ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ?
ಹಾಸ್ಯ ಸಾಹಿತಿ ಶ್ರೀಯುತ ಅ.ರಾ.ಸೇ. ಅವರ ಲೇಖನಗಳೆಂದರೆ ನನಗೆ ಪಂಚ ಪ್ರಾಣ. ಸುಮಾರು ೨೫ ವರ್ಷಗಳಿಂದ ಅವರ ಲೇಖನಗಳನ್ನು ಗಮನಿಸುತ್ತಿದ್ದೇನೆ. ಪ್ರಜಾವಾಣಿ/ಉದಯವಾಣಿ ದೀಪಾವಳಿ ಮತ್ತು ಸುಧಾ ಉಗಾದಿ ವಿಶೇಷಾಂಕ ಕೈಗೆ ಬಂದ ಕೂಡಲೇ ಪರಿವಿಡಿಯಲ್ಲಿ ಅವರ ಹೆಸರು ಹುಡುಕಿ ಆ ಪೇಜಿಗೆ ಹೋಗುತ್ತಿದ್ದೆ . ( ಈ ತರಹ ಇನ್ನೊಂದು ನಾನು ಹುಡುಕುತ್ತಿದ್ದ ಹೆಸರು ಶ್ರೀ ಕೇ. ಫ. ಅವರದು . ಅವರ ಲೇಖನಗಳು ಬಿಡಿ ಬಿಡಿಯಾಗಿ ಆಗಾಗ ಸುಧಾ , ತುಷಾರಗಳಲ್ಲಿ ನೋಡಿದ್ದುಂಟು . ಅವೆಲ್ಲವನ್ನು ಕತ್ತರಿಸಿಟ್ಟುಕೊಂಡಿದ್ದೇನೆ. ಈಗ ನಿಮಗೆ ಪ್ರಿಸಂ ಅಥವಾ ಅಂಕಿತ ಪ್ರಕಾಶನದವರು ( ಅಥವಾ ಅಪರಂಜಿ?) ಪ್ರಕಟಿಸುತ್ತಿರುವ ಹಾಸ್ಯಸಾಹಿತ್ಯದಲ್ಲಿ ಸಿಗಬಹುದು . ಅವರದು ಒಂದು ಧಾರಾವಾಹಿ ಹಾಸ್ಯ ಕಾದಂಬರಿ ತುಷಾರದಲ್ಲಿ ಸೊಗದಿರುಳು-ನಲ್ವಗಲು ಎಂಬ ಹೆಸರಿನಲ್ಲಿ ಬಂದಿತ್ತು . ನಾನು ಕತ್ತರಿಸಿಟ್ಟುಕೊಳ್ಳಲಿಲ್ಲ. 'ನಗೆಮುಗಿಲು' ಎಂಬ ಕವಿತೆಗಳ ಸಂಕಲನದ ಹೊರತಾಗಿ ಬೇರೆ ಪುಸ್ತಕ ಬಂದದ್ದು ನನಗೆ ಗೊತ್ತಿಲ್ಲ . ( ಯಾರಿಗಾದರೂ ಗೊತ್ತಿದ್ದರೆ ತಿಳಿಸಿ) .
'ನಗೆ ಮುಗಿಲು' ಅನಿರೀಕ್ಷಿತವಾಗಿ ನನಗೆ ಧಾರವಾಡದಲ್ಲಿ ನನಗೆ ಬರೀ ನಾಲ್ಕು ರೂಪಾಯಿಗೆ ಸಿಕ್ಕಿತು . ಅದರಲ್ಲಿ ನಾನು ನೋಡಿದ ಕವನವೊಂದರ ಸಾಲುಗಳು ಹೀಗಿವೆ . ನೆನಪಿನಲ್ಲಿ ಉಳಿದ , ಎಂದೂ ಮರೆಯಲಾಗದ ಸಾಲುಗಳನ್ನು ಇಲ್ಲಿ ಬರೆಯುತ್ತಿದ್ದೇನೆ .
ಮರೆವೆನೆಂತು ಭರಮಸಾಗರವನು ?
ಅಲ್ಲಿ ಸೊಳ್ಳೆಗಳ ಮಧುರ ಝೇಂಕರವನು ?
( ಅಲ್ಲಿ ತೇಲಿ ಬರುವ ಮಿರಚಿಯ ಪರಿಮಳವನು? - ಇದು ನಾನು ಸೇರಿಸಿಕೊಳ್ಳುವ ಸಾಲು!)
ಮೂಕರ್ಜಿಯ ಬರೆದೇ ಪುರವ ಕಟ್ಟಿದ ಪ್ರಮುಖರಲ್ಲುಂಟು....
ಹೋಟಲು ಚಹವ ಕುಡಿದೇ ಹೊಲವ ಮಾರಿದವರಲ್ಲುಂಟು ...
ರಾಮನೆಂತು ವನದಿ ಅಯೋಧ್ಯೆಯ ನೆನೆನೆನೆದು ಅತ್ತನೋ ,
ಪಂಪನೆಂತು ಬನವಾಸಿಯ ನೆನೆದನೋ ...
( ಅಂತು ನಾನು ನೆನೆವೆ ಭರಮಸಾಗರವನು )...
ಅವರ ಬರವಣಿಗೆಯ ಶೈಲಿ ತುಂಬ ಚೆನ್ನಾಗಿದೆ ... ಇನ್ನಷ್ಟನ್ನು ಇನ್ನೊಮ್ಮೆ ಬರೆಯುವೆ.

- shreekant.mishrikoti ರವರ ಬ್ಲಾಗ್
- Login or register to post comments
- 609 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಅ ರಾ ಸೇ
ಅ ರಾ ಸೇ ಎಂದು ನೀವು ನನ್ನನ್ನು ಮತ್ತೆ ಭರಮಸಾಗರಕ್ಕೆ ಒಯ್ದೇಬಿಟ್ಟಿರಿ!
ನಾನು ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುವ ನೆಪದಲ್ಲಿ ಅಂಡಲೆಯುತ್ತಿದ್ದಾಗ, ಅರಾಸೇಯವರ ಮನೆಗೆ ಹೋಗುತ್ತಿದ್ದೆ. ಅವರ ಪರಿಚಯ ನನಗೆ ಭರಮಸಾಗರ ಕವನದ ಮೂಲಕ ಆಗಿತ್ತಾದರೂ ಅವರನ್ನು ಕಣ್ಣಾರೆ ಕಂಡಿದ್ದು ಕಣಜನಹಳ್ಳಿ ನಾಗರಾಜ್ ಎಂಬ ಈಗ ಮರೆತೇಹೋಗಿರುವ ಕನ್ನಡದ ಪ್ರಮುಖ ಕವಿಮಿತ್ರರ ಮೂಲಕ. ಅವರಿಬ್ಬರೂ ಆಧ್ಯಾತ್ಮದಾಹಿಗಳು!
ಅರಾಸೇಯವರ ಆ ಪುಟ್ಟ ಮನೆಯಲ್ಲಿ ನನಗೆ ಕಂಡುಬಂದ ಹೃದಯವೈಶಾಲ್ಯ, ಅವರ ಮಾತುಗಳಲ್ಲಿ ಎಂದೆಂದೂ ಮರೆಯಾಗದ ಜೀವನಪ್ರೀತಿ ಎಲ್ಲವೂ ಈಗ ನಿಮ್ಮ ಮಾತು ಓದಿದ ಮೇಲೆ ಮತ್ತೆ ಮತ್ತೆ ನೆನಪಾಗುತ್ತಿದೆ. ಊಟ ಮಾಡುವಾಗಲೂ ಅವರು ಎಷ್ಟು ಪ್ರೀತಿಯಿಂದ ಮಾತನಾಡುತ್ತಿದ್ದರು....
ಒಮ್ಮೆ ನಾನು ಅವರು ಸಂಜೆಯಾದ ಮೇಲೆ ಚಹಾ ಕುಡಿಯಲೆಂದು ಮುಖ್ಯರಸ್ತೆಯ ಹೋಟೆಲ್ಲಿಗೆ ಹೋಗುತ್ತಿದ್ದೆವು. ಆಗ ಅವರು ಸಡನ್ನಾಗಿ `ಸುದರ್ಶನ,ನಿನ್ನ ಹೃದಯವು ಬೆಣಚುಕಲ್ಲಿನದೆ?' ಎಂದು ಕೇಳಿದರು. `ಹಾಗೇನಿಲ್ಲ' ಎಂದೆ. `ಅಲ್ಲ ಮಾರಾಯ, ನಿನ್ನ ವಯಸ್ಸಿನ ಎಷ್ಟೋ ಹುಡುಗರ ಹೃದಯವು ಬೆಣಚುಕಲ್ಲಿನದು. ಹ್ಯಾಗೆ ಚೂರುಚೂರಾಗುತ್ತೆ ಗೊತ್ತ?' ಎಂದು ಕಣ್ಣು ಮಿಟುಕಿಸಿದರು.
ಅವರು ನನಗೆ ಹೇಳಿದ ಪ್ರೀತಿಪೂರ್ವಕ ಮಾತುಗಳು, ನಾನು ಹತಾಶೆಯ ಮಡುವಿನಲ್ಲಿ ಬಿದ್ದಿದ್ದಾಗ ನನ್ನನ್ನು ಎತ್ತಿದ ಬಗೆ, ತಾವೇ ಸ್ವತಃ ಕಷ್ಟದ, ಮಾನಸಿಕ ಒತ್ತಡಗಳ ನಡುವೆ ಇದ್ದರೂ ಎಂದೂ ಬದುಕಿನೆದುರು ಸೀದಾಸಾದಾ ತೆರೆದುಕೊಂಡ ಬಗೆ, ಎಲ್ಲವೂ ಅವರನ್ನು ನನ್ನ ಆಧ್ಯಾತ್ಮಿಕ ಗುರುಗಳ ಸ್ಥಾನದಲ್ಲಿ ಇರಿಸಿದೆ. ಇಂದೂ ಅವರು ನನ್ನ ನೆನಪಿಟ್ಟಿದ್ದಾರೆ ಎಂದು ನಾನು ಇತ್ತೀಚೆಗೆ ಕಣಜನಹಳ್ಳಿಗೆ ಹೋಗಿ ನಾಗರಾಜರನ್ನು ಭೇಟಿ ಮಾಡಿದಾಗ ತಿಳಿಯಿತು. ಈ ನಾಗರಾಜ್ ಕೂಡಾ ನನ್ನ ಬದುಕಿನ ಮೇಲೆ ಪ್ರಭಾವ ಬೀರುತ್ತಲೇ ಇರುವ ಅಪೂರ್ವ ವ್ಯಕ್ತಿ. ಅವರು ಇತ್ತೀಚೆಗೆ ಬರೆದ `ಅeತ ಅವಧೂತರು' ಪುಸ್ತಕವನ್ನು ಸಿವಿಜಿ ಪಬ್ಲಿಕೇಶನ್ಸ್ ಪ್ರಕಟಿಸಿದೆ. ಎಳಗೆರೆ ಕೃಷ್ಣಶಾಸ್ತ್ರಿಯವರು ಉಲ್ಲೇಖಿಸಿದ ಇಚ್ಛಾಮರಣಿ ಗುಜ್ಜಾರಪ್ಪನವರ ಬಗ್ಗೆ ಹೆಚ್ಚಿನ ಮಾಹಿತಿಯಲ್ಲದೆ ನಾವು ಎಂದೂ ಕೇಳರಿಯದ ವ್ಯಕ್ತಿಗಳ ಮಾಹಿತಿ ಅದರಲ್ಲಿದೆ.
ಅರಾಸೇಯವರು ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದ ಅಪರೂಪದ ವ್ಯಕ್ತಿ. ಅವರು ಹಾಸ್ಯಲೇಖಕರೇನೋ ಹೌದು. ಆದರೆ ಅದಕ್ಕಿಂತ ಹೆಚ್ಚಾಗಿ ಅವರು ಆಧ್ಯಾತ್ಮ ಚಿಂತಕರು ಎನ್ನುವುದು ಹಲವರಿಗೆ ಗೊತ್ತಿಲ್ಲ.
ಲಾರಿಯ ಮರ್ಮರಗಳ ನಡುವೆಯೇ ಇಂದಿಗೂ ಬದುಕನ್ನು ಬಂದಹಾಗೆ ಪ್ರೀತಿಸುತ್ತಿರುವ ಅರಾಸೇಯವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು. ಈ ಬಾರಿ ರಜೆಯಲ್ಲಿ ಖಂಡಿತ ಅವರ ಮನೆಗೆ ಭೇಟಿ ನೀಡುವೆ...