ಹನ್ನೆರಡು ಹುಣ್ಣಿಮೆಗಳು: ದಯವಿಟ್ಟು ವಿವರ ತಿಳಿಸಿ.
ಕನ್ನಡದಲ್ಲಿ ವರ್ಷದ ಪ್ರತಿಯೊಂದು ಹುಣ್ಣಿಮೆಗೂ ಬೇರೆ ಬೇರೆ ಹೆಸರುಗಳಿವೆ. ಈ ಹೆಸರುಗಳು ಕನ್ನಡದ ಮನಸ್ಸು ಹುಣ್ಣಿಮೆಯನ್ನು ಯಾವ ಬಗೆಯ ಶ್ರೀಮಂತಿಕೆಯಲ್ಲಿ ಗ್ರಹಿಸಿಕೊಂಡಿದೆ ಅನ್ನುವುದನ್ನೂ ಸೂಚಿಸುವಂತಿದೆ.
ಜನವರಿ-ಬನದ ಹುಣ್ಣಿಮೆ
ಫೆಬ್ರವರಿ-ಭಾರತ ಹುಣ್ಣಿಮೆ
ಮಾರ್ಚ್-ಹೋಳಿ ಹುಣ್ಣಿಮೆ
ಏಪ್ರಿಲ್-ದವನದ ಹುಣ್ಣಿಮೆ
ಮೇ-ಆಗಿ ಹುಣ್ಣಿಮೆ ಮತ್ತು (ಅಧಿಕ) ಕಾರಹುಣ್ಣಿಮೆ
ಜೂನ್- ಕಾರ ಹುಣ್ಣಿಮೆ
ಜುಲೈ-ಕಡ್ಲಿ ಕಡುಬು ಹುಣ್ಣಿಮೆ [ಗುರುಪೂರ್ಣಿಮಾ]
ಆಗಸ್ಟ್-ನೂಲ ಹುಣ್ಣಿಮೆ
ಸೆಪ್ಟೆಂಬರ್-ಅನಂತ ಹುಣ್ಣಿಮೆ
ಅಕ್ಟೋಬರ್-ಸೀಗೆ ಹುಣ್ಣಿಮೆ
ನವೆಂಬರ್-ಗೌರಿ ಹುಣ್ಣಿಮೆ
ಡಿಸೆಂಬರ್-ಹೊಸ್ತಿಲ ಹುಣ್ಣಿಮೆ
ಕ್ಯಾಲೆಂಡರ್ ನೋಡಿ ದಿನಚರಿ ನಡೆಸುತ್ತಾ ನಾವು ನಿಸರ್ಗದ ಸಂಬಂಧ ಕಳಕೊಂಡಿರುವುದರಿಂದ ಈ ಹುಣ್ಣಿಮೆ ಹೆಸರುಗಳೂ ಮರವೆಗೆ ಸಂದಿವೆ. ನನಗೆ ತಿಳಿದಂತೆ ಉತ್ತರ ಕರ್ನಾಟಕದಲ್ಲಿ ಪ್ರತಿ ಹುಣ್ಣಿಮೆಗೂ ಒಂದೊಂದು ವಿಶಿಷ್ಟ ಆಚರಣೆಯೂ ಇದೆ. ಆದರೆ ಅವೆಲ್ಲ ತಿಳಿದಿಲ್ಲ. ನಮ್ಮಂಥ “ತಿಳಿದವರು” ಅವನ್ನೆಲ್ಲ ಕಳೆದುಕೊಂಡಿದ್ದೇವೆ. ಕೆಲವು ಹುಣ್ಣಿಮೆಗಳ ಹೆಸರು ಅರ್ಥ ಪೂರ್ಣ. ಉದಾಹರಣೆಗೆ ಜೂನ್ ತಿಂಗಳ ಮಳೆಕಾಲ, ಕಾರ್ಗಾಲದ್ದು ಕಾರ ಹುಣ್ಣಿಮೆ ಎಂದು ತಿಳಿಯುತ್ತದೆ. ಆದರೆ ಬನದ ಹುಣ್ಣಿಮೆ, ಸೀಗೆ ಹುಣ್ಣಿಮೆ, ನೂಲ ಹುಣ್ಣಿಮೆ ಇವೆಲ್ಲ ಯಾಕೆ ಏನು ಮರೆತಿದ್ದೇವೆ. ಅಥವಾ ವರ್ಷದ ಒಂದೊಂದು ತಿಂಗಳಲ್ಲೂ ಬರುವ ಹುಣ್ಣಿಮೆಗಳ ಬೆಳಕಿನ ವ್ಯತ್ಯಾಸವನ್ನೂ ಇವು ಸೂಚಿಸುತ್ತವೆಯೋ ಏನೋ! ಪ್ರಾದೇಶಿಕವಾಗಿ ಈ ಹುಣ್ಣಿಮೆಗಳಿಗೆ ಬೇರೆ ಬೇರೆ ಹೆಸರುಗಳೂ ಇದ್ದಾವು. ಗೊತ್ತಿರುವವರು ದಯವಿಟ್ಟು ತಿಳಿಸಿ. ಹಾಗೆಯೇ ನಿಮ್ಮ ನೆನಪಿನಲ್ಲಿ ಇರುವ ಆಯಾ ಹುಣ್ಣಿಮೆ ಸಂಬಂಧದದ ಆಚರಣೆಗಳನ್ನೂ. ಹುಣ್ಣಿಮೆಗಳು ಕಳೆದುಹೋಗದಂತೆ ನೆನಪು ಮಾಡಿಕೊಳ್ಳೋಣ, ಆಗದೇ?

- olnswamy ರವರ ಬ್ಲಾಗ್
- Login or register to post comments
- 563 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಪ್ರತಿಕ್ರಿಯೆ: ಹನ್ನೆರಡು ಹುಣ್ಣಿಮೆಗಳು: ದಯವಿಟ್ಟು ವಿವರ ತಿಳಿಸಿ.
ನಮ್ಮ ಕಡೆ ನೂಲು ಹುಣ್ಣಿಮೆ ಅಂದರೆ "ಉಪಾಕರ್ಮದ ಹಬ್ಬ". ಅವತ್ತು "ರಕ್ಷಾಬಂಧನದ ಹಬ್ಬ" ಕೂಡ. ಆ ದಿನ ಬ್ರಾಹ್ಮಣರು "ಜನಿವಾರ" (ನೂಲು) ಹಾಕಿಕೊಳ್ಳೋದ್ರಿಂದ ಮತ್ತು ಸೋದರಿಯರು ರಾಖಿ (ನೂಲು) ಕಟ್ಟುವುದರಿಂದ "ನೂಲು ಹುಣ್ಣಿಮೆ" ಅಂತ ಕರೆಯೋದು ವಾಡಿಕೆಯೇನೋ.
ಅನಂತನ ವ್ರತ ಚತುರ್ದಶಿ ದಿನ ಬರುತ್ತದೆ. ಬಹುಶಃ (ನನಗೆ ಖಚಿತವಾಗಿ ತಿಳಿದಿಲ್ಲ) ಆ ವ್ರತದ ಮಾರನೇ ದಿನ ಹುಣ್ಣಿಮೆ ಬರೋದ್ರಿಂದ ಆ ಹುಣ್ಣಿಮೆಯನ್ನು "ಅನಂತನ ಹುಣ್ಣಿಮೆ" ಅಂತ ಕರೆದಿರಬಹುದು.
ಆಶ್ಚರ್ಯ ಆಗುತ್ತಿದೆ; ಬಾಲ್ಯದಲ್ಲಿ ನನಗೆ ಬಾಯಿಪಾಠವಾಗಿದ್ದ ವಿವರ ಎಷ್ಟು ಬೇಗ ಮರೆತೇ ಹೋಗಿದೆಯಲ್ಲ ಅಂತ! ನಮ್ಮ ಕಡೆ ಮೇಲಿನ ಹನ್ನೆರಡರಲ್ಲಿ ಅಸ್ಪಷ್ಟವಾಗಿ ನೆನಪಿರೋ ಹಾಗೆ "ಬನದ ಹುಣ್ಣಿಮೆ ಮತ್ತು ಸೀಗೆ ಹುಣ್ಣಿಮೆ" ಸಹ ಬಳಕೆಯಲ್ಲಿದ್ದವು.
ಅಂತರ್ಜಾಲದಲ್ಲಿ ಹುಡುಕಿದಾಗ "ಬನದ ಹುಣ್ಣಿಮೆ"ಯ ಬಗ್ಗೆ ಎರಡು ಸಾಲು ಸಿಕ್ಕಿತು. ಆ ದಿನ "ಬನಶಂಕರಿ (ಬಾದಾಮಿ)"ಯಲ್ಲಿ ದೊಡ್ಡ ಜಾತ್ರೆ ಸೇರುತ್ತಂತೆ. ಹಾಗಾಗಿ "ಬನಶಂಕರಿ ಹುಣ್ಣಿಮೆ" ಅನ್ನೋದು ಕ್ರಮೇಣ "ಬನದ ಹುಣ್ಣಿಮೆ" ಆಗಿದೆಯಾ ಅಂತ?
- ಶ್ಯಾಮ್ ಕಿಶೋರ್
Re: ಪ್ರತಿಕ್ರಿಯೆ: ಹನ್ನೆರಡು ಹುಣ್ಣಿಮೆಗಳು: ದಯವಿಟ್ಟು ವಿವರ ತಿಳಿಸಿ.
ನವರಾತ್ರಿಯ ನಂತರ ಬರುವ ಹುಣ್ಣಿಮೆಯನ್ನು (ಅಕ್ಟೋಬರ್) ಭೂಮಿ ಹುಣ್ಣಿಮೆಯೆಂದು ಕರೆಯುವರು. ಆ ದಿನ ಗದ್ದೆ, ತೋಟದಲಿ್ಲ ಸಣ್ಣ ಮಂಟಪ ಮಾಡಿ ಭೂಮಿ ತಾಯಿಯನ್ನು ಪೂಜಿಸುತ್ತಾರೆ. ಮರುದಿನ ಭೂಮಿ ಬಲಿಯುತ್ತಾಳೆಂದು, ಯಾವುದೆ ಭೂಮಿಗೆ ನೋವುಂಟು ಮಾಡಬಾರದೆಂಬ ನಂಬಿಕೆಯಿದೆ.
ಮುಂದಿನ ಹುಣ್ಣಿಮೆಯನ್ನು ಶುಕ್ರ ಹುಣ್ಣಿಮೆಯೆಂಬ ವಾಡಿಕೆಯಿದೆ, ಆ ಹೆಸರಿನ ಕಾರಣ ತಿಳಿದಿಲ್ಲ.
ಇನ್ನಷ್ಟು: ಪ್ರತಿಕ್ರಿಯೆ: ಹನ್ನೆರಡು ಹುಣ್ಣಿಮೆಗಳು
ಸರ್,
ಇನ್ನೊಂದಷ್ಟು ಮಾಹಿತಿ ಸಿಕ್ಕಿತು.
ಕಾರ ಹುಣ್ಣಿಮೆ: ಬೇಸಾಯದ (ಬಿತ್ತನೆಯ) ಮೊದಲ ದಿನವಾಗಿ ಆಚರಿಸುತ್ತಾರೆ. ರೈತಾಪಿ ಜನಗಳಿಗೆ ದೊಡ್ಡ ಹಬ್ಬ. ಸ್ವಲ್ಪ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.
ಹೋಳಿ ಹುಣ್ಣಿಮೆ (ಕಾಮನ ಹುಣ್ಣಿಮೆ): ಹೋಳಿಯ ಕೊನೆಯ ದಿನ (ಐದು ದಿನಗಳ ಹೋಳಿ ಆಚರಣೆ ರೂಢಿ ಇರುವಲ್ಲಿ). ಕಾಮ ದಹನದ ದಿವಸ. ಹಾಗಾಗಿ ಕಾಮನ ಹುಣ್ಣಿಮೆಯೆಂತಲೂ ಕರೆಯುವುದು ವಾಡಿಕೆ. ವಿವರಗಳಿಗೆ ಇಲ್ಲಿ ನೋಡಿ.
ಭಾರತ ಹುಣ್ಣಿಮೆ: ಬಹುಶಃ ಇದರ ನಿಜವಾದ ಹೆಸರು "ಭರತ ಹುಣ್ಣಿಮೆ" ಇರಬೇಕು. ಆದರೆ ಒಂದು ಒಳ್ಳೆಯ ಮಾಹಿತಿ ಸಿಕ್ಕಿತು. ವರಕವಿ ಬೇಂದ್ರೆಯವರು ಹುಟ್ಟಿದ್ದು ಭರತ ಹುಣ್ಣಿಮೆಯ ದಿನ.
- ಶ್ಯಾಮ್ ಕಿಶೋರ್
Re: ಹನ್ನೆರಡು ಹುಣ್ಣಿಮೆಗಳು: ದಯವಿಟ್ಟು ವಿವರ ತಿಳಿಸಿ.
ಹುಣ್ಣಿಮೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ.
ಚಾಂದ್ರಮಾನ ತಿಂಗಳಿನ ಹುಣ್ಣಿಮೆಯ ದಿನ ಬರುವ ನಿತ್ಯನಕ್ಷತ್ರದ ಹೆಸರಿಗೂ, ಆಯಾ ಚಾಂದ್ರಮಾನ ತಿಂಗಳಿನ ಹೆಸರಿಗೂ ತಾಳೆಯಿದೆ!
ತಿಂಗಳು -:- ಹುಣ್ಣಿಮೆಯ ದಿನದ ನಿತ್ಯನಕ್ಷತ್ರ
===============================
ಚೈತ್ರ -:- ಚಿತ್ರಾ
ವೈಶಾಖ -:- ವಿಶಾಖಾ
ಜ್ಯೇಷ್ಠ -:- ಜ್ಯೇಷ್ಠಾ
ಆಷಾಢ -:- ಪೂರ್ವಾಷಾಢಾ/ಉತ್ತರಾಷಾಢಾ (ಅಧಿಕಮಾಸವನ್ನವಲಂಬಿಸಿ)
ಶ್ರಾವಣ -:- ಶ್ರವಣಾ
ಭಾದ್ರಪದ -:- ಪೂರ್ವಾಭಾದ್ರಾ/ಉತ್ತರಾಭಾದ್ರಾ (ಅಧಿಕಮಾಸವನ್ನವಲಂಬಿಸಿ)
ಅಶ್ವಯುಜ -:- ಅಶ್ವಿನಿ
ಕಾರ್ತೀಕ -:- ಕೃತ್ತಿಕಾ
ಮಾರ್ಗಶಿರ -:- ಮೃಗಶಿರಾ
ಪುಷ್ಯ -:- ಪುಷ್ಯಾ
ಮಾಘ -:- ಮಘಾ
ಫಾಲ್ಗುಣ -:- ಉತ್ತರಾಫಲ್ಗುಣಿ
===============================
ಸ್ವಾರಸ್ಯಕರವಾಗಿದೆಯಲ್ಲವೇ?