ಪಂಪಾ ವಿರೂಪಾಕ್ಷ ಯಾರು ?
ಕಳೆದ ಶನಿವಾರ ವಿದ್ವಾನ್ ಪಾವಗಡ ಪ್ರಕಾಶರಾವ್ ಅವರು "ರಾಘವಾಂಕನ ಹರೀಶ್ಚಂದ್ರ ಕಾವ್ಯ"ದ ಬಗ್ಗೆ ನಡೆಸಿಕೊಟ್ಟ ಒಂದು ಉಪನ್ಯಾಸಕ್ಕೆ ಹೋಗಿದ್ದೆ. ಹಾಗೆ ನೋಡಿದರೆ ಹರೀಶ್ಚಂದ್ರನ ಕತೆ ಭಾರತೀಯರಿಗೆ ಹೊಸತೇನೂ ಅಲ್ಲವೇ ಅಲ್ಲ. ಆದರೆ ನನ್ನ ತುಡಿತವಿದ್ದದ್ದು, "ಕನ್ನಡದ ರಾಘವಾಂಕ ಹರೀಶ್ಚಂದ್ರನನ್ನು ಕಂಡ ರೀತಿ ಹೇಗಿತ್ತು" ಎಂಬುದನ್ನು ತಿಳಿಯುವ ಹಂಬಲ. ಒಂದೂವರೆ ಗಂಟೆಯ ಆ ಉಪನ್ಯಾಸದಲ್ಲಿ ಹರೀಶ್ಚಂದ್ರ ಕಾವ್ಯಕ್ಕೆ ಕೇವಲ ಪೀಠಿಕೆಯು ಸಿಕ್ಕಿ ಮತ್ತು ಆನಂತರ ಕಾವ್ಯಕ್ಕೆ ಪ್ರವೇಶ ಸಿಕ್ಕಿತೇ ಹೊರತು, ಕಾವ್ಯದ ವಿಚಾರವಾಗಿ ಅಷ್ಟೇನು ವಿಚಾರ ವಿನಿಮಯವಾಗಲಿಲ್ಲ. ೧.೫ ಗಂಟೆಯಲ್ಲಿ ಅದು ಸಾಧ್ಯವೂ ಇರಲಿಲ್ಲ ಬಿಡಿ.
ಮನೆಗೆ ಬಂದು, ೧೨೨೨ರಲ್ಲಿ ರಾಘವಾಂಕನು ಬರೆದಿಟ್ಟಿರುವ ಈ ಪುಸ್ತಕಕ್ಕಾಗಿ ಅಲೆದಾಡಿದೆ. ಇಂಟರನೆಟ್ಟಿನಲ್ಲಿ ಇದರ ಒಂದು ಪ್ರತಿ ಸಿಕ್ಕಿತು. ಈ ಕಾವ್ಯದ ಮೊದಲ ಪದ್ಯವನ್ನೋದಿದೊಡನೆಯೇ ನನ್ನಲ್ಲಿ ಒಂದು ಕ್ಷಣ ನಾನು ಒಬ್ಬ ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಎಂತಹ ಹೆಮ್ಮೆ, ಗರ್ವ ಉಂಟಾಯಿತು ಅಂತೀರಿ. ಆಹಾ! ನೀವೇ ನೋಡಿ ಬೇಕಿದ್ದರೆ ಆ ಮೊದಲ ಪದ್ಯವನ್ನು.
ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನುವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ |
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ || ೧ ||
ಇಲ್ಲಿ "ಹಂಪೆಯ ವಿರೂಪಾಕ್ಷ" ಎಂಬುವನನ್ನು ಕನ್ನಡದ ಒಬ್ಬ "ಗುರು" ಎಂಬುದಾಗಿ ಇಟ್ಟುಕೊಳ್ಳಿ. ಆಗ ಏನಾಗುತ್ತದೆ ನೋಡಿ. ಈ ಕನ್ನಡಿಗ "ಪಂಪಾ ವಿರೂಪಾಕ್ಷನೆಂಬ ಗುರುವೇ" ವಿಷ್ಣುವಿಗೆ ಸೊಬಗನ್ನು, ಬ್ರಹ್ಮನಿಗೆ ಚಾರ್ತುಯಮಂ, ಚಂದ್ರನಿಗೆ ಶಾಂತಿ, ಸೂರ್ಯನಿಗೆ ಪ್ರತಾಪ, ಇಂದ್ರನಿಗೆ ಭೋಗ, ಮನ್ಮಥನಿಗೆ ಸುರಸುಂದರ ರೂಪ, ಶಿವನಿಗೆ ಗಂಭೀರತೆ, ಅಗ್ನಿಗೆ ತೇಜಸ್ಸು ಇವುಗಳನ್ನು ನೀಡಿದ್ದು ಎಂದಾಗುತ್ತದೆ. ಎಂಥ ಕಲ್ಪನೆ ಅಲ್ಲವೇ ? ಕನ್ನಡದವರಿಂದಲೇ ಈ ಎಲ್ಲಾ ದೇವತೆಗಳಿಗೆ ಇಷ್ಟೆಲ್ಲ ಗುಣಗಳು ಬಂದಿರೋದು!!!
ಸಾಮಾಜಿಕವಾಗಿ, ೧೨-೧೩ನೇ ಶತಮಾನದ ಕರ್ನಾಟಕದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತಿದ್ದವು ನೋಡಿ. ಜೈನರಿದ್ದರು, ವೈದಿಕರಿದ್ದರು, ವೀರಶೈವರು. ವೈಷ್ಣವರ ಮತ್ತು ಶೈವರ ಕಿತ್ತಾಟಗಳಂತೂ ಇದ್ದೇ ಇತ್ತು. ಆದರೆ ಇಲ್ಲಿ ಗಮನಿಸಬೇಕಾದ್ದು, ಇಷ್ಟೆಲ್ಲ ಸಾಂಸ್ಕೃತಿಕ ಪಬೆ (*) ಇದ್ದಾಗಿಯೂ ಕೂಡ, "ಪಂಪಾ ವಿರೂಪಾಕ್ಷ" ಒಂದು ಒಟ್ಟು "ಕನ್ನಡ-ಸಮಾಜದ" ಅಡಿಪಾಯದ ವೀರಗಲ್ಲಾಗಿ ನಿಲ್ಲುತ್ತದೆ.
--------------------------------------------------------------------------------
ಕೊಕೊ - (*) -> ಪಬೆ - ಪ - ಪಗೆತನ (ವೈರುಧ್ಯ) + ಬೆ - ಬೇರತನ(ವೈವಿಧ್ಯ). ಹಾಗಾಗಿ,
ಪಬೆ = Cultural Diversity and Social Polarity. (ಸಾಂಸ್ಕೃತಿಕ ವೈವಿಧ್ಯ ಮತ್ತು ಸಾಮಾಜಿಕ ವೈರುಧ್ಯ) ![]()
--------------------------------------------------------------------------------

- Sunil Jayaprakash ರವರ ಬ್ಲಾಗ್
- Login or register to post comments
- 375 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪಂಪಾ ವಿರೂಪಾಕ್ಷ ಯಾರು ?
ಪಾ.ಪ್ರ.ರಾವ್ ರವರ ಪ್ರವಚನಗಳು ಬಹಳ ವಿದ್ವತ್ಪೂರ್ಣವಾಗಿರ್ತವೆ. ಜೀ. ಟಿ.ವಿ ಯಲ್ಲಿ ವಾರಾಂತ್ಯದ ಬೆಳಗಿನಹೊತ್ತು ’ಶ್ರೀ ಕೃಷ್ಣ ದರ್ಶನ’ ಉಪನ್ಯಾಸ ಬರುತ್ತಿತ್ತು. ಈಗೇಕೋ ನಿಂತು ಹೋಗಿದೆ. ಅವರು ಕುಮಾರವ್ಯಾಸಭಾರತದ ಬಗ್ಗೆಯೂ ಬಹಳ ಪ್ರವಚನಗಳನ್ನು ನಡೆಸಿಕೊಟ್ಟಿದ್ದಾರೆ. ನನಗೆ ಕುಮಾರವ್ಯಾಸಭಾರತದ ಭಕ್ತಿ, ಭಾವಗಳ ಉತ್ಕಟತೆ ಬಹಳ ಇಷ್ಟವಾಯಿತು.