ನನ್ನದೊಂದು ಕನಸು
ನನ್ನದೊಂದು ಕನಸು
ನನ್ನದೊಂದು ಕನಸಿದೆ. ಸ್ವಚ್ಚ ಭಾರತದ ಕನಸು. ನಮ್ಮಲ್ಲಿ ಅನೇಕರಿಗೆ ಎಲ್ಲೆಂದರಲ್ಲಿ ಉಗುಳುವ ಕೆಟ್ಟ ಅಭ್ಯಾಸ ಇದೆ. ಅಕ್ಕಪಕ್ಕದವರಿಗೆ ಅಸಹ್ಯವಾಗಬಹುದೆಂಬ ಅರಿವೂ ಇಲ್ಲದೇ ಕ್ಯಾಕರಿಸಿ ಉಗುಳುವ ಜನರನ್ನು ನೋಡಿದರೆ ಕೂಡಲೇ ನನ್ನ ಸ್ವಚ್ಚ ಭಾರತದ ಕನಸು ಒಡೆದು ನುಚ್ಚುನೂರಾಗುತ್ತದೆ. ಮನಸ್ಸು ಇದಕ್ಕೆ ಪರಿಹಾರ ಏನೆಂದು ಚಿಂತಿಸುತ್ತದೆ. ಏನೋ ಆಸೆ ನನ್ನ ಮುಂದಿನ ಪೀಳಿಗೆಯವರನ್ನಾದರೂ ಆದರ್ಶ ಪ್ರಜೆಗಳನ್ನಾಗಿ ಬೆಳೆಸುವ ಕನಸು. ನಾನು ಶಿಕ್ಸಕಿಯಾಗಿದ್ದರಿಂದ ನನ್ನ ಶಾಲೆಯಲ್ಲಿ ನನ್ನ ಮಕ್ಕಳಿಗೂ ಕೂಡಾ ಅದೇ ಕನಸನ್ನು ಬಿತ್ತಿ ಪೋಷಿಸಿದೆ. ಮಾಮೂಲು ಎಲ್ಲಾ ಮಕ್ಕಳಿಗೂ ಇರುವಂತೆ ನನ್ನ ಮಕ್ಕಳಿಗೂ ನನ್ನ ಮಾತು ವೇದವಾಕ್ಯವಾಯಿತು.ಅವರೇನೋ ಅದೇ ಕನಸನ್ನು ನನಸಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರು. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲವೇ. ಆಗ ನಾನೊಂದು ಹಗಲುಗನಸು ಕಂಡೆ. ನನ್ನ ಮತ್ತು ನನ್ನ ಶಾಲೆ ಮಕ್ಕಳ ಬಳಿ ಒಂದು ರಿಮೋಟ್ ಕಂಟ್ರೋಲ್ ಇರಬೇಕು. ಅದರಲ್ಲಿ ಒಂದು ಬಟನ್ ಒತ್ತಿದರೆ ನಾವು ಯಾವ ವ್ಯಕ್ತಿಯನ್ನು ಗುರಿ ಮಾಡುತ್ತೇವೆಯೋ ಆ ವ್ಯಕ್ತಿಯ ತಲೆಯ ಮೇಲೆ ಯಾರೊ ಹೊಡೆದಂತಾಗಬೇಕು. ನಮ್ಮಲ್ಲಿ ರಿಮೋಟ್ ಇರುವುದು ಯಾರಿಗೂ ಗೊತ್ತಿರುವುದಿಲ್ಲ. ಹಾಗಾಗಿ ಯಾರು ಹೊಡೆದರೆಂಬುದು ಅವರಿಗೆ ತಿಳಿದಿರುವಿದಿಲ್ಲ. ಏನಾಯಿತು ಎಂದು ತಿಳಿಯದೇ ಕಂಗಾಲಾಗುತ್ತಾರೆ. ಆನಂತರ ಉಗುಳುವವರೆಲ್ಲಾ ಅಕ್ಕಪಕ್ಕ ನೋಡಿಕೊಂಡು ಹೆದರುತ್ತಲೇ ಉಗುಳಿದರೂ ಕೂಡ ತಕ್ಷಣ ಎಲ್ಲರ ಎದುರಿನಲ್ಲೇ ತಲೆಗೊಂದು ಪೆಟ್ಟು! ಎಂಥಾ ಅವಮಾನ! ಈ ಅವಮಾನ ಸಹಿಸಲಾರದೇಯಾದರೂ ಆ ಹೊಡೆತವನ್ನು ತಪ್ಪಿಸಿಕೊಳ್ಳಲೋಸ್ಕರವಾದರೂ ಭಯದಿಂದ ಉಗುಳುವುದನ್ನು ಬಿಡಬಹುದೇನೋ. ಬೀದಿಯಲ್ಲಿ ಜನ ಉಗುಳುವುದನ್ನು ನಿಲ್ಲಿಸಿದರೆ ನಮ್ಮ ದೇಶ ಅರ್ಧ ಸ್ವಚ್ಚವಾದಂತೆಯೇ ಸರಿ. ರಿಮೋಟ್ ಇಲ್ಲದಿದ್ದರೂ ಜನ ಅರಿತು ನಡೆಯ ಬೇಕೆಂಬ ಆಸೆ ನನ್ನದು. ಕನಸು ನನಸಾಗಲು ಸಾಧ್ಯವೇ? ನೀವೇನಂತೀರಾ?

- shylaswamy ರವರ ಬ್ಲಾಗ್
- Login or register to post comments
- 788 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ನನ್ನದೊಂದು ಕನಸು
ಗುಱುಱಾಜ
www.kannadaguru.blogspot.com
ನಿಜ ಮೇಡ೦,ತಮ್ಮ ಕನಸು ನನ್ನ ಕನಸೂ ಕೂಡಾ.ಬಹುಶ: ಎಲ್ಲಾ ಪ್ರಜ್ನಾವ೦ತರ ಕನಸು ಕೂಡಾ.ಕ೦ಡಕ೦ಡಲ್ಲಿ ಉಗುಳುವುದು,ಎಲ್ಲಿ ಬೇಕಾದರಲ್ಲಿ ದೇಹಬಾಧೆ ತೀರಿಸಿಕೊಳ್ಳುವುದು ಇವುಗಳಿ೦ದಲೇ ವಿದೇಶಿಯರಿಗೆ ಭಾರತೀಯರು ತು೦ಬಾ ಕೊಳಕರು ಎನ್ನುವ ಭಾವನೆ ಉ೦ಟುಮಾಡಿದೆ.ಬಹುಶ: ಸರಿಯಾದ ಮಾರ್ಗದರ್ಶನದ ಕೊರತೆ ಮತ್ತು ಅನಕ್ಷರತೆ ಇವುಗಳ ಮೂಲ ಕಾರಣವೆ೦ದು ನನ್ನ ಅಭಿಪ್ರಾಯ
ಉ: ನನ್ನದೊಂದು ಕನಸು
ನಿಮ್ಮ ಮಾತು ನಿಜ ಗುರುರಾಜಕೋಡ್ ಕಿಣಿ ಅವರೆ. ಮಾರ್ಗ ದ್ರ್ಶನದ ಕೊರತೆ ಇದೆ ನಿಜ ಆದರೆ ಮಾರ್ಗದರ್ಶನ ನೀಡುವುದಾದರೂ ಹೇಗೆ ನನಗೆ ತಿಳಿಯುತ್ತಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶೈಲಾಸ್ವಾಮಿ
ಉ: ನನ್ನದೊಂದು ಕನಸು
ಸಾರ್ವಜನಿಕ ಸ್ಠಳಗಳಲ್ಲಿ ಕಸದ ತೊಟ್ಟಿಗಳನ್ನಿಡದೆ ರಸ್ತೆಯಲ್ಲಿ ಉಗಿಯಬೇಡಿ ಎಂದರೆ ಏನು ಜೇಬಿನಲ್ಲಿ ಉಗಿದುಕೊಳ್ಳಲಿಕ್ಕಾಗುತ್ತದೆಯೇ? ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸದೆ ರಸ್ತೆಯಲ್ಲಿ ದೇಹಬಾದೆ ತೀರಿಸಬಾರದು ಎಂಬುದು ಸರಿಯೇ? ಸರ್ಕಾರಗಳು ಇದನ್ನು ನಿರ್ಮಿಸಬೇಕು.
ಎಷ್ಟೋಬಾರಿ ನೋಡಿದ್ದೇನೆ ಬೀದಿ ವ್ಯಾಪಾರಿಗಳು, ಆಟೋದವರು, ಬಸ್ ಡ್ರೈವರುಗಳು ಕಷ್ಟಪಟ್ಟು ಬೀದಿಬೀದಿ ತಿರುಗಿ ನಿರ್ಜನಪ್ರದೇಶ ಹುಡುಕಿ ದೇಹಭಾದೆ ತೀರಿಸಿಕೊಳ್ಳುತ್ತಾರೆ. ಅದು ಅವರ ತಪ್ಪಲ್ಲ !
ಉ: ನನ್ನದೊಂದು ಕನಸು
ಮಾಧವ,
ನಿಮ್ಮ ಮಾತು ನಿಜ. ಶೌಚಾಲಯಗಳನ್ನು ಕಟ್ಟಿಸುವುದರ ಜೊತೆಗೆ ಅವುಗಳನ್ನು ಬಳಸುವಂತೆ ಶುಚಿಯಾಗಿಟ್ಟಿರಬೇಕು. ನಾನು ಮೊನ್ನೆ ಓದಿದ ಪ್ರಕಾರ, ಬೆಂಗಳೂರಿನ ಹೊಸ ಏರ್ಪೋರ್ಟಿನಲ್ಲಿ ಶೌಚಾಲಯಗಳು ಆಗಲೇ ಕೆಟ್ಟು ಕೂತಿವೆಯಂತೆ. ಹೀಗಾದ್ರೆ ಹೇಗೆ?
ಉ: ನನ್ನದೊಂದು ಕನಸು
veena.
ಉ: ನನ್ನದೊಂದು ಕನಸು
veena.
ಧಾರವಾಡದ ಕಡೆ ನೀವು ನೋಡಬೇಕು, ಈ ಎಲೆ, ಅಡಿಕೆ, ತಂಬಾಕು ಯಾರು ಕಂಡು ಹಿಡಿದದ್ದೋ ದೇವಾ
ಎಂದು ತಲೆ ಚಚ್ಚಿಕೊಳ್ಳುವಂತಾಗುತ್ತದೆ.
ಉ: ನನ್ನದೊಂದು ಕನಸು
ಹೌದು ಕಲ್ಪನಾ ಅವರೆ ನಿಜಕ್ಕೂ ಅದು ತುಂಬಾ ಬೇಜಾರು ಕೋಪ ತರಿಸುವಂತ ವಿಚಾರ. ನಾನು ಹೋದಲ್ಲೆಲ್ಲಾ ಯಾರಾದರೂ ನನಗೆ ತಿಳಿದವರು ಉಗುಳಿದರೆ ಅವರಿಗೆ ತಿಳಿ ಹೇಳುತ್ತಲೇ ಇರುತ್ತೀನಿ. ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಶೈಲಾಸ್ವಾಮಿ.
ಉ: ನನ್ನದೊಂದು ಕನಸು
ಅಮ್ಮಾ, ನನಗೇನೋ ಅನಕ್ಷರತೆ ಕಾರಣ ಅಂತ ಅನ್ನಿಸಲ್ಲ. ಶಾಲೆ ಕಲಿತವರೆಲ್ಲ ಒಳ್ಳೆ ನಾಗರಿಕರಲ್ಲ, ಹಾಗೇನೆ ಕಲಿಯದವರು ಅನಾಗರಿಕರಲ್ಲ.
ಇದು ಒಂಥರಾ ಸ್ವೇಚ್ಛಾಚಾರ. ನಾವು ಏನು ಮಾಡಿದರೂ ಯಾರೂ ನಮಗೆ ಕೆಳುವವರಿಲ್ಲ ಅನ್ನೋ ಹುಂಬತನ. ತಿಳಿಯದವರಿಗೆ ಬುದ್ಧಿ ಹೇಳಬಹುದು. ತಿಳಿದೂ ತಿಳಿದೂ ಉಗಿಯುವವರಿಗೆ ಏನಂತ ಹೇಳತೀರಿ.. ಮಲಗಿದವರನ್ನ ಎಬ್ಬಿಸುವುದು ಸರಳ..ಮಲಗಿದಂತೆ ನಟಿಸುವವರನ್ನ ಹೆಂಗ ಎಬ್ಬಿಸೋದು..ಹ್ಞಾ ಇದಕ್ಕೂ ಒಂದು ಉಪಾಯ ಐತಿ, ಒಂದು ಕಾನೂನನ್ನ ಮಾಡಿದರೆ ಮಾತ್ರ. ಉಗಿಯುವವರಿಗೆ ಕಮ್ಮಿಯಂದ್ರು ನೂರು ರೂಪಾಯಿ ದಂಡ ಹಾಕಬೇಕು..
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ನನ್ನದೊಂದು ಕನಸು
ಶ್ರೀಯುತ ಗಿರೀಶ್ ಅವರೆ,
ತಮ್ಮ ಮಾತು ನೂರಕ್ಕೆ ನೂರು ಸತ್ಯ. ನಾನೂ ಎಷ್ಟೋ ಬಾರಿ ಅಂದುಕೊಂಡಿದ್ದೇನೆ. ಹೀಗೆ ಬೀದಿಬೀದಿಗಳಲ್ಲಿ ಉಗಿಯುವವರಿಗೆ ಏನಾದರೂ ದೊಡ್ಡದಾದ punishment ಕೊಡುವಂತಿದ್ದರೆ ಎಷ್ತೋ ಸ್ವಚ್ಚತೆಯನ್ನು ನಾವು ಕಾಣಬಹುದಾಗಿತ್ತು ಎಂದು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶೈಲಾಸ್ವಾಮಿ
ಉ: ನನ್ನದೊಂದು ಕನಸು
ನಮ್ಮ ದೇಶದಲ್ಲಿ ಮೊದಲು ಶಿಕ್ಷೆ ಇಲ್ಲದಿರುವುದೇ ಈ ಎಲ್ಲಾ ಅಸಭ್ಯ ವರ್ತನೆಗೆ ಕಾರಣ, ಕಡೇ ಪಕ್ಷ ದಂಡವನ್ನಾದರು ವಿಧಿಸಬೇಕು. ಆಗ ಸ್ವಲ್ಪ ಹೆದರಿಕೆ ಹುಟ್ಟುತ್ತದೆ.
ಜನಗಳಲ್ಲಿ ಜಾಗ್ರುತಿ ಮುಡಬೇಕು. ನನಗೂ ನಿಮ್ಮ ಹಾಗೆಯೆ ಶುಭ್ರವಾದ ಕರ್ನಾಟಕ, ಭಾರತವನ್ನು ನೋಡುವ ಆಸೆ.
ಉ: ನನ್ನದೊಂದು ಕನಸು
ದಾರಿಯಲ್ಲಿ ಉಗಿಯುವುದಿರಲಿ
ಈ ಮೂಲೆ ಕಂಡರೆ ಸಾಕು ಪಿಚಕ್ ಎಂದು ಉಗಿಯುತ್ತಾರಲ್ಲ ಅವರನ್ನು ನೋದಿಅರೆ ಮೈ ಎಲ್ಲಾ ಉರಿಯುತ್ತೆ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ನನ್ನದೊಂದು ಕನಸು
ಮೊನ್ನೆ ಗುಜರಾತಿನ ವಿಮಾನ ನಿಲ್ದಾಣದಲ್ಲಿ ನೋಡಿದ್ದು.
"ಉಗಿಯಬಾರದು , ಉಗಿದವರಿಗೆ ೫೦ ರೂ ದಂಡ" ಅಂತ ಹಾಕಿದ್ದ ಪೋಸ್ಟರ್ ಮೇಲೆಯೇ ಫ್ರೆಶ್ ಉಗುಳಿದ ಕೆಂಪು ಕಲೆಯಿತ್ತು
ಮುಂಬಯಿಯಲ್ಲಿ ಉಗುಳುವುದು , ಸಿಕ್ಕಸಿಕ್ಕಲ್ಲಿ ಮೂತ್ರವಿಸರ್ಜನೆ ಮಾಡುವುದು ಇತ್ಯಾದಿಗಳಿಗೆ ಕಾರ್ಪೋರೇಷನ್ ದಂಡ ಹಾಕುತ್ತದೆ. ಈ ದಂಡ ವಿಧಿಸಿ ಕಲೆಕ್ಟ್ ಮಾಡುವವರ ಹೆಸರು nuisance detectors ಎಂದು. ಆದರೂ ಮಿಲಿಯನ್ಗಟ್ಟಲೆ ಜನರ ಮೇಲೆ ಲಕ್ಷ್ಯ ಇಡಲಿಕ್ಕೆ ಸಾವಿರಾರು ಇಂಥಾ detectors ಬೇಕಲ್ಲ. ಹಾಗಾಗಿ ಇದೂ ಹೆಸರಿಗಷ್ಟೇ ಇದ್ದು ಆಗಾಗ ಪ್ರಕಟವಾಗಿ ದಂಡ ಹಾಕಿದ್ದು ಪೇಪರಿನಲ್ಲಿ ಸುದ್ದಿಯಾಗುತ್ತೆ.
ನಿಮ್ಮ ನಾಯಿ ಕರಕೊಂಡು ರಸ್ತೆ ಮೇಲೆ ತಿರುಗಾಡುತ್ತಿದ್ದಾಗ ಅದು ರಸ್ತೆಯ ಮೇಲೆ ಹೊಲಸು ಮಾಡಿದರೆ ದಂಡ (ನಿಮಗೆ) ಎಷ್ಟು ಗೊತ್ತೇ ? ೫೦೦ ರೂಪಾಯಿ. ಒಬ್ಬ ಹೆಸರಾಂತ ಪತ್ರಕರ್ತೆ, ದೇಶದ ರಾಜಕೀಯ ಇತ್ಯಾದಿಗಳ ಬಗ್ಯೆ ಕಾಲಂಗಟ್ಟಲೆ ವ್ಯಾಖ್ಯಾನ ಬರೆಯುವವಳು, ಇದೇ ’ಅಪರಾಧ’ಕ್ಕೆ ಸಿಕ್ಕಿಬಿದ್ದು ದಂಡ ಕೊಡಲು ನಿರಾಕರಿಸಿದ್ದು ಒಂದಷ್ಟು ದಿನ ಇಲ್ಲಿ ಸುದ್ದಿಯಾಗಿತ್ತು.
ಉ: ನನ್ನದೊಂದು ಕನಸು
ನಮ್ಮ ಜನರಿಗೆ ಈ ರಸ್ತೆ, ಈ ಜಾಗ ನಮ್ಮದು, "ನಾವು" ಇದನ್ನು ಚೆನ್ನಾಗಿ ಇಟ್ಟು ಕೊಳ್ಳಬೇಕು ಅನ್ನಿಸಬೇಕು. ಯಾಕೆ ಚೆನ್ನಾಗಿಟ್ಟುಕೊಳ್ಳಬೇಕು ಅಂತ ಅವರಿಗೇ ಅರ್ಥ ಆಗಬೇಕು. ಬೇರೆಯವರು ಹೇಳಿಕೊಟ್ಟರೆ, ಹೇಳಿಕೊಟ್ಟ ಮಾರನೆಯದಿನ ಮರೆತುಹೋಗ್ತದೆ. (ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ).
ದಯವಿಟ್ಟು ನಿಮ್ಮ ಈ ಕನಸನ್ನು ನನಸು ಮಾಡಲು ಹೋಗಬೇಡಿ. ನಿಮ್ಮ ಆಶಯ ಸರಿಯೇ. ನಮ್ಮ ನೆಲ ಜಲ ಚೆನ್ನಾಗಿರಬೇಕು. ಆದರೆ ಅದು ಈ ರೀತಿಯಿಂದಲ್ಲ. ಹಳೆಯ ಕಾಲದ ರಿಂಗ್ ಮಾಸ್ಟರ್ ತರಹ ಇದೆ!
ತಿಳುವಳಿಕೆ (awareness) ಕೊಡಬೇಕು. ಶಿಕ್ಷೆ / ಉಪದೇಶ ಅಲ್ಲ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನನ್ನದೊಂದು ಕನಸು
ಇದನ್ನು ಮೂರು ರೀತಿಗಳಲ್ಲಿ ತಪ್ಪಿಸಬಹುದು
೧. ತಿಳುವಳಿಕೆ: ಸಾರ್ವಜನಿಕ ಸ್ಥಳಗಳಲ್ಲಿ ಆ ರೀತಿ ಮಾಡಬಾರದು ಎಂದು ಜನರಲ್ಲಿ ತಿಳುವಳಿಕೆ ಮೂಡಿಸುವುದು.
ಮಕ್ಕಳನ್ನು ಸಣ್ಣವರಿದ್ದಾಗಿಂದಲೇ ಹೀಗೆ ಮಾಡುವುದು ತಪ್ಪು, ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಪ್ರಜ್ಞೆ ಬೆಳೆಸಿ ಆ ಸಂಸ್ಕಾರ ಉಳಿಯುವಂತೆ ಮಾಡುವುದು.
೨. ಸೌಲಭ್ಯ: ಶೌಚಾಲಯಗಳು, ಕಸದ ತೊಟ್ಟಿಗಳು ಇನ್ನಿತರ ಅವಶ್ಯಕತೆಗಳನ್ನು ಖಾಸಗಿ ಮತ್ತು ಸರ್ಕಾರೀ ಸ್ಥಳಗಳಲ್ಲೆಲ್ಲಾ ಒದಗಿಸುವುದು.
೩. ಶಿಕ್ಷೆ: ಎಚ್ಚರಿಕೆ, ಕಾನೂನು ಮೀರಿ ನಡೆಯುವವರನ್ನು ಮುಲಾಜಿಲ್ಲದೇ ಶಿಕ್ಷೆಗೆ ಗುರಿಪಡಿಸುವುದು. ನಮ್ಮ ದೇಶದಲ್ಲಿ ಒಳ್ಳೆಯ ಮಾತಿನಿಂದ ತಿದ್ದಲಾಗದ ಮಂದಿ ಬಹಳ ಇದ್ದಾರೆ.
ಉ: ನನ್ನದೊಂದು ಕನಸು
ನಿಮ್ಮಂತಹ ಸುಂದರ ಭಾರತದ ಪ್ರಜ್ನೆ ನಮ್ಮ ಸುತ್ತಲಿರುವ ಹಲವರಲ್ಲಿ ಎಳ್ಳಷ್ಟು ಇರುವುದಿಲ್ಲ.
ಮನುಷ್ಯನಲ್ಲಿ ನಿಜ ಪ್ರಜ್ನೆ ತನ್ನಿಂದಲೆ, ತನ್ನ ಅಂತರಂಗದಿಂದ ಬರಬೇಕೇ ಹೊರತು ಶಾಲೆಯಲ್ಲಿ, ಅಥವ ಅಮ್ಮ ಹೇಳಿಕೊಟ್ಟರೆ ಬರಬಾರದು ಅಲ್ಲವೆ ??
ನನ್ನ ಅನುಭವವನ್ನು ಹಂಚಿಕೊಂಡರೆ ನಾನು ಚಿಕ್ಕವನಿದ್ದಾಗೆ ರಸ್ತೆಯ ಮದ್ಯದಲ್ಲಿ ನಡೆಯುವಾಗ ಯಾರನ್ನೊ ಗಮನಿಸದೆ ಎಲ್ಲಂದರಲ್ಲಿ ಉಗುಳುತ್ತಿದ್ದೆ.
ಅದನ್ನ ದಾರಿಹೊಕ್ಕರು ಕಂಡು ಮುಖವನ್ನು ಹರಳೆಣ್ಣೆ ಕುಡಿದವರಂತೆ ಮಾಡುತಿರುವುದನ್ನು ನಾನು ಗಮನಿಸಿದೆ. ಅಂದಿನಿಂದ ನಾನು ರಸ್ತೆಯಲ್ಲಿ ಉಗಿಯುವುದನ್ನೆ ಬಿಟ್ಟು ಬಿಟ್ಟೆ.
ಉಗುಳುವುದು ಮಾತ್ರವಲ್ಲ, ಸುಳ್ಳು ಹೇಳುವುದು, ಕೆಟ್ಟ ಕೆಲಸ ಮಾಡುವುದು, ಕಳ್ಳತನ ಮಾಡುವುದು ಈ ಎಲ್ಲವನ್ನ ಮಾಡಬಾರದೆಂಬ ಅರಿವು ಮಾನವನ ಅಂತರಂಗದಿಂದ ಬರಬೇಕು ಅಲ್ಲವೆ ?
ನಿಮ್ಮ ಕನಸು ನನಸಾಗಲೆಂದು ಭಾರತಾಂಬೆಯ ಬೇಡುವೆ.
-ಯುವಪ್ರೇಮಿ
ಉ: ನನ್ನದೊಂದು ಕನಸು
ಅಂತರಂಗದಿಂದಲೇ ಬರಬೇಕು ಹೌದು. ಆದರೆ ಆ ಅಂತರಂಗ ಅನ್ನೋದು ಸಣ್ನವನಿದ್ದಾಗಿಂದ ಬರಬೇಕು. ಅದರಲ್ಲಿ ಅಮ್ಮ ಅಪ್ಪ ಶಾಲೆ ಇತ್ಯಾದಿ ಪಾತ್ರ ಬಹು ಮುಖ್ಯ.
**************************
http://vikasavada.blogspot.com/
**************************