ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಇತ್ತೀಚೆಗೆ, ಅನಿವಾಸಿಗಳು ಮುಂಗಾರು ಮಳೆ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿಮರ್ಶೆಯ ರೂಪದಲ್ಲಿ ಒಂದು ಒಳ್ಳೆಯ ಬರಹವನ್ನು ನಮಗೆಲ್ಲರಿಗೂ ನೀಡಿದರು. ಅನಿವಾಸಿಗಳ ಆ ವಿಮರ್ಶೆ ಚೆನ್ನಾಗಿದೆ ಎಂದು ಹೇಳುವುದಕ್ಕೆ ನನಗೆ ಎಳ್ಳಷ್ಟು ಅಳುಕಿಲ್ಲ. ಆದರೆ, ನಾನು ಈ ಪ್ರಸ್ತುತ ಬರಹದಲ್ಲಿ, ನನ್ನ ಪ್ರಬುದ್ಧತೆಗೆ ನಿಲುಕುವ ಹಾಗೆ ಈ ವಿಮರ್ಶೆಗಳ ಬಗ್ಗೆ ಇರುವ ಒಂದು ಸಾಮಾನ್ಯ ನೋಡುಗನ(ಸಾನೊ) ಕಾಳಜಿಯನ್ನು ವ್ಯಕ್ತಪಡಿಸಲಿಚ್ಛಿಸುತ್ತೇನೆ. ದಯವಿಟ್ಟು ಈ ಬರಹವನ್ನು ಅನಿವಾಸಿಗಳಾಗಲೀ ಅಥವಾ ಹಂಸಾನಂದಿಯವರಾಗಲೀ ಅಥವಾ ಇನ್ಯಾರೇ ಆಗಲಿ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇದು ನೇರವಾಗಿ ಅನಿವಾಸಿಗಳ ಮುಂಗಾರು ಮಳೆಯ ವಿಮರ್ಶೆಗೆ ಸಂಬಂಧಿಸಿದ್ದಲ್ಲ, ಆದರೆ ಆ ಬರಹವನ್ನು ಉದಾಹರಿಸುತ್ತದೆ ಅಷ್ಟೇ. ಅದಕ್ಕಾಗಿಯೇ ಈ ಲೇಖನದ ತಲೆಬರಹ "ವಿಮರ್ಶೆಗಳು ಮತ್ತು ಭಾವನೆಗಳು".
ಈ ಮಾತುಗಳನ್ನು ನೋಡಿ,
೧. ಸುಂದರ ಛಾಯಾಗ್ರಹಣ ಅನ್ನುವುದೇನೋ ನಿಜ. ಆದರೆ ಅದು ಕ್ಯಾಲೆಂಡರ್ ಚಿತ್ರಗಳ ಹಾಗೆ ಸುಂದರವಷ್ಟೆ.....
೨. ಕತೆಯನ್ನು ಗಂಭೀರವಾಗಗೊಡದೆ, ಒಂದೇ ಸ್ತರದಲ್ಲಿ ನಡೆಯುವುದು ಕೂಡ ಸ್ವಲ್ಪ ಪಿಚ್ ಎನಿಸಿತು.......
ಇದಕ್ಕೆ ಕಲಶಪ್ರಾಯವೆನ್ನುವಂತೆ ಇಂತಹ ಮಾತು
೩. ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಇಷ್ಟೆಲ್ಲಾ ಕಮರ್ಷಿಯಲ್ ಚಿತ್ರಗಳ ಗುಣಗಳಿರುವುದು ಕಂಡೂ ಕೂಡ ನಾನು ಮೊದಲು ಎತ್ತಿದ ಪ್ರಶ್ನೆ ಇನ್ನೂ ಕಾಡುತ್ತದೆ.
ಅನಿವಾಸಿಗಳ ವಿಮರ್ಶೆಗೆ ಓದುಗರೊಬ್ಬರಿಂದ (ವೈವಕ್ತಿಕ ಅಣಕವಲ್ಲ) ಬಂದ ಉತ್ತರ ನೋಡಿ,
ಆದರೂ, ಈ ಸಿನೆಮಾ ನನಗೆ ಹಿಡಿಸಿದ್ದು - ಈಗ ಬರುತ್ತಿರುವ ಬೇರೆ ಚಿತ್ರಗಳ ಮುಂದೆ, ಇದು ಎಷ್ಟೋ ವಾಸಿ ಅನ್ನೋ ಕಾರಣಕ್ಕೆ
ತಿಳಿದೋ, ತಿಳಿಯದೆಯೋ ಬರುವ ಇಂತಹ ಮಾತುಗಳು ಒಬ್ಬ ಸಾಮಾನ್ಯ ನೋಡುಗನ ಭಾವನೆಗಳನ್ನು ಹೇಗೆ ಘಾಸಿಕೊಳಿಸುತ್ತವೆ ಎಂಬುದನ್ನು ಕೆಳಗೆ ಗಮನಿಸಿ.
೧. ಇಂತಹ ಮಾತುಗಳು, ಎಲ್ಲೋ ನೋಡುಗನ ಮೇಲೆಯೇ ಗೂಬೆ ಕೂರಿಸಿ ಆತನ ಭಾವನೆಗಳನ್ನು ಕುಸಿಯುವಂತೆ ಮಾಡುತ್ತದೆ. ಚಿತ್ರ ಚೆನ್ನಾಗಿಲ್ಲದಿದ್ದರೂ ನೋಡ್ತಾರಲ್ಲಾ, "ಕನ್ನಡಿಗರು ದಡ್ಡರು" ಎಂಬಂತಹ ಅನಿಸಿಕೆ ಹೊರಹೊಮ್ಮುವಂತೆ ಮಾಡುತ್ತದೆ. ನಮ್ಮ ನಮ್ಮ ಬಳಗದಲ್ಲಿಯೇ "ಕನ್ನಡ ಸಿನಿಮಾ ಡಬ್ಬ" ಎನ್ನುವಂತಹ ತಲೆಬುಡವಿಲ್ಲದ ಮಾತುಗಳನ್ನು ಕೇಳುತ್ತಿರುತ್ತೇವೆ, ಇದಕ್ಕೆ ಮುಖ್ಯ ಕಾರಣ ತಪ್ಪುತಿಳಿವಳಿಕೆ ಮತ್ತು ನಮ್ಮ ಅರಿಯಮಿಕೆ(ignorance). ಒಂದು ಸಣ್ಣ ಉದಾಹರಣೆ - ಈಗ್ಗೆ ಕಳೆದ ಕೆಲವು ವಾರಗಳ ಹಿಂದೆ ನನ್ನ ಮೇಲೊಂದು ಆಕ್ಷೇಪಣೆ ಬಂದಿತ್ತು. ಅದೇನ್ ಅಷ್ಟೊಂದು ನಾಟಕ, ಸಿನಿಮಾ ನೋಡ್ತೀಯಾ ಅಂತ. ನಾನು ಏನನ್ನೂ ಹೇಳದೆ, "ನೀವೇ ಏಕೆ ಒಂದೆರೆಡು ಸಲ ನೋಡಬಾರದು" ಎಂದು ಹೇಳಿ, ಅವರೆಲ್ಲರನ್ನೂ "ಮಿ.ಬಿ.ಬಿ.ಎಸ್ ಕಲ್ಚರ್ಡ್ ಆದದ್ದು ಹೇಗೆ" ಮತ್ತು "ನೆನಪಾದಳು ಶಕುಂತಲೆ" ಎಂಬ ಎರಡು ನಾಟಕಕ್ಕೆ ಕರೆದುಕೊಂಡು ಹೋದೆ. ಅವುಗಳನ್ನು ಇಷ್ಟಪಟ್ಟ ಅವರೆಲ್ಲ ಇನ್ನುಮುಂದೆ, ಯಾವಾಗಲಾದರೂ ಒಳ್ಳೆಯ ನಾಟಕ, ಫಿಲ್ಮು ಬಂದರೆ ಹೇಳಪ್ಪಾ, ಇನ್ನುಮುಂದೆ ನಾವೆಲ್ಲರೂ ಒಟ್ಟಿಗೆ ಹೋಗೋಣ ಎಂಬ ಅವರು ಹೇಳುವುದನ್ನು ಕೇಳಿದಾಗ ಎಷ್ಟು ಖುಷಿಯಾಗುತ್ತದೆಯಲ್ಲವೇ. ಈ ಘಟನೆಯ ನಂತರ ನಾವೆಲ್ಲರೂ (ಸುಮಾರು ೧೫ ಜನ) ಅನೇಕ ಕನ್ನಡ, ಹಿಂದಿ, ಇಂಗ್ಲೀಷ್ ನಾಟಕ, ಸಿನಿಮಾಗಳಿಗೆ ಹೋಗಿದ್ದೇವೆ.
೨. ಒಬ್ಬ ಸಾಮಾನ್ಯ ನೋಡುಗ ವಿಮರ್ಶಾತ್ಮಕವಾಗಿ ಎಂದೂ ಪ್ರತಿಕ್ರಿಯಿಸುವುದಿಲ್ಲ. ಆತನ ಪ್ರತಿಕ್ರಿಯೆ, ವಾದಗಳೇನಿದ್ದರೂ ವಿಮರ್ಶೆಯ ಹೊರತಾಗಿರುತ್ತದೆ. ಆದರೆ ವಿಮರ್ಶೆಗಳನ್ನು ಓದುತ್ತಾನೆ. ಹೀಗಿರುವಾಗ "ಇಷ್ಟೊಂದು ಜನ ಮುಂಗಾರು ಮಳೆ ನೋಡುತ್ತಿದ್ದಾರೆ. ಇದೇನಪ್ಪಾ, ಜನ ಮರುಳೋ ಜಾತ್ರೆ ಮರುಳೋ" ಎಂಬಂತಹ ಮಾತು ವಿಮರ್ಶಾ ವಲಯದಲ್ಲಿ ಬಂದರೆ ಅದಕ್ಕೆ ಉತ್ತರ ನೀಡಲಾಗದೆ ಸಾನೊ ಸೋಲುತ್ತಾನೆ. ಆತನ ಮನಸ್ಸು ಮುದುಡುತ್ತದೆ. ಸಾನೋನ ಭಾವನೆಗಳು ಮೂಕವಾಗುತ್ತದೆ.
೩. ಓದುಗರೊಬ್ಬರ ಮಾತಿನಂತೆ
ಆದರೂ, ಈ ಸಿನೆಮಾ ನನಗೆ ಹಿಡಿಸಿದ್ದು - ಈಗ ಬರುತ್ತಿರುವ ಬೇರೆ ಚಿತ್ರಗಳ ಮುಂದೆ, ಇದು ಎಷ್ಟೋ ವಾಸಿ ಅನ್ನೋ ಕಾರಣಕ್ಕೆ
"ಮುಂಗಾರು ಮಳೆ"ಯೂ ಸೇರಿ ಇತ್ತೀಚಿನ ಬೇರೆ ಕನ್ನಡ ಸಿನಿಮಾಗಳನ್ನು ನೋಡದ ಯಾರಾದರೂ ಇಂತಹ ಬರಹವನ್ನು ಓದಿದರೆ, "ಓಹೋ..ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳೇ ಇಲ್ಲ ಅನ್ನಿಸುತ್ತೆ. ಇದು ಕೂಡ ಅಷ್ಟಕಷ್ಟೇ ಇರಬೇಕು. ಸುಮ್ನೆ ಜನ ನೋಡ್ತಾ ಇದ್ದಾರೆ. ಮಂಕುಮುಂಡೇವು" ಎನ್ನುವಂತಹ ಭಾವನೆ ಮೂಡಿಸುತ್ತದೆ. ಅಂದರೆ ಇಲ್ಲಿಯೂ ಕೂಡ ಘಾಸಿಯಾಗುವುದು ಸಿನಿಮಾಗಳನ್ನು ನೋಡುವ ಒಬ್ಬ ಸಾಮಾನ್ಯನ ಭಾವನೆಗಳಿಗೆ.
೪. ಒಬ್ಬ ಓದುಗನನ್ನು ತಪ್ಪಿತಸ್ಥನ ಸ್ಥಾನದಲ್ಲಿ ಕೂರಿಸುವ ವಿಮರ್ಶೆಗಳು ಬಂದರೆ, ಈ ರೀತಿಯ ಮಾತುಗಳೂ ಬರಬಹುದು. "ಮುಂಗಾರು ಮಳೆ ಏನ್ ಅಂತಾ ಮೂವಿ ಅಲ್ಲ ಕಣೋ, ಸುಮ್ನೆ ಅಮ್ಮನ ಹಠಕ್ಕೆ ಬಿದ್ದು ಅಮ್ಮ ಅಕ್ಕನ್ನ ಕರೆದುಕೊಂಡು ಹೋಗಿದ್ದೆ. ನಂಗೆ ಟೈಂ ವೇಸ್ಟ್ ಆಯ್ತು". ಇದು ಏಕೆ ಹೀಗೆಂದರೆ, ಯಾರಾದರೂ ದೊಡ್ಡವರೆನಿಸಿದವರು (ಇಲ್ಲಿ ವಿಮರ್ಶಕರು ಎಂದು ತಿಳಿಯಿರಿ) ಇದು ಚೆನ್ನಾಗಿಲ್ಲ, ಇದು ಮಾಡತಕ್ಕದ್ದಲ್ಲ ಎಂದರೆ, ಆ ಕೆಲಸವನ್ನು ಈಗಾಗಲೇ ಮಾಡಿದವರು, ದೊಡ್ಡವರನ್ನು ಒಲಿಸಲೊಸುಗ ನಾವು "ಚೆನ್ನಾಗಿಲ್ಲದ ಸಿನಿಮಾವನ್ನು" ನಾನಾಗಿಯೇ ಇಷ್ಟಪಟ್ಟು ನೋಡಿಲ್ಲ ಎಂದು ಹೇಳಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಓದುಗರೊಬ್ಬರ "ಎಷ್ಟೋ ವಾಸಿ" ಎಂಬ ಮಾತಿನ ರೀತಿಯಲ್ಲಿಯೇ ಸಾನೋನ ಪ್ರತಿಕ್ರಿಯೆಯಿರುತ್ತದೆ. ಇಲ್ಲಿಯೂ ಕೂಡ ಪೆಟ್ಟಾಗುವುದು ಕನ್ನಡ ಸಿನಿಮಾ ನೋಡುವನೊಬ್ಬನ ಭಾವನೆಗಳಿಗೆ.
ಇದೆಲ್ಲದರ ಒಟ್ಟು ಪರಿಣಾಮ "ಕನ್ನಡ ಮಾರುಕಟ್ಟೆಯ ಕುಸಿತ". ಆದರೆ ಒಂದನ್ನು ಗಮನಿಸೋಣ, "ವಿಮರ್ಶಕನಿಗೆ ಪರವಾಗಿಲ್ಲ ಎನಿಸಿದ ಚಿತ್ರವನ್ನೇ ವಿಮರ್ಶಕನಲ್ಲದ ಸಾನೋ ೨೦೦-೨೫೦ ದಿನ ತುಂಬಿದ ಮನೆಯಲ್ಲಿ ಓಡಿಸಿ ೪೦-೫೦ ಕೋಟಿ ಕೈಗಿತ್ತರೆ" ಕನ್ನಡ ಮಾರುಕಟ್ಟೆಯ ಶಕ್ತಿ ತಿಳಿಯುತ್ತದೆ. ಕನ್ನಡ ಸಿನಿಮಾ ಓಡುವುದಿಲ್ಲ ಎನ್ನುವಂತಹ ಮಂಗಳೂರಿನಲ್ಲಿಯೇ, "ಭಾಷಿಕವಾಗಿ ಕನ್ನಡವಲ್ಲದ" ಹುಡುಗರೂ "ಮುಂಗಾರು ಮಳೆಯ" ಟ್ಯೂನನ್ನು ಮೊಬೈಲಿಗೆ ಹಾಕಿಕೊಂಡಿದ್ದನ್ನು ನಾನೇ, ಕಣ್ಣಾರೆ ಕಿವಿಯಾರೆ ಎರಡು ತಿಂಗಳ ಹಿಂದೆ ಅಲ್ಲಿಗೆ ಒಂದು ವಾರದ ಮಟ್ಟಿಗೆ ಹೋಗಿದ್ದಾಗ ಕಂಡುಕೊಂಡಿದ್ದೇನೆ.
ಹಾಗಾದರೆ ವಿಮರ್ಶೆಗಳು ಇರಲೇಬಾರದೇ ?
ವಿಮರ್ಶೆಗಳಿರಬೇಕು. ಆದರೆ ಯಾವುದೇ ವಿಮರ್ಶೆ ನೋಡುಗನನ್ನೇ ತಪ್ಪಿತಸ್ಥನ ಸ್ಧಾನದಲ್ಲಿ ನಿಲ್ಲಿಸಬಾರದು. ವಿಮರ್ಶಕರ ಅನಿಸಿಕೆಗಳು "ನೇರ" ಅಥವಾ "ತೀರಾ ಗಂಭೀರವಾಗಿದ್ದರೆ", ಅದು ವಿಮರ್ಶಕರ ವಲಯದಲ್ಲಿ ಮತ್ತು ಆ ವಿಷಯಕ್ಕೆ ಸಂಬಂಧಪಟ್ಟವರ (ಉದಾ:- ನಿರ್ದೇಶಕ, ನಿರ್ಮಾಪಕ, ತಾಂತ್ರಿಕ ವರ್ಗ...) ನಡುವೆ ಹೆಚ್ಚು ಚರ್ಚೆಗೆ ಬಂದರೆ ಆಗ ಅದಕ್ಕೊಂದು ತೂಕವಿರುತ್ತದೆ.
ಕಡೆಯದಾಗಿ, ಒಬ್ಬ ಸಾನೋನ ಸೋಲು, ಕನ್ನಡದ ಸೋಲಾಗುತ್ತದೆ. ಆದರೆ "ವಿಮರ್ಶಕರ ಸೋಲು" ಎಂದೂ ಕೂಡ ಕನ್ನಡದ ಸೋಲಾಗುವುದಿಲ್ಲ.

- Sunil Jayaprakash ರವರ ಬ್ಲಾಗ್
- Login or register to post comments
- 819 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ವಿಮರ್ಶಕರನ್ನು ಮೆಚ್ಚಿಸಲು ಯಾರೂ ಕಮರ್ಶಿಯಲ್ ಸಿನೆಮಾ ಮಾಡಲ್ಲ... ಸಾಮಾನ್ಯ ಜನರಿಗೋಸ್ಕರ ಮಾಡೋದು.
ಯೋಗರಾಜರು ಈ ಟಿವಿಯಲ್ಲಿ ಮಾತಾಡುತ್ತಾ "ಹೇಗೆ ಮಾಡಿದರೆ ಜನ ಒಪ್ತಾರೆ ಅಂತ ತುಂಬ ತಲೆ ಕೆಡಿಸಿಕೊಂಡು ಮಾಡಿದ ಚಿತ್ರ" ಎಂದು ಹೇಳಿದ್ದರು.
ಇನ್ನು 'ಪ್ರೀತಂ' ಮಾಡುವ ಜೋಕ್ ಗಳ ಬಗ್ಗೆ .....ಅದು ಪ್ರೀತಂನ ಪಾತ್ರದ ಒಟ್ಟಿನಲ್ಲೆ ಬೆರೆತು ಹೋಗಿದೆ. ಅದರಿಂದ ನಗು ಬರಲ್ಲ ಅಂದ್ರೆ ಅದಕ್ಕೆ ಪ್ರೀತಂ ಏನೂ ಮಾಡಕ್ಕಾಗಲ್ಲ.
ಪ್ರೀತಂ ಇರೋದೇ ಹಾಗೆ ನಗು ಬರದೇ ಇರೋ ಜೋಕ್ ಮಾಡಿ ತನ್ನನ್ನ ತಾನೆ 'ಪೆದ್ದ' ನಂತೆ ತೋರಿಸ್ತಾನೆ.
ನೀವು 'ಆವರಣ' ದಂತಹ "ಸತ್ಯ ಶೋದನೆ"ಯಂತ ವಿಶಯ 'ಮುಂಗಾರು ಮಳೆ' ಹುಡುಕಿದರೆ ಅಲ್ಲಿ ಸಿಗಲ್ಲ.. 'ಹಾಗೆ ಸುಮ್ಮನೆ' ಮಳೇಲಿ ನೆನಿಬೇಕು. ಅದೇ ಮುಂ.ಮ ದ ಗಮ್ಮತ್ತು.
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಸುನೀಲರೆ,
ನಿಮ್ಮ ನಿಲುವುಗಳ ಬಗ್ಗೆ ಪ್ರಾಮಾಣಿಕವಾದ ಅನುಮಾನಗಳಿರುವುದರಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ನೀವು ಉದಹರಿಸಿ ಕೊಟ್ಟ ಪಟ್ಟಿಯ ಅಡಿಯಲ್ಲಿಯೇ ನಾನೂ ಪ್ರತಿಕ್ರಯಿಸುತ್ತಿದ್ದೇನೆ.
೧."ಕನ್ನಡಿಗರು ದಡ್ಡರು- ಎಂಬಂತಹ ಅನಿಸಿಕೆ ಹೊರಹೊಮ್ಮುವುದು" ನಿಮ್ಮ ಭಾವನೆಯ ಫಲ. ಏಕೆಂದರೆ ನಾನು ಯಾವಾಗಲೂ ಕನ್ನಡದ ಜನ (ಬೇರೆ ಸಮುದಾಯದ ಜನಗಳ ಹಾಗೆ) ಪ್ರಬುದ್ಧರು, ಜಾಣರು ಎಂಬ -ನೀವಂದುಕೊಂಡ ಅನಿಸಿಕೆಯ- ವಿರುದ್ಧವಾದ ನೆಲೆಗಟ್ಟಿನ ಮೇಲೆ ಯೋಚನೆ ಮಾಡುವವನು. ಅದೂ ಸುಮ್ಮನೆ ಮಾಡಿಕೊಂಡ ನಿರ್ಧಾರವಲ್ಲ. ಈ ನೆಲೆಗಟ್ಟಿಗೆ ಬಲವಾದ ಕಾರಣಗಳು ಇವೆ. ಅದಕ್ಕೆ ನಮ್ಮ ಜನಪದ ಹುಟ್ಟುಹಾಕಿದ ಜಾನಪದ ಕೃತಿಗಳನ್ನು ನೋಡಬೇಕಷ್ಟೆ. ಎಂಥ ಗಂಭೀರ ಮತ್ತು ಸಂಕೀರ್ಣವಾದ ಯೋಚನಾಕ್ರಮವನ್ನು ಅಲ್ಲಿ ನೀವು ಕಾಣುತ್ತೀರಿ. ಯಕ್ಷಗಾನ, ಬಯಲಾಟದಂಥ ನಿರ್ದೇಶಕರಿಲ್ಲದ, ನಟರೇ (ಆರ್ಥಧಾರಿಗಳೇ) ಪದ್ಯಗಳನ್ನು ವಿಶ್ಲೇಷಿಸುವುದನ್ನು ನೋಡಿದರೆ ನಮ್ಮ ಜನ ಎಂಥ ಪ್ರಬುದ್ಧರು ಮತ್ತು ಜಾಣರು ಎಂದು ನಿಮ್ಮ ಅರಿವಿಗೆ ಬರಬಹುದು. ಹಾಗಾಗಿ "ಕನ್ನಡಿಗರು ದಡ್ಡರು" ಎಂಬ ಯೋಚನೆ ನನ್ನ ಬರವಣಿಗೆಯಲ್ಲಿ ನಿಮಗೆ ಕಂಡಿದ್ದು ನನಗೆ ನಿಜವಾಗಿಯೂ ಅಚ್ಚರಿಯಾಯಿತು. ಅದು ನಿಮ್ಮ ಅನಿಸಿಕೆಯನ್ನು ನನ್ನ ಮೇಲೆ ಹೇರುತ್ತಿದ್ದೀರಿ ಅಂದುಕೊಳ್ಳುತ್ತೇನೆ.
೨.ವಿಮರ್ಶಕ-ನೋಡುಗ ಎಂಬ ಈ ವಿಂಗಡಣೆಯನ್ನು ನಾನು ಒಪ್ಪುವುದಿಲ್ಲ. ನಾನು ವಿಮರ್ಶಕ ಅಲ್ಲ. ಮತ್ತು ಸಾಮಾನ್ಯ ನೋಡುಗ ಎಂಬ ಪರಿಕಲ್ಪನೆ "ಮಾಸ್ ಮೀಡಿಯಾ"ದ ಅನುಕೂಲಕ್ಕೆ ಹುಟ್ಟಿರುವುದು. ನನ್ನ ಮಟ್ಟಿಗೆ ಯಾರನ್ನೂ ಸಾಮಾನ್ಯ ನೋಡುಗ ಎನ್ನುವುದು ಅಪಚಾರದ ಮಾತು. ಇರಲಿ. ಪ್ರತಿಯೊಬ್ಬರೂ ತಮ್ಮ ಮುಂದಿರುವ ಕಲಾಕೃತಿಗೆ ಸಂಕೀರ್ಣವಾಗಿಯೇ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಬಗೆಯುವವನು. ಅದನ್ನು articulate ಮಾಡದೇ ಇರಬಹುದು. ಅದಕ್ಕೆ ಬೇಕಾದ ಸಮಯ, ಸಿದ್ಧತೆ, ಇಚ್ಛೆ ಇಲ್ಲದಿರಬಹುದು. ಆದರೆ "ವಿಮರ್ಶಕ" ಅದನ್ನು subjective ಆಗಿಯೇ ಆದರೂ ದಾಖಲಿಸುತ್ತಾನೆ. ಈಗಿನ ಸುದ್ದಿ/ಪತ್ರಿಕೆಗಳು ಉದ್ಯಮವಾಗಿರುವ ಸಂದರ್ಭದಲ್ಲಿ ವಿಮರ್ಶಕನಿಗೆ ಬೇರೆ ಒತ್ತಡಗಳು ಇರುತ್ತವೆ ಎನ್ನುವುದು ಹೌದು. ಆದರೆ, ಮೂಲತಃ ಅವನೂ ಎಲ್ಲರಂತೆ ಪ್ರತಿಕ್ರಿಯಿಸುವ ನೋಡುಗ ಎಂದು ಬಗೆಯುತ್ತೇನೆ. ಇದೇ ಪಾಯಿಂಟಲ್ಲಿರುವ "ಸಾನೋ"ನ ಭಾವನೆಗಳ ಬಗ್ಗೆ ಕೊನೆಯಲ್ಲಿ ಹೇಳುತ್ತೇನೆ.
೩.ಸಮುದ್ರ ನೋಡದವರು "ಸಮುದ್ರವೆಂದರೆ ನಮ್ಮೂರ ಕೆರೆಗಿಂತ ಸ್ವಲ್ಪವೇ ದೊಡ್ಡದು" ಎಂದು ಕೊಂಡಂತೆ ಕನ್ನಡ ಸಿನೆಮಾ ನೋಡದವರು ಅದರ ಬಗ್ಗೆ ಇಟ್ಟುಕೊಳ್ಳುವ ಭಾವನೆಯ ಬಗ್ಗೆ ಯಾರೂ ಏನೂ ಮಾಡಲಾಗುವುದಿಲ್ಲ. ಯಾರೋ ಏನೋ ಅಂದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ನಮ್ಮನ್ನು ನಾವು ಪ್ರಾಮಾಣಿಕವಾಗಿ, ನಿಷ್ಠುರವಾಗಿ ನೋಡಿಕೊಳ್ಳದೇ ಇರುವುದು ಎಷ್ಟು ಸರಿ?
೪.ವಿಮರ್ಶಕರು ದೊಡ್ಡವರೆನ್ನುವ ಮಾತನ್ನು ನಾನು ಹಿಂದೆ ಹೇಳಿದಂತೆ ಒಪ್ಪುವುದಿಲ್ಲ. ಹಾಗಾಗಿ ಈ ಪಾಯಿಂಟಿಗೆ ಹೆಚ್ಚು ಹೇಳುವ ಅಗತ್ಯ ಕಾಣುತ್ತಿಲ್ಲ. ವಿಮರ್ಶಕನೂ ಸದಾ ವಿಮರ್ಶೆಗೆ ಒಳಪಟ್ಟಿರುತ್ತಾನೆಂದಷ್ಟೆ ಹೇಳುತ್ತೇನೆ.
ಇನ್ನು "ಕನ್ನಡ ಮಾರುಕಟ್ಟೆಯ ಕುಸಿತ"ಕ್ಕೆ ನಮ್ಮನ್ನು ನಾವು ನಿಷ್ಠುರವಾಗಿ ನೋಡಿಕೊಳ್ಳುವುದಕ್ಕಿಂತ ಬೇರೆ ಹಲವಾರು ಕಾರಣಗಳಿವೆ. ನೀವು ಪಟ್ಟಿಮಾಡಿರುವ ಕಾರಣಗಳು ತುಂಬಾ ಸರಳೀಕೃತ ಎಂದಷ್ಟೆ ಹೇಳುತ್ತೇನೆ. ಅದರ ಬಗ್ಗೆಗಿನ ಚರ್ಚೆ ಈ ಲೇಖನದ ಮಿತಿಗೆ ಹೊರತಾದುದು.
ಕಡೆಯದಾಗಿ, "ಸೋಲುವ" "ಮನಸ್ಸು ಮುದುಡುವ" "ಭಾವನೆಗಳು ಮೂಕವಾಗುವ" ನೋಡುಗ (ಸಾಮಾನ್ಯ ಪದ ಬಿಟ್ಟಿದ್ದೇನೆ) ಎಂಬ ಪರಿಕಲ್ಪನೆಯೇ ವಿಚಿತ್ರ. ಸಮುದಾಯವನ್ನು ಮಕ್ಕಳ ಹಾಗೆ, ಏನೂ ತಿಳಿಯದ ಬಾಲಿಶರೆಂಬಂತೆ ನೋಡುವ ಕ್ರಮ. ಇದು ಮೊದಲೇ ಹೇಳಿದಂತೆ ನಾನು ಸಮುದಾಯವನ್ನು ನೋಡುವ ದೃಷ್ಠಿಕೋನಕ್ಕಿಂತ ಭಿನ್ನ. ಪತ್ರಿಕೆಗಳು, ರೇಡಿಯೋ, ಟೀವಿ ಹುಟ್ಟುವ ಮುಂಚಿನಿಂದ, ನಮ್ಮ ಜನಪದ ತುಂಬ ಸಂಕೀರ್ಣವಾದ ಕೃತಿಗಳನ್ನು ಹುಟ್ಟುಹಾಕಿಕೊಂಡು ಅದನ್ನು ಉಳಿಸಿಕೊಂಡು ಬಂದಿದೆ. ಈ "ಮಾಸ್ ಮೀಡಿಯಾ"ದ ಯುಗದಲ್ಲಿ ಅವರೆಲ್ಲ ಇದ್ದಕಿದ್ದಂತೆ "ರಕ್ಷಣೆ"ಗೆ ಒಳಗಾಗಬೇಕಾದವರು, ಅವರ ಮನಸ್ಸನ್ನು ನೋಯಿಸಬಾರದು ಎಂಬ ನಿಲುವು ಕಾಕತಾಳೀಯವಲ್ಲ. ನಾವು ಯಾರೋ ಕೆಲವರು "ಬುದ್ಧಿವಂತರು" ಜನರಿಗೆ ಏನು ಬೇಕು, ಬೇಡ ಎಂದು ನಿರ್ಧರಿಸಿ ಅದಕ್ಕೆ ಸರಿಯಾಗಿ ಕಲಾಕೃತಿಗಳನ್ನು ರಚಿಸಲು ಹೊರಡುವುದು ತಮಾಷೆಯಾಗಿ ಕಾಣುತ್ತದೆ. ಅದನ್ನೇ ಎಲ್ಲರಿಗೂ ಹೊಂದವಂಥ/ಹೆಚ್ಚು ಹಣಮಾಡುವಂಥ ಚಿತ್ರಮಾಡಲು ಹೊರಡುವ ಉದ್ಯಮಿಗಳು ಮಾಡುವುದು. "ಜನರಿಗೆ ಬೇಕಾಗಿರುವುದೇ ಇಂಥ ಚಿತ್ರಗಳು" ಎಂಬ ಅವರ ಮಾತಿಗೆ ನಾವೂ ಮಾರುಹೋಗುತ್ತಿರುವುದು ವಿಷಾದನೀಯ.
ನನ್ನ ಬರಹದ ಮೂರನೆ ಭಾಗವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಯಾಕೆ ಜನ ನೋಡುತ್ತಾರೆ ಎಂಬುದನ್ನು ಅರ್ಥವಾಗದೆ ಇರುವುದು ಸೋಗಲಾಡಿತನದಿಂದ ಹೇಳಿದ್ದಲ್ಲ. ನಿಜವಾದ ಕಾಳಜಿಯಿಂದ ಯೋಚಿಸಬೇಕೆಂದು ಬಿಟ್ಟ ಸಂಗತಿಗಳು.
ಇಷ್ಟೆಲ್ಲಾ ನನ್ನ ಬರಹದ ಬಗ್ಗೆ ತಗಾದೆ ಇದ್ದೂ "ಚೆನ್ನಾಗಿದೆ" ಎಂದು ಮೊದಲಿಗೆ ಹೇಳುವ ಅವಶ್ಯಕತೆ ಇರಲಿಲ್ಲವೇನೋ
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಅನಿವಾಸಿಗಳೇ, ಈ ಬ್ಲಾಗನ್ನು ಮುಂಗಾರು ಮಳೆಯ ವಿಮರ್ಶೆಯನ್ನು ಮಾತ್ರವೇ ಸುತ್ತುವಂತೆ ಮಾಡಿ, ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ
ಇದು ೧೦೦% ನಿಜ.
ಈ ಬ್ಲಾಗನ್ನು ಆಳವಾಗಿ subjective ಆಗಿ, selective ಆಗಿ ಪ್ರತಿಕ್ರಿಯಿಸದ ಒಬ್ಬ ನೋಡುಗನ ದೃಷ್ಟಿಯಲ್ಲಿ ನಾನು ಬರೆದಿದ್ದೇನೆ. ಆ ಕಾರಣಕ್ಕಾಗಿಯೇ ಇದನ್ನು ಚರ್ಚೆಯ ಅಡಿಯಲ್ಲಿ ಅಥವಾ ಲೇಖನದ ಅಡಿಯಲ್ಲಿ ಹಾಕಲಿಲ್ಲ. ಒಂದು ಸಣ್ಣದಾಗಿ ಬ್ಲಾಗ್ ರೂಪದಲ್ಲಿ ಹಾಕಿದೆ. ನೀವು ಪ್ರಸ್ತಾಪಿಸಿದ "ವಿಮರ್ಶಕ - ನೋಡುಗ ನಡುವೆ ಭೇದವಿಲ್ಲ" ಎನ್ನುಂತಹ ಮಾತನ್ನು ನಾನೂ ಒಪ್ಪುತ್ತೇನೆ. ನಾನೂ ಕೂಡ ನನಗೆ ತಿಳಿದ ಮಟ್ಟದಲ್ಲಿ, ಹಿಂದೆ ಕೆಲವೊಂದು ಪುಸ್ತಕಗಳ ನನ್ನದೇ ಧಾಟಿಯಲ್ಲಿ ವಿಮರ್ಶಿಸಿದ್ದಿದೆ, ಕೆಲವೊಂದು ಗಂಭೀರವಾಗಿಯೂ, ಕೆಲವೊಂದು ತೆಳುವಾಗಿಯು. ಆದರೆ ಸೋಮೇಶ್ವರ ಶತಕದ ಬಗೆಗಿನ "ದೊಡ್ಡ ವಿಮರ್ಶೆ" ಯಾಕೋ ಮಂಗಮಾಯವಾಗಿಬಿಟ್ಟಿದೆ.
ನಾನು ಹೇಗೆ ಸೈನೈಡ್ ತಿಂದರೂ ಬದುಕಿದ್ದೇನೆ
ನಾನು ನೋಡಿದ ನಾಟಕ ಭೈರವಿ
ಮುಕ್ತ ಆಶಯದ ಸೋಲು ೧ - ಕೊಳ್ಳುಬಾಕ ಸಂಸ್ಕೃತಿಯ ಕುರಿತಾದದ್ದು
ಈ ಪರ್ವ ಭಾವಸಾಗರ
ಇವು ಕೆಲವಷ್ಟೇ. ಏಕೆ ಇವುಗಳ ಲಿಂಕ್ ನೀಡಿದೆನೆಂದರೆ ಒಬ್ಬ ಕಲಾಸ್ವಾದಕನೂ ಕೂಡ ವಿಮರ್ಶಕ ಎನ್ನುವ ಮಾತನ್ನು ನಾನೂ ಒಪ್ಪುತ್ತೇನೆ ಎಂದು ಹೇಳುವುದಕ್ಕೋಸ್ಕರ. ಆದರೆ ನನ್ನ ಕಾಳಜಿಯಿರುವುದು "ವಿಮರ್ಶಕ ಎಂದು ಹಣೆಪಟ್ಟಿಕಟ್ಟಿಕೊಂಡ ವಲಯದ" ಬಗ್ಗೆ.
ಕಳೆದ ಕೆಲವು ತಿಂಗಳ ಹಿಂದೆ, ಸುಧಾದಲ್ಲಿ ಒಂದು ಲೇಖನ ಬಂದಿತ್ತು, ಹೇಗೆ ವಿಮರ್ಶಕರು ಕನ್ನಡ ಕಾವ್ಯವನ್ನು ಓದುಗರಿಂದ ದೂರ ಮಾಡಿದರು ಎಂಬುದಾಗಿ. ಆ ಲೇಖನದಲ್ಲಿ ಪ್ರಸ್ತಾಪವಾಗಿದ್ದ ಒಂದು ಗಮನಿಸತಕ್ಕ ಅಂಶವೆಂದರೆ, ಹೇಗೆ ವಿಮರ್ಶಕರ ಜಗ್ಗಾಟದಿಂದ ಬೇಸತ್ತ ಓದುಗರು ಕನ್ನಡ ಕಾವ್ಯದಿಂದ ದೂರಸರಿದರು ಎಂಬುದಾಗಿತ್ತು. ಯಾವುದು ಕಾವ್ಯ, ಯಾವುದು ಕಾವ್ಯವಲ್ಲ ಎಂಬುದಕ್ಕೇ ಸಿಕ್ಕಾಪಟ್ಟೆ ವಿಮರ್ಶೆಗಳಾಗುತ್ತಿತ್ತಂತೆ. ಇಂತಹ ನಾಟಕ, ಇಂತಹ ಕೃತಿ ಮುಸ್ಲಿಂ ಸಂವೇದನೆ, ಇಂತಹದ್ದು ದಲಿತ ಸಂವೇದನೆ, ದಲಿತರು ಓದಲೇಬೇಕಾದ ಪುಸ್ತಕ, ದಲಿತರು ನೋಡಲೇಬೇಕಾದ ನಾಟಕ, ಸಾಕ್ಷ್ಯಚಿತ್ರ. ಹೀಗೆ. ಈ ರೀತಿ ಮಾಡುತ್ತಾ ಸಾಗಿದರೆ, ಬೇರೆ ವರ್ಗದವರು ಆಯಾ ಕಲೆಯಿಂದ ದೂರ ಸರಿಯುವುದಿಲ್ಲವೇ ಎಂಬ ಸಹಜ ಪ್ರಶ್ನೆಯೇಳುತ್ತದೆ ನನ್ನ ಮನಸ್ಸಿನಲ್ಲಿ.
ವಿಮರ್ಶಕನೂ ವಿಮರ್ಶೆಗೆ ಒಳಪಟ್ಟಿರುತ್ತಾನೆ ನಿಜ. ಆದರೆ ನನ್ನ ಕಾಳಜಿಯಿರುವುದು, ಈ ವಿಮರ್ಶೆಗಳ ವರ್ತುಲದಲ್ಲಿ ಸಿಕ್ಕಿ, ಕಲೆಯು ಆಸ್ವಾದಕನಿಂದ ದೂರ ಸರಿಯಬಾರದು ಎಂಬುದಾಗಿ ಅಷ್ಟೇ.
ಮತ್ತೊಮ್ಮೆ, ನಾನು ಹೇಳಲು ಹೊರಟ ವಿಷಯ ನಿಮ್ಮ ಮುಂಗಾರು ಮಳೆಯ ವಿಮರ್ಶೆಯ ಸುತ್ತಲೇ ಸುತ್ತಿ, ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಕ್ಷಮಿಸಿ
ಈ ಅನಿಸಿಕೆಗಳು ಬೇರೆಬೇರೆ ಊರುಗಳಲ್ಲಿ, ವಿವಿಧ ಸಮುದಾಯಗಳ ನಡುವೆ, ನಾನಿದ್ದ ಪರಿಸರದಲ್ಲಿ exchange ಆಗುತ್ತಿದ್ದ ಭಾವನೆಗಳು, ಎಲ್ಲವೂ ನನ್ನದೇ ಏನಲ್ಲ. ಕೆಲವೊಂದು ಭಾವನೆಗಳು ನನ್ನವು, ಕೆಲವು ದೊಡ್ಡವರದು, ಒಂದಷ್ಟು ಚಿಕ್ಕವರದು, ನನ್ನ ಗೆಳೆಯರದು, ಕೆಲವು ಕನ್ನಡಿಗರದು, ಮತ್ತಷ್ಟು ಕನ್ನಡವಲ್ಲದ ಗೆಳೆಯರ ಅಪ್ಪಂದಿರದು(ಕನ್ನಡ ಸಿನಿಮಾ ನೋಡುವವರು ದಡ್ಡರು..ಇತ್ಯಾದಿ),. ಅವೆಲ್ಲ ಭಾವನೆಗಳನ್ನೂ ಒಟ್ಟಾಗಿಸಿ, ಒಂದು ನಿರ್ದಿಷ್ಟ ರೂಪವನ್ನು ನೀಡದೆ ಸರಳವಾಗಿ ಬರೆದ ಒಂದು ಸಣ್ಣ ಬ್ಲಾಗಿದು.
ನಾವು ನೀವು ಕಂಡ ಹಾಗೆಯೇ, "ಬೂಸಾ ಸಾಹಿತ್ಯ" ಎಂಬ ಜಗಳ ಆಗಲಿಲ್ಲವೇ, ಕನ್ನಡದಲ್ಲಿ. "ಕನ್ನಡ ಸಾಹಿತ್ಯದಲ್ಲಿ ಯಾವ ಮಣ್ಣಾಂಗಟ್ಟೀನೂ ಇಲ್ಲ, ಯಾಕ್ರಯ್ಯಾ ಕನ್ನಡ ಓದುತ್ತೀರಾ" ಎಂದು ಬೊಬ್ಬಿಟ್ಟ ದೊಡ್ಡ ವಲಯವೇ ಇದೆ. ಇದು ಮುಚ್ಚಿಟ್ಟ ಸತ್ಯವೇನಲ್ಲ. ಈ ಜಗಳದಲ್ಲಿ ಹೊರಹೊಮ್ಮಿದ ಭಾವನೆ ನನ್ನ ವೈಯಕ್ತಿಕ ಭಾವನೆ ಖಂಡಿತ ಅಲ್ಲ.
ಅನಿವಾಸಿಗಳೇ, ಇಲ್ಲ ನಿಮ್ಮ ಬರಹದ ನನಗೆ ನಿಜಕ್ಕೂ ಇಷ್ಟವಾಗಿತ್ತು. ಪದಗಳ ಕಡಿಮೆ ಬಳಕೆಯನ್ನು ನಾನು ಮಾಡಿರಬಹುದು, ಹೊಗಳುವುದರಲ್ಲಿ, ಆದರೆ ಈ ವಿಷಯದಲ್ಲಿ ನಿಜಕ್ಕೂ ಕಪಟವಿಲ್ಲ. ವಿವಿಧ ಮನೋಭಾವಗಳನ್ನೊಳಗೊಂಡಿರುವ ಒಂದು ಸಮಾಜದ ಭಾವನೆಗಳನ್ನು ಪ್ರಾಮಾಣಿಕವಾಗಿ ಒಪ್ಪಿಸಿದೆ ಅಷ್ಟೇ.
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಯಾಕ್ರೀ ಒಳ್ಳೆ ಅವಕಾಶ ಸಿಕ್ಕಿತ್ತು , ಕ್ಷಮೆ ಗಿಮೆ ಅ೦ದು ಬಿಟ್ಟು ....ಚರ್ಚೆ ವಿಷಯ್ವನ್ನೇ ಇಬ್ಬರು ಮರೆತು ಬಿಟ್ರೀ....
Compromise ಈ ವಿಷಯ್ದಲ್ಲಿ ಇಷ್ಟು ಬೇಗ ಬೇಡ.
ಇನ್ನು ಸ್ವಲ್ಪ ವಾದ ವಿವಾದ ಗಳು ನಡಿಯಲಿ.
:):)"
ಅಯ್ಯೋ ಪಾಪ ! ಏನ್ ಅ೦ದುಕೊ೦ಡು ಬಿಟ್ರೋ ಏನೋ ? -- ಅನ್ನುವ ಭಯವಿಲ್ಲದೇ ವಾದ ನಡೆಯಲಿ.
ಸ೦ಪದದಲ್ಲಿ ಯಾರು Blog ಓದಿ ನೋವು ಪಡುವಷ್ಟು Sensitive ಇಲ್ಲಾ.
ಜಯ ಪ್ರಕಾಶ ಇಷ್ಟೂ ಬೇಗ ಅಜಯನಾಗಿ ಕತ್ತಲ ಗುಹೆಯ ಸೇರದಿರು.
"ಜಯವನ್ನು ಪ್ರಕಾಶ ಮಾಡೂ...
ಇನ್ನಷ್ಟು ಬೆಳಕು ಚೆಲ್ಲಿ !
ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ Sad
ctrl C - ctrl V. DELETE "ದಯವಿಟ್ಟು ನನ್ನನ್ನು "
ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಕ್ಷಮಿಸಿ Sad
ಯಾಕೇ ಎರಡನೇ ಸರಿ ಕ್ಷಮೆ ಕೋರುವಗ "ದಯವಿಟ್ಟು ನನ್ನನ್ನು " ಬಿಟ್ಟ್ ಬಿಟ್ರೋ ?
ಕ್ಷಮೆ ಕೇಳುವುದು ಸುಲಭ ಅಲ್ವೇ ? ctrl C - ctrl V.
ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ...?
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಮುರಳಿ. ನಾನೇಕೆ ಅಷ್ಟು ಧೈರ್ಯವಾಗಿ ಎರಡು ಸಲ ಕೇಳಿದೆ, ಗೊತ್ತಾ, !!!!!ಅನಿವಾಸಿಗಳು, ಇಂತಹವುಕ್ಕೆಲ್ಲ ಬೇಸರ ಪಟ್ಟುಕೊಳ್ಳುವುದಿಲ್ಲ ಎಂಬ ಧೈರ್ಯದ ಮೇಲೆ.
ಪಿ.ಜೆ. ಅಂತೀಯಾ...ಅನಿವಾಸಗಳ ಬರಹಗಳನ್ನು ಓದುವ ಯಾರಾದರೂ ಅವರ ಪ್ರಬುದ್ಧತೆಯನ್ನು ಹಗುರವಾಗಿ ಎಣಿಸುವುದಿಲ್ಲ.
"ಮಕ್ಕಳ ಭಾವನೆ", "ಮುದುಡುವ ಮನಸ್ಸು" ಇಂತಹ ಅರ್ಥಬರುವ, ಪದಪುಂಜವನ್ನು ಬಳಸಿ ನಾನು ಬ್ಲಾಗಿದ ಭಾವನೆಗಳ ಚೌಕಟ್ಟೇ ಬೇರೆ, ಆದರೆ ಅನಿವಾಸಿಗಳ ಯೋಚಿಸಿದ, "ಜನಪದ", "ಮಾಸ್ ಮೀಡಿಯಾ", "ರಕ್ಷಣೆ" ಇವುಗಳ ಚೌಕಟ್ಟೇ ಬೇರೆ. ಯಾವುದರ ಮೇಲೆ ಚರ್ಚೆ ಮಾಡಬೇಕು ಎಂಬುದೇ ನಮ್ಮಿಬ್ಬರಲ್ಲಿ ತಾಳೆಯಾಗದ ಕಾರಣ ನಾನು ಆ ದಿಸೆಯಲ್ಲಿ ಚರ್ಚೆಯನ್ನು ಮುಂದುವರಿಸಲು ಬಯಸಲಿಲ್ಲ. ಏಕೆಂದರೆ ವೈಯಕ್ತಿಕ ನೆಲೆಯಲ್ಲಿ ಚರ್ಚಿಸುವುದು ನನ್ನ ಇಂಗಿತವಲ್ಲ.
ಅನಿವಾಸಿಗಳೇ,
ನನಗೆ, ನಮ್ಮ ಪರಿಸರದಲ್ಲಿ ವಿನಿಮಯವಾಗುವ ಭಾವನೆಗಳಿಗೆ ಒಂದು ನೆಲೆಗಟ್ಟು ಕೊಡಲು ಒಂದು ವಿಮರ್ಶೆ ಬೇಕಿತ್ತು. ಅದಕ್ಕೆ ನಿಮ್ಮ ವಿಮರ್ಶೆ ಬಳಸಿಕೊಂಡೆ. ಇಲ್ಲಿ ವಿಷಯ, ಮುಂಗಾರು ಮುಳೆಯ ವಿಮರ್ಶೆ ಚೆನ್ನಾಗಿದೆಯೇ, ಕೆಟ್ಟದಾಗಿದೆಯೇ, ಅದು ಸರಿಯೇ ಎಂಬುದಲ್ಲ. ಒಂದು ಕಲೆಯ ವಿಮರ್ಶೆ ಯಾವ ನೆಲೆಯಲ್ಲಿರಬೇಕು ಎಂಬುದನ್ನು ಕಂಡುಕೊಳ್ಳುವ ನನ್ನ ಮೊಗಚಷ್ಟೇ. ಅದೂ ಕೂಡ ಕಲೆಯನ್ನು ಆಸ್ವಾದಿಸದೆ, ೧೦೦% ಸಮಯವನ್ನು ವಿಮರ್ಶೆ ಮಾಡುತ್ತಲೇ ಕಳೆಯುವ "ವಿಮರ್ಶಾ ವಲಯ"ದಲ್ಲಿರುವವರ ವಿಮರ್ಶೆ. ಯಾವುದಾದರು ಒಂದು ಸಿದ್ಧಾಂತವನ್ನು ನಂಬಿಕೊಂಡು, ಯಾವುದೇ ಕಲೆಯನ್ನು ತಮ್ಮ ಸಿದ್ಧಾಂತದ ನೆಲೆಯಲ್ಲಿ ಮಾತ್ರವೇ ಪರಾಮರ್ಶಿಸಿ, ಆಯಾ ಕಲೆಯನ್ನು ಆಸ್ವಾದಿಸುವವರಿಂದ ದೂರಮಾಡುವ ಒಂದು ಮನಸ್ಥಿತಿ. ಇದು ಹಳೆಗನ್ನಡ ಅಥವಾ ಸಮಕಾಲೀನ ಕಾವ್ಯ, ನಾಟಕ, ಕಾದಂಬರಿ, ಸಿನಿಮಾ ಇವು ಯಾವುದರಿಂದಲೂ ಹೊರತಲ್ಲ.
ಉದಾ:- "ಆನುದೇವಾ ಹೊರಗಣದವನು" ಕೃತಿಯಲ್ಲಿ ಬಸವಣ್ಣನವರ ಜಾತಿಯ ಪ್ರಸ್ತಾಪ ಆಗಿದೆ. ನಾನು ಬಯಸುವುದು ಈ ಪುಸ್ತಕದ ವಿಮರ್ಶೆಗಳು, ಪುಸ್ತಕವನ್ನು ಓದದಂತೆ ಸಮಾಜವನ್ನು ಪ್ರೇರೇಪಿಸಬಾರದು. ಹಾಗೆಯೇ, ಈಗಾಗಲೇ ಅದನ್ನು ಓದಿದವರನ್ನು ತಪ್ಪಿತಸ್ಥನ ಸ್ಥಾನದಲ್ಲಿ ಕೂರಿಸಬಾರದು. ("ಕನ್ನಡ ಸಿನಿಮಾ ನೋಡುವ ದಡ್ಡರು" ಎಂಬ ಒಂದು ಅಪ್ರಬುದ್ಧ ಭಾವನೆಯಿದೆ, ಎಂದು ನಾನು ಸೂಚಿಸಲಿಲ್ಲವೇ. ಹಾಗೆಯೇ, ಇಂತಿಂತಹ ಪುಸ್ತಕವನ್ನು ಓದುವವರು ದಡ್ಡರು, ನಿಷ್ಪ್ರಯೋಜಕರು, ಮನುವಾದಿಗಳು ಎಂಬಂತಹ ವಿಮರ್ಶೆಯಿರಬಾರದು)
ನಾನೊಬ್ಬ ಗ್ರೀಕನಲ್ಲದಿದ್ದರೂ "ಈಡಿಪಸ್" ನಾಟಕ ನೋಡುವ, ಯುರೋಪಿನವನಲ್ಲದಿದ್ದರೂ ಪಾಶ್ಚಾತ್ಯ ಸಂಗೀತವನ್ನು ಆಸ್ವಾದಿಸುವ, ಇವುಗಳಲ್ಲಿರುವ ಭಾವನೆಗಳಿಗೆ ಸ್ಪಂದಿಸುವ ಒಂದು ಮುಕ್ತ ಅವಕಾಶವಿದೆ. ಆದರೆ ವಿಮರ್ಶೆಗಳು ನನ್ನನ್ನು ಇಂತಹವುಗಳಿಂದ ದೂರಮಾಡಬಾರದಲ್ಲವೇ ?
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ತು೦ಬಾ ಒಳ್ಳೇ ಮಾತು ಹೇಳ್ತಾಯಿದ್ದೀರಾ.... ನಾನು ಕೂಡ ಇನ್ನು ಮು೦ದೆ ಜೋಪಾನವಗಿರುತ್ತೇನೆ.
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಅನಿವಾಸಿಗಳೇ, ನಿಮ್ಮ ಹಿಂದಿನ ಮಾತಿಗೂ ಈಗ ಹೇಳೋ ಮಾತಿಗೂ ಹೊಂದಿಕೆ ಇಲ್ಲ ಅನಿಸುತ್ತೆ. ಆಗ ನೀವು ಜನ ದಡ್ಡರು, ಇಂತಿಂತಾ ಎಡವಟ್ಟುಗಳಿರುವ ಕೆಟ್ಟ ಸಿನಿಮಾನ ಹುಚ್ಚರಂತೆ ಮುಗಿ ಬಿದ್ದು ನೋಡುತ್ತಿದ್ದಾರೆ, ಅಂತ ಅರ್ತ ಬರೋ ಬಗೇಲಿ ಬರೆದಿದ್ದೀರಿ. ಈಗ ನೋಡಿದ್ರೇ ಮಂದಿ ಬಾಳ ಜಾಣರು ಅಂತಿದೀರಿ. ಈಗ ನೀವು ಅಂತಿರೋದು ಸರಿ, ಮಂದಿ ಜಾಣರು, ಬೇಕಾದನ್ನು ತುಗೋತಾರೆ, ಬೇಡವಾದನ್ನು ಬಿಡ್ತಾರೆ. ಮುಂಗಾರು ಮಳೆಯಲ್ಲಿ ಬೇಕಾದ್ದು ಹೆಚ್ಚಿಗಿದೆ ಅದಕ್ಕೆ ನೋಡ್ತಿದಾರೆ. simple!
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಸಂಗನಗೌಡರೇ,
ನನ್ನ ಬರಹ ಮತ್ತು ಇಲ್ಲಿನ ನನ್ನ ಪ್ರತಿಕ್ರಿಯೆ ಓದಿದ ಮೇಲೂ ನಿಮಗೆ ಹಾಗೆಯೇ ಅನಿಸುತ್ತಿದ್ದರೆ ಇನ್ನೇನು ಹೇಳಲೂ ತೋಚುತ್ತಿಲ್ಲ. ಹೋಗಲಿ ಬಿಡಿ.
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ನಮ್ಮ ಮಂದಿ ಸಂಪದದಲ್ಲಿ, ಪೇಪರಲ್ಲಿ ಬಂದ ರಿವ್ಯೂಗೆಲ್ಲ ತಲೆಕೊಡಲ್ಲ!!!
ಕನ್ನಡ ಸಿನಿಮಾ ಬೈಯೋರು ಏನು ಈಗೀಗ ಬೈತಾ ಇದ್ದಾರ? ಹಿಂಗೆ ಬೈಯೋರಂತೂ ಹೆಚ್ಚು ಮಂದಿ ನೋಡೋ ಸಿನಿಮಾ ಮಾಡಲ್ಲ. ಅವರ ಸಿನಿಮಾ ನೋಡಕ್ಕೆ ಮಾಮೂಲಿ ಮಂದಿಗಿಂತ, 'ಪ್ರಸಸ್ತಿ' ಕೊಡುವ ತೀರ್ಪುಗಾರರು ಹೆಚ್ಚಿರಬಹುದು
ಏನೇ ಆದರು ಸಿನಿಮಾ ಬಗ್ಗೆ ಈಟೊಂದು ತಲೆಕೆಡಿಸಿಕೊಳ್ಳೋದು ಯಾಕೋ ಸರಿಗಿಲ್ಲ.
ಸಿನಿಮವನ್ನು enjoy ಮಾಡಬೇಕು. ಸಿನಿಮದಲ್ಲಿ ಜಾಸ್ತಿ 'ಮಸ್ತಿ/ಮೋಜು/ಮಜಾ' ಇರಬೇಕು ಹೊರತು 'moral lesson' ಜಾಸ್ತಿ ಇರಬಾರದು.
Arts ಸಿನಿಮಾ ಅಂದು moral/reality ತೋರೋ ಸಿನಿಮಾಗಳಿಗೆ ಎನಿತ್ತು ಬೇಕಾದರು ಪ್ರಸಸ್ತಿ ಸಿಕ್ಕಲಿ, ಅದನ್ನ ಕಟ್ಟಿಕೊಂಡು ನಾವು ಮಾಮೂಲಿ ಮಂದಿ ಏನೂ ಆಗಬೇಕಾಗಿಲ್ಲ!!
'ಸಿನಿಮ' ನೋಡೋರು ದಡ್ಡರು, ಅದರ ಬಗ್ಗೆ ಉದ್ದುದ್ದು 'ಬಾಸ್ಯ' ಬರೆಯೋರು ಜಾಣರು ಅಂತ ಅಂದುಕೊಂಡ್ರೆ, ನಾವು ಮಾಮೂಲಿ ಮಂದಿ ಅಂತೋರಿಗೆ ಹೇಳೋದು ಈಟೇಯ "ನಿಮ್ ಜಾಣತನ ನಿಮ್ಮ ತಾವೇ ಮಡಿಕ್ಕೊಳ್ಳಿ, ನಮ್ ಪಾಡಿಗೆ ನಮ್ಗೆ ಸಿನಿಮ ನೋಡಕ್ ಬುಡಿ. ನಿಮ್ಮ ರಿವ್ಯೂ ಕಟ್ಟಿಕೊಂಡು ನಮ್ಗೇನಾಗಬೇಕು? ನಾವ್ ಕನ್ನಡ ಸಿನಿಮಾ ನೋಡದ್ ಬುಡಕ್ಕಿಲ್ಲ"
ಈ ತರ ಕಮೆಂಟೋರು ಯಾವಾಗಲೂ ಕಮೆಂಟ್ತಾನೆ ಇರ್ತಾರೆ.!!
ಕನ್ನಡ ಸಿನಿಮಕ್ಕೆ ಒಂದು specific target ನೋಡುಗರಿದ್ದಾರೆ. ಹೆಚ್ಚು ಸಿನಿಮ ಅವರಿಗೆ ಮಾಡೋದು ಹೊರತು, ಪ್ರಬುದ್ದತನ, ಇನ್ನೇನೋ ಮಣ್ಣು ಮಸಿತನ ಎಂದು ಕೊಚ್ಚಿಕೊಂಡು ಜಲುಮದಾಗೆ ಎರಡು ಮೂರು, ಅಬ್ಬಬ್ಬಾ ಅಂದ್ರೆ ಹತ್ತು ಕನ್ನಡ ಸಿನಿಮ ನೋಡಿ, "ಕನ್ನಡ ಸಿನಿಮ ಗಬ್ಬು" ಎಂದು ಟಾಮ್ ಟಾಮ್ ಹೊಡೆಯೋ 'ಬುದ್ದಿವಂತ'ರಿಗಂತೂ ಅಲ್ಲವೇ ಅಲ್ಲ. ಅವರು ಲೆಕ್ಕಕ್ಕೇ ಇಲ್ಲ!
ಈ ಬುದ್ದಿವಂತರು ಏನು ಬೇಸರಪಟ್ಟುಕೊಳ್ಳಬೇಕಿಲ್ಲ, ಇವರಿಗಾಗೇ 'ತರೆ ಕಾಣದ' arts ಮೋವಿಗಳಿವೆ. ದಾರಾಳವಾಗಿ ಹೋಗಿ 'ನೀತಿಪಾಟ' ಕಲೀಬೋದು.
ಉ: ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
ಈಗಲೂ ಸಹ ನೋವಾಗುವುದು ಒಬ್ಬ ಸಾಮಾನ್ಯ ಓದುಗನ ಮೇಲೆ..
ನಾನಂತ ತಿಳಿಕೋರಿ ಪರವಾಗಿಲ್ಲ.
ನಿಮ್ಮವ,
ಗಿರೀಶ ರಾಜನಾಳ