Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ravikreddy ರವರ ಬ್ಲಾಗ್

ಮದುವೆಯಾಗದವರ ತೊಳಲಾಟ, ಸಮಜಾಯಿಷಿ, ಜವಾಬ್ದಾರಿ, ಮತ್ತು ಸ್ವಾತಂತ್ರ್ಯಗಳ ಸ್ವಗತ...

March 8, 2008 - 8:51am — ravikreddy

ಮೇಲಿನ ಶೀರ್ಷಿಕೆ ಸುಮ್ಮನೆ, ಒಂದು ರೀತಿಯಲ್ಲಿ ಗಮನ ಸೆಳೆಯಲಿ ಎಂದು ಬರೆದದ್ದು. ಅದರ ಬಗ್ಗೆ ನಂತರ ಬರುತ್ತೇನೆ.

ಈ ನಡುವೆ ಮೂರ್ನಾಲ್ಕು ತಿಂಗಳಿನಿಂದ ಯಾವುದೆ ಕಥೆ-ಕಾದಂಬರಿ ಓದಲು ಆಗಿರಲಿಲ್ಲ. ಈ ಮಧ್ಯೆ ಗೆಳೆಯ ನರೇಂದ್ರ ಪೈ‍ರವರ ಮೊದಲ ಕಥಾಸಂಕಲನ "ಟಕ್ ಟಿಕ್ ಪೆನ್ನು" ಬಿಡುಗಡೆ ಆಯಿತು. ಆದರೆ ದಯವಿಟ್ಟು ಕಳುಹಿಸಿ, ಎಂದಿದ್ದೆ. ನೆನ್ನೆ ಬಂತು. ಬಂದ ಮೂರ್ನಾಲ್ಕು ಗಂಟೆಗಳಲ್ಲಿ ಓದಿ ಮುಗಿಸಿದೆ. ಒಂದು ರೀತಿಯಲ್ಲಿ ಮೂರ್ನಾಲ್ಕು ಕಾದಂಬರಿಗಳನ್ನು ಓದಿದ ತೃಪ್ತಿ ಸಿಕ್ಕಿತು.

ಸುಮ್ಮನೆ ಕುತೂಹಲಕ್ಕೆ ಕತೆಯೊಂದರ ಭಾಗವನ್ನು ಉಲ್ಲೇಖಿಸುತ್ತೇನೆ:

"ಜಾನೆಟ್ಟಳ ಸವಾಲೆಸೆಯುವ ದೇಹಸಂಪತ್ತು, ಸೋಲೇ ಕಾಣದ ರತಿ ಉತ್ಸಾಹದ ನೆನಪಾದರೆ. ಛೇ, ಅದನ್ನು ಬಿಟ್ಟುಬಿಡಲು ಸಾಧ್ಯವೆ ಎನಿಸಿ ಆತಂಕಗೊಳ್ಳುತ್ತೇನೆ. ಕೈಗಳಲ್ಲಿ ಜಾನೆಟ್ಟಳ ಬಿಗಿಯಾದ ತುಂಬಿದ ಮೊಲೆಗಳಿರುವಾಗ, ಬೆತ್ತಲೆ ತೊಡೆಗಳು ಬೆಸೆದುಕೊಂಡು ಸುಖಿಸಲು ತಹತಹಿಸಿ ಉಕ್ಕುತ್ತಿರುವ ದೇಹ ಜ್ವರವೇರಿದಂತೆ ಬಿಸಿಯಾಗಿ ನಡುಗುತ್ತಿರುವಾಗ ಕಠೋಪನಿಷತ್ತಿನ ನಚಿಕೇತ ನೆನಪಾಗುವುದಿಲ್ಲ. ಮೃತ್ಯುದೇವತೆ ನಚಿಕೇತನ ಸಂಯಮ, ಶ್ರದ್ಧೆ, ನಿರ್ವಿಕಾರ, ನಿರ್ಲಿಪ್ತಿ, ನಿರ್ಮೋಹಗಳನ್ನೆಲ್ಲ ಹೊಗಳಿದ್ದೆಲ್ಲ ರಿಲವಂಟ್ ಎನಿಸುವುದಿಲ್ಲ, ಬದುಕಿಗೆ."

ಕತೆಗಳಲ್ಲಿ ಕತೆ ಮತ್ತು ಘಟನೆಗಳಿಗಿಂತ ವಿವರವೆ ಹೆಚ್ಚಾದರೆ ನನಗೆ ಅದು ಅಷ್ಟೇನೂ ತಟ್ಟುವುದಿಲ್ಲ. ಮತ್ತೆ ಕತೆ ಎಲ್ಲಿ ಪ್ರಾರಂಭವಾಗುತ್ತೆ ಎಂದು ಹುಡುಕುವ ಸ್ವಭಾವ. ಆದರೆ, ಈ ಪುಸ್ತಕದಲ್ಲಿ ಹಲವಾರು ಕಡೆ ಇರುವ ಇಂತಹ ವಾಕ್ಯಗಳು ಬಹಳ ಗಮನ ಸೆಳೆದವು: "ಅಲ್ಲಿ ವಿರಹದ ನೆನಪುಗಳಲ್ಲಿ ಅದ್ದಿತೆಗೆದಂತಿದ್ದ ಭಾವವೇ ಒಂದು ಹಾಡಾಗಿ, ಮನದ ನೋವೇ ಒಂದು ನಾದವಾಗಿ, ಬೆಂದ ಎದೆಯಿಂದಲೇ ಹೊರಟ ರಾಗದ ಬಳ್ಳಿಗೆ ಸುರುಳಿ ಸುತ್ತಿಕೊಂಡ ಭಾಷೆಯ ಆಯ್ದ ಶಬ್ದಗಳಲ್ಲಿ ಸಂಕಟಗಳೆಲ್ಲ ಭಗ್ನಪ್ರೇಮದ ಆಲಾಪನೆಯಾಗುತ್ತಿರಲು ಇವನ ಎದೆ ಕರಗತೊಡಗಿತ್ತು."

ನನಗೆ ವಿಮರ್ಶೆಯ ಪರಿಭಾಷೆ ಗೊತ್ತಿಲ್ಲದೆ ಇರುವುದರಿಂದ ಅದನ್ನು ಮಾಡಲಾರೆ. ಆದರೆ, ಓದುಗನ ಕಲ್ಪನೆಯನ್ನು ಕೆರಳಿಸುವಂತಹ ಕತೆಗಳಿವು. ಎಷ್ಟಕ್ಕೊ ಮುಕ್ತಾಯದ ವಾಕ್ಯ ವಿವರಣೆಗಳಿಲ್ಲ; ಆದರೆ ತಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಕಲ್ಪಿಸಿಕೊಂಡರೆ ಮುಕ್ತಾಯ ಸಿಗುತ್ತದೆ. ಲೇಖಕರು ಎಲ್ಲಿಯೂ ವಾಚಾಳಿಯಾಗಿಲ್ಲ. ಇನ್ನು ಕೆಲವು ಕತೆಗಳ ಹಂದರ, ಎಂಟತ್ತು ಪುಟಗಳಲ್ಲಿ ನಡೆಯುವ ಘಟನೆಗಳು ಒಂದಿಡೀ ಕಾದಂಬರಿಯಲ್ಲಿ ಬರಬಹುದಾದಷ್ಟು. ಹಾಗಾಗಿಯೆ ನಾನು ಈ ಮೇಲೆ ’ಮೂರ್ನಾಲ್ಕು ಕಾದಂಬರಿಗಳನ್ನು ಓದಿದ ತೃಪ್ತಿ ಸಿಕ್ಕಿತು,’ ಎಂದಿದ್ದು. ನರೇಂದ್ರರು ಬಳಸಿರುವ ಕಥಾಶೈಲಿ ಮುಂದೇನಾಗುತ್ತದೆ ಎನ್ನುವುದಕ್ಕಿಂತ ಹಿಂದೇನಾಯಿತು ಎನ್ನುವ ಕುತೂಹಲ ಕೆರಳಿಸುತ್ತಿರುತ್ತದೆ.

ಕತೆಗಳ ಬಗ್ಗೆ ಹೇಳಲು ನನ್ನಲ್ಲಿ ಇನ್ನೂ ಅನೇಕವಿವೆ. ಆದರೆ, ನರೇಂದ್ರರನ್ನು ವೈಯಕ್ತಿಕವಾಗಿ ತಿಳಿದಿರುವುದರಿಂದ ಅವರ ಬಗ್ಗೆಯೆ ಒಂದಷ್ಟು ಬರೆಯುತ್ತೇನೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಕೆ. ಸತ್ಯನಾರಾಯಣರ ಮಾತೊಂದನ್ನು ಉಲ್ಲೇಖಿಸಿ ಮುಂದುವರೆಯುತ್ತೇನೆ: "ತಾನು ಎಷ್ಟೇ ಬರೆದರೂ ಅದಕ್ಕಿಂತ ವಿಶಾಲವಾದ ಬದುಕು ತನ್ನೆದುರಿಗಿದೆ ಎಂಬ ವಿನಯ ಮತ್ತು ಅಸಹಾಯಕತೆ ಕೂಡ ಅವರ ಕತೆಗಳಲ್ಲಿ ಕಾಣುತ್ತದೆ." ಅಪಾರವಾಗಿ ಓದುವ, ತಮ್ಮ ವಾರಿಗೆಯ ಕೆಲವು ಸಾಹಿತಿಗಳನ್ನು ಅಷ್ಟೇ ಅಪಾರವಾಗಿ ಗೌರವಿಸುವ ಮತ್ತು ಪ್ರೀತಿಸುವ ನರೇಂದ್ರರು ತಮಗಿಷ್ಟವಾದವರನ್ನು ಬೆರಗಾಗಿ ನೋಡುವುದನ್ನು ಸ್ವಲ್ಪ ಕಮ್ಮಿ ಮಾಡಿಕೊಂಡು ಬರೆಯಲು ಕುಳಿತರೆ ಅನೇಕ ಕತೆ-ಕಾದಂಬರಿಗಳನ್ನು ಸುಲಭವಾಗಿ ಬರೆಯಬಲ್ಲರು ಎನ್ನಿಸುತ್ತದೆ. ಇಲ್ಲಿ ನಾನು ಇನ್ನೂ ಚೆನ್ನಾಗಿ ಬರೆಯಬಹುದು ಎನ್ನುತ್ತಿಲ್ಲ. ಯಾಕೆಂದರೆ ಅವರು ಸಮರ್ಥವಾಗಿ, ಚೆನ್ನಾಗಿಯೇ ಬರೆಯುತ್ತಾರೆ. ಆದರೆ ಈ ಮೇಲೆ ಹೇಳಿದ [ವಿನಯ ಮತ್ತು ಅಸಹಾಯಕತೆಯ(?)] ಬೆರಗಿನಿಂದಾಗಿ ಮತ್ತು ಬಹುಶಃ ತನ್ನ ಮೆಚ್ಚಿನ ಕತೆಗಾರರಿಗೆ ಹೋಲಿಸಿದರೆ ನಾನಿನ್ನೂ ವಿದ್ಯಾರ್ಥಿ ಎಂಬ ಅನಗತ್ಯ ಕಲ್ಪನೆಯಲ್ಲಿ ಹೆಚ್ಚು ಬರೆಯುತ್ತಿಲ್ಲ ಎನ್ನಿಸುತ್ತದೆ.

ಇನ್ನು, ಅವರು ಹೆಚ್ಚಿಗೆ ಬರೆಯಲೇಬೇಕು ಎನ್ನುವುದಕ್ಕೆ ನನ್ನಲ್ಲಿ ಬಲವಾದ ಕಾರಣಗಳಿವೆ. ಬೆಂಗಳೂರಿನ ಮತ್ತು ಕರ್ನಾಟಕದ ಮಧ್ಯಮವರ್ಗದ ಜನರಲ್ಲಿ ಹೆಸರು ಪಡೆಯುತ್ತಿರುವ ಒಂದಷ್ಟು ಕನ್ನಡದ ಕತೆಗಾರರು ನನಗೆ ಗೊತ್ತು. ಆದರೆ ಅವರ್ಯಾರಿಗೂ ಇಲ್ಲದ ಕಡು ನಿಷ್ಠುರತೆ ಮತ್ತು ಆಕ್ಟಿವಿಸಮ್ ನರೇಂದ್ರರಿಗಿದೆ. ಯಾವುದು ಸರಿ ಮತ್ತು ಯಾವುದು ತಪ್ಪು, ಹಾಗೂ ಸರಿಯಾದುದನ್ನು ’ಪೊಲಿಟಿಕಲಿ ಕರೆಕ್ಟ್’ ಆಗಿಲ್ಲದಿದ್ದರೂ ಹೇಳುತ್ತೇನೆ ಎನ್ನುವ ಛಲ ಮತ್ತು ಧೈರ್ಯ ಅವರಲ್ಲಿದೆ. ಸಮಾಜ ಏನನ್ನು ತಿಳಿದುಕೊಳ್ಳಬೇಕು ಎನ್ನುವ ಸ್ಪಷ್ಟ ತಿಳುವಳಿಕೆಯಿದೆ. ಮತ್ತು, ರಾಜಿಯಾಗದ ಸೈದ್ಧಾಂತಿಕ ಬದ್ದತೆಯಿದೆ. ಹಾಗೆಯೆ, ಅವರು ನಿಸ್ವಾರ್ಥವಾಗಿ, ಎಲೆಮರೆಯಾಗಿ ದುಡಿಯುವುದನ್ನೂ, ಮತ್ತು ಸರಿ ಕಂಡದ್ದನ್ನು ಸ್ವಯಂ‍ಪ್ರೇರಣೆಯಿಂದ ಬೆಂಬಲಿಸುವುದನ್ನು ವೈಯಕ್ತಿಕವಾಗಿ ಕಂಡಿದ್ದೇನೆ. ಹಾಗಾಗಿಯೆ, ಸದ್ಯದ ಜಾತಿ-ಮತ-ಭಾಷಾ-ಪ್ರಾಂತಾವಾರು ಮೂಲಭೂತವಾದ ಮತ್ತು ಸಂಕುಚಿತತೆಯೆ ಒಂದು virtue ಆಗಿ ಬದಲಾಗಿರುವ ಈ ಸಂದರ್ಭದಲ್ಲಿ ಇವರಂತಹವರು ನನಗೆ ಈಗಾಗಲೆ ಸ್ಥಾಪಿತರಾಗಿರುವ ಅನೇಕ ಬರಹಗಾರರಿಗಿಂತ ಮುಖ್ಯರಾಗುತ್ತಾರೆ.

ಸಾಮಾಜಿಕ ವಿಷಯಗಳ ಮೇಲೆ, ತಾವು ಓದಿದ ಪುಸ್ತಕಗಳ ಬಗ್ಗೆ ನರೇಂದ್ರರು ಬರೆದಿರುವ ಅನೇಕ ಲೇಖನಗಳು ಈಗಾಗಲೆ ಅಂತರ್ಜಾಲದಲ್ಲಿವೆ.
ಸಂಪದದಲ್ಲಿರುವ ಅವರ ಬ್ಲಾಗ್:
http://www.sampada.net/user/narendra

ಮತ್ತೊಂದು: "ಓದುವ ಹವ್ಯಾಸ"

ಅವರು ಇತ್ತೀಚೆಗೆ ವಿವೇಕ್ ಶಾನಭಾಗರೊಂದಿಗೆ ಸಂಪದಕ್ಕಾಗಿ ನಡೆಸಿದ ಆಡಿಯೊ ಸಂದರ್ಶನ:
http://sampada.net/podcasts/9/Vivek-Shanbag

ಕಥಾ ಸಂಕಲನಕ್ಕೆ ರಘು ಅಪಾರ ಬಿಡಿಸಿರುವ ಮುಖಪುಟ ಚಿತ್ರ:

ಶೀರ್ಷಿಕೆಯ ಬಗ್ಗೆ ನಂತರ ಬರೆಯುತ್ತೇನೆ ಎಂದಿದ್ದೆ. 'ನೀವು "ಟಕ್ ಟಿಕ್ ಪೆನ್ನು" ಓದಿದರೆ....' ಎಂದಷ್ಟೇ ಹೇಳಿ, ಈಗ ಅಲ್ಲಿಗೇ ನಿಲ್ಲಿಸುತ್ತೇನೆ!!

ಮುಗಿಸುವ ಮುನ್ನ, ತಮ್ಮ ಕಥಾಸಂಕಲವನ್ನು ಹೊರತಂದಿರುವ ನರೇಂದ್ರರಿಗೆ ಖುಷಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ರವಿ...

Ornamental seperator
  • ravikreddy ರವರ ಬ್ಲಾಗ್
  • Login or register to post comments
  • 348 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 9, 2008 - 3:18pm — narendra

ಉ: ಮದುವೆಯಾಗದವರ ತೊಳಲಾಟ, ಸಮಜಾಯಿಷಿ, ಜವಾಬ್ದಾರಿ, ಮತ್ತು ಸ್ವಾತಂತ್ರ್ಯಗಳ ಸ್ವಗತ...

narendra's picture

ಆತ್ಮೀಯ ರವಿ,
ನನ್ನದೇ ಪುಸ್ತಕದ ಬಗ್ಗೆ ನೀವು ಉಲ್ಲೇಖಿಸಿ ಬರೆದಿದ್ದು ಓದಿ ಖುಶಿಯಾಯಿತು. ಇವತ್ತಿನ ಸೂಪರ್ ಫಾಸ್ಟ್ ದಿನಗಳಲ್ಲಿ ಕಾದಂಬರಿಗಳ ಸತ್ವವನ್ನು ಕತೆಗಳು ಹೊತ್ತು ಬರಬೇಕು ಅಂತ ನನಗನಿಸುತ್ತಿತ್ತು. ಆದರೆ ನನಗೇ ಈ ಕತೆಗಳಿಗಿಂತ ಕಾದಂಬರಿಗಳನ್ನು ಓದುವುದು ಇಷ್ಟ. ಸಣ್ಣಕತೆಗಳು ಕೆಲವೊಮ್ಮೆ ಏನನ್ನೂ ಕೊಡುವುದಿಲ್ಲ ಎನ್ನುವುದು ನನ್ನ ಅನುಭವ.

ಇನ್ನು ನಾನಿನ್ನೂ ವಿದ್ಯಾರ್ಥಿ ಎಂಬ ಭಾವ ನನ್ನಲ್ಲಿ ಇರುವುದು ಆರೋಗ್ಯಕರ ಲಕ್ಷಣ ಎಂದುಕೊಂಡಿದ್ದೇನೆ. ಇದನ್ನು ಹಿಂಜರಿಕೆ ಎಂದಾಗಲೀ, ಇದರಿಂದಾಗಿ ನಾನು ಕಡಿಮೆ ಬರೆದೆ ಎಂದಾಗಲೀ ತಿಳಿಯಬೇಕಿಲ್ಲ ಅನಿಸುತ್ತದೆ. ನಿಜಕ್ಕಾದರೆ ನನ್ನ ಸಹವರ್ತಿಗಳನ್ನು ಮೆಚ್ಚುವಲ್ಲಿ ನಾನೂ ಕಂಜೂಸೇ! ಆದರೆ ಸುದೈವದಿಂದ ಸಾಕಷ್ಟು ಉತ್ತಮ ಬರಹಗಾರರು ನಮ್ಮ ಸುತ್ತ ಇದ್ದಾರೆ. ಸಂದೀಪ ನಾಯಕ, ಪ್ರಹ್ಲಾದ ಅಗಸನಕಟ್ಟೆ, ಸುನಂದಾ, ಸುಮಂಗಲಾ, ವಸುಧೇಂದ್ರ, ಸುರೇಂದ್ರನಾಥ್, ವಿವೇಕ, ಜಯಂತ, ರಾಘವೇಂದ್ರ ಪಾಟೀಲ್, ಲಂಕೇಶ, ಅನಂತಮೂರ್ತಿ, ಖಾಸನೀಸ, ಎಸ್.ದಿವಾಕರ, ಸತ್ಯನಾರಾಯಣ, ಶ್ರೀನಿವಾಸ ವೈದ್ಯ, ವೈದೇಹಿ, ಅಮರೇಶ ನುಗಡೋಣಿ, ಅಬ್ದುಲ್ ರಶೀದ್, ಎಚ್.ನಾಗವೇಣಿ, ಕಾಗಿನೆಲೆ, ಎಂ.ಎಸ್.ಶ್ರೀರಾಮ್, ಕೇಶವ ಮಳಗಿ, ರಘುನಾಥ ಚ.ಹ.,ಅಶೋಕ ಹೆಗಡೆ, ಟಿ.ಜಿ.ರಾಘವ, ಬಾಳಾಸಾಹೇಬ ಲೋಕಾಪುರ, ಚಂದ್ರಕಾಂತ ಕುಸನೂರು, ಬಿ.ಎಂ.ಬಶೀರ್, ಎಂ.ವ್ಯಾಸ, ಶ್ರೀಧರ ಬಳಗಾರ, ಅಲಕಾ ತೀರ್ಥಹಳ್ಳಿ....ವಾಹ್! ಇವರನ್ನೆಲ್ಲ ಮೆಚ್ಚದೇ ಇರಲು ಸಾಧ್ಯವೇ ? ಇದು ಬರೇ ಸಣ್ಣಕತೆಗಳ ಲೋಕವಾಯಿತು. ಕಾವ್ಯಕ್ಕೆ, ನಾಟಕಕ್ಕೆ, ಕಾದಂಬರಿಲೋಕಕ್ಕೆ ಬಂದರೆ! ಖ್ಯಾತನಾಮರನ್ನು ಬಿಡಿ. ಕಾರಂತ, ಮಾಸ್ತಿ, ಕುವೆಂಪು, ಬೇಂದ್ರೆ, ಅಡಿಗ ಎಂದೆಲ್ಲ ಪಟ್ಟಿ ದೊಡ್ದದಿದೆ. ಇವರೆಲ್ಲ ಬರೆದಿದ್ದನ್ನು ಬರೇ ಓದಿದರೂ ಸಾಕು, ಬದುಕು ಸಂಪನ್ನವಾಗಿ ಬಿಡುತ್ತದೆ ಅನಿಸುತ್ತಿರುವಾಗ ನಾನು ಬರೆಯದಿದ್ದರೂ ಪರವಾಗಿಲ್ಲ ಎಂದು ನನಗೆ ಸಹಜವಾಗಿಯೇ ಅನಿಸುತ್ತದೆ. ನನಗೆ ನಾನೊಬ್ಬ ಕತೆಗಾರನೋ ವಿಮರ್ಶಕನೋ ಅನಿಸಿಕೊಳ್ಳುವುದಕ್ಕಿಂತ ಒಳ್ಳೆಯ ಮನುಷ್ಯನಾಗುವುದು, ಆಂತರಿಕವಾಗಿ ನಾನು ಬೆಳೆಯುವುದು ಹೆಚ್ಚು ಮುಖ್ಯವಾದದ್ದು (ಸಹಜವಾಗಿಯೇ ಎಲ್ಲರಿಗೂ ಇದು ಸತ್ಯವಾದದ್ದು, ನನ್ನದೇನೂ ವಿಶೇಷವಲ್ಲ). ಅದನ್ನು ಸಾಧ್ಯವಾಗಿಸುವುದು ಬರಹ ಮತ್ತು ಈ ಎಲ್ಲ ಓದು. ಓದಿನಿಂದ ಅದು ಸುಲಭವಾಗಿ ಸಿಗುವಾಗ ಕೊಂಚ ಸ್ವಾರ್ಥಿ ಮತ್ತು ಆಲಸಿಯಾದ ನನಗೆ ಬರೆಯುವುದು ಕಡಿಮೆ ಆಕರ್ಷಕ. ಹಾಂ, ನನ್ನ ಹೆಚ್ಚುಗಾರಿಕೆ ಎಂದರೆ ನಾನು ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ ನಿಮಗೆಲ್ಲ ಹೇಳುತ್ತಿರುತ್ತೇನೆ. ಇನ್ನು ಮುಂದೆ "ಕಡಿಮೆ ವಿಮರ್ಶೆ, ಹೆಚ್ಚು ಸರಳ" ಪಾಲಿಸಿ ಇಟ್ಟುಕೊಂಡು ಬರೆಯುತ್ತೇನೆ. ನಮ್ಮನ್ನೆಲ್ಲ ಇದು, ಈ ಓದು ಪೊರೆಯಲಿ, ಬೆಳೆಸಲಿ. ಅಂಥ ಕಸುವುಳ್ಳದ್ದು ಸಿಕ್ಕಿದರೆ ನಾನೂ ಬರೆದೇ ಬರೆಯುತ್ತೇನೆ ಮತ್ತೆ. ನೀವು ಸಮಯ, ಶ್ರಮ ಎಲ್ಲ ವ್ಯಯಿಸಿ ನನ್ನ ಪುಸ್ತಕದ ಬಗ್ಗೆ ಬರೆದಿದ್ದಕ್ಕೆ ತುಂಬ ಕೃತಜ್ಞ. ಸಾಹಿತ್ಯ ಪ್ರೀತಿಯನ್ನು ಹರಡುತ್ತ ಹೋಗಬೇಕು, ಅದು ಅದರ ಉದ್ದೇಶ. ಆದರೆ ಏನಾಗುತ್ತಿದೆ ಎನ್ನುವುದು ನಿಮಗೂ ಗೊತ್ತಲ್ಲ!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
  • "ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು
  • ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
  • 2006 ರಲ್ಲಿ ಬರೆದಿರುವ ಅಂಕಣ ಲೇಖನಗಳು ಹಾಗೂ ಅಡಿಗರ ನೆನಪು...
  • ರಶೀಧರ 'ಬ್ಲಾಗಂಬರಿ'
Syndicate content

ಲೇಖಕರು

ravikreddy's picture

ಪೂರ್ಣ ಹೆಸರು
ರವಿ ಕೃಷ್ಣಾ ರೆಡ್ಡಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
  • ತೆರೆದ ಕಣ್ಣು
  • ಅನುಭವ
  • ಮುಕ್ತಿ
  • ಏಂತಹ ಹೊಸತು ಈ ದಿವಸ....
  • ಅತ್ಯಾಚಾರ ಮತ್ತು ಕಾರಣಗಳು
  • ಚುನಾವಣಾ ಭವಿಷ್ಯ
  • ಅನಿಸಿಕೆ
  • ಡ್ರೈವರ್‌ ಎಂಬ ಆಪತ್ಬಾಂಧವ
  • ಕೊರತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 11:28pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:10pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:06pm
  • uniquesupri
    ಉ: ಚುನಾವಣಾ ಭವಿಷ್ಯ
    May 9, 2008 - 10:59pm
  • prasannasp
    ಉ: ಸಣ್ಣ ಟ್ರಿಪ್
    May 9, 2008 - 10:47pm
  • hamsanandi
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 9:30pm
  • hamsanandi
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 9:25pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 8:41pm
  • smurthygr
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 9, 2008 - 8:23pm
  • smurthygr
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 8:00pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator