```ಮಳೆ ಹೊಯ್ಯುತಿದೆ```
ನಿನ್ನೆ ಸಂಜೆ, ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವುದು..ಆಹ್!
ಮಳೆ ಬಂದ ದಿನ ಮನಸ್ಸು ಪ್ರಫುಲ್ಲ! ವರ್ಷಧಾರೆಗೆ ಮನದ ದುಗುಡವನ್ನ, ಬೇನೆ- ಬೇಸರವನ್ನ ಅರ್ಥ ಮಾಡಿಕೊಂಡು ನಮ್ಮನ್ನ ಸರಿಯಾದ ಲಹರಿಗೆ ತಂದು ನಿಲ್ಲಿಸುವ ಶಕ್ತಿ ಇದೆ. ಮಳೆಯನ್ನ ಸಹೃದಯರೆಲ್ಲ ಪ್ರೀತಿಸುತ್ತಾರೆ ಮತ್ತು ಮಳೆ ಪ್ರೀತಿಸುವುದನ್ನ ಕಲಿಸುತ್ತದೆ!
ಪ್ರಾಥಮಿಕ ಶಾಲೆಯ ಕಾಲದಲ್ಲಿ ಹರಿಯೋ ಕೆಂಪು ನೀರಲ್ಲಿ ಮಾಡಿ ಬಿಟ್ಟ ಕಾಗದದ ದೋಣಿ ಮತ್ತು ಆ ಗೆಳೆಯರು, ಕೆಸರು ನೀರಲ್ಲಿ ಆಟವಾಡಿ ಬಂದು ಅಮ್ಮನ ಕೈಲಿ ಬೈಸಿಕೊಂಡಿದ್ದು, ಒದ್ದೆ ಮಾವಿನಮರ ಹತ್ತಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಒಡೆದ ಹಂಚಿನ ಸಂದಿಯಿಂದ ಬೀಳುತ್ತಿದ್ದ ನೀರ ಅಡಿಯಲ್ಲಿಟ್ಟ ಪಾತ್ರೆ, ಮನೆಯ ಅಂಗಳದ ತುಂಬ ನೀರು ನಿಂತು ನಿರ್ಮಾಣವಾದ ಪುಟ್ಟ ಕೆರೆ, ಧೋ ಅಂತ ಮಳೆ ಹೊಯ್ಯುವಾಗ ಮನೆ ಒಳಗೆ ಬೆಚ್ಚಗೆ ಕೂತು ತಿಂದ ಹಲಸಿನ ಹಪ್ಪಳ...
ಹುಚ್ಹಾಪಟ್ಟೇ ಮಳೆ ಬಂದು ಕರೆಂಟಿಲ್ಲದೆ ಕಳೆದ ಕಗ್ಗತ್ತಲ ರಾತ್ರಿ..ಅಪ್ಪನ ಗಾಡಿಯ ಹಿಂದೆ ಕೂತು ಅರೆ ಬರೆ ಒದ್ದೆಯಾಗಿ ಮನೆಗೆ ಬಂದ ಸಂಜೆ, ಮಳೆಯೊಳಗೇ ಆಡಿದ ಫುಟ್ಬಾಲು ಆಟ.. ಪ್ರೀತಿಸಿದ ಜೀವದ ಜೊತೆ ಮಳೆಯೊಳಗೆ ಮಳೆಯಾಗಿ ನಡೆದ ಘಳಿಗೆ...
ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ನೆನಪಿನ ಬುತ್ತಿಯನ್ನ ಬಿಚ್ಚಿಸುತ್ತಾನೆ ಮಳೆರಾಯ,ನಮಗೇ ತಿಳಿಯದಂತೆ..
ಮಳೆಯೇ ನಿನ್ನಯ ಮಾಯೆಗೆ ನಮನ!

- shreenidhi ರವರ ಬ್ಲಾಗ್
- Login or register to post comments
- 519 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮಳೆಯೇ ಬದುಕು
ಸಕ್ಕತ್ತಾಗಿ ಬರೆದಿದ್ದೀರಿ ಗೆಳೆಯರೇ,
ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ಹೌದು, ಮಳೆ ಮದುರ ನೆನಪುಗಳ ಸರದಾರ. ಮಳೆಯೇ ಮನುಜನಿಗೆ ಜೀವಸೆಲೆ. ದೋs ಎಂದು ಸುರಿಯುವ ಮಳೆಗೆ ಮುಕವೊಡ್ಡಿ ನಿಲ್ಲುವ ಮನಸ್ಸಾಗುತ್ತದೆ ಏಸೋ ಸರತಿ. ಮಳೆಯಲ್ಲಿ ಮಗ ನೆನೆದು ಬಂದರೆ 'ಏನೋ ಇದು?' ಅಂತ ಮಗನ ತಲೆಯನ್ನು ಒರೆಸಿ ಮಮತೆ ತೋರುವ ಅವಕಾಸ ಹೆತ್ತೊಡಲಿಗೆ ನೀಡುವದೇ ಮಳೆ. "ಹುಯ್ಯೊ ಹುಯ್ಯೊ ಮಳೆರಾಯ, ಮಾವಿನ ತೋಟಕೆ ನೀರಿಲ್ಲ" ಅಂತ ಹಾಡಿ ಮಳೆರಾಯನನ್ನು ಮಕ್ಕಳು, ಮುದುಕರೊಳಗೊಂಡು ಎಲ್ಲರೂ ಕರೆಯುತ್ತಾರೆ. ಹುಟ್ಟಿನಿಂದ ಸಾವಿನವರೆಗೆ ಮನುಜನನ್ನು ಬಹಳಾಗಿ ಸೆಳೆಯುವುವುದೆಂದರೆ ನೀರು. ಮೊನ್ನೆ ನಮ್ಮ ಗುರುಗಳು ಹೇಳುತ್ತಿದ್ದರು, "ಜೀವ ಜಲಮಯ ಮತ್ತು ಮನಸ್ಸು ಅನ್ನಮಯ" ಎಂದು. ಅಂದರೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಮನಸ್ಸು ರೂಪಗೊಳ್ಳುವದಂತೆ, ಮತ್ತು ನೀರು ನಮನ್ನು ಜೀವಂತವಾಗಿಡುತ್ತದೆ. ಅದಕ್ಕಾಗಿ ಮಳೆಯೇ ಬದುಕು, "ಬದುಕು" ಎಂದರೆ "ಸಂಪತ್ತು" ಎಂಬ ತಿಳಿಯೂ ಇದೆ.