ವಿಶ್ವಮಾನವ - ಕನ್ನಡದೊಳ್ ಭಾವಿಸಿದ ಜನಪದಂ
'ವಿಶ್ವಮಾನವ' ಎಂದಾಕ್ಷಣ ನಮಗೆ ನೆನಪಾಗುವುದು ನಮ್ಮ ರಾಷ್ಟ್ರಕವಿ ಶ್ರೀಕುವೆಂಪು. 'ಮನೆಯನೆಂದೂ ಕಟ್ಟದಿರು, ನೆಲೆಯನೆಂದೂ ಮುಟ್ಟದಿರು, ನೀ ಅನಂತವಾಗಿರು,' 'ಓ ನನ್ನ ಚೇತನ, ಆಗು ನೀ ಅನಿಕೇತನ', 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು', ಎಂದು ಕರೆ ನೀಡುವ ಮೂಲಕ ಇಡೀ ಕನ್ನಡ ವಿಶ್ವಕ್ಕೆ 'ವಿಶ್ವಮಾನವ' ಸಂದೇಶವನ್ನು ನೀಡಿದ ಈ ಶತಮಾನದ ಸಾಹಿತ್ಯ ಶಿಖರ ಅವರು. ಅವರ 'ವಿಶ್ವಮಾನವ' ಸಂದೇಶವನ್ನು ನಾವೆಲ್ಲರೂ ನಡೆ,ನುಡಿಯಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಹಾಗಾಗಿ, ಜಾತಿ, ಮತ, ಧರ್ಮ ಎಲ್ಲಾ ಜೊಳ್ಳುಗಳ ಹೊಟ್ಟು ತೂರಿ 'ವಿಶ್ವಮಾನವ'ನಾಗುವ ನನ್ನ ಪ್ರಯತ್ನದ ಒಂದು ಅಭಿವ್ಯಕ್ತಿಯೇ ಈ ಜಾಲತಾಣ.
ಹಾಗೆಯೇ, ತಮ್ಮ ಉನ್ನತ ಬದುಕಿನ ಮೂಲಕ ಮಾನವ ಕುಲಕ್ಕೇ ಬೆಳಕು ತೋರಿದ ಬುದ್ಧ, ಮಹಾವೀರ, ಅಲ್ಲಮ, ಬಸವರಾದಿಯಾಗಿ, ನಮ್ಮೆಲ್ಲಾ ವಚನಕಾರರು, ಆಧುನಿಕ ಭಾರತದ ಸಂತರೆಂದೇ ಹೇಳಬಹುದಾದ ಶ್ರೀರಾಮಕೃಷ್ಣ, ಶ್ರೀರಮಣ, ಶ್ರೀ ಅರವಿಂದರು, ಶ್ರೀ ಸ್ವಾಮಿ ವಿವೇಕಾನಂದರು, ಜಿಡ್ಡು ಕೃಷ್ಣಮೂರ್ತಿ, ಗಾಂಧಿ, ಓಶೋ ಮುಂತಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ನನ್ನ ಅನುಭವಕ್ಕೆ ಬರುವುದರಲ್ಲಿ ನಾನು ಅಭಿವ್ಯಕ್ತಗೊಳಿಸಬಹುದಾದವನ್ನು ಸಹೃದಯ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನವಾಗಿ ರೂಪುಗೊಂಡಿರುವ ಈ ಬ್ಲಾಗನ್ನು ಸಮಸ್ತ ಕನ್ನಡ ಬಾಂಧವರಿಗೆ ಅರ್ಪಿಸುತ್ತಿದ್ದೇನೆ.
ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
"ಇಲ್ಲೇ ಸ್ವರ್ಗ, ಇಲ್ಲೇ ನರಕ, ಬೇರೇನಿಲ್ಲಾ ಸುಳ್ಳು, ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು" ಅಂಥ 80ರ ದಶಕದ ಒಂದು ಫಿಲಾಸಫಿಕಲ್ ಕನ್ನಡ ಹಾಡೊಂದಿದೆ. ಕೇಳಿದ್ದೀರಾ?
ಸ್ವರ್ಗ ನರಕಗಳು, ದೇವರು ದೆವ್ವಗಳು ಎಲ್ಲವೂ ಮನುಷ್ಯನ ಕಲ್ಪನೆಗಳು ಎಂಬುದು ಸತ್ಯವೇ ಆದರೂ, ಇಲ್ಲ ಅದೆಲ್ಲವೂ ನಿಜವಾಗಿಯೂ ಇದೆ ಎಂದು ನಂಬುವ ಮಾನವರ ಸಂಖ್ಯೆಯೇ ಹೆಚ್ಚು. ಆದರೆ, ನೋಡಿರುವವರು ಯಾರಾದರನ್ನು ನೀವು ಬಲ್ಲಿರಾ?
ಅಂತಹ ಒಬ್ಬನು ಇಲ್ಲಿದ್ದಾನೆ, ಓದಿ ತಿಳಿದುಕೊಳ್ಳಿ.
ಇದೇನೂ ಒಂದಾನೊಂದು ಕಾಲದಲ್ಲಿ ನಡೆದ ಕತೆಯಲ್ಲ. ತುಂಬಾ ಲೇಟೆಸ್ಟು.
ಆ ಮನುಷ್ಯ ತಾನು ಸತ್ತು ನರಕಕ್ಕೆ ಹೋಗಿದ್ದನ್ನ ಹೇಗೆ ವಿವರಿಸ್ತಾನೆ ಅಂತ ಕೇಳೋಣ ಬನ್ನಿ. 'ಅವನು' ಯಾರಾದರೂ ಆಗಿರಬಹುದು.
ನನಗೊಮ್ಮೆ ಸಾವಿನ ಬಯಕೆಯುಂಟಾಯಿತು. ಸರಿ ನೋಡೇ ಬಿಡುವಾ ಎಂದುಕೊಂಡು ಧೈರ್ಯದಿಂದ ಪ್ರಾಣ ತ್ಯಜಿಸಿದೆ. ಬದುಕಿದ್ದಾಗ ಸಾಕಷ್ಟು ಎಲ್ಲಾ ಮನುಷ್ಯರ ಹಾಗೆ ಸಾಕಷ್ಟು 'ಪುಣ್ಯ'ದ ಕೆಲಸ ಮಾಡಿದ್ದೆ ಅದನ್ನು ಕೇಳಿದರೆ, ನೀವು ಕೂಡ ನನ್ನಷ್ಟೇ ಪುಣ್ಯವನ್ನು ಗಳಿಸಿಕೊಂಡುಬಿಡುತ್ತೀರಿ. ಆ ಕಾರಣಕ್ಕಾಗಿ ಅದನ್ನೆಲ್ಲಾ ವಿವರಿಸಹೋಗದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ.
ಸತ್ತವನೇ ಸೀದಾ "ಯಮಲೋಕ"ಕ್ಕೆ ತೆರಳಿದೆ. ಏನಾಶ್ಚರ್ಯ ನಾನು ಭೂಲೋಕದಲ್ಲಿದ್ದಾಗಲೂ ಸಹ ನನ್ನ ದೇಶ ಭಾರತ ಬಿಟ್ಟು ಯಾವ ದೇಶಕ್ಕೂ ಹೋದವನಲ್ಲ. ಅಂತಹಾ ದೇಶಪ್ರೇಮ ನನ್ನದು ಅಂತಹದರಲ್ಲಿ ಇಲ್ಲಿ ಒಂದೊಂದು ದೇಶದವರಿಗೆ ಒಂದೊಂದು "ನರಕ" ಇದೆಯಂತೆ. ಇಲ್ಲೂ ಕೂಡ ಗಡಿವಿವಾದಗಳು ಉಂಟಾಗ್ತವೋ ಏನೋ ವಿಚಾರಿಸಬೇಕು. ಅಂದಹಾಗೆ ಈ "ನರಕ" ಎಂದರೆ ಏನು ಎಂಬುದು ತಮಗೆ ತಿಳಿದಿದೆಯೇ? ಅದು ಇಂಗ್ಲೀಶ್ ನಲ್ಲಿ ಎರಡು ಪದ ಸೇರಿಸಿ ಒಂದು ಪದ ಮಾಡ್ತಾರಲ್ಲಾ ಅಂಥದ್ದು. ನನಗೆ ಗೊತ್ತಿರೋ ಕನ್ನಡ ವ್ಯಾಕರಣದ ಪ್ರಕಾರ 'ಸಂಧಿ'. ಹೇಗೆ ಅಂತೀರಾ? ನರ ಲೋಕ ಸಂಧಿಯಾಗಲು ಸೇರಿದಾಗ, 'ಲೋ' ಅನ್ನೋದು ಲೋಪ ಆಗಿ 'ನರಕ' ಅನ್ನೋ ಸಂಧಿಯಾಗಿದೆ ಗೊತ್ತಾ? ಯಾಕೋ ನಮ್ಮ ದೇಶದ ರಾಜಕಾರಣಿಗಳ ಹಾಗೆ, ಭಾಷಣ ಕೊಡೋದಕ್ಕೆ ಶುರು ಮಾಡ್ಬಿಟ್ನಾ? ಏನು ಮಾಡೋಕಾಗುತ್ತೆ, ನಾನು ರಾಜಕಾರಣಿಯಾಗ್ಬೇಕು ಅಂತಾನೆ ಇದ್ದೆ ಅಷ್ಟರಲ್ಲಿ...
ಹುಂ, ಈಗ ವಿಷಯಕ್ಕೆ ಬರ್ತೀನಿ. ಇಲ್ಲಿ ಮೊದಲು ನಾನು ಹೋಗಿದ್ದು, ಹಿಟ್ಲರ್ ಆಳಿದ್ನಲ್ಲಾ, ಆ ದೇಶವಾದ ಜರ್ಮನಿ ಅನ್ನೋ ನರಕಕ್ಕೆ. ಅಲ್ಲಿಗೆ ಹೋದವನೆ ಕೇಳಿದೆ, ಇಲ್ಲಿ ಏನ್ ಮಾಡ್ತಾರೆ?
ಇಲ್ಲಿ ಮೊದಲು, ಮೊದಲು ಅವರು ಮನುಷ್ಯರನ್ನ ಎಲೆಕ್ಟ್ರಿಕ್ ಕುರ್ಚಿಗೆ ಒಂದು ಗಂಟೆ ಕಟ್ಟಿ ಹಾಕ್ತಾರೆ. ಆನಂತರ, ಮತ್ತೊಂದು ಗಂಟೆ ಮೊಳೆಗಳ ಮಂಚದ ಮೇಲೆ ಮಲಗಿಸ್ತಾರೆ ಅಂದ್ರು. ಆಗಂದಿದ್ದೆ, ನನಗೆ 'ಮಹಾಭಾರತ'ದ ಭೀಷ್ಮನ ಶರಶಯ್ಯೆಯೂ, ನನ್ನ ನೆಚ್ಚಿನ ಕವಿಗಳಾದ ಶ್ರೀ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ "ಯಾವ ಮೋಹನ ಮುರಳಿ ಕರೆಯಿತು..."ಪದ್ಯದ "ಮೊಳೆಯ ಧರೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ" ನೆನಪಾಗಿ ಕಣ್ಣೀರ ಕೋಡಿ ಹರಿಯಿತು. ಅವರು ಮುಂದುವರಿದು ಹೇಳಿದ್ರು, ಆನಂತರ ಜರ್ಮನ್ ದೆವ್ವ ಬಂದು ಇನ್ನುಳಿದ ದಿನವಿಡೀ ಹೊಡೆಯುತ್ತೆ ಅಂದ್ರು. ಆಗ ಅದು ಹಿಟ್ಲರ್ ಇರಬೇಕು ಅನ್ಸಿ ಭಯವಾಯ್ತು.
ಅದಕ್ಕೆ ನಾನು ಮುಂದಕ್ಕೆ ಹೋದೆ, ಅಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ ಮುಂತಾದ ದೇಶಗಳ ನರಕ ಸಿಕ್ತು....ಆದರೆ, ಅವೆಲ್ಲವೂ ಜರ್ಮನ್ ನರಕದ ಪ್ರತಿರೂಪದಂತೆ ಇದ್ದವು.
ಆಗ ಬೇಜಾರಾಗಿ, ಏನೇ ಆಗಲಿ, ನಮ್ಮ ದೇಶಾನೆ ಸರಿ. ಅಲ್ಲಿ ಇನ್ನೂ ಕರುಣೆ, ಅನುಕಂಪ ಉಳಿದುಕೊಂಡಿದೆ ಅಂದುಕೊಂಡು ಅಲ್ಲಿಗೇ ಹೋದೆ. ಆದರೆ, ಅಲ್ಲಿ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುವಂತೆ ಒಂದು ದೊಡ್ಡ ಸಾಲು ನಿಂತಿತ್ತು. ಇದೇನಪ್ಪಾ, ನರಕದಲ್ಲೂ ಸಾಲೇ..ಅಂತ ನಂಗೆ ಬೇಜಾರಾಯಿತು. ಏನೂ ಮಾಡೋಕಾಗೊಲ್ಲ, ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ ಅಂತ ಸಮಾಧಾನ ಪಟ್ಟುಕೊಂಡು, ಅಲ್ಲಿ ಹೋಗಿ ಒಬ್ಬರನ್ನು ಕೇಳಿದೆ.
ಆತ ಹೇಳಿದ, ಮೊದಲು ಅವರು ಮನುಷ್ಯರನ್ನ ಎಲೆಕ್ಟ್ರಿಕ್ ಕುರ್ಚಿಗೆ ಒಂದು ಗಂಟೆ ಕಟ್ಟಿ ಹಾಕ್ತಾರೆ. ಆನಂತರ, ಮತ್ತೊಂದು ಗಂಟೆ ಮೊಳೆಗಳ ಮಂಚದ ಮೇಲೆ ಮಲಗಿಸ್ತಾರೆ ಅಂದ್ರು. ಆನಂತರ ಭಾರತೀಯ ದೆವ್ವ ಬಂದು ಇನ್ನುಳಿದ ದಿನವಿಡೀ ಹೊಡೆಯುತ್ತೆ ಅಂದ್ರು. ಆಗ ನಮ್ಮ ದೇಶದಲ್ಲಿ ಯಾರೂ ಹಿಟ್ಲರ್ ತರ ಸರ್ವಾಧಿಕಾರಿಗಳು ಇಲ್ವಲ್ಲ ಎಂದುಕೊಂಡು, ಇಲ್ಲಿಯೂ ಯಾಕೆ ಅದೇ ತರ ಶಿಕ್ಷೆ, ಆದರೆ ಅಂತಹ ಶಿಕ್ಷೆ ಅನುಭವಿಸೋದಕ್ಕೆ ಯಾಕೆ ಇಷ್ಟು ದೊಡ್ಡ ಸಾಲು ಅಂತ ಅನುಮಾನ ಸುರುವಾಗಿ, ಕೇಳೇಬಿಟ್ಟೇ.
ಅದಕ್ಕೆ ಅವರು, ಇಲ್ಲಿಯ ನಿರ್ವಹಣೆ ಹೇಗಿದೆ ಅಂದರೆ, ಎಲೆಕ್ಟ್ರಿಕ್ ಕುರ್ಚಿ ಕೆಲಸ ಮಾಡೋದಿಲ್ಲ, ಯಾರೋ ರಾತ್ರೋ ರಾತ್ರಿ ಹಾಸಿಗೆಯಿಂದ ಮೊಳೆಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಆ ಮೇಲೆ ಇಲ್ಲಿ ಕರ್ತವ್ಯ ನಿರ್ವಹಿಸೋ ಅಧಿಕಾರಿ ಮಾಜಿ ಸರಕಾರಿ ಸೇವಕ, ಅದಕ್ಕೆ ಆತ ದಿನಾಲೂ ಬರ್ತಾನೆ, ರಿಜಿಸ್ಟರ್ ಗೆ ಸೈನ್ ಹಾಕ್ತಾನೆ, ಆ ಮೇಲೆ ಯಥಾಪ್ರಕಾರ ಕ್ಯಾಂಟೀನ್ ಗೆ ಹೋಗಿಬಿಡ್ತಾನೆ, ಅದಕ್ಕೆ ಇಲ್ಲಿ ಇಷ್ಟು ದೊಡ್ಡ ಸಾಲು ಅಂತ ಹೇಳಿದ್ರು. ಇದನ್ನು ಕೇಳಿ ನಂಗಂತೂ ಹೋದ ಜೀವ ಮರಳಿ ಬಂದ ಹಾಗೆ ಆಯ್ತು. ಶಿಕ್ಷೆಯಿಂದ ಹೇಗಾದ್ರೂ ಪಾರಾಗ್ಬೇಕು ಅಂದುಬಿಟ್ಟು, ಆತನನ್ನು ಕಂಡು ಜೇಬಿಗೆಒಂದಷ್ಟು ಸೇರಿಸಿದ್ರೆ, ಇಲ್ಲಿಂದ ಪಾರಾಗ್ಬೋದು! ಯಾಕಂದ್ರೆ, ನಾನು ಯಾವಾಗ್ಲೋ ಇಲ್ಲಿಗೆ ಬರಬೇಕಿತ್ತು. ಅಲ್ಲಿ ಭೂಲೋಕದಲ್ಲಿ ಲಂಚ ಕೊಟ್ಟಿದ್ದಕ್ಕೆ ಇಷ್ಟು ತಡವಾಯ್ತು,ಎಷ್ಟೇ ಆಗಲಿ ನಮ್ಮ ದೇಶದವರು ತಾನೇ? ಅಲ್ಲಿಯೇ ನಡೆಯುತ್ತೆ ಅಂದ್ಮೇಲೆ...

- shashikannada ರವರ ಬ್ಲಾಗ್
- Login or register to post comments
- 310 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ತುಂಬ ಹಾಸ್ಯಾಸ್ಪದವಾಗಿ ಬರ್ದಿದ್ದೀರ... englishನಲ್ಲಿ ಇದನ್ನು ಓದಿದ್ದೆ ಆದ್ರು ಕನ್ನಡದಲ್ಲಿ ನೀವು ಚೆನ್ನಾಗಿ ವರ್ಣಿಸಿದ್ದೀರಿ.
ಉ: ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ಪ್ರಿಯ ನೀತಾ,
ನಮಸ್ಕಾರ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಎಷ್ಟೇ ಆಗಲಿ ನಮ್ಮ ಮನಸ್ಸು ಕನ್ನಡದಲ್ಲೇ ಅಲ್ವಾ ಯೋಚಿಸೋದು? ಅದಲ್ದೆ ನಾವು ಭಾಷಾಂತರ ಮಾಡಬಾರ್ದು. ಕನ್ನಡೀಕರಣಗೊಳಿಸ್ಬೇಕು. ನಂಗೆ ಇದಕ್ಕಿಂತ ಖುಶಿ ಕೊಟ್ಟಿದ್ದು ಅಂದ್ರೆ, ಅಗಸ ಮತ್ತವನ ಮೂರ್ಖ ಕತ್ತೇ ಕತೆಯ ರೀಮೇಕ್.
ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://www.sampada.net/blog/shashikannada/02/07/2008/9658.
ನನ್ನ ಗೆಳೆಯರು ಅದನ್ನ ತುಂಬಾ ಮೆಚ್ಚಿಕೊಂಡ್ರು. ನಮ್ ಮೈಸೂರು ಕಡೆಯೋರ್ಗೆ ಅದು ಇನ್ನೂ ತುಂಬಾ ಇಷ್ಟವಾಗ್ತದೆ. ಯಾಕಂದ್ರೆ, ಅಲ್ಲಿ ಬಳಸಿರೋ ಭಾಶೆ ನಮ್ ಮೈಸೂರು ಪ್ರಾಂತ್ಯದಲ್ಲಿ ಹಳ್ಳಿ ಕಡೆ ಮಾತಾಡೋ ಭಾಶೆ. ಒಂದು ರೀತೀಲಿ ದೇವನೂರ ಮಹಾದೇವರ "ಕುಸುಮ ಬಾಲೆ" ಅದಕ್ಕೆ ಸ್ಫೂರ್ತಿ ಅನ್ಬೋದು. ಸಾಮಾನ್ಯವಾಗಿ ಗಂಭೀರವಾದ ಬರವಣಿಗೆಯಲ್ಲಿ ತೊಡಗೋ ನನಗೆ ಅದರಿಂದ ಆಚೆ ಬರುವಂತೆ ಮಾಡಿದ್ದು ಆ ಲೇಖನ. ಆದ್ರೆ, ಯಾರೂ ಅದಕ್ಕೆ ಪ್ರತಿಕ್ರಿಯೆ ನೀಡ್ಲಿಲ್ಲ. ನೀವು ಓದಿ ಪ್ರತಿಕ್ರಿಯೆ ನೀಡ್ತೀರಲ್ವ?
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ಆಹಾ! ಎಂಥಾ ನರಕ ದರ್ಶನ ಮಾಡಿಸಿದಿರಿ ಶಶಿ, ಇನ್ನು ಸಾವಿಗೆ ಹೆದರೊಲ್ಲ ಬಿಡಿ ನಾನು! ಜೈ ಭಾರತ ಮಾತೆಯ ಮಕ್ಕಳ ನರಕಕ್ಕೆ. ಹಾಗು ನಿಮಗೆ!
ಜಯಲಕ್ಷ್ಮೀ.ಪಾಟೀಲ್.
ಉ: ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ನಮಸ್ಕಾರ,
ನಮ್ಮಂತವರ ಲೇಖನಗಳಿಗೆಲ್ಲಾ ಓದಿ ಪ್ರತಿಕ್ರಿಯಿಸ್ತೀರ. ನಿಜಕ್ಕೂ ನಿಮಗೆ ನನ್ನ ನನ್ನಿ. ನಿಮ್ಮಂತಹವರ ಪ್ರತಿಕ್ರಿಯೆಯೇ ನಮ್ಮ ಬರವಣಿಗೆಗೆ ಸ್ಫೂರ್ತಿ. ಆದ್ರೆ, ನನಗ್ಯಾಕೆ ಜೈ ಹೇಳಿದ್ರಿ ಅಂತ ಗೊತ್ತಾಗ್ಲಿಲ್ಲ!
ವಿಶ್ವಾಸದೊಂದಿಗೆ,
ಶಶಿ
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ಹೇ, ಏನಿದು, "ನಮ್ಮಂತವರ ಲೇಖನಗಳಿಗೆಲ್ಲ ಓದಿ ಪ್ರತಿಕ್ರೀಯಿಸ್ತೀರಾ"ಅಂದ್ರೆ ಏನರ್ಥ!? ನಾನು ಸಂಪದದವಳಲ್ಲವಾ?ಅಥವಾ ನೀವು ಸಂಪದ ಬಳಗಕ್ಕೆ ಸೇರಿಲ್ಲವಾ? ನಾವೆಲ್ಲ ಒಂದೆ ಅಲ್ವಾ? ನಾವೆಲ್ಲ ಪರಸ್ಪರ ಬರಹಗಳಿಗೆ (of course ನಮಗಿಷ್ಟವಾದ ಬರಹಗಳಿಗೆ) ಪ್ರತಿಕ್ರೀಯಿಸಿದರೆ ಎಲ್ಲರಿಗೂ ಅದು ಸ್ಪೂರ್ತಿಯೆ ತಾನೆ(ನೋಡಿದ್ರಾ ನನ್ನ ಸ್ವಾರ್ಥ ಹೇಗಿದೆ ಅಂತ!)ಇಷ್ಟ ಆದ್ರೆ ಮೆಚ್ಚುಗೆ ವ್ಯಕ್ತ ಪಡಿಸೋಣ, ಕಷ್ಟ ಆದ್ರೆ ಹೀಗ್ಯಾಕೆ ಅಂತ ಕೇಳೋಣ.
ನಿಮಗೆ ಜೈ ಹೇಳಿದ್ದು ನನಗೆ ಅಂಥ ಒಳ್ಳೆಯ ನರಕದ ದಾರಿ ತೋರಿಸಿದ್ದಕ್ಕೆ!! ;೦)
ಜಯಲಕ್ಷ್ಮೀ.ಪಾಟೀಲ್.