ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಕವನ ಕವಿತೆ ಬರೆವುದನ್ನು ಕಲಿಯಿರಿ.
ಹೋದ ವಾರ teach yourself writing poetry ಕೊಂಡಿದ್ದೆ . ಕೆಲವು ಭಾಗ ನೋಡಿದೆ. ಪೂರ್ತಿ ಓದಲಿಲ್ಲವಾದರೂ ಅಲ್ಲಿನ ಕೆಲವು ವಿಚಾರ ಹೇಳುವೆ.
೧. ಕವಿತೆಯನ್ನು ಬರೆವುದನ್ನು ಕಲಿಯಬಹುದು. ಹುಟ್ಟಾಪ್ರತಿಭೆ ಇರಲೇಬೇಕೆಂದಿಲ್ಲ.
೨. ಮೊದಲು ಇತರರು ಬರೆಯುವುದನ್ನು ಓದಬೇಕು . ( ಇದನ್ನು ನಮ್ಮ ಕವಿಗಳು ಮಾಡುತ್ತಿಲ್ಲ!- ಇನ್ನೊಬ್ಬರದನ್ನು ಓದಲೇಬಾರದು ಎಂದು ಬಹುತೇಕ ಕವಿಗಳು ಪ್ರತಿಜ್ಞೆ ಮಾಡಿದಂತಿದೆ!)
೩. ಮೊದಲು ಅನುಕರಣೆ ಮಾಡಿ(ಮೊದಲಿಗೆ ತಪ್ಪಲ್ಲ.), ನಂತರ ನಿಮ್ಮತನ ಕಂಡುಕೊಳ್ಳಬಹುದು.
೪. ಕಡೇಪಕ್ಷ ನಿಮ್ಮ ಪದ್ಯ ಒಳ್ಳೆಯ ಗದ್ಯವಾಗಿರಬೇಕೆಂಬುದನ್ನು ನೆನಪಿನಲ್ಲಿಡಿ. ( ಇದು ಕನ್ನಡದಲ್ಲಂತೂ ಬಹಳ ಮುಖ್ಯ. ಅನೇಕರು ಬರೆವ ಪದ್ಯಗಳಲ್ಲಿ ಕಾಗುಣಿತ ದೋಷಗಳೂ , ವಾಕ್ಯರಚನಾ ದೋಷಗಳೂ ತುಂಬಿ ತುಳುಕುತ್ತಿರುತ್ತವೆ)
ಮತ್ತಷ್ಟು ಓದಿದಾಗ ನಿಮಗೆ ಇನ್ನಷ್ಟು ತಿಳಿಸುವೆ!

- shreekant.mishrikoti ರವರ ಬ್ಲಾಗ್
- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಕವನ ಕವಿತೆ ಬರೆವುದನ್ನು ಕಲಿಯಿರಿ.
ನಿಮ್ಮ ಬ್ಲಾಗಿನ ಶೀರ್ಷಿಕೆ ಓದಿಯೇ ಏನೋ ಹೇಳಬೇಕೆಂದು ತೋಚಿತು. ಆದರೂ ನಿಮ್ಮ ಬ್ಲಾಗನ್ನು ಪೂರ್ತಿ ಓದಿಯೇ (ಮೊದಲು ಇತರರು ಬರೆಯುವುದನ್ನು..) ಈಗ ಬರೆಯುತ್ತಿದ್ದೇನೆ.
ನೆನ್ನೆ ತಾನೆ ಕುವೆಂಪುರವರ ಭಾಷಣ 'ವಿದ್ಯಾರ್ಥಿ ಕವಿಗಳಲ್ಲಿ' (೧೯೨೮ರ ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘದ ವಿದ್ಯಾರ್ಥಿ ಕವಿ ಸಮ್ಮೇಳನ) ಓದಿದೆ. ಅವರೂ ಈ ರೀತಿ ಹೇಳಿದ್ದಾರೆ.
"..ತರುಣರಲ್ಲಿ ಈಚೀಚೆಗೆ ಹಳೆಯ ಸಾಹಿತ್ಯವೆಂದರೆ ಒಂದು ವಿಧವಾದ ಉಪೇಕ್ಷೆ ಮೂಡುತ್ತಿದೆ...ಹಳೆಯದೆಂದರೆ ಹೊಸದರ ಬೆನ್ನುಮೂಳೆ...ಭಾಷೆಯ ಬಿಗಿ, ಶಬ್ದಗಳ ಜೋಡಣೆ, ರಚನೆಯ ವೀರಮಾರ್ಗ, ಪದಗಳನ್ನು ಆಯ್ದು, ನೆಯ್ದು, ರಸವನ್ನು ಹೊಯ್ದು, ಮನಮೋಹಿಸುವ ರಸಋಷಿಯ, ಸೌಂದರ್ಯಯೋಗಿಯ ಇಂದ್ರಜಾಲ, ಇವುಗಳೆಲ್ಲಾ ಬರ ಬೇಕಾದರೆ ಪ್ರಾಚೀನ ಸಾಹಿತ್ಯದೇವಿಯ ಚರಣತಲದಲ್ಲಿ ನಾವು ಬಹುಕಾಲ ಆಕೆಯ ಶಿಷ್ಯರಾಗಿ, ಆಕೆಯ ಭಕ್ತರಾಗಿ, ಆಕೆಯ ಮಕ್ಕಳಾಗಿ, ಶಿಷ್ಯನಂತೆ ವಿಷಯ ಸಂಗ್ರಹಿಸಿ, ಭಕ್ತನಂತೆ ಕೃಪೆಯನ್ನು ಆರ್ಜಿಸಿ, ಮಕ್ಕಳಂತೆ ಒಲ್ಮೆಯನ್ನು ಪಡೆದು, ಧನ್ಯರಾಗಿ, ದಿವ್ಯರಾಗಿ, ಸಿದ್ಧರಾಗಿ ಹೊರ ಹೊರಡಬೇಕು."
"ಕವಿಗೂ ಪದ್ಯರಚಕನಿಗೂ ತುಂಬ ಅಂತರವುಂಟು. ಭಾವ ಮೈಗೊಳ್ಳುವುದಕ್ಕೆ ಪದ್ಯರಚನಾಕೌಶಲ ಅವಶ್ಯವಾದರೂ, ಅದು ಕವಿತೆಯ ಅತ್ಯಂತ ಮುಖ್ಯಾಂಗವಲ್ಲ...ಯಾವ ಪದ್ಯರಚನೆಯಲ್ಲಿ ಮಾಧುರ್ಯ, ಶಕ್ತಿ, ಋಜುಭಾವ, ವೈವಿಧ್ಯ ಮೊದಲಾದವು ತುಂಬಿ ತುಳುಕುವುವೋ ಅದನ್ನು ಕವಿತೆಯೆಂದು ಕರೆಯಬಹುದು. ಉತ್ತಮ ಕವಿತೆಗೂ ಸಾಧಾರಣ ಕವಿತೆಗೂ ಬೇಧವೇನೆಂದರೆ: ಒಂದನೆಯದರಲ್ಲಿ ಭಾವವೇ ಪ್ರಧಾನ, ಎರಡನೆಯದರಲ್ಲಿ ಸಿದ್ಧಾಂತ ಕುಶಲತೆಗಳು ಪ್ರಧಾನ!.."
"ಹೃದಯವನ್ನು ವಿಸ್ತಾರವಾಗಿಟ್ಟುಕೊಂಡು, ಹೊರಗಿನ ಬೆಳಕು ಒಳಗೆ ಬರದಂತೆ ಮನಸ್ಸಿನ ಬಾಗಿಲನ್ನು ಕಿರಿದುಮಾಡದೆ, ಮುಚ್ಚದೆ, ಬೆಳಕು ಮೂಡುವ ಕಡೆಗೆಲ್ಲಾ ತಿರುಗಿ ತಲೆಬಾಗಿ, ಶಿಷ್ಯಬುದ್ಧಿಯಿಂದ ಕಾಂತಿಯನ್ನು ಸ್ವೀಕರಿಸಿ ಕತ್ತಲೆಯನ್ನು ಹೋಗಲಾಡಿಸಿಕೊಂಡು, ಕಡೆಗೆ ನಾವೇ ಬೆಳಕಿನ ಆಗರವಾಗುವಂತೆ ಈಗಿನಿಂದಲೂ ಪ್ರಯತ್ನಿಸಬೇಕು.."
ಸುಚರ
Re: ಕವನ ಕವಿತೆ ಬರೆವುದನ್ನು ಕಲಿಯಿರಿ.- ಮರೆತ ಮಾತು
ಸುಚರರೇ
ನೀವು ಹೇಳುವುದು ಸರಿ .
ನಾನು ಓದಿ ಬರೆದದ್ದು ಕೆಲವು ಪ್ರಾಥಮಿಕ ವಿಷಯಗಳು ಅಷ್ಟೇ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಕವಿತೆ ಬರೆಯಲು ಎಲ್ಲರೂ ಪ್ರಯತ್ನಿಸಬಹುದು. ಆದರೆ,ಬರೆದದ್ದು ಕವಿತೆಯೆ...
ಸುಚರರೇ,
ನಾನು ಕವಿತೆ ಬರೆಯುವ ಆರಂಭ ಕಾಲವದು. ಶ್ರೀಯುತ ಎಚ್.ಎಸ್.ವೆಂಕಟೇಶ ಮೂರ್ತಿಯವರಿಗೆ ನಾನು ಬರೆದ ಕೆಲವು ಕವಿತೆಗಳನ್ನು ನನ್ನ ಸ್ನೇಹಿತರೊಬ್ಬರ ಮೂಲಕ ಕಳುಹಿಸಿಕೊಟ್ಟೆ. ಅವರಿಂದ ಬಂದ ಲಿಖಿತ ಉತ್ತರವಿಷ್ಟೇ- “ನೀವು ಕವಿತೆ ಬರೆಯಬಲ್ಲಿರಿ; ಅಭ್ಯಾಸ ಮುಂದುವರೆಸಿ.’’ ನನ್ನ ಅನುಭವದಲ್ಲಿ ಕವಿತೆ ಬರೆಯುವುದನ್ನು ಕಲಿಯಿರೆಂದು ಹೇಳಿ ಕಲಿಸಲಾಗುವುದಿಲ್ಲ. ಕವಿಯಾಗುವಾತನಿಗೆ ಆ ಸೂಕ್ಷ್ಮಲಯ, ಸ್ವರ ಲಾಲಿತ್ಯಗಳು ಚಂದೋಬದ್ಧತೆಯ ಒಂದಿಷ್ಟು ಸೂಕ್ಮ ಎಳೆಗಳೂ ಸಹ ಹುಟ್ಟು ಪ್ರತಿಭೆಯಿಂದ ಮೇಳವಿಸಿಯೆ ಬಂದಿರುತ್ತವೆ. ಆದ್ದರಿಂದ, ಆತನಿಗೆ ಆರಂಭದಲ್ಲಿ ಕವಿ-ಕಲಾವಿದನಾಗುವತಂಹ ಜ್ಞಾನವೊಂದಿದೆ ಎಂಬುದನ್ನು ಗುರುತಿಸಿದಾಗಲೇ ನಮ್ಮ ತಂದೆ-ತಾಯಿಗಳು ಗುರು ಹಿರಿಯರು ಪ್ರೋತ್ಸಾಹಿಸುವುದು ಸಾಧ್ಯವಾಗುತ್ತದೆ. ಆನಂತರವೇ, ಸತತ ಅಭ್ಯಾಸ, ಅಧ್ಯಯನ ಮತ್ತು ಪರಿಶ್ರಮಗಳಿಂದ ಕವಿ-ಕಲಾವಿದನಾಗಿ ಮುಂದುವರೆಯಲು ಸಾಧ್ಯ.
ಇದಕ್ಕೇ ಇರಬೇಕು: ಕವಿ ಹುಟ್ಟಿನಿಂದ ಆಗಿರುತ್ತಾನೆ; ಮೇಧಾಶಕ್ತಿ ಪುಸ್ತಕಗಳಿಂದಲೇ ಆದರೂ, ಜೀವನಾನುಭವದ ತೇಜಿಯಿಲ್ಲದೇ ಕಾವ್ಯ ರಥವು ಚಲಿಸಲಾರದೆಂದೂ ನಮ್ಮ ಹಿರಿಯ ಕವಿಗಳು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ.
ಕವಿ-ಕಲಾವಿದನಾಗುವುದು ಪೂರ್ವ ಸುಕೃತವೂ ಶಾಪವೂ ಹೌದು.
ಆದರೆ,ಕನ್ನಡದಲ್ಲಿ ಕವಿಯಾಗ ಬಾರದಂತೆ
ಶಾಪವನ್ನು ವರದಾನ ಮಾಡಿಕೊಳ್ಳವುದು ನೈಪುಣ್ಯವಂತೆ
ಅದೇ ಭುವನದ ಭಾಗ್ಯವಂತೆ! ಕವಿಗೆ ಸಾರ್ಥಕ್ಯವಂತೆ!!
ಸುಚರರೇ, ನೀವು ಹೇಳಿದಂತೆ ಭಾವವೆ ಮೊದಲು, ಶಾಸ್ತ್ರಿ-ಸಿದ್ಧಾಂತ ಕೌಶಲ ಅನಂತರ.
ನಿಮ್ಮಂತೆ ಅಭ್ಯಸಿಸಿ ಚಿಂತನೆ ಮಾಡುವವರು ವಿರಳವಾದರೂ ಎಲ್ಲಕಾಲಕ್ಕೂ ಇರುವುದರಿಂದಲೇ ನಮ್ಮ ಸಂಸ್ಕೃತಿ-ಪರಂಪರೆಯ ಮೂಲ ಬೇರನ್ನು ಕಳಚಿಕೊಳ್ಳದಂತೆಯೆ ಸಾಹಿತ್ಯ ಕಲೆಗಳು ಎಂದಿಗೂ ಅಮರವಾಗಿಯೆ ಇರುವ ಲಕ್ಷಣಗಳನ್ನು ಹೊಂದಿವೆ...
ಕವಿತೆ ಬರೆಯಲು ಎಲ್ಲರೂ ಪ್ರಯತ್ನಿಸಬಹುದು....ಆದರೆ,ಬರೆದದ್ದು ಕವಿತೆಯೆ ಎಂಬುದನ್ನು ಕಾಲವೇ ಉತ್ತರಿಸುತ್ತದೆ. ಕ್ರಮೇಣ ಸಾರಸ್ವತ ಲೋಕವೇ ನಿರ್ಧರಿಸುತ್ತದೆ; ಅದಕ್ಕೆ ಕಾಯಬೇಕು,
ರೈಟರ್ ಶಿವರಾಂ
Re: ಕವನ ಕವಿತೆ ಬರೆವುದನ್ನು ಕಲಿಯಿರಿ.
ಮಿಶ್ರಿಕೋಟಿ ಸಾರ್...
ಇಂದು ಕನ್ನಡದಲ್ಲಿ 'ಕವಿತೆ'ಯ ಬಗೆಯೇ ಮಾರ್ಪಟ್ಟಿದೆ.
ಹಿಂದೆ ಪ್ರಾಸಬದ್ಧವಾದ, ಛಂದೋಬದ್ಧವಾದ, ಉಪಮರೂಪಕಾದಿ ಅಳಂಕಾರದಿಂದ, ಕಲ್ಪನಾವಿಲಾಸದಿಂದ, ಪದಲಾಲಿತ್ಯದಿಂದ, ಮಾತಿನ ಚಮತ್ಕಾರದಿಂದ, ಕೂಡಿದವು ಹೆಚ್ಚು ಮನ್ನಣೆ ಪಡೆಯುತ್ತಿದ್ದುವು. ಜೊತೆಗೆ ಹಿಂದೆ ಕವಿತೆಯನ್ನು ಹಾಡಲು ಆಗಬೇಕು ಎಂದು ಇದ್ದಿತು.
ಆದರೆ ಇಂದಿನ ಹೊಸ ಕವಿತೆಗಳು ಹಾಗಿಲ್ಲ. ಪ್ರಾಸಗಳು, ಅತಿಯಾದ ಕಲ್ವನೆಗಳಿಗೆ ಒತ್ತು ತಗ್ಗಿ, ಇದ್ದದ್ದನ್ನು ಇದ್ದ ಹಾಗೇ ಹೇಳುವುದಕ್ಕೆ ಹೆಚ್ಚು ಒತ್ತು ಸಿಕ್ಕಿದೆ . ಇಂದು ಕವಿತೆಯ ಪದಗಳೂ ಕೂಡ ಹೆಚ್ಚು ಆಡುಮಾತಿನ ಪದಗಳು. ಇಂದಿನ ಮಂದಿಗೆ ನಿಘಂಟು ನೋಡಿ, ಸಂಧಿಸಮಾಸಗಳನ್ನು ಬಿಡಿಸುವ ಆಸಕ್ತಿಯೂ ಇಲ್ಲ, ತಾಳ್ಮೆಯೂ ಇಲ್ಲ. ಇಂದಿನವರು ಬಯಸುವುದು ತಟ್ಟೆಂದು ಅರ್ಥವಾಗುವ ಸಾಲುಗಳನ್ನು, "ನನಗೂ ಹೀಗೆ ಆಗಿತ್ತು, ಆಗಬಹುದು" ಎನ್ನಿಸುವ ಮಾತುಗಳನ್ನು.
ಇಂದು ಏನಿದ್ದರೂ ಸತ್ಯದಲ್ಲಿಯೇ ಸೌಂದರ್ಯವನ್ನು ಹುಡುಕುವ ಕಾಲ
.

======
Re: ಕವನ ಕವಿತೆ ಬರೆವುದನ್ನು ಕಲಿಯಿರಿ-ಭಾರತೀಯ ಕಾವ್ಯ ಮೀಮಾಂಸ
ಕಾವ್ಯ ಕವಿತೆಗಳ ಕಲ್ಪನೆಯೂ ಕಾಲ ಕಾಲಕ್ಕೆ ದೇಶದಿಂದ ದೇಶಕ್ಕೆ ಬದಲಾಗುತ್ತದೆಯೋ ಏನೋ , ಅಥವಾ ಆಯಾ ಭಾಷೆಗಳೂ , ಸಾಹಿತ್ಯವೂ , ಸಂಸ್ಕೃತಿಯೂ ಎಷ್ಟು ಬೆಳವಣಿಗೆ ಹೊಂದಿವೆ ಎಂಬುದನ್ನೂ ಅವಲಂಬಿಸಿರುವಂತೆ ಕಾಣುತ್ತದೆ.
ಸಿಕ್ಕರೆ - 'ಭಾರತೀಯ ಕಾವ್ಯ ಮೀಮಾಂಸೆ' - ತೀ. ನಂ. ಶ್ರೀಕಂಠಯ್ಯನವರದು ಎಂದು ಕಾಣುತ್ತದೆ. - ಓದಿ . ನನಗೆ ತಿಳಿದಷ್ಟು ಭಾಗ ಓದಿಕೊಂಡಿದ್ದೇನೆ. ! - ನೀವೂ ಹಾಗೇ ಮಾಡಬಹುದು!
ಇದು ದೇಶದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ ಎಂದು ಕೇಳಿದ್ದೇನೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಕವನ ಕವಿತೆ ಬರೆವುದನ್ನು ಕಲಿಯಿರಿ-ಭಾರತೀಯ ಕಾವ್ಯ ಮೀಮಾಂಸ
ಭಾರತೀಯ ಕಾವ್ಯ ಮೀಮಾಂಸೆ ಬರೆದವರು ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಅಂತ ವಿಕೀಪೀಡಿಯ ಹೇಳುವುದು.
ಇವರ ಇನ್ನೊಂದು ಸಾಧನೆ "ರಾಷ್ಟ್ರಪತಿ" ಎಂಬ ಪದವನ್ನು ಹುಟ್ಟಿಸಿದುದು.

======
ಕಾವ್ಯ ಕವಿತೆಗಳ ಕಲ್ಪನೆಯೂ ಕಾಲ ಕಾಲಕ್ಕೆ ದೇಶದಿಂದ ದೇಶಕ್ಕೆ ಬದಲಾಗುತ್ತದೆಯೋ
ಮಿಶ್ರಕೋಟಿ ಸಾರ್,
ಇಂಗ್ಲೀಷು ಬಳಸುವ ಎಲ್ಲ ದೇಶಗಳ ಹೊಸತಿರುವ ಬರೆವಣಿಗೆಗಳು ಒಂದೇ ನಿಟ್ಟಿನಲ್ಲಿ ಹೋಗುತ್ತಿದೆ ಅಂತ ಹೇಳುವವರು ಇದ್ದಾರೆ. ಇದಕ್ಕೆ ನಮ್ಮ ಕನ್ನಡ ಪೇಪರುಗಳು, ಇಂಗ್ಲೀಷು ಪೇಪರುಗಳ ಮಾದರಿಯಲ್ಲಿ ಬರುತ್ತಿರುವುದು ಅದನ್ನು ತೋರಿಸುವುದು.
ಇನ್ನು ಹಿಂದೆ ಬರೆದಿದ್ದನ್ನೇ ಇಂದು ಬರೆಯುವವರು ಇದ್ದೇ ಇರುತ್ತಾರೆ. ಅದೆಷ್ಟು ರಾಮಾಯಣ, ಮಹಾಭಾರತ ಬಂದಿದೆಯೋ ಆ ಕಡವಳಂಗೆ ಗೊತ್ತು.
ಒಟ್ಟಿನಲ್ಲಿ ಕಾಲ ಕಾಲಕ್ಕೆ ವಿಚಾರ ಬದಲಾದರು, ಇಂದು ದೇಶದಿಂದ ದೇಶಕ್ಕೆ ವಿಚಾರದಲ್ಲಿ ಹೋಲಿಕೆ ಹೆಚ್ಚುತ್ತಿದೆ, ಅಂತ ನನ್ನ ಅನಿಸಿಕೆ.
======
