ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?! ಇತ್ತೀಚಿಗೆ ಸಂಪದದಲ್ಲಿ ನಡೆಯುತ್ತಿರುವ "ಕನ್ನಡದ ಏತ್ವಗಳು, ಕಾಗುಣಿತ ಕಲಿತದ್ದು" ಇತ್ಯಾದಿ ಚರ್ಚೆಗಳ ಬಗ್ಗೆಯೇ ಏನೋ ಯೋಚಿಸಿ ಟೈಪಿಸುತ್ತಾ ಕುಳಿತವನು, ಅದೆಲ್ಲಿಂದ ಹೊಳೆಯಿತೋ ನನಗೇ ಗೊತ್ತಿಲ್ಲ, "ಕೊಟ್ಟೆ ಮಾಡು" ಅಂದೆ. ಒಂದು ಕ್ಷಣ ತಬ್ಬಿಬ್ಬಾದ ನನ್ನಾಕಿ "ಅಯ್ಯೋ ರಾಮ; ಅದೇನದು ಕೊಟ್ಟೆ? ನಾನು ಕೇಳಿದ್ದು ಅಡುಗೆಯ ಬಗ್ಗೆ. ಹೋಗೀ ಹೋಗೀ ನಿಮ್ಮನ್ನು ಕೇಳಿದ್ನಲ್ಲಾ..." ಅಂತಂದಳು.
ತಕ್ಷಣ ನೆನಪಿಗೆ ಬಂದದ್ದು ಬೀಚಿಯವರ "ಏಕೀಕರಣ" ನಾಟಕ. ಸುಮಾರು ೯-೧೦ ವರ್ಷಗಳ ಹಿಂದೆ ಓದಿದ ನಾಟಕ ಇವತ್ತು ಹೇಗೋ ನೆನಪಾಗಿ "ಕೊಟ್ಟೆ ಮಾಡು" ಅಂತ ಹೇಳುವಂತೆ ಮಾಡಿಸಿತಲ್ಲ ಅಂತ ಅಚ್ಚರಿಯೂ ಆಯಿತು. ಆ ಪುಸ್ತಕ ಈಗ ನಾನಿರುವಲ್ಲಿ ನನ್ನ ಬಳಿಯಿಲ್ಲವಾದ್ದರಿಂದ ನೆನಪಿನಲ್ಲಿದ್ದಷ್ಟು ಅದರ ಬಗ್ಗೆ ಹೇಳಿದೆ. ನನ್ನಾಕಿ ಬಹಳ ಎಂಜಾಯ್ ಮಾಡಿ ನಕ್ಕಳು. ಆಮೇಲೆ ಸ್ವಲ್ಪ ವಿಚಾರ ಮಾಡಿದಾಗ ಅನ್ನಿಸಿದ್ದು; ಇವತ್ತು ನಾವೆಲ್ಲ "ಕಾಗುಣಿತ ಹೇಗೆ ಕಲಿತದ್ದು" ಅಂತ ಚರ್ಚೆ ಮಾಡುತ್ತಾ ಹೋದಂತೆ "ಕರ್ನಾಟಕದಲ್ಲೇ ಎಷ್ಟು ಬೇರೆ ಬೇರೆ ರೀತಿಯಲ್ಲಿ ಕನ್ನಡ ಕಾಗುಣಿತ ಕಲಿಸುತ್ತಾರೆ" ಅಂತ ಗೊತ್ತಾಗಿ "ಹೌದಲ್ವಾ!" ಎಂದುಕೊಳ್ಳುತ್ತೇವೆ, ಆಶ್ಚರ್ಯಪಡುತ್ತೇವೆ. "ಕರ್ನಾಟಕದಲ್ಲೇ ಚಾಲ್ತಿಯಲ್ಲಿರುವ ಐದಾರು ಆಡುಮಾತಿನ ಕನ್ನಡ ರೂಪಗಳನ್ನು ಆಧಾರವಾಗಿಟ್ಟುಕೊಂಡು ಎಷ್ಟು ಹಾಸ್ಯಮಯವಾಗಿ ಬರೆದಿದ್ದಾರಲ್ಲ ಬೀಚಿ" ಅಂತನ್ನಿಸಿತು. ಅದರ ಬಗ್ಗೆ ಕೊಂಚ ಬ್ಲಾಗುವುದರ ಮೂಲಕ ನಿಮ್ಮ ಜತೆ ಹಂಚಿಕೊಳ್ಳೋಣ ಅನ್ನಿಸಿ ಬರೆಯುತ್ತಿದ್ದೇನೆ.
ಬೀಚಿಯವರ ಹಾಸ್ಯ ನಾಟಕಗಳ ಸಂಕಲನ "ರೇಡಿಯೋ ನಾಟಕಗಳು". "ನಾನೇ ಸತ್ತಾಗ, ಏಕೀಕರಣ" ಇನ್ನೂ ಮುಂತಾದ ಉತ್ತಮ ಹಾಸ್ಯ ನಾಟಕಗಳು ಅದರಲ್ಲಿವೆ. "ನಾನೇ ಸತ್ತಾಗ" ಅಂತೂ "ಸಕ್ಕರೆಯ ಲೇಪದಲ್ಲಿನ ಮಾತ್ರೆ"ಯ ತರಹ ಮೇಲ್ನೋಟಕ್ಕೆ ನಗೆಯುಕ್ಕಿಸಿದರೂ ಜೀವನದ ನಗ್ನಸತ್ಯಗಳನ್ನು ಅಷ್ಟೇ ನಿರ್ದಾಕ್ಷಿಣ್ಯವಾಗಿ ನಮ್ಮ ಮುಂದಿಟ್ಟು "ನಕ್ಕಿದ್ದು ಸಾಕಯ್ಯಾ, ಇದರ ಬಗ್ಗೆ ಕೂಡಾ ಸ್ವಲ್ಪ ಯೋಚಿಸು" ಅನ್ನುತ್ತದೆ! ಇರಲಿ, ವಿಷಯ ಎಲ್ಲೋ ಹೋಯಿತು. ನಾನು ಹೇಳೋಕೆ ಹೊರಟಿದ್ದು "ಏಕೀಕರಣ" ನಾಟಕದ ಬಗ್ಗೆ. ನಾಟಕದ ಬಗ್ಗೆ ಪೂರ್ಣ ವಿವರ ಕೊಟ್ಟು ನಿಮ್ಮ ಆಸಕ್ತಿಗೆ ಭಂಗತರಲು ನನಗಿಷ್ಟವಿಲ್ಲ. ನೀವೇ ಓದಿದರೇನೆ ಅದನ್ನು ಪೂರ್ತಿಯಾಗಿ ಅನುಭವಿಸಿ, ಸವಿಯಲು ಸಾಧ್ಯ. ಹಾಗಾಗಿ ಕೇವಲ ಅದರ ಪಕ್ಷಿನೋಟವನ್ನು ಮಾತ್ರ ನಿಮ್ಮ ಮುಂದಿಡುತ್ತೇನೆ. ಅಂದಹಾಗೆ ಒಂದು ಮಾತು: ಈ ಬಗ್ಗೆ ಇದಕ್ಕೂ ಮೊದಲೆ ಯಾರಾದರೂ ಸಂಪದದಲ್ಲಿ ಬರೆದಿದ್ದಲ್ಲಿ ಇದನ್ನು "ಎರಡನೆಯ ಓದು" ಅಂತ ಓದಿ ಪಕ್ಕಕ್ಕಿಡಿ!
ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ನಾಲ್ಕೈದು ಜನರು ಒಂದೇ ಮನೆಯಲ್ಲಿ ವಾಸಿಸಿದಾಗ, ಅವರದೇ ಆದ ಶೈಲಿಯ ಕನ್ನಡ ಬಳಕೆಯಿಂದ ಎಷ್ಟೆಲ್ಲ ಅವಾಂತರಗಳು ಸಂಭವಿಸಬಹುದು ಎನ್ನುವುದೇ "ಏಕೀಕರಣ" ನಾಟಕದ ಹೂರಣ. ಅದರಲ್ಲಿನ ಅಡುಗೆ ಭಟ್ಟ ದಕ್ಷಿಣ ಕನ್ನಡದವನು. ಯಜಮಾನ ಹುಬ್ಬಳ್ಳಿ/ಧಾರವಾಡ ಕಡೆಯವನು. ಒಮ್ಮೆ ಯಜಮಾನ ಹಲಸಿನಕಾಯೊಂದನ್ನು ಎಲ್ಲಿಂದಲೋ ಕಷ್ಟಪಟ್ಟು ತಂದು (ಆತನಿಗೆ ಹಲಸಿನಕಾಯಿ ಅಂದ್ರೆ ಪ್ರಾಣ) ಅಡುಗೆಭಟ್ಟನಿಗೆ ಕೊಟ್ಟು "ಇದರಲ್ಲಿ ಏನಾದರೂ ಒಳ್ಳೆಯ ಅಡುಗೆ ಮಾಡಪ್ಪಾ" ಅಂತ ಹೇಳುತ್ತಾನೆ. ಸ್ವಲ್ಪ ಹೊತ್ತಿನ ನಂತರ "ಏನು ಅಡುಗೆ ಮಾಡಿದೆ" ಅಂತ ಕೇಳಿದಾಗ ಭಟ್ಟ "ಹಲಸಿನಕಾಯಿ ಕೊಟ್ಟೆ" ಅನ್ನುತ್ತಾನೆ! ಯಜಮಾನನಿಗೆ ಕೋಪ ನೆತ್ತಿಗೇರುತ್ತದೆ. "ಅಡುಗೆ ಮಾಡು ಅಂತ ಕೊಟ್ಟರೆ, ಯಾರಿಗೆ ಕೊಟ್ಟು ಬಂದ್ಯೋ ಭಡವ? ಎಷ್ಟು ಧೈರ್ಯ ನಿನಗೆ?" ಅಂತ ದಬಾಯಿಸಲು ಶುರು ಮಾಡುತ್ತಾನೆ. ಪಾಪ ಭಟ್ಟ ತಬ್ಬಿಬ್ಬು! ದಕ್ಷಿಣಕನ್ನಡದಲ್ಲಿ ಕೊಟ್ಟೆ ಎಂದರೆ ಒಂದು ರೀತಿಯ ಕಡುಬು. ಬಾಳೆಎಲೆ ಅಥವಾ ಆಲದೆಲೆಗಳನ್ನು ಬಾಡಿಸಿ, ಪುಟ್ಟಪುಟ್ಟ ಪಾತ್ರೆಗಳಾಕಾರಕ್ಕೆ ಮಡಚಿ, ಅದರೊಳಗೆ ಹಿಟ್ಟು (ಹಲಸಿನ ಹಣ್ಣು + ನೆನೆದ ಅಕ್ಕಿ + ತೆಂಗಿನಕಾಯಿ + ಉಪ್ಪು ಹಾಕಿ ರುಬ್ಬಿದ್ದು) ಹಾಕಿ ಹಬೆಯಲ್ಲಿ ಬೇಯಿಸಿ ತಯಾರಿಸಿದ ತಿಂಡಿ. ಪಾಪ, ಭಟ್ಟ ಆ ಅರ್ಥದಲ್ಲಿ (ತನ್ನ ಆಡು ಮಾತಿನಲ್ಲಿ) "ಹಲಸಿನಕಾಯಿ ಕೊಟ್ಟೆ" ಅಂತ ಹೇಳಿರುತ್ತಾನೆ. ಕೊನೆಗೆ ಗೊತ್ತಾದಾಗ ಯಜಮಾನ ಕೂಡಾ ಬಿದ್ದೂ ಬಿದ್ದೂ ನಗುತ್ತಾನೆ. ಬೇರೆ ಬೇರೆ ಕನ್ನಡದ ಬಳಕೆಗಳ ಮೇಲೂ ಹಾಸ್ಯದ ಬೆಳಕು ಚೆಲ್ಲುತ್ತಾ "ಏಕೀಕರಣ" ನಾಟಕ ಹೀಗೇ ಸಾಗುತ್ತದೆ. ಆದರೆ ನಾಟಕದ ಅಂತರಂಗದಲ್ಲಿ ಪ್ರತಿಧ್ವನಿಸುವುದು "ವಿವಿಧತೆಯಲ್ಲಿ ಏಕತೆ ಇದ್ದರೆಷ್ಟು ಚೆನ್ನ" ಎನ್ನುವ ಭಾವನೆ.
ಸಾಕು ಬಿಡಿ, ತುಂಬಾ ಹೇಳಿದರೆ ಚೆನ್ನಾಗಿರೋದಿಲ್ಲ. ಇಲ್ಲದಿದ್ದರೆ "ಪುಸ್ತಕಕ್ಕಿಂತ ಮುನ್ನುಡಿ, ಬೆನ್ನುಡಿಗಳೇ ಹೆಚ್ಚಾದಂತೆ" ಆಗಿಬಿಡುತ್ತೆ! ಪೂರ್ತಿ ಸವಿಯಬೇಕೂಂತ ಅನ್ನಿಸಿದಲ್ಲಿ ಇನ್ನು ನೀವುಂಟು, ಬೀಚಿಯವರ "ರೇಡಿಯೋ ನಾಟಕಗಳು" ಪುಸ್ತಕ ಉಂಟು. ಮಧ್ಯೆ ನಾನೇಕೆ?

- Shyam Kishore ರವರ ಬ್ಲಾಗ್
- Login or register to post comments
- 562 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
ಕೊಟ್ಟೆ ಸಿಕ್ಕಿತೇ ಅಥವಾ ಖೊಟ್ಟಿಯೇ. ಅಂದ ಹಾಗೆ ನಾವು ಎರಡು ದಿನಗಳಿಂದ ಸಿಕ್ಕಾಪಟ್ಟೆ ತಿನ್ನುತ್ತಿದ್ದೇವೆ. ನಮ್ಮ ಸಹೋದ್ಯೋಗಿ ನಾಳೆ ಹಿಂದಿರುಗಿ ಹೊರಡಲಿರುವುದರಿಂದ ಅವನಿಗೆ ಚೆನ್ನಾಗಿ ತಿನ್ನಿಸಬೇಕೆಂದು ಹೊಂಚುಹೊಕುತ್ತಿದ್ದೆವು. ಕಡೆಗೆ ಎರಡು ಹೊಟೇಲಿಗೆ ಹೋಗಿಬಂದೆವು.
೧. ಕೋರಮಂಗಳದಲ್ಲಿರುವ ಕೃಷ್ಣ ಕೆಫೆ - ನಮ್ಮ ಯು.ಎಸ್.ಸಹೋದ್ಯೋಗಿ ಚಮಚದ ಸಹಾಯವಿಲ್ಲದೆಯೇ ಬಾಳೆಯೆಲೆಯಲ್ಲಿ ಬಡಿಸಿದ ಪುಷ್ಕಳ ಭೋಜನವನ್ನು ಸವಿದ. ಮೆಣಸಿನಕಾಯಿ ಬಾಳಕವನ್ನು ಮಾತ್ರ ಹಾಗೆಯೇ ಬಿಟ್ಟುಬಿಟ್ಟ.
೨. ಬಸವನಗುಡಿಯ ಕಾಮತ್ ಬ್ಯೂಗಲ್ ರಾಕ್ - ಇಲ್ಲಿ ಪಕ್ಕಾ ಉತ್ತರ ಕರ್ನಾಟಕ ಶೈಲಿಯ, ಜೋಳದ ರೊಟ್ಟಿ, ಎಣ್ಗಾಯಿ, ಕಾಳಿನ ಪಲ್ಯ, ಸೊಪ್ಪಿನ ಪಲ್ಯ, ಅಂಟಿನವುಂಡೆ ತಿಂದೆವು. ಇಲ್ಲಿಯೂ ಕೂಡ ನನ್ನ ಸಹೋದ್ಯೋಗಿ ಚಮಚವನ್ನು ಬಳಸಲಿಲ್ಲ.
ಅನಿಸಿಕೆ: ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
ಸುನಿಲ್,
ತಿನ್ನೋದರ ಬಗ್ಗೆ ಒಂದಷ್ಟು:
೧. ನಿಮಗೆ ಒಳ್ಳೆಯ ಉತ್ತರ ಕರ್ನಾಟಕದ "ಜೋಳದ ರೊಟ್ಟಿ" ಊಟ ಬೇಕೆಂದಲ್ಲಿ ಸಾಗರ್ ಚಿತ್ರಮಂದಿರದ ಪಕ್ಕದಲ್ಲಿರುವ "ವಿಜಯ ದರ್ಶಿನಿ (ಅಥವಾ ವಿಜಯ ಸಾಗರ್?)"ಗೆ ಕೂಡ ಒಮ್ಮೆ ಹೋಗಿ ಪ್ರಯತ್ನಿಸಿ. ಈ ಹೊಟೆಲ್ ಕಾಮತ್ನಷ್ಟು (ಅಥ್ವಾ ಬೇರೆ ಹೊಟೆಲಷ್ಟು) ಪ್ರಸಿದ್ಧಿ ಪಡೆದಿಲ್ಲ. ಆದರೆ ಊಟ ಸಖತ್ತಾಗಿರುತ್ತೆ.
ನಮ್ಮ ಗೆಳೆಯರ ಬಳಗದ "ಬೆಂಗಳೂರು ಗಲ್ಲಿ ಸುತ್ತಾಟ"ಗಳ "ಆವಿಷ್ಕಾರ" ಇದು!
ನಿಮ್ಮ ಸಹೋದ್ಯೋಗಿ ಮಾಡಿದ್ದು ಸರಿ. ಜೋಳದ ರೊಟ್ಟಿಯನ್ನು ಚಮಚೆಯಲ್ಲಿ ತಿಂದರೆ ಅದರ ರುಚಿ ಅರ್ಧ ಕಡಿಮೆಯಾದ ಹಾಗೇ ಅಂತ ನನ್ನ ಅನಿಸಿಕೆ. In fact ಜೋಳದ ರೊಟ್ಟಿ ಮಾತ್ರವಲ್ಲ, ಯಾವುದೇ ಊಟ (ನಮ್ಮ ಶೈಲಿಯದ್ದು; ಪಿಜ್ಜಾ ಇತ್ಯಾದಿಗಳಲ್ಲ) ಕೂಡ. ಕೈಯಲ್ಲಿ ತಿಂದು, ಕೈ ತೊಳೆದುಕೊಂಡ ನಂತರ ಕೂಡ ಊಟದ ಘಮವನ್ನು ಒಂದರ್ಧ ಘಂಟೆ ಸುಖಿಸೋದಿದೆಯಲ್ಲ, ಅದು ಊಟವನ್ನು ನಿಜವಾಗಿ "ಅನುಭವಿಸಿದಂತೆ" ಅಲ್ಲವೇ? ಏನಂತೀರಾ?
- ಶ್ಯಾಮ್ ಕಿಶೋರ್
ಮಾರುಲಿ: ಊಟದ ಬಳಿಕ ಕೈ ವಾಸನೆ....
ಶಾಮ್ ಕಿಶೋರ್ ಹೇಳಿದ್ದು,
ಕೈಯಲ್ಲಿ ತಿಂದು, ಕೈ ತೊಳೆದುಕೊಂಡ ನಂತರ ಕೂಡ ಊಟದ ಘಮವನ್ನು ಒಂದರ್ಧ ಘಂಟೆ ಸುಖಿಸೋದಿದೆಯಲ್ಲ, ಅದು ಊಟವನ್ನು ನಿಜವಾಗಿ "ಅನುಭವಿಸಿದಂತೆ" ಅಲ್ಲವೇ? ಏನಂತೀರಾ?
ಮೊನ್ನೆ ಪೇಪರ್ನಲ್ಲಿ ಓದಿದೆ, ಶಿಲ್ಪಾ ಶೆಟ್ಟಿಗೆ ಯಾರೋ 'ಇವಳು ಕೈಯಿಂದ ತಿನ್ನುವ ಅನಾಗರಿಕ ಸಮಾಜದಿಂದ ಬಂದವಳು, she is an indian!' ಅಂದರಂತೆ, ಅದ್ಯಾವುದೋ ಯುರೋಪಿನ ಚಾನೆಲ್ 4ರ show ಒಂದರಲ್ಲಿ. ಅಲ್ಲ ಹೊರಹಾಕಿದ ಮೇಲೆ ನೀರು ಬದಲು ಪೇಪರ್ ಬಳಸ್ತಾರಲ್ಲಾ, ಅವರ್ದು ಇನ್ನೆಂತ ಅನಾಗರಿಕತೆ!
ನಮ್ ಇಂಡಿಯನ್ ಪದ್ದತಿನೇ ಮಾದರಿ, best way ಅನ್ನಬಹುದು, ಒಂದಕ್ಕೆ ಬಲಗೈ, ಇನ್ನೊಂದಕ್ಕೆ ಎಡಗೈ,..
ಅಲ್ಲವೇ?
ಉ: ಮಾರುಲಿ: ಊಟದ ಬಳಿಕ ಕೈ ವಾಸನೆ....
ನೀವು ಇಷ್ಟು ಚೆನ್ನಾಗಿ ಹೇಳಿದ ಮೇಲೆ "ನಂದೇನೈತೆ"? [ಶ್ರೀಕೃಷ್ಣಸಂಧಾನ ನಾಟಕ ಕೇಳಿ/ನೋಡಿದವರಿಗೆ ಈ ಡೈಲಾಗ್ ಹೇಗೆ ಹೇಳಬೇಕೂಂತ ಗೊತ್ತಾಗುತ್ತೆ]
- ಶ್ಯಾಮ್ ಕಿಶೋರ್
ಊಟ ಬಲ್ಲವನಿಗೆ ರೋಗವಿಲ್ಲ
ಬಲ್ಲವನೇ ಬಲ್ಲ ಬೆಲ್ಲದ ಸವಿಯಾ. ನೀವು ಹೇಳಿದ ವಿಜಯ ದರ್ಶಿನಿಗೆ ಆದಾಗ ಒಮ್ಮೆ ಭೇಟಿ ನೀಡುತ್ತೇವೆ.
Re: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
'ಕೊಟ್ಟೆ' ಒಂದು ರೀತಿಯ ಹುಳಿ (ಸಾಂಬಾರ್) ಅಲ್ಲ. ಕಡುಬು. ಬಾಳೆಎಲೆ ಅಥವಾ ಆಲದೆಲೆಗಳನ್ನು ಬಾಡಿಸಿ, ಪುಟ್ಟಪುಟ್ಟ ಪಾತ್ರೆಗಳಾಕಾರಕ್ಕೆ ಮಡಚಿ, ಅದರೊಳಗೆ ಹಿಟ್ಟು (ಹಲಸಿನ ಹಣ್ಣು + ನೆನೆದ ಅಕ್ಕಿ + ತೆಂಗಿನಕಾಯಿ + ಉಪ್ಪು ಹಾಕಿ ರುಬ್ಬಿದ್ದು) ಹಾಕಿ ಹಬೆಯಲ್ಲಿ ಬೇಯಿಸಿ ತಯಾರಿಸಿದ ತಿಂಡಿ.
ಕೊಟ್ಟೆ ಹಲಸಿನಹಣ್ಣಿನದೇ ಆಗಬೇಕೆಂದಿಲ್ಲ. ಇಡ್ಲಿಹಿಟ್ಟನ್ನು ಈರೀತಿ 'ಎಲೆಗಳ ಪಾತ್ರೆ'ಗಳಲ್ಲಿಟ್ತು ಹಬೆಯಲ್ಲಿ ಬೇಯಿಸಿದರೂ ಅದು 'ಕೊಟ್ಟೆ' ಎನಿಸಿಕೊಳ್ಳುತ್ತದೆ. ಗಮನಿಸಬೇಕಾದ್ದೆಂದರೆ, ಎಲೆಗಳನ್ನು ಬಾಡಿಸಿ ಮಡಚಿ, ತೆರೆದುಕೊಳ್ಳದಂತೆ ಕಡ್ಡಿಗಳಿಂದ ಹೊಲಿದು (ಹಕ್ಕಿ ಗೂಡು ಕಟ್ಟಿದಂತೆ) ಮಾಡಿದ ಸಂರಚನೆಯೇ 'ಕೊಟ್ಟೆ' (packet/pocket ನ ಸಮಾನಾರ್ಥಕ). ಅದರಲ್ಲಿ ಮಾಡಿದ ತಿಂಡಿಯೂ 'ಕೊಟ್ಟೆ' ಎನಿಸಿಕೊಳ್ಳುತ್ತದೆ.
ತಿದ್ದುಪಡಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
ಶ್ರೀವತ್ಸ ಜೋಶಿಯವರೇ,
"ಕೊಟ್ಟೆ"ಯ ಬಗೆಗಿನ ವಿವರಕ್ಕೆ ಧನ್ಯವಾದಗಳು. ನನ್ನ ಮೂಲ ಬ್ಲಾಗ್ ಬರಹದಲ್ಲಿ ನೀವು ಕೊಟ್ಟ ವಿವರಣೆಯನ್ನು ಸೇರಿಸಿ,ತಿದ್ದಿರುವೆ. ನಾನು ಕೊಟ್ಟೆ ಅಂದರೆ "ಸಾಂಬಾರ್" ಅನ್ನುವ ಭಾವನೆಯಲ್ಲಿದ್ದೆ. ತಿದ್ದಿದ್ದು ಒಳ್ಳೆಯದಾಯಿತು!
- ಶ್ಯಾಮ್ ಕಿಶೋರ್