ಕನ್ನಡ ಪತ್ರಿಕೋದ್ಯಮದ ಸೋಲು ? ಮತ್ತು ಅದರ ಬಗಲಲ್ಲೇ ಇರುವ ಆಶಾಕಿರಣ.
ಓದುಗರಿಗೆ ಮೊದಲೇ ತಿಳಿಸುವುದೇನೆಂದರೆ ನಾನು ಪಕ್ಕಾ ಸೊಲಾರಿಸ್ ಅಭಿಮಾನಿ. ಈ ಲೇಖವನ್ನು ಇಸ್ಮಾಯಿಲರು ಬರೆದ, ಮೈಕ್ರೋಸಾಫ್ಟೀಕರಣ ಲೇಖನದ ಜೊತೆಗೆ ಓದಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಸರಿ ಪೀಠಿಕೆ ಇಷ್ಟೇ ಸಾಕು. ಇಸ್ಮಾಯಿಲ್ ರವರು, ತಮ್ಮ ದುಗುಡವನ್ನು ಅತ್ಯಂತ ಸಮರ್ಥವಾಗಿ ನಮ್ಮ ಮುಂದಿಟ್ಟಿದ್ದಾರೆ. ಅವರ ಆಕ್ರೋಶಕ್ಕೆ ನಮ್ಮ ದನಿಯನ್ನೂ ಸೇರಿಸೋಣ. ಇಲ್ಲಿ ಒಂದೆರೆಡು ಮಾತುಗಳನ್ನು ಹೇಳಲೇಬೇಕೆನಿಸಿತು. ಹಾಗಾಗಿ ನನ್ನ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ, ದಯವಿಟ್ಟು ಇಡೀ ಲೇಖನವನ್ನು ವೈಯಕ್ತಿಕ ನೆಲೆಯಲ್ಲಿ ಯಾವ ಪತ್ರಕರ್ತರೂ ತೆಗೆದುಕೊಳ್ಳಬೇಡಿ ಎಂದು ಕೇಳಿಕೊಳ್ಳುವೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳಿಗೆ ಸ್ಫಂದಿಸಿ ಉತ್ತಮ ಚರ್ಚೆಯನ್ನು ಆರಂಭಿಸುವ ಇಸ್ಮಾಯಿಲ್ರವರಂತಹ ಪತ್ರಕರ್ತರು ನಮಗೆ ಹೆಚ್ಚು ಹೆಚ್ಚು ಸಿಗಲಿ ಎಂದು ಆಶಿಸೋಣ.
ನಲ್ಮೆಯ ಓದುಗರೆ,
ಮುಂದುವರಿಯುತ್ತಾ, ಈಗ್ಗೆ ಕೆಲವು ತಿಂಗಳ ಹಿಂದೆ ಬ್ಲಾಗುಗಳ ಬಗ್ಗೆ ಸುಧಾದಲ್ಲಿ ವರದಿ ಬಂದಿತ್ತು. ಪ್ರತಿ ಗುರುವಾಗ ಸುಧಾವನ್ನು ಓದಿಯೇ ಓದುವ ನಮ್ಮ ತಾಯಿ, ಈ ಲೇಖನವನ್ನು ಓದಿದ ಮೇಲೆ ಬ್ಲಾಗ್ ಅಂದರೇನು ಅಂತ ನನಗೆ ಕೇಳಿದರು. ಬ್ಲಾಗ್ ಅಂದರೆ ಹೀಗೆ, ಕನ್ನಡದಲ್ಲೂ ಬ್ಲಾಗ್ ಮಾಡಬಹುದು ನಾನು ಕೂಡ ಎಷ್ಟೋ ಬ್ಲಾಗುಗಳನ್ನು ಬರೆಯುತ್ತಾ ಇರುತ್ತೇನೆ ಎಂದು ಅವರಿಗೆ ಮತ್ತು ನಮ್ಮ ತಾತನವರಿಗೆ ಸಂಪದದಲ್ಲಿದ್ದ ಕನ್ನಡದ ಬ್ಲಾಗುಗಳನ್ನು ತೋರಿಸಿದಾಗ ಅವರುಗಳಿಗಾದ ಸಂತೋಷ ಅಷ್ಟಿಷ್ಟಲ್ಲ. ಈ ನಡುವೆ ಒಮ್ಮೊಮ್ಮೆ, ನಾನು ಕನ್ನಡದಲ್ಲಿ ಬರೆಯುತ್ತಿರಬೇಕಾದರೆ ನಮ್ಮ ತಾಯಿಯವರೂ ಪಕ್ಕದಲ್ಲಿ ಕುಳಿತು ಕುತೂಹಲದಿಂದ ನೋಡುತ್ತಿರುತ್ತಾರೆ.
ಇದನ್ನು ಇಲ್ಲಿ ಏಕೆ ಪ್ರಸ್ತಾಪಿಸಬೇಕೆಂದುಕೊಂಡೆಯೆಂದರೆ, ಪತ್ರಿಕೋದ್ಯಮಕ್ಕಿರುವ ಶಕ್ತಿ. ಇಂಜಿನಿಯರುಗಳಾದ ನಮ್ಮಂತಹ ಒಬ್ಬಿಬ್ಬರ (ಸಾವಿರಾರು ಇದ್ದರೂ, ಸಮಾಜದಲ್ಲಿರುವ ಕೋಟಿ ಕೋಟಿ ಜನಗಳನ್ನು ಗಣನೆಗೆ ತೆಗೆದುಕೊಂಡರೆ.....) ಲಿನಕ್ಸ್, Open Solaris, ಮೇಲಿನ ಅಭಿಮಾನ, ಮೈಕ್ರೋಸಾಪ್ಟಿನಿಂದ ಸ್ವತಂತ್ರವಾಗಿರಬೇಕೆಂಬ ಸ್ವಾಭಿಮಾನವು, ಸಾಮಾಜಿಕ ಪ್ರೇರಣೆಯಾಗಿ, ಸಾಮಾಜಿಕ ಹೊಣೆಯಾಗಿ ಹೊರಹೊಮ್ಮುವುದು ತುಂಬಾ ಕಷ್ಟ. ನಮ್ಮ ನಮ್ಮ ವೈಯಕ್ತಿಕ ನಿಲುವುಗಳು ಅನೇಕ ಬಾರಿ ನಿರ್ದಿಷ್ಟ ವಲಯಕ್ಕೆ ಮಾತ್ರವೇ ಸೀಮಿತವಾಗುತ್ತದೆ. ಉದಾ - Developers Community, Users Community ಹೀಗೆ. ಆದರೆ ನಮ್ಮಂತಹ ಇಂಜಿನಿಯರುಗಳ ಪ್ರಯತ್ನಗಳು ಸಾಮಾಜಿಕ ಜವಾಬ್ದಾರಿಯಾಗಿ ಬದಲಾಗುವುದು ತುಂಬಾ ಕಷ್ಟ. ಆದರೆ, ಪತ್ರಿಕೆಗಳು ಹಾಗಲ್ಲ. ಪತ್ರಿಕೆಗಳಿಗಿರುವ ಶಕ್ತಿ ನಮ್ಮಂತಹ ಇಂಜಿನಿಯರುಗಳಿಗೆ ಇರುವುದು ದೂರದ ಮಾತು. ಪತ್ರಿಕೋದ್ಯಮಕ್ಕೆ ಯಾವುದೇ ಒಂದು ಆದರ್ಶವನ್ನು ಸಾಮಾಜಿಕ ವಾದವನ್ನಾಗಿಸುವ, ಪ್ರಜೆಗಳ ಹೊಣೆಯನ್ನಾಗಿಸುವ ಶಕ್ತಿಯಿದೆ. ನಮ್ಮಂತಹ ಇಂಜಿನಿಯರುಗಳಿಗೆ ಅದು ತುಂಬಾ ಕಷ್ಟ. ಏಕೆಂದರೆ ಪತ್ರಿಕೆಯನ್ನು ಇಂಜಿನಿಯರುಗಳೂ ಓದುತ್ತಾರೆ, ಶಾಲಾ ಕಾಲೇಜು ಶಿಕ್ಷಣ ಪಡೆಯದವರೂ ಓದುತ್ತಾರೆ.
ಆದರೆ ಈ ಒಂದು ತತ್ವ ಅಥವಾ ಆದರ್ಶಗಳನ್ನು ಸಾಮಾಜಿಕವಾಗಿಸುವ ನಿಟ್ಟಿನಲ್ಲಿ ಕನ್ನಡದ ಪತ್ರಿಕೋದ್ಯಮ ಎಷ್ಟು ಪ್ರಗತಿ ಸಾಧಿಸಿದೆ (ಮುಖ್ಯವಾಗಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ) ಎಂದು ಲೆಕ್ಕ ಹಾಕುತ್ತಾ ಕುಳಿತರೆ, ನಿಜಕ್ಕೂ ನಿರಾಶೆಯೇ ಆಗುವುದು.
ಇಸ್ಮಾಯಿಲರ ಮಾತು ಕನ್ನಡ ನಾಡಿನಲ್ಲಿದ್ದುಕೊಂಡು ಕೆಲಸಮಾಡುವ ಕಂಪೆನಿಗಳಿಗೆ Nailing on the Head ಎನ್ನುವಂತಹ ರೀತಿಯಲ್ಲಿದೆ,
ನಿಜಕ್ಕೂ, ಕೆಲವೇ ಕೆಲವು ಪತ್ರಕರ್ತರಾದರೂ ಈ ರೀತಿಯಾಗಿ ದೊಡ್ಡ ದೊಡ್ಡ ಸಂಸ್ಥೆಗಳ ವಿರುದ್ಧ ಧೈರ್ಯವಾಗಿ ನಿಲ್ಲುವುದನ್ನು ಕಂಡಾಗ ನಿಜಕ್ಕೂ ಸಂತೋಷವಾಗುತ್ತದೆ ಮತ್ತು ಹೆಮ್ಮೆಯೆನಿಸುತ್ತದೆ. ಇದೇ ರೀತಿಯ ಸ್ಥೈರ್ಯ ಎಲ್ಲ ಪತ್ರಕರ್ತರಿಗೂ ಬರಲಿ ಎಂದು ಆಶಿಸುವೆ. ಈ ಯಾವುದೋ ಸಂಸ್ಥೆಯ ದಮನಕಾರಿ ಬದಲಾವಣನೆಗಳನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಬಾರದು. ಒಂದು ವೇಳೆ ನಾವು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಅದನ್ನು ಕನ್ನಡ ಪತ್ರಿಕೋದ್ಯಮದ ಬಹುದೊಡ್ಡ ಸೋಲು ಅಂತಲೇ ನಾವು ಭಾವಿಸಬೇಕಾಗುತ್ತದೆ. ಏಕೆ ಎಂಬುದನ್ನು ಮುಂದೆ ನೋಡಿ.
ಇಸ್ಮಾಯಿಲರು ಪ್ರಸ್ತಾಪಿಸಿದಂತೆ,
ಪತ್ರಿಕೆಯವರಿಗೆ ಇದರ ಕುರಿತು ವರ್ಷದ ಹಿಂದೆಯೇ ಅರಿವಿತ್ತು. ಆದರೆ ಈ ರೀತಿ ಕನ್ನಡಕ್ಕಾದ ಅಪಚಾರದ ಬಗ್ಗೆ ಯಾವುದೇ ಪತ್ರಿಕೆಯಲ್ಲಿ ಮುಖಪುಟದ ಲೇಖನ ಪ್ರಕಟವಾಯಿತೇ
ಮುಖಪುಟದಲ್ಲಿ ಆಧಾರ ಸಮೇತ ಲೇಖನ ಪ್ರಕಟವಾಗಿದ್ದರೆ, ಟಿ.ವಿಯವರೂ ತಮ್ಮ ತಮ್ಮ ಅಗ್ರರಾಷ್ಟ್ರೀಯ ವಾರ್ತೆಗಳಲ್ಲಿ ವಿಶೇಷ ಸಂಚಿಕೆಯೆಂದು ಪ್ರಸಾರ ಮಾಡುತ್ತಿದ್ದರೋ ಏನೋ? ಯಾರಿಗೆ ಗೊತ್ತು ಕರ್ನಾಟಕ ರಕ್ಷಣಾ ವೇದಿಕೆಯವರೂ ಈ ಹೊರಾಟದಲ್ಲಿ ಪಾಲ್ಗೊಳ್ಳುತ್ತಿದ್ದರೋ ಏನೋ
Infact, ಯಾರಿಗೆ ಗೊತ್ತು, ಅದಾಗಿ ತಾನೇ ಸ್ಥಾಪನೆಗೊಂಡಿದ್ದ ಸಮ್ಮಿಶ್ರ ಸರಕಾರವೂ ಪತ್ರಿಕೋದ್ಯಮಕ್ಕೆ ಬೆಂಬಲ ನೀಡುತ್ತಿತ್ತೋ ಏನೋ
ನಿರಾಶಾವಾದ ಎಂದೆಂದಿಗೂ ಬೇಡ.
ವಿ.ಸೂ - ನಾನು ಯಾವುದೇ ಟಿ.ವಿ.ವಾಹಿನಿಯ ವಕ್ತಾರನಾಗಲೀ, ಕರ್ನಾಟಕ ರಕ್ಷಣಾ ವೇದಿಕೆಯ ವಕ್ತಾರನಾಗಲೀ, ಪೋಷಕನಾಗಲೀ ಖಂಡಿತ ಅಲ್ಲ, ಯಾವುದೇ ರಾಜಕೀಯ ಪಕ್ಷದ ವಕ್ತಾರನಂತೂ ಖಂಡಿತವಾಗಿಯೂ ಅಲ್ಲವೇ ಅಲ್ಲ.
ಹಾಗೆಯೇ ನೋಡಿ,
ನಾವು ಸರಕಾರವನ್ನು ಬಯ್ಯುವುದು ತುಂಬಾ ಸುಲಭ, ಏಕೆಂದರೆ ಸರಕಾರ ಉತ್ತರ ನೀಡುವುದಿಲ್ಲ. ಸರಕಾರ ಉತ್ತರ ನೀಡಬೇಕಿಲ್ಲ ಎಂಬುದು ಸರಕಾರದ ನಿಲುವಾಗಿದ್ದರೆ ಅದರ ಜುಟ್ಟು ಹಿಡಿದು ಅಲ್ಲಾಡಿಸಬೇಕಾಗಿರುವುದು ನಮ್ಮ ಪತ್ರಿಕೋದ್ಯಮದ ಕೆಲಸ. ಒಬ್ಬ ಇಂಜಿನಿಯರ್ ಸರಕಾರದ ವಿರುದ್ಧ ಬ್ಲಾಗುವುದಕ್ಕೂ, ಒಂದು ಪತ್ರಿಕೆ ಸರಕಾರದ ವಿರುದ್ಧ ಬರೆಯುವುದಕ್ಕೂ ಬಹಳ ಬಹಳ ವ್ಯತ್ಯಾಸವಿದೆ. ನಾವು ಸರಕಾರವನ್ನು ಆಪಾದಿಸಿದ ಹಾಗೆಯೇ ನಾಳೆ Non-Microsoft ಕಂಪೆನಿಯ ಇಂಜಿನಿಯರುಗಳು ಮುಂದೆ ಈ ಪತ್ರಿಕೆಯವರೂ ಏನ್ ಕಮ್ಮಿ ಇಲ್ಲ, ಮೈಕ್ರೋಸಾಫ್ಟಿನ ದುಡ್ಡು ತಿಂದಿರ್ತಾರೆ, ಅದಕ್ಕೆ ಅದರ ವಿರುದ್ಧ ಅಂಕಣಗಳನ್ನು ಬರೆಯುವುದಿಲ್ಲ ಎಂಬ ಆಪಾದನೆ ಮೊದಲು ಮಾಡಿದರೆ ಕನ್ನಡದ ಪತ್ರಿಕೋದ್ಯಮ ಏನು ಉತ್ತರ ನೀಡಬಲ್ಲರು. ಈ Maa - Moo ಜಗಳವನ್ನು ಸರಿಪಡಿಸಲೇ ಇಷ್ಟು ವರ್ಷ ಬೇಕಾಯಿತು. ಹೋಗಲಿ, ಸರಿ ಹೋಗಿರುವ Moo ಎಲ್ಲಿದೆ ಎನ್ನುವಂತಹ ವರದಿಗಳೂ ಬಹುಶಃ ಪತ್ರಿಕೆಗಳಲ್ಲಿ ಪ್ರಕಟವಾಗಿಲ್ಲ.
ಕನ್ನಡದ ಪತ್ರಿಕೋದ್ಯಮಕ್ಕೆ ಏನಾಗಿದೆ. ಪತ್ರಿಕೆಯವರೇ, ಇದರ ಕುರಿತು ಮೊದಲ ಪುಟದ ದಪ್ಪಕ್ಷರದ ಸುದ್ಧಿ ಪ್ರಕಟಿಸಿ, ಮೈಕ್ರೋಸಾಫ್ಟಿಗೆ ನೀರು ಕುಡಿಸಬಹುದಲ್ಲ. ಒಂದೇ ಒಂದು ಪತ್ರಿಕಾ ವರದಿ ಸಾಕು ಮೈಕ್ರೋಸಾಫ್ಟಿನವರ ತಲೆಕೆಳಗು ಮಾಡಲು. ಕನ್ನಡವನ್ನು ಕೊಂದ ಮೈಕ್ರೋಸಾಫ್ಟ್ ಎಂದು ದಪ್ಪಕ್ಷರದ ಮುಖಪುಟ ಸುದ್ಧಿ ಪ್ರಕಟಿಸಲಿ. ಯಾರು ಏನು ಮಾಡುತ್ತಾರೆ ನೋಡೋಣ ? ಆಗ ಪತ್ರಿಕೆಯ ಸಹಾಯಕ್ಕೆ ಇಂಜಿನಿಯರುಗಳೇನು, ಇಡೀ ಕನ್ನಡ ಕುಲ ಕೋಟಿಯೇ ಮುಂದೆ ಬರುತ್ತದೆ. ಆದರೆ ಪತ್ರಿಕೆಗಳಿಗೆ ಗಣಿ ಲಂಚ ಪ್ರಕರಣ, ಮೊಟ್ಟೆ-ಹಾಲು-ಬಾಳೆಹಣ್ಣು ಮುಂತಾದ ಸೃಜನಶೀಲ(??) ವಿಷಯವೇ ಸಿಗುತ್ತವೆ. ಕನ್ನಡದ ಮಾರುಕಟ್ಟೆಯನ್ನು ಸೃಷ್ಟಿಮಾಡುವಲ್ಲಿ ಪತ್ರಿಕೋದ್ಯಮ ಯಾವ ರೀತಿ ಕೆಲಸ ಮಾಡಿದೆ ಎಂದು ಯೋಚಿಸುತ್ತಾ ಕುಳಿತರೆ ನಿರಾಸೆಯೇ ಗ್ಯಾರೆಂಟಿ ? ಕನ್ನಡ ಎಸ್.ಎಮ್.ಎಸ್ ಕಳುಹಿಸಬಹುದಾದ ಮೊಬೈಲು ಎಲ್ಲಿ ಸಿಗುತ್ತದೆ. ಕನ್ನಡ ಎಸ್.ಎಮ್.ಎಸ್ ಹೇಗೆ ಕಳುಹಿಸುವುದು, ಇವುಗಳನ್ನು ಕುರಿತಾದ ವರದಿಗಳು ಪ್ರಕಟವಾಗುವುದೇ ಅಪರೂಪ. ಪ್ರಕಟವಾದರೂ ಅವುಗಳು ಮುಖಪುಟದಲ್ಲಿರುವುದಿಲ್ಲ. ಎಲ್ಲೋ ಮೂಲೆಯಲ್ಲಿ, ನಾಲ್ಕು ಸಾಲಿನ ವರದಿಯಿರುತ್ತದೆ. ಈಗಲೂ ಕೂಡ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳನ್ನು ವೃತ್ತಿನಿರತ ಪತ್ರಕರ್ತರು ಬರೆಯುವುದೇ ಬಹಳ ಕಡಿಮೆಯೇನೋ ? ಒಬ್ಬರು ಇಂಜಿನಿಯರ್ ಬರೆದಿದ್ದನ್ನು ಯಥಾವತ್ ಪ್ರಕಟಿಸುವ ಪತ್ರಿಕೆಗಳೇ ಹೆಚ್ಚು (ನನ್ನ ನಂಬಿಕೆ ಪೂರ್ತಿ ನಿಜವಲ್ಲದಿದ್ದರೂ, ಸುಳ್ಳಂತೂ ಖಂಡಿತ ಅಲ್ಲ).
ನಾನು ಏಕೆ ಪತ್ರಿಕೋದ್ಯಮವೇ ಇಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ಹೇಳುತ್ತಿದ್ದೇನೆಂದರೆ. ಒಬ್ಬ ಇಂಜಿನಿಯರ್ ಏನೆಲ್ಲಾ ಕಷ್ಟ ಕೋಟಲೆಗಳನ್ನು ಅನುಭವಿಸಿದರೂ ಮೊದಲೇ ಹೇಳಿದ ಹಾಗೆ, ತನ್ನ ಆದರ್ಶವನ್ನು ಸಾಮಾಜಿಕ ಹೊಣೆಯನ್ನಾಗಿಸುವಲ್ಲಿ ಆತ ದುರ್ಬಲ. ಸರಕಾರವನ್ನು ಆರಿಸಿದ್ದು ಜನಸಾಮಾನ್ಯ. ಆ ಜನಸಾಮಾನ್ಯನ ವಿರುದ್ಧವೇ ಸರಕಾರ ಕೆಲಸ ಮಾಡಿದರೆ, ಜನಸಾಮಾನ್ಯ ದನಿ ಎತ್ತಲೇ ಬೇಕು. ಮತ್ತು ಆ ಜನಸಾಮಾನ್ಯನ ದನಿಯೇ ಪತ್ರಿಕೆ. ನೋಡಿ, ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯಾಗುತ್ತಿದ್ದಾಗ, ದಿ ಹಿಂದು ಪತ್ರಿಕೆ ಇದರ ವಿರುದ್ಧ ನಿಂತಿತ್ತು. ಮತ್ತು ತಮಿಳನ್ನು ಎತ್ತಿಹಿಡಿಯಿತು. ಹಿಂದೆ ಕನ್ನಡ ಪತ್ರಿಕೆಯವರೂ ಇಂತಹ ಧೀರೋದಾತ್ತ ಕೆಲಸಗಳನ್ನು ಮಾಡಿರಬಹುದು, ಇಲ್ಲವೆನ್ನಲು ನನಗೆ ಖಂಡಿತ ಮನಸ್ಸು ಬರುವುದಿಲ್ಲ. ಆದರೆ ಈಗಿನ ಕನ್ನಡದ ಪತ್ರಿಕೋದ್ಯಮಕ್ಕೆ ಏನಾಗಿದೆ ಅಂತಲೇ ನನಗೆ ತಿಳಿಯುತ್ತಿಲ್ಲ. ಅಲ್ಲೆಲ್ಲೋ ತಮಿಳುನಾಡಿನಲ್ಲಿ ಕನ್ನಗಿಯ ಪ್ರತಿಮೆ ಸ್ಥಾಪನೆಯಾಗುತ್ತಂತೆ ಎಂಬ ವಿಷಯ ಬಂದಾಗ, ಕನ್ನಗಿ, ಕಾಲುಂದೆಗೆ, ಕನ್ನಗಿಗೂ ಮಧುರೈನ ಇತಿಹಾಸಕ್ಕೂ ಇರುವ ಸಂಬಂಧ ಇದರ ಬಗ್ಗೆ ಪೂರ್ಣ ಆರು ಕಾಲಂಗಳ ಪತ್ರಿಕಾ ವರದಿ ಬರುತ್ತದೆ. ಆದರೆ ಕನ್ನಡದ ಕವಿರಾಜಮಾರ್ಗದ ಬಗ್ಗೆ ಒಂದೇ ಒಂದು ವರದಿ
ಅಂದರೆ ಸೃಜನಶೀಲತೆಯ ವಿಷಯದಲ್ಲೂ ಎಷ್ಟು ಎಡವಿದೆ ನಮ್ಮ ಪತ್ರಿಕೋದ್ಯಮ ಎಂಬುದು ತಿಳಿಯುತ್ತದೆ. ಇನ್ನು ತಂತ್ರಜ್ಞಾನದ ವಿಷಯ ಬಂದರಂತೂ, ಹೆಚ್ಚೆಂದರೆ ನಾಲ್ಕು ಸಾಲುಗಳ ವರದಿ, ಅದೂ ಎರಡು ದಿನಗಳ ನಂತರ. ಸಿದ್ದ ಸೂತ್ರಗಳನ್ನು ಹಾಕಿಕೊಂಡು, ಅದಕ್ಕೇ ಜೋತುಬೀಳುತ್ತೇವೆಂದರೆ ಅದು ಸೋಲಿನಲ್ಲಿಯೇ ಲೀನವಾಗುತ್ತದೆ.
ಇತ್ತೀಚೆಗೆ ಸನ್ ಮೈಕ್ರೋಸಿಸ್ಟಮ್ಸ್ ಮತ್ತು ಪಿ.ಇ.ಎಸ್ ಕಾಲೇಜಿನ( ಹಾಗು ಬಿ.ಎಮ್.ಎಸ್ ಕಾಲೇಜಿನ) ನಡುವೆ ಒಂದು ಒಪ್ಪಂದವೇರ್ಪಟ್ಟಾಗ, ಅದರ ಬಗೆಗಿನ ಸುದ್ಧಿ ಪ್ರಕಟವಾಗಿದ್ದು ಕನ್ನಡ ಪತ್ರಿಕೆಗಳಲ್ಲಿ ಎರಡು ದಿನಗಳ ನಂತರ. ಅದೂ ಇಂಗ್ಲೀಷ್ ಪತ್ರಿಕೆಗಳ ಪಕ್ಕಾ ನಕಲು, ಅದೂ ಎಲ್ಲೋ ಯಾವುದೋ ಮೂಲೆಯಲ್ಲಿ, ನಾಲ್ಕು ಸಾಲುಗಳ ವರದಿ. ಅಂದರೆ, ಕನ್ನಡದ ಪತ್ರಕೋದ್ಯಮಕ್ಕೆ ಸಿದ್ಧ ಸೂತ್ರಗಳ ಪುಟಗಳನ್ನು ಭರ್ತಿಮಾಡುವುದು ಬೇಕಾಗಿದೆಯೇ ಹೊರತು, ತಂತ್ರಜ್ಞಾನಕ್ಕೆ ಸ್ಫಂದಿಸುವ ಜಾಣ್ಮೆ
(ನನ್ನ ನಂಬಿಕೆ ತಪ್ಪಿರಲೂ ಬಹುದು, ಆದರೆ ಅದು ಸುಳ್ಳಾದರೂ ಸಮಾಜಕ್ಕೆ ಪತ್ರಿಕೋದ್ಯಮದಿಂದ ಪ್ರಯೋಜನವಾಗುತ್ತಿಲ್ಲ) ? ಬರೀ ಸೃಜನಶೀಲತೆಯನ್ನು ನೆಚ್ಚಿಕೊಂಡು ಎಷ್ಟು ದಿನ ನಮ್ಮ ಪತ್ರಿಕೋದ್ಯಮ ಇರುತ್ತೆದೆಯೋ ತಿಳಿಯದು. ಎಂಜಲು ಪತ್ರಿಕೆಗಳ ವಿರುದ್ಧ ಹೇಳಿಕೆಗಳು ಬರುತ್ತಿರುವ ಈ ಹೊತ್ತಿನಲ್ಲಿ ಹಳಸಲು ಸುದ್ಧಿಗಳ ಬಗ್ಗೆ ಯಾವಾಗ ವರದಿಯಾಗುತ್ತದೆ ಕಾದು ನೋಡಬೇಕು.
ಇದಕ್ಕೆ ಜೊತೆಯಾಗುತ್ತಾ, ಒಂದು ಸಣ್ಣ ಸಲಹೆ. ಇಂದೇ ಒಂದು Survey ಕೈಗೊಳ್ಳೋಣ. Engineering ಓದುತ್ತಿರುವ ಎಷ್ಟು ಜನ ಕನ್ನಡ ವಿದ್ಯಾರ್ಥಿಗಳಿಗೆ Open Source ಬಗ್ಗೆ ತಿಳಿವಿದೆ. Software ಕೆಲಸ ಮಾಡುತ್ತಿರುವ ಎಷ್ಟು ಜನ ಇಂಜಿನಿಯರುಗಳಿಗೆ ಕಂಪ್ಯೂಟರಿನಲ್ಲಿ ಕನ್ನಡ ಬಳಸಲು ಬರುತ್ತದೆ ? ವಿಂಡೋಸಿನಲ್ಲಿ ಕನ್ನಡ ಬಳಸಲು ಗೊತ್ತಿರುವವರು ಎಷ್ಟು ಜನ ? ಲಿನಕ್ಸಿನಲ್ಲಿ, ಸೊಲಾರಿಸ್ನಲ್ಲಿ ಕನ್ನಡ ಬಳಸುತ್ತಿರುವವರು ಎಷ್ಟು ಜನ ? ಬಳಸುತ್ತಿರುವವರು ಎಷ್ಟು ಜನ ? ಬಳಸಬಹುದು ಎಂದು ತಿಳಿದವರು ಎಷ್ಟು ಜನ ?
ಹೀಗೆ ಈ Survey ಸಾಗಲಿ.
ಒಟ್ಟಿನಲ್ಲಿ, ಕಂಪ್ಯೂಟರಿನಲ್ಲಿ (ಯಾವ ಓ.ಎಸ್ ಆದರೂ ಪರವಾಗಿಲ್ಲ) ಕನ್ನಡ ಬಳಸಲು ಬರದ ಇಂಜಿನಿಯರುಗಳು, ನಾಲ್ಕಾಣೆ ಪ್ರಯೋಜನಕ್ಕೆ ಬರದವರು, ಕನ್ನಡವನ್ನು ಬಳಸದ ಇಂಜಿನಿಯರುಗಳು ಇದ್ದರೆಷ್ಟು ಬಿದ್ದರೆಷ್ಟು, ಕನ್ನಡ ಕೊಲ್ಲುವವರೊಡನೆ ಕೈಕುಲುಕಿದ ದೇಶದ್ರೋಹಿ ಸರಕಾರ ಎಂಬಂತಹ ವರದಿಗಳು ಆಧಾರ ಸಮೇತ ಬರಲಿ. ಇಂತಹ ಒಂದು ವರದಿಯ ಬಿಸಿ ಮೊದಲು ತಟ್ಟುವುದು, ಮನೆಯಲ್ಲಿರುವ ಹಿರಿಯರಿಗೆ. ತಮ್ಮ ಮನೆಯಲ್ಲಿರುವ ಮಕ್ಕಳೇ ನಾಲ್ಕು ಕಾಸು ಪ್ರಯೋಜನಕ್ಕೆ ಬರದವರು, ಪೈರೇಟೆಡ್ ಸಾಫ್ಟ್ವೇರನ್ನು ಬಳಸುವ ದೇಶದ್ರೋಹಿಗಳು ಎಂಬುದರ ಅರಿವು ಹಿರಿಯರಿಗೆ ಆದಾಗ, ಅದರ ನೇರ ಪರಿಣಾಮ ಅವರ ನಡೆ, ನುಡಿಗಳಲ್ಲಿ ಕಾಣುತ್ತದೆ. ಆಟೋ, ಟ್ಯಾಕ್ಸಿ ಡ್ರೈವರುಗಳು ಇಂಜಿನಿಯರುಗಳನ್ನು ಕಡೇಗಣ್ಣಿನಿಂದ ನೋಡಲು ಪ್ರಾರಂಭಿಸುತ್ತಾರೆ. ಬಯಲಾಗುತ್ತದೆ ಕನ್ನಡ ಬರದ ಇಂಜಿನಿಯರುಗಳ ಬಣ್ಣ. ಕಡೇಪಕ್ಷ ಹಿರಿಯರನ್ನು ಮೆಚ್ಚಿಸುವುದಕ್ಕಾಗಿಯಾದರೂ ವಿದ್ಯಾರ್ಥಿಗಳು, Software ಇಂಜಿನಿಯರುಗಳು ಕನ್ನಡ ಬಳಸುವ, ಮೈಕ್ರೋಸಾಫ್ಟ್ ಬಿಟ್ಟು Open Source ಬಳಸುವ ಪ್ರಯತ್ನವನ್ನಾದರೂ ಮಾಡುತ್ತಾರೆ.
ಕೊನೆಯಲ್ಲಿ ನಾನು ಮತ್ತೊಮ್ಮೆ ಹೇಳ ಬಯಸುವುದು, ಇಂಜಿನಿಯರುಗಳ ಆದರ್ಶ ನಿಲುವುಗಳು(ಅಂದರೆ Open Source ಅನ್ನೇ ಬಳಸುವುದು, ಮೈಕ್ರೋಸಾಫ್ಟನ್ನು ವಿರೋಧಿಸುವುದು) ಎಷ್ಟು ಮುಖ್ಯವೋ, ಅಂತಹ ತತ್ವಾದರ್ಶಗಳನ್ನು ಸಾಮಾಜಿಕವಾಗಿಸಬೇಕಾದ ಗುರುತರ ಹೊಣೆ ಹೊತ್ತ ಪತ್ರಿಕೋದ್ಯಮದ ಜವಾಬ್ದಾರಿ ಅದಕ್ಕಿಂತ ಸಾವಿರ ಪಟ್ಟು ಮುಖ್ಯ. ಈಗಿನ ಸಮಾಜದಲ್ಲಿ ಒಬ್ಬ ಜನಸಾಮಾನ್ಯನ ದನಿಯಾಗಿ ಒಂದು ಪತ್ರಿಕೆ ನಿಲ್ಲಬಹುದೇ ವಿನಃ ಒಬ್ಬಿಬ್ಬರು ಇಂಜಿನಿಯರ್ ನಿಲ್ಲುವುದು ಕಷ್ಟಸಾಧ್ಯ. ನಮ್ಮ ಕನ್ನಡದ ಪತ್ರಿಕೋದ್ಯಮ ಇದನ್ನು ಅರಿತು ಸೂರ್ಯನಂತೆ ಮಿನುಗಲಿ. ಫೀನಿಕ್ಸಿನಂತೆ ಮೈಕೊಡವಿಕೊಂಡು ಎದ್ದೇಳಲಿ. ಕನ್ನಡದ(ಕನ್ನಡ ಎಂದರೆ ಬರೇ ನುಡಿಯಲ್ಲ, ಸಂಸ್ಕೃತಿ, ಆರ್ಥಿಕತೆ, ಸಮಾಜ, ತಂತ್ರಜ್ಞಾನ, ಮಾರುಕಟ್ಟೆ) ಏಳಿಗೆಯಲ್ಲಿ ಇಂಜಿನಿಯರುಗಳ ಪ್ರಯತ್ನಕ್ಕೆ ಕೈಜೋಡಿಸಲಿ.
ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗಲಿ. ನಿನ್ನಲ್ಲಿ ಆ ಶಕ್ತಿಯಿದೆ. ಕ್ರಾಂತಿ ಕಹಳೆಯನ್ನೆಬ್ಬಿಸು ಪತ್ರಿಕೋದ್ಯಮಿ. ಜಯವಾಗಲಿ ನಮ್ಮ ಪತ್ರಕರ್ತರಿಗೆ.

- Sunil Jayaprakash ರವರ ಬ್ಲಾಗ್
- Login or register to post comments
- 650 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ತಂತ್ರಜ್ಞರು ಭಾಗವಹಿಸಬೇಕು
ಅದ್ಯಾಕೆ ಮಾರಾಯ? ಪತ್ರಿಕೋದ್ಯಮಕ್ಕೆ ಇಂಜಿನಿಯರೊಬ್ಬ ಲೇಖನ ಬರೆದುಕೊಟ್ಟರೆ ಆ ಶಕ್ತಿ ಇಂಜಿನೀಯರನದ್ದೂ ಆಗುತ್ತದಲ್ವೆ? ಅದೇನು ಅವರಿಗುಂಟು ಇವರಿಗಿಲ್ಲ - ಎಲ್ಲ?
ಪತ್ರಿಕೋದ್ಯಮವೂ ತಂತ್ರಜ್ಞರ ಅಭಿಪ್ರಾಯ ಸ್ವೀಕರಿಸುತ್ತದೆ - ಬಿಡಿಸಿ ಹೇಳಬೇಕೆಂದರೆ ನಮ್ಮಂತಹ ಇಂಜಿನೀಯರುಗಳೂ ಪತ್ರಿಕೆಗೆ ಬರೆದುಹಾಕಬಹುದು. ಕೆಟ್ಟದಾಗಿ ಬರೆಯುವ ನನ್ನಂತ ಲೇಖಕರ ಲೇಖನಗಳನ್ನೂ ಹಲವು ಬಾರಿ ಪತ್ರಿಕೆಯಲ್ಲಿ ಹಾಕಿಕೊಂಡಿದ್ದಾರೆ. ಮತ್ತೇನು ಬೇಕು?
ಶ್ಯಾಮ್ ಕಿಶೋರ್ ಹೇಳಿದಂತೆ ಬಾಟಮ್ ಲೈನ್ ಮತ್ತೆ ನಮ್ಮೆಲ್ಲರ ಮೇಲೆಯೇ ಬರುತ್ತದೆ. ನಾವುಗಳು (ತಂತ್ರಜ್ಞರು) ಪತ್ರಿಕೆಗಳಿಗೆ ಬರೆದುಕೊಟ್ಟಿಲ್ಲ ಆದ್ದರಿಂದ ಅವರು ಈ ಬಗ್ಗೆ explore ಮಾಡಿಲ್ಲ ಎಂಬುದಾಗಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ತಂತ್ರಜ್ಞರು ಭಾಗವಹಿಸಬೇಕು
ಪ್ರಿಯ ಸುನೀಲ್
ಮೈಕ್ರೋಸಾಫ್ಟ್ ನ ಅನಾಹುತಗಳ ಬಗ್ಗೆ 'ಉದಯವಾಣಿ'ಸಾಕಷ್ಟು ಬಾರಿ ಬರೆದಿದೆ. ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಬಗ್ಗೆ ಹರಿಪ್ರಸಾದ್ ಬರೆದುಕೊಟ್ಟಿದ್ದರು. ತುಳು, ಕೊಂಕಣಿ, ಕೊಡವದಂಥ ಕನ್ನಡವನ್ನೇ ಲಿಪಿಯಾಗಿ ಬಳಸುವ ಭಾಷೆಗಳ ಸಮಸ್ಯೆಗಳ ಬಗ್ಗೆ ಯು.ಬಿ. ಪವನಜ ಬರೆದಿದ್ದರು. ತೇಜಸ್ವಿ ಕೂಡಾ ಕನ್ನಡ ಕಂಪ್ಯೂಟಿಂಗನ ಸಮಸ್ಯೆಗಳ ಕುರಿತು 'ಉದಯವಾಣಿ'ಯಲ್ಲಿ ಸಾಕಷ್ಟು ಬರೆದಿದ್ದಾರೆ. ಯೂನಿಕೋಡ್ ನಲ್ಲಿ ಇದ್ದ ಅರ್ಕಾವೊತ್ತಿನ ಸಮಸ್ಯೆ, ಕನ್ನಡ ಗಣಕ ಪರಿಷತ್ ತಯಾರಿಸಿದ ನುಡಿ ತಂತ್ರಾಂಶಕ್ಕೆ ಸಂಬಂಧಿಸಿದ ಚರ್ಚೆಗಳಿಗೂ ಉದಯವಾಣಿ ವೇದಿಕೆಯಾಗಿದೆ. ಯಾವುದಾದರೂ ನಿರ್ದಿಷ್ಟ ವಿಷಯ ಪತ್ರಿಕೆಯಲ್ಲಿ ನಿರಂತರವಾಗಿ ಚರ್ಚೆಯಾಗಬೇಕಾದರೆ ಅದಕ್ಕೆ ಓದುಗರೂ ಸ್ಪಂದಿಸಬೇಕಾಗುತ್ತದೆ. ಕಂಪ್ಯೂಟರ್ ಗೆ ಸಂಬಂಧಿಸಿದಂತೆ ಕನ್ನಡದ ವಿಷಯವನ್ನು ಬರೆದರೂ ಅದಕ್ಕೆ ಸ್ಪಂದಿಸುವವರ ಸಂಖ್ಯೆ ಇಲ್ಲಾ ಅನ್ನುವಷ್ಟು ಕಡಿಮೆ. ಪತ್ರಿಕಾ ಸಂಪಾದಕರೆಲ್ಲರೂ ತಂತ್ರಜ್ಞರಲ್ಲದ ಕಾರಣ ಇದು ಗಂಭೀರವಾದ ವಿಷಯವಾಗಿರಲಿಕ್ಕಿಲ್ಲ ಎಂದು ಅವರೂ ನಿರ್ಲಕ್ಷಿಸತೊಡಗುತ್ತಾರೆ.
ಹೀಗಾಗದಂತೆ ತಡೆಯುವ ಅಸ್ತ್ರ ನಮ್ಮ ಕೈಯಲ್ಲಿಯೇ ಇದೆ. ಸಂಪದದಲ್ಲಿ ತಂತ್ರಜ್ಞಾನದ ಕುರಿತಂತೆ ನೀವು ಬರೆಯುವ ಪ್ರತಿಕ್ರಿಯೆಗಳನ್ನು ಲೇಖನ ರೂಪಕ್ಕೆ, ಇಲ್ಲವೇ ಓದುಗರ ಓಲೆಯ ರೂಪಕ್ಕೆ ತಂದು ಪತ್ರಿಕೆಗಳಿಗೂ ಕಳುಹಿಸಬೇಕು.
ಪತ್ರಿಕೆಗಳ ಇ ವಿಳಾಸಗಳು ಹೀಗಿವೆ.
ಪ್ರಜಾವಾಣಿ:vachaka@deccanherald.co.in
ಕನ್ನಡಪ್ರಭ:info@kannadaprabha.com
ವಿಜಯಕರ್ನಾಟಕ:noorantumaatu@yahoo.com(ಸಂಪಾದಕರ ಇ-ವಿಳಾಸ)
ಸಂಯುಕ್ತ ಕರ್ನಾಟಕ: samkarnataka@rediffmail.com
ಉದಯವಾಣಿ: blrnews@manipalmedia.com
ಈ ಸಂಜೆ:eesanje@eesanje.com, eesanje@vsnl.in
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
Re: ತಂತ್ರಜ್ಞರು ಭಾಗವಹಿಸಬೇಕು
ವಿಳಾಸಗಳಿಗಾಗಿ ಸವಿನೆರವು ಇಸ್ಮಾಯಿಲ್ರೇ.