ದೇವರಿಲ್ಲ ಎಂದ ಬುದ್ಧನೂ ದೇವರ ಅವತಾರವಾದ!
ಅದೊಂದು ಊರು. ಅಲ್ಲೊಂದು ಪಾಳುಬಿದ್ದ ಮಠವಿರುತ್ತದೆ. ಅದರ ಸ್ವಾಮೀಜಿ ಐದು ತಲೆಮಾರುಗಳ ಹಿಂದೆಯೇ 'ತಾವು ಮಾಡುತ್ತಿರುವುದರಲ್ಲಿ ಯಾವ ಅರ್ಥವನ್ನೂ ಕಾಣದೆ' ಪೀಠಕ್ಕೆ ಉತ್ತರಾಧಿಕಾರಿಯನ್ನೂ ನೇಮಿಸದೆ ಹಿಮಾಲಯಕ್ಕೆ ಹೊರಟು ಹೋಗುತ್ತಾರೆ. ಊರ ಗೌಡರು ಹಾಗೂ ಪುರೋಹಿತರು ಸೇರಿ ಬೇರೊಬ್ಬ ಮಠಾಧಿಪತಿಯನ್ನು ತರುವ ಪ್ರಯತ್ನ ಮಾಡುತ್ತಾರೆ. ಆದರೆ ಅಂದು ರಾತ್ರಿಯೇ ಜಲಪ್ರಳಯ ಸದೃಶವಾದ ಭೀಕರ ಮಳೆ ಸುರಿದು ಮಠ ಮುಳುಗಿ ಹೋಗುತ್ತದೆ. ಹಾಗಾಗಿ ಮಠದ ಉತ್ತರಾಧಿಕಾರಿಯ ಬಗ್ಗೆ ಆಲೋಚನೆ ಮಾಡುವುದನ್ನು ಅವರು ಕೈಬಿಡುತ್ತಾರೆ. ಆದರೆ ಆ ಗೌಡನ ಮುಂದಿನ ಐದನೇ ತಲೆಯ ಸಮಯದಲ್ಲಿ ಮಠ ಉದ್ಧಾರವಾಗಿ ಊರು ಕ್ಷೇತ್ರವಾಗುತ್ತದೆ, ಹಿಮಾಲಯದಿಂದ ಬಂದ ಸಂನ್ಯಾಸಿಯೊಬ್ಬ ಮಠವನ್ನು ಉದ್ಧಾರ ಮಾಡುತ್ತಾನೆ ಎಂದು ನಂಬಿಕೊಳ್ಳುತ್ತಾರೆ.
ಆತ ಹಿಂದನ ಗೌಡನ ಐದನೆಯ ತಲೆಮಾರಿನವ. ಪುರೋಹಿತನ ಸಂತತಿಯವನೂ ಇರುತ್ತಾನೆ.ಒಂದು ಒಬ್ಬ ಯುವಕ ಮಠವಿದ್ದ ಜಾಗಕ್ಕೆ ಬರುತ್ತಾನೆ. ಕಾವಿ ಬಟ್ಟೆಯನ್ನು ಧರಿಸಿರುತ್ತಾನೆ, ಬೆಳಗಾಗೆದ್ದು ಕೆಲವು ಆಸನಗಳನ್ನು ಅಭ್ಯಾಸ ಮಾಡಿ, ಪ್ರಾಣಾಯಾಮ ಮಾಡಿ ಭಿಕ್ಷೆಗೆ ಊರಿಗೆ ಹೋಗಿ ಬರುತ್ತಿರುತ್ತಾನೆ. ಊರ ಮಂದಿ ಈತನೇ ತಮ್ಮ ಊರನ್ನು ಉದ್ಧಾರ ಮಾಡಲು ಬಂದಿರುವ ಸಂನ್ಯಾಸಿ ಎಂದು ಭಾವಿಸುತ್ತಾರೆ. ಮಠವನ್ನು ಜೀರ್ಣಗೊಳಿಸಲು ಹಿಮಾಲಯದಿಂದ ಬಂದವ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಈತ ಮಠದ ಸ್ವಾಮಿಯಾಗಲು ನಿರಾಕರಿಸುತ್ತಾನೆ, ಮಠ ಕಟ್ಟುವುದರಲ್ಲಿ ನಿರಾಸಕ್ತಿ ತೋರುತ್ತಾನೆ. ಈತ ಸ್ವಾಮಿಯ ಪಟ್ಟವನ್ನು ದೂರ ತಳ್ಳಿದರೂ ಅದು ಇವನನ್ನು ಬಿಡುವುದಿಲ್ಲ. ಈತ ಒಂದು ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮುಖಾಂತರ ಹಣ ಸಂಗ್ರಹಿಸಿ ಊರಿಗೆ ಶಾಲೆ, ಹೆಣ್ಣುಮಕ್ಕಳ ಶುಶ್ರೂಶೆಗೆ ಆಸ್ಪತ್ರೆಯನ್ನು ಕಟ್ಟಿಸುತ್ತಾರೆ. ಜನ ಸ್ವಾಮಿಗಳ 'ಮಹಿಮೆ'ಯನ್ನು ನೋಡಿ ಉದಾರವಾಗಿ ಹಣ ಕೊಡುತ್ತಿರುತ್ತಾರೆ. ಇಷ್ಟೆಲ್ಲ ಆದರೂ ಈತ ಮಠವನ್ನು ಕಟ್ಟುವ ಬಗ್ಗೆ ಆಸಕ್ತಿ ತಳೆಯುವುದಿಲ್ಲ. ಮಠದ ತೋಟದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ತನ್ನ ಆಹಾರ ತಾನೇ ಬೇಯಿಸಿಕೊಳ್ಳುತ್ತಾ ಬದುಕುತ್ತಿರುತ್ತಾನೆ.
ಹೀಗಿರುವಾಗ ಒಂದು ದಿನ ಊರ ಗೌಡನನ್ನು ಕರೆದು ಆತ ತಾನು ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವಾಕೆಯನ್ನು ಮದುವೆಯಾಗುತ್ತಿರುವುದಾಗಿ ತಿಳಿಸುತ್ತಾನೆ. ಗೌಡನಿಗೆ ಕಾಲಕೆಳಗಿನ ಆಧಾರವೇ ಕುಸಿದಂತಹ ಅನುಭವವಾಗುತ್ತದೆ. ಆತ ಅದನ್ನು ಶಾಸ್ತ್ರಿಗೆ ತಿಳಿಯಪಡಿಸುತ್ತಾನೆ. ಶಾಸ್ತ್ರಿ ಹಿಂದಿನ ದಿನ ನಡೆದ ಗ್ರಹಣವನ್ನು ಸ್ವಾಮಿಗಳು ಬರಿಗಣ್ಣಿನಿಂದ ನೋಡಿರುವುದರಿಂದ ಅವರ ಮತಿಭ್ರಮಣೆಯಾಗಿರಬೇಕು. ಹಾಗಾಗಿ ಅವರು ಹೀಗೆ ಮಾತನಾಡುತ್ತಿದ್ದಾರೆ ಎನ್ನುತ್ತಾನೆ.
ಗೌಡ, ಶಾಸ್ತ್ರಿ, ಊರಿನ ಎಂ ಎಲ್ ಎ, ಸಂಸ್ಥೆಯ ಕಾಲೇಜಿನ ಪ್ರಿನ್ಸಿಪಾಲರಿಗೂ ಸ್ವಾಮಿಗಳ ನಿಲುವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಈ ಸಂಗತಿ ಗಂಭೀರವಾಗಿ ಒಂದು ದಿನ ಊರ ಸಮಸ್ತ ಜನರೆದುರಲ್ಲಿ ಸ್ವಾಮಿ ಆಕೆಯನ್ನು ಕರೆದು 'ನಮಗೆ ಮದುವೆಯಾಗಿದೆ, ನಿಷೇಕವೂ ಆಗಿದೆ' ಎಂದು ಹೇಳು ಎನ್ನುತ್ತಾರೆ. ಆಕೆಗೆ ಧೈರ್ಯ ಬರುವುದಿಲ್ಲ. ಆಗ ಶಾಸ್ತ್ರಿ ಹೇಳುವ ಮಾತು, 'ಮಹಾ ಜನಗಳೇ, ಅವರ ಮಾತು ನಂಬಬೇಡಿ. ಮೊನ್ನೆ ನಡೆದ ಗ್ರಹಣವನ್ನು ಬರಿಗಣ್ಣಿನಿಂದ ನೋಡಿದ್ದರಿಂದ ಸ್ವಾಮಿಗಳಿಗೆ ಬುದ್ಧಿ ಭ್ರಮಣೆಯಾಗಿದೆ. ಹಾಗಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಮೋಹ ಅವರನ್ನು ಕವಿದಿದೆ. ಇದನ್ನು ಬಿಡಿಸಬೇಕಾದರೆ ನಾವು ಹೆಚ್ಚು ಪೂಜೆ ಮಾಡಬೇಕು, ಅಭಿಷೇಕ, ಹವನವನ್ನು ಮಾಡಿಸಬೇಕು.' ಜನರೆಲ್ಲರೂ ಒಕ್ಕೊರಲಿನಿಂದ ಅದನ್ನು ಒಪ್ಪುತ್ತಾರೆ.
ಶಾಸ್ತ್ರಿಯ ಪಾತ್ರದ ಬಗೆಗಿನ ವಿವರಣೆಗಾಗಿ ಇಷ್ಟೆಲ್ಲಾ ಬರೆದೆ. ಶಾಸ್ತ್ರಿಗೆ ಈ ಸಂನ್ಯಾಸಿ ಮಠವನ್ನು ಕಟ್ಟುವವನಲ್ಲ ಎಂಬುದು ತಿಳಿದಿದೆ. ಆದರೂ ಆತ ಜನರಿಗೆ ಇವರದು 'ಕರ್ಮಯೋಗ'ದ ವಿಧಾನ ಎಂದು ಶಾಸ್ತ್ರವನ್ನು ಉದಾಹರಸಿ ನಂಬಿಸುತ್ತಾನೆ. ಧರ್ಮ sophesticated ಆಗುತ್ತಾ ಇಂತಹ ಜನರು ಹೆಚ್ಚುತ್ತಾರೆ. ಅವರಿಗೆ ಧರ್ಮದಲ್ಲಿ ವಿಧಿಸಿರುವ ಕಟ್ಟುಪಾಡುಗಳು ಕೇವಲ ಆಚರಣೆಗೆ ಮಾತ್ರ, ಅವು ಕೇವಲ symbolic ಅವುಗಳಿಂದ ನೇರವಾಗಿ ಯಾವ ಆಧ್ಯಾತ್ಮ ಸಾಧನೆಯೂ ಆಗದು ಎಂಬುದು ಗೊತ್ತು. ತಮಗೆ ಬೇಕಾದಲೆಲ್ಲಾ ಇವರು ಶಾಸ್ತ್ರವನ್ನು ಅನುಕೂಲ ಸಿಂಧುವಾಗಿ ಬಳಸಿಕೊಳ್ಳುತ್ತಾರೆ. ಇಲ್ಲವೆ ಮಠವನ್ನು ಉಳಿಸುವ, ಜನರ ಶ್ರದ್ಧೆಯನ್ನು ಪೊರೆಯುವ ಹೆಸರಲ್ಲಿ ಧರ್ಮವನ್ನು ಬಳಸಿಕೊಳ್ಳುತ್ತಾರೆ.
ಓಶೋ ಹೇಳುತ್ತಾರೆ. ದೇವರ ಅಸ್ತಿತ್ವವನ್ನು ನಿರಾಕರಿಸಿದವನು ಗೌತಮ ಬುದ್ಧ. ವೇದಕಾಲೀನ ಪರಂಪರೆಯಲ್ಲಿದ್ದ ಯಜ್ಞ-ಯಾಗಾದಿ ಆಚರಣೆಗಳನ್ನೇ ಆಧ್ಯಾತ್ಮದ ಸಾಧನೆಗಳು ಎಂದು ಜನರು ನಂಬಿಕೊಂಡಿದ್ದ ಕಾಲದಲ್ಲಿ ಧರ್ಮವನ್ನು, ಆಧ್ಯಾತ್ಮವನ್ನು ಆಚರಣೆಗಳ ಹಂಗಿನಿಂದ ಹೊರತರಲು ಪ್ರಯತ್ನಿಸಿದ್ದು ಗೌತಮ ಬುದ್ಧ. ಒಂದು ಅರ್ಥದಲ್ಲಿ ಆತ ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದ ನಾಸ್ತಿಕ. ಆದರೆ sophesticated ಆಗಿದ್ದ ಸಂಪ್ರದಾಯಸ್ಥರು ಮಾಡಿದ್ದೇನು? ಅಪ್ಪಟ ನಾಸ್ತಿಕನಾದ ಬುದ್ಧನನ್ನು ವಿಷ್ಣುವಿನ ಅವತಾರವೆಂದರು. ಅದಕ್ಕೆ ಒಂದು ಸ್ವಾರಸ್ವಕರವಾದ, ಯಾರೂ ಒಪ್ಪಿ ತಲೆದೂಗುವಂತಹ ಕತೆಯನ್ನೂ ಹೆಣೆದರು.
ಸ್ವರ್ಗ ಹಾಗೂ ನರಕಗಳನ್ನು ಸೃಷ್ಟಿ ಮಾಡಿ ಅವಕ್ಕೆ ಅಧಿಪತಿಗಳನ್ನು ನೇಮಿಸಿ ವಿಷ್ಣು ಲಕ್ಷ್ಮಿಯೊಂದಿಗೆ ಹಾಯಾಗಿದ್ದ. ಕಾಲಕಾಲಕ್ಕೆ ವಿಷ್ಣು ಅವತಾರ ಎತ್ತಿ ಸಜ್ಜನರ ರಕ್ಷಣೆ ಮಾಡುತ್ತಿದ್ದುದರಿಂದ ನರಕಕ್ಕೆ ಬರುವವರ ಸಂಖ್ಯೆ ಕ್ಷೀಣಿಸಿ ಕೊನೆಗೆ ಯಾರೂ ನರಕಕ್ಕೆ ಬರುತ್ತಲೇ ಇರಲಿಲ್ಲ. ಆಗ ನರಕದ ಅಧಿಪತಿ ವಿಷ್ಣುವಿನ ಬಳಿಗೆ ಬಂದು 'ಇನ್ನು ತನ್ನ ಉಪಯೋಗವಾದರೂ ಏನು. ತನಗೇನೂ ಕೆಲಸವಿಲ್ಲ ಎಂದ ಮೇಲೆ ನರಕವನ್ನು ಉಳಿಸಿಕೊಳ್ಳುವುದರಲ್ಲಿ ಏನರ್ಥವಿದೆ?' ಎಂದು ಪ್ರಶ್ನಿಸಿದ. ಅದಕ್ಕೆ ವಿಷ್ಣು, 'ನೀನೇನೂ ಯೋಚಿಸಬೇಡ. ನಾನೀಗಲೇ ಒಂದು ಅವತಾರವೆತ್ತಿ ಹೋಗಿ ಜನರಲ್ಲಿ ದೇವರ ಬಗ್ಗೆ, ವೇದಗಳ ಬಗ್ಗೆ ಅಪನಂಬಿಕೆಯನ್ನು, ಆಚರಣೆಗಳ ಬಗ್ಗೆ ಅಶ್ರದ್ಧೆಯನ್ನು ಮೂಡಿಸುವೆ. ಆಗ ಅವರು ನರಕಕ್ಕೆ ಬರುತ್ತಾರೆ.' ಎಂದು ಹೇಳಿ ಬುದ್ಧನ ಅವತಾರ ಎತ್ತಿದನಂತೆ!
ಹೀಗೆ ಈ ಜನರು ಬುದ್ಧನ ಎಲ್ಲಾ ಪ್ರಯತ್ನ, ಬೋಧನೆಗಳ ಮೇಲೆ ನಯವಾದ ಚಪ್ಪಡಿ ಕಲ್ಲನ್ನೆಳೆದರು. ಇಂಥವರಿಗಿಂತ ತಮ್ಮ ನಂಬಿಗೆಳಿಗೆ ಸವಾಲಾಗಿದ್ದ ಕ್ರಿಸ್ತನನ್ನು ನೇರವಾಗಿ ಶಿಲುಬೆಗೇರಿಸಿ ಆತನನ್ನು ಕೊಂದು ಆತನ ತತ್ವವನ್ನು ಅಮರವಾಗಿಸಿದ ಆ 'ಅಸಂಸ್ಕಾರ'ವಂತ ಜನರೇ ಮೇಲು ಎನ್ನುತ್ತಾರೆ ಓಶೋ!
ನನ್ನ ಬ್ಲಾಗ್: http://uniquesupri.wordpress.com/

- uniquesupri ರವರ ಬ್ಲಾಗ್
- Login or register to post comments
- 279 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: