ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...
ಚಿತ್ರಗೀತೆಗಳೆಂದರೆ ಕೇವಲ ಕಾಲಕಳೆಯಲು ಇರುವ ಗೀತೆಗಳಲ್ಲ; ಅಥವಾ ಬರಿದೇ ಮನರಂಜನೆಗಾಗಿ ಇರುವ ಹಾಡುಗಳೂ ಅಲ್ಲ. ಉತ್ತಮ ಜೀವನ ತತ್ವಗಳನ್ನು, ಸಾಮಾಜಿಕ-ನೈತಿಕ ಸಂದೇಶಗಳನ್ನು, ಆದರ್ಶದ ಹೊಂಗನಸುಗಳನ್ನು ಜನಸಾಮಾನ್ಯರಿಗೆ ಅತಿಬೇಗನೆ, ಮನಮುಟ್ಟುವಂತೆ ತಲುಪಿಸುವ ಸಾಮರ್ಥ್ಯ ಚಿತ್ರಗೀತೆಗಳಿಗಿದೆ. ಆದರೆ ಅವುಗಳ ಸತ್ವವನ್ನು ಅರಿತು ದುಡಿಸಿಕೊಳ್ಳುವ ನಿರ್ದೇಶಕರು ಬೇಕಷ್ಟೇ! ಇತ್ತೀಚಿನ ದಿನಗಳಲ್ಲಂತೂ ಚಿತ್ರಗೀತೆಗಳಲ್ಲಿನ ಸಾಹಿತ್ಯದ ಪಾಡು "ಹೇಳಬಾರದು, ಕೇಳಬಾರದು" ಎಂಬಂತಾಗಿದೆ. ಎಲ್ಲೋ ಒಮ್ಮೊಮ್ಮೆ "ಮುಂಗಾರು ಮಳೆ" ಸುರಿದು ಕಾದ ಮನಗಳಿಗೆ ತಂಪೆರದರೂ, ಆ ರೀತಿಯ ಮಳೆ ಸುರಿಯುವುದು ವರ್ಷದಲ್ಲಿ ಎರಡು ಇಲ್ಲವೆ ಮೂರು ಬಾರಿ ಮಾತ್ರ ಎನ್ನುವಂತಹ ಸ್ಥಿತಿ ಬಂದೊದಗಿದೆ.
ಸುಮಾರು 1955 ರಿಂದ 1985 ರ ಅವಧಿಯಲ್ಲಿ, ಅಪಾರವಾದ ಸಾಮಾಜಿಕ ಕಳಕಳಿಯುಳ್ಳ ನಿರ್ದೇಶಕರು ತಮ್ಮ ಚಿತ್ರಗಳಿಂದ, ಚಿತ್ರಗಳಲ್ಲಿನ ಹಾಡು-ಸಂಭಾಷಣೆಗಳಿಂದ ಕನ್ನಡ ಚಲನಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಪಂತುಲು, ಪುಟ್ಟಣ್ಣ ಕಣಗಾಲ್, ಹುಣಸೂರು ಕೃಷ್ಣಮೂರ್ತಿ ಇವರಂತಹ ನಿರ್ದೇಶಕರು (ಹೆಸರುಗಳ ಪಟ್ಟಿ ಪೂರ್ಣವೇನಲ್ಲ) ಮನರಂಜನಾತ್ಮಕ ಚಿತ್ರಗಳನ್ನೇ ಸದಭಿರುಚಿಯ ಮೂಸೆಯಲ್ಲಿ ಕರಗಿಸಿ, ಹೊಸ ಆಯಾಮವನ್ನೀಯಲು ಶ್ರಮಿಸಿದರು. ಇಂತಹ ನಿರ್ದೇಶಕರಿಗೆ ತಕ್ಕಂತೆ ವಿಜಯನಾರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮುಂತಾದ ಗೀತರಚನೆಕಾರರು ಆರೋಗ್ಯಕರ ಪೈಪೋಟಿಯೇನೋ ಎಂಬಂತೆ ಒಬ್ಬರಿಗಿಂತ ಒಬ್ಬರು ಉತ್ತಮ ಚಿತ್ರಗೀತೆಗಳನ್ನು ಬರೆದು, ಚಲನಚಿತ್ರಗೀತೆಗಳ ಸಾಹಿತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಚಿತ್ರವೊಂದರ ಪ್ರತಿ ವಿಭಾಗದಲ್ಲೂ - ಸಂಭಾಷಣೆಯಾಗಲಿ, ಚಿತ್ರಗೀತೆಗಳಾಗಲೀ, ಪ್ರತಿಯೊಂದರಲ್ಲೂ - ಕಲೆಯನ್ನು ಅನಾವರಣಗೊಳಿಸಲು ನಿರ್ದೇಶಕರು ತಮ್ಮ ತಂಡಗಳೊಡಗೂಡಿ ಪ್ರಯತ್ನಿಸಿದರು. ಅದರಲ್ಲಿಯೂ ಗೀತಸಾಹಿತ್ಯವೆನ್ನುವುದು, ಅಂದಿನ ಪ್ರಮುಖ ನಿರ್ದೇಶಕರಿಗೆ, ತಮ್ಮ ಸಂದೇಶಗಳನ್ನು ಸಾರುವ ಒಂದು ಮಾಧ್ಯಮವಾಗಿತ್ತು. ಉದಾಹರಣೆಗೆ: "ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು..." ಮತ್ತು "ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..." ಹಾಡುಗಳನ್ನು ತೆಗೆದುಕೊಳ್ಳಿ. ಇವು ಮೂಡಿಸಿದ ದೇಶಪ್ರೇಮದ, ನಾಡು-ನುಡಿಯ ಕಿಚ್ಚು ಈ ಹಾಡುಗಳಿಗೆ ಜನಮಾನಸದಲ್ಲಿ ಯಾವ ದೇಶಭಕ್ತಿಗೀತೆಗಳಿಗೂ ಕಡಿಮೆಯಿಲ್ಲದಂತಹ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಇದು ಕೇವಲ ಒಂದು ಸಣ್ಣ ಉದಾಹರಣೆಯಷ್ಟೇ. ಹಳೆಯ ಹಾಡುಗಳ "ನಾಸ್ಟಾಲ್ಜಿಯಾ" ಇದ್ದವರನ್ನೊಮ್ಮೆ ಕೇಳಿ ನೋಡಿ; ನಾಲಗೆಯ ತುದಿಯಲ್ಲೆ ಇಂತಹ ನೂರಾರು ಹಾಡುಗಳ ಭಂಡಾರ ಸಿದ್ಧವಾಗಿರುತ್ತದೆ. ಎಷ್ಟೋ ಬಾರಿ ಇಂತಹ ಹಾಡುಗಳನ್ನು ಕೇಳಿ "ಇವು ಬರಿಯ ಚಿತ್ರಗೀತೆಗಳಲ್ಲ, ಖಂಡಿತ ಯಾರಾದರೊಬ್ಬ ಕವಿಯ ಸಾಹಿತ್ಯಿಕ ರಚನೆಯಿರಬೇಕು" ಎಂದು ಭ್ರಮಿಸಿ ಮೋಸಹೋದ ಸಂದರ್ಭಗಳೂ ಉಂಟು!
ಹಾಗಾಗಿಯೇ ಈ ಮೂರು-ಮೂರೂವರೆ ದಶಕಗಳನ್ನು "ಕನ್ನಡ ಚಲನಚಿತ್ರಗೀತೆಗಳ ಸುವರ್ಣಯುಗ" ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಮೂರೂವರೆ ದಶಕಗಳಿಂದ ಆಯ್ದ ಕೆಲವು ಮರೆಯಲಾಗದ ಹಾಡುಗಳ ಸಾಹಿತ್ಯವನ್ನು ಎಲ್ಲರೊಂದಿಗೆ ಏಕೆ ಹಂಚಿಕೊಳ್ಳಬಾರದು ಎನಿಸಿತು. ಅದರ ಫಲವೇ ಈ ಕಿರು ಪ್ರಯತ್ನ. ಹಾಡುಗಳ ಬಗ್ಗೆ ಏನಾದರೂ ವಿಶೇಷ ವಿವರಗಳಿದ್ದಲ್ಲಿ, ಅಥವಾ ಸ್ವಾರಸ್ಯಕರ ಸಂಗತಿಗಳಿದ್ದಲ್ಲಿ, ಅವನ್ನೂ ಕಲೆಹಾಕಿ ಬರೆಯುವ ಯೋಚನೆಯೇನೋ ಇದೆ. ನಿಮಗೇನಾದರೂ ಹೆಚ್ಚಿನ ಮಾಹಿತಿ ಗೊತ್ತಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ. ಎಲ್ಲರಿಗೂ ಇನ್ನಷ್ಟು ವಿಚಾರಗಳು ತಿಳಿಯುವಂತಾಗಲಿ.
ಮಾಲಿಕೆಯ ಮೊದಲ ಕಂತಿನಲ್ಲಿ ಯಾವ ಹಾಡನ್ನು ನಿಮ್ಮ ಮುಂದಿಡಲಿ ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ಶ್ರೀ.ಬಿ.ಆರ್.ಪಂತುಲು ಅವರ ಅವಿಸ್ಮರಣೀಯ "ಸ್ಕೂಲ್ ಮಾಸ್ಟರ್" ಚಿತ್ರದ "ಸ್ವಾಮಿ ದೇವನೆ ಲೋಕ ಪಾಲನೆ" ಗೀತೆ. ಈ ಹಾಡು ನಾಡಿನಾದ್ಯಂತ ಸಾವಿರಾರು ಶಾಲೆಗಳಲ್ಲಿ "ಪ್ರಾರ್ಥನಾ ಗೀತೆ"ಯಾಗಿ ಸರಿಸುಮಾರು ಮೂರು ದಶಕಗಳ ಕಾಲ ಬಳಕೆಯಲ್ಲಿತ್ತು.
ಚಿತ್ರ ಬಿಡುಗಡೆಯಾದ ವರ್ಷ ೧೯೫೮. ಗೀತರಚನೆಕಾರರು ಯಾರೆಂದು ಖಚಿತವಾಗಿ ತಿಳಿದಿಲ್ಲ (ಅನಾಮಧೇಯ ಕವಿ). ಸಂಗೀತ ಶ್ರೀ.ಟಿ.ಜಿ.ಲಿಂಗಪ್ಪ.
ಸಾಹಿತ್ಯ ಕೇವಲ ಎಂಟೇ ಎಂಟು ಸಾಲುಗಳಾದರೂ ಅದರಲ್ಲಿನ ಪದಗಳ ಜೋಡಣೆ, ಹಿತ-ಮಿತವಾದ ಬಿನ್ನಹ, ಗೀತೆಯ ಮೂಲ ಆಶಯ, ಗೇಯತೆ ಇವುಗಳನ್ನು ಗಮನಿಸಿ; ಆನಂದಿಸಿ.
ಸ್ವಾಮಿ ದೇವನೆ ಲೋಕ ಪಾಲನೆ,
ತೇ ನಮೋಸ್ತು ನಮೋಸ್ತು ತೇ |
ಪ್ರೇಮದಿಂದಲಿ ನೋಡು ನಮ್ಮನು
ತೇ ನಮೋಸ್ತು ನಮೋಸ್ತು ತೇ || ||ಪ||
ದೇವದೇವನೆ ಹಸ್ತಪಾದಗಳಿಂದಲೂ, ಮನದಿಂದಲೂ,
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ ||ಸ್ವಾಮಿ...||
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ,
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ, ಪರಿಪಾಲಿಸೈ ||ಸ್ವಾಮಿ...||
ಓದಿ ಮುಗಿಸುವ ಮುನ್ನ ಕೊನೆಯದಾಗಿ ನನ್ನದೊಂದು ವಿನಂತಿ. ಈ "ಎಂದೂ ಮರೆಯದ ಹಾಡು" ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸುತ್ತೀರಾ?

- Shyam Kishore ರವರ ಬ್ಲಾಗ್
- Login or register to post comments
- 811 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...: ಹೀಗೆ ಮುಂದುವರೆಸಿ
ಶ್ಯಾಮ್,
ಈ ಹಾಡಿನಿಂದ ನನ್ನ ಬಾಲ್ಯ ನನಗೆ ನೆನಪಾಯಿತು....ಬಹಳ ಒಳ್ಳೆ ಕೆಲಸ ..ಮುಂದುವರೆಸಿ.
ಆದರೆ "...ಬಿಟ್ಟರೆ ಸೂರ್ಯನೇ ಜಗದೀಶನು..." ಈ ಚರಣ ಕೂಡ ಇದೆ ಅಲ್ವಈ ಹಾಡಿನಲ್ಲಿ. ಬಹುಶಃ ಇದು 'ಸ್ಕೂಲ್ ಮಾಸ್ಟರ್' ಗಿಂತ ಮೊದಲೇ ಜನಪ್ರಿಯವಾಗಿತ್ತು ಅನ್ಸುತ್ತೆ. ಹಲವು ಹಿರಿಯರು ಈ ಹಾಡನ್ನು ಹೇಳುವುದನ್ನು ನಾನು ಚಿಕ್ಕಂದಿನಲ್ಲೇ ಕೇಳಿದ್ದೆ.
ಆದರೂ ಇದರ ರಚನೆ ಮಾಡಿರುವವರಾರೆಂದು ತಿಳಿಯುವ ಕುತೂಹಲ ನನ್ನಲ್ಲೂ ಇನ್ನೂ ಹಾಗೆ ಇದೆ.
--------
"ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ" - ಕುವೆಂಪು
Re: ಎಂದೂ ಮರೆಯದ ಹಾಡು: ಯೋಜನೆ
ಇಂಥದೊಂದು ಯೋಜನೆ ತುಂಬ ಅಗತ್ಯವಾಗಿತ್ತು .
ಎಲ್ಲರೂ ಇಂಥ ಹಾಡು ನೆನಪಿಸಿಯೇವು.
ಅಂದ ಹಾಗೆ ನಿಮಗೆ
'ನನ್ನ ಧಾಟಿಯ ನೀನರಿಯೆ , ನನ್ನ ಹಾಡೇ ಬೇರೆ' ಎಂಬ ಗೀತೆಯ ಬಗ್ಗೆ ಗೊತ್ತಿದ್ದರೆ ಬರೆಯಿರಿ.
ನನಗೆ ನೆನಪಿನಲ್ಲಿರುವದು ಇಷ್ಟು ಮಾತ್ರ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಎಂದೂ ಮರೆಯದ ಹಾಡು: ಪ್ರತಿಕ್ರಿಯೆಗಳಿಗೆ ಉತ್ತರ
ವೈಭವ ಮತ್ತು ಮಿಶ್ರಿಕೋಟಿಗಳೇ, ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ತಮಗೂ ಈ ರೀತಿಯ ಹಳೆಯ ಹಾಡುಗಳ ಬಗ್ಗೆ ಇನ್ನಷ್ಟು ವಿವರಗಳು ತಿಳಿದಿದ್ದಲ್ಲಿ ಹಂಚಿಕೊಳ್ಳಿ. ನೀವು ಹೇಳಿದ ಹಾಡಿನ ಬಗ್ಗೆ ನಾನು ಟಿಪ್ಪಣಿ ಮಾಡಿಕೊಂಡಿರುವೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಪ್ರಯತ್ನಿಸಿ, ಪೂರಕ ವಿಚಾರಗಳು ಸಿಕ್ಕಾಗ ಖಂಡಿತ ಬರೆಯುತ್ತೇನೆ.
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)
ಏಳು ವರ್ಷ ಪ್ರಾರ್ಥಿಸಿದ (ಪ್ರೇಯರ್ಗೈದ) ಹಾಡು: ಸ್ವಾಮಿ ದೇವನೆ ಲೋಕ ಪಾಲನೆ
ಏಳು ವರ್ಷಗಳಲ್ಲಿ ಮೂರು ಶಾಲೆಯನ್ನು ಬದಲಾಯಿಸಿದರೂ, ಈ ಹಾಡನ್ನು ಏಳು ವರ್ಷ ಪ್ರೇಯರ್ ಮಾಡಿದ ತೃಪ್ತಿ ಮತ್ತು ನಾಸ್ಟಾಲ್ಜಿಯಾ ನನ್ನಲ್ಲಿ ಮನೆ ಮಾಡಿದೆ.
ಏಳು ವರ್ಷದ ಪ್ರೇಯರಿಗಿಂತ ಈ ಹಾಡಿಗೆ ನಂಟಾದ ಒಂದು ಸ್ವಾರಸ್ಯಕರವಾದ ಘಟನೆಯೆಂದರೆ, ನಾವು ಹೈಸ್ಕೂಲ್ ಮೆಟ್ಟಿಲೇರಿದಾಗ, ನಮ್ಮ ಕ್ಲಾಸ್ ಟೀಚರ್ ಎಲ್ಲರಲ್ಲಿಯೂ ಧೈರ್ಯ ಬರಲಿ ಅಂತ ಮೊದಲ ದಿನ ಪ್ರತಿಯೊಬ್ಬರೂ ಏನಾದರೂ ಮಾಡಲೇಬೇಕು ಎಂದು ತಾಕೀತು ಮಾಡಿದರು. ಏನಾದರು ಎಂದರೆ ಹಾಡುವುದೋ, ಕಥೆ ಹೇಳುವುದೋ, ಡ್ಯಾನ್ಸ್ ಮಾಡುವುದು, ಮೊನೋ ಆಕ್ಟಿಂಗ್, ಹೀಗೆ ಏನೋ ಒಂದು. ಆಗ ಏನಾಯಿತೆಂದರೆ, ಸಂಗೀತಾಭ್ಯಾಸ ಮಾಡಿದ್ದ ಒಬ್ಬ, ಇಂದು ಎನಗೆ ಗೋವಿಂದ, ನಿನ್ನಯ ಪಾದಾರವಿಂದವ ತೋರೋ ಮುಕುಂದನೇ, ಅಂತ ಹಾಡಿದ. ಈ ಹಾಡಿನ ಮೊದಲ ಸಾಲು ಕೇಳಿದೊಡನೆ ನನಗೆ ತುಂಬಾ ನಗು ಬಂದುಬಿಟ್ಟಿತ್ತು. ಏಕೆಂದರೆ ನನಗೆ ಆಗ ಗೊತ್ತಿದ್ದ ಸಾಲೆಂದರೆ,
ಇಂದು ಎನಗೆ ಗೋವಿಂದ, ನಾಳೆ ನಿನಗೆ ಗೋವಿಂದ, ನಾಡಿದ್ದು ಅವುನ್ಗೆ ಗೋವಿಂದ ಎಂಬುದಾಗಿ. ನನ್ನ ನಗುವಿನ ಕಾರಣ ತಿಳಿಯದ ನಮ್ಮ ಟೀಚರ್ರು, ಅವನು ಹಾಡಿದಾಗ ನಕ್ಕೆಯಲ್ಲಾ, ನೀನೂ ಒಂದು ಹಾಡನ್ನು ಹಾಡು ಎಂದಾಗ, ಏನೂ ದಿಕ್ಕುತೋಚದೆ ನಾನು, ಸ್ವಾಮಿ ದೇವನೆ, ಲೋಕ ಪಾಲನೆ ಹಾಡು ಹೇಳಿ ಬಚಾವಾಗಿದ್ದೆ.
ಈ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ್ದಕ್ಕೆ ಶ್ಯಾಮ್ ತುಂಬಾ ನನ್ನಿಗಳು ನಿಮಗೆ.
ಸೊಗಸಾದ ನೆನಪು: ಏಳು ವರ್ಷ ಪ್ರಾರ್ಥಿಸಿದ ಹಾಡು: ಸ್ವಾಮಿ ದೇವನೆ...
ಸುನಿಲ್,
ನಿಮ್ಮ ನೆನಪು ಬಹಳ ಸೊಗಸಾಗಿದೆ. ನಿಜವಾಗ್ಲೂ ನಾನು ಬಿದ್ದೂ ಬಿದ್ದೂ ನಕ್ಕೆ. "ಇಂದು ಎನಗೆ ಗೋವಿಂದ..." ಹಾಡಿನ ಈ ಅಣಕುವಾಡು ನನಗೆ ಇವತ್ತೇ ಗೊತ್ತಾಗಿದ್ದು.
ನನಗೂ "ಸ್ಕೂಲ್ ಮಾಸ್ಟರ್" ಸಿನೆಮಾ ಅಂದರೆ ಸಾಕು ಒಂದು ಬಗೆಯ ನಾಸ್ಟಾಲ್ಜಿಯಾ ಕಾಡುತ್ತದೆ. ಹಾಗಾಗಿಯೇ ಅದರ ಸಿ.ಡಿ.ಯನ್ನು ಖರೀದಿಸಿ ಮನೆಯಲ್ಲೇ ಇಟ್ಟುಕೊಂಡಿದ್ದೀನಿ. "ಸ್ವಾಮಿ ದೇವನೆ..." ಗೀತೆಯನ್ನು ಗುಂಪಿನಲ್ಲಿ ಹಾಡುವ ದೃಶ್ಯ, "ಭಾಮೆಯ ನೋಡಲು..." ಹಾಡಿನಲ್ಲಿ ಕನ್ಯೆಗಿಂತ ಹೆಚ್ಚು ನಾಚುವ ನರಸಿಂಹರಾಜು ಅಭಿನಯ, ಪೆನ್ನಿಗೆ ಇಂಕು ತುಂಬಲು ಬರುತ್ತೋ ಎನ್ನುವ ದೃಶ್ಯ (ಅದರಲ್ಲೂ ಕೊನೆಯಲ್ಲಿ ಶಿವಾಜಿ ಗಣೇಶನ್ ಕೇಳುವಾಗ), ಒಂದೇ ಎರಡೇ? ಎಲ್ಲದಕ್ಕೂ ಕಳಶಪ್ರಾಯವಾಗಿ ಒಡೆದ ಕನ್ನಡಕದ ಗಾಜಿನ ದೃಶ್ಯ! ಒಂದು ಹಾಡಿನಿಂದ ಏನೆಲ್ಲ ನೆನಪಾಗುತ್ತದೆ ಅಲ್ಲವೇ?
ಅಂದಹಾಗೆ, ಈ ಪ್ರತಿಕ್ರಿಯೆಯನ್ನು ಬರೆಯುತ್ತಿದ್ದಾಗ ಅನ್ನಿಸಿದ್ದು: ಸಿನೆಮಾ ಬಗೆಗಿನ ಈ ಕೆಲವು ಮಾಹಿತಿಗಳನ್ನೂ ಮೂಲ ಲೇಖನದಲ್ಲೇ ಸೇರಿಸಿದರೆ ಚೆನ್ನಾಗಿರುತ್ತದೆಯೇನೋ.
ಅಂದಹಾಗೆ ಈ ಸಿನೆಮಾವನ್ನು ನೋಡದಿರುವವರು ಒಮ್ಮೆ ದಯವಿಟ್ಟು ನೋಡಿ. ಇಷ್ಟವಾಗುತ್ತೋ ಬಿಡುತ್ತೋ ಅದು ಆಮೇಲಿನ ವಿಷಯ. "ಸ್ಕೂಲ್ ಮಾಸ್ಟರ್" ಪಂತುಲು ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಈಗಂತೂ ಅರವತ್ತು ರೂಪಾಯಿಗಳಿಗೇ "ಸ್ಕೂಲ್ ಮಾಸ್ಟರ್" ಚಿತ್ರದ ಒರಿಜಿನಲ್ ಸಿ.ಡಿ. ಸಿಗುತ್ತದೆ.
- ಶ್ಯಾಮ್ ಕಿಶೋರ್