ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಎಲ್ರೂ, ಕಳೆದ ವೀಕೆಂಡಿನ ನನ್ನ ದಿನಚರಿ ಕೇಳಿ ಇಲ್ಲಿ, ಒಂದು ನಿಮಿಷ. ಶನಿವಾರ ಎಂದಿನಂತೆ ಹುಮ್ಮಸ್ಸಿನಿಂದ ಎದ್ದು, ಒಳ್ಳೆಯ ತಿಂಡಿ ತಿಂದು, ಸ್ವಲ್ಪ ಸಮಾಜಸೇವೆ ಮಾಡಿ ಮಧ್ಯಾಹ್ನ ೩ರ ಹೊತ್ತಿಗೆ ಒಂದು ಲೆಕ್ಚರ್ ಅಟೆಂಡ್ ಮಾಡಲು ಹೋದೆ. ಮೊದಲಿಗೆ
೧. ಮೈಸೂರು ಒಡೆಯರ ಕಾಲದಲ್ಲಿ ಸಂಗೀತ - ದೃಶ್ಯ - ಶ್ರಾವ್ಯ - ಪ್ರಾತ್ಯಕ್ಷಿಕೆ - ಡಾ||ಮೀರಾ ಪ್ರಾಣೇಶ್ ಅವರಿಂದ. ಇವರು ಒಂದು ನೀಟಾದ ಪವರ್-ಪಾಯಿಂಟ್ ಪ್ರೆಸೆಂಟೇಶನ್ ಮಾಡಿಕೊಂಡು ಬಂದಿದ್ದರು. ಅದರಲ್ಲಿ ನನ್ನನ್ನು ತೀವ್ರವಾಗಿ ಆಕರ್ಶಿಸಿದ್ದು, ಮೈಸೂರು ರಾಜರು ಸಂಗೀತಗಾರರಿಗೆ ನೀಡುತ್ತಿದ್ದ ಪಾರಿತೋಷಕಗಳಲ್ಲಿ ಒಂದಾದ ಉಂಗುರ. ಆ ಉಂಗುರದಲ್ಲಿ ಗಂಢಭೇರುಂಢವಿತ್ತು. ಮೈಸೂರು ಸಂಸ್ಥಾನದ ಯದುರಾಯರಿಂದ ಹಿಡಿದು ಜಯಚಾಮರಾಜ ಒಡೆಯರ್ ೯ ಕಾಲದ ತನಕ ಸಂಗೀತ ಹೇಗೆ ಉತ್ತುಂಗವನ್ನು ತಲುಪಿತು ಎಂಬೆಲ್ಲ ವಿವರಗಳು ಸಿಕ್ಕದವು. ಹೀಗೆಯೇ ಅಲ್ಲಿ, ಅನೇಕ ಸಂಗೀತವನ್ನು ಕುರಿತಾದ ಕೃತಿಗಳ ಎಳೆಗಳು ಸಿಕ್ಕಿದವು. ಅಂದಹಾಗೆ, ಜಾವಳಿ ಎಂಬ ಪ್ರಕಾರದ ಬಗ್ಗೆ ಧ್ವನಿಗಳು ಕೇಳಿಬಂದವು. ಆದರೆ ಜಾವಳಿ ಎಂದರೇನು ಅಂತ ನನಗೆ ಗೊತ್ತಿಲ್ಲ. ತಿಳಿದವರು ದನಿಗೂಡಿಸಿ.
೨. ರಟ್ಟೆ ಪಲ್ಲವಿ ನಿರೂಪಣೆ - ಡಾ||ಹಂಸಿನಿ - ನನಗೆ ರಟ್ಟೆ ಪಲ್ಲವಿ ಅಂದರೇನು ಅಂತಲೇ ತಿಳಿದಿರಲಿಲ್ಲ. ಸುಮ್ಮನೆ ಕುತೂಹಲಕ್ಕೆ ಹೋಗಿ ಕುಳಿತಿದ್ದೆ. ಬರೋಬ್ಬರಿ ೧.೧೫ ನಿಮಿಷಗಳ ತನಕ ಪಲ್ಲವಿಯ ನಿರೂಪಣೆ ಸಾಗಿಯೇ ಸಾಗಿತು. ನನ್ನಲ್ಲಿ ಅಷ್ಟೊಂದು ಪೇಶನ್ಸ್ ಇದೆಯೇ ಅಂತ ನನಗೇ ಆಶ್ಚರ್ಯ ಆಯಿತು. ಅಂದ ಹಾಗೆ, ಇಲ್ಲಿ ಒಂದು ವಿಷಯ ನನ್ನ ಗಮನ ಸೆಳೆದದ್ದು ಈ ನಿರೂಪಣೆಯಲ್ಲಿ ಎರಡು ರೀತಿಯ ಆಲಾಪ ಇದ್ದುದು. ಒಂದು, "ತದಿರಾನಾನಾ" ತರದ್ದು, ಇನ್ನೊಂದು "ತಂತಂತಾಂತಂ" ಎಂಬ ರೀತಿಯದ್ದು. ಎರಡನೆಯ ರೀತಿಯ ಆಲಾಪ ನಾನು ಕೇಳಿಯೇ ಇರಲಿಲ್ಲ.
೩. ಸಂಸ್ಕೃತ ಕಾವ್ಯಗಳಲ್ಲಿ ಸಂಗೀತ - ಶತಾವಧಾನಿ ಡಾ||ಆರ್.ಗಣೇಶ್ ಅವರಿಂದ - ಭಾಸ, ಕಾಳಿದಾಸ, ಶೂದ್ರಕನ ಕೃತಿಗಳಲ್ಲಿರುವ ಸಂಗೀತದ ಛಾಪನ್ನು ಸುಮಾರು ೧.೧೫ ಗಂಟೆಯ ಕಾಲ ಸೊಗಸಾಗಿ ನಿರೂಪಿಸಿದರು.
ಈ ಲೆಕ್ಚರುಗಳಾದ ಮೇಲೆ, "ರುಕ್ಮಿಣಿ ಪರಿಣಯ" ಎಂಬ ಗೇಯ ರೂಪಕದ ಪ್ರಯೋಗವಿತ್ತು. ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮಲಯಾಳಂ, ಹಿಂದಿ ಕೃತಿಗಳಿಂದ ಆಯ್ದ ಗೀತೆಗಳನ್ನು ಇದರ ಭಾಗವಾಗಿ ಹಾಡಲಾಯಿತು. ಕೊನೆಯಲ್ಲಿ "ಆನಂದ, ಆನಂದಂ, ಆನಂದಮೇ" ಕೇಳಿ ಖುಷಿಪಟ್ಟು ಮನೆಗೆ ಬಂದು ಇನ್ನೇನು ಮಲಗಬೇಕು, ಆಗ ನನ್ನ ಕಸಿನ್ ಫೋನ್ ಮಾಡಿ ಪೀಟ್ಜಾ ಹಟ್ಟಿಗೆ ಬಾ ಎಂದ. ನಾನೋ ಪೀಟ್ಜಾ ತಿಂದು ತಿಂಗಳುಗಳೇ ಇಗಿದ್ದವು. ಸರಿ ಹೋಗಿ, ಚೆನ್ನಾಗಿ ಜಡಾಯಿಸಿ ತಿಂದು ಬಂದು ಮಲಗಿದೆ.
ಶನಿವಾರದ ನಂತರ ಬಂತು ನೋಡಿ ಭಾನುವಾರ, ಬಹುಶಃ ನಾನು ಇದನ್ನು ಎಂದೆಂದೂ ಮರೆಯುವುದಿಲ್ಲ. ನೆನ್ನೆ ಭಾನುವಾರ ಜಗತ್ತಿನಲ್ಲಿಯೇ ಅತ್ಯಂತ ರುಚಿಕರವಾದ ಜಾಮೂನನ್ನು ಸವಿಯುವ ಭಾಗ್ಯ ನನಗೆ ಸಿಕ್ಕಿತು. ನಾನು ಎಷ್ಟೆಲ್ಲ ಕಡೆ ಜಾಮೂನು ತಿಂದಿದ್ದೆ. ಎಂಟಿಆರಿನಲ್ಲಿಯೂ ಕೂಡ. ಆದರೆ ನೆನ್ನೆ ನಮ್ಮ ತಂದೆಯವರು ಮಾಡಿದ ಜಾಮೂನಿನ ಮುಂದೆ ಅವೆಲ್ಲವನ್ನೂ ನೀವಾಳಿಸಿದಂತಿತ್ತು. ಅಷ್ಟು ರುಚಿಯಾದ ಜಾಮೂನು ತಿನ್ನುತ್ತಾ, ಭರತೇಶ ವೈಭವದ ನನ್ನ ಓದನ್ನು ಮುಂದುವರಿಸುತ್ತಿದ್ದೆ. ಭರತೇಶ ವೈಭವದಲ್ಲಿರುವ ಕೆಲವು ಅಪರೂಪ ಪದಗಳ ಅರ್ಥ, ಭಾವಾರ್ಥ, ರಾಜಕೀಯ ವಿದ್ಯಮಾನಗಳು ನಾನು ಸವಿದ ಜಗತ್ತಿನ ಅತ್ಯಂತ ಶುಚಿ, ರುಚಿ ಜಾಮೂನಿಗೆ ಏಲಕ್ಕಿ, ಕೇಸರಿ ಬೆರೆಸಿದಂತಿತ್ತು. ಇದಾದ ನಂತರ ಮತ್ತೆ ಬೆಂಗಳೂರು ಸುತ್ತಾಟ, ಕೊನೆಗೊಂದಿಷ್ಟು ಕೊಸರೆಂಬಂತೆ ಮತ್ತೊಂದಿಷ್ಟು ಸಮಾಜಸೇವೆ ಮಾಡಿ ಬಂದು, ಸೊಗಸಾದ ಘಮಘಮಿಸುವ ಉಪ್ಪಿಟ್ಟಿಗೆ ಆಗತಾನೆ ಬೆಣ್ಣೆ ಕಾಯಿಸಿದ ತುಪ್ಪ ಬೆರೆಸಿ ಸವಿದು ಅಪ್ಪ-ಅಮ್ಮನ ಜೊತೆ ಮಾತು ಆಡುತ್ತ ಆಡುತ್ತಲೇ ತಾಚಿ ಮಾಡಿದೆ (ಹಾಗೆಯೇ ನಿದ್ದೆಹೋದೆ) ![]()

- Sunil Jayaprakash ರವರ ಬ್ಲಾಗ್
- Login or register to post comments
- 1030 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಸುನಿಲರೆ,
ಈ ಬರಹ ನೋಡಿ ಖುಷಿಯಾಯಿತು. ಗಣೇಶ್ ಅವರು ಶೂದ್ರಕ ಕಾಳಿದಾಸನ ಕಾಲದ ಸಂಗೀತದ ಬಗ್ಗೆ ಏನು ಮಾತಾಡಿದರು ಅನ್ನುವುದರ ಬಗ್ಗೆ ಸ್ವಲ್ಪ ವಿವರ ಬರೀತೀರಾ?
ಕೊ.ಕೊ: ನೀವೀಗ ತಾನೇ, ಮುಂದೆ ನಾನು ಯಾವ ಎರಡು ಬರಹಗಳನ್ನು ಬರೆಯಬಹುದು ಎನ್ನುವುದಕ್ಕೆ ಐಡಿಯಾ ಕೊಟ್ಟಿರಿ
-ಹಂಸಾನಂದಿ
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಹಂಸಾನಂದಿಗಳೇ, ನನ್ನ ಮಟ್ಟಿಗೆ ಹೊಳೆದದ್ದು ಜಾಮೂನು ಮತ್ತು pizza ಬಗ್ಗೆ ಬರೆಯಬೇಕು ಎಂದು
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಅಂದರೆ ಹಂಸಾನಂದಿಯವರು ತಾಚಿ ಮಾಡೋ ಬಗ್ಗೆ ಬರೆಯೊಲ್ಲವೇ?
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಕಲ್ಪನಾ ಮತ್ತು ಶ್ರೀನಿವಾಸ ಬಂಗೋಡಿ, ನಿಮ್ಮ ನಿಮ್ಮ ಕಲ್ಪನೆ ಸೂಪರ್. ಸರಿ ಯಾರು ಯಾರಿಗೆ ಏನೇನು ಇಷ್ಟವೋ ಅದರ ಬಗ್ಗೆ ಬರೆಯಿರಿ. ಓದಕ್ಕೆ ನಾನು ಯಾವಾಗಲೂ ರೆಡಿ. ಸರಿ ಈಗ ನಿಮ್ಮಿಬ್ಬಿರಗೂ ಒಂದೊಂದು ಮನೆಗೆಲಸ.

ಕಲ್ಪನಾ - ನೀವು ಪೀಟ್ಜಾ ಮತ್ತು ಜಾಮೂನನ್ನು ಹೇಗೆ ತಯಾರಿಸಬೇಕು ಎಂಬುದರ ಬಗ್ಗೆ ಬರೆಯಬೇಕು.
ಮತ್ತೆ ನಮ್ಮ ಶ್ರೀನಿವಾಸ ಬಂಗೋಡಿಯವರು - ಇಗೋ, ಯಾರು ಯಾರು, ಯಾವಾಗ ಯಾವಾಗ, ಎಲ್ಲೆಲ್ಲಿ, ಹೇಗ್ಹೇಗೆ ತಾಚಿ ಮಾಡ್ತಾರೆ ಅಂತ ಬರೆಯಬೇಕು
ಬರೀತಾರ ತಾನೇ...
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಸರ್,
ನಾನು ತಾಚಿ ಬಗ್ಗೆ ಕೇಳಿದಾಗಲೇ, ನಾನು ಎಷ್ಟು ಆಲಸಿ ಆಂತ ಗೊತ್ತಾಗಿರುತ್ತೆ. ಆದ್ರೂ ಅದರ ಬಗ್ಗೆ ಬರೀತೀನಿ. ಆದ್ರೆ ಬೇಗ ಅಂತೂ ಆಗಲ್ಲ
ಕೇಳಿದ್ದಕ್ಕೆ ನನ್ನಿ!
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಸುನಿಲಣ್ಣಾ ನಮಸ್ಕಾರ.
ಪೇಶನ್ಸ್ ಅಂದ್ರೆ "ತಾಳ್ಮೆ" ಅಂತ. ಇದು ಭರತೇಶ ವೈಭವದಲ್ಲಿ ಇದೆಯೋ ಇಲ್ಲೋ ಗೊತ್ತಿಲ್ಲ
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ಎಂಥ ಗಾಳ ಹಾಕಿದ್ರಿ ವಿಕಾಸ್, ಉಫ್ ಸುಸ್ತಾಗೋದೆ!!!! ಚಾಂಗು ಜಾಗುರೆ. ಹಾಂ!!!ಭರತೇಶ ವೈಭವದಲ್ಲಿ ತಾಳ್ಮೆ ಇದೆಯೋ ಇಲ್ವೋ ಅಂತ ಪೂರ್ತಿ ಓದಿದ ಮೇಲೆ ಹೇಳುವೆ
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
"ವೀಕೆಂಡಿನ ನನ್ನ ದಿನಚರಿ ಕೇಳಿ"
ಇದು ಸರಿಯಿಲ್ಲ...
ದಿನಚರಿ ಅಂದ್ರೆ ದಿನಾಲೂ ಚರಿಸುವುದು(ಆಚರಿಸುವುದು)!
ಜೊತೆ ವೀಕೆಂಡು ದಿನಗಳ-ಚರಿ ಆಗಬೇಕು.( ಬೆಂಗಳೂರಿಗರಿಗೆ, ಅದ್ರಲ್ಲೂ ಐಟಿಗರಿಗೆ ವಾರದಂಚು ಅಂದ್ರೆ ಸನಿ+ನೇಸರವಾರಗಳ )
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ವೀಕೆಂಡ್ ಪುರಾಣ
ಉ: ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
ವಸ೦ತಿ ಹರಿಪ್ರಕಾಶ್ ನಡೆಸಿಕೊಡುವ "ವಾರಾ೦ತ್ಯ ವಿಶೇಷ ಕಾರ್ಯಕ್ರಮ" ಕೇಳಿದ್ದರೆ ಈ ಕುರಿತಾಗಿ ಏನಾದರೂ ಚಾ೦ಗ್ ಐಡಿಯಾ ಹೊಳೆಯಬಹುದಿತ್ತು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು