nannakanasu-chiguru
ನನಗೆ ಬರೆಯೋದಿಕ್ಕೆ ಸ್ಪೂರ್ತಿ ತಂದು ಕೊಟ್ಟ ನನ್ನ ಅತ್ಮೀಯ ಗೆಳೆಯರಾದ ಅಮರ ಮತ್ತೆ ವಿಜಯ್ ಗೆ ನನ್ನ ಹೃತ್ಪೋರ್ವಕ ವಂದನೆಗಳು. ನಿಮ್ಮೆಲ್ಲರ ಹಾರೈಕೆ ನನ್ನೊಂದಿಗಿರಲಿ... ನಮಸ್ಕಾರ, ನನ್ನ ಎಲ್ಲಾ ಸ್ನೇಹಿತರಿಗೂ.... ನಾನಿಲ್ಲಿ ಬರೆದಿರುವುದೆಲ್ಲಾ ನನ್ನ ಮನಸ್ಸಿನ ಭಾವನೆಗಳು, ಮನದ ಮಾತುಗಳು. ಮೊದ ಮೊದಲು ಕವನದ ಕಡೆಗೆ ಇದ್ದ ಒಲವು ಇತ್ತಿಚೆಗೆ ಕಡಿಮೆಯಾಗಿದೆ. ನನ್ನದೇ ಒಂದು ಪುಟ್ಟ ಬ್ಲಾಗ್ ಇದೆ. ಮನಸ್ಸಿಗೆ ತೋಚಿದ್ದನ್ನ ನಾನಿಲ್ಲಿ ವ್ಯಕ್ತಪಡಿಸ್ತಾ ಇದ್ದೇನೆ. ಇಲ್ಲಿ ಬರೆದಿರೊದ್ರಲ್ಲಿ ಬಹಳಷ್ಟು ತಪ್ಪುಗಳಿವೆ. ನನ್ನ ಓದುಗರು ಅದನ್ನ ನನಗೆ ತಿದ್ದಿ ಹೇಳಬೇಕು. ಯಾರೂಕೂಡಾ ಹುಟ್ಟಿದ ತಕ್ಷಣ ಎಲ್ಲಾದನ್ನೂ ಕಲಿಯೋದಿಲ್ಲ. ನಡಿಯೋಕಾಲು ಎಡವೋದು ಸಹಜತಾನೆ ??? ನಿಮ್ಮ ಪ್ರೀತಿಯ ತಿದ್ದುಪಡಿಗೆ ನಾನು ಚಿರರುಣಿ...
ದಿನಚರಿಯ ಒಂದು ದಿನ...
ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್ತೀವಿ. ಈ ರೀತಿ ಆಗಲಿಕ್ಕೆ ಕಾರಣ ಏನು ? ನನಗಂತೂ ಗೊತ್ತಿಲ್ಲ... ನಿಮ್ಗೆನಾದ್ರೂ... ????
ಒಮ್ಮೊಮ್ಮೆ ಯಾವುದಾದರೂ ಪುಟ್ಟ ಮಕ್ಕಳನ್ನು ನೋಡಿದರೆ ನಾವೂ ಮಕ್ಕಳಾಗಿಬಿಡಬಾರದಾ !!! ಈ ಜಂಜಾಟಕ್ಕೆ ಸ್ವಲ್ಪನಾದ್ರೂ ಬಿಡುವು ಸಿಕ್ಕಬಾರದಾ ಅಂತ ಅನ್ಸತ್ತೆ. ದಿನಾ ಬೆಳಿಗ್ಗೆ ಎದ್ದು, ಗಡಿಬಿಡಿಯಲ್ಲಿ ಆಫೀಸಿಗೆ ಬಂದು ಬಾಸ್ ಎಂಬ ಭಾವನೆ ಇಲ್ಲದ ಪ್ರಾಣಿಯ ಕಿರಿ ಕಿರಿಯನ್ನ ಸಹಿಸಿಕೊಂಡು ಮನಸ್ಸಿಲ್ಲದ ಮನಸ್ಸಿಂದ ಆತನಿಗೆ ಒಂದು ಸ್ಮೈಲ್ ಕೊಟ್ಟು ಮತ್ತೆ ಕಂಪ್ಯೂಟರಿನ ಮುಂದೆ ಕೀಬೋರ್ಡನ್ನು ಕುಟ್ಟುತ್ತಾ ಕೆಲವೊಮ್ಮೆ ಊಟವನ್ನೂ ಮರೆಯುತ್ತಾ ಕೆಲಸ ಮಾಡಿ ಸಂಜೆಯ ಹೊತ್ತಿಗೆ ಅಲ್ಲಿಂದ ಯಾವಾಗ ಕಾಲು ಕೀಳುತ್ತೇವೋ ಅನ್ನುವ ರೀತಿ ಸುಸ್ತಾಗಿ ಮನೆಗೆ ಹೋಗುವಷ್ಟರಲ್ಲಿ ಸಾಕಪ್ಪಾ !!! ಸಾಕು !!!! ![]()
ಅಂದು ನನಗೂ ಇದೇ ರೀತಿ ಆಯಿತು, ಆರೋಗ್ಯ ಹದಗೆಟ್ಟಿದ್ದ ಕಾರಣ ದೇಹಕ್ಕೆ ದಣಿವಾಗಿತ್ತು. ರಾತ್ರಿ ಕೆಮ್ಮು ನಿದ್ದೆ ಮಾಡಲು ಅನುವುಮಾಡಿ ಕೊಟ್ಟಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ನನ್ನ ಮೊಬೈಲಿನ ಅಲಾರಾಂ ನನ್ನ ಬೈದು ಬೈದು ಎಬ್ಬಿಸೋದಕ್ಕೆ ಪ್ರಯತ್ನಿಸುತ್ತಿತ್ತು. ಅದರ ಮೇಲೊಂದು ಮೊಟಕಿ ಮತ್ತೆ ಐದು ನಿಮಿಷ, ಮತ್ತೆ ಐದು ನಿಮಿಷ ಅಂತಾ ೬.೩೦ ಕ್ಕೆ ಎದ್ದೆ, ಎದ್ದು ನಿದ್ದೆಗಣ್ಣಿಂದ ಗಡಿಯಾರ ನೋಡಿದಾಕ್ಷಣ ಎದೆ ಧಸಕ್ ಅಂತು, ಇನ್ನೂ ಸ್ನಾನ ಮಾಡಿ ತಿಂಡಿ ಮಾಡ್ಕೊಂಡು ಆಫೀಸಿಗೆ ಹೋಗೋದು ಯಾವಾಗ ??? ಮೀಟಿಂಗ್ ಬೇರೆ ಇದೆ, ಇವತ್ತು ನನ್ನ ಕತೆ ಅಷ್ಟೇ !!! ಅಂದುಕೊಂಡು ಈ ದಿನ ಎಲ್ಲಾ ಸಸೂತ್ರವಾಗಿ ಸಾಗಲಿ ದೇವರೇ ಅಂತ ವಿಘ್ನನಿವಾರಕನಲ್ಲಿ ಬೇಡಿಕೊಂಡು ಗಡಿಬಿಡಿಯಲ್ಲಿ ರೆಡಿಯಾಗಿ ಹೊರಟೆ. ಷೂಗಳಿಗೆ ಪಾಲಿಶ್ ಮಾಡಿಲ್ಲ, ಕರ್ಮಕಾಂಡವೇ.... ಸರಿ ಇನ್ನು ಅದಕ್ಕೆ ೫ ನಿಮಿಷ ತಡವಾಯ್ತು, ಅಲ್ಲಿಂದ ಗಾಡಿ ಹತ್ತಿದ ನಂತರವೇ ನೆನಪಿಗೆ ಬಂದದ್ದು, ಗಾಡಿಯಲ್ಲಿ ಪೆಟ್ರೋಲ್ ಕೇವಲ ಮುಂದಿನ ಬಂಕ್ ತನಕವೇ ನನ್ನ ಗಾಡಿಯನ್ನ ಮುನ್ನಡೆಸಬಲ್ಲದು ಅಂತ, ವಿಧಿ ಇಲ್ಲ.... ಪೆಟ್ರೋಲ್ ಬಂಕ್ ಕಡೆಗೆ ಗಾಡಿಯನ್ನ ತಿರುಗಿಸಿ ಅಲ್ಲಿದ್ದ ಸಾಲಿನಲ್ಲಿ ನಾನೂ ನಿಂತು ಮತ್ತೆ ೧೦ ನಿಮಿಷ ತಡ ಮಾಡಿಕೊಂಡು ಅಲ್ಲಿಂದ ಟ್ರ್ಆಫಿಕ್ ನೊಡನೆ ಹೋರಾಡುತ್ತಾ ಅಂತೂ ಇಂತೂ ಆಫೀಸಿಗೆ ಬರುವ ಹೊತ್ತಿಗೆ ನನ್ನ ಮೊಬೈಲಿನಲ್ಲಿ ೩ ಮಿಸ್ಸ್ಡ್ ಕಾಲ್ಗಳು !!!! ಇನ್ಯಾರದ್ದು ??? ನಮ್ಮ ರೇಷ್ಮ (ನಮ್ಮ ಆಫೀಸಿನ efficient worker) ನನಗೆ ಮತ್ತೊಮ್ಮೆ ಕಾಲ್ ಮಾಡಿ "ಪ್ರಶಾಂತ್, ಎಲ್ಲಿದ್ದೀರ ? ಎಲ್ಲಾ ಮೀಟಿಂಗಿಗೆ ಬಂದಿದ್ದಾರೆ.... ನೀವೊಬ್ಬರೇ ತಡ" ಅಂತ ಹೇಳಿದಳು. ಗಡಿಬಿಡಿಯಲ್ಲಿ ತಲೆಯ ಕೂದಲನ್ನ ಸರಿಪಡಿಸಿಕೊಳ್ಳುತ್ತಾ Conference room ಕಡೆಗೆ ಹೆಜ್ಜೆ ಹಾಕಿದೆ, ನನ್ನ ಬಾಸ್ ಒಮ್ಮೆ ನನ್ನಕಡೆ ತನ್ನ ಕೆಂಗಣ್ಣು ಬೀರಿ ನಂತರ ತನ್ನ ಕೆಲಸದಲ್ಲಿ ಮಗ್ನರಾದರು. ಅದರ ಅರ್ಥ ಮೀಟಿಂಗ್ ಮುಗಿದ ಮೇಲೆ ನನಗೆ ಗ್ರಹಚಾರ ಕಾದಿದೆ ಅಂತ.
As usual ಮೀಟಿಂಗಿನಲ್ಲಿ ಅದೇ ಹಳೇ ಭರವಸೆಗಳು... ಅಂತೂ ಇಂತೂ ಮೀಟಿಂಗ್ ಮುಗೀತು, ನಂತರ ನನಗೆ ಒಂದು Customer call ಇದ್ದದ್ದರಿಂದ ನಾನು ಹೊರಡಬೇಕಾಯಿತು. ಪಯಣ ಬಹಳ ದೂರ ಆದ್ದರಿಂದ ಸ್ವಲ್ಪ ಸಮಾಧಾನ ಪಡಿಯೋದಕ್ಕೆ ರೇಡಿಯೋ ಕೇಳುವ ಮನಸ್ಸಾಯಿತು. ರೇಡಿಯೋ ಹಾಕಿದಾಗ ಅದರಲ್ಲಿ ಬರ್ತಾ ಇದ್ದ ಹಾಡು "ಜಾನೆ ತು ಮೆರ ಕ್ಯಾ ಹೈ, ಜಾನೆ ತು ಮೆರ ಕ್ಯ ಥಾ...." ಅನ್ನೋ ಹೊಸಾ ಹಾಡು. ಈ ಹಾಡು ಬರಿಯೋವ್ರಿಗೆ ಅದನ್ನ ಕೇಳೋವ್ರ ಮನಸ್ಸು ಹೇಗೆ ಅರ್ಥ ಆಗತ್ತೋ !!!! ನಿಜ ಅಲ್ವಾ ? ಒಮ್ಮೊಮ್ಮೆ ನಮ್ಗೂ ಹಾಗೇ ಅನ್ಸತ್ತೆ. ಯಾರಾದರೂ ನಮಗೆ ಹತ್ತಿರ ಅನ್ಸಿದ್ರೆ ಅವ್ರಜೊತೆ ಏನೇನೋ ಹೇಳೋಣ ಅಂತ ಅನ್ನಿಸ್ಬಹುದು, ಆದ್ರೆ ಅವ್ರು ಏನಾದ್ರೂ ಅಂದ್ಕೊಂಡ್ಬಿಟ್ರೇ ??? ಅನ್ನೋ ಭಾವನೆ. ಹಾಗಾಗಿ ಬಹಳಷ್ಟು ಮಾತುಗಳು ಮನಸ್ಸಲ್ಲೇ ಮೂಡಿ ಮನಸ್ಸಲ್ಲೇ ಮುದುಡಿ ಹೋಗ್ತಾವೆ.
ನಾನು ಕಾಲ್ ಮುಗಿಸಿ ಸಂಜೆ ಮನೆಗೆ ಬಂದಾಗ ನನ್ನ ಹೂವಿನ ಗಿಡ ಒಂದು ಚೆಲುವಾದ ಹೂವನ್ನ ಅರಳಿಸಿ ನಗು ನಗುತ್ತಾ ತನ್ನ ಕಂಪನ್ನ ಬೀರಿ ನನ್ನ ಸ್ವಾಗತಿಸ್ತಾ ಇತ್ತು. ಅದನ್ನ ನೋಡಿ ನನ್ನಲ್ಲೇ ಏನೋ ಒಂದು ರೀತಿಯ ಸ್ಪೂರ್ತಿ ಮೂಡಿಬಂತು. ಮನೆಯ ಒಳಗೆ ಹೋಗಿ ಮನೆಯನ್ನ ಗುಡಿಸಿ, ಬಟ್ಟೆಗಳನ್ನ ಮಡಿಸಿಟ್ಟು ಗಿಡಗಳಿಗೆ ನೀರು ಹಾಕಿ ಅಮ್ಮನೊಡನೆ ಮಾತನಾಡಲು ಫೋನ್ ಮಾಡಿದೆ... ![]()

- pachhu2002 ರವರ ಬ್ಲಾಗ್
- Login or register to post comments
- 146 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: