಿ ಅವರು ಹೇಳಿದ `ದಿಗಿಲಿನ' ಅಥವಾ `ಭಯ'ದ ಮಾತು ಇದು: ಇದರ ಹಿಂದಿರುವುದು ಭೈರಪ್ಪನವರ ಜನಪ್ರಿಯತೆಯ ಕುರಿತ ಅಸೂಯೆಯೇ ಎಂದು ಅನಿಸಿದರೆ ಅದು ಅವರವರ ಭಾವ.
೬. ಭೈರಪ್ಪನವರ ರೀತಿಯೇ ಯೋಚಿಸುವವರು ಮುಸ್ಲಿಮರಲ್ಲೂ ಹಿಂದೂಗಳಲ್ಲೂ ಹೆಚ್ಚಾದರೆ ಈ ಬಗೆಯ(ಸೌಹಾರ್ದದ) ಕನಸು ಕಾಣುವುದು ಸಾಧ್ಯವಾಗುವುದಿಲ್ಲ. ಆ ರೀತಿ ಯೋಚನೆ ಮಾಡುವವರು ಜನಪ್ರಿಯ ಆದಾಗ ಸ್ವಲ್ಪ ಭಯವಾಗುತ್ತೆ. ಕನಸುಗಳೇ ಇಲ್ಲದ ಸಮಾಜ ಒಂದು ನರಕವೇ ಸರಿ.
ವಾಸ್ತವದಲ್ಲಿ ಸಂಪದ ಈ ಕುರಿತ ಚರ್ಚೆಯನ್ನು ತುಂಬ ಪ್ರಬುದ್ಧವಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಬೇಕಿತ್ತು. ಮುಖ್ಯವಾಗಿ ಪತ್ರಿಕೆಗಳಲ್ಲಿ ಅದು ಇವತ್ತು ಸಾಧ್ಯವಿಲ್ಲ ಎಂಬ ಕಾರಣಕ್ಕೇ. ಸಂಪದವನ್ನು ಆರಂಭಿಸಿದವರಿಗೆ, ನಿರ್ವಹಿಸುತ್ತಿರುವವರಿಗೆ ಬಹುಷಃ ಅಂಥ ಒಂದು ಆಶಯವಿತ್ತೆನಿಸುತ್ತದೆ. ಅದಕ್ಕಾಗಿಯೇ ಅವರು ಇದನ್ನು ಒಂದು ಮುಕ್ತವೇದಿಕೆಯನ್ನಾಗಿಸಿದ್ದರು.
ಸಂಪದದಲ್ಲಿ ವ್ಯಕ್ತಿನಿಂದೆ ಇರುವುದಿಲ್ಲ, ವಸ್ತುನಿಷ್ಠ ಚರ್ಚೆ, ಲೇಖನ, ಮಾತುಕತೆ ಮಾತ್ರ ಇರುತ್ತದೆ ಎಂದು ನಂಬಿದ್ದೆ. ಇಲ್ಲಿ ಇರುವ ಅತ್ಯಂತ ಪ್ರಜಾಸತ್ತಾತ್ಮಕ ವೇದಿಕೆ ಯಾರು ಬೇಕಾದರೂ ಸದಸ್ಯರಾಗಿ ಏನನ್ನು ಬೇಕಾದರೂ ಪೋಸ್ಟ್ ಮಾಡಲು ಮುಕ್ತ ಅವಕಾಶವನ್ನು ಕೊಟ್ಟಿದೆ ನಿಜ. ಇಲ್ಲಿನ ಬರಹಗಳ ವಿಚಾರದಲ್ಲಿ ನಿರ್ವಾಹಕರು ಕೈ ಹಾಕಿದ ಉದಾಹರಣೆಗಳೇ ಇಲ್ಲವೆನ್ನಬಹುದೇನೋ. ಯಾಕೆಂದರೆ ಪ್ರಬುದ್ಧರಿಗೆ ಕೊಡಲ್ಪಟ್ಟ ಸ್ವಾತಂತ್ರ್ಯ ಯಾವಾಗಲೂ ಹೆಚ್ಚು ಹೊಣೆಗಾರಿಕೆಯನ್ನು ಹೊರಿಸುತ್ತದೆ ಎಂಬುದು ಸಾಮಾನ್ಯ ನಂಬುಗೆ. ಆದರೆ ಇಲ್ಲೂ ಕುಹಕ, ಚಿತಾವಣೆ, ಪ್ರವೋಕ್ ಮಾಡುವ `ತಿಳಿಯಿತು ಬಿಡು ನಿನ್ನ ಬಂಡವಾಳ' ಮಾದರಿಯ ನಂಜಿನ ಬರಹಗಳು ಹೆಚ್ಚುತ್ತಿವೆ.
ಬ್ಲಾಗ್ಗಳೆಂದರೇನು ಅತೃಪ್ತ ಮನಸ್ಸುಗಳ ಆಧುನಿಕ ಗೋಡೆ ಬರಹಗಳೆ?

- narendra ರವರ ಬ್ಲಾಗ್
- Login or register to post comments
- 1270 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





ಪ್ರತಿಕ್ರಿಯೆಗಳು
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನನ್ನಿ ನರೇಂದ್ರರೆ,
ನಿಮ್ಮ ಬರಹ ಕಣ್ಣು ತೆರೆಸುವಂತಿದೆ.
ಈ ವಿಚಾರದಲ್ಲಿ ನನಗನಿಸಿದ್ದು
೧) ಪೂರ್ತಿ ವಿವರ ತಿಳಿಯದೆ ಒಬ್ಬ ವ್ಯಕ್ತಿ/ವಿಷಯದ ಬಗ್ಗೆ ಮಾತಾಡುವುದು ಸರಿಯಲ್ಲ
೨) ಒಬ್ಬ ವ್ಯಕ್ತಿಯ ಬಗ್ಗೆ ಮಾತಾಡದೆ ವಿಷಯದ ಬಗ್ಗೆ ಮಾತಾಡುವುದು ಒಳ್ಳೆಯದು( talk about the issue not person)
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ವೈಬವನ ಮಾತಿಗೆ ನನ್ನ ಕೊರಲು ಸೇರಿದೆ.
ಈ ಎಲ್ಲ ಗದ್ದಲ ನೋಡಿ,
೧. "ಆವರಣ"ದ ವಿಷಯವನ್ನು ಬಿಟ್ಟು, ಅನಂತಮೂರ್ತಿಯವರ ಮಿಕ್ಕೆಲ್ಲ ಮಾತನ್ನು ಎತ್ತಿ ಅವರ ಮೇಲೇ ತೀಯಾಟ ನಡೆಸಿದಂತಿದೆ. ಒಟ್ಟಿನಲ್ಲಿ ಹಲವರಿಗೆ ಅಮೂ ಅವರನ್ನು ಅನ್ನುವ ಮನವಿತ್ತೇನೋ, ಅದನ್ನು ತಣಿಸಿಕೊಳ್ಳಲು ಒಂದು ದಾರಿ ಸಿಕ್ಕಿತು.
೨. ಹಿಂದೆ ಅಮೂ "ಎಂಚಲು ಪತ್ರಿಕೆ" ಎಂದುದಕ್ಕೆ ಯಾವುದೋ ಒಂದು ಪೇಪರ್ ಅವರ ಮೇಲೆ ಸೇಡು ತೀರಿಸಿದಂತೆ
೩. ಇಸ್ಮಯಿಲ್ ನೀಡಿದ ಬರದವನ್ನು ಓದಿದ ಮೇಲೆ( ಅದು ದಿಟವಿದೆ ಎಂದು ಅಂದುಕೊಂಡು ), ಅಮೂ ಅವರ ಮಾತನ್ನು ಬೇಕೆಂದೇ ತಿರುಚಿ, ತುಣುಕುಗಳಲ್ಲಿ ತೋರಿಸಿ ಗಲಿಬಿಲಿ ಎಬ್ಬಿಸಿದಂತೆ ಕಾಣುವುದು.
೪. ಈ ಸಂಗತಿಯಲ್ಲಿ ಬರೀ ಒಂದೇ ಒಂದು ಪೇಪರ್ ಹುರುಪಿಟ್ಟು ಪುಟಪುಟ ಬರೆದು ಹಾಕುತ್ತಿರುವುದು ಹಲವು ಗುಮಾನಿಗಳನ್ನು ಎಬ್ಬಿಸುತ್ತದೆ. controversyಅನ್ನು ಕ್ಯಾಷ್ ಮಾಡುವ ಕಲೆ!
೫. ಒಟ್ಟಿನಲ್ಲಿ ಅಮೂ ಅವರ ಮಾತು ತಪ್ಪಿದ್ದರೂ ಅದನ್ನು ಗೊಲ್ಲು ಮಾಡಿ, ಕೊಚ್ಚೆರಾಡಿಯಂತೆ ಎರಚಾಡಿರುವುದು ಕನ್ನಡದ ಕವಿಗಳು "ಕಚಡ ಕಚ್ಚಾಟದ ನಾಯಿಗಳಂತೆ" ಅಂದುಕೊಳ್ಳುವಂತೆ ಮಾಡುವುದು ಹಲವರಿಗೆ, ಅದೂ ಹೊರಗಿನವರೇ ಹೆಚ್ಚಿರು ಬೆಂಗಳೂರಲ್ಲಿ ಬೇರೆಯವರು ಇದನ್ನು ನೋಡಿ ಹುಸಿನಕ್ಕೇ ನಕ್ಕಿರುವರು. ಆದುದರಿಂದ ಇಂತಹ ಸಂಗತಿಗಳನ್ನು ಗೊಲ್ಲು ಮಾಡದೇ, ಅಲ್ಲಿಂದಲ್ಲಿಗೇ ಬಿಟ್ಟು ಬಿಡುವುದು ವಾಸಿ.
ನಮ್ಮ ಸಮಾಜದಲ್ಲಿ ತಮ್ತಮ್ಮ ಅನಿಸಿಕೆ ಹೇಳುವುದೇ ದೊಡ್ಡ ಕುತ್ತಾಗಿ ಹೋಗಿದೆ.
ಕೊಸರು:
ನನ್ನ ಮಾತಿಂದ ನಾನು ಅಮೂ ಅವರ ಕಡೆ, ಬೈರಪ್ಪನವರ ಇದುರು ಎಂದು ಬಗೆದರೆ, ಅದು ತಪ್ಪುತಿಳಿವಳಿಕೆ. ನಾನು ಅಮೂ ಅವರ "ಸಂಸ್ಕಾರ" ಒಂದನ್ನೇ ಓದಿಕೊಂಡಿದ್ದರು, ಅದನ್ನು ಮೆಚ್ಚಿಲ್ಲ. ನನ್ನ ಮೆಚ್ಚಿನ ಬರಹಗಾರ "ಗೃಹಭಂಗ", "ಪರ್ವ", "ಸಾರ್ಥ", "ದಾಟು", "ತಬ್ಬಲಿ ನೀನಾದೆ ಮಗನೆ" ಗಳ ಬೈರಪ್ಪನವರೇ ಹೊರತು ಅಮೂ ಅಲ್ಲ.!!
- ಮಾಯ್ಸ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
"ಪುಟ ಪುಟ ಬರೆಯುವದು" ಅಥವಾ "controversy cash ಮಾಡಿಕೊಳ್ಳುವದು" ಇವೆಲ್ಲಾ ಪೂರ್ವ ನಿರ್ಧಾರಿತ ನಡೆಗಳಿರಿಬಹುದು. ಆದರೆ ಹಾಗಾಗಲು ಮೂಲ ಕಾರಣ ಏನು? ಎಂದು ಕೂಡ ನಾವು ಯೋಚಿಸಬೇಕು. ಬಹುಷಃ ಕನ್ನಡ ಪತ್ರಿಕಾ ಜಗತ್ತು ಮತ್ತು ಸಾಹಿತ್ಯ ಲೋಕದ ಇತಿಹಾಸವನ್ನು ನೋಡಿದರೆ ಇಂತಹ ಹತ್ತಾರು ಉದಾಹರಣೆ ಸಿಗುತ್ತವೆ. ಕಳೆದ ದಶಕದಲ್ಲಿಯೇ ಅನೇಕ ಪ್ರಸಂಗಗಳು ಆಗಿ ಹೋಗಿವೆ, ಯಾರಾದರೂ ನುರಿತ ಪತ್ರಕರ್ತರ ಹತ್ತಿರ ಮಾತಿಗೆ ಕುಳಿತುಕೊಳ್ಳಿ, ಆಗ ಅನೇಕ ಆಶ್ಚರ್ಯಕರ ಸಂಗತಿಗಳು ಹೊರಬೀಳುತ್ತಿವೆ.
ಕೊನೆಯ ಪಕ್ಷ, ಈ ಘಟನೆಯಿಂದ ಕೆಲವರಾದರೂ ಪಾಠ ಕಲಿತರೆ ಓಳ್ಳೆಯದು.
ಕೊನೆಗೊಂದು ಗಾದೆ ಮಾತು : ಗಾಜಿನ ಮನೆಯಲ್ಲಿರುವವರು ಇನ್ನೊಬ್ಬರ ಮೇಲೆ ಕಲ್ಲೆಸೆಯಬಾರದು !
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಇಲ್ಲಿ ಗಾಜಿನ ಮನೆಯವರು, ಕಲ್ಲೆಸಿಸಿಕೊಂಡವರೂ ನಮ್ಮವರೇ ಎನ್ನುವುದು ಮರೆಯಬಾರದು. ನಮ್ಮ ನಮ್ಮೊಳಗೇ ಒಡಕು.!!
ಈ ಒಡೆಯೋ ಬುದ್ದಿ ಇರೋ ತನಕ ಉದ್ದಾರವಾಗಲ್ಲ.!! ಒಟ್ಟಿಗೆ ಬಾಳಬೇಕಾದಾಗ ಹಲವು ಮಾತುಗಳನ್ನು ಅಲ್ಲಿಂದಲ್ಲಿಗೇ ಬಿಡುವುದು ಲೇಸು. ಹೀಗೆ ನಮ್ಮ ಕನ್ನಡದ ಒಬ್ಬ ಹೆಸರುವಾಸಿ ಆಳನ್ನು( ಅದು ಬೈರಪ್ಪನೋ, ಅಮೂವೋ) ಕುರಿತು ರಂಪಾಟಮಾಡೋದು ಚೆನ್ನಿಲ್ಲ.!!
"ಪಾಠವನ್ನು ಕೆಲವರಲ್ಲ, ಎಲ್ಲರೂ ಕಲೀಬೇಕು. "
ಸಂಪದದಲ್ಲಿ ಜಗಳವಾದರೇ ಆಗಲಿ, ಆದರೆ ಹಿಂಗೆ ಒಂದು ಪೇಪರು ಇಂತ ಜಗಳಕ್ಕೆ ವೇದಿಕೆ ಮಾಡಿಕೊಡೋದು ಚನ್ನಾಗಿಲ್ಲ.
ಇಲ್ಲಿ ನಾವು ಬೈರಪ್ಪ ಮತ್ತು ಅನಂತಮೂರ್ತಿ ಇಬ್ಬರೂ ನಮ್ಮ ಕನ್ನಡದವರೇ. ಇಬ್ಬರ ಮಾನ-ಮಾರ್ಯದೆಗಳಿಂದ ಕನ್ನಡ-ಕನ್ನಡಿಗರ ಮಾನಮರ್ಯಾದೆಗೆ affect ಆಗುತ್ತೆ ಅಂದ ತುಸು ನಿಗಾ ಮಾಡಬೇಕು.
ಈಗೆ ಬೈರಪ್ಪನವರ ಕಡೆ ಒಂದು ಗುಂಪು, ಅಮೂ ಕಡೆ ಒಂದು ಗುಂಪು ಮಾಡಿ ತೀಯಾಡೋದು, ನಮ್ಮ ಕನ್ನಡದ ಕವಿತನಕ್ಕೆ ಮೆರುಗೇ?ಕಪ್ಟೇ?
ಹಿಂದೆ ಕಾರ್ನಾಡರು ಮತ್ತು ಭೈರಪ್ಪನವರ "ಪೇಪರ್ ವಾರ್" ಇಂದ ನುಕುಸಾನ್ ನಮ್ಮ ಕನ್ನಡಕ್ಕೆ ಆಗಿದ್ದು, ಅವರಿಬ್ಬರಿಗೂ ಅಲ್ಲ.!!!
ಕೊಸರು:!! ಕನ್ನಡಿಗರನ್ನು ಈಗೆ ಗುಂಪು ಗುಂಪುಗಾಗಿ ಒಡೆಯೋದರಿಂದ ನಮಗೇ ನಷ್ಟ!!
- ಮಾಯ್ಸ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಅವುದು...ಹೀಗೆ ಗುಲ್ಲೆಬ್ಬಿಸಿದರೆ ಕನ್ನಡಕ್ಕೆ ನಷ್ಟ... ಪತ್ರಿಕೆ ಕನ್ನಡಿಗರನ್ನು ಒಂದುಗೂಡಿಸುವ ಬದಲು ಒಡೆಯುವ ಕೆಲಸ ಮಾಡ್ತಾ ಇವೆ.. ಇದು ಒಳ್ಳೆ ಬೆಳವಣಿಗೆ ಅಲ್ಲ.
ಜೈ ಭೈರಪ್ಪ, ಜೈ ಅನಂತ ಮೂರ್ತಿ
ಸಿರಿಗನ್ನಡಂ ಗೆಲ್ಗೆ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಒಪ್ಪಿದೆ ನಿಮ್ಮ ಮಾತು, ನಾವು ನಾವೇ ಜಗಳಾಡಬಾರದು. ಆದರೆ...(ಈ ರೇ...ಅನ್ನೂದು ಭಾಳಾ ಕೆಟ್ಟ ನೋಡ್ರಿ..)..ನಮ್ಮ ಸಾಫ್ಟ್ ವೇರ್ terms ನಲ್ಲಿ ಹೇಳೋದಾದರೆ..ಈ ಜಗಳಕ್ಕೆ ಮೂಲವಾದ ತಪ್ಪಿಗೆ RCA ಮಾಡೋದು ಉತ್ತಮ. ಯಾವುನೋ ಒಬ್ಬ team mate..ಅತಿ ಕೆಟ್ತ code ಬರೆದು..ಎಲ್ಲಾ projectನ್ನ ಹಳ್ಳಾ ಹಿಡಿಸಿದ್ರ, ನಾವು ನಮ್ಮದೆ team mate ಮಾಡಿದ್ದಾನೆ ಬಿಡು ಅಂತ ಸುಮ್ಮನಿರುತ್ತೆವಾ? ಇಲ್ಲವೇ ಇಲ್ಲ ....RCA ಇರೋದೆ ತಪ್ಪಿನಿಂದ ಪಾಠ ಕಲಿಯೋಕೆ. ಇದನ್ನ ನಾನು ಪಾಠ ಕಲಿಯೋದು ಅಂದಿದ್ದು.
ಇದು ಹ್ಯಾಂಗಿದೆ ಅಂದ್ರ..ಮಗುವಿನ ಕುಂಡಿ ಚಿವುಟಿ ಆಮೇಲೆ ರಮಿಸಿದ ಹಾಗೆ ಇದೆ...ಅಲ್ಲಪ್ಪಾ ಮೊಟ್ಟ ಮೊದ್ಲ ಸುಮ್ಮನಿರೋ ಮಗುವನ್ನು ಚಿವುಟೋದ ಯಾಕ ಮಾಡಬೇಕು..ಅನ್ನೋದನ್ನ ವಿಚಾರಿಸಬೇಕಲ್ಲವೇ ನಾವು? ಸಮಾಧಾನ ಮಾಡೋದು ಅಮೇಲಿನ ಮಾತು..ಚಿವುಟೋತನಕ ಚಿವುಟಿ ..ಅಮೇಲೆ ಮಗು ಅತ್ರೆ, ಸುತ್ತ ಮುತ್ತಿನ ಮನೆಯವರು ನಮ್ಮ ಮಗು ಅಳಬುರುಕ ಅಂತಾ ತಿಳಿತಾರೆ ಅಂತ ಹೆದ್ರಿ ಸುಮ್ಮನಾಗಿಸೋದು ಯಾವ ಸೀಮೆ ನ್ಯಾಯ?
ಬೇಂದ್ರೆ ಮತ್ತು ಕುವೆಂಪು, ಬೇಂದ್ರೆ ಮತ್ತು ಕಾರಂತ, ಕುವೆಂಪು ಮತ್ತು ಇನ್ನೊಬ್ಬರು ಇತ್ಯಾದಿಗಳ ಮಧ್ಯೆ ಇರಲಾರದಂತಹ ಈ ಚಿವುಟಿ ಮಜಾ ನೋಡುವ ಕೆಟ್ಟ ಚಟ ಈಗೇಕೆ ಪ್ರಾರಂಭವಾಗಿದೆ? ಇದಕ್ಕ ಬದಲಾದ ಜಾಗತೀಕ ಸನ್ನಿವೇಶ ಕಾರಣವೇ? ಅಥವಾ ಸಾಹಿತಿಗಳು ಮಾತ್ರ ತುಂಬಾ ಬದಲಾಗಿದ್ದರೆಯೋ?
ಸ್ವಲ್ಪ ವಿಚಾರ ಮಾಡುವದು ಒಳ್ಳೆಯದು...ಜಗಳ ಜಗಳ ಬೇಡ ಬೇಡ ..ಅಂತಾ ಎಲ್ಲಾನೂ ಸುಮ್ಮನೆ ನುಂಗಿಕೊಂಡು ಬದುಕುವದು ಎಲ್ಲಿವರೆಗೆ ಸಾಧ್ಯ?
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಅಲ್ರೀ ಗುರು
ಇದು ಸೊಲ್ಪ ವಿಚಾರ ಮಾಡೋ ತರವಾ? ನೆನ್ನೆ ಮೊನ್ನೆ ಪೇಪರಗಳನ್ನ ನೋಡಿದ್ರೆ ಹೆದರಿಕೆ ಆಯ್ತದೆ.
ಒಬ್ನ ಮೇಲೇ ೪೦ ಜನ ಬರೆದವ್ರೆ.!!
ಇಲ್ಲಿ ಯಾವೊನು ಕೆಟ್ ಕೆಲಸ ಮಾಡಿಲ್ಲ.!! ಇದು ಸಾಪ್ಟವೇರ್ ಕೆಲಸದಂತೆ ಅಲ್ಲ!!
"ಅನಿಸಿಕೆಯನ್ನು ಬರೀಯೊಂದು ಅನಿಸಿಕೆ ಅಂತ ತಗೋಬೇಕು" ಅದನ್ನ ಬಿಟ್ಟು ಒಬ್ನ ಹಿಡಿದುಕೊಂಡು ಜಾಡ್ಸಕ್ಕೆ ಹೊಂಟಂಗೈತೆ.!!
ನಮ್ಗೊಳ್ ಬುದ್ದೀನೇ ಹಿಂಗಾ? ವಿಚಾರಕ್ಕಿಂತ ವ್ಯಕ್ತಿ ಮೇಲಾ?
ಯಾವಾಗ್ಲೂ ಅಷ್ಟೇ ಏನಾರ ಯಾರಾರ ವಿಚಾರ ಹೇಳಕ್ಕೆ ಹೊರಟ್ರೆ, ಅವರ ವಿಚಾರ ಬಿಟ್ ಹಾಕಿ, ಅವರ ಮಾತುಗಳಲ್ಲಿರುವ ತಪ್ಪುಗಳನ್ನು ಹಿಡಿದು ವ್ಯಕ್ತಿದೂಷಣೆಗೆ ಮುಂದಾಗೋದು.
ಇಲ್ಲಿ ಬೇಸರ ತಂದ ವಿಸಯ ಅಂದ್ರೆ, 'ಆವರಣ'ದ ಕುರಿತು ಮಾತು ಇಲ್ಚೇ ಇಲ್ಲ , ಕಮ್ಮಿ!! ಬರೀ ಅವನಿವನ್ನ ಹಂಗಂದ, ಇವನವನ್ನ ಹಂಗಂದ!!
- ಮಾಯ್ಸ !!
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಬಹುತೇಕ ನಿಮಗೆ ನನ್ನ ಪ್ರಶ್ನೆ ಅರ್ಥವಾಗ್ಲಿಲ್ಲ. ನೀವು ಹೇಳಿದ್ದನ್ನೇ ಪುನರುಚ್ಚರಿಸುತ್ತಿದ್ದಿರಿ ವಿನಃ ನನ್ನ ಪ್ರಶ್ನೆಗೆ ನೇರ ಉತ್ತರ ಕೊಡಲಿಲ್ಲ..ಚರ್ಚೆ ಬೇರೆ ದಿಕ್ಕಿಗೆ ಹೊರಡ್ತಾ ಇದೆ..ಹಿಂಗಾಗಿ ಇನ್ನೂ ಹಿಂಜೋದು ಸರಿಯಲ್ಲ ಅನಸ್ತದ..
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಈ ಪ್ರೆಶ್ನೆಯಾ?
ಸುಮ್ನೆ ಇರಕ್ಕೆ ಆಗಕ್ಕಿಲ್ಲ ಅಂದ್ರೆ...
ಕಿತ್ತಾಡೋರು ಕಿತ್ತಾಡ್ತಾನೇ ಇರಲಿ, ನಾವು ಕಿತ್ತಾಡ್ ಬ್ಯಾಡಿ ಅಂತ ಒಂದೆರಡ್ ಕಿತ ಹೇಳಿ ಆಮ್ಯಾಕ್ ಸುಮ್ಕಾಗ್ತೀವಿ, ಆಟೇ.. ತಿಳಿಕೊಳ್ಳದಿದ್ರೆ ಏನ್ ಮಾಡಕ್ಕೆ ಆಯ್ತದೆ!!
ಏನೇ ಆದ್ರು. ಒಡಕಲುಬುದ್ದಿ( ಒಡೆಯೋ ಬುದ್ದಿ ) ಒಳ್ಳೇದಲ್ಲ!!
ಇನ್ನೂ ಸಣ್ಪುಟ್ಟದಕ್ಕೆಲ್ಲ ಕಿತ್ತಾಟವಿಲ್ಲದೇ ಬದುಕೋದು ದಿಟವಾಗ್ಲೂ ಸಾದ್ಯವೇ ಇಲ್ಲವೇ?
ಇಲ್ಲಿ ಬರಿ "ಅನಂತ ಮೂರ್ತಿ....... " ಅಂತ ಎಷ್ಟು ಎಳೆಗಳು ಬಂದವೆ...
'ಆವರಣ'ದ ವಿಚಾರ ಮಾಯವಾಯ್ತು. ಈಗ ಬರೀ "ಅನಂತಮೂರ್ತಿ ತಪ್ಪು" ಅಷ್ಟೇ, ಅದಕ್ಕೇ ವಾದ ವಾದ ವಾದ.!!
- ಮಾಯ್ಸ !!
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಹೊಂಡದೇನು ಹೊಂಟೇ ಹೋಗೈತೆ.
ಅನಂತಮೂರ್ತಿಯವರು "ಆವರಣ"ದ ಬಗ್ಗೆ ಮಾತಾಡ್ತ ಕೊಸರಾಗಿ ಏನೋ ಸೇರಿಸಿವ್ರೆ. ಅವರ ಮಾತಿನ ತಿರುಳು "ಆವರಣ"ದ ಬಗ್ಗೆ ಇತ್ತಲ್ಲ.
ಆದರೆ ಮಂದಿ ತಿರುಳು ಬಿಟ್ಟು ಅವರ ಕೊಸರು ಮಾತನ್ನೇ ಹಿಡುದು ಜಗ್ಗಾಡ್ತಾವ್ರೆ! ಇನ್ನೂ ಇಲ್ಲ ಮಾತುಕತೆ ಹ್ಯಾಂಗೆ ಸರಿಯಾದ ದಿಕ್ಕಲ್ಲೈತೆ?
ಈ 'ಕೊಸರಿ'ಗೆ ಜಗ್ಗಾಟ ಸಾಕು, 'ತಿರುಳು' ಬಗ್ಗೆ ಮಾತಾಡಿ ಅಂತ ನಾವು ಹೇಳ್ತಾ ಇರೋದು.!!
- ಮಾಯ್ಸ !!
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಮಹೇಶ,
ನಿಮ್ಗ ಬಿಡಿಸಿ ಹೇಳಬೇಕಂದ್ರೆ.. ಮೊದಲು ವಿಚಾರವನ್ನು (ಅಂದ್ರೆ ಪುಸ್ತಕದ ವಿಷಯ ಬಿಟ್ಟು) ವ್ಯಕ್ತಿಗೆ ಕೈ ಹಾಕಿದ್ದು ಯಾರು? ಅನಂತಮೂರ್ತಿಯವರಾ? ಅಥವಾ ಓದುಗರಾ? ನೀವು ಇನ್ನೊಮ್ಮೆ ಇಸ್ಮಾಯಿಲ್ ಪೊಸ್ಟ್ ಮಾಡಿರುವ ಸಾರಾಂಶ ಓದಿ ನೋಡಿ, ಆಗ ಗೊತ್ತಾಗುತ್ತೆ, ಅನಂತಮೂರ್ತಿ ಕೇವಲ ವಿಚಾರದ ಮಾತಾಡಿದ್ರಾ ಅಥವಾ ಭೈರಪ್ಪ ಎನ್ನುವ ವ್ಯಕ್ತಿಗೆ ಕೈ ಹಾಕಿದ್ರಾ ಅಂತ. ಗೊತ್ತಾಗದಿದ್ರೆ ಹೇಳಿ..ನಾನು ಆ ಪ್ಯಾರಾನ್ ಕೋಟ್ ಮಾಡಬಲ್ಲೆ..
ಇಷ್ಟಾಗಿಯೂ ಕೂಡ "ಅನಿಸಿಕೆಯನ್ನು ಬರೀಯೊಂದು ಅನಿಸಿಕೆ ಅಂತ ತಗೋಬೇಕು" ಅಂತ ಉಪದೇಶ ಮಾಡಿದ್ರೆ, ನನ್ನದೊಂದು ಸಣ್ನ ಪ್ರಶ್ನೆ. ನಿಮಗೆ ನಾನು "ಮಹೇಶ ಅಂದ್ರೆ ಇಂದ್ರ, ಚಂದ್ರ, ದೇವೇಂದ್ರ, ಸುರಸುಂದರ, ಮಹಾತ್ಮ, ಮಹಾಪುರುಷ ಇತ್ಯಾದಿ ಇತ್ಯಾದಿ ಎಲ್ಲಾ ಹೇಳಿ..ಆದ್ರೆ ಮಹೇಶ ಯಾಕೋ ಸ್ವಲ್ಪ ನಾಲಾಯಕ್ (ಕ್ಷಮಿಸಿ ಈ ಶಬ್ದಕ್ಕೆ, ಚರ್ಚೆಗೆ ಸ್ಪಷ್ಟತೆ ಬರಲಿ ಎಂದು ಮಾಡಿದೆ) ಮಾತ್ರ ಇದ್ದಾರ" ಅಂದ್ರ ..ಅದು ಕೇವಲ ಜೈಗುರುಜಿ ಅನಿಸಿಕೆ, ಯಾಕೆ ಕಿತ್ತಾಡಬೇಕು, ನಾವು ನಾವೇ ಕಿತ್ತಾಡಿದ್ರೆ, ಸಂಪದ ಕಮ್ಯುನಿಟಿ ಹಾಳಾಗುತ್ತೆ ( ಕನ್ನಡದ ಬದಲು ಸಂಪದ ಹಾಕಿದಿನಿ ಅಷ್ಟೇ!) ಅಂತ ಹೇಳ್ತಿರಾ?
ಮತ್ತು ನನ್ನ ಮೊದಲಿನ ಪ್ರತಿಕ್ರಿಯೆ ಯಾವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲಾ ಅಂದ್ರ...
ಬೇಂದ್ರೆ, ಕುವೆಂಪು, ಕಾರಂತರ ಮಧ್ಯೆ ಆಗದೆ ಇದ್ದಂತಹ ಕಾಲು ಕೆರೆದು ಜಗಳ ಬರು ಹೊಲಸುತನ ಈಗ್ಯಾಕ ಸುರುವಾಯಿತು? ಮತ್ತು ಪ್ರತಿ ಬಾರಿ ಇಂತಹ ಜಗಳಕ್ಕೆ ಕಿಡಿ ಇಡುತ್ತಿರುವವರು ಯಾರು? ಸ್ವಲ್ಪ ಯೋಚಿಸಿ ನೋಡಿ....ಇಷ್ಟೆಲ್ಲಾ ಗೊತ್ತಿದ್ದು ಮತ್ತ ಮತ್ತ ಯಾಕ ಜಗಳ ಯಾಕ ಜಗಳ ಅಂತ ಪ್ರಶ್ನಿಸಿದ್ರ..ನನ್ನ ಉತ್ತರ ಬ್ಯಾರೇನ ಅದ..ಅದು ಈಗ ಬ್ಯಾಡ ಬಿಡ್ರಿ..
ಮತ್ತೊಂದು ಗಾದಿ ಮಾತು : "ಮಾಡಿದ್ದುಣ್ಣೋ ಮಹರಾಯಾ".
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಸಾರ್ ನಾನು ಈಗ ತಾನೆ ಅನ೦ತ ಮೂರ್ತಿಯವರ ಬಾಷಣದ ಪೂರ್ತ ದ್ವನಿ ಮುದ್ರಿಕೆ ಯನ್ನ ಆಲಿಸಿದೆ, ಆ ಬಾಷಣದಲ್ಲಿ ಆವರಣ ಕಾದ೦ಬರಿಯ ಬಗ್ಗೆ ಮಾತನಾಡಿರುವುದೇ ಕಡಿಮೆ, ಭಾಷಣ ಕೇಳಿದ ಮೇಲೆ ನನಗೆ ಒ೦ದು ರಾಜಕಾರಣಿ ಬಾಷಣ ಕೇಳಿದ ಅನುಬವವಾಯಿತು. ಅವರು ಎ೦ದಿನ೦ತೆ ಲೋಕಾರೂಡಿ ಮಾತನಾಡಲು ಮತ್ತು ಈ ಬಿ.ಜೆ.ಪಿ/ಬಜರ೦ಗಿ/ಬೈರಪ್ಪ ಗಳನ್ನ ಠೀಕಿಸಲು ಸಾಕಷ್ಟು ಸಮಯ ಉಪಯೋಗಿಸಿದ್ದಾರೆ.
ದ್ವನಿ ಮುದ್ರಿಕೆ ಬೇಕಾದರೆ thatskannada.comನಿ೦ದ mp3 file ದೊವ್ನ್ಲೊಅದ್ ಮಾಡಿಕೊಳ್ಳಿ.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಧನ್ಯವಾದ ಪ್ರಪಂಚ,
ಬರೀ ಇಸ್ಮಾಯಿಲ್ ಬರೆದ ಸಾರಾಂಶ ಓದಿದ್ದೆ, ಈಗ ಧ್ವನಿ ಮುದ್ರಿಕೆ ಕೇಳಿ ನೋಡ್ತಿನಿ..ಅಂದಾಂಗ ...ಸುಮ್ಮ ಸುಮ್ಮನೆ ತಮ್ಮ ಮನಸ್ಸಿಗಿ ಬಂದಂಗ ಎಡಿಟ್ ಮಾಡಿರುವಂತಹ ಪೇಪರು ಅಥವಾ ಸಾರಾಂಶ ಓದಿ ಅಭಿಪ್ರಾಯ ಹೇಳ್ಲಿಲ್ಲಾ ಅಂತ ಸಮಾಧಾನರೇ ಇರ್ತದ..
ಧ್ವನಿ ಮುದ್ರಿಕೆನೇ ಇರೋದ್ರಿಂದ ..ಇಲಾ ಅನಂತಮೂರ್ತಿ ಹಂಗಂದಿಲ್ಲಾ ..ಬರೇ ಹಿಂಗಷ್ಟೇ ಅಂದಾರ ..ಅಂತ ಹೇಳ್ಳಿಕ್ಕೆ ಹಾದಿನೂ ಇಲ್ಲಾ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಇದು ನನ್ನ ಕೊನೆಯ ಮಾತು!!
ಯಾರಾದರೂ ಆಗಲಿ!!! ಅದರ ಬಗ್ಗೆ ಮತ್ತೆ ಕಿತ್ತಾಟ ಬೇಡ!!!
ನನ್ನ ಒಟ್ಟುಮಾತು ಇಷ್ಟೇ
ನಮಗೆ ಇಬ್ಬರೂ ಬೇಕು, ಇವರು ಇಬ್ಬರಿಂದ ಕಚ್ಚಾಟ ಬೇಡ, ನಡೆಯುತ್ತಿದ್ರೆ ನಿಲ್ಲಬೇಕು!!!
ವಂದನೆಗಳು!!
- ಮಾಯ್ಸ !!
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನಿಮ್ಮ ಸಲಹೆಗಳಿಗೆ ನಾನು ಋಣಿ. ಜವಾಬ್ದಾರಿಯುತವಾದ ಚರ್ಚೆ ಯಾವಾಗಲೂ ಆರೋಗ್ಯಕರವಾದದ್ದು. ನಂಬಿಕೆಗಳನ್ನು ಪಕ್ಕಕ್ಕಿಟ್ಟು, ಅಭಿಮಾನದ ಪಾಶದಿಂದ ಹೊರಬಂದು ವಿಚಾರ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಸತ್ಯ.
ಅನಂತಮೂರ್ತಿಯವರು ನೇರವಾಗಿ ಭೈರಪ್ಪನವರನ್ನು ಸಾಹಿತಿಯೇ ಅಲ್ಲ ಎಂದು ಹೇಳಿರುವುದು, ಅವರಲ್ಲಿ ಕಾವ್ಯ ಎಂಬುದು ಏನೂ ಇಲ್ಲ ಎಂದು ಹೇಳಿರುವುದರಿಂದ (ಅವರ ಭಾಷಣದ ಪೂರ್ಣಪಾಠವನ್ನು ಓದಿದ್ದೇನೆ) ಅನಂತಮೂರ್ತಿಯವರ ಬಗ್ಗೆ ಮಾತು ಬರುವುದು ಸಾಮಾನ್ಯ. ಅವರು ಮಾತನಾಡಾಲೇ ಬಾರದೆ ಎಂದು ಪ್ರಶ್ನಿಸಿದ್ದೀರಿ, ಅವರು ಮಾತನಾಡಲು ಸಾಕಷ್ಟು ವೇದಿಕೆಯಿವೆ. ಅದೇ ಕಾರಣಕ್ಕಾಗಿ ಅವರೊಬ್ಬರು ಬುದ್ಧಿಜೀವಿ ಅನ್ನಿಸಿಕೊಂದಿದ್ದಾರೆ. ಅವರ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳಲು ಭಾರತ ಪಾಕಿಸ್ತಾನವೂ ಅಲ್ಲ, ಬಾಂಗ್ಲಾವೂ ಅಲ್ಲ, ಚೀನಾವಂತೂ ಮೊದಲೇ ಅಲ್ಲ.
ನಿಜವಾದ ಜಾತ್ಯಾತೀತತೆಯೆಡೆಗೆ ಸಾಗುವ ಹಾದಿಯಲ್ಲಿ ಮುಸ್ಲಿಂ ಓಲೈಕೆಯೂ ಅಡ್ಡಿಯಾಗುತ್ತದೆ ಅಲ್ಲವೆ? ಜಿನ್ನಾ ಭಾರತದಲ್ಲಿ ಬಂದು ಇರಲಿ ಮನೆ ಉಳಿಸಿ ಎಂದಂತೆ ಹಿಂದೂವೊಬ್ಬ ತನ್ನ ಲಾಹೋರಿನ ಮನೆಯನ್ನು ಬಿಟ್ಟುಕೊಡಿ ಎನ್ನಲಾದೀತೇ? ಹಿಂದು ಧರ್ಮ ತನ್ನನ್ನು ತಾನು ಟೀಕಿಸಿಕೊಳ್ಳುವ, ತಿದ್ದುವ, ವಿರೂಪಗೊಳಿಸುವ ಸ್ವಾತಂತ್ರ್ಯವನ್ನು ನೀಡಿದೆ. ಅದನ್ನು ಬಳಸಿಕೊಂಡು ಮಾತನಾಡಿ ವಿಚಾರಿಯಾಗುವುದು ಮುಖ್ಯವಲ್ಲ, ಹಿಂದೂ ಧರ್ಮದಲ್ಲಿ ಅವರು ಮಾನವೀಯತೆ, ಪ್ರಗತಿಶೀಲತೆಯನ್ನು ಬಯಸುವಂತೆ ಅನ್ಯ ಧರ್ಮಗಳಲ್ಲೂ ಅದನ್ನು ಕಾಣಲು ಬಯಸಬೇಕಲ್ಲವೇ?
ಅನಂತಮೂರ್ತಿಯವರೇ ಈ ಬಗೆಯ ಸೆಕ್ಯುಲರಿಸಂನ ಸಾಧಿಸಲು ಅಡ್ಡಿಯಾಗಬಾರದು ಎಂಬುದು ನನ್ನ ಹಾರೈಕೆ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಮುಸ್ಲಿಂ ಓಲೈಕೆ ಎಂಬ ಪದ ಮತ್ತೆ ಮತ್ತೆ ಬಳಕೆಯಾಗುತ್ತಿದೆ. ಯಾರು ಮುಸ್ಲಿಮರನ್ನು ಓಲೈಸಿದ್ದು? ಭಾರತದ ಯಾವ ಸರಕಾರವೂ ಅವರನ್ನು ಓಲೈಸಿದಂತೆ ಕಾಣಿಸಲಿಲ್ಲ. ಹಾಗಿದ್ದಿದ್ದರೆ ಅವರ ಜೀವನ ಮಟ್ಟ ಈಗಿರುವಂತೆ ಇರುತ್ತಿರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಇತ್ತೀಚೆಗೆ ಹೊರಬಿದ್ದ ರಾಜಿಂದರ್ ಸಾಚಾರ್ ಅವರ ವರದಿ ಓದಿ. ಈ ಕುರಿತ ವಿಶ್ಲೇಷಣೆಯೊಂದು ಫ್ರಂಟ್ ಲೈನ್ ನಲ್ಲಿ ಪ್ರಕಟವಾಗಿದೆ (http://www.hinduonnet.com/fline/fl2324/stories/20061215004700400.htm).
ಇಲ್ಲಿ ಹಲವರು ಮುಸ್ಲಿಮರನ್ನು ವಿರೋಧಿಸಲು ಮುಂದಿಡುತ್ತಿರುವ ಅದೇ ತರ್ಕವನ್ನು ಈ ದೇಶದ ದಲಿತರು ಅಥವಾ ಪಂಚಮರು ತಥಾಕಥಿತ ಹಿಂದೂಗಳಿಗೂ ಅನ್ವಯಿಸಿ ನೋಡ ತೊಡಗಿದರೆ?
'ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು' ಆಗುವುದು ಕೇವಲ ಮುಸ್ಲಿಮರನ್ನು ಟೀಕಿಸುವುದಕ್ಕಾಗಿ ಮಾತ್ರ. ನಾವು ಯಾವತ್ತೂ ನಮ್ಮ ದಲಿತ ಸೋದರರಿಗಾಗಿ ಒಂದಾಗಿದ್ದೇವೆಯೇ? ಪೇಜಾವರ ಮಠಾಧೀಶರು ದಲಿತರ ಕೇರಿಯಲ್ಲಿ ಒಂದು ಸುತ್ತು ಹೋಗಿ ಬಂದು ಅದನ್ನೇ ಕ್ರಾಂತಿಕಾರಕ ಅಂದುಕೊಳ್ಳುತ್ತಾರೆ. ಅವರ ಜತೆ ಕುಳಿತು ಊಟ ಮಾಡುವುದಕ್ಕೆ ಯಾವತ್ತೂ ಮುಂದಾಗುವುದಿಲ್ಲ. ಯಾರೋ ಕ್ರೈಸ್ತ ಮಿಷನರಿಗಳು ಹೋಗಿ ಈ ಕೆಲಸ ಮಾಡುತ್ತಾರೆ. ಕೊನೆಗೆ ಯಾರಾದರೂ ನಾಲ್ಕು ಮಂದಿ ಮತಾಂತರಗೊಂಡರೆ ಮತ್ತೆ ನಮ್ಮ 'ಒಂದಾಗುವಿಕೆ' ಎಚ್ಚರಗೊಳ್ಳುತ್ತದೆ. ಒಂದು ಕ್ಷಣ ನಾವ್ಯಾರಾದರೂ ದಲಿತರನ್ನೂ ನಮ್ಮಂತೆ ಎಂದು ಭಾವಿಸಿದ್ದೇವೆಯೇ?
ದಲಿತರಿಗೆ ನೀಡುವ ಮೀಸಲಾತಿ ನಮ್ಮ ಯಾರ ಅವಕಾಶವನ್ನೂ ಕಿತ್ತುಕೊಳ್ಳುವುದಿಲ್ಲ. ಆದರೆ ನಾವದನ್ನು ಎಷ್ಟು ಉಗ್ರವಾಗಿ ವಿರೋಧಿಸುತ್ತೇವೆಂದರೆ ನಾವು ಐಐಟಿಯಲ್ಲಿ ಅಮೆರಿಕಕ್ಕೆ ಹೋಗುವುದಕ್ಕೆ ಅದನ್ನೊಂದು ಸಮರ್ಥನೆಯಾಗಿ ಮಾಡಿಕೊಳ್ಳುತ್ತೇವೆ. ಅಮೆರಿಕದಲ್ಲಿಯೂ ನಾವು ಒಂದಾಗುತ್ತೇವೆ-ಏಕೆಂದರೆ ಮುಸ್ಲಿಮರನ್ನು ಬೈಯ್ಯಲು.
ಆವರಣದಲ್ಲಿ ಭೈರಪ್ಪನವರು ಮಾಡಿರುವುದೂ ಇದನ್ನೇ. ಮುಸ್ಲಿಂ ರಾಜರು ನಮ್ಮ ಸಂಸ್ಕೃತಿಯನ್ನು ಏನೇನೋ ಮಾಡಿದರು ಅನ್ನುತ್ತಾರೆ. ಈ ನಮ್ಮ ಸಂಸ್ಕೃತಿಯೇ ಅಲ್ಲವೇ ದಲಿತರನ್ನು ಮನೆಯ ಹೊರಗಿಟ್ಟದ್ದು? ಸತ್ಯಕ್ಕೆ ಅನೇಕ ಆಯಾಮಗಳಿರುತ್ತವೆ.
-ಯಾಮಿ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
@ Yamini
ನೆಹ್ರು ಮತ್ತು "ಸೆಕ್ಯುಲರಿಸ್ಟ್" ಇಡಿಯ ಭಾರತವನ್ನು ನೋಡಿದ್ದು ಪಾಶ್ಚಿಮಾತ್ಯ ದೃಷ್ಟಿಕೋನದ "ಸೆಕ್ಯುಲರಿಸಂ" ನಿಂದ. ಸೆಮಿತಿಕ್ ನಿಲುವುಗಳ ಮಧ್ಯೆ ತಯಾರಾದ ಅಚ್ಚನ್ನು ತಂದು ಈಗಾಗಲೆ 1000 ವರ್ಷಕ್ಕೋ ಹೆಚ್ಚು ವರ್ಷಗಳಿಂದ(ಎಷ್ಟೇ ಕ್ರೌರ್ಯವಿದ್ದರೂ) ಈ ನೆಲದ ಪೇಗಾನು ಗುನದಿಂದ ಸಹಾಬಾಳ್ವೆ ನೆಡೆಸುತ್ತಿದ್ದವರನ್ನ ಕನ್ಫ್ಯೂಸ್ ಮಾಡಿದ್ದು. ಧರ್ಮಗಳಲ್ಲಿರುವ ಆಚರಣೆಗಳನ್ನು ವಿವೇಚಿಸುವ ಅಧಿಕಾರವನ್ನು ಸಂವಿಧಾನತ್ಮಕವಾಗಿ ಪಡೆದ ನಮ್ಮ ಸರ್ಕಾರ ಹಿಂದೂಗಳ "ಪ್ರಾಣಿ ಬಲಿ", "ಸತಿ", "ವರದಕ್ಷಿಣೆ" ಗಳನ್ನ ನಿಷೇಧ ಮಾಡಿ ಮುಸ್ಲಿಮರ ಎಡಬಿಡಂಗಿ ನಿಲುವುಗಳಿಗೆ ಬೆಂಬಲ ಕೊಡುತ್ತಾ ಷಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ತೀರ್ಪನ್ನು ಮುಳುಗಿಸುವ ಕೆಲಸ ಮಾಡುತ್ತೆ. ಹೀಗಾದಾಗ ಪೇಗಾನಿನಲ್ಲಿ ಸೆಮೇತಿಕ್ ನಂಜು ಏರಿ ಸಾಮಾಜಿಕ ಕಲಹ ಶುರುವಾಗುತ್ತದೆ. ಹಿಂದೂ ಧರ್ಮದಲ್ಲಿ ಸುಧಾರಣೆಗಳಿಗೆ ಯಾವತ್ತೂ ಬರವಿಲ್ಲ (relatively)
ಎಸ್. ಎನ್ ಬಾಲಗಂಗಾಧರ ಅವರ ಈ ಲೇಖನ ಸಿಕ್ಕರೆ ಓದಿ (ಇದು ಆನ್ಲೈನ್ ನಲ್ಲಿ ಲಭ್ಯವಿಲ್ಲ) “Secular State as the Harbinger of Religious Conflict: Conceptual Issues in the Secularism-Hindutva Debate in India.”
ನಮ್ಮ ಎಡಪಂಥೀಯರನ್ನು "Intellectuals" ಅನ್ನೋದನ್ನು ನಾನು ವಿರೋಧಿಸುತ್ತೇನೆ. ಅವರು ಹೆಚ್ಚೆಂದರೆ ಅಕಾಡೆಮಿಕ್ ಆಗಿ ತಮ್ಮ ರಾಜಕೀಯ ನಿಲುವುಗಳನ್ನ ದತ್ತಾಂಶಗಳ ಮೂಲಕ ಸಮರ್ಥನೆ ಮಾಡಿಕೊಳ್ಳೋದನ್ನ ಕಲಿತಿರುವರು.
ಕ್ರೈಸ್ತ ಮಿಷನರಿಗಳ ಮತಾಂತರ, ಮೀಸಲಾತಿಯ ವಿಚಾರಗಳನ್ನ ಸಧ್ಯಕ್ಕೆ ಹೊರಗಿಡೋಣ. ಇವುಗಳನ್ನು ಮುಸ್ಲಿಮ್ ಓಲೈಕೆ ಅನ್ನದೇ ಇರೊಕ್ಕೆ ನಂಗೆ ಸಾಧ್ಯನೆ ಇಲ್ಲ
http://en.wikipedia.org/wiki/Shah_bano
http://en.wikipedia.org/wiki/Haj_subsidy
http://www.thehindu.com/2006/07/06/stories/2006070605770600.htm
http://www.business-standard.com/opinionanalysis/storypage.php?leftnm=4&...
http://economictimes.indiatimes.com/News/News_By_Industry/Finance__Insur...
- ಸಂದೀಪ ಐತಾಳ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಬಹಳ ಸತ್ವ ಪೂರ್ಣ ಬರಹ. secularism ಬಗ್ಗೆ ವಾದಕ್ಕಿಳಿದರೆ ಅದು ಕೊನೆಗೊಳ್ಳುವುದು ಕಷ್ಟ. ೫೦೦೦ ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ದರ್ಮದಲ್ಲಿ ಹಲವು ನ್ಯೂನತೆಗಳಿದ್ದವು ಮತ್ತು ಈಗಲೂ ಇವೆ. ಇವುಗಳನ್ನ ಹೋಗಲಾಡಿಸುವುದಕ್ಕೆ ಸಾಕಷ್ಟು ಮಹನೀಯರು ದುಡಿದಿದ್ದಾರೆ ಉದಾಹರಣೆಗೆ, ಬಸವೇಶ್ವರರು, ರಾಮಾನುಜಾಚಾರ್ಯರು,ಇನೂ ಅನೇಕರು ಹಿ೦ದೂಗಳಲ್ಲಿದ್ದ ಅಸ್ಪ್ರುಶ್ಯತೆ ಹೋಗಲಾಡಿಸಲು ಅ೦ದೇ ಹೋರಾಟ ನಡೆಸಿದರು ಮತ್ತು ಅಲ್ಪ ಪ್ರಮಾಣದ ಯಶಸ್ಸನ್ನೂ ಗಳಿಸಿದ್ದರು.
ನೀವು ಹೇಳಿದ ಹಾಗೆ ಹಿ೦ದೂ ದರ್ಮದಲ್ಲಿ ಸಾಕಾಷ್ಟು ಬದಲಾವಣೆಗಳಾಗಿವೆ, ಇನ್ನೂ ಸಾಕಷ್ಟು ಬದಲಾವಣೆ ಆಗಬೇಕಿದೆ.
ಇನ್ನು ಈ ಎಡಪ೦ಥೀಯರ ಜೊತೆ ವಾದಕ್ಕಿಳಿಯದೇ ಇರುವುದೇ ಲೇಸು. ಅವರು ಮತ್ತು ಅವರ ತತ್ವ ಸಿದ್ದಾ೦ತ ೧೯೪೭ ರ ಪೂರ್ವ ಬಾಗದಲ್ಲೇ ಇದೆ ಮತ್ತು ಇರುತ್ತದೆ. ಅವರು ಪ್ರಚಲಿತವನ್ನ consider ಮಾಡುವುದೇ ಇಲ್ಲ. ತತ್ವ ಸಿದ್ದಾ೦ತದ ಯೋಚನೆಯಲ್ಲಿ ಮುಳುಗಿರುವ ಅವರ ಕತ್ತಲೆಯ ಕೋಣೆಯ ಬಾಗಿಲು ತೆರೆದಾಗ ಮಾತ್ರ ವಾಸ್ತವದ ಅರಿವಾಗುತ್ತದೆ, ಅಲ್ಲಿಯ ವರೆಗೆ ಹಿ೦ದೂಗಳು ಇವರಿ೦ದ ಉಗಿಸಿಕೊಳ್ಳಲು ತಯಾರಿರಬೇಕು!.
ಹಾಗೆ ನನಗೆ thatskannada.com ನಲ್ಲಿ ಪ್ರೇಮ್ ಪ್ರಕಾಶ್ ಅವರು secularism ಮೇಲೆ ಬರೆದಿರುವ ಲೇಖನ ಬಹಳ ಇಡಿಸಿತು.
http://thatskannada.oneindia.in/sahitya/article/300507ura_bhyrappa_prem1....
ದನ್ಯವಾದಗಳು.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನರೇಂದ್ರರವರ ಅಭಿಪ್ರಾಯ ಸರಿ ಇದೆ. ಕೊನೆಯ ಭಾಗ ಬಿಟ್ಟು.
ಅನಂತಮೂರ್ತಿ ಭಾಷಣದ ಪೂರ್ತಿ ವಿವರ ಕೊಡದೆ,ತಮಗೆ ಬೇಕಾದ ಭಾಗಗಳನ್ನುಹೇಳಿ , ಜನರನ್ನು ಪ್ರಚೊದಿಸಿದ್ದು ಪತ್ರಿಕೆಗಳು.
ನಿಜಕ್ಕೂ ಪತ್ರಿಕೆಗಳಿಗಿಂತ ಉತ್ತಮ ಚರ್ಚೆ “ಸಂಪದ”ದಲ್ಲಿ ನಡೆಯುತ್ತಿದೆ.ನನಗಂತೂ ನಂಜಿನ ಬರಹಗಳು ಕಾಣಿಸಲಿಲ್ಲ. ಇಲ್ಲಿನ ಹವ್ಯಾಸೀ ಬರಹಗಾರರು( ಸಾಹಿತಿಗಳಂತೆ) ಕುಹಕ,ಚಿತಾವಣೆ..ಮಾಡುವಷ್ಟು ಮಟ್ಟಕ್ಕೆ ಮುಟ್ಟಿಲ್ಲ.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಸಂಪದದ ಸದಸ್ಯರ ಬಗ್ಗೆ ನನಗೆ ತುಂಬ ಗೌರವವಿದೆ. ಇಲ್ಲಿ ಏನನ್ನಾದರೂ ಬರೆಯುವ ಮೊದಲು ತುಂಬ ಎಚ್ಚರವಹಿಸುತ್ತೇನೆ. ಅನಗತ್ಯ ಮಾತುಗಳನ್ನು ಬರೆದಿಲ್ಲ. ಅದೆಲ್ಲ ಇಲ್ಲಿನ ಓದುಗರ ಬಗ್ಗೆ ನನಗಿರುವ ಗೌರವದಿಂದಲೇ. ಯಾರಿಗೂ ನೋವುಂಟು ಮಾಡಲೆಂದು ಹಾಗೆ ಬರೆಯಲಿಲ್ಲ. ಕೆಲವೊಮ್ಮೆ ಒಂದು ನಂಜಿನ ಮಾತು ಹಲವು ಅಂಥವೇ ಮಾತುಗಳನ್ನು ಹುಟ್ಟಿಸಬಹುದೆನ್ನುವ ಭಯ ಅಂಥ ಮಾತಿಗೆ ಕಾರಣ. ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನನ್ನು ನಿಮ್ಮವನೇ ಎಂದು ತಿಳಿದು ತಿದ್ದಿ.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನಿಮ್ಮ ಜವಾಬ್ದಾರಿಯುತ ಬರಹ ನನಗೆ ಆದರ್ಶ. ನಮಗೆ ವಿಚಾರಗಳ ತಿಕ್ಕಾಟ ಮುಖ್ಯವೇ ಹೊರತು ವ್ಯಕ್ತಿಗಳ ನಡುವಿನ ತಿಕ್ಕಾಟವಲ್ಲ. ನಿಮ್ಮ ಜವಾಬ್ದಾರಿಯುತ ಬರವಣಿಗೆಯಿಂದ ನಾನು ಕಲಿಯುವುದು ಬಹಳ ಇದೆ ಅನ್ನಿಸುತ್ತಿದೆ. ಧನ್ಯವಾದಗಳು...
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
1. ನನ್ನ ಬಸಿರಲ್ಲಿದ್ದನ್ನ ನೀವು ಹೇಳಿದ್ದೀರಿ ನರೇಂದ್ರ. ಆವರಣ ವಸ್ತುವಿನ ಬಗ್ಗೆ ಇಸ್ಮಾಯಿಲ್ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಹಾಕಿದ್ಡೀನಿ.
2. ಈ ವಿಜಯ ಕರ್ನಾಟಕದವರು ಶುರುವಿನಲ್ಲಿ ಕನ್ನಡದ ಬೇರೆ ಪತ್ರಿಕೆಗಳಲ್ಲಿದ್ದ ಎಡಪಂಥೀಯ ಒಲವಿನಿಂದ ಬಿಟ್ಟು ಶುರು ಮಾಡಿದ್ರೂ ಈಗೀಗ ಅದು TOI ತರಹ ಆಗ್ತಾ ಇದೆ.
3.ಬಲಪಂಥೀಯರ ಹತ್ತಿರ ಕಲ್ಲುಗಳ ಚೀಲ ಇರುವ ಹಾಗೇ ಎಡಪಂಥೀಯರ ಹತ್ತಿರ ಬೈಗುಳಗಳ ಚೀಲ ಇರುತ್ತೆ ಅಂತ ಎಲ್ಲೋ ಒದಿದ ನೆನಪು. ಈ ಬೈಗುಳಗಳ ಚೀಲದ ಬಳಕೇ ಹೆಚ್ಚಾಯ್ತೇನೋ ಅಂತ ಅನ್ಸುತ್ತೆ.
-ಸಂದೀಪ್ ಐತಾಳ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನಮಸ್ಕಾರ,
ಅನಂತ ಮೂರ್ತಿಯವರು ಮಾತನಾಡಬಾರದು ಎಂದು ಯಾರೂ ಹೇಳುತ್ತಿಲ್ಲ. ಏನು ಮಾತಾಡುತ್ತಾರೆ ಎಂಬುದು ಚರ್ಚೆಯ ವಿಷಯವಾಗಿರುವುದು. ಒಬ್ಬ ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗೆ ಕೆಲವು ಸಾಮಾಜಿಕ ಜವಾಬ್ದಾರಿಗಳಿರುತ್ತವೆ ಎಂಬುದನ್ನು ಅವರು ಮರೆಯಬಾರದು. ಉದಾ: "ಭೈರಪ್ಪನವರು ನನ್ನ ವಿರುದ್ಧ ವಿಮಾನದಲ್ಲಿ ಸಂಚರಿಸಿ ಪ್ರಚಾರ ಮಾಡಿದರು" (ನೋಡಿ: ಶ್ರೀ ಇಸ್ಮಾಯಿಲ್ ಅವರ ಬರಹ) ಎಂದೆಲ್ಲ ಹೇಳುವ ಮೂಲಕ ಅನಂತಮೂರ್ತಿಯವರು ತಮ್ಮ ಸಣ್ಣತನ ಮೆರೆದಿದ್ದಾರೆ ಅನ್ನಿಸುತ್ತದೆ.
ಇಷ್ಟಕ್ಕೂ ಭೈರಪ್ಪನವರು ಅಪೇಕ್ಷಿಸುವುದು ಹಿಂದೂ ಮುಸ್ಲಿಂ ದ್ವೇಷವಲ್ಲ. ಬದಲಾಗಿ ಇತಿಹಾಸವನ್ನು ವಸ್ತುನಿಷ್ಟವಾಗಿ ನೋಡುವ ದೄಷ್ಟಿ. ಹಿಂದೂ ಮುಸ್ಲಿಂ ಭ್ರಾತೃತ್ವದ ಮೇಲೆ ನಮ್ಮ ರಾಷ್ಟ್ರೀಯ ತಳಹದಿ ಗಟ್ಟಿಯಾಗ ಬೇಕು ಎಂಬುದನ್ನು ಅವರು "ಆವರಣ" ದಲ್ಲಿ ಪ್ರತಿಪಾದಿಸಿದ್ದಾರೆ. ಇದೇ ಮಾತನ್ನು ಅವರು ಗಿರೀಶ್ ಕಾರ್ನಾಡ್ ಹುಟ್ಟು ಹಾಕಿದ ಚರ್ಚೆಯ ಸಮಯದಲ್ಲೂ ಹೇಳಿದ್ದರು.
ನಮಗೆ ದಿಗಿಲಾಗಬೇಕಾಗಿರುವುದು "ಆವರಣ" ದ ಮಾರಾಟದ ಬಗ್ಗೆ ಅಲ್ಲ. ಸಾಹಿತ್ಯವನ್ನು ಕಲಿಯುವ ವಿಧಾನದಲ್ಲಿ ನಮಗೆ ನಾವೇ ಮಾಡಿಕೊಳ್ಳುವ ಆತ್ಮವಂಚನೆಯ ಬಗ್ಗೆ. ಇದೊಕ್ಕೊಂದು ಸಣ್ಣ ಉದಾಹರಣೆ: ನಾವು ೬ನೇ ತರಗತಿಯಲ್ಲಿ ಇರುವಾಗ "ಬೇಲೂರು ಹಳೇಬೀಡು" ಎಂಬ ಪಠ್ಯವಿತ್ತು. ಅದನ್ನು ತರಗತಿಗಳಲ್ಲಿ ಪಾಠ ಮಾಡಬಾರದು ಎಂಬ ಆದೇಶದ ಮೇರೆಗೆ ಅದು ಸಿಲೆಬಸ್ಸಿನಿಂದ ಹೊರಗಿಟ್ಟಿದ್ದರು. ಕಾರಣ, ಅದರಲ್ಲಿ ಇರುವ ವಿಷಯಗಳು ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತವೆ ಎಂದು!!!.
ಧನ್ಯವಾದ,
ಕೇಶವ ಮುರಳಿ
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನಮಸ್ಕಾರ,
ನಿಮ್ಮ ಅನಿಸಿಕೆ ಬಹಳ ಚೆನ್ನಾಗಿದೆ. ಹಿ೦ದೂಗಳು ಯಾರೂ ಬೈರಪ್ಪನವರ ಕಾದ೦ಬರಿ ಓದಿಕೊ೦ಡು, ಚರಿತ್ರೆಯಲ್ಲಿ ನಮಗೆ ಅನ್ಯಾಯವಾಗಿದೆಯ೦ದು, ಆಯುದ ಇಡಿದು ಜಿಹಾದಿಗಳ ತರಹ ಹೋರಾಡಲು ಹೋಗುವುದಿಲ್ಲ. 'ಆವರಣ' ಒ೦ದು ಕಾದ೦ಬರಿಯಷ್ಟೆ, ಚರಿತ್ರೆಯ೦ದು ಯಾರೂ ಹೇಳುತ್ತಿಲ್ಲ, ಈ ಕಾದ೦ಬರಿ ಓದಿ ಹಿ೦ದೂಗಳ ಮನಸ್ಸು ಕೆಡುತ್ತದೆ ಎ೦ದಿದ್ದರೆ ಅದು ತಪ್ಪು. ಹಾಗೇನಾದರು ಹಿ೦ದುಗಳು ಬಾವನಾತ್ಮಕ ಜನರಾಗಿದ್ದಿದ್ದರೆ, ಹಾಳು ಹ೦ಪಿಯನ್ನ ನೋಡಿದ ಪ್ರತಿಯೊಬ್ಬ ಹಿ೦ದೂ ಸಿಡಿದೇಳುತ್ತಿದ್ದ. ಆದರೆ ಹಿ೦ದೂಗಳು ಹಾಗಲ್ಲ. ಇದನ್ನ ನಮ್ಮ ಎಡಪ೦ತೀಯರು ಮನವರಿತರೆ ಎಲ್ಲರಿಗೂ ಒಳ್ಳೆಯದು.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನಿಜಕ್ಕೂ ನಿಮ್ಮ ಆಶಯದಂತೆ ವಾಸ್ತವ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಅನಿಸಿತು ಅಷ್ಟೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
"ಭಾರತದಲ್ಲಿ ಇತ್ತೀಚೆಗೆ ಮುಸ್ಲಿಮರೇ ಭಗ್ನಗೊಳಿಸಿದ ಯಾವುದಾದರೂ ಒಂದು ದೇವಸ್ಥಾನದ ಪ್ರಕರಣವನ್ನು ಉಲ್ಲೇಖಿಸಲು ಸಾಧ್ಯವೆ? "
ಉತ್ತರ : ಪಾಪ ಹಂಪೆಯ ಕರುಣಾಜನಕ ಕಥೆಯನ್ನು ಕೇಳುವವರು ಯಾರು ಇಲ್ಲವೇ?
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಹಂಪೆಯ ಬಗ್ಗೆ ಗೌರವವಿಲ್ಲದ, ಅದರ ಇಂದಿನ ಸ್ಥಿತಿಗೆ ಮರುಗದ ಕನ್ನಡಿಗ ಇಲ್ಲ. ಆದರೆ ವಿಜಯನಗರ ಸಾಮ್ರಾಜ್ಯದ ಪತನ 1565ರ ತಾಳೀಕೋಟೆ ಕದನದೊಂದಿಗೇ ತಳುಕುಹಾಕಿಕೊಂಡಿದೆ, ಅಲ್ಲವೆ? ಆವರಣದಲ್ಲೂ ಹಂಪೆಯ ಉಲ್ಲೇಖವಿದೆ ಅಲ್ಲವೆ? ಅದು ಇತಿಹಾಸ. ನಾನು ಆನಂತರದ ದಿನಗಳಲ್ಲಿ, ಇವತ್ತಿನ ವರೆಗೆ, ಆ ಇತಿಹಾಸದ ಪುನರಾವರ್ತನೆಯಾದ ಪುರಾವೆಗಳ ಬಗ್ಗೆ ಯಾರಿಗಾದರೂ ತಿಳಿದಿದ್ದರೆ ಅದನ್ನು ಉಲ್ಲೇಖಿಸಿ ಎಂದಿದ್ದೆ.
ಬಾಬರ್, ಔರಂಗಜೇಬ್, ಟಿಪ್ಪೂ ಬಗ್ಗೆ ಬಿಡಿ. ರಾಜಾಧಿರಾಜರ ದಿನಗಳು ಮುಗಿದು ಹೋದವು. ಇವತ್ತು ನಮ್ಮ ನಿಮ್ಮ ಊರು ಕೇರಿಗಳಲ್ಲಿ ಇರುವ ಸಾಬರು ಈ ರಾಜರ ತಳಿಗಳೇ, ಅವರೂ ನಮ್ಮ ದೇವಸ್ಥಾನವನ್ನು ಒಡೆದು ನಾಶ ಮಾಡುತ್ತಾರೆ ಎನ್ನುವ ಮನೋಭಾವ ಇದೆಯಲ್ಲ, ಅದು ಅರ್ಥವಾಗುವುದಿಲ್ಲ. ಭೈರಪ್ಪನವರ ಆವರಣ ಕಾದಂಬರಿಯಲ್ಲಿ ಗಾಂಧೀವಾದಿಯೂ ಮುಸ್ಲಿಂ ವಿರೋಧಿಯೂ ಏಕಕಾಲದಲ್ಲಿ ಆಗಿರುವ ನರಸಿಂಹಪ್ಪ ಹೇಳುವ ಮಾತುಗಳನ್ನು ಗಮನಿಸಿ:
"ನೀನೊಬ್ಬಳು ಏನು ಮಾಡಿಕೊಂಡೆ ಅನ್ನೂದೊಂದೇ ಅಲ್ಲ. ನಿನ್ನ ಹೊಟ್ಟೇಲಿ ಹುಟ್ಟುವ ಮಗುವೋ, ಅದರ ಮಗುವೋ, ಯಾವುದೋ ಒಂದು ತಲೆಮಾರಿನ ಮಗುವು ನಮ್ಮ ದೇವಸ್ಥಾನವನ್ನ ಒಡೆದು ನಾಶ ಮಾಡುತ್ತೆ. ಅದರ ಪಾಪ ನಿನಗೆ ತಟ್ಟುತ್ತೆ. ಅರ್ಥ ಮಾಡಿಕೊ ಮಗಳೆ."
ಔರಂಗಜೇಬ(1658-1707), ಬಾಬರ್(1526-30), ಟಿಪ್ಪೂ(1782-99), ಬಹಮನಿ ಸುಲ್ತಾನ(1347-1527)ರ ಮಕ್ಕಳ ಮಕ್ಕಳ ಮಕ್ಕಳ ಕಾಲ ಇದು. ದಯವಿಟ್ಟು ತಮ್ಮ ವಾದವನ್ನು ವರ್ತಮಾನಕ್ಕೆ ರಿಲೇಟ್ ಮಾಡಿ, ಯಾಕೆಂದರೆ ಸದ್ಯ ಚರ್ಚೆ ಇರುವುದು ಭೈರಪ್ಪನವರ ಕಾದಂಬರಿ ಆವರಣದ ಧೋರಣೆ ಏನಿದೆ ಅದರ ಸಮಕಾಲೀನ ಮಹತ್ವದ ಬಗ್ಗೆ ಅಂತ ಭಾವಿಸಿದ್ದೇನೆ.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಮಳ್ಳಪ್ಪಗಳಿರಾ, ಏನ್ ಹಿಂದು-ಮುಸ್ಲಿಮ್ ಅಂತ ಜಗಳಾಡ್ತೀರಿ, ನಮ್ ಊರುಗಳ ಕಡೆ ಬಂದ್ ನೋಡ್ರಿ. ಊರ್ ಬಸವಣ್ಣನ್ ಜಾತ್ರ್ಯಾಗ್ ಮುಸ್ಲಿಮ್ರು ಎಟ್ ಚೆನ್ನಾಗ್ ಪಾಲ್ ಗೊಳ್ತಾರೋ, ಅಟ್s ಚೆನ್ನಾಗ್ ಹಿಂದು ಮಂದಿ ಅವರ ದರ್ಗಾ ಜಾತ್ರಿ ಮಾಡ್ತಾರ್. ರಮಜಾನ್ ಇದ್ದಾಗ ಮುಸ್ಲಿಮರು ರಾತ್ರಿ speaker ಹಾಕ್ತಾರ, ನಮಗ್ ತೊಂದ್ರಿ ಆತು ಅಂತ್ ನಮ್ ಮಂದಿ ತಗಾದಿ ಯಾವತ್ತೂ ತಗದಿಲ್ಲ. ಒಬ್ಬರಕೊಬ್ರು ಹೊಂದ್ಕೊಂಡ್ ಇರು ಮಂದಿ ಮನಸ್ ಯಾಕ್ ಕೆಡಸ್ತಿರಿ? ಮಂದಿನ್ ಮಳ್(ಮರುಳ) ಅಂತ ತಿಳಿಬ್ಯಾಡ್ರಿ.
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಸಂಗನ ಗೌಡ್ರೇ,
ನಮ್ ಊರ್ನಾಗೂ ಇದು ವರ್ಕೂ ಒಂದ ದಪವೂ ಹಿಂದು-ಮುಸಲಿಮ ಗಲಾಟೀ ನಡೇದೇ ಇಲ್ಲ!! ಆ ಬಾಬರೀ ಮಸೀದಿ ಕೆಡುವುದಾಗಲೂನೂವ.
ಯಾಕೆ ಗೊತ್ತ? ನಮ್ಮೂರ್ನಾಗೆ ರೈತ್ರು, ಗೊಲ್ರು ಜಾಸ್ತಿ ಅವ್ರೆ, ಅವ್ರೆ ಮಾಡಕ್ಕೆ ನಂಗಿಂತ ಚಾಸ್ತಿ ಕ್ಯಾಮೆ ಇರ್ತೈತೆ
ನಮ್ಗೆ ಓದೀರೋರು ಅನ್ಸಕೊಂಡವ್ರೆ ಏನೋ ಒಂದು ನವೆ. ಸುಮ್ಕೆ ಇರಕ್ಕೆ ಆಗಕ್ಕಿಲ್ಲ!!
- ಮಾಯ್ಸ !!
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಮಹೇಶ ಮತ್ತು ಗೌಡ್ರ,
ನಾನು ಸೈತ ಹಳ್ಯಾಗೇ ಹುಟ್ಟಿ ಬೆಳದಂವ ಇದ್ದೀನಿ. ನಿಮ್ಹಂಗ ನಮ್ಮ ಹಳ್ಯಾಗ ಸೈತ ರಮಜಾನ್ ಡೋಲಿ ಏಳಬೇಕಾದ್ರ ನಾವೆಲ್ಲಾ ಊದ ಹಾಕ್ಲಿಕ್ಕೆ ಹೋಗತ್ತಿದ್ವಿ. ಆಮ್ಯಾಲೇ ನಮ್ಮ ಊರಾಗ ಆಲಾಬದಾಗ..ಹೆಜ್ಜಿಮ್ಯಾಳ, ಲೇಝಿಮ್ ಎಲ್ಲಾ ಆಡವ್ರು ನಾವೇ..ಈಗ ಸೈತ ನಂಗ ಹುಸೇನ-ಹಸೇನಿ ಕಥಿ, ಕರ್ಬಾಲಾದ ಕಥಿ ಎಲ್ಲಾ ನೆನಪವ..ಹಂಗಂತ ಇತಿಹಾಸ, ವರ್ತಮಾನ ಎಲ್ಲಾ ಮರ್ತು ಕುಣಿದು ಕುಪ್ಪಳಿಸಿ ಪಿಕನಿಕ್ ಮಾಡ್ಬೇಕೇನು?
ಆದ್ರ ನಮ್ಮ ಹಳ್ಳಿಯಂಗ ದೇಶದಾಗ ಎಲ್ಲಾ ಕಡಿ ಇಲ್ಲಾ..ಸ್ವಲ್ಪ ಬ್ಯಾರೇ ಬ್ಯಾರೇ ಭಾಗದ್ದು ವಿಚಾರ ಮಾಡ್ರಿ..
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಅನಂತಮೂರ್ತಿಯವರ ಮಾತುಗಳ ಆಳದಲ್ಲಿ ಗಾಂಧಿಯಿದ್ದಾರೆ (ಗಾಂಧಿವಾದವಲ್ಲ) ಎಂಬುದನ್ನ ಅರ್ಥ ಮಾಡಿಕೊಳ್ಳದಿದ್ದರೆ ಅವರ ಮಾತು ನಮಗೆ ಅರ್ಥವಾಗುವುದಿಲ್ಲ. ಗಾಂಧಿಯವರ ಆಳದಲ್ಲಿದ್ದದ್ದು ನಿಜವಾದ ಅರ್ಥದಲ್ಲಿ ಭಾರತೀಯತೆ; ಸಂಸ್ಕೃತಿ-ಸಹಿಷ್ಣುತೆ ಸೇರಿದಂತೆ.
ಬೈರಪ್ಪನವರನ್ನು ಗೌರವಿಸುತ್ತಲೇ ಅನಂತಮೂರ್ತಿಯವರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಲು ಸಾಧ್ಯವಿದೆ. ಆದರೆ ಸಂಯುಕ್ತ ಕರ್ನಾಟಕದಂತಹ ಪತ್ರಿಕೆ ತನ್ನ ದಶಕಗಳ ದ್ವೇಶ ತೀರಿಸಿಕೊಳ್ಳುವಂತೆ ಬರೆದರೆ, ಅದಕ್ಕೆ ಸಾಹಿತಿಗಳೆನ್ನಿಸಿಕೊಂಡವರು ಅವಸರದ ಪ್ರತಿಕ್ರಿಯೆ ನೀಡಿದರೆ ಅನಂತಮೂರ್ತಿಯವರಂತಹ ಚಿಂತಕರ ಮಾತುಗಳು ಕೆಸರೆರಚಾಟದಲ್ಲಿ ಕಳೆದು ಹೋಗುತ್ತವೆ.
ನೋವಾಗುತ್ತದೆ...
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಮಾತನಾಡಬಾರದು ಅಂತ ಯಾರು ಹೇಳೂದಿಲ್ಲ ಮತ್ತು ಹೇಳ್ಲಿಕ್ಕೆ ಶಕ್ಯನೂ ಇಲ್ಲಾ..ಯಾಕಂದ್ರ ನಮ್ಮದು ಪ್ರಜಾರಾಜ್ಯ ನೋಡ್ರಿ..ಅದೇ ಫ್ಯಾಸಿಸ್ಟ್ ಆಡಳಿತ ಇದ್ರ ಹಂಗನಬಹುದಿತ್ತೇನೋ?
ಇಷ್ಟೆಲ್ಲಾ ಒಂದ ಮಾತು ನೆನಪಿರಲಿ. ದೇವರು ನನಗ ಬಾಯಿ ಕೊಟ್ಟಾನ, ದೇಶದ ಸಂವಿಧಾನ ಮಾತನಾಡು ಹಕ್ಕ ಕೊಟ್ಟದ, ನಂಗ ಅಭಿವ್ಯಕ್ತಿ ಸ್ವಾತಂತ್ಯ ಅದ ಅಂಥ್ಹೇಳಿ ನಾನು ಗಾಂಧಿ ಬಜಾರನಾಗ ಕುಮಾರಸ್ವಾಮಿ ಹಂಗಿದ್ದಾನ, ಹಿಂಗಿದ್ದಾನ, ಅವನಿಗೆ ಅದು ಬರುದಿಲ್ಲಾ, ಇದು ಬರುದಿಲ್ಲಾ, ಅಂವ ಬರೇ ಇಷ್ಟೆ, ಅಷ್ಟೇ..ಅಂತಲ್ಲಾ ಮಾತಾಡಿದ್ರ ಏನಾಗ್ತದ? ಒಂದು ಪೋಲಿಸರು ಒದ್ದು ಒಣಾಕತಾರ ಇಲ್ಲಾಂದ್ರ ತಲಿ ಕೆಟ್ತದ ಅಂತ ಹೇಳಿ ಒಯ್ದು ನಿಮ್ಹಾನ್ಸ್ ನಾಗ ಹಾಕ್ತಾರ...ಮತ್ತ ಅದು ಕರೆಕ್ಟೂ ಕೂಡ..
ಇದು ತಪ್ಪು ಅಂತ ವಾದ ಮಾಡ್ತೀರಾ?
ಗೊತ್ತಾಯ್ತಲ್ಲ ..ಯಾವುದು ಸ್ವಾತಂತ್ರ್ಯ ಮತ್ತು ಯಾವುದು ಸ್ವೇಚ್ಛಾಚಾರ ಅಂತ !
"ಸ್ವೈರತೆಗೂ ಸ್ವಾತಂತ್ರ್ಯಕೂ ಇಹುದು ಅಜಗಜಾಂತರ" - ಅಂಬಿಕಾತನಯದತ್ತ (ಬೇಂದ್ರೆ ಮಾಸ್ತರ)