ಶಿಖರಸೂರ್ಯ
ಸಂಪದದಲ್ಲಿ ಪ್ರಕಟವಾಗಿದ್ದ ಇಂದಿನ ಕಾರ್ಯಕ್ರಮದ ವೇಳಾಪಟ್ಟಿಯನ್ನು ಸುದ್ಧಿಯನ್ನು ನೋಡಿದ್ದೆ. ಹೋಗಲಾಗುತ್ತದೆಯೋ ಇಲ್ಲವೋ ಎಂಬುದಾಗಿ ಬೆಳಗ್ಗಿನಿಂದಲೂ ಯೋಚಿಸುತ್ತಿದ್ದೆ. ಹೇಗಾದರಾಗಲೀ ಆಫೀಸಿನಿಂದ ಮನೆಗೆ ಹೋಗುವಾಗ ಹೋಗೋಣ ಎಂದುಕೊಂಡಿದ್ದೆ. ಎಷ್ಟೇ ಬೇಗ ಹೋಗೋಣ ಎಂದರೂ ನಾನು ಹೋಗುವ ವೇಳೆಗೆ ೬:೪೫ - ೭:೦೦ ಗಂಟೆಯಾಗಿತ್ತು. ಅಷ್ಟರಲ್ಲಿ ಡಾ. ಚಂದ್ರಶೇಖರ ಕಂಬಾರರ ಕಾದಂಬರಿ ಶಿಖರಸೂರ್ಯದ ಮೊದಲ ಬಿಡುಗಡೆಯಾಗಿ ಹೋಗಿತ್ತು. ಶಿಖರಸೂರ್ಯ, ಸುಮಾರು ವರ್ಷಗಳ(೨೪ ಇರಬೇಕು) ನಂತರ ಬಿಡುಗಡೆಯಾದ ಡಾ. ಚಂದ್ರಶೇಖರ ಕಂಬಾರರ ಕಾದಂಬರಿಯಿದು.
ನಾನು ಹೋಗುವಷ್ಟರಲ್ಲಿ ಶ್ರೀ ಎಚ್. ಎಸ್. ಶಿವಪ್ರಕಾಶ್ರವರ ಮಾತುಗಳು ಮುಗಿದುಹೋಗಿತ್ತು, ಹಾಗೆಯೇ ಡಾ| ಎಲ್. ಹನುಮಂತಯ್ಯನವರ ಮಾತು ಇನ್ನೇನು ಮುಗಿಯುವುದಲ್ಲಿತ್ತು. ನಾನು ಹೋಗಿ ಕುಳಿತಾಗ, ಎಲ್.ಹನುಮಂತಯ್ಯನವರು ಮಾತನಾಡುತ್ತಾ, ಶಿಖರಸೂರ್ಯದಲ್ಲಿ ಬರುವ ಭೀಕರತೆಯ ಬಗ್ಗೆ ವಿವರಿಸುತ್ತಿದ್ದರು. "ಸಾಮಾನ್ಯ ಜನರ ತಳಮಳಕ್ಕಿಂತ ರಾಜಕೀಯದವರ ತುಮುಲಗಳು ಅಧಿಕ ಎಂಬುದನ್ನು ಕಾದಂಬರಿಯುದ್ದಕ್ಕೂ ಗಮನಿಸಬಹುದು" ಎಂಬುದು ಅವರ ಅಭಿಪ್ರಾಯವಾಗಿತ್ತು. ನನ್ನ ಪುಣ್ಯಕ್ಕೆ ಶ್ರೀ ಸಿ. ಎನ್. ರಾಮಚಂದ್ರನ್ ರವರು ಇನ್ನೂ ಮಾತನಾಡಿರಲಿಲ್ಲ. ಸಿ.ಎನ್.ರಾಮಚಂದ್ರನ್ ರವರ ಮಾತುಗಳನ್ನು ಕೇಳುವಾಗ ಆನಂದವಾಗುತ್ತದೆ. ಇದಕ್ಕೆ ಬಹುಶಃ ಅವರು ಬಳಸುವ ಪದಗಳಲ್ಲಿರುವ ಸ್ಪಷ್ಟತೆ, ಮತ್ತು ಆ ಪದಗಳ ಉಚ್ಝಾರದ ಜೊತೆ ಅವರು ಪ್ರದರ್ಶಿಸುವ ಹಾವಭಾವ ಕೂಡ ಕಾರಣವಿರಬಹುದು.
ಸಿ.ಎನ್.ರಾಮಚಂದ್ರನ್ ರವರ ಮಾತುಗಳನ್ನು ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಇಲ್ಲಿ ಹಾಕಲು ಪ್ರಯತ್ನ ಪಟ್ಟಿದ್ದೇನೆ.
ಮಹತ್ವಾಕಾಂಕ್ಷೆಯುಳ್ಳ ಬರಹಗಾರರು ತಮ್ಮ ಕೃತಿಯಲ್ಲಿ ಎಲ್ಲವನ್ನೂ ಬರೆದುಬಿಡಬೇಕು ಎಂದು ಯೋಚಿಸುತ್ತಾರಂತೆ. ಶಿಖರಸೂರ್ಯದಲ್ಲಿ ಆಧುನಿಕತೆ, ಪುರಾಣ ಮತ್ತು ಚರಿತ್ರೆಗಳ ಹೂರಣವಿದೆಯಂತೆ. ಇದರಲ್ಲಿ ಬರುವ ಶಿವಪುರ(ರಿ) ಮತ್ತು ಕನಕಪುರ(ರಿ) ಎಂಬ ಊರುಗಳನ್ನು ಪ್ರಸ್ತಾಪಿಸುತ್ತಾ, ಆ ಎರಡು ಊರುಗಳ ತಾತ್ವಿಕ ನಿಲುವುಗಳು ಈಗಿನ ಜಗತ್ತಿನ (ವಿಶೇಷವಾಗಿ ನಮ್ಮ ದೇಶಕ್ಕೆ ಸಂಬಂಧಪಟ್ಟಂತಹ ಕೆಲವು ಸಂಗತಿಗಳನ್ನು) ಕೆಲವು ಸನ್ನಿವೇಶಗಳನ್ನು ಹೇಳುತ್ತವೆ ಎಂದು ಕೆಲವು ಉದಾಹರಣೆಯನ್ನು ನೀಡುತ್ತಾ ಹೇಳಿದರು. ಅನ್ನದಿಂದ ಚಿನ್ನದಿಂದ ಎಂಬುದು ಒಂದರ ನಿಲುವಾದರೆ ಮತ್ತೊಂದರದು ಚಿನ್ನದಿಂದ ಅನ್ನವಂತೆ. ಹಾಗೆಂದರೇನು ಎಂದು ತಿಳಿಯಲು ಇಡೀ ಕಾದಂಬರಿಯನ್ನು ಓದಬೇಕು.
ಒಟ್ಟಿನಲ್ಲಿ ಪುರಾಣ, ಚರಿತ್ರೆ, ಜನಪದ, ಆಧ್ಯಾತ್ಮ(ಆಧ್ಯಾತ್ಮ ಎನ್ನುವಾಗ ಸಿ.ಎನ್.ರಾಮಚಂದ್ರನ್ ಮೊಗದಲ್ಲಿ ನಗುವಿತ್ತು), ವಿಜ್ಞಾನಗಳನ್ನು ಒಳಗೊಂಡು ಹಾಗೆಯೇ ವಾಸ್ತವಯನ್ನು ಮಗ್ಗುಲಲ್ಲಿ ಇಟ್ಟುಕೊಂಡು, ವಾಸ್ತವಾಕ್ಕೆ ಹೊರತಾದ ವಿಷಯಗಳನ್ನು ಪ್ರತಿಪಾದಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ, ಅಂಕಿತ ಪುಸ್ತಕದ, ಪ್ರಕಾಶ ಕಂಬತ್ತಳ್ಳಿಯವರು ಡಾ. ಚಂದ್ರಶೇಖರ ಕಂಬಾರರನ್ನು ಅಭಿನಂದಿಸುತ್ತಾ, ತಮ್ಮ ಗುರುಗಳಿಗೆ ಜ್ಞಾನಪೀಠ ಪ್ರಶಸ್ತಿ ಬರಲಿ ಎಂದು ಆಶಿಸಿದರು.
ಚುಟುಕಾದ ವಿವರಣೆ
ಕಾರ್ಯಕ್ರಮ ಮುಗಿದ ನಂತರ, ಪುಸ್ತಕ ಮಳಿಗೆಗೆ ಹೆಜ್ಜೆ ಹಾಕಿದಾಗ, ಶಿಖರಸೂರ್ಯ ಕಣ್ಣಿಗೆ ಬಿತ್ತು. ಶಿಖರಸೂರ್ಯದ ಮುಖಪುಟದಲ್ಲಿ ಸೂರ್ಯನ ಐದು ಕಿರಣಗಳನ್ನು ಕಾಣಬಹುದು. ರೂ.೨೦೦ರ ಮುಖಬೆಲೆಯಿರುವ ಶಿಖರಸೂರ್ಯದಲ್ಲಿ ಸುಮಾರು ೪೧೨ ಪುಟಗಳಿವೆ. ಬಿಡುಗಡೆ ಸಮಾರಂಭವಾದ್ದರಿಂದ ಪುಸ್ತಕವನ್ನು ಶೇಕಡ ೧೦%ರ ರಿಯಾಯಿತಿಯಲ್ಲಿ ನೀಡುತ್ತಿದ್ದರು. ಶಿಖರಸೂರ್ಯನನ್ನು ಕೊಂಡುಕೊಂಡು ಮನೆಗೆ ಹಿಂದಿರುಗಿದೆ. ಓದಿದ ನಂತರ ನನ್ನ ಅಭಿಪ್ರಾಯಗಳನ್ನು ಎಲ್ಲರೊಡನೆ ಹಂಚಿಕೊಳ್ಳುವೆ. ಅಷ್ಟರಲ್ಲಿ ನೀವೂ ಕೂಡ ಸಾಧ್ಯವಾದರೆ ಓದಿ ನೋಡಿ.
ಕಾದಂಬರಿಯ ಹೆಸರು - ಶಿಖರಸೂರ್ಯ
ಬೆಲೆ - ರೂ. ೨೦೦
ಪ್ರಕಟಣೆ - ಅಕ್ಷರ ಪ್ರಕಾಶನ ಹೆಗ್ಗೋಡು (ಸಾಗರ) ಕರ್ನಾಟಕ
ಲೇಖಕರು - ಡಾ. ಚಂದ್ರಶೇಖರ ಕಂಬಾರ
ಅಕ್ಷರ ಜೋಡಣೆ - ಅಕ್ಷರ ಗಣಕ, ಹೆಗ್ಗೋಡು
ಮುದ್ರಣ - ಲಕ್ಷ್ಮಿ ಮುದ್ರಣಾಲಯ, ಚಾಮರಾಜಪೇಟೆ, ಬೆಂಗಳೂರು

- Sunil Jayaprakash ರವರ ಬ್ಲಾಗ್
- Login or register to post comments
- 494 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
Re: ಶಿಖರಸೂರ್ಯ
ಚೆನ್ನಾಗಿ ಬರೆದಿದ್ದೀಯ ಮಾರಾಯ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಶಿಖರಸೂರ್ಯ
sunil,
tumba chennagi barediddiri..
nimma next post ge kaaytha iddivi..
- Satish