ವಂಶವೃಕ್ಷ
ನೆನ್ನೆ ಮಲಗಿದಾಗ ಮಧ್ಯರಾತ್ರಿ ೧:೩೦ ಆಗಿತ್ತು. ವಂಶವೃಕ್ಷ ಓದಿ ಮುಗಿಸಿದೆ. ಛೆ ಇಷ್ಟು ಬೇಗ ಯಾಕಾದರೂ ಓದುತ್ತೇನೋ ಗೊತ್ತಿಲ್ಲ.
ಮತ್ತೊಮ್ಮೆ ಮೆಲುಕುಹಾಕಲೇ ಬೇಕು, ಇದನ್ನು. ಈ ಕಾದಂಬರಿಯಲ್ಲಿ ನನ್ನನ್ನ ಅತಿಯಾಗಿ ಹಿಡಿದಿಟ್ಟಿದ್ದು, ಇದರಲ್ಲಿ ಬರುವ ಮಾತುಗಳು.
ಉದಾ:
೧. ಕೊಲಂಬಸನು ಅಮೇರಿಕೆಯನ್ನು ಕಂಡುಹಿಡಿಯುವ ಮೊದಲೇ ಅಲ್ಲಿ, ಹಿಂದು ಮೂರ್ತಿಗಳಿದ್ದವು.
೨. ಪ್ರಕೃತಿ ಚಿರಯೌವನಳೂ, ಚಿರನೂತನಳೂ...........
೩. ಭಾರತೀಯ ಸಂಸ್ಕೃತಿಗೆ ವೇದ ಉಪನಿಷತ್ತುಗಳೇ ಮೊದಲ ಪಂಕ್ತಿ.
೪. ಪಾಪ ಮತ್ತು ಪಾಪಪ್ರಜ್ಞೆ ಬಗ್ಗೆ ಬರುವ ಮಾತುಗಳು.
೫. ಧರ್ಮ ಮತ್ತು ಪ್ರಕೃತಿ ಧರ್ಮ ( ಶ್ರೀನಿವಾಸ ಶ್ರೋತ್ರಿ ಮತ್ತು ಸೊಸೆ ಕಾತ್ಯಾಯಿನಿ ನಡುವೆ ನಡೆಯುವ ಮಾತುಕತೆ).
೬. ಬೇರೆಯವರ ಅದರಲ್ಲೂ ತಾಯಿತಂದೆಯರ ಪಾಪ ಪುಣ್ಯಗಳ ವಿಮರ್ಶೆ ಮಾಡಬಾರದು ಎಂಬುದರ ಕುರಿತಾಗಿ ಬರುವ ಮಾತುಗಳು.
ಮಾತಿನಂತೆ, ಇದರಲ್ಲಿ ಬಂದ ಪಾತ್ರಗಳೂ ಕೂಡ ಎಂತೆಂತಹವು. ಎಲ್ಲಾ ಗಟ್ಟಿಗರೇ.
ವಂಶದ ಬಗ್ಗೆ ತೀವ್ರವಾದ ಗೌರವ, ಹೆಮ್ಮೆಯಿರಿಸಿ ಕೊಂಡಿದ್ದವನಿಗೆ, ಅದರಲ್ಲೂ ಸೊಸೆ ಮನೆಬಿಟ್ಟು ಹೋದಾಗಲೂ ಅಷ್ಟು ತಲೆ ಕೆಡಿಸಿಕೊಳ್ಳದ ಶ್ರೋತ್ರಿಗೆ, ಕೊನೆಯಲ್ಲಿ ಆಗುವ ಅಘಾತ ಮಾತ್ರ ಜೀರ್ಣಿಸಿಕೊಳ್ಳಲು ಕಷ್ಟವೇ ಆಗುತ್ತದೆ. ಒಂದೇ ರಾತ್ರಿಯಲ್ಲಿ, ತಾನು ತನ್ನ ತಂದೆಗೆ ಮಾಡುತ್ತಿದ್ದ ಶ್ರಾದ್ಧ ಎಷ್ಟು ನಿರರ್ಥಕ ಎಂದು ತಿಳಿದಾಗಲಂತೂ ಸುಧಾರಿಸಿಕೊಳ್ಳಲು ತುಸು ಸಮಯ ತೆಗೆದುಕೊಳ್ಳುತ್ತಾನೆ.
ಅವನ ಕಠಿಣ ಜೀವನದ ಫಲವೋ ಏನೋ, "ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾರ್ಗದಿಂದ ಕಿಂಚಿತ್ತೂ ಆಚೆ ಸರಿಯುವುದಿಲ್ಲ. ಕೊನೆಯಲ್ಲಿ ತಾನು ಅತಿಯಾದ ಮಮತೆಯಿಟ್ಟಿದ್ದ ಮೊಮ್ಮಗನಿಗೂ ಕೂಡ, "ನೀನು ನಿನ್ನ ಕರ್ತವ್ಯವೆನ್ನುವಂತೆ ನಿನ್ನ ತಾಯಿಯ ಶ್ರಾದ್ಧ ಮಾಡು, ಆಕೆ ನಿನಗೇನು ಮಾಡಿದಳು ಎಂಬ ಚಿಂತೆ ಬೇಡ" ಎಂಬ ಅರ್ಥದಲ್ಲಿ ಅವನಿಗೆ ಕಿವಿಮಾತು ಹೇಳಿ, ತಾನು ಸನ್ಯಾಸಿಯಾಗಿ ಹೊರಟುಹೋಗುತ್ತಾನೆ.
ಹೀಗೆ ಇನ್ನೂ ಅನೇಕೆ ಸ್ವಾರಸ್ಯಕರವಾದ ದೃಶ್ಯ, ಸನ್ನಿವೇಶ, ಮಾತುಗಳಿವೆ. ನೀವೂ ಕೂಡ ವಂಶವೃಕ್ಷ ಓದಿದ್ದೀರಾದರೆ, ಅದರ ಬಗ್ಗೆ ಬರೆಯಿರಿ. ವಂಶವೃಕ್ಷದ ಕುರಿತಾಗಿ ಇಲ್ಲೊಬ್ಬರು ಈಗಾಗಲೇ ಬ್ಲಾಗಿದ್ದಾರೆ. ನಿಮ್ಮ ನೆನಪಿನ್ನಲ್ಲಿದ್ದರೆ ಇದು ಸಿನಿಮಾ ಕೂಡ ಆಗಿತ್ತು.

- Sunil Jayaprakash ರವರ ಬ್ಲಾಗ್
- Login or register to post comments
- 644 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ವಂಶವೃಕ್ಷ
ನೀವು ಯಾರಾದರೂ ವಂಶವೃಕ್ಷ ಓದಿದ್ದೀರಾದರೆ, ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಕಾದಂಬರಿಯನ್ನು ಮತ್ತೊಮ್ಮೆ ಓದಿ, ನನ್ನ ಅನಿಸಿಕೆಗಳನ್ನು ನಿಮ್ಮ ಮುಂದಿಡುತ್ತೇನೆ.
ಉ: ವಂಶವೃಕ್ಷ
ಪಾಪ ಮತ್ತು ಪಾಪಪ್ರಜ್ಞೆಯ ಕೊಂಡಿಯಲ್ಲಿ, ಕಾತ್ಯಾಯಿನಿ ಪಾತ್ರದ ಚಿತ್ರಣದ ಬಗ್ಗೆ ಮೇಧಾ ಎಂಬುವರಿಂದ ಇಲ್ಲಿ ಒಂದು ಮಾತು ಬಂತು. ನನಗೆ ವಂಶವೃಕ್ಷದ ಪಾತ್ರದ ಚಿತ್ರಣ confusing ಆಗಿದೆ ಎಂದೆನಿಸುವುದಿಲ್ಲ. ಕಾತ್ಯಾಯಿನಿ ಎಂಬುದು ಒಂದು ನೈಜ ಬದುಕಿನ ಪಾತ್ರ. ಅದರಲ್ಲಿ ಯಾವುದೇ ವಿಶೇಷವನ್ನಾಗಲೀ ಅಥವಾ ಕೆಟ್ಟದ್ದನ್ನಾಗಲೀ ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮ ಸುತ್ತಲಿನ ಪರಿಸರ ನಮ್ಮನ್ನು ಹೇಗೆ ಪಾಪಪ್ರಜ್ಞೆಯ ಸುಳಿಯಲ್ಲಿ ನೂಕುತ್ತದೆ ಎಂಬುದಕ್ಕೆ ಕಾತ್ಯಾಯಿನಿಯ ಪಾತ್ರ ಉತ್ತಮ ಉದಾಹರಣೆ ಎನಿಸುತ್ತದೆ. ಹೇಗೆಂದರೆ.
೧. ಕಾತ್ಯಾಯಿನಿಯು ಗಂಡ ಸತ್ತ ನಂತರ ಕಾಲೇಜಿಗೆ ಹೋದಾಗ ಕಂಡುಕೊಳ್ಳುವದು, "ಪ್ರಕೃತಿ ಚಿರಯೌವನಳೂ, ಚಿರನೂತನಳೂ....". ಆದರೆ ತನ್ನ ಮನೆಯಲ್ಲಿ ಮಾವನ ಸಂಗಡ ಮಾಡುವ ವಾದದಲ್ಲಿ ಬರುವ ಮಾತು "ಒಮ್ಮೆ ತಾಯಿಯಾದ ನಂತರ ಆಕೆ ಎಂದೆಂದಿಗೂ ತಾಯಿಯೇ". ಮಾವನವರ ಈ ಮಾತು ಆಕೆಯನ್ನು ಆಳವಾಗಿ ಇರಿಯುತ್ತದೆ, ಮುಂದೆ.
೨. ಮುದುಕಿಯಾದಾಗ ಕಾಡುವ ಮಗುವಿನ ನೆನಪು - ಇಲ್ಲಿ ಒಂದು ವಿಚಾರ. ಕಾತ್ಯಾಯಿನಿಗೆ ಮಗುವಿನ ನೆನಪು ಯಾವಾಗಲೂ ಕಾಡುತ್ತಲೇ ಇರುತ್ತದೆ. ಆಕೆ ಒಂದೆರೆಡು ಬಾರಿ ಮಾವನ ಮನೆಗೆ ಹೋಗಿ ಬಂದಿರುತ್ತಾಳೆ ಕೂಡ, ಆದರೆ ಯಾರಿಗೂ ಗೊತ್ತಾಗದ ಹಾಗೆ ಧೈರ್ಯ ಸಾಲದೆ ಹಿಂದಿರುಗುತ್ತಾಳೆ. ಅದೂ ಅಲ್ಲದೆ ಮಾವನನ್ನು ಹೇಗೆ ಎದುರಿಸಲಿ ಎಂಬ ಪಾಪಪ್ರಜ್ಞೆ ಬೇರೆ. ಆಕೆ ಮಗುವನ್ನು ಬಿಟ್ಟುಹೋಗುವುದು ಮಾವನಿಗೋಸ್ಕರ. ಗಂಡ ಸತ್ತ ಹೊಸತರಲ್ಲಿ ಮಗುವೂ ಕೂಡ ಇನ್ನೇನು ಸತ್ತೇ ಹೋಗುವುದು ಎಂಬ ಪರಿಸ್ಥಿತಿ ನಿರ್ಮಾಣವಾದಾಗ, ಮಾವನವರು ಕಣ್ಣಲ್ಲಿ ಕಣ್ಣಿಟ್ಟು ಮಗುವನ್ನು ಕಾಪಾಡಿರುತ್ತಾರೆ. ತಾನಂತೂ ಮಾವನವರಿಗೆ ದೃಷ್ಟಿಯಲ್ಲಿ ಪಾಪ ಮಾಡುತ್ತಾ ಹೋಗುತ್ತಿದ್ದೇನೆ. ಕಡೇಪಕ್ಷ ಅವರ ಮೊಮ್ಮಗನನ್ನಾದರೂ ಬಿಟ್ಟು ಹೋಗೋಣ ಎಂದುಕೊಳ್ಳುತ್ತಾಳೆ.
೩. ಕಾತ್ಯಾಯಿನಿಯಲ್ಲಿ ಪಾಪಪ್ರಜ್ಞೆ(??) ಸದಾ ಇದ್ದರು ಅದು ಹೆಚ್ಚು ಪ್ರಕಟಗೊಳ್ಳುವುದು ಆಕೆ ಎರಡನೇ ಬಾರಿಗೆ ಬಸಿರಾದಾಗ. "ತನ್ನ ಬಸಿರು ನಿಲ್ಲುವುದಿಲ್ಲ, ನಿಲ್ಲುವುದಿಲ್ಲ" ಎಂದು ಅವಳಿಗೆ ಅವಳೇ ಹೇಳಿಕೊಳ್ಳುತ್ತಿರುತ್ತಾಳೆ. ಕೊನೆಗೆ ಆಕೆಯ ಬಸಿರು ನಿಲ್ಲದೆ ಹೋದಾಗ ಹೆಚ್ಚು ಹೆಚ್ಚು ನರಳುತ್ತಾಳೆ. ಇದು ಮನುಷ್ಯರ ಸಹಜ ಗುಣ. ಏನಾದರೂ ಕೆಟ್ಟದಾದಾಗ ನಾವು ಮಾಡಿದ ಪಾಪಕರ್ಮದಿಂದಲೇ ಹೀಗಾಯಿತು ಎಂದು ಒದ್ದಾಡುವುದಿಲ್ಲವೇ ಹಾಗೆ.
೪. ಕಾತ್ಯಾಯಿನಿಯ ಬಸಿರು ನಿಲ್ಲದೆ ಸೋರಿಹೋಗುವುದಕ್ಕೆ ಮತ್ತು ಅವಳನ್ನು ಯಾರೂ ಬಯ್ಯದಿದ್ದರೂ ನರಳಿ ನರಳಿ ಸಾಯುವುದಕ್ಕೆ ಆಕೆಯಲ್ಲಿದ್ದ ದಟ್ಟವಾದ ಪಾಪಪ್ರಜ್ಞೆಯೇ ಮುಖ್ಯ ಕಾರಣವೇ ?
ಉ: ವಂಶವೃಕ್ಷ
"....ವಂಶದ ಬಗ್ಗೆ ತೀವ್ರವಾದ ಗೌರವ, ಹೆಮ್ಮೆಯಿರಿಸಿ ಕೊಂಡಿದ್ದವನಿಗೆ, ಅದರಲ್ಲೂ ಸೊಸೆ ಮನೆಬಿಟ್ಟು ಹೋದಾಗಲೂ ಅಷ್ಟು ತಲೆ ಕೆಡಿಸಿಕೊಳ್ಳದ ಶ್ರೋತ್ರಿಗೆ, ಕೊನೆಯಲ್ಲಿ ಆಗುವ ಅಘಾತ ಮಾತ್ರ ಜೀರ್ಣಿಸಿಕೊಳ್ಳಲು ಕಷ್ಟವೇ ಆಗುತ್ತದೆ........"
ವಂಶ, ಕುಲ, ಜಾತಿ....ಇವುಗಳು ಹೈದರನ್ನು ಹುಚ್ಚರನ್ನಾಗಿ ಮಾಡಿವೆ. ಅದ್ಕೆ ಕನಕದಾಸರು ಹೇಳಿದ್ದು....
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಬಲ್ಲಿರಾ?.....