ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ ಹಂಬಲಿಸುತ್ತಿರುವ, ತಾನಿನ್ನೂ ಕ್ರೀಡೆಯ ವಿದ್ಯಾರ್ಥಿ ಎಂದು ತನ್ನನ್ನು ತಾನು ಪರಿಗಣಿಸುವ ಅಪರೂಪದ ಕ್ರೀಡಾಳು. ಯಾವುದರಲ್ಲಿ ನಾವು ಪರಿಪಕ್ವವಾಗಿಲ್ಲವೋ ಅದನ್ನು ಪ್ರಯತ್ನಿಸಲೂಬಾರದು ಎಂಬ ಧೋರಣೆಯೊಂದಿಗೆ ತನ್ನ ಕ್ರೀಡಾ ಜೀವನದ ಅತ್ಯುನ್ನತ ಮಟ್ಟ ತಲುಪಿರುವ ವ್ಯಕ್ತಿ ದ್ರಾವಿಡ್.
ದ್ರಾವಿಡ್ ಯಶಸ್ಸಿಗೆ ಮುಖ್ಯ ಕಾರಣ ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು. ಏನೇ ಮಾಡಲಿ ಅದರಲ್ಲೊಂದು ಶಿಸ್ತು ಇದ್ದೇ ಇದೆ. ಒಂದು ನಿಯಮ ಇದ್ದೇ ಇದೆ. ಆ ಶಿಸ್ತು ಮತ್ತು ನಿಯಮ ದಾಟಿ ಒಂದು ಹೆಜ್ಜೆ ಆಚೀಚೆ ದ್ರಾವಿಡ್ ಇಡುವುದೇ ಇಲ್ಲ. ಆ ಕೆಲಸ ಬ್ಯಾಟಿಂಗ್ ಮಾಡುವುದಿರಲಿ, ಪಂದ್ಯದ ಮುಂಚಿನ ತಯಾರಿ ಇರಲಿ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವುದಿರಲಿ, ವೈಯುಕ್ತಿಕ ಸಂದರ್ಶನ ಕೊಡುವುದಿರಲಿ, ಹೀಗೆ ಎಲ್ಲೆಲ್ಲೂ ಆ ಶಿಸ್ತು ಮತ್ತು ತನಗೆ ತಾನೇ ವಿಧಿಸಿದ ನಿಯಮದ ಪ್ರಕಾರ ದ್ರಾವಿಡ್ ನಡೆದುಕೊಳ್ಳುತ್ತಾರೆ. ಕೆಲವೊಂದು ಪ್ರಶ್ನೆಗಳಿಗೆ ತಾನು ಉತ್ತರ ನೀಡಲೇಬಾರದು ಎಂದು ದ್ರಾವಿಡ್ ಮುಂಚಿತವಾಗಿಯೇ ನಿರ್ಧರಿಸಿರುತ್ತಾರೆ. ಆಗ, ಜಪ್ಪಯ್ಯ ಎಂದರೂ ವರದಿಗಾರರಿಗೆ ದ್ರಾವಿಡ್-ನಿಂದ ಆ ಪ್ರಶ್ನೆಗಳಿಗೆ ಎಷ್ಟೇ ತಿರುಚಿ ಕೇಳಿದರೂ ಉತ್ತರ ಸಿಗುವುದಿಲ್ಲ. ಗಾಸಿಪ್ ಮಾಡಲು ಯಾವುದೆ ’ಸೌಂಡ್ ಬೈಟ್’ ದ್ರಾವಿಡ್ ನಿಂದ ಹೊರಬರುವುದಿಲ್ಲ. ಅವರದ್ದೇನಿದ್ದರೂ ನೇರ ಸರಳ ಸುಲಭ ಮಾತು. ಆಡುವ ಪ್ರತಿ ಮಾತಿನ ಹಿಂದೆ ಟನ್ನುಗಟ್ಟಲೆ ಬುದ್ಧಿವಂತಿಕೆಯಿರುತ್ತದೆ. ಆದ್ದರಿಂದಲೇ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಆಡಲು ಒಂದುವರೆ ದಶಕಗಳಾದರೂ ಇದುವರೆಗೆ ಒಂದೇ ಒಂದು ವಿವಾದವಾಗಲಿ, ತಪ್ಪು ಹೇಳಿಕೆಯಾಗಲಿ ಅವರ ಸುತ್ತ ಸುಳಿದಿಲ್ಲ. ಮುಂದೆ ಓದಿ »
1239 ಹಿಟ್ಸ್