ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !
ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು.
ಮುಂಬೈಗೆ ನಿನ್ನೆ ಮಾನ್ಸೂನು ಆಗಮಿಸಿತು . ರಾತ್ರಿ ಬಹಳ ಮಳೆ ಆಯಿತು, ಮಧ್ಯಾಹ್ನ ಕೂಡ ಆಯಿತು. ಮೊಬೈಲುಗಳಲ್ಲಿ ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಹಳ ಮಳೆಯಾಗಲಿದೆ ಎಂಬ ಎಚ್ಚರಿಕೆ ಸಂದೇಶಗಳು ಹರಿದಾಡಿದವು. ನಾನು ಕಚೇರಿಯಿಂದ ಹೆಂಡತಿಗೆ ಫೋನ್ ಮಾಡಿ ಕೇಳಿದೆ ಏನು ಸುದ್ದಿ ? ಎಂದು . ಟೀವಿಯಲ್ಲಿ ಸತತ ವಾರ್ತೆಯ ವಾಹಿನಿಗಳಿಂದ ಏನಾದರೂ ಸುದ್ದಿ ಸಿಗುವದೇನೋ ಎಂದು .
ಅವಳು ಹೇಳಿದಳು ' ಹೌದು ; ಹೋದ ವರುಷದ ಹಾಗೆಯೇ ಈ ಸಲವೂ ಮಳೆಯಾಗುವದು'
'ಯಾರು ಹೇಳಿದರು ? ಯಾವ ಚಾನೆಲ್ನಲ್ಲಿ? '
' ಟೀವಿಯಲ್ಲಿ ಅಲ್ರೀ? ಕೆಲಸದವಳು ಹೇಳಿದಳು. - ಹಾಂ ಹಾಂ ಭಾಭೀಜಿ , ಐಸಾ ಹಿ ಹೋನೆವಾಲಾ ಹೈ- ಅಂತ '
' ಅವಳಿಗೆ ಯಾರು ಹೇಳಿದರಂತೆ? '
' ಅವಳಿರೋ ಜೋಪಡಪಟ್ಟಿಯಲ್ಲಿ ಎಲ್ಲರೂ ಹೇಳುತ್ತಿದ್ದಾರಂತೆ'
ನೋಡಿದಿರಾ ? ಬಹುಶ: ಅವರಿಗೇ ಹೆಚ್ಚಿಗೆ ಗೊತ್ತೋ ಏನೋ? ನಮ್ಮ ಹವಾಮಾನ ಇಲಾಖೆಯವರಿಗಿಂತ? ಅವರಿಗೆ ನೆಲಕ್ಕೆ ಕಿವಿ ಇರುತ್ತೇನೋ ?
ಇವತ್ತೇ ಮುಂಜಾನೆ ಒಂದು ಜನಪದ ಕಥೆ ಓದಿದೆ. ( ಮುಂಬೈಯಲ್ಲಿರುವ ಭಾರತೀಯ ಸಾಹಿತ್ಯ ಅಕಾಡೆಮಿಯಲ್ಲಿ ಮೊನ್ನೆ ಖರೀದಿ ಮಾಡಿದ ಕನ್ನಡ ಪುಸ್ತಕಗಳಲ್ಲಿ ಒಂದಾದ ' ಉತ್ತರ ಕರ್ನಾಟಕದ ಜನಪದ ಕಥೆಗಳು' ಪುಸ್ತಕದಲ್ಲಿ) ಕತೆಯ ಹೆಸರು - ಶಿವಪಾರ್ವತಿಯರ ಸೋಲು .
ಕಥೆ ಸಂಕ್ಷೇಪದಲ್ಲಿ ಹೀಗಿದೆ . ಒಬ್ಬ ಕುರುಬ ಒಂದು ಹಳ್ಳದ ದಂಡೆಯಲ್ಲಿ ಕುರಿಗಳಿಗೆ ವಸತಿಯನ್ನೇರ್ಪಡಿಸ ತೊಡಗುತ್ತಾನೆ.ಅಲ್ಲಿ ಶಿವಪಾರ್ವತಿ ಬಂದು " ಇಲ್ಲೇಕೆ? ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತುಂಬಿ ಬರುವದಿಲ್ಲವೇ? " ಎಂದು ಕೇಳುತ್ತಾರೆ .
"ಮಳೆ ಹೋಯಿತು ತನ್ನ ನಾಡಿಗೆ ಮೂರು ತಿಂಗಳು" ಕುರುಬ ಬೀರ ಹೇಳುವ.
ಶಿವಪಾರ್ವತಿಯರು ಅಲ್ಲಿಂದ ವರುಣನ ಹತ್ತಿರ ಹೋಗಿ 'ಈಗಲೇ ಮಳೆರಾಯನನ್ನು ಕಳಿಸಿಕೊಡು ' ಎಂದರೆ ' ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ , ಅವನು ಬರುವದು ಮೂರು ತಿಂಗಳ ಬಳಿಕ ' ಎನ್ನುವ.ಶಿವಪಾರ್ವತಿಯರ ಮುಖಗಳು ಬಾಡಿ ಕೈಲಾಸಕ್ಕೆ ವಾಪಸು ಹೋದರು.
ಕುರುಬ , ಕುರಿ ಹಾಯಾಗಿ ಅಲ್ಲಿ ಮೂರು ತಿಂಗಳು ಕಳೆದರು.
ಆಗ ಶಿವಪಾರ್ವತಿಯರು ಮತ್ತೆ ಅಲ್ಲಿ ಬಂದರು. ಬೀರ ತನ್ನ ವಸತಿಯನ್ನು ಕೀಳುತ್ತಿದ್ದಾನೆ. ಶಿವಪಾರ್ವತಿಯರು ಅವನನ್ನು ಏಕೆಂದು ಕೇಳುತ್ತಾರೆ.
'ಮಳೆರಾಯ ಬರುವನಲ್ಲವೇ ನಮ್ಮ ನಾಡಿಗೆ ಈಗ?' ಬೀರನ ಮರುನುಡಿ.
ಶಿವಪಾರ್ವತಿಯರು 'ಬೀರನಿಗೆ ಎಷ್ಟು ಸೊಕ್ಕು ? ಮಳೆ ಬರುವದೆಂದು ಏತರ ಮೇಲಿಂದ ಖಚಿತವಾಗಿ ಹೇಳುತ್ತಾನೆ?' ಎಂದು ಅಂದುಕೊಂಡು ವರುಣನ ಬಳಿಗೆ ಹೋಗಿ ಹೇಳುತ್ತಾರೆ. ' ಮಳೆರಾಯನನ್ನು ಮರಳಿ ಕರೆಸು'
ವರುಣ ಬಿನ್ನಯಿಸಿದನು -' ಆ ಹೊತ್ತು ನೀವು ಹೇಳಿದಂತೆ ಅವನನ್ನು ಇವತ್ತೇ ಅತ್ತ ಕಡೆ ಕಳಿಸಿದ್ದೇನೆ. ಮೋಡಗಳು ಮುಂದೆ ಮುಂದೆ , ಸಿಡಿಲು, ಮಿಂಚುಗಳು ಹಿಂದೆ ಹಿಂದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ? ಕೊಟ್ಟ ಹುಕುಮು ಅವರ ಕೈಯಲ್ಲಿದೆ. '
ಆ ಮಾತು ಕೇಳಿ ಶಿವಪಾರ್ವತಿಯರು ಅಂದುಕೊಂಡರು - ನಾವಿಂದು ಕುರುಬನಿಗೆ ಸೋತೆವು'

- shreekant.mishrikoti ರವರ ಬ್ಲಾಗ್
- Login or register to post comments
- 786 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಧನ್ಯವಾದ
ಸಂಪದಕ್ಕೆ ಸೇರಿದ ಹೊಸತರಲ್ಲಿ, ಮಿಶ್ರಿಕೋಟಿಗಳ ಬರಹಗಳನ್ನು ತಪ್ಪದೆ ಓದುತ್ತಿದ್ದೆ. ಅವರ ಗಾದೆಗಳ ಪಟ್ಟಿ ಮತ್ತು ಜೆನ್ ಕಥಾಮಾಲೆ ಇಂದಿಗೂ ನೆನಪಿದೆ.
ಈಗೇಕೋ ಅವರ ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ. ಅವರು ಇನ್ನು ಹೆಚ್ಚು ಬರೆಯಲಿ ಎಂದು ನನ್ನ ಹಾರೈಕೆ ಮತ್ತು ಕೋರಿಕೆ.
ಧನ್ಯವಾದಗಳೊಂದಿಗೆ,
ಮಹೇಶ
ಉ:ಕಾರಣಗಳು : ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ.
ಮಹೇಶರೆ ,
ಕಾರಣಗಳು : ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ.
೧.ತಲೆ ಖಾಲಿ . ಈವರೆಗೆ ತುಂಬಿಕೊಂಡ ತಲೆಯನ್ನು ಸಂಪದದಲ್ಲಿ ಬರೆದು ಖಾಲಿ ಮಾಡಿಕೊಂಡಿದ್ದೇನೆ - ತುಂಬಿ ತುಂಬಿದ ಹಾಗೆ ಮತ್ತೂ ಬರೆಯುವೆ.( ಓದುಗರಿದ್ದಾರೆ ಅದೇ ಸಂತೋಷ) ತುಂಬಿಕೊಳ್ಳುವದು ಸ್ವಲ್ಪ ನಿಧಾನ.
೨. ಸೋಮಾರಿತನ- ಒಂದೊಂದೆ ಅಕ್ಷರ ಹುಡುಕಿ ಟೈಪು ಮಾಡಬೇಕಾದ್ದರಿಂದ ಸಾಧ್ಯವಾದಷ್ಟೂ ಅತೀ ಕಡಿಮೆ ಅಂದರೆ ಅತಿ ಅಗತ್ಯವಿದ್ದಷ್ಟು ಮಾತ್ರ; ಕಡಿಮೆ ಯತ್ನ ಹೆಚ್ಚು ಲಾಭ (ಹಣದ್ದು ಅಂತಲ್ಲ) ಇರಬೇಕು . ಸೋಮಾರಿತನವೇ ಪ್ರೊಗ್ರಾಮ್ಮರ್( ನಾನೂ ಒಬ್ಬ..) ಗಳಿಗಿರಬೇಕಾದ ಸದ್ಗುಣ ಅಂತೆ ! ( ಈ ಬಗ್ಗೆ ಇನ್ಯಾವಾಗಲಾದರೂ!)
೩. ಟೀಕೆಗಳಿಗೆ ಹೆದರುವೆ. !
೪. ಪದಪರೀಕ್ಷಕದ ಕೆಲಸದಲ್ಲಿ ತೊಡಗಿರುವೆ. ಹಟ ಬಿಡದ ತ್ರಿವಿಕ್ರಮನಂತೆ!
ನಿಮ್ಮ ಅಸಕ್ತಿ, ಹಾರೈಕೆ , ಕೋರಿಕೆಗಳಿಗೆ ಧನ್ಯವಾದಗಳು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಶ್ರೀಕಾಂತ್ ರವರಿಗೆ
ಶ್ರೀಕಾಂತ್ ರವರಿಗೆ,
ಮಹೇಶ್, ಹೇಳಿದಂತೆ ಬರವಣಿಗೆ ಕಡಿಮೆಯಾಯಿತೆಂದು ನನಗೂ ಅನ್ನಿಸುತ್ತಿದೆ.
'ಮಹಾ' ವಿಶೇಷಣ
ಶ್ರೀಕಾಂತ್:
ನೀವೆಂದಂತೆ, ಟಿವಿಯಲ್ಲಿ ಮಹಾಭಾರತ ಬಂದ ನಂತರ ಈ 'ಮಹಾ' ವಿಶೇಷಣ ಜಾಸ್ತಿಯಾದದ್ದು ಹೌದು. RIN detergent cakeಗೆ ಸಹ ರಿನ್ 'ಮಹಾ' ಬಾರ್ ಎಂಬ ಜಾಹೀರಾತು ಬರುತ್ತಿದ್ದದ್ದು ನನಗೆ ನೆನಪಿದೆ.
ಆದರೆ, 'ಮಹಾ' ಒಂದು ಮಜಾ ಆಗಿ ಅದಕ್ಕಿಂತ ಮೊದಲೇ ಇತ್ತು ಎಂದು ನನ್ನ ಅಂಬೋಣ. ಸಂಧ್ಯಾವಂದನೆ ಮಾಡುವಾಗ ತಿಪ್ಪಾಭಟ್ಟರು ಬೇಕಂತಲೇ, "ಕೇಶವ ಏನು ಮಹಾ, ನಾರಾಯಣ ಏನು ಮಹಾ, ಮಾಧವ ಏನು ಮಹಾ...' ಎಂದು ತನ್ನ ಪ್ರತಿಸ್ಪರ್ಧಿ ಪುರೋಹಿತರಾದ ಕೇಶವಭಟ್ಟ, ನಾರಾಯಣಭಟ್ಟ, ಮಾಧವಭಟ್ಟ ಇತ್ಯಾದಿಯವರ ಮೇಲೆ 'ಮಂತ್ರಕ್ಕಿಂತ ಜಾಸ್ತಿ ಉಗುಳು'ತ್ತಿದ್ದರಂತೆ!
-ಶ್ರೀವತ್ಸ ಜೋಶಿ
ವಕ್ರೋಕ್ತಿ
ವಕ್ರೋಕ್ತಿಯ ಶ್ರೀವತ್ಸ ಜೋಶಿಗಳು ಬಹಳ ದಿನಗಳ ನಂತರವಾದರೂ, ಸಂಪದದಲ್ಲಿ ಬರೆದಿರುವುದು ಅತೀವ ಸಂತಸದ ಸುದ್ದಿ.
ಸ್ವಾಮಿ ಇಂತಹ ವಕ್ರೋಕ್ತಿಗಳನ್ನು ಇಲ್ಲಿ ಇನ್ನು ಹೆಚ್ಚಾಗಿ ಬರೆದು ನಮ್ಮ (ವಕ್ರ?)ಬುದ್ಧಿಯನ್ನು
ಹೆಚ್ಚುವಂತೆ ಮಾಡಿ.
ಸವಿಯೊದಗೆ,
ಮಹೇಶ