ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್ ಕನ್ನಡದಲ್ಲಿ ಈಗ ತಾನೇ ಓದಿದೆ. ನಾವು ಯಾವ ಕಾಲದಲ್ಲಿದ್ದೀವಿ ಎನಿಸುತ್ತಿದೆ. ಇನ್ನೂ ಕೇವಲ ಒಂದೂವರೆ ತಿಂಗಳ ಹಿಂದೆ ಚಂದ್ರಾ ಲೇಔಟಿನಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಇದೇ ರೀತಿ, ಬೀದಿ ನಾಯಿಗಳು ಕಚ್ಚಿ ಸಾಯಿಸಿದ ಘಟನೆ ವರದಿಯಾಗಿತ್ತು. ನಮ್ಮ ಆಳರಸರನ್ನು ನಿದ್ದೆಯಿಂದ ಎಬ್ಬಿಸಲು ವಿಶ್ವೇಶ್ವರ ಭಟ್ ಅವರು ಬಹಳ ಒಳ್ಳೆಯ ಸಂಪಾದಕೀಯ ಸಹಾ ಬರೆದಿದ್ದರು.
ನಾವು ನಾಗರೀಕರು, ಏನೇ ಆದರೂ ಪ್ರತಿಭಟಿಸಬಹುದು, ಕೂಗಾಡಬಹುದು, ಈ ಬಗ್ಗೆ ಬರೆದು ಜಾಗೃತಿ ಮೂಡಿಸಬಹುದು. ಆದರೆ ಕೊನೆಗೆ ಕೆಲವೊಂದು ಕ್ರಮಗಳನ್ನು ಆಚರಣೆಗೆ ತರುವುದು ಆಳುವವರ ಕೆಲಸ ತಾನೇ? ಅದಕ್ಕಾಗಿ ತಾನೇ ಅವರು ಅಧಿಕಾರದಲ್ಲಿ ಕುಳಿತಿರುವುದು? ನಾವು ಸಲಹೆ, ಸೂಚನೆ ಕೊಡಬಹುದು. ಆದರೆ ಏನೇ ಸಲಹೆ ಕೊಟ್ಟರೂ ಆಚರಣೆಗೆ ತಾರದೇ ನಮ್ಮ ನಾಯಕರು ಕುಂಭಕರ್ಣರಂತೆ ಮಲಗಿದ್ದರೆ ಏನು ಮಾಡಬೇಕು? ಇನ್ನೆಷ್ಟು ಮಕ್ಕಳು ಬಲಿಯಾದ ಮೇಲೆ ಇವರು ತಮ್ಮ ಸೋ ಕಾಲ್ಡ್ "ಕ್ರಮ" ತೆಗೆದುಕೊಳ್ಳುತ್ತಾರೆ? ಇದಕ್ಕೆ ಯಾರು ಉತ್ತರ ಕೊಡುತ್ತಾರೆ?
ನಮ್ಮಂಥವರ ಕೂಗನ್ನೇನೋ ಯಾರೂ ಕೇಳದಿರಬಹುದು. ಆದರೆ ನಮ್ಮ ಬುದ್ಧಿಜೀವಿಗಳಿಗೆ ಮತ್ತು ಚಿಂತಕರಿಗೆ ಇವೆಲ್ಲ "ಜ್ವಲಂತ ಮತ್ತು ಪ್ರಸ್ತುತ" ಸಮಸ್ಯೆಗಳು ಎಂದು ಅನ್ನಿಸುವುದಿಲ್ಲವೇ? ಅವರಾದರೂ ಈ ರೀತಿಯ ಸಾಮಾಜಿಕ ಸಮಸ್ಯೆಗಳ ವಿಚಾರದಲ್ಲಿ ಒಂದಾಗಿ, ಒಗ್ಗಟ್ಟಿನಿಂದ ಏಕೆ ಒಂದು ಆಂದೋಳನವನ್ನು ಆರಂಭ ಮಾಡಬಾರದು? ಅವರ ವಿಚಾರಗಳು ಸಹಜವಾಗಿಯೇ ದೊಡ್ಡ ಓದುಗ ಬಳಗವನ್ನೂ ಹೊಂದಿರುತ್ತವೆ ಮತ್ತು ಎಲ್ಲರ ಗಮನವನ್ನೂ ಬಲು ಬೇಗನೆ ಸೆಳೆಯುತ್ತವೆ. ಇದರಿಂದ ಸಾಮಾಜಿಕ ನ್ಯಾಯವೂ ದೊರಕಿದಂತಾಗುತ್ತದೆ ಅಲ್ಲವೇ?
ಪ್ರಾಯಶಃ ನಮ್ಮನ್ನಾಳುವವರ ವಿರುದ್ಧವೇ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಕಾಲ ದೂರವಿಲ್ಲವೇನೋ ಎನಿಸುತ್ತಿದೆ.
- ಶ್ಯಾಮ್ ಕಿಶೋರ್

- Shyam Kishore ರವರ ಬ್ಲಾಗ್
- Login or register to post comments
- 946 hits
- Email this blog





RSS:
ಪ್ರತಿಕ್ರಿಯೆಗಳು
Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ನಾವೇ ತಾನೆ ಇವರನ್ನ Elect ಮಾಡಿರೋದು. We Deserve it.
Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಯಾವ ಪ್ರಾಣಿದಯಾ ಸಂಘ್ಹದವರ ಲಾಬಿಗೂ ಬಲಿಯಾಗದೆ, ಸರಿಯಾದ ಕ್ರಮ ಕೈಗೊಳ್ಳಬೇಕು. (ಹಾಗಂತ, ನನಗೆ ಪ್ರಾಣಿದಯವಿಲ್ಲದೇ ಇಲ್ಲ, ಆದರೆ, ಮುಗ್ಧ ಮಕ್ಕಳ ಜೀವ ಉಳಿಸಲು, ಬೀದಿ ನಾಯಿಗಳ ನಿರ್ಮೂಲನೆ ಆಗಲೇ ಬೇಕು).
ಇದಲ್ಲದೆ, ನಾಯಿಗಳು ನರಭಕ್ಷಕರಾಗಲು ಬೀದಿಬೀದಿಯಲ್ಲು ಮಾಂಸದಂಗಡಿಗಳು ಪ್ರಾರಂಭವಾಗಿರುವುದೂ, ಅವರು ಬಯಲಿನಲ್ಲಿ ಹಸಿಮಾಂಸವನ್ನು ಸುರಿಯುವುದೂ ಕಾರಣವೆಂದು ಓದಿದೆ. ಇಂತಹದಕ್ಕೆಲ್ಲ ಅವಕಾಶ ಮಾಡಿಕೊಡುತ್ತಿರುವ ಮಹಾನಗರಪಾಲಿಕೆಯ ಕಾರ್ಯವೈಖರಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ.
ಚಿಕ್ಕಂದಿನಲ್ಲಿ ನನ್ನ ಮೇಲೆ ಬೀದಿ ನಾಯಿಯೊಂದು ಹಾರಿದ್ದು, ಅದರ ದೆಸೆಯಿಂದ ವರ್ಷಾನುಗಟ್ಟಲೆ ನಾಯಿಗಳನ್ನು ಕಂಡರೆ ಅಗತ್ಯಕ್ಕೂ ಹೆಚ್ಚಿನ ಭಯ ಬೆಳೆಸಿಕೊಂಡ ನನಗೆ, ಆ ಪುಟ್ಟ ಮಗುವಿಗೆ ತನ್ನ ಕಡೆಯ ಕ್ಷಣಗಳಲ್ಲಿ ಅದೆಂತಹ ನರಕಯಾತನೆಯನ್ನು ಅನುಭವಿಸಿರಬಹುದು ಎಂಬುದರ ಅರಿವು ಚೆನ್ನಾಗಿ ಆಗುತ್ತಿದೆ
ಉ: Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಯದು ಅವರೆ,
ನಿಜ ನಾವೇ ಆರಿಸಿದ್ದು; ಆ ಬಗ್ಗೆ ಎರಡು ಮಾತಿಲ್ಲ. ಚುನಾವಣೆಯ ಕಣದಲ್ಲಿದ್ದವರಲ್ಲಿ, "ಇವರು ಇದ್ದುದರಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ" ಎಂದು ನಮಗನ್ನಿಸಿದವರಿಗೆ ನಾವು ವೋಟು ಹಾಕುತ್ತೀವಿ. ಆದರೆ ಎಲ್ಲರೂ ಗೆದ್ದು, ಗಾದಿಯೇರಿದ ನಂತರ ಕ್ರಮೇಣ ತಮ್ಮ ಬಣ್ಣವನ್ನು ಸಂಪೂರ್ಣ ಬದಲಾಯಿಸುತ್ತಾರಲ್ಲಾ, ಏನು ಮಾಡೋದು? ಯಾವ ಆಧಾರದ ಮೇಲೆ ಇವರನ್ನು ನಂಬಬೇಕು? ಒಂದೂ ತೋಚೋದಿಲ್ಲ.
ಹಂಸಾನಂದಿಯವರೆ,
ಹೌದು, ಪ್ರಾಣಿದಯ ಎಂದರೆ ಸುಮ್ಮನೆ ಬೀದಿನಾಯಿಗಳಿಗೆ ನಮ್ಮ ಮನೆಯಲ್ಲಿ ಉಳಿದ ಅನ್ನವನ್ನೋ, ಮತ್ತೊಂದನ್ನೋ ಹಾಕೋದಲ್ಲ. ನಿಜಕ್ಕೂ ಬೀದಿನಾಯಿಗಳ ಬಗ್ಗೆ ದಯೆಯಿದ್ದಲ್ಲಿ, ಅವುಗಳಲ್ಲಿ ಒಂದನ್ನು ಆರಿಸಿ, ನಮ್ಮದಾಗಿಸಿಕೊಂಡು, ಮನೆಯಲ್ಲಿ ಸಾಕಿ, ಕುತ್ತಿಗೆ ಪಟ್ಟಿ ಕಟ್ಟಿ ಚೆನ್ನಾಗಿ ನೋಡಿಕೊಳ್ಳಬೇಕು. ಅದು ಬಿಟ್ಟು ಸುಮ್ಮನೆ ಬೀದಿನಾಯಿಗಳನ್ನು ಪ್ರೋತ್ಸಾಹಿಸಿದರೆ ತಪ್ಪಾಗುತ್ತದೆ ಅಂತ ನನ್ನ ಅನಿಸಿಕೆ.
ಒಂದು ನಿಮಿಷ ಯೋಚಿಸೋಣ: ಇದೇ ರೀತಿ ನಮ್ಮ ಮನೆಯ ಪುಟ್ಟ ಮಗುವೊಂದು, ನಮ್ಮದೇ ಬೀದಿಯ ನಾಯಿಗಳಿಂದ ಕಚ್ಚಿ ಸಾಯಿಸಲ್ಪಟ್ಟರೆ (ಬಿಡ್ತು, ಹಾಗಾಗದಿರಲಿ), ಆಗ ಕೂಡಾ ನಾವು ಮಾರನೆಯ ದಿನದಿಂದ ಇದೇ ಪ್ರಾಣಿದಯೆ ತೋರಿಸಿ, ಹೀಗೇ ಅನ್ನ ಹಾಕಿ ಓಲೈಸುತ್ತೀವಾ? ಖಂಡಿತ ಇಲ್ಲ. ಆ ಕ್ಷಣವೇ ನಮ್ಮ ಬೀದಿಯಲ್ಲಿನ ಎಲ್ಲ ಬೀದಿನಾಯಿಗಳನ್ನೂ ಹೊಡೆದೋಡಿಸಿ ಇನ್ನೊಮ್ಮೆ ನಮ್ಮ ಬೀದಿಗೆ ಕಾಲಿಡದ ಹಾಗೆ ಮಾಡುತ್ತೇವೆ, ಅಲ್ವಾ?
- ಶ್ಯಾಮ್ ಕಿಶೋರ್
Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಆ ನಾಯಿಗಳೂ (ನಾವು ಆರಿಸಿದವರು) ಸದನದಲ್ಲಿ ಮಾಡುವುದನ್ನೇ ಈ ಬೀದಿ ನಾಯಿಗಳು ಬೀದಿಯಲ್ಲಿ ಮಾಡಿವೆ. ಅದಕ್ಕೆ ಅದೇನೂ ಹೊಸತಲ್ಲ ಎಂದು ನಾವು ಆರಿಸಿದ ಮಾನವ ನಾಯಿಗಳಿಗೆ ಅನಿಸಿರಬಹುದು!
Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಛೆ! ಪಾಪ, ನೀವು ನಾಯಿಗಳು ಅಂತ ಕರೆದಿದ್ದಕ್ಕೆ ಸಿಟ್ಟು ಮಾಡಿಕೊಳ್ಳಲು ಸಂಪದಿಗರಲ್ಲಿ ಯಾವ ರಾಜಕಾರಣಿಯೂ ಇಲ್ಲವೇನೋ ಪಾಪ. ಅಥವಾ ಸಾತ್ವಿಕ ವಿರೋಧ ಮಾಡುವಷ್ಟು ಸ್ವಾಭಿಮಾನ ಉಳಿದಿಲ್ಲವೋ?!
ಪ್ರತಿಕ್ರಿಯೆ: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಸಂಪದಿಗರಲ್ಲಿ ರಾಜಕಾರಣಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ನೀವು ಹೇಳಿರೋ ಎರಡನೆಯ ಮಾತು ನಿಜ ಅನ್ನಿಸುತ್ತೆ. ಇದ್ದರೂ, ಸಾತ್ವಿಕವಾಗಿ (ಸಾತ್ವಿಕ ಅಲ್ಲದಿದ್ದರೂ ಪರವಾಗಿಲ್ಲ, ಅಟ್ ಲೀಸ್ಟ್ ತಾತ್ವಿಕವಾಗಿಯಾದರೂ) ವಿರೋಧಿಸಲು ಅವರಿಗೆ ಸದ್ಯಕ್ಕಂತೂ ಸ್ವಾಭಿಮಾನ, ಧೈರ್ಯ ಎರಡೂ ಇಲ್ಲ. ಅವರ ಮಾತಿನ, ಆಶ್ವಾಸನೆಗಳ ನೂರರಲ್ಲಿ ಕಾಲುಭಾಗವಾದರೂ ಕೃತಿಯಲ್ಲಿ ಕಾಣಿಸಿದರೆ, ಯಾರು ತಾನೇ ಸುಮ್ಮನೆ ಹಂಗಿಸುತ್ತಾರೆ ಹೇಳಿ?
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)