ಹೌದು ಇದು ಕನಸೇ ಇರಬೇಕು.
ನಿಮಗೇ ಈಗಾಗಲೇ ತಿಳಿದಿರುವ ಹಾಗೆ, ನಾನು ಈ ಕನಸನ್ನು ಕಂಡದ್ದು ಮಂಗಳವಾರ, ಸೆಪ್ಟೆಂಬರ್ ೧೯ , ೨೦೦೬. ನಿಮಗೆ ಇನ್ನೂ ನನ್ನ ಕನಸಿನ ಪೀಠಿಕೆ ತಿಳಿಯದಿದ್ದರೆ ದಮಮಾಡಿ "ಆ ಮೊನಚಗಳನ್ನು ಓದಿ ನಂತರ ಇಲ್ಲಿಗೆ ಹಿಂದಿರುಗಿ ಬನ್ನಿರಿ" ಎಂದು ಕೇಳಿಕೊಳ್ಳುವೆ. ಸರಿ ಈಗ ಕನಸಿಗೆ ಹಿಂದಿರುಗೋಣ. ಅಂದು ನನಗೆ ಸ್ವಲ್ಪ ಬರೆಯುವ ಕೆಲಸವಿದ್ದುದರಿಂದ ಮಲಗುವುದು ತಡವಾಗಿತ್ತು.
ಈ "ಎಂದೂ ಮುಗಿಯದ - ಕನ್ನಡ ಮತ್ತು ಸಂಸ್ಕೃತ ಕುರಿತಾದ ಚರ್ಚೆಯ" ಪ್ರಭಾವವೋ ಏನೋ, ನಾನು ಅಂದು ಆ ಇರುಳು, ಯೋಚಿಸಿ ಯೋಚಿಸಿ ಬರೆಯುತ್ತಿದ್ದೆ. ಸಂಸ್ಕೃತ ಪದಕ್ಕೆ ಸಮಾನವಾಗಿ ಬಳಸಬಹುದಾದ, ಓದಲು ಕೇಳಲು ಹಿತವಾಗಿರುವ ಪದ ಕನ್ನಡದಲ್ಲಿ ಇದೆಯೇ ಎಂದು ಯೋಚಿಸಿ ನಂತರ ಬರೆಯುತ್ತಿದ್ದೆ. ಒಂದು ರೀತಿಯಲ್ಲಿ ಶ್ರೀಕಾಂತ ಮಿಶ್ರಿಕೋಟಿಗಳ ಹಾಗೆ ನನ್ನದೇ ಭಾಷೆಯ ಬಗ್ಗೆ ತಿಳಿಯುವುದು ಬಹಳಷ್ಟಿದೆ ಎಂದನಿಸಿತು. ಹೌದು, "ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ" ಎಂದೆನಿಸಿತು. ಸರಿ ಬರೆದದ್ದಾಯಿತು, ಪೆನ್ನು ಪುಸ್ತಕ ಮುಚ್ಚಿ ಮಲಗಿದೆ. ಆ ದಿನ ನನಗೊಂದು ಕನಸು ಬಿದ್ದಿತ್ತು.
ಅದೇನಪ್ಪಾ ಎಂದರೆ, ಬನ್ನಿ ಅಲ್ಲಿಗೇ ಕರೆದೊಯ್ಯುತ್ತೇನೆ. ಸೈಕಲ್ ಬಂಡಿ ಹಿಂದೆ ಓಡುತ್ತಿದೆ ಎಂದು ತಿಳಿದುಕೊಳ್ಳಿ.
"ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ". ವ್ಯಾಕರಣ, ವ್ಯಾಕರಣ, ವ್ಯಾಕರಣ. ಹೌದು ವ್ಯಾಕರಣದ ಪೂರ್ತಿ ಸುತ್ತುವುದು, ಭಾಷೆಯಲ್ಲಿ ಬಳಕೆಯಾಗುವ ಪದಗಳು, ಶಬ್ದಗಳು ಮತ್ತು ಅದರ
ಅರ್ಥ ವಿವರಣೆಗಳು, ವಾಕ್ಯಗಳ ರಚನೆಗಳು ಹೀಗೆ.
ನುಡಿಯಲ್ಲಿ ಬಳಕೆಯಾಗುವ ವಾಕ್ಯಗಳು ಎಲ್ಲಿಂದ ಬಂದವು - ಎಷ್ಟೋ ಪದಗಳು ಒಟ್ಟುಗೂಡಿ.
ನುಡಿಯಲ್ಲಿ ಬಳಕೆಯಾಗುವ ಪದಗಳು ಹೇಗೆ ಬಂದವು - ಅಕ್ಷರಗಳು ಒಂದಕ್ಕೊಂದು ಕೂಡಿಕೊಂಡು.
ನುಡಿಯಲ್ಲಿನ ಅಕ್ಷರಗಳು ಹೇಗೆ ಬಂದವು - ಅಕ್ಷರಗಳು ಅಕ್ಷರಗಳೇ, ಅವುಗಳನ್ನು ಬೇರ್ಪಡಿಸಲಾಗುವುದಿಲ್ಲ.
ಒಂದು ರೀತಿ, Element, Molecule, Atom, Nucleus ತರಹ.
ಅಂದರೆ ನುಡಿಯಲ್ಲಿನ indivisible entities ಗಳೆಂದರೆ ಲಿಪಿಯ ಅಕ್ಷರಗಳು, ಹಾಗಾಗಿ ವ್ಯಾಕರಣ ಪ್ರಾರಂಭವಾಗುವುದೇ ಅಲ್ಲಿಂದ. ಹೌದು "ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ", ಆದರೆ ಈ "ಅಕ್ಷರಗಳ"ಗಳಿಗೆ ಏನೆಂದು ಕರೆಯುವುದು ಕನ್ನಡದಲ್ಲಿ. "ಅಕ್ಕರ" ಬಳಸಬಹುದೇ. ತದ್ಭವಗಳನ್ನು ಬಳಸಿದ ಮಾತ್ರಕ್ಕೆ ಸಂಸ್ಕೃತದ ನಂಟು ಹೋಗುವುದಿಲ್ಲ. ಓಹೋ, ಹಾಗಾದರೆ, ಹೊಸ ಪದ ಹುಡುಕಬೇಕೇ, ಇದ್ದರೂ ಇರಬಹುದು ನನಗೆ ತಿಳಿದಿಲ್ಲ. ಸರಿ ಬಾ, ಹೊಸ ಪದ ಮಾಡೋಣ.
ನುಡಿ, ಭಾಷೆ ನಮಗೆ ಏಕೆ ಬೇಕು. ಜ್ಞಾನ ಸಂಪಾದಿಸಲು, ಜ್ಞಾನ ಅಂದರೆ ಏನು. ಕತ್ತಲಿನಿಂದ ದೂರಮಾಡಿ ನಮ್ಮನ್ನು ಬೆಳಕಿನೆಡೆಗೆ ಕರೆದೊಯ್ಯುವ ವಸ್ತು. ಸರಿ ಈ ನುಡಿಯನ್ನು ಬೆಳಕಿಗೆ ಹೋಲಿಸಿದರೆ, ಅಕ್ಷರಗಳನ್ನು ಏನೆಂದು ಕರೆಯಬೇಕು, ಅದು indivisible entities ಆಗಿರಬೇಕಲ್ಲ.
ಸರಿ, ಬೆಳಕು, ಬೆಳಕಿನಲ್ಲಿರುವ ಅತಿ ಸಣ್ಣ ಕಣಗಳಾವುದು, ಕಣ, ಛೆ. ಕಣ ಸಂಸ್ಕೃತವಲ್ಲವೇ?
ಕಣಶಃ ಕ್ಷಣಶಶ್ಚೈವ ವಿದ್ಯಾಂ ಅರ್ಥಂಚ ಸಾಧಯೇತ್,
ಕ್ಷಣ ತ್ಯಾಗೇ ಕುತೋ ವಿದ್ಯಾ, ಕಣ ತ್ಯಾಗೇ ಕುತೋ ಧನಂ
ಹೌದು, ಕಣ ಸಂಸ್ಕೃತ, ಹಾಗಾದರೆ ಕಿಡಿ, ಕನ್ನಡವಿರಬೇಕು. ಹೌದು ನುಡಿಯು ಬೆಳಕಾದರೆ, ಅಕ್ಷರಗಳು ಬೆಳಕಿನ(ನುಡಿಯ) ಕಿಡಿಗಳು,
ಕನ್ನಡದ ಕಿಡಿಗಳು, ಕುಣಿದಾಡಿತು ಜೀವ. ಸರಿ ಅಕ್ಷರಗಳೇನೋ ಕಿಡಿಗಳಾದವು, "ಪದ"ಗಳೇನಾಗಬೇಕು. ಅವುಗಳೇ ತಾನೇ ನುಡಿಯ "ದಿಟವಾದ" ಪ್ರತಿನಿಧಿಗಳು.
ಪೇರು, ಹೆಸರು ಎಂದು ಹೇಳುವಲ್ಲಿರುವ ವ್ಯತ್ಯಾಸ ಭಾಷೆಯನ್ನು ತಿಳಿಸುತ್ತದೆ. ಸರಿ, ಪದಗಳನ್ನು ಏನೆಂದು ಕರೆಯುವುದು. ಪದಗಳು ಹೇಗೆ ಬರುತ್ತವೆ. "ಕಿಡಿ"ಗಳು ಒಟ್ಟಿಗೇ ಸೇರಿದಾಗ ಪದಗಳಾಗುತ್ತವೆ. ಹೌದು, "ಕಿಡಿ"ಗಳು ಒಟ್ಟಿಗೆ ಸೇರಿದಾಗ, "ಕಿಡಿ"ಗಳು ಒಟ್ಟಿಗೆ ಸೇರಿದಾಗ, "ಕಿಡಿ"ಗಳು ಒಟ್ಟಿಗೆ ಸೇರಿದಾಗ "ಕುಡಿ"ಗಳಾಗುತ್ತವೆ. ಹೌದು ಕುಡಿಗಳಾಗುತ್ತವೆ. ಪದಗಳು ಕನ್ನಡದ ಕುಡಿಗಳು. ಹೊಟ್ಟೆಯಲ್ಲಿರುವ ಮಗುವು ಕರುಳಿನ ಕುಡಿಯಾದರೆ, ಇದು , ನಮ್ಮ ನುಡಿಯ, ಕನ್ನಡ ನುಡಿಯ ಕುಡಿಗಳು.
"ಕಿಡಿ, ಕುಡಿಗಳಿಂದಾದ ನಮ್ಮ ಕನ್ನಡ ನುಡಿ".....ತುಂಬಾ ತುಂಬಾ ಸಂತೋಷವಾಯಿತು.
ಗಕ್ಕನೆ ಎಚ್ಚರವಾಯಿತು. ಅದನ್ನು ಬರೆದಿಟ್ಟೆ. ಆದರೆ ಯಾರಿಗೂ ಹೇಳಲಿಲ್ಲ. ಕೇಲವೇ ಕೆಲವು ಆಪ್ತ ಗೆಳೆಯರಿಗೆ ತಿಳಿಸಿದೆ. ಈಗ ಗಟ್ಟಿಮನಸ್ಸು ಬಂದಿದ್ದರಿಂದ ಎಲ್ಲರಿಗೂ ಹೇಳುವಂತಾಯಿತು. ನನ್ನ ಈ ಕನಸಿನ ಬಗ್ಗೆ ನೀವೇನಾದರು ಹೇಳುವುದಿದ್ದರೆ ದಯವಿಟ್ಟು ಹೇಳಿ.
ನಾನು, ಸರಿ, ಇಂದಿನಿಂದ ಎಲ್ಲರೂ, "ಅಕ್ಷರಗಳನ್ನು ನುಡಿಯ ಕಿಡಿಗಳೆಂದೂ, ಪದಗಳನ್ನು ಕನ್ನಡದ ಕುಡಿಗಳೆಂದೂ ನೀವು ಬಳಸಿರಿ" ಎಂದು ಹೇಳುತ್ತಿಲ್ಲ. ಬದಲಾಗಿ, ನನ್ನ ಕನಸು ಕೂಡ ತಪ್ಪುಗಳ ಸರಮಾಲೆ ಸೇರಬೇಕೇ ಬೇಡವೇ ಎಂದು ಕೇಳುತ್ತಿದ್ದೇನೆ, ಅಷ್ಟೇ.
ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಎಲ್ಲರೊಡನೆ ಹಂಚಿಕೊಳ್ಳಿ.
ಮಾರನೆಯ ದಿನ ಬೆಳಗ್ಗೆ, "ಕಿಡಿ ಕಿಡಿ, ಕುಡಿ ಕುಡಿ" ಎಂದು ಜಪಮಾಡುತ್ತಿದ್ದ, ನನಗೆ, ಒಬ್ಬ ಗೆಳೆಯ "ಕುಡಿ"ಯಾಗಿ ಬಂದ. ಅವನ ಹೆಸರು, "ಕಿಡಿಕಾರು". "ಕಿಡಿಕಾರು" - ಹೀಗೆಂದರೇನು, ಬಾಯಿಗೆ ಬಂದಹಾಗೆ ಬೇರೆಯವರನ್ನು ಬೈಯ್ಯವುದು. ಅಂದರೆ "ಕಿಡಿ" ಎಂಬ "ಕುಡಿ"ಗೆ ಏನೋ ಒಳಾರ್ಥವಿರಬೇಕಲ್ಲವೇ ?

- Sunil Jayaprakash ರವರ ಬ್ಲಾಗ್
- Login or register to post comments
- 788 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ನನ್ನ ಕನಸನ್ನು ನಿಮ್ಮೆಲ್ಲರ ಮುಂದಿಡುತ್ತಿದ್ದೇನೆ
ನಾನು ಈಗಾಗಲೇ ಹೇಳಿರುವ ಹಾಗೆ, ನನ್ನ ಕನಸನ್ನು ಈ ಮೇಲಿನ ಎಳೆಯಲ್ಲಿ ನಿಮ್ಮೆಲ್ಲರ ಮುಂದಿಟ್ಟಿದ್ದೇನೆ. ಇದನ್ನು ತಪ್ಪುಗಳ ಸರಮಾಲೆಗೆ ಸೇರಿಸುವುದು ಬಿಡುವುದು ನಿಮಗೆ ಬಿಟ್ಟದ್ದು.
ಸವಿಯೊದಗು.
ಕನ್ನಡ ಕಾಳಜಿ
ನಿಮ್ಮ ಕನ್ನಡ ಕಾಳಜಿಗೆ ಸವಿಯೊದಗು. ಹೌದು, ಈ ತಾಂತರಿಕ ಅಬಿಯಂತರರಿಗೆ ಏಕೆ ಎಲ್ಲಿಲ್ಲದ ಕನ್ನಡ ಕಾಳಜಿ? ನಾನು ಅದೇ ಕೆಲಸದಲ್ಲಿದ್ದೇನೆ, ಈಟೊಂದು ಕಾಳಜಿ ಬರವಣಿಗೆಗಾರರಲ್ಲೂ ಇಲ್ಲ, ಪತ್ತಿಗೆಯವರಿಗಂತೂ ಮೊದಲೇ ಇಲ್ಲ.
ಸ್ವಾಮೀ / ರಾಯ್ರೇ / ಗೌಡ್ರೇ / ಅಪ್ಪಗೋಳೇ
ಸ್ವಾಮೀ / ರಾಯ್ರೇ / ಗೌಡ್ರೇ / ಅಪ್ಪಗೋಳೇ
ನಾವೆಲ್ಲ ಮೊದಲು ಕನ್ನಡಿಗರ್ರೀ . ಆಮೇಲೆ ಅಭಿಯಂತರರರರು , ಇತ್ಯಾದಿ !.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಸವಿಯ ಮೇಲೆ ಸವಿಯೊದಗು
ಬಿಡಿ, ಆ ಮಾತು ಸಾಕು. ಸುನಿಲರೇ, ನನ್ನ ಅನಿಸಿಕೆಯನ್ನು ಹೇಳುತ್ತೇನೆ. ನುಡಿ ಎಂದರೆ ಅದೊಂದು ಮನುಜ ಮನುಜರಲ್ಲಿ ಇಚಾರಗಳ ವಿನಿಮಯಕ್ಕಾಗಿ ಕಟ್ಟಿಕೊಂಡ ಒಂದು ಬಲೆಯಂತೆ. ತುಸು 'ಬೌತ-ತಿಳಿಗೊಳ' (ಶಾಸ್ತ್ರ - ತಿಳಿಗೊಳ ಅನ್ನಬಹುದೇ?, ಬೌತಕ್ಕೆ ಸದ್ದೆ ಏನೂ ಸಿಗುತ್ತಿಲ್ಲ)ವನ್ನು ತಿರುವಿದರೆ, ಮಾದ್ದೆಮ ಎಂಬುವುದು ಅತಿ ಸಣ್ಣ ಸಣ್ಣ ಚೂರುಗಳು ಒಂದನ್ನೊಂದು ಕೂಡಿ, ಒಂದು ಮೂರೂ ಆಯಾಮಗಳನ್ನು(x,y,z) ಹೊಂದಿರುವ ಬಲೆ.
ನನ್ನ ಊಹೆಯ ಬಲೆಯನ್ನು ತುಸು ಹರಡುವೆ, 'ಅಕ್ಕರ'ಕ್ಕೆ ತಕ್ಕ ಕನ್ನಡ ಮೀನು ಸಿಗುವುದೇ ನೋಡೋಣ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನ ತೆಗೆದುಕೊಳ್ಳೋಣ. 'ಮಾತು ಆಡಿದರೆ ಹೋಯಿತು,ಮುತ್ತು ಒಡೆದರೆ ಹೋಯಿತು', ಮುತ್ತಿನ ಹಾರದಲ್ಲಿ ಒಂದೊಂದು ಮುತ್ತನ್ನು ದಾರದಿಂದ ಜೋಡಿಸಿರುತ್ತಾರೆ. ಹಾಗೆಯೇ ಪದವೊಂದರಲ್ಲಿ ಅಕ್ಕರಗಳನ್ನು ಜೋಡಿಸಿರುತ್ತಾರೆ. 'ಅಕ್ಷರಮಾಲೆ' ಎಂಬುದನ್ನು 'ನುಡಿಮುತ್ತಿನ ಸರ' ಎನ್ನಬಹುದು. ಹಾಗಾಗಿ 'ಅಕ್ಕರ' ಎಂಬುದನ್ನು 'ನುಡಿಮುತ್ತು' ಅನ್ನಬಹುದಲ್ಲವೇ? ನು-ಡಿ-ಮು-ತ್ತು ಎಂಬ ನಾಕು ನುಡಿಮುತ್ತುಗಳನ್ನು ಸೇರಿಸಿ 'ಅಕ್ಕರ'ವನ್ನು ನುಡಿಮುತ್ತು ಎಂದಿದ್ದೇನೆ, ತಪ್ಪು ಅನ್ನಿಸಿದರೆ ಇದನ್ನೂ 'ತಪ್ಪುಗಳ ಪಟ್ಟಿ'ಗೆ ಸೇರಿಸಿಕೊಳ್ಳಿ.
re: ಸ್ವಾಮೀ / ರಾಯ್ರೇ / ಗೌಡ್ರೇ ......
ಸಂಗನಗೌಡ್ರs
ಶರಣ್ರೀ ,
ಸುಮ್ಮನs ಒಂದಿಷ್ಟು ಹುಡುಗಾಟ ಮಾಡ್ಬೇಕನಿಸ್ತು . ಅಷ್ಟs , ಮತ್ತೇನಿಲ್ಲ . ತಪ್ಪು ತಿಳೀಬ್ಯಾಡ್ರಿ.
ಅಂಧಂಗ ನಾನಂತೂ ಇಂಜಿನೀಯರ್ರು ಅಲ್ಲ ; ಎಲ್ಲಾರಂಗ ಬಿಎಸ್ಚಿ ಮಾಡಿ ಬ್ಯಾಂಕ್ ಸೇರಿ ಕಾರಖೂನಗಿರಿ ಮಾಡಿ ಯಾವ್ದೋ ಹವಾದಾಗ ಕಂಪ್ಯೂಟರ್ ಆಫೀಸರ್ ಅಂತ ಆಗಿ , ಬೆಂಗ್ಳೂರು , ಹುಬ್ಬಳ್ಳಿ ಮುಗ್ಸಿ , ಮಾಡಬಾರದ್ದು ಮಾಡಿದರ ಆಗಬಾರದ್ದು ಆಗ್ತದ ಅಂತಾರಲ್ಲ , ಹಂಗ ಸುಮ್ಮ ಕೂಡಲಾರ್ದ ಯಾವ್ದೋ ಕೋರ್ಸ್ ಮಾಡಿದ್ದಕ್ಕ ಬ್ಯಾಂಕಿನವರು ಅಲ್ಲಿ ಬ್ಯಾಡ ಇಲ್ಲಿ ಕೂಡ್ರಿ ಅಂತ ಮೌಂಭೈಯಾಗ ಕೂಡ್ಸ್ಯಾರ. ಇಲ್ಲಿ ಖಾಲಿ ಸಿಕ್ಕ ಟಾಇಯಿಮಿನ್ಯಾಗ ಹಿಂಗ ಕನ್ನಡ 'ಶೇವೆ' ಮಾಡಲಿಕ್ಕೆ ಹತ್ತೇವೆನ್ರಪಾ!
ಮತ್ತೊಮ್ಮೆ ಶರಣು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"