ಪಚ್ಚೆಕಲ್ಲು ಪಾಣಿ ಪೀಠ...
ಇಬ್ಬರೂ ಗೋಣಿಚೀಲಕ್ಕೆ ಕಾಲು ಒರೆಸುತ್ತಾ ಒಳಗೆ ಬಂದರೆ ಅಮ್ಮ ಆಗಷ್ಟೇ ದೀಪಕ್ಕೆ ಎಣ್ಣೆತುಂಬುತ್ತಾ ಹತ್ತಿಸುತ್ತಿದ್ದಾಳೆ. ಒಂದು ಊದುಬತ್ತಿ ಬೇರೆ. ಈಗ ಅಮ್ಮನದ್ದು ಮಾತಿಲ್ಲ ಸಂಜ್ಞೆ. ನಾವಿಬ್ಬರೂ ಸಿಕ್ಕಾಪಟ್ಟೆ ಒಳ್ಳೆಯವರ ಹಾಗೆ ಕೈ ಮುಗಿದು ಅಮ್ಮನ ಮುಖದ ಮೇಲೆ ಬೆಳಕಿನಾಟ ಹಚ್ಚಿರುವ ದೀಪದ ಪುಟ್ಟ ಉರಿಯನ್ನೇ ನೋಡುತ್ತಾ ನೋಡುತ್ತಾ ನಿಜವಾಗಲೂ ತುಂಬ ಒಳ್ಳೆಯವರಾಗಿಬಿಡುತ್ತಿದ್ದೆವು. ಅಮ್ಮನ ಅಹವಾಲು ಮುಗಿದು ನಮ್ಮ ಕಡೆ ತಿರುಗಿದ ಕೂಡಲೆ, ನಮ್ಮ ಬಾಯಿ ತಾನೆತಾನಾಗಿ ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ.. .ಎಂದು ಒಪ್ಪುವಾ ವಿಘ್ನೇಶ್ವರನಿಗೆ ನಮಸ್ಕರಿಸಿ, ಪಾರ್ವತಿ, ಶಾರದೆ, ಅನ್ನಪೂರ್ಣೆ, ಗುರುರಾಯರನ್ನೆಲ್ಲ ಓಲೈಸಿ ಮುಗಿಸುವಾಗ ನಾವು ಶಿರಬಾಗಿ ನಮಿಸಿ ಎದ್ದವರು ಮತ್ತೆ ವಾಪಸ್ ಕಿರಾತರಾಗಿ ಬಿಡುತ್ತಿದ್ದೆವು. ಗೂಡಿನಲ್ಲಿದ್ದ ಇಡಗುಂಜಿ ಗಣಪತಿಯಂತೂ ನಮ್ಮನ್ನು ನೋಡಿದಾಗಲೆಲ್ಲ ಕಿರುನಗು..
ಬೇಸಿಗೆ ರಜೆಯ ಆಟೋಟ್ಟಹಾಸದ ಸಂಜೆಗಳಲ್ಲಿ, ಊರಲ್ಲಿ, ಸಂಜೆಯ ಆಟ ಮುಗಿದು ಮನೆಗೆ ಬಂದು ಕಾಲ್ತೊಳೆದು ದೇವರ ಮನೆಯ ಮುಂದೆ ಅಕ್ಕನ ಜೊತೆ ತಾಳ ಹಿಡಿಯಲು ನಾವಿಬ್ಬರೂ ಕುಸ್ತಿ ಮಾಡಿ ಕೂರುವಷ್ಟರಲ್ಲಿ ಅವಳು ಒಪ್ಪಾಗಿ ಬಂದು ಕೂತು -ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ ಅಂತ ಶುರುಮಾಡುತ್ತಿದ್ದಂತೆ ನಾವು ನಮ್ಮ ಕಿತಾಪತಿ ಮರೆತು ಆ ಹಾಡಿನ ಎಳೆಯನ್ನೇ ಹಿಡಿದು ರಾಮ ಪಟ್ಟಾಭಿಷೇಕದಲ್ಲಿ ನಲಿಯುತ್ತಾ, ನಮ್ಮ ಮನೆಗಳಲ್ಲಿ ಪರಿಚಿತವಿರುವ ಎಲ್ಲ ದೇವರನ್ನೂ ಓಲೈಸಲು ವಿಧವಿಧದ ಭಜನೆಗಳನ್ನು ಗುನುಗುತ್ತಾ ಇದ್ದರೆ ಅಲ್ಲಿ ಪೀಠದ ಮೇಲೆ ದೀಪದ ಸಣ್ಣ ಬೆಳಕಿನಲ್ಲಿ ಹೊಳೆಯುವ ಎಲ್ಲ ದೇವಾನುದೇವತೆಗಳೂ, ಮನೆಯಲ್ಲಿ ಅಲ್ಲಲ್ಲಿ ಅವರವರ ಕೆಲಸದಲ್ಲಿರುವ ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಅಮ್ಮಮ್ಮ ಎಲ್ಲರೂ ಸುಪ್ರಸನ್ನರಾಗಿ ಎಂತಹ ಬಂಗಾರದ ಮಕ್ಕಳಾಗುತ್ತಿದ್ದೆವು.
ಎಲ್ಲ ಕಿರಾತಬುದ್ಢಿ, ತುಂಟತನ, ಹೊಟ್ಟೆಯುರಿ, ಎಲ್ಲ ಸಂಜೆಯ ಕತ್ತಲಲ್ಲಿ ಕರಗಿ, ಬೆಳಕಿನ ಪುಟ್ಟ ಹಾಡಿನೆಳೆ ಹಿಡಿದು ಕಿನ್ನರಲೋಕದ ದಾರಿಯಲ್ಲಿ ದೇವರ ದೇವ ವಾಸುದೇವನ ಕೊಳಲ ನೆನಪಿನಲ್ಲಿ ನಮ್ಮ ಪಯಣ.
ಮೊನ್ನೆ ಅಲ್ಲಿ ರಾಮಮಂದಿರದಲ್ಲಿ (ಇದು ಭಜರಂಗೀ ರಾಮನಲ್ಲ..! ಬಾಪೂಜೀಯ ರಾಮ) ಎಲ್ಲ ದೊಡ್ಡಮಕ್ಕಳು ಅವರವರ ಮಕ್ಕಳು ಮೊಮ್ಮಕ್ಕಳೊಂದಿಗೆ ಕೂತು ಕಮಲನಯನ ಮಾಧವಾ ಕಮಲಾನಯನ ಮಾಧವಾ.. ಅಂತ ಹಾಡುತ್ತಿದ್ದರು. ಸುತ್ತಲ ಶಬ್ಧಮಯ ಬದುಕಿನ ಅಗಾಧ ಕತ್ತಲೆಯು ನಾದಮಯ ಬದುಕಿನ ಪುಟ್ಟ ಬೆಳಕೊಳಗೆ ಕರಗುತ್ತಿತ್ತು. ದೊಡ್ಡವರ ಸಣ್ಣತನಗಳೆಲ್ಲಾ ಆ ಪುಟ್ಟಬೆಳಕಿನ ಆಪ್ತತೆ, ಸುನಾದದ ಇಂಪಿನ ಮುಂದೆ ನಾಚಿ ಹಿಂದೆಸರಿದು ಮಗುಮನಸ್ಸಿನ ವಿಶಾಲತೆಗೆ ಜಾಗಬಿಟ್ಟಿದ್ದವು. ಒಬ್ಬರು ಧರೆಯೊಳಗೆ ನಾರದ ಹಂಚಿದ ಹರಿನಾಮವನ್ನು ಉಲಿದರೆ, ಇನ್ನೊಬ್ಬರು ಹರಿನಾಮದ ಸುಧೆಯ ಹಂಚುತ್ತಿದ್ದರು, ಪುರಂದರವಿಠಲನ ಅವತಾರ ವರ್ಣಿಸುವ ಸವಿ ಉಲಿಯ ಕೊಳಲಿತ್ತು, ಎಲ್ಲರ ಮೃದು ಉಲಿಯ ದನಿಗೆ ಸಾಥಿಯಾಗಿ ತಾಳವಿತ್ತು. ಅವರು 'ತಂಬೂರಿ ಮೀಟಿದವ ಭವಾಬ್ಧಿ ದಾಟಿದವ..' ಅಂತ ಹಾಡುತ್ತಾ ಪುಟ್ಟ ಪುಟ್ಟ ನೋವಿನ ಹೊಳೆಗಳನ್ನ ಮೆದುದನಿಯ ಹಾಡು ಹೆಜ್ಜೆಗಳಲ್ಲಿ ದಾಟುತ್ತ ಹೋಗುತ್ತಿದ್ದರು.
ನಾನು, ಓದಿದ ಎಲ್ಲ ಶಾಸ್ತ್ರಗಳ ತರ್ಕ ಲೆಕ್ಕ ಹಾಕುತ್ತಾ ಮಗುವಾಗಲಾಗದೆ ಇಲ್ಲೆ ನಿಂತಿದೀನಿ. ಪುಟ್ಟ ಹೊಳೆದಾಟಲು ಹಾಡಿನ ಹರಿಗೋಲಿಲ್ಲ. ನಂಬಿಕೆಯ ದೋಣಿಗೆ ತಳವೇ ಇಲ್ಲ. ಭವಾಭ್ಧಿ ದಾಟುವುದು ಹೇಗೆ?! ಅಬ್ಧಿ ಇದೆಯೋ ಇಲ್ಲವೋ, ದಿನದಿನದ ಬದುಕಿನ ಪುಟ್ಟ ಪುಟ್ಟ ಹೊಡೆತಗಳನ್ನು ತಾಳಿಕೊಂಡು ಮುಂದೆಹೋಗಲು ಆ ಎರಡು ಪುಟ್ಟ ತಾಳಗಳು, ಎಂದೋ ಯಾರೋ ಭಾವೋದ್ದೀಪನೆಯಲ್ಲಿ ಬರೆದಿಟ್ಟ ಸರಳಸಾಲುಗಳು ಎಷ್ಟು ಗಟ್ಟಿ ಸೇತುವೆಯಾಗುತ್ತವೆಯಲ್ಲವೆ?
ಮನಸ್ಸಿನ ಕಿರಾತತನದ ಕತ್ತಲನ್ನು ಓಡಿಸಲು, ಅಮ್ಮನ ಹಾಗೆ ಬೆಚ್ಚಗೆ ಅರಳಿರುವ ಪುಟ್ಟ ದೀಪದ ಬೆಳಕಿಗೆ ಮಾತ್ರ ಸಾಧ್ಯವಲ್ಲವೇ?
ನನಗೆ ಗೊತ್ತಿಲ್ಲ. ಕತ್ತಲು ಬೆಳಕಿನ ಮಧ್ಯದಲ್ಲಿ ನಾನು ಬೆಳಕಿಗಾಗಿ ಕಾದಿದ್ದೇನೆ. ಕೈ ಹಿಡಿದು ನಡೆಸುವ ಬೆಳಕೋ, ನಾನೇ ಹುಡುಕಿಕೊಂಡು ಹೋಗಿ ಹಚ್ಚಬೇಕಿರುವ ಸ್ವಿಚ್ಚೋ ಕಾಲವೇ ಹೇಳಬೇಕು.
ನಮ್ಮ ಸಂಜೆಗಳ ತುಂಬ ಮಾಲ್ ಗಳ ಕಣ್ಣುಕುಕ್ಕುವ ಜಗಮಗ ಬೆಳಕು, ಹಾರ್ನ್, ಮತ್ತು ರಿವರ್ಸ್ ತೆಗೆಯುವ ವಾಹನಗಳ ಹಾಡು, ಸೀರಿಯಲ್ಗಳ ಟೈಟಲ್ ಹಾಡು, ರಿಯಾಲಿಟಿ ಶೋಗಳ ಶ್ರೀಕಿಂಗ್ ರಾಕ್ ಮತ್ತು ಪಾಪ್.. ಕೊನೆಯ ಪಕ್ಷ ಸುಮ್ಮನೆ ಕೂತು ಹಕ್ಕಿಪಕ್ಕಿಗಳ ಚಿಲಿಪಿಲಿ ಕೇಳಲೂ ಇಲ್ಲ. ಪಕ್ಕದ ಮನೆಯವರ ಮ್ಯೂಸಿಕ್, ರಸ್ತೆಯ ಮೇಲಿನ ಗಲಾಟೆ...ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತೀರವು ಅಲ್ಲಿದೆ. ದಾರಿಸಾಗಲು ಭಜನೆಯ ಹರಿಗೋಲೆಲ್ಲಿದೆ?

- sindhu ರವರ ಬ್ಲಾಗ್
- Login or register to post comments
- 810 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಪಚ್ಚೆಕಲ್ಲು ಪಾಣಿ ಪೀಠ...
ಚನ್ನಾಗಿದೆ!
ನಿಮಗೆ ನಿಮ್ಮ ಹರಿಗೋಲದ ಆದನಿತು ಬೇಕ ದೊರಕಲಿ! ನನಗೆ ಸಿಕ್ಕಾಗಿದೆ!
ಉ: ಪಚ್ಚೆಕಲ್ಲು ಪಾಣಿ ಪೀಠ...
ಸಿಂಧು ಅವರೆ,
ನಿಮ್ಮ ಲೇಖನ ಮನಸ್ಸಿಗೆ ತುಂಬಾ ಹಿಡಿಸಿತು...
ಉ: ಪಚ್ಚೆಕಲ್ಲು ಪಾಣಿ ಪೀಠ...
ಸಿಂಧು, ಸೂಪರ್ ಆಗಿ ಬರ್ದಿದೀರ ಕಣ್ರಿ. ನನಗೆ ತುಳಸಿ ಕಟ್ಟೆ ಯ ಸುತ್ತ ತಕಧಿಮಿ-ತಾ ಎಂದು ಕುಣಿಯುತ್ತಲೇ ಕೈ-ಮುಗಿದು ತಿರುಗುತ್ತಿದ್ದುದು ನೆನಪಾಗಿ, ಎನೋ ಹೇಳ್ತಾರಲ್ಲಾ.. ಭಾರಿ ಮನಸ್ಸಿಗೆ ತಂಪಾಯ್ತು ನೋಡಿ
ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ..
ಮುತ್ತಿನುಂಡೆ ಹೊನ್ನಘಂಟೆ.. ಮುಂದೇನು ಅನ್ನೋದು ಜ್ಞಾಪಕ ಇಲ್ಲಾ.. ಗೊತ್ತಿದ್ದರೆ ಹೇಳಿ. ಸುಂದರವಾದ ಬರಹಕ್ಕೆ ಧನ್ಯವಾದಗಳು.
ಉ: ಪಚ್ಚೆಕಲ್ಲು ಪಾಣಿ ಪೀಠ...
ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ ಮುತ್ತಿನುಂಡೆ ಹೊನ್ನಗಂಟೆ ಇಂತೊಪ್ಪುವ ಸಿದ್ಧಿವಿನಾಯಕಗೆ ಇಪ್ಪತ್ತೊಂದು ನಮಸ್ಕಾರಗಳು. ಸಿಂಧುರವರ ಸುಂದರವಾದ ಬರಹಕ್ಕೆ ತಕ್ಕುದಾದ ಕಾಮೆಂಟ್ ಕಣ್ರೀ ನಿಮ್ಮದು. ಸ್ವಲ್ಪ ತುಳಸಿ ಕಟ್ಟೆಯ ತಕಧಿಮಿ-ತಾ ಕುಣಿತದ ಬಗ್ಗೆ ಹೆಚ್ಚು ತಿಳಿಸುತ್ತೀರಾ
ಉ: ಪಚ್ಚೆಕಲ್ಲು ಪಾಣಿ ಪೀಠ...
ಇದನ್ನು ಒಬ್ಬೊಬ್ಬರು ಒಂದೊಂದು ತರ ಹೇಳ್ತಾರ?
ನಾವು ಕಲಿತದ್ದು..
ಬೆನಕ ಬೆನಕ ಏಕದಂತ
ಹಚ್ಚೆಗಲ್ಲು ಮಣಿಮೆಟ್ಲು
ಮುತ್ತಿನುಂಡೆ ಹೊನ್ನ ಗಂಟೆ
ಒಪ್ಪವ ವರಸಿದ್ದಿವಿನಾಯಕನಿಗೆ
ಇಪ್ಪತ್ತೊಂದು ನಮಸ್ಕಾರಗಳು
ಆದ್ರೆ ಇದನ್ನು ನಮ್ಮ ಸ್ಕೂಲಲ್ಲಿ ಹೇಳಿಕೊಟ್ಟಿದ್ರು ಅನ್ನಿಸ್ತದೆ. ಮನೆಯಲ್ಲಿ ನಾವು ಹೇಳಿದ ನೆನಪಿಲ್ಲ.
ಉ: ಪಚ್ಚೆಕಲ್ಲು ಪಾಣಿ ಪೀಠ...
ಜಮಕಂಡಿಯಲ್ಲಿ ನವೋದಯ ಟ್ಯೂಸೆನ್ ಸೇರಿದ್ವಿ. ನಾವು ಮೂರು ಹುಡುಗರು ನಮ್ಮ ಮನೆಯಿಂದ ಟ್ಯೂಸೆನ್ ವರೆಗೂ ಹಣೆಯ ಮೇಲೆ ಎದ್ದು ಕಾಣುವಂತೆ ವಿಬೂತಿ ಇಟ್ಟು ಹೊರಟರೆ, ತ್ರಿಮೂರ್ತಿಗಳು ಅಂತಾನೇ ನಮ್ಮ ಓಣಿಲೆಲ್ಲಾ ಫೇಮಸ್.
ಊಟಕ್ಕೆ ಮೊದಲು "ಓಂ ಶಾಂತಿ, ಶಾಂತಿ, ಶಾಂತಿ" ಅಂತ ಕೊನೆಯಾಗುವ ಮಂತ್ರ ಹೇಳಿದ ನೆನಪು.
ಉ: ಪಚ್ಚೆಕಲ್ಲು ಪಾಣಿ ಪೀಠ...
ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.
ಹರಿಗೋಲು ಇದೇ ಅಂತ ಗೊತ್ತಿದ್ದರೂ ಅದನ್ನು ಹಿಡಿದು ಸಾಗುವ ಕೌಶಲ್ಯ, ತಾಳ್ಮೆ ಎಲ್ಲ ಕಲಿಯಬೇಕಿದೆ ನಾನು. ದಾರಿ ದೂರವಿದೆ.
ಮೊನ್ನೆ ನನ್ನ ಅತ್ತೆ ಮಾವನವರೊಡನೆ ಅವರ ಭಜನೆ ಗುಂಪಿನ ವಾರ್ಷಿಕೋತ್ಸವಕ್ಕೆ ಹೋಗಿದ್ದೆ. ೧೨-೧೩ ವರ್ಷಗಳ ನಂತರ ಅನುಭವಿಸಿದ ಆ ಆಂಬಿಯೆನ್ಸ್ ನನ್ನನ್ನ ಹಳೆಯ ಹಳದಿಹಳದಿ ಫೋಟೋಗಳಂತಹ ನೆನಪುಗಳಲ್ಲಿ ತೇಲಿಬಿಟ್ಟಿತು. ಮತ್ತು ಆ ಹಿರಿಯಜೀವಗಳು ತಮ್ಮ ತಮ್ಮ ಬದುಕಿನ ಎಲ್ಲ ಎದುರುಅಲೆಗಳನ್ನ ಪುಟ್ಟ ತಾಳ, ಶನಿವಾರ ಸಂಜೆಯ ಅರ್ಧ ಮುಕ್ಕಾಲು ಗಂಟೆ ಭಜನೆಯ ಹರಿಗೋಲು ಹಿಡಿದು ದಾಟುತ್ತ ಹೋಗುವ ವಿಷಯ ವಿಶಿಷ್ಟವೆನಿಸಿತು. ಒಳನೋಟದ ಹರಿವೊದಗಿಸಿತು.
ನನಗೆ ಈ ಸಂಜೆಯ ಭಜನೆಯ ಧಾರ್ಮಿಕತೆಗಿಂತಲೂ ಅದರಲ್ಲಿ ಪಡಿ ಮೂಡಿರುವ ಬದುಕುವ ರೀತಿ, ಶಿಸ್ತು, ದಿನದ ಎಲ್ಲ ಕೆಲಸ,ಒತ್ತಡ, ಹಾರಾಟಗಳ ನಡುವೆ ಇಳಿಸಂಜೆಯಲ್ಲಿ ಹೊಳೆಯುವ ಒಂದಿಷ್ಟು ಪ್ರಶಾಂತ ನಿಮಿಷಗಳು ತುಂಬ ಹಿಡಿಸಿದೆ. ಹಳೆಯದೇನನ್ನೋ ಕಳಕೊಂಡ ಹಳಹಳಿಯಲ್ಲ ಈ ಬರಹ. ಇಂದಿನ ನಮ್ಮ ಜೀವನದರೀತಿಯಲ್ಲಿ ಇಂತದೊಂದು ಅಭಿವ್ಯಕ್ತಿ ಎಷ್ಟು ಅಪ್ಯಾಯಮಾನ ಅನ್ನುವುದನ್ನು ಹೇಳಬೇಕಿತ್ತು ನನಗೆ.
ಬೆನಕ ಬೆನಕಾ ಏಕದಂತಾ
ಪಚ್ಚೆಕಲ್ಲು ಪಾಣಿ ಪೀಠಾ
ಮುತ್ತಿನುಂಡೆ ಹೊನ್ನಗಂಟೆ
ಯಿಂದ
ಒಪ್ಪುವಾ ವಿಘ್ನೇಶ್ವರ ದೇವರಿಗೆ
ಇಪ್ಪತ್ತೊಂದು ನಮಸ್ಕಾರಗಳು..
ಎಂಬುದು ನನ್ನ ಮತ್ತು ತಮ್ಮನ ಬಾಲ್ಯದ ಸಂಜೆಗತ್ತಲಲ್ಲಿ ಹೊಳೆದು ಬೆಳಗಿದ ಶ್ಲೋಕ. ಈಗಲೂ ಅಪ್ಪನ ಸಂಜೆಗಳ ಸಂಗಾತಿ. ನಾನು ಆಚರಣೆಗಳ ತಿರುಳಿಗಿಂತಾ ಆ ಪೂಜೆ ಮತ್ತು ಪೂಜಾಮೂರ್ತಿಗಳನ್ನು ನಂಬಲಾಗದೆ, ನಂಬದಿರಲೂ ಆಗದೆ, ಕತ್ತಲು ಬೆಳಕುಗಳ ದಾರಿ ಮಧ್ಯದ ಅಲೆಮಾರಿ..
ಈ ಶ್ಲೋಕವನ್ನು ಬೇರೆ ಬೇರೆ ಭಾಗಗಳ ಜನರು ಬೇರೆಬೇರೆಯಾಗಿ ಹೇಳುತ್ತಾರೆ. ನಾವು ಸಣ್ಣವರಿದ್ದಾಗ ಅದನ್ನೆಲ್ಲ ಕೇಳಿ, ನಮ್ಮ ದಿನದ ಶ್ಲೋಕದಲ್ಲಿ ಅಚಾನಕ್ ಆಲ್ಟರೇಶನ್ ಮಾಡಿಕೊಂಡು ಖುಷಿ ಪಟ್ಟ ಕ್ಷಣಗಳೂ ಇವೆ.
ತುಳಸೀಕಟ್ಟೆಯ ತಕಧಿಮಿತಾ ಓದಲು ಕಾಯುತ್ತಿದ್ದೇನೆ.
ಪ್ರೀತಿಯಿರಲಿ
ಸಿಂಧು.
ಉ: ಪಚ್ಚೆಕಲ್ಲು ಪಾಣಿ ಪೀಠ...
ಸಿಂಧು! ನಿಮ್ಮ ಲೇಖನವನ್ನು ಓದಿದಾಗ ಆದಷ್ಟೇ ಆನಂದ ನಿಮ್ಮ ಪ್ರತಿಕ್ರಿಯೆ ಓದಿದಾಗಲೂ ಆಯ್ತು. ಹಮ್, ನಾನು ಮರೆತಿದ್ದು 'ಯಿಂದ
ಒಪ್ಪುವಾ ವಿಘ್ನೇಶ್ವರ ದೇವರಿಗೆ' ಧನ್ಯವಾದಗಳು. ಅಮ್ಮ ಹೇಳುವ ಪ್ರಕಾರ ಒಪ್ಪುವಾ ವಿಘ್ನೇಶನಿಗೆ ಅಂತೆ!
ತಕಧಿಮಿ-ತಾ ನೆನಪಿಸಿದ್ದು ನೀವೇ. ಕಿರಾತಕರ ಬುದ್ಧಿಯ ಪರಾಕಾಷ್ಠೆ.. ಕಾರ್ತೀಕ ಮಾಸದಲ್ಲಿ ಮಕ್ಕಳು ತುಳಸಿ ಕಟ್ಟೆಯ ಪ್ರದಕ್ಷಿಣೆ ಮಾಡಿ, ದೀಪಕ್ಕೆ ನಮಸ್ಕರಿಸುವುದು ಪದ್ಧತಿಯಷ್ಟೆ? ಅಂಗಳದಲ್ಲಿ ಕುಣಿಯುತ್ತಿದ್ದ ನಮ್ಮನ್ನು ತುಳಸಿ ಪ್ರದಕ್ಷಿಣೆ ಹಾಕಿಸುವಷ್ಟರಲ್ಲಿ ಅಮ್ಮನಿಗೆ ಸುಸ್ತು! ನಮಗೆ ರಾಮ ಎಲೆ, ಭೀಮ ಎಲೆ, ತುಳಸಿ ಎಲೆ ... ಆ ಎಲೆ.. ಈ ಎಲೆ ಅನ್ನುತ್ತಾ ತಿರುಗುವುದು ಇಷ್ಟದ ಕೆಲಸವೇ ಅದರೂ ಅಮ್ಮನನ್ನು ಗೋಳು ಹೋಯ್ದುಕೊಳ್ಳಬೇಡವೇ? ' ಸಾಕ್ರೋ ಹುಡ್ಗ್ರಾ.. ಕುಣಿದಿದ್ದು.., ಕಾಲು ತೊಳ್ಕಂಡು ಬನ್ನಿ..' (ನಾವು ಕಾಲು ತೊಳೆಯುವುದಿರಲಿ, ಕುಣಿಯುವುದನ್ನೂ ನಿಲ್ಲಿಸುತ್ತಿರಲಿಲ್ಲ)... 'ಕಾಲು ತೊಳೆಯದ್ರೆ ಇಲ್ಲೆ, ನಾಲ್ಕು ಸುತ್ತಾದ್ರು ತಿರುಗಿಕ್ಕಿ ಹೋಗ್ರ ಮಕ್ಕಳ್ರಾ' ಎನ್ನುವ ಅಮ್ಮ.. ಹ್ಹೆ ಹ್ಹೆ.. ಎಂಥ ಮಜಾ.. ಅಲ್ಲವೇ?
ಅದಿರಲಿ, ಅಮ್ಮನಿಗೆ ನಾವು ಕೊಟ್ಟ ಕಷ್ಟ ನೆನಪೇ ಇಲ್ವಂತೆ.. 'ಎನ್ ಗನಾ ಮಕ್ಕ ಆಗಿದ್ದಿ ನಿಂಗ' ಅಂತಾರೆ!
ಉ: ಪಚ್ಚೆಕಲ್ಲು ಪಾಣಿ ಪೀಠ...
ಸಂಗನಗೌಡ್ದ,
ಊಟಕ್ಕಿನ ಮುಂಚೆ ಹೇಳೋ ಮಂತ್ರ ...
ಸಹನಾ ವವತು ಸಹನೌ ಭುನಕ್ತು
ಸಹವೀರ್ಯಂ ಕರವಾವಹೈ
ತೇಜಸ್ವಿ ನಾಮ ಧಿತ ಮಸ್ತು
ಮಾ ವಿದ್ವಿಶಾವ ಹೈ..
ಓಂ ಶಾಂತಿ ಶಾಂತಿ ಶಾಂತಿಃ
ಕಾಗುಣಿತ ತಪ್ಪಿದ್ದರsss ಕ್ಷಮಿಸಿರಿ.
ನಿಮ್ಮವ,
ಗಿರೀಶ ರಾಜನಾಳ
ಉ: ಪಚ್ಚೆಕಲ್ಲು ಪಾಣಿ ಪೀಠ...
ಇದನ್ನು ಕನ್ನಡಕ್ಕೆ ಬೇಂದ್ರೆಯವರು ಬಾಳ ಚಂದ ಅನುವಾದಿಸಿದ್ದಾರೆ.
ಕೂಡಿ ಓದಿ, ಕೂಡಾಡಿ, ಕೂಡಿ
ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು, ಕೂಡುಂಡು ಕುಡಿದು
ದುಡಿಯೋಣ ಕೂಡಿ ಕೂಡಿ
ಕೂಡಿ ನಡೆದು, ಒಡಗೂಡಿ ಪಡೆದು
ನುಡಿ ಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣು
ದೇವರೊಲು ಕೂಡಿ ಕೂಡಿ
[೧೯೫೧, “ಗಂಗಾವತರಣ” ಸಂಕಲನ]
ಇದರ ಬಗ್ಗೆ, OLN ಸ್ವಾಮಿಯವರ ಅನಿಸಿಕೆ ಇಲ್ಲಿದೆ ನೋಡಿ.
OLN ಸ್ವಾಮಿಯವರಿಗೆ ತುಂಬ ನನ್ನಿಗಳು.