ಕರ್ನಾಟಕ ಕ್ರಿಕೆಟ್ - ೨
ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦;೨, ತಮಿಳುನಾಡು ವಿರುದ್ಧ ೬;೬೮, ಪ್ರಿ.ಕ್ವಾ.ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾ.ಫೈನಲ್ ನಲ್ಲಿ ಮುಂಬೈ ವಿರುದ್ಧ ೬೫;೧೦೫. ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯ ಸರಾಸರಿಯಲ್ಲಿ ೫೬೬ ಓಟಗಳನ್ನು ಗಳಿಸಿ ಮುಂದಿನ ೧೧ ವರ್ಷಗಳವರೆಗೆ ಆರಂಭಿಕನ ಸ್ಥಾನವನ್ನು ತನ್ನದಾಗಿಸಿಕೊಂಡರು.
ಅರುಣ್ ಕುಮಾರ್ ಗೆ ಹಾವುಗಳೆಂದರೆ ತುಂಬಾನೇ ಪ್ರೀತಿ. ಅವರೊಂದಿಗೆ ಹೊಟೇಲ್ ರೂಮ್ ಶೇರ್ ಮಾಡಿಕೊಳ್ಳಲು ಉಳಿದ ಆಟಗಾರರು ಹಿಂಜರಿಯುತ್ತಿದ್ದರು. ಚೇಷ್ಟೆ ಮಾಡುವುದರಲ್ಲಿ ಬಹಳ ಮುಂದಿದ್ದ ಅರುಣ್ ಹಾವುಗಳ ಮೂಲಕ ಸಹ ಆಟಗಾರರನ್ನು ಬಹಳ ಕಾಡಿದ್ದಾರೆ.
ಜ್ಯಾಕ್ ಮುಂದಿನ ವರ್ಷಗಳಲ್ಲಿ ತನ್ನ ಬ್ಯಾಟಿಂಗ್ ನಿಂದ ಕರ್ನಾಟಕಕ್ಕೆ ಹಲವಾರು ಬಾರಿ ಉತ್ತಮ ಆರಂಭವನ್ನು ನೀಡಿದ್ದರು. ಹಲವಾರು ಬಾರಿ ಭಾರತ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಜ್ಯಾಕ್ ಹೆಸರಿರುತ್ತಿತ್ತು. ನಿರಾಸೆಯ ಸಂಗತಿಯೆಂದರೆ ಜ್ಯಾಕ್ ೬೦-೭೦ ಓಟಗಳನ್ನು ಗಳಿಸಿದ ಬಳಿಕ ಸಂಯಮವನ್ನು ಕಳೆದು ಕೆಟ್ಟ ಹೊಡೆತಗಳಿಗೆ ತನ್ನ ವಿಕೆಟ್ ಒಪ್ಪಿಸುವುದನ್ನು ರೂಢಿಮಾಡಿಕೊಂಡಿದ್ದರು. ತನ್ನ ಕ್ರಿಕೆಟ್-ನ ಈ ನ್ಯೂನತೆಯನ್ನು ಜ್ಯಾಕ್ ಸರಿಪಡಿಸಿಕೊಂಡಿದ್ದರೆ ಭಾರತ ತಂಡದಲ್ಲಿ ಮತ್ತೊಬ್ಬ ಕನ್ನಡಿಗನ ಹೆಸರನ್ನು ನಾವೆಲ್ಲರೂ ಕಾಣಬಹುದಿತ್ತು.
೨೦೦೪-೦೫ ರ ರಣಜಿ ಋತುವಿನಲ್ಲಿ ಅರುಣ್ ಕುಮಾರ್-ಗೆ ಶನಿದೆಸೆ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಬಂದಿದ್ದವು. ಒಂದು ಕಡೆಯಿಂದ ರಾಬಿನ್ ಉತ್ತಪ್ಪ, ಶ್ಯಾಮ್ ಪೊನ್ನಪ್ಪ ಮತ್ತು ಭರತ್ ಚಿಪ್ಲಿ ಇತ್ಯಾದಿ ಯುವ ಆಟಗಾರರಿಗೆ ಅವಕಾಶ ನೀಡುವ ಆಯ್ಕೆಗಾರರ ತವಕ ಮತ್ತೊಂದು ಕಡೆಯಿಂದ ಬ್ಯಾಟಿಂಗ್ ಬಾರದ, ಬೌಲಿಂಗ್ ಬಾರದ, ಕ್ಷೇತ್ರರಕ್ಷಣೆ ಬಾರದ ಮತ್ತು ಕನ್ನಡ ಮೊದಲೇ ಬಾರದ ಸ್ಟುವರ್ಟ್ ಬಿನ್ನಿಯಂತಹವರನ್ನು 'ಆಡಿಸಲೇಬೇಕಾದ' ಅನಿವಾರ್ಯತೆ. ಈ ಋತುವಿನ ಮೊದಲೆರಡು ಪಂದ್ಯಗಳಲ್ಲಿ ಅರುಣ್ ೨೫;೧೩ ಮತ್ತು ೨೯;೬ ಓಟಗಳನ್ನು ಗಳಿಸಿ ವಿಫಲರಾದರು. ಇದೇ ಕಾರಣವನ್ನು ಮುಂದಿಟ್ಟು ನಂತರದ ೫ ಪಂದ್ಯಗಳಲ್ಲಿ ಅವರನ್ನು ಹೊರಗಿಡಲಾಯಿತು. ಆದರೆ ಈ ೫ ಪಂದ್ಯಗಳನ್ನಾಡಿದ ರಾಬಿನ್ ಮತ್ತು ಶ್ಯಾಮ್ ಅವರಿಬ್ಬರ ಒಟ್ಟಾರೆ ಪ್ರದರ್ಶನ ಸಾಧಾರಣವಾಗಿತ್ತು ಅಷ್ಟೆ.
ಆಯ್ಕೆಗಾರರು ನೀಡಿದ ಸುಳಿವುಗಳನ್ನು ಅರ್ಥೈಸಿಕೊಂಡ ಅರುಣ್, ಮುಂದಿನ ಋತುವಿನ ರಣಜಿ ತಂಡಕ್ಕೆ ತನ್ನನ್ನು ಪರಿಗಣಿಸಲಾರರು ಎಂಬುದನ್ನು ಮನಗಂಡು, ಹೊರ ರಾಜ್ಯದ ಅನುಭವಿ ಆಟಗಾರರಿಗಾಗಿ ಹುಡುಕಾಡುತ್ತಿದ್ದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ನ್ನು ಸಂಪರ್ಕಿಸಿದರು. ಅರುಣ್ ಕುಮಾರ್ ರಂತಹ ಆಟಗಾರ ಸಿಕ್ಕಿದ್ದು ಅಸ್ಸಾಮ್ ಕ್ರಿಕೆಟ್ ನ ಭಾಗ್ಯ. ಅವರನ್ನು ಕಳೆದುಕೊಂಡು ಸ್ಟುವರ್ಟ್ ಬಿನ್ನಿಯಂತವರ ಆಟ ನೋಡುತ್ತಿರುವುದು ನಮ್ಮ ದೌರ್ಭಾಗ್ಯ.
ಹೀಗೆ ೨೦೦೫-೦೬ ನೇ ಋತುವಿನಲ್ಲಿ ನಮ್ಮ ಅರುಣ್ ಕುಮಾರ್, ಆಸ್ಸಾಮ್ ಪರವಾಗಿ ಆಡಿ ೪ ಪಂದ್ಯಗಳಲ್ಲಿ ೨ ಶತಕಗಳ ಸಹಿತ ೫೭.೬೬ ಸರಾಸರಿಯಲ್ಲಿ ೩೪೬ ಓಟಗಳನ್ನು ಗಳಿಸಿದರು. ಅರುಣ್ ಕುಮಾರ್ ರಿಂದ ಬಹಳ ಆಕರ್ಷಿತವಾದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ಈ ಪ್ರಸಕ್ತ ಋತುವಿನಲ್ಲಿ (೨೦೦೬-೦೭) ಅವರಿಗೆ ದೊಡ್ಡ ಜವಾಬ್ದಾರಿಯೊಂದನ್ನು ನೀಡಿತು. ಅದೇನೆಂದರೆ ಅಸ್ಸಾಮ್ ತಂಡದ ನಾಯಕತ್ವ! ಇದರೊಂದಿಗೆ ಬಂದ ಇನ್ನೂ ದೊಡ್ಡ ಜವಾಬ್ದಾರಿಯೆಂದರೆ ಅಸ್ಸಾಮ್ ತಂಡವನ್ನು ಪ್ಲೇಟ್ ಲೀಗ್ ನ ಫೈನಲ್ ತಲುಪುವಂತೆ ಮಾಡಿ ಮುಂದಿನ ಋತುವಿನಲ್ಲಿ ಎಲೀಟ್ ಲೀಗ್ ನಲ್ಲಿ ಆಡಲು ಅರ್ಹತೆ ಗಳಿಸುವುದು.
ಅರುಣ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಸ್ಸಾಮ್ ಈಗ ಪ್ಲೇಟ್ ಲೀಗ್ ನ ಸೆಮಿ ಫೈನಲ್ ತಲುಪಿದೆ. ಭರ್ಜರಿ ಆಟ ಪ್ರದರ್ಶಿಸಿರುವ ಅರುಣ್, ೫ ಪಂದ್ಯಗಳಲ್ಲಿ ೨ ಶತಕಗಳೊಂದಿಗೆ ೯೦.೩೩ ಸರಾಸರಿಯಲ್ಲಿ ೫೪೨ ಓಟ ಗಳಿಸಿದ್ದಾರೆ. 'ಕರ್ನಾಟಕಾಸ್ ಲಾಸ್ ಇಸ್ ಅಸ್ಸಾಮ್-ಸ್ ಗೈನ್'. ರಣಜಿಗೆ ಪಾದಾರ್ಪಣ ಮಾಡಿದ ಋತುವಿನಲ್ಲೇ ಆಸ್ಸಾಮ್ ವಿರುದ್ಧ ೭೫ ಓಟ ಗಳಿಸಿದ್ದ ಅರುಣ್ ಗೆ, ೧೩ ವರ್ಷಗಳ ಬಳಿಕ ತಾನು ಇದೇ ತಂಡದ ನಾಯಕನಾಗಿ ಆಡಲಿದ್ದೇನೆ ಎಂಬುದೆಲ್ಲಿ ಗೊತ್ತಿತ್ತು? ಲೈಫ್ ಇಸ್ ಒನ್ ಫುಲ್ ಸರ್ಕಲ್.
ನಾಳೆ ಜನವರಿ ೧೦ ರಂದು ಕಟಕ್ ನಲ್ಲಿ ಆರಂಭವಾಗುವ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ಅಸ್ಸಾಮ್, ಒರಿಸ್ಸಾ ತಂಡವನ್ನು ಎದುರಿಸಲಿದೆ. ಅಸ್ಸಾಮ್ ತಂಡವನ್ನು ಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಲೆಂದು ನಮ್ಮ ಕನ್ನಡದ ಹುಡುಗ ಜ್ಯಾಕ್ ಗೆ ಶುಭ ಹಾರೈಕೆಗಳು. ಅಸ್ಸಾಮ್ ಪರವಾಗಿ ಕರ್ನಾಟಕದ ಮತ್ತೊಬ್ಬ ಕ್ರಿಕೆಟಿಗ ಸ್ಪಿನ್ನರ್ ಆನಂದ್ ಕಟ್ಟಿ ಕೂಡಾ ಆಡುತ್ತಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಕನ್ನಡದ ಈ ಹುಡುಗನಿಗೂ ನಾಳಿನ ಪಂದ್ಯಕ್ಕೆ ಶುಭಹಾರೈಕೆಗಳು.

- rajeshnaik111 ರವರ ಬ್ಲಾಗ್
- Login or register to post comments
- 1044 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)
ರಾಜೇಶ್ ನಾಯ್ಕರೇ,
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು. ರಣಜಿಯನ್ನು ನಾನು ಅಷ್ಟಾಗಿ ಅನುಸರಿಸುವುದಿಲ್ಲ. ಹಾಗಾಗಿ ನೀವು ಬರೆದಿರುವ ಆಟಗಾರರಲ್ಲಿ ಅನೇಕರ ಹೆಸರುಗಳನ್ನೂ ನಾನು ಕೇಳಿಯೇ ಇರಲಿಲ್ಲ! ಕೆಲವೊಂದು ಮಾಹಿತಿಗಳು ಚೆನ್ನಾಗಿವೆ (ಉದಾ:ಅರುಣ್ಕುಮಾರ್ ಬಗ್ಗೆ).
ಪ್ರದೇಶ ಸಮಾಚಾರ ಅಂದ ತಕ್ಷಣ ನೆನಪಾಯಿತು. ನಾನೂ ಆಕಾಶವಾಣಿ ಭದ್ರಾವತಿಯ ಪ್ರದೇಶ ಸಮಾಚಾರವನ್ನು ಬಿಡದೆ ಕೇಳುತ್ತಿದ್ದೆ. ಈಗಲೂ ನಿನ್ನೆ ಮೊನ್ನೆಯದೇನೋ ಅನ್ನುವಂತೆ ನೆನಪಿದೆ: "ಪ್ರದೇಶ ಸಮಾಚಾರ, ಓದುತ್ತಿರುವವರು ಸದಾನಂದ ಹೆಗಡೆ...."
- ಶ್ಯಾಮ್ ಕಿಶೋರ್
Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)
ಶ್ಯಾಮ್ ಕಿಶೋರ್ ರವರೆ,
ನೀವು ಭದ್ರಾವತಿ ಅಂದ ಕೂಡಲೇ ನೆನಪಾಯಿತು. ಭದ್ರಾವತಿ ಆಕಾಶವಾಣಿ ಕೇಂದ್ರ ಕೂಡಾ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡುತ್ತಿತ್ತು.
Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)
ರೇಡಿಯೊದಲ್ಲಿ ವಾರ್ತೆ/ಪ್ರದೇಶಸಮಾಚಾರಗಳನ್ನೋದುತ್ತಿರುವವರ ಬಗೆಗಿನ ನೆನಪುಗಳು ಮಧುರ. ಈಬಗ್ಗೆ ನಾನು ಒಂದು ವಿಚಿತ್ರಾನ್ನ ಸಂಚಿಕೆಯಲ್ಲಿ ಬರೆದಿದ್ದೆ. ಆಸಕ್ತಿಯಿರುವವರು ಇಲ್ಲಿ ನೋಡಿ.
ಜೆ.ಅರುಣ್ ಕುಮಾರ್
ರೊಲಾಂಡ್ ಬ್ಯಾರಿಂಗ್ಟನ್ ಸೇರಿದ ಮೇಲೆ, ಇವರಿಬ್ಬರು ಇನ್ನಿಂಗ್ಸ್ ಆರಂಭಿಸಲು ಬರುತ್ತಿದ್ದರಲ್ಲವೇ ?
Re: ಜೆ.ಅರುಣ್ ಕುಮಾರ್
ಹೌದು, ಬ್ಯಾರಿಂಗ್ಟನ್ ಮತ್ತು ಅರುಣ್ ೧೯೯೯-೨೦೦೦ ಋತುವಿನಲ್ಲಿ ಒಂದೆರಡು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆಗ ಅರುಣ್ ಜತೆಯಾಗಿ ಮಿಥುನ್ ಬೀರಾಲ ಇದ್ದರು. ಒಂದೆರಡು ಪಂದ್ಯಗಳ ಬಳಿಕ ಬ್ಯಾರಿಂಗ್ಟನ್ ೩ನೇ ಕ್ರಮಾಂಕದಲ್ಲಿ ಆಡುತ್ತಿದರು. ಆದರೆ ೨೦೦೨-೦೩ ಮತ್ತು ೨೦೦೩-೦೪ ಈ ಎರಡು ಋತುಗಳಲ್ಲಿ ಎಲ್ಲಾ ಪಂದ್ಯಗಳಲ್ಲಿ ಅರುಣ್ ಮತ್ತು ಬ್ಯಾರಿಂಗ್ಟನ್ ಇನ್ನಿಂಗ್ಸ್ ಆರಭಿಸಿದ್ದರು. ಅರುಣ್ ಕರ್ನಾಟಕದ ಪರವಾಗಿ ಆಡಿದ ತನ್ನ ಕೊನೆಯ ೨ ಪಂದ್ಯಗಳಲ್ಲಿ ಕೂಡಾ (೨೦೦೪-೦೫) ಬ್ಯಾರಿಂಗ್ಟನ್ ಜತೆ ಇನ್ನಿಂಗ್ಸ್ ಆರಂಭಿಸಿದ್ದರು.
Re: ಕರ್ನಾಟಕ ಕ್ರಿಕೆಟ್ - ೨
ರಣಜಿ ಏಕದಿನ ಟ್ರೋಫಿಯ ಪೂರ್ವ ವಲಯದ ಲೀಗ್ ಪಂದ್ಯಗಳಲ್ಲಿ ತನ್ನ ನಾಯಕ ಅರುಣ್ ಕುಮಾರ್ ರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಅಸ್ಸಾಮ್, ಒರಿಸ್ಸಾ ವಿರುದ್ಧ ಜಯ ದಾಖಲಿಸಿ, ರಣಜಿ ಟ್ರೋಫಿ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ತನ್ನ ವಿರುದ್ಧ ಮೋಸದಲ್ಲಿ ಗೆಲುವು ಸಾಧಿಸಿದ ಒರಿಸ್ಸ ಮೇಲೆ ಸ್ವಲ್ಪ ಮಟ್ಟಿಗಾದರೂ ಸೇಡು ತೀರಿಸಿಕೊಂಡಿದೆ. ಗೆಲುವಿಗೆ ೨೫೪ ಓಟಗಳ ಬೆಂಬತ್ತಿ ಹೊರಟ ಅಸ್ಸಾಮ್, ೫ ಓಟಗಳಿಗೆ ೩ ಹುದ್ದರಿಗಳನ್ನು ಕಳಕೊಂಡು ಸಂಕಷ್ಟದಲ್ಲಿದ್ದಾಗ ಆಡಲು ಬಂದ ಅರುಣ್ ಕುಮಾರ್ ರ ಭರ್ಜರಿ ೧೫೪ ಓಟಗಳ ನೆರವಿನಿಂದ ೫ ಹುದ್ದರಿಗಳಿಂದ ವಿಜಯ ದಾಖಲಿಸಿದೆ. ಆನಂದ್ ಕಟ್ಟಿ ಯಾವುದೇ ಹುದ್ದರಿ ಗಳಿಸಲಿಲ್ಲವಾದರೂ ೧೦ ಓವರ್ ಗಳಲ್ಲಿ ಕೇವಲ ೪೧ ಓಟಗಳನ್ನು ನೀಡಿದರು.
ರಣಜಿ ಸುದ್ದಿ
ರಾಜೇಶ್ ರವರೆ,
ತಪ್ಪದೆ ರಣಜಿಯ ಬಗ್ಗೆ ಸುದ್ದಿ ನೀಡುತ್ತಿರುವ ನಿಮಗೆ ಧನ್ಯವಾದಗಳು. ಭಾರತದ ತಂಡ ಕಳಪೆಯಾಟ ಆಡುತ್ತಿರುವ ಸಮಯದಲ್ಲಿ ಕರ್ನಾಟಕ ತಂಡದ ಗೆಲುವು ಕೇಳಿ ಸಂತೋಷವಾಯಿತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ರಣಜಿ ಸುದ್ದಿ
ನಾಡಿಗ್ >>ಕರ್ನಾಟಕ ತಂಡದ ಗೆಲುವು ಕೇಳಿ ಸಂತೋಷವಾಯಿತು..
ಕರ್ನಾಟಕ ರಣಜಿಯ ಉಪಾಂತ್ಯ ಪಂದ್ಯದಲ್ಲಿ ಬಂಗಾಳದ ವಿರುದ್ಧ ಸೋತಿತಲ್ಲ!
ಉ: ರಣಜಿ ಸುದ್ದಿ
ರಾಜೇಶರ ಕಾಮೆಂಟು ತಪ್ಪಾಗಿ ಓದಿಕೊಂಡೆ ಅನ್ಸತ್ತೆ
ಕ್ಷಮೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ರಣಜಿ ಸುದ್ದಿ
ನಾಡಿಗ್,
ನೀವು ಓದಿದ್ದು ಸರಿಯಾಗೇ ಇದೆ. ರಣಜಿ ಟ್ರೋಫಿಯಲ್ಲಿ (೪ ದಿನಗಳ ಪಂದ್ಯ. ಫೈನಲ್ ಮತ್ತು ಸೆಮಿಫೈನಲ್ ೫ ದಿನದ್ದಾಗಿರುತ್ತವೆ) ಕರ್ನಾಟಕ ಸೆಮಿ ಫೈನಲ್ ನಲ್ಲಿ ಬಂಗಾಲ್ ವಿರುದ್ಧ ಸೋತಿದೆ. ಮತ್ತು ಮುಂಬೈ ರಣಜಿ ಟ್ರೋಫಿಯನ್ನು ಗೆದ್ದು ಕೂಡಾ ಆಗಿದೆ.
ಈಗ ನಡೆಯುತ್ತಿರುವುದು ಮತ್ತು ನಾನು ಮಾತಾಡುತ್ತಿರುವುದು ರಣಜಿ ಏಕದಿನ ಪಂದ್ಯಾಟಗಳ ಬಗ್ಗೆ. ರಣಜಿ ಏಕದಿನ ಟ್ರೋಫಿಗಾಗಿ ಫೆಬ್ರವರಿ ೧೦ರಿಂದ ರಾಷ್ಟ್ರದ ಎಲ್ಲಾ ೫ ವಲಯಗಳಲ್ಲಿ (ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯ) ಲೀಗ್ ಪಂದ್ಯಗಳು ಆಯಾ ವಲಯದ ತಂಡಗಳ ನಡುವೆ ಪ್ರಾರಂಭವಾಗಿವೆ. ಪ್ರತಿ ವಲಯದ ಪ್ರಥಮ ೨ ತಂಡಗಳು ನಾಕ್ ಔಟ್ ಹಂತಕ್ಕೆ ತೇರ್ಗಡೆಗೊಳ್ಳುತ್ತವೆ.
ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ
ತ್ರಿಪುರ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ೮ ಹುದ್ದರಿಗಳಿಂದ ಜಯಿಸಿ ಕನ್ನಡಿಗ ಅರುಣ್ ಕುಮಾರ್ ನೇತೃತ್ವದಲ್ಲಿ ಅಸ್ಸಾಮ್ ರಣಜಿ ಏಕದಿನ ಟ್ರೋಫಿಯಲ್ಲಿ ಪೂರ್ವ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದೆ. ಒರಿಸ್ಸ, ಝಾರ್ಖಂಡ್ ಮತ್ತು ತ್ರಿಪುರ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಕಂಡರೆ ಬಂಗಾಲ ವಿರುದ್ಧದ ಪಂದ್ಯ ಮಳೆಯ ಕಾರಣ ರದ್ದುಗೊಳಿಸಲಾಗಿತ್ತು. ಬಂಗಾಲ ದ್ವಿತೀಯ ಸ್ಥಾನಿಯಾಗಿ ಪೂರ್ವ ವಲಯದಿಂದ ನಾಕ್ ಔಟ್ ಹಂತ ಪ್ರವೇಶಿಸಿದೆ. ಕನ್ನಡಿಗ ಅರುಣ್ ೪ ಪಂದ್ಯಗಳಲ್ಲಿ ಒಂದು ಶತಕದ ಬಾರಿಯೊಂದಿಗೆ ೧೨೮.೫ ಸರಾಸರಿಯಲ್ಲಿ ೨೫೭ ಓಟಗಳನ್ನು ಗಳಿಸಿದ್ದಾರೆ. ಕರ್ನಾಟಕವೂ ತನ್ನ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದೆ. ಮಧ್ಯ ಮತ್ತು ಉತ್ತರ ವಲಯಗಳ ಪಂದ್ಯಗಳನ್ನು ಮಳೆಯ ಕಾರಣದಿಂದ ಒಂದು ವಾರ ಮುಂದೂಡಲಾದ ಕಾರಣ ಆ ಪಂದ್ಯಗಳು ಮುಗಿದ ಬಳಿಕ ನಾಕ್ ಔಟ್ ಹಂತದಲ್ಲಿ ಕರ್ನಾಟಕದ ಎದುರಾಳಿ ಯಾರೆಂದು ಸ್ಪಷ್ಟವಾಗುತ್ತೆ.