ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು,
ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಮುಗ್ತು, ಬೇಸ್ಗೆ ನುಗ್ತು,
ಇದ್ಕಿದ್ದಂಗೆ ಮಾಯ್ವಾಗೋಯ್ತು ಮಂಜೂ....
ನಂಗು-ನಿಂಗು ಎಂಗಾಗೋಯ್ತು ನಂಜು...
ನನ್ನ ಇಷ್ಟದ ಕವಿ "ರತ್ನ"ನ ಈ ಪದ ನನ್ನ ಬದುಕಿಗೆ, ನನ್ನ ಪ್ರೀತಿಗೆ ಪೂರಕವೇನೋ ಅನಿಸುತ್ತಿದೆ. ನಂಜು ಅನ್ನೋಳು ಅವರ ಹೆಂಡತಿ, ಹಟ್ಟಿ ಅನ್ನೋದು ಅವರ ಮನೆ ಮತ್ತು ಅದರ ಸುತ್ತಲಿನ ಪರಿಸರ, ಮಾಗಿ ಅನ್ನೋದು ಛಳಿಗಾಲ. ಅವರ ಹೆಂಡತಿ ನಂಜಿ ಅನ್ನೋಳು ಛಳಿಗಾಲದಲ್ಲಿ ಹಸಿರ ಹುಲ್ಲ ಮೇಲೆ ಫಳಫಳನೆ ಹೊಳೆಯುತ್ತ ಮಲಗಿಕೊಳ್ಳುವ ಮಂಜಿನಂತೆ, ಅವಳು ಇಲ್ಲವಾದ ಕ್ಷಣ ಅಂದ್ರೆ ಛಳಿಗಾಲ ಕಳೆದು ಹೋದದ್ದು. ಬೇಸಿಗೆ ನುಗ್ಗಿ ಅವರ ನಂಜಿ ಅನ್ನೋ ಛಳಿಯನ್ನು ಹೊತ್ತೊಯ್ದದ್ದು. ಇದು ನಾನು ಆ ಕವಿತೆಯ ಬಗ್ಗೆ ಅರ್ಥ ಮಾಡ್ಕೊಂಡಿದ್ದು. ಬಹುಶಃ ಈ ಕವಿತೆಯಲ್ಲಿನ ಒಂದೊಂದು ಪದಗಳು, ನನಗೂ ಮತ್ತು ನನ್ನ ಪ್ರೀತಿಗೂ ಸೂಕ್ತ ಅನ್ವಯಿಕೆಯಾಗಿದೆ.
ಈ ಲೇಖನದ ಶೀರ್ಷಿಕೆ ಬರೆಯುತ್ತಿದ್ದಂತೆಯೇ ಹೃದಯದ ಬಡಿತಗಳಲ್ಲಿ ಏನೋ ಕಲರವ, ಬಡಿತಗಳ ವೇಗ ಅಳೆಯಲು ಸಾಧ್ಯವಾಗುತ್ತಿಲ್ಲ ಒಂದೇ ಸವನೆ ಆವೇಗ, ಉದ್ವೇಗ. ಅಕ್ಷರಗಳು ಬೆರಳಚ್ಚಿಸುವಲ್ಲಿ ಏಕೋ ಏನೋ ಅಡೆತಡೆ. ಕಣ್ಣೊಳಗೆ ಕಂಬನಿಯ ಧಾರೆ ಧಾರೆ. ಎವರೆಸ್ಟ್ ಪರ್ವತವೇ ದೇಹದ ಮೇಲೆ ಇಟ್ಟಿರುವಷ್ಟು ಹೃದಯ ಭಾರವಾಗಿದೆ. ಒಂದು ವರ್ಷದೊಳಗಡೆಯೇ ಒಂದು ಜನುಮಕ್ಕಾಗುವಷ್ಟು ಪ್ರೀತಿಸಿದ್ದನ್ನು ಹೀಗೆ ಒಂದೇ ಲೇಖನದೊಳಗೆ ಬರೆದು ಅವಳಿಗೆ ಮತ್ತು ಅವಳ ಪ್ರೀತಿಗೆ "ವಿದಾಯ" ಹೇಳುತ್ತಿರುವ ನನ್ನ ವೇದನೆ, ನೋವು, ಸಂಕಟ, ತಳಮಳ ಬಹುಶಃ ಅವಳಿಗಲ್ಲದೆ ಬೇರೆ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಯಾಕೆಂದರೆ ಅವಳು ನನ್ನ ದೇವತೆ, ನನ್ನ ಜೀವ. ನನ್ನ ಹೃದಯ. ನನ್ನ ಚೈತನ್ಯ. ಈ ಕ್ಷಣದಿಂದ ನಾನು ಜಿವ, ಹೃದಯ, ಚೈತನ್ಯ ಈ ಮೂರನ್ನೂ ಕಳೆದುಕೊಳ್ಳುತ್ತಿದ್ದೇನೆ ಅಂದಾದ ಮೇಲೆ ನನಗುಳಿಯೋದು ಬರೀ ’ದೇಹ’ ಮಾತ್ರ, ಅದು ಜೀವವಿಲ್ಲದ್ದು!. ಎಂದಿಗಿಂತಲೂ ತುಂಬ ಭಯ, ಭಕ್ತಿ, ಶೃದ್ಧೆಯಿಂದ ಇವತ್ತು ನಾನು ದೇವರ ಮುಂದೆ ದೀಪ ಹಚ್ಚಿ ದೇವರಲ್ಲಿ ಕೇಳಿದ್ದು ಒಂದೇ ಒಂದು "ಅವಳಿಗೆ ಸುಖ ಸಿಗಲಿ, ನನಗೆ ಸಾವು ಬರಲಿ".
ಇಷ್ಟಕ್ಕೂ ನಮ್ಮ ಪ್ರೀತಿ ಹೀಗೆ ವಿದಾಯ ಕಂಡುಕೊಳ್ಳಲು ಕಾರಣವಾದರೂ ಏನೆಂದು ಹೇಳದೇ ಇರಲಾರೆ. ನನ್ನ ಮತ್ತು ಅವಳ ಪ್ರೀತಿಯ ಮಧ್ಯೆ ವಿದಾಯದ ಪೂರ್ಣವಿರಾಮ ಕಾಣಿಸಿಕೊಳ್ಳಲು "ಜಾತಿ"ಯೊಂದೇ ಕಾರಣ. ಬಹುಶಃ ಭಾರತದಂತಹ ದೇಶದಲ್ಲಿ ಎಷ್ಟೋ ಸಂಖ್ಯೆಯ ಪ್ರೇಮಿಗಳು ಮತ್ತು ಅವರ ಪ್ರೇಮಗಳು ಅಮರವಾಗಲು ಜಾತಿಯೇ ಮುಖ್ಯ ಕಾರಣ. I hate caste and castism. ಸ್ವತಂತ್ರ ಸಿಕ್ಕ ಅರವತ್ತು ವರ್ಷಗಳವರೆಗೆ ಜಾತಿ ಮತ್ತು ಅದರ ಪದ್ಧತಿಗಳು ಇನ್ನೂ ಜೀವಂತವಾಗಿರೋದಕ್ಕೆ ಕಾರಣಗಳು ಹುಡುಕಿಕೊಳ್ಳದೇ ಇದ್ದರೆ ಬಹುಶಃ ಯುವ ಪೀಳಿಗೆಗೆ ಜಾತಿ ಅನ್ನೋದು ಭಯಂಕರ ಸಮಸ್ಯೆಯಾಗೋದರಲ್ಲಿ ಸಂದೇಹವೇ ಇಲ್ಲ. Sorry... ನಾನು ಮುಖ್ಯವಾಗಿ ಹೇಳೋಕೆ ಹೊರಟಿರೋ ವಿಷಯವೇ ಬೇರೆಯಾದ್ದರಿಂದ, ವಿಷಯಾಂತರಕ್ಕೆ ಅವಕಾಶ ಕೊಡದೆ ಜಾತಿಯ ಚರ್ಚೆಯನ್ನು ಪೂರ್ಣಗೊಳಿಸಿಬಿಡುತ್ತೇನೆ.
ಅವಳಿಗೆ ಈಗ ಮದುವೆ ನಿಶ್ಚಯವಾಗುತ್ತಿದೆ... ನನ್ನ ಎದೆಯೊಳಗೆ ವಿಷ ಕಲೆಸಿದಂತಾಗುತ್ತಿದೆ. ಸುಮ್ಮನೆ ಎಲ್ಲ ಪ್ರೇಮಿಗಳಂತೆ ಪ್ರೀತಿಸಿರಲಿಲ್ಲ ನಾವು. ತಾಳಿ ಕಟ್ಟದೆಯೇ ಮದುವೆಯಾಗಿದ್ದೆವು. ದೇಹಗಳ ಬೆಸುಗೆ ಇಲ್ಲದೇನೇ ಮಕ್ಕಳು ಹೆತ್ತಿದ್ದೆವು. ಒಂದಷ್ಟು ಸಿಹಿ ಮುತ್ತುಗಳು, ಮತ್ತೊಂದಷ್ಟು ಅಪ್ಪುಗೆಯ ಹೊರತಾಗಿ ನಾವು ಏನನ್ನೂ ಪಡೆದುಕೊಳ್ಳಲಿಲ್ಲ. ನಮ್ಮಿಬ್ಬರಲ್ಲಿದ್ದುದು ಬರೀ ಶುದ್ಧ ಮತ್ತು ಆರೋಗ್ಯಕರ ಪ್ರೀತಿ ಮಾತ್ರ!. ’ನನ್ನ ಬದುಕಿಗೆ ನೀನಿಲ್ಲದೇ ಇದ್ದರೆ, ನನ್ನ ಬಾಳು ಪೂರ್ಣವಾಗುವುದಿಲ್ಲ ಕಣೋ ಪೆದ್ದ’ ಅನ್ನುತ್ತಿದ್ದವಳು, ಇನ್ನೊಬ್ಬನ ಬಾಳಿಗೆ ಬೆಳಕಾಗಲು ಹೊರಟಿದ್ದಾಳೆ. ಯಾಕೆ ಅಂದ್ರೆ ನನ್ನ ಬಾಳು ಪೂರ್ಣವಾಗಲಿಲ್ಲವಲ್ಲೋ... ಅಂತ ಕಣ್ಣೀರಾಗಿ ಉತ್ತರವಲ್ಲದ ಉತ್ತರ ಕೊಟ್ಟಿದ್ದಾಳೆ. ಯಾವತ್ತಿದ್ದರೂ ನನಗೆ ಮತ್ತು ನನ್ನ ಮನಸಿಗೆ ನೀನೇ ಗಂಡ, ಯಾಕಂದ್ರೆ ನಾವಿಬ್ಬರೂ ದೇವರು ಮೆಚ್ಚಿದ ’ಗಂಡ-ಹೆಂಡತಿ’ ಅಂದಿದ್ದಾಳೆ. ನಮ್ಮ ಪ್ರೇಮ, ಪ್ರೀತಿ ಮತ್ತು ಅದರ ಆಳ ದೇವರಿಗೆ ಮಾತ್ರವೇ ಗೊತ್ತಲ್ಲ? ಅನ್ನುತ್ತಿದ್ದವಳ ಮಾತು ಕೇಳುತ್ತಿದ್ದರೆ ಉಬ್ಬಿದ ನನ್ನ ಕೊರಳೊಳಗೆ ಧ್ವನಿಯೇ ಹೊರಟು ಬರಲಿಲ್ಲ. ಈ ಜನುಮ ಪೂರ್ತಿ ನನ್ನೆದೆಯೊಳಗೆ ಹುಟ್ಟಿಕೊಳ್ಳುವ ’ಪ್ರೀತಿ’ ಬರೀ ನಿಂಗಾಗಿ ಮಾತ್ರ. ಅದೆಲ್ಲವನ್ನೂ ಅಳೆದೂ, ಸುರಿದೂ ನಿನಗೇ ಕೊಡುತ್ತೇನೆ. ದಯವಿಟ್ಟು ನೀನು ಬೇರೆ ಹುಡುಗಿಯನ್ನು ಮದ್ವೆ ಮಾಡ್ಕೊಳ್ಳೋ... ಅಂತ ಗೋಗರೆದಿದ್ದಾಳೆ. ಪ್ರೀತಿ ಫಲಿಸದ ನಂತರ ಹುಡುಗಿಯರು ಹೇಳುವ ಮಾತೇ ಇದು, ಅಲ್ಲವೇ?
’ತೊರೆದು ಹೋಗದಿರು ಜೋಗಿ, ಅಡಿಗೆರಗಿದ ಈ ದೀನಳ ಮರೆತು, ಸಾಗುವೆ ಏಕೆ ವಿರಾಗಿ..." ಅನ್ನೋ ಭಾವಗೀತೆಯ ಕನವರಿಕೆ ಈಗ ಅವಳೆದೆಯಲ್ಲಿದೆ. ಅವಳಿಗಾದರೂ ನಾನ್ಯಾಕೆ ಮೋಸ ಮಾಡಬೇಕು ಅನ್ನೋದು ಸಧ್ಯದ ನನ್ನ ತರ್ಕ. ಅವಳ ಅನಿವಾರ್ಯ, ಅವಳ ಮೇಲಿನ ಒತ್ತಡಗಳನ್ನು ಬಲ್ಲವ ನಾನು. ಅದಕ್ಕೆಂದೇ ಭಾರವಾದ ಹೃದಯದೊಂದಿಗೆ ಅವಳಿಷ್ಟದ ಅನಿವಾರ್ಯದ ಬದುಕಿಗೆ ಗುಡ್ಲಕ್ ಹೇಳುತ್ತ, ನನ್ನ ಪ್ರೇಮಕ್ಕೆ ವಿದಾಯ ಹೇಳುತ್ತಿದ್ದೇನೆ. ನಾವಿಬ್ಬರೂ ಸನಿಹವಿಲ್ಲದಿದ್ದರೂ ಒಬ್ಬರ ಮನಸನೊಬ್ಬರು ಜನುಮಪೂರ್ತಿ ತಲುಪುವೆವು ಅನ್ನೋದಂತೂ ಸತ್ಯ. ಅದನ್ನು ಯಾರಿಂದಲೂ ತಪ್ಪಿಸಲಾಗಲ್ಲ. ನಮ್ಮಿಬ್ಬರ ಪ್ರೀತಿಯೇ ಅಂತಹುದು. ಸಪ್ತ ಸಾಗರದಾಚೆಗಿನ ತೀರಗಳಲ್ಲಿದ್ದರೂ ನಾವು ನಮ್ಮ ಪ್ರೀತಿಯನ್ನು ವಿನಿಮಯಿಸಿಕೊಳ್ಳಬಲ್ಲೆವು. ಅಂತಹುದೊಂದು ಕಲೆ ನಮ್ಮಿಬ್ಬರಿಗೆ ಮಾತ್ರ ಸಿದ್ಧಿಸಿದೆ ಅಂದುಕೊಳ್ಳುತ್ತೇನೆ. ಈ ಲೇಖನದ ಮುಖಾಂತರ ಅವಳಿಗೊಂದು ಮಾತು ಹೇಳಲು ಇಷ್ಟಪಡುತ್ತೇನೆ. ಹುಡುಗೀ.... ನೀನೆಲ್ಲೇ ಇರು, ಯಾವ ಸ್ಥಿತಿಯಲ್ಲೇ ಇರು ನಾನು ನಿನ್ನ ಪಕ್ಕಕ್ಕೆ, ನಿನ್ನ ನೆರಳಿನ ಛಾಯೆಯಾಗಿ ನಾನಿರುತ್ತೇನೆ. ಎಷ್ಟೇ ಆದ್ರೂ ನೀನು ನನ್ನ ’ಮಾನಸ ಪತ್ನಿ’ ಅಲ್ಲವೇ? ಮರೆತುಬಿಡು ಅನ್ನೋದು ಮರೆತಿದ್ದೇನೆ ಅನ್ನೋದು ಯಾವತ್ತಿಗೂ ನಮ್ಮಿಬ್ಬರ ಮಧ್ಯೆ ಸುಳಿಯೋದು ಬೇಡ. ಯಾಕೆಂದ್ರೆ, ಪ್ರೇಮಿಗಳು ಒಬ್ಬರನ್ನೊಬ್ಬರು ಮರೆಯೋದು ಇಬ್ಬರೂ ಸತ್ತ ನಂತರವೇ...!. ಸಧ್ಯಕ್ಕೆ ಪ್ರೀತಿಗೆ ಒಂದದಷ್ಟು ದಿನಗಳವರೆಗೆ ಅಥವ ನಮ್ಮ ಮನಸು ಒಂದು ಹಿಡಿತಕ್ಕೆ ಬರುವವರೆಗೆ ವಿದಾಯ ಹೇಳಿಕೊಳ್ಳೋಣ.
ಮತ್ತೆ ಬರೆಯುತ್ತೇನೆ....
ಪ್ರೇಮ್...

- prem_poo gour ರವರ ಬ್ಲಾಗ್
- Login or register to post comments
- 473 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ಉಜ್ಜಯಿನಿಯ ರಾಜ ಭರ್ತೃಹರಿ. ಆತನ ಹೆಂಡತಿ ಪಿಂಗಳೆ. ರಾಜನು ತನ್ನ ಹೆಂಡತಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದನು. ಎಷ್ಟು ಪ್ರೀತಿಸುತ್ತಿದ್ದನೆಂದರೆ, ಅವಳ ಪ್ರೀತಿಯಲ್ಲಿ ರಾಜ್ಯಭಾರವನ್ನೂ ಮರೆತನು.
ಒಂದು ದಿನ ಒಬ್ಬ ಋಷಿಯು ಬಂದನು. ಒಂದು ‘ಮುಕ್ತಫಲ‘ ವನ್ನು ನೀಡಿದನು. ನಂತರ ‘ರಾಜನೇ ಇದು ಅಪರೂಪದ ಫಲ. ಇದನ್ನು ತಿಂದವರ ಆಯಸ್ಸು ಹೆಚ್ಚುತದೆ. ನೀನು ಈ ದೇಶದ ರಾಜ. ನೀನು ಇದನ್ನು ತಿನ್ನು‘ ಎಂದು ಹಣ್ಣನ್ನು ನೀಡಿದನು.
ರಾಜನು ಆಹಣ್ಣನ್ನು ತಾನು ತಿನ್ನದೆ, ತನ್ನ ಪ್ರೀತಿಯ ಹೆಂಡತಿಗೆ ನೀಡಿದನು.
ಹೆಂಡತಿ ಪಿಂಗಲೆಯು ಅದನ್ನು ತಾನು ಪ್ರೀತಿಸುವ ಕುದುರೆ ಕಾಯುವವನಿಗೊಬ್ಬನಿಗೆ ನೀಡಿದಳು.
ಅವನಿಗೆ ಮತ್ತೋರ್ವ ಪ್ರೇಯಸಿ ಇದ್ದಳು. ಅವಳೊಬ್ಬ ವೇಶ್ಯೆ. ಆ ಹಣ್ಣನ್ನು ಅವಳಿಗೆ ನೀಡಿದನು.
ಆ ವೇಶ್ಯೆಯು ರಾಜನನ್ನು ಇಷ್ಟ ಪಡುತ್ತಿದ್ದಳು. ರಾಜನ ಒಳಿತಿಗಾಗಿ ಆ ಹಣ್ಣನ್ನು ನೀಡಿದಳು.
ತನ್ನ ಕೈಗೆ ಮರಳಿ ಬಂದ ಮುಕ್ತಫಲವನ್ನು ನೋಡಿ ರಾಜನಿಗೆ ಆಶ್ಚರ್ಯವಾಯಿತು. ಕೂಡಲೇ ವಿಚಾರಣೆಯನ್ನು ನಡೆಸಿದನು. ಆಗವನಿ ಪ್ರೀತಿ-ಪ್ರೇಮದಲ್ಲಿರುವ ಪೊಳ್ಳು ತಿಳಿಯಿತು. ಆಗ ಅವನ ಬಾಯಿಯಿಂದ ಒಂದು ಶ್ಲೋಕ ಹೊರಟಿತು.
ಯಾಂ ಚಿಂತಯಾಮಿ ಸತತಂ ಮಯೀ ಸಾ ವಿರಕ್ತಾ
ಸಾಪ್ಯಮನ್ಯಮಿಚ್ಚತಿ ಜನಾಂ ಸಾ ಜನೋ ಅನ್ಯಾಸಕ್ತಾಃ|
ಅಸ್ಮಾತ್ಕೃತೆಚ ಪರಿಶುಷ್ಯತಿ ಕಾಚಿದನ್ಯಾ
ಧಿಕ್ ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ||
“ನಾನು ಯಾವಳನ್ನು ಸತತ ಪ್ರೀತಿಸುತ್ತೇನೆಯೋ, ಅವಳಿಗೆ ನನ್ನಲ್ಲಿ ನಿಜವಾದ ಪ್ರೀತಿಯಿಲ್ಲ. ಅವಳು ಇನ್ಯಾರನ್ನೋ ಪ್ರೀತಿಸುತ್ತಿರುವಳು. ಅವನಾದರೋ ಮತ್ಯಾರನ್ನೋ ಆರಾಧಿಸುತ್ತಿರುವನು. ಆಕೆಯಾದರೋ ನನ್ನನ್ನು ಪ್ರೀತಿಸುತ್ತಿರುವಳು. ಇವಳಿಗು, ಅವನಿಗು, ಅವಳಿಗೂ, ಮದನನಿಗೂ ಹಾಗೂ ನನಗೂ ಧಿಕ್ಕಾರವಿರಲಿ!“
ಭರ್ತೃಹರಿಯು ಪ್ರೀತಿ-ಪ್ರೇಮದ ಭರದಲ್ಲಿ ಶೃಂಗಾರ ಶತಕವನ್ನು ಬರೆದಿದ್ದನು. ಈ ಘಟನೆಯ ನಂತರ ಅವನ್ನು ನೀತಿ ಶತಕ ಹಾಗೂ ವೈರಾಗ್ಯ ಶತಕಗಳನ್ನು ಬರೆದನು.
ಯಾರಾದರೂ ಅಮರ ಪ್ರೀತಿ-ಪ್ರೇಮದ ಬಗ್ಗೆ ಮಾತನಾಡಿದರೆ ಅಥವ ಅಮರ ಪ್ರೇಮಿಗಳ ಬಗ್ಗೆ ಹೇಳಿದರೆ, ಆಗ ನನಗೆ ಭರ್ತೃಹರಿಯ ಈ ಮೇಲಿನ ಶ್ಲೋಕ ನೆನೆಪಾಗುತ್ತದೆ.
- ನಾಸೋ
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
prem gour
ಸರ್, ತಮ್ಮಂತಹ ಹಿರಿಯರಿಂದ ಪ್ರತಿಕ್ರಿಯೆ ಬರುತ್ತದೆಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ. ತಮ್ಮ ಬಗ್ಗೆ ನನಗೆ ವಿಶೇಷವಾದ ಗೌರವವಿದೆ. ತಮ್ಮ ಕಾರ್ಯಕ್ರಮಗಳು ಹಾಗೂ ಬರಹಗಳನ್ನು ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ನೋಡಿದ್ದೇನೆ, ಓದಿದ್ದೇನೆ. ತಾವುಗಳು ಉಧಾಹರಣೆ ಸಮೇತ ನನಗೆ ಅಮರ ಪ್ರೇಮದ ಬಗ್ಗೆ ತಿಳಿಸಿರುವುದು ತುಂಬ ಸಂತಸವೆನಿಸಿದೆ. ಆದರೆ, ಅವಳು ಬೇರೆಯವನನ್ನ ಪ್ರೀತಿಸಿ ನನ್ನಿಂದ ದೂರವಾಗುತ್ತಿಲ್ಲ. ಹೀಗಾಗೋದಕ್ಕೆ ಮುಖ್ಯ ಕಾರಣವೆಂದರೆ, ಅವಳ ಮನೆಯವರ ಒತ್ತಾಯ ಮತ್ತು "ಜಾತಿ" ಆನಂತರ ಆ ಹುಡುಗ ಅವಳನ್ನು ತುಂಬ ಇಷ್ಟಪಡುತ್ತಿದ್ದುದು. ನಾವು ಮದುವೆಯಾಗೋದರಿಂದ ಅವಳ ಮನೆಯಲ್ಲಿ ಏನಾದರೂ ಆಘಾತ/ಅಪಘಾತ ಆದೀತೆಂಬ ಭಯಕ್ಕೆ ನಾವು ನಾವೇ ದೂರಾಗುತ್ತಿದ್ದೇವೆ. ಬಹುಶಃ ತಾವು ನಮಗೆ "ಹೇಡಿಗಳು" ಅಂದುಕೊಂಡರೂ..... ನನಗೆ ಗೊತ್ತು ನಾವು ಪ್ರೀತಿಯನ್ನು ಮರೆತರೂ ಪ್ರೀತಿ ನಮಗೆಂದೂ ಮರೆಯಲ್ಲ. ಮರೆಯುತ್ತೇವೆ, ಮರೆತುಕೊಳ್ಳುತ್ತೇವೆ, ಮರೆತಿದ್ದೇವೆ ಅನ್ನೋದು ಬರೀ ನಮ್ಮ ಮನಸಿನ ಸಮಾಧಾನಕ್ಕೋಸ್ಕರ ಹೇಳಿಕೊಳ್ಳುವ ಮಾತುಗಳು ಮಾತ್ರ. really I miss her...... ತಮ್ಮ ಪ್ರತಿಕ್ರಿಯೆಯಿಂದ ನನ್ನ ಮನಸಿಗೊಂದಷ್ಟು ಸಮಾಧಾನವಾಗಿದೆ ಅಷ್ಟು ಸಾಕು...
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ಪ್ರೇಮ್, ನೀವು ಇಷ್ಟಪಟ್ಟಿರುವ ರಾಜರತ್ನಂ ಅವರ ಕವನದ ಕೊನೆಯ ಸಾಲುಗಳನ್ನು ನೆನಪಿಸಿಕೊಳ್ಳಿ. ಶ್ರೀರಂಗಪಟ್ಟಣದ ಬಳಿ ಕಾವೇರಿ ಒಡೆದು ಎರಡಾಗ್ತಾಳೆ. ನಂತರ ಸಂಗಮದಲ್ಲಿ ಮತ್ತೇ ಒಂದಾಗುತ್ತಾಳೆ. ಅಲ್ಲವೆ!
ನಿಮ್ಮ ಬದುಕಿನಲ್ಲಿ ಪ್ರೀತಿ ಮತ್ತೇ ಬರುತ್ತದೆ. ಬಂದಾಗ ಅದನ್ನು ತೆರೆದ ಬಾಹುಗಳಲ್ಲಿ ಸ್ವಾಗತಿಸಿ. ಕಲ್ಪನಾ ಅವರು ಹೇಳುವ ಹಾಗೆ, ಮಾನಸಿಕ ವ್ಯಭಿಚಾರ ತೀರಾ ಅಸಹ್ಯ. ಆಕೆಯನ್ನು ಮರೆತುಬಿಡಿ. ಬದುಕಿನತ್ತ ಮುಖ ಮಾಡಿ.
ಶುಭಮಸ್ತು!
- ನಾಸೋ
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ನಿಮ್ಮ ಭಾವುಕತೆ ನನ್ನ ಮನ ತಟ್ಟಿತು . ’ಸುಮವೇ ನೀ ಬಾಡದಂತೆ , ಬಿಸಿಲಾ ನೀ ನೋಡದಂತೆ ನೆರಳಲಿ ಮರೆಯಲಿ ನಗುತಿರು ಒಲವೇ , ಇನ್ನೆಂದೂ , ಎಂದೆಂದೂ ’ ನೆನಪಯಿತು .
ಎಲ್ಲಾ ಭಗ್ನ ಪ್ರೇಮಿಗಳಿಗೂ ನೆಮ್ಮದಿ ಬೇಗ ಸಿಗಲಿ .
ಎಲ್ಲ ಜನರೂ ಸುಖಿಯಾಗಿರಲಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
prem gour
ನಿಮ್ಮ ಸಾಂತ್ವನದ ನುಡಿಗಳಿಗೆ ತುಂಭ ಧನ್ಯವಾದಗಳು...
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ನಿಮ್ಮ ಭಾವುಕತೆ ನನ್ನ ಮನ ತಟ್ಟಿತು . ’ಸುಮವೇ ನೀ ಬಾಡದಂತೆ , ಬಿಸಿಲಾ ನೀ ನೋಡದಂತೆ ನೆರಳಲಿ ಮರೆಯಲಿ ನಗುತಿರು ಒಲವೇ , ಇನ್ನೆಂದೂ , ಎಂದೆಂದೂ ’ ನೆನಪಾಯಿತು .
ಎಲ್ಲಾ ಭಗ್ನ ಪ್ರೇಮಿಗಳಿಗೂ ನೆಮ್ಮದಿ ಬೇಗ ಸಿಗಲಿ .
ಎಲ್ಲ ಜನರೂ ಸುಖಿಯಾಗಿರಲಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ಗೆಳೆಯಾ ....ನಿಮ್ಮ .....ಹಾಗೆ ಜಗತ್ತಿನಲ್ಲಿ ತುಂಬಾ ಜನರಿದ್ದಾರೆ......ನಿಜಕ್ಕೂ ಪ್ರೇಮ ಅದ್ಭುತ.....
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ಪ್ರೇಮ್,
ನೀವು ಬರೆದಿರುವುದು ನಿಜವೇ ಆದರೆ, ನೀವು ಪ್ರೀತಿಸಿದವಳನ್ನು ಮದುವೆ ಆಗದೆ ಬಹಳ ದೊಡ್ಡ ತಪ್ಪು ಮಾಡುತ್ತಿದ್ದೀರಿ. ಯಾರಿಗೆ ಬೇಕ್ರಿ ನಿಮ್ಮ ತ್ಯಾಗ? ನನಗೇನೋ ಪ್ರೀತಿಯಲ್ಲಿ ಒಂದು ದಿಟ್ಟವಾದ ನಿಲುವು ತೆಗೆದುಕೊಳ್ಳಲು ಆಗದವರಿಗೆ ಜಾತಿ ಒಂದು ಸಬೂಬು ಅನ್ನಿಸುತ್ತದೆ. ಜಾತಿಯನ್ನು ಧಿಕ್ಕರಿಸಿ ಮದುವೆಯಾದವರು ನಮ್ಮ ಸಮಾಜದಲ್ಲಿ ಇಲ್ಲವೆ? ಯಾಕೆ ಸಾಧ್ಯವಿಲ್ಲ? ಮುಖ್ಯ ನಿಮ್ಮ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಏನು ಬಂದರೂ ಎದುರಿಸುತ್ತೇವೆಂಬ ಛಲ ಇರಬೇಕು. ಬೇರೆಯವರನ್ನು ಮದುವೆಯಾಗಿ, ಹಳೆಯ ಪ್ರೇಮಿಗಾಗಿ ಹಲುಬುವುದರಲ್ಲಿ ಯಾವ ಅರ್ಥವೂ ಇಲ್ಲ. ಇದೊಂದು ತರಹ ಮಾನಸಿಕ ವ್ಯಭಿಚಾರವಾಗುತ್ತೆ ಅಷ್ಟೆ. You just have one life to live here, don't miss this chance to spend that with your soulmate!
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
prem gour
ಕಲ್ಪನಾರವರೇ...
ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು. ನಾನು ಮತ್ತು ಅವಳು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದೇವಾ? ಅಂತ ಕೆಲವೊಮ್ಮೆ ವಿಚಾರ ಮೂಡುತ್ತದೆ. ಆದರೂ ಅವಳೇ ಹೇಳುವ ಪ್ರಕಾರ, ನಮ್ಮ ಪ್ರೀತಿ ಮತ್ತು ಮದುವೆಯಿಂದ ಅವಳ ಮನೆತನದ ಮಾನ, ಮರ್ಯಾದೆ.... ಅವರ ಮನೆಯಲ್ಲಿ ಸಾವು.... ಇಂತಹವು ಏನಾದರೂ ಸಂಭವಿಸಿದಲ್ಲಿ, ಅದಕ್ಕೆ ನಾವುಗಳು ಕಾರಣವಾಗುತ್ತೇವೆ. ನನಗಿಂತಲೂ ಅವಳೇ ತುಂಬ ಪ್ರೀತಿಸುತ್ತಿದ್ದಳೇನೋ ಅನಿಸುತ್ತಿತ್ತು. ನಡುನಡುವೆ ಜಗಳಗಳಾದಾಗ ಅವಳು ಪ್ರಜ್ಞೆ ತಪ್ಪಿ ಬಿದ್ದದ್ದೂ ಇದೆ. ಅಂತಹವಳು ಈಗ ಮಾತಾಡುವ ರೀತಿ ನೋಡಿದರೆ ನನಗೇ ವಿಚಿತ್ರ ಎನಿಸುತ್ತಿದೆ. ಅವಳ ನೆನಪುಗಳು ನನಗೆ ಇರಿದು ಇರಿದು ಕೊಲ್ಲುತ್ತಿವೆ, ಅಂತಹ ನೋವನ್ನು ನಾನು ಯಾರಲ್ಲಿ ಹೇಳಿಕೊಳ್ಳಬೇಕೋ ತಿಳಿಯದಾಗಿದೆ. ಈಗವಳು ನನ್ನಿಂದ ತುಂಬ ದೂರದಲ್ಲಿ ನಿಂತಿದ್ದಾಳೆ. ಅವಳು ಸೈ ಎನ್ನೋದಾದ್ರೆ ನಾನು ಯಾವ ಕ್ಷಣದಲ್ಲೂ ಮದುವೆಗೆ ಸಿದ್ಧ. ನಾನು ಮಾನಸಿಕ ವ್ಯಭಿಚಾರಕ್ಕೆ ಸಿದ್ಧನಿಲ್ಲ. ಅವಳಲ್ಲಿಯೂ ಅಂತಹ ದಿಟ್ಟ ನಿಲುವು ಮೂಡಲಿ ಅನ್ನೋದೇ ನನ್ನ ಆಶಯ. ಮತ್ತೆ ನಿಮ್ಮಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತೇನೆ.
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ಲೇಖನ ತುಂಬ ಚೆನ್ನಾಗಿದೆ........
ಎಲ್ಲೋ ಕೇಳಿದ್ದೆ: "ಪ್ರೀತಿಸುವಾಗ ಅಪ್ಪ ಅಮ್ಮನ್ನ ಮರೀತಾರೆ,ಮದುವೆ ಆಗುವಾಗ ಪ್ರೀತಿಸಿದವರನ್ನ ಮರೀತಾರೆ"..... ಮದುವೆ ಆಗೊವಾಗ ಅಪ್ಪನಿಗೆ ಹ್ರುದಯ ಬೇನೆ, ಅಮ್ಮನಿಗೆ ಬಿ.ಪಿ. ಇಲ್ಲಾ ಜಾತಿ ಇಲ್ಲಾ ಪ್ರತಿಷ್ಟ್ಠೇ ಸಮಸ್ಯೆ.....
ಪ್ರತಿಯೊಂದು ಹಂತದಲ್ಲಿ ನಮ್ಮ priorities ಬದಲಾಗುತ್ತಾ ಇರುತ್ತೆ ಅನ್ಸತ್ತೆ....ಅದಿಕ್ಕೇ ಕೆಲವರು ಪ್ರೀತಿಗೋಸ್ಕರ ಮನೆಯವರನ್ನ ಬಿಟ್ಟರೆ ಮಿಕ್ಕವರು..... ಪ್ರೀತಿ ಮಾಡುದ್ರೇ ಮದುವೆ ಆಗ್ಬೇಕು ಇಲ್ಲಾ ಪ್ರೀತಿ ಮಾಡಬಾರದು ಅಥವ ಮದುವೆನೇ ಪ್ರೀತಿಯ ಗುರಿ ಅಂದ್ಕೊ ಬಾರದು.....ಅವರವರದು ಅವರವರಿಗೆ ನಮ್ಮದು ನಮಗೆ
ಕಾಲ ಎಲ್ಲಾನೂ ಮರೆಸುತ್ತದೆ ಹಾಗೆನೇ ಜೀವನದಲ್ಲಿ ಇನ್ನೂ ಬೇಕಾದಷ್ಟಿದೆ ಅನ್ನೋದುನ್ನೂ ತೋರಿಸತ್ತೆ......ತಾಳಿದವನು ಬಾಳಿಯಾನು.
ನಿಮಗೆ ಶುಭವಾಗಲಿ.
ಚಂದನ
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಲ್ಪವರಿಂದ ಕಂದು ಮತ್ತೆ
ಹಲವಂ ತಾನೆ ಸ್ವತಹಃಮಾಡಿ ತಿಳಿ ಎಂದ ಸರ್ವಜ್ಞ
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
ನೀನೆಲ್ಲೇ ಇರು, ಯಾವ ಸ್ಥಿತಿಯಲ್ಲೇ ಇರು ನಾನು ನಿನ್ನ ಪಕ್ಕಕ್ಕೆ, ನಿನ್ನ ನೆರಳಿನ ಛಾಯೆಯಾಗಿ ನಾನಿರುತ್ತೇನೆ.
>> ಬುದ್ದ ಹೇಳಿದ್ದು "ನೀನು ನಿನಗೆ ಬೆಳಕಾಗಿರು.. ಆಗ ಲೋಕಕ್ಕೆ ಬೆಳಕಾಗ್ತೀಯಾ ಅ೦ತಾ" ನೀವು ನೋಡಿದರೆ
ಛಾಯೆ , ನೆರಳಾಗ್ತೀನಿ ಅ೦ತೀರಲ್ಲಾ ??
ಉ: ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...
prem gour
ಮುರಳಿಯವರೆ....
ಬುದ್ಧ ಹೇಳಿದಂಗೇನೇ ಜಗತ್ತು ನಡೆಯುತ್ತಿದೆ ಅಂತೀರಾ? ’ಆಸೆಯೇ ದುಃಖಕ್ಕೆ ಮೂಲ’ ಅಂದ ಬುದ್ಧನ ಮಾತಿಗೆ ಪ್ರತಿಯಾಗಿ ’ಆಸೆ ಇರಬೇಕು ದುರಾಸೆ ಇರಬಾರದು’ ಅಂತ ಹೇಳಿಕೊಂಡು ಹರಟೆ ಹೊಡೆಯುತ್ತಿರೋರು ನಾವುಗಳು ಅಲ್ವಾ? "ಸ್ವಯಂ ಪ್ರಕಾಶಿತರಾಗಿ" ಅನ್ನೋ ಬುದ್ಧನ ಮಾತಿಗೆ ಜಗತ್ತೇ ತಲೆ ಬಾಗುವುದಾದರೆ ಅದು ನಿಜವಾಗ್ಲೂ "ಬುದ್ಧ ಭಾರತ". ಪರವಾಗಿಲ್ಲ, ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ. ಮೊದಲು ನಾನು ನನ್ನನ್ನೇ ಬೆಳಗಿಕೊಳ್ಳುತ್ತೇನೆ.... ಹಾಗೆ ನಿಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತೇನೆ.