ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಹಾಲು-ಹುಡುಗ-ಹಸು ಇತ್ಯಾದಿ..

"ಒಂದು ಲೋಟ ಹಾಲು,೨ ಖರ್ಜೂರ,ದಿನಾ ಕೊಡಿಯಮ್ಮ, ಮಗನಿಗೆ ಬೇರೆ ಟಾನಿಕ್ ಬೇಕಾಗಿಯೇ ಇಲ್ಲ" ಎಂದು ಡಾಕ್ಟ್ರು ಹೇಳುವಾಗ,ತಾಯಿ ಮತ್ತು ಮಗನ ಮುಖ ಜಿರಳೆ ತಿಂದ ಹಾಗಾಗಿತ್ತು."ಹಾಲು ನೋಡಿದರೆ ನನ್ನ ಮಗನಿಗೆ ವಾಂತಿ ಬರುತ್ತದೆ, ಎಷ್ಟು ಬೆಲೆಯಾದರೂ ಪರವಾಗಿಲ್ಲ ಒಂದು ಒಳ್ಳೆ ಟಾನಿಕ್ ಬರೆದುಕೊಡಿ ಡಾಕ್ಟ್ರೇ" ಎಂದು ಟಾನಿಕ್ ಬರೆಸಿಕೊಂಡು ಹೋದಳಾಕೆ. ಯಾಕೆ ಈಗಿನ ಮಕ್ಕಳು ಹಾಲನ್ನು ಕಂಡಾಗ ಮುಖ ಹುಳ್ಳಗೆ ಮಾಡುತ್ತಾರೆ.
ಹಾಲು ಒಂದು ಪರಿಪೂರ್ಣ ಆಹಾರ.ದೇಹದ ಸವೆದು ಹೋದ ಅಥವಾ ಹಾಳಾದ ಜೀವಕಣಗಳನ್ನು ಸರಿಪಡಿಸುವಲ್ಲಿ ಹಾಲಲ್ಲಿರುವ ಪ್ರೊಟೀನ್ ಇತರ ಪ್ರಾಣಿಜನ್ಯ ಪ್ರೊಟೀನ್ ಗಳಿಗಿಂತ ಶ್ರೇಷ್ಟ. ಹಾಲಲ್ಲಿರುವ ಕೊಬ್ಬು ಸುಲಭದಲ್ಲಿ ಜೀರ್ಣಿಸಲ್ಪಡುತ್ತದೆ. ಸ್ನಾಯು ಹಾಗು ಮೂಳೆಯ ಬೆಳವಣಿಗೆಗೆ ಬೇಕಾದ ಫಾಸ್ಫೇಟ್ ಗಳು ಹಾಲಲ್ಲಿ ಬಹಳವಿದೆ.ಆರೋಗ್ಯವಂತನು ಹಾಲು ಹಾಗು ೨ ಖರ್ಜೂರ ಹಣ್ಣು ಸೇವಿಸಿದಲ್ಲಿ ದೇಹಕ್ಕೆ ದಿನದ ಆವಶ್ಯಕತೆಗನುಸಾರ ಕಬ್ಬಿಣದಂಶವೂ ಸೇರಿಕೊಳ್ಳುವುದು.
ಯಾಕೆ ಇದನ್ನು ತಂದೆ ತಾಯಿ ಮಕ್ಕಳಿಗೆ ವಿವರಿಸಿ ಹೇಳಬಾರದು. ಎಂದೋ ಒಮ್ಮೆ ಮಗು ವಾಂತಿ ಮಾಡಿದನ್ನೇ,ಆಗಾಗ ಹೇಳುತ್ತಿದ್ದರೆ ಮಕ್ಕಳ ತಲೆಯಲ್ಲಿ ತನಗೆ ಹಾಲು ಕುಡಿದರೆ ವಾಂತಿ ಬರುವುದು ಎಂಬ ಯೋಚನೆ ಗಟ್ಟಿ ರಿಜಿಸ್ಟರ್ ಆಗುವುದು. ಮತ್ತೆ ಆ ಮಕ್ಕಳು ಹಾಲು ಕುಡಿಯಲು ಕೇಳುವುದೇ ಇಲ್ಲ.
ಆದರೆ ಕೆಲ ಸಂಶಯಗಳಿವೆ-
ಪ್ಲಾಸ್ಟಿಕ್ ಕವರ್ ನಲ್ಲಿ ಕೊಡುವ ನಂದಿನಿ ಮತ್ತು ಇತರ್‍ಏ ಹಾಲುಗಳಿಗೆ ಪ್ಲಾಸ್ಟಿಕ್ ನ ತೊಂದರೆಗಳಿಲ್ಲವಾ?
ಹಾಲು ಹೆಚ್ಚಾಗಲು ದನಕ್ಕೆ ಹಾರ್ಮೋನ್ ಇಂಜಕ್ಷನ್ ಕೊಡುವರಲ್ಲ? ಅದರ ಪರಿಣಾಮ ಮಕ್ಕಳಿಗೆ ಆಗುವುದಿಲ್ಲವೇ?
ಪೇಟೆಗಳಲ್ಲಿ ಹುಲ್ಲಿಗಿಂತ ಜಾಸ್ತಿ ಪ್ಲಾಸ್ಟಿಕ್ ತಿನ್ನುವ ಹಸುಗಳ ಹಾಲು ಕುಡಿಯಲು ಯೋಗ್ಯವಲ್ಲ ತಾನೆ?
ಏನೇ ಇರಲಿ. ತಾಯ ಹಾಲಿನ ನಂತರ ಮಗುವಿನ ಬೆಳವಣಿಗೆಗೆ ಕಾರಣವಾದ ಆ ಗೋಮಾತೆಗೆ ನನ್ನ ಪ್ರಣಾಮಗಳು.
ಗೋಮಾಂಸಕ್ಕಾಗಿ ಅದನ್ನು ಕೊಲ್ಲುವವರಲ್ಲಿ ನನ್ನ ಒಂದು ವಿನಂತಿ- ಆದಷ್ಟೂ ಅದನ್ನು ನರಳಾಡಿಸದೇ ಕೊಲ್ಲಿ ಪ್ಲೀಸ್

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಾಲು-ಹುಡುಗ-ಹಸು ಇತ್ಯಾದಿ..

ASHOKKUMAR's picture

ಹಾಲು ಹಾಲಾಹಲ

ಲಾಭದಾಸೆಗಾಗಿ ಹಾಲು ಮಾರುವ ಹೈನುಗಾರಿಕೆಯಿಂದ ನಡೆಯುವ ಡೈರಿ ಉದ್ಯಮದಿಂದ ಉತ್ತಮ ಗುಣಮಟ್ಟದ ಹಾಲನ್ನು ನಿರೀಕ್ಷಿಸಿದರೆ ಅದು ಮೂರ್ಖತನವಾದೀತು. ಹಾಲು ಕರೆಯುವಾಗ ಮಲಿನತೆ, ಸಾಗಾಟ ಮತ್ತು ಸಂಗ್ರಹಣೆಯ ವೇಳೆ ಹಾಲಿನ ಕೆಡುವಿಕೆ,ಕಲಬೆರಕೆ ಮತ್ತು ಅಂತಿಮ ಹಂತದ ವಿತರಣೆ, ಉತ್ಪಾದನೆಯಿಂದ ಬಳಕೆಯ ನಡುವಣ ಸಮಯದ ಅಂತರ ಇವುಗಳ ಕಾರಣ ಹಾಲು ಹಾಲಾಹಲವಾದರೆ ಆಶ್ಚರ್ಯವೇನು? ಇದಲ್ಲದೆ ಪಶು ಆಹಾರದಲ್ಲಿ ಕ್ರಿಮಿನಾಶಕಗಳ ಇರುವಿಕೆ, ಶುದ್ಧ ನೀರಿನ ಅಲಭ್ಯತೆ ಈ ಕಾರಣಗಳಿಂದ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತದೆ. ಹಾಲಿನ ಉತ್ಪನ್ನಗಳ ಬಳಕೆಗೆ ನಾವು ಒಗ್ಗಿ ಹೋಗಿದ್ದೇವೆ. ಆದರೂ ಹಾಲಿನ ಮಿತ ಬಳಕೆಯೇ ಉತ್ತಮ.
ಲಾಲೂ ಪ್ರಸಾದ್ ಯಾದವರಂತೆ ಸ್ವತಃ ದನ ಸಾಕಲು ಸಾಧ್ಯವಾದರೆ ಎಷ್ಟು ಚೆನ್ನ!

ಉ: ಹಾಲು-ಹುಡುಗ-ಹಸು ಇತ್ಯಾದಿ..

skakkilaya's picture

ತಾಯಿಯ ಹಾಲು ಮಗುವಿಗೆ ಪರಿಪೂರ್ಣವಾದ ಆಹಾರ. ಪೂರ್ಣ ವಿರಾಮ. ಆಯಾ ಸಸ್ತನಿಗಳು ಸ್ರವಿಸುವ ಹಾಲು ಅವುಗಳ ಮರಿಗಳಿಗಷ್ಟೇ ಆಹಾರ. ದನದ ಹಾಲು ಮಾನವ ಶಿಶುಗಳ ಆಹಾರವಲ್ಲದಿರುವುದರಿಂದಲೇ, ನಮ್ಮ ಕಂದಮ್ಮಗಳು ಅದನ್ನು ಕುಡಿಯಲು ಇಷ್ಟಪಡದೇ ತಿರಸ್ಕರಿಸುವುದಾಗಿರಬಹುದು. ಅನ್ಯಪ್ರಾಣಿಯ ಹಾಲಿನ ವಾಸನೆಯೂ, ರುಚಿಯೂ ನಮ್ಮ ಮಕ್ಕಳಿಗೆ ಸಹ್ಯವಾಗದಿರುವುದರಲ್ಲಿ ವಿಶೇಷವೇನಿಲ್ಲ, ಅದು ನಿಸರ್ಗ ಸಹಜವಷ್ಟೆ. ಮೊದಲೆರಡು ವರ್ಷಗಳ ನಂತರ ಮಕ್ಕಳಿಗೆ ಹಾಲಿನ ಅಗತ್ಯವೇ ಇಲ್ಲ, ಹಾಲನ್ನು ಜೀರ್ಣಿಸುವ ಕಿಣ್ವವೂ ಆ ವೇಳೆಗೆ ಮಕ್ಕಳ ಜಠರದಿಂದ ಮರೆಯಾಗಿಬಿಡುತ್ತದೆ. ಆದ್ದರಿಂದ ಬೇರೆ ಪ್ರಾಣಿಗಳ ಹಾಲನ್ನು ಕುಡಿಯುವುದೆಂದರೆ ಅನಾರೋಗ್ಯವನ್ನು ಆಹ್ವಾನಿಸಿದಂತೆಯೇ ಸರಿ.

ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಉ: ಹಾಲು-ಹುಡುಗ-ಹಸು ಇತ್ಯಾದಿ..

ASHOKKUMAR's picture

ಹಾಲಿನ ಬಗ್ಗೆ ಡಾ.ಶ್ರೀನಿವಾಸ ಕಕ್ಕಿಲಾಯರು ಈ ಲೇಖನದಲ್ಲಿ ಬರೆದಿರುವುದನ್ನು ಓದಿ.

ಉ:

mahesha's picture

======================================
ಡಾಕ್ಡರ್‍ ಸಾರ್‍....

ನನಗೆ ನಮ್ಮ ಬಯೋಲಜಿ(ಬೈಯ್ಯೋಲಜಿ :) ) ಮಾಸ್ಟರು ನೆನೆಪಾದರು.

ನಾನು ನಿಮ್ಮ ಮಂಗಳೂರ ಹತ್ರ ಓದಿದ್ದು.

ಅವರು ಎಷ್ಟ ಸರತಿ ಹೇಳಿದ್ರು ಗೊತ್ತಾ ನಮ್ಗೆ. ಹಾಲು ಕುಡೀಬೇಡಿ ದಡಿಯರ, ನೀವೇನು ಎಳೆಗೂಸುಗಳಾ? ಹಿಂಗೆ ಕಾಪೀ, ಟೀ, ಬಾದಮಿಹಾಲು ಅಂತ ಹಾಲು ಕುಡಿದ್ರೆ ಬರಿ ಡುಮ್ಮಗೆ ಆಗ್ತೀರ ಹೊರತು, ಯಾವ ತಾಕತ್ತು ಬರಲ್ಲ ಅಂತ.

ಇದನ್ನು ನಮ್ಮ ಯೋಗಾಚಾರ್ಯರ ಹತ್ರ ಹೇಳಿದ್ದಕ್ಕೆ, ಅವರು "ಎಂತಂದು, ಅವ್ರು ಹೇಳೋದು. ಅವರಿಗೇನು ಗೊತ್ತುಂಟು. ಬರಿ ಪುಸ್ತಕದ ಬದನೇಕಾಯಿ. ನೀನು ಚೆನ್ನಾಗಿ ಹಾಲು ಕುಡಿ ಮಾರಾಯ", ಅಂದಿದ್ರು :(

ನಿಮ್ಮ ತಿಳಿಮಾತಿಗೆ ನನ್ನಿ!!!

ಉ:

skakkilaya's picture

ನಮ್ಮ ಮಾಸ್ತರುಗಳು ಇನ್ನೂ ಒಂದು ಮಾತು ಹೇಳ್ತಿದ್ರು - ಅವ್ರ ಪ್ರಶ್ನೆಗಳಿಗೆ ಥಟ್ಟನೇ ಉತ್ತರ ಬಾರದೇ ಇದ್ದಾಗ, 'ಏನೋ, ಎಮ್ಮೆ ಹಾಲು ಕುಡ್ದಿದ್ಯಾ' ಅಂತ. ತಾಯಿಯ ಹಾಲನ್ನು ಪಡೆದ ಮಕ್ಕಳ ಐಕ್ಯೂ ಜಾಸ್ತಿ ಇರ್ತದೆ ಅಂತ ವರ್ಷಗಳ ಹಿಂದೆಯೇ ವರದಿ ಯಾಗಿತ್ತು. ಮಕ್ಕಳ ಮೆದುಳಿನ ಬೆಳವಣಿಗೆಯಲ್ಲಿ ಹಾಲಿನ ಕೊಡುಗೆಯ ಬಗ್ಗೆ ಇನ್ನೂ ರೀಸರ್ಚ್ ನಡೀತಾನೇ ಇದೆ, ಕೊನೇ ತೀರ್ಮಾನ ಏನಿರುತ್ತೆ ಅಂತ ಕಾದು ನೋಡೋಣ.

ಉ: ಹಾಲು-ಹುಡುಗ-ಹಸು ಇತ್ಯಾದಿ..

vijayamma's picture

ತಾವು ಗೋವು ಮತ್ತು ನಾವು, ಹಾಗು ಮೊಟ್ಟೆ ಬಗ್ಗೆ ಉತ್ತಮ ಲೇಖನ
ಬರೆದಿದ್ದೀರಿ. ಚಿಂತನೆಗೆ ಯೋಗ್ಯ.ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಹೇಳಿದ್ದೇನೆ.
ಎಮ್ಮೆ, ಆಡು,ಕತ್ತೆ, ಒಂಟೆ ಇತ್ಯಾದಿಗಳ ಹಾಲಿನಲ್ಲೂ ಔಷಧಿ ಗುಣವಿದೆ.
ಆದರೆ ಮಕ್ಕಳಿಗೆ ಹೆಚ್ಚಾಗಿ ಹಸುವಿನ ಹಾಲನ್ನೇ ಕೊಡುವುದರಿಂದ ಹಸುವನ್ನು ಗೋಮಾತೆ ಅಂದಿರಬೇಕು.ಭಾರತಮಾತೆ ಅಂದ ಹಾಗೆ ಗೋಮಾತೆ ಅಂದಿದ್ದಾರೆ.
ನೀವು ಹಸುವಿನ ಕಶ್ಮಲದ ಬಗ್ಗೆ ತಮಾಷೆ ಮಾಡುತ್ತಾ ಭಾರತೀಯ ದನಗಳ ಕಶ್ಮಲಗಳಿಗೆ
ಈ ತರಹದ ವಿಶೇಷವಾದ ಗುಣವಿದೆಯಂತೆ ಅಂದಿದ್ದೀರಿ. ವಿದೇಶಿ ತಳಿಗಳು ಇತ್ತೀಚೆಗೆ ಬಂದವುಗಳು.
ಅವುಗಳ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖವಿಲ್ಲ. ಇನ್ನೂ ಅಧ್ಯಯನ ನಡೆಯಬೇಕಷ್ಟೆ.
ಮೊಟ್ಟೆ ಸಾವಿರಾರು ವರ್ಷಗಳಿಂದ ತಿನ್ನುತ್ತಿರುವಂತೇ
ಹಾಲನ್ನೂ ಸಾವಿರಾರು ವರ್ಷಗಳಿಂದ ಕುಡಿಯುತ್ತಿಲ್ಲವೇ?
ಮೊಟ್ಟೆ ವಿರುದ್ಧ ಕೊಲೆಸ್ಟ್ರಾಲ್ ಲಾಬಿ ಅಂದ ಹಾಗೆ,
ಹಾಲಿನವಿರುದ್ಧವೂ ಯಾವುದೋ ಲಾಬಿ ಇರಬೇಕೆಂದು ನಿಮಗೆ ಅನಿಸುವುದಿಲ್ಲವೇ?
ಡಯಬಿಟಿಸ್ ಇತ್ಯಾದಿ ವ್ಯಾಧಿ ಹೆಚ್ಚಾಗಲು ನಮ್ಮ ಇತ್ತೀಚಿನ ಆಹಾರ ಕ್ರಮ,
ವ್ಯಾಯಾಮರಹಿತ ಜೀವನ ಶೈಲಿ ಕಾರಣವಲ್ಲವೇ?
ಡಾಕ್ಟ್ರೇ, ಪೂರ್ತಿ ಪರಿಸರವನ್ನು ಹಾಳು ಮಾಡುತ್ತಿರುವ ದೇಶವೇ ಅಮೆರಿಕಾ (ಮತ್ತು
ಅದರಂತೆ ಮುಂದುವರಿದ ದೇಶಗಳು). ಕೈಗಾರಿಕೆಗಳು ವಾಹನಗಳು, ರಾಸಾಯನಿಕಗಳು, ಅಸ್ತ್ರಗಳು, ಕೀಟನಾಶಕಗಳು,ವಿದ್ಯುತ್ ಸ್ಥಾವರಗಳು ಇವೆಲ್ಲವುಗಳಿಂದ ಭೂಮಿಯ ತಾಪ ಏರುತ್ತಿದ್ದು,
ಇದಕ್ಕೆ ಆಮೆರಿಕಾ ನಂ ೧ ಕಾರಣ. ತಮ್ಮನ್ನು ತಿದ್ದಿಕೊಳ್ಳುವುದು ಬಿಟ್ಟು
" ಸಾಕುಪ್ರಾಣಿಗಳು, ಭತ್ತದ ಗದ್ದೆಗಳು ಪರಿಸರ ನಾಶಕ್ಕೆ ಕಾರಣ" ಎಂದು ಹಿಂದುಳಿದ
ಭಾರತ,ಬ್ರೆಝಿಲ್ ದೇಶಗಳತ್ತ ಬೊಟ್ಟು ಮಾಡುತ್ತಿದ್ದಾರೆ! ಯಾಕೆಂದರೆ ಇಲ್ಲಿ ಅವರನ್ನು
ವಿರೋಧಿಸುವವರಿಲ್ಲ. ಅವರು ಉಗುಳಿದನ್ನೇ ತೀರ್ಥ ಪ್ರಸಾದವೆಂದು ಸ್ವೀಕರಿಸಿ
ನಮ್ಮಲ್ಲಿನ ವಿದ್ಯಾವಂತರು ನಮ್ಮವರನ್ನೇ ಹಳಿಯುವರು.
ಅಲ್ಲ ಡಾಕ್ಟ್ರ್‍ಎ, ಒಂದಿಷ್ಟು ಹುಲ್ಲು ಮೇದು,ಇಡೀ ಪರಿಸರವನ್ನೇ ಹಾಳು ಮಾಡುವಷ್ಟು
ಮಿಥೇನ್ ಅನಿಲವನ್ನು ನಮ್ಮ ಹಸುಗಳು ಬಿಡುತ್ತಿದೆ ಎಂದರೆ ನೀವು ನಂಬುತ್ತೀರಲ್ಲಾ!?
ಇನ್ನು ಕಾಡು ನಾಶದ ಬಗ್ಗೆ_ ನಮ್ಮ ರೈತನಷ್ಟು ಪರಿಸರಪ್ರೇಮಿ ಯಾರಿಲ್ಲ.
ಗೋವನ್ನು ಹೇಗೆ ಪೂಜ್ಯ ಭಾವನೆಯಿಂದ ನೋಡುವನೋ ಅದೇ ರೀತಿ ಮರಗಿಡಗಳನ್ನೂ
ಭಕ್ತಿಭಾವದಿಂದ ನೋಡುವನು.ತೀರಾ ಅಗತ್ಯವಿಲ್ಲದಿದ್ದರೆ ಮರಗಿಡಗಳನ್ನು ಕಡಿಯುವುದಿಲ್ಲ.
ಪರಿಸರ ನಾಶ ಮಾಡುತ್ತಿರುವವರು ರಾಜಕಾರಣಿಗಳು ಮತ್ತವರ ಪರಿವಾರ. ಎಲ್ಲೆಂದರಲ್ಲಿ ಗಣಿ, ಕೈಗಾರಿಕೆ...ಗಳೆಂದು ಕಾಡುಗಗಳನ್ನು ಕಡಿದರು,ಕಡಿಯುತ್ತಿದ್ದಾರೆ,
ಕಾಡುಗಳ ಸರ್ವನಾಶವಾಗುವವರೆಗೆ ಕಡಿಯುವರು.
ಡಾಕ್ಟ್ರೇ, ನೀವು ಯಾವುದನ್ನು ಗೋವಿನ ಕಲ್ಮಶವೆಂದು ಕೀಳಾಗಿ ಹೇಳಿದಿರೋ ಅದನ್ನೇ
ತೀರ್ಥವೆಂದು ಕುಡಿಯುವ ಜನ,ಅದನ್ನೇ ಔಷಧದಲ್ಲಿ ಕೊಡುವ ವೈದ್ಯರು ಮೂಢರೋ?
ಶೋಥ ರೋಗದಲ್ಲಿ ಗೋ ಮೂತ್ರವನ್ನು ಕುಡಿಸುವರು. ಅನೇಕ ರಸೌಷಧಿಗಳಿಗೆ
ಗೋಮೂತ್ರದ ಭಾವನೆ ಕೊಡುವರು.ಇದನ್ನೇ ಸಾವಿರಾರು ವರ್ಷಗಳಿಂದ ಕೊಡುತ್ತಿದ್ದಾರೆ,
ಖಾಯಿಲೆಗಳನ್ನು ಗುಣ ಸಹ ಮಾಡುತ್ತಿದ್ದಾರೆ.
ಆದರೆ ಈಗಿನ ಔಷಧಿ ಬಗ್ಗೆ ಹೀಗೆ ಹೇಳಲು ಸಾಧ್ಯವೋ? ಇವತ್ತು ಅಮೃತವೆಂದ
ಔಷಧಿಯನ್ನು ನಾಳೆ ಬ್ಯಾನ್ ಮಾಡುತ್ತಾರಲ್ವಾ?
"..ಈ ಬಗ್ಗೆ ವೈಜ್ನಾನಿಕ ಸಂಶೋಧನೆಗಳಾಗಿವೆಯೋ, ಆಗಿದ್ದರೆ ಅವು
ಯಾವುದೇ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆಯೋ? "ಎಂದಿರುವಿರಿ.
ವಿದೇಶಿಯರು ತಮಗೆ ಬೇಕಾದಂತೆ ಸಂಶೋಧನ ವರದಿಗಳನ್ನು ತಯಾರಿಸಲು
ಮಿಲಿಯಾಂತರ ಡಾಲರ್ ಗಳನ್ನು ವ್ಯಯಿಸುವರು. ನಮ್ಮಲ್ಲಿ ಸಂಶೋಧನೆಗೆ
ಎಷ್ಟು ಹಣ ಕೊಡುತ್ತಾರೆ ಸ್ವಾಮಿ? ದೇಶೀ ಗೋತಳಿ ಬಗ್ಗೆ ಸಮ್ಮೇಳನಕ್ಕೇ
ಸರಕಾರ ೨ ಕೋಟಿ ಕೊಟ್ಟದಕ್ಕೆ ಎಷ್ಟು ಪಿರಿಪಿರಿ ಮಾಡಿದರು.
ಇನ್ನು "ಪ್ರತಿಷ್ಟಿತ ಪತ್ರಿಕೆ" ಎಂದರೆ ಅಮೆರಿಕಾದ ಜರ್ನಲ್ ಗಳೋ?
ನಮ್ಮ ದೇಶೀ ಗ್ರ್‍ಅಂಥಗಳಲ್ಲಿ ಬರೆದದ್ದೆಲ್ಲಾ ಬುರುಡೆ ಅಲ್ಲ್ವೇ?
ಕಡೆಯದಾಗಿ, ತಾವು ಇನ್ನೂ ಚಿಕ್ಕವರು,ಬಹಳ ಬುದ್ಧಿವಂತರಿದ್ದೀರಿ,
ಚೆನ್ನಾಗಿ ವಾದಿಸುವಿರಿ. ತಾವು ಭಾರತೀಯ ಪದ್ಧತಿ ಅಧ್ಯಯನ ಮಾಡಿ,
ಅವುಗಳಲ್ಲಿರುವ ಉತ್ತಮ ಅಂಶಗಳನ್ನು ಎತ್ತಿ ಹಿಡಿದು, ವಿದೇಶಿ ಟೊಳ್ಳು
ಸಂಶೋಧನೆಗಳನ್ನು ಖಂಡಿಸುವಂತವರಾಗಿ ಎಂದು ಬಯಸುತ್ತೇನೆ.

ಉ: ಹಾಲು-ಹುಡುಗ-ಹಸು ಇತ್ಯಾದಿ..

skakkilaya's picture

ದನಗಳು ಮತ್ತಿತರ ಸಾಕುಪ್ರಾಣಿಗಳ ಬಗ್ಗೆ ಮನುಷ್ಯನಿಗಿರುವ ಮಮತೆ ಬಹಳ ಹಳೆಯದು, ಎಷ್ಟಾದರೂ ನಾವೇ ಸಾಕಿದ ಪ್ರಾಣಿಗಳಲ್ಲವೆ? ದನವೇ ಇರಲಿ, ನಾಯಿಯೇ ಇರಲಿ, ಸಾಕುವವರು ಅವನ್ನು ತಮ್ಮ ಕುಟುಂಬದ ಸದಸ್ಯರೆಂಬಂತೆಯೇ ಕಾಣುತ್ತಾರೆ, ಅದು ಸಹಜ ಧರ್ಮ, ತಮಾಷೆಯ ವಿಚಾರವೂ ಅಲ್ಲ. ಆದರೆ, ಪ್ರಾಣಿಗಳ ಮೇಲಿನ ಪ್ರೀತಿಯು ವೈಯಕ್ತಿಕ ನೆಲೆಯನ್ನು ಮೀರಿ ರಾಜಕೀಯದ ವಸ್ತುವಾದಾಗ, ಸಾಮಾನ್ಯ ಪ್ರಜ್ಞೆ ಮರೆತು, ವೈಚಾರಿಕತೆ ಸತ್ತು ಹೋದಾಗ ಮಾತ್ರ ಈ ವಿಚಾರಗಳು ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಬಲ್ಲ ಹುಚ್ಚುತನವಾಗುತ್ತವೆ. ಹಸುವಿನ ಮೂತ್ರವು ಕಶ್ಮಲವೆಂದು ನಾನು ಹೇಳಿರುವುದು ತಮಾಷೆಗಾಗಿಯಲ್ಲ, ಅದು ನಿಜಕ್ಕೂ ಕಶ್ಮಲವೇ, ಅದರಲ್ಲಿ ಯಾರಿಗಾದರೂ ಯಾಕಾಗಿ ಸಂಶಯ ಹುಟ್ಟಬೇಕು? ದನದ ಮೂತ್ರವು ಕಶ್ಮಲವಲ್ಲದಿದ್ದರೆ, ಮನುಷ್ಯನ ಹಾಗೂ ಅವನಂತೆ ಬೇರಾವ ಪ್ರಾಣಿಯ ಮೂತ್ರವೂ (ಹಾಗೆಯೇ ಮಲವೂ) ಕಶ್ಮಲವಲ್ಲ ಎನ್ನಬಹುದು. ಹಾಗಾದರೆ ಈ ವಿಸರ್ಜಿತ ವಸ್ತುಗಳನ್ನು ಕಲೆಹಾಕಿ, ನಗರದಾಚೆಗೆ ಹರಿಯಿಸಿ ಅವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಒಳಚರಂಡಿ ವ್ಯವಸ್ಥೆಯೇ ಮುಂತಾದ ಏರ್ಪಾಟುಗಳ ಅಗತ್ಯವೇ ಇಲ್ಲವಲ್ಲ?

ಇನ್ನು ಮೂತ್ರದ ಔಷಧೀಯ ಗುಣಗಳ ಬಗ್ಗೆ. ಮನುಷ್ಯನ ಮೂತ್ರಕ್ಕೂ ಔಷಧೀಯ ಗುಣಗಳಿವೆ, ಗೊತ್ತೆ? ಹೃದಯಾಘಾತವಾದಾಗ ಚುಚ್ಚುವ ಯೂರೋಕೈನೇಸ್ ಎಂಬ ಔಷಧವನ್ನು ಮನುಷ್ಯನ ಮೂತ್ರದಿಂದಲೇ ಪ್ರತ್ಯೇಕಿಸಿ ತಯಾರಿಸಲಾಗುತ್ತದೆ. ಹಾಗೆಂದೊಡನೆ, ಮನುಷ್ಯನ ಮೂತ್ರವನ್ನೇ ಕುಡಿಯುತ್ತಿದ್ದರೆ ಹೃದಯಾಘಾತವೇ ಆಗುವುದಿಲ್ಲ ಎನ್ನಲಾಗುತ್ತದೆಯೇ? ಮೂತ್ರಜನಕಾಂಗದಿಂದ ಸ್ರವಿಸಲಲ್ಪಟ್ಟ ಮೂತ್ರವು ಎಲ್ಲೂ ಹೆಪ್ಪುಗಟ್ಟದೆಯೇ ಸಲೀಸಾಗಿ ವಿಸರ್ಜನೆಗೊಳ್ಳುವಂತಾಗಲಿಕ್ಕಾಗಿಯೇ ಮೂತ್ರದಲ್ಲಿ ಯೂರೋಕೈನೇಸ್ ಇರುತ್ತದೆ. ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ನಾವಿಂದು ಅದನ್ನು ಬಳಸುತ್ತಿದ್ದೇವೆ. ಹಾಗಾದರೆ, ಪ್ರಾಣವನ್ನು ಉಳಿಸುವ ಮನುಷ್ಯನ ಮೂತ್ರವೂ ಪರಮ ಪಾವನವೆಂದು ಪೂಜಿಸಬಹುದಲ್ಲವೆ? ಯಾವುದೇ ವಿಚಾರವಾದರೂ ತನ್ನ ಮಿತಿಯನ್ನು ದಾಟಿದಾಗ ಗೊಂದಲವಾಗುವುದು ಸಹಜವೇ.

ಭೂಮಿಯ ತಾಪಮಾನದ ಏರಿಕೆಗೆ ಗೋವುಗಳೇ ಕಾರಣವೆಂದು ನಾನೆಲ್ಲೂ ಹೇಳಿಲ್ಲ. ಅಮೆರಿಕಾದ ಮಾನವ ವಿರೋಧಿ ನೀತಿಗಳನ್ನು ಬೆಂಬಲಿಸಿಯೂ ಇಲ್ಲ. ಅಮೆರಿಕಾದಂತಹ ಅಭಿವೃಧ್ಧಿ ಹೊಂದಿರುವ (ಹಾಗೆ ಅಂದುಕೊಳ್ಳವ) ರಾಷ್ಟ್ರಗಳಲ್ಲಿರುವ ವಾಹನಗಳು, ಕಾರ್ಖಾನೆಗಳು, ಹವಾನಿಯಂತ್ರಕಗಳು ಇವೇ ಮುಂತಾದುವೆಲ್ಲವೂ ಭೂಮಿಯ ತಾಪಮಾನದ ಏರಿಕೆಗೆ ಕಾರಣಗಳೆನ್ನುವುದರಲ್ಲಿ ಯಾರಿಗೂ ಯಾವುದೇ ಸಂಶಯಗಳಿಲ್ಲ. ಆದರೆ, ಭಾರತ, ಬ್ರೆಜಿಲ್ ಗಳಂತಹ ಅಭಿವೃಧ್ಧಿಶೀಲ ರಾಷ್ಟ್ರಗಳಲ್ಲಿ ಜಾನುವಾರುಗಳಿಂದಾಗಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತಿರುವ ಬಗ್ಗೆ ಮತ್ತು ಇವು ವಾಹನಗಳಿಂದಾಗುತ್ತಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ಬಗ್ಗೆ ವಿಶ್ವಸಂಸ್ಥೆಯ ವರದಿಯು ಎಚ್ಚರಿಕೆಯನ್ನು ನೀಡಿದೆ. ಈ ವರದಿಯನ್ನು ತಯಾರಿಸಿದವರ ಗುಂಪಿನಲ್ಲಿ ಎಲ್ಲ ದೇಶಗಳವರೂ ಇದ್ದಾರೆ, ನಮ್ಮವರೂ ಇದ್ದಾರೆ (ಇಲ್ಲಿ ನೋಡಿ: http://www.virtualce... ). ವರದಿಗಳು ನಮಗೆ ಒಪ್ಪಿಗೆಯಾಗದಿದ್ದರೆ ಅದರ ಹಿಂದೆ ಅಮೆರಿಕಾದ ಕೈವಾಡವನ್ನು ಕಾಣುವ ನಮಗೆ, ಗೋಮೂತ್ರದ ಸದ್ಗುಣಗಳನ್ನು ಸಾಬೀತು ಪಡಿಸಲು ಅಮೆರಿಕದ ಪೇಟೆಂಟಿನ ಅಗತ್ಯವೇಕೆ ಬರುತ್ತದೆಯೆಂಬುದು ನನಗರ್ಥವಾಗದ ವಿಚಾರ.

ಭಾರತೀಯ ಪರಂಪರೆಯ ಭವ್ಯತೆಯ ಬಗ್ಗೆ, ಮನುಕುಲದ ಬೆಳವಣಿಗೆಯ ವಿವಿಧ ಮಜಲುಗಳಿಗೆ ಭಾರತದ ಕೊಡುಗೆಯ ಬಗ್ಗೆ ಅತ್ಯಂತ ಹೆಮ್ಮೆ ಪಡುವವರಲ್ಲಿ ನಾನೂ ಒಬ್ಬನಿದ್ದೇನೆ. ಆದರೆ ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ಸಂಗತಿಗಳು ಗೋಮೂತ್ರದ ಔಷಧೀಯ ಗುಣಗಳಿಗಷ್ಟೇ ಸೀಮಿತವಾಗಿದ್ದರೆ ಅದೊಂದು ದುರಂತವಷ್ಟೇ ಅನ್ನದೆ ಬೇರೆ ದಾರಿಯಿಲ್ಲ. ಆಯುರ್ವೇದದಲ್ಲಿ ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಹೇಳಿರುವಂತೆಯೇ, ಗೋಮಾಂಸದ ಒಳಿತುಗಳ ಬಗೆಗೂ ಹೇಳಿದೆಯೆನ್ನುವುದನ್ನು ನಾವು ಅಡಗಿಸಿಡುವುದೇಕೆ? ಇದೂ ಒಂದು ಹುನ್ನಾರವಲ್ಲವೇ?

ಈ ಲೇಖನವನ್ನು ಓದಬಹುದೇನೋ?
DN Jha. Paradox of the Indian Cow. ಅದು ಇಲ್ಲಿದೆ: http://www.indowindo...

ಉ: ಹಾಲು-ಹುಡುಗ-ಹಸು ಇತ್ಯಾದಿ..

ASHOKKUMAR's picture

ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಕಾಲದಲ್ಲಿ ಸ್ವಮೂತ್ರ ಪಾನದ ಲಾಭದ ಬಗ್ಗೆ ಬಹಳಷ್ಟು ಕೇಳಿ ಬಂದರೆ, ಈಗ ಗೋಮೂತ್ರದ ಲಾಭದ ಬಗ್ಗೆ ಕೇಳಿ ಬರುತ್ತಿದೆ.ನಂದಿನಿಯವರು ಗೋಮೂತ್ರ ಪ್ಯಾಕೆಟ್ ಮಾರಲೇಕೆ ಆರಂಭಿಸಿಲ್ಲವೋ?ಸ್ವಮೂತ್ರಕ್ಕೊಂದು ಕಾಲವಾದರೆ,ಗೋಮೂತ್ರಕ್ಕೊಂದು ಕಾಲ!:)

ಉ: ಹಾಲು-ಹುಡುಗ-ಹಸು ಇತ್ಯಾದಿ..

vijayamma's picture

ಒಂದೆರಡು ಕಂಪನಿಯವರು ಈಗಾಗಲೇ ಬಾಟಲಲ್ಲಿ ಗೋಮೂತ್ರ ಮಾರಾಟ ಮಾಡುತ್ತಿದ್ದಾರೆ.

ಉ: ಹಾಲು-ಹುಡುಗ-ಹಸು ಇತ್ಯಾದಿ..

skakkilaya's picture

ಛೆ ಛೆ, ಎಲ್ಲಾದರೂ ಉಂಟೆ, ಗೋಮೂತ್ರದ ವ್ಯಾಪಾರವನ್ನೂ ರಾಷ್ಟ್ರೀಕರಿಸುವುದೇಕೆ? ಅದನ್ನಾದರೂ ಖಾಸಗಿಯವರಿಗೆ ಬಿಟ್ಟುಬಿಡೋಣ :) ಗೋಮೂತ್ರದ ಪ್ರಯೋಜನಗಳ ಬಗ್ಗೆ 'ಸಂಶೋಧನೆಗಳನ್ನು ನಡೆಸಿದವರಿಗೆ' (ಮಠದವರೂ ಸೇರಿ) ಹಾಕಿದ ದುಡ್ಡು ಮರಳಿ ಬರಬೇಡವೇ?

ಉ: ಹಾಲು-ಹುಡುಗ-ಹಸು ಇತ್ಯಾದಿ..

vijayamma's picture

ಧನ್ಯವಾದಗಳು ಡಾಕ್ಟ್ರೆ,ತಮ್ಮ ವಿವರಣೆಯಿಂದ ನನ್ನ ಸಂಶಯಗಳು ದೂರವಾದವು.

ಉ: ಹಾಲು-ಹುಡುಗ-ಹಸು ಇತ್ಯಾದಿ..

skakkilaya's picture

ನಾನು ಧನ್ಯ! :)

ಉ:

mahesha's picture

ಅಮ್ಮ....

೧) ಯಾವ ಜಂತೂನು ಸುಮ್ನೆ ಸುಮ್ನೆ ಕೊಲ್ಲೇ ಬಾರದು.
೨) ತಿನ್ನಕ್ಕೆ ಕೊಲ್ಲುವಾಗ ಹಸುವೇನು, ಕುರಿ, ಕೋಳಿ, ಹಂದಿಗಳಿಗೂ ಒಂದು ವಿಧಾನ ಇದೇ ಇದೆ. ನಮ್ಮಲ್ಲಿ, ನಮ್ಮ ಎಮ್ಮೆನಾಡಿನ(ಮೈಸುರು) ಕಡೆ ಕುರಿ, ಕೋಳೀನ ಒಂದೇ ಎಟಿಗೆ ಕಡಿದು, ಕೊಲ್ಲೋದು. ಅದರಲ್ಲಿ ಅಂತ ನರಳಾಟ ಇರಲ್ಲ.

ಮಾನಿಸರು biologically ಬಾಡು(ಮಾಂಸ) ತಿನ್ನೋ ಜಂತುಗಳು. ನಮ್ಮ ಆಹಾರದಲ್ಲಿ ಅದೂ ಮುಕ್ಯವಾದುದು.!
======================================

ಉ:

ವೈಭವ's picture

ಬರೀ ಮಾಂಸಾಹಾರ ಒಳ್ಳೇದು, ಅಥವ ಬರೀ ಸಸ್ಯಾಹಾರ ಒಳ್ಳೇದು ಅಂತ ಯೂನಿವರ್ಸಲ್ ಆಗಿ ಹೇಳಕ್ಕಾಗಲ್ಲ.
ಅದು ಅವರವರ ಕಾಯ ಪ್ರಕೃತಿಯ ಮೇಲೆ ಹೋಗುತ್ತೆ.

ಅವರವರಿಗೆ ಏನೇನು ಬೇಕೊ ಅದನ್ ತಿನ್ಲಿ ಬಿಡ್ರಿ...ಸುಮ್ನೆ ಯಾಕೆ ತಲೆ ಕೆಡಿಸ್ಕೊಬೇಕು. :)

ಉ:

mahesha's picture

ಒಂದು ಜೋಕು...

"ಗಿಡಾನಾದರು ತಿನ್ನಿ, ಬಾಡ್ನಾದರು ತಿನ್ನಿ, ಆದರೆ ಸುಮ್ಕೆ ನಮ್ ತಲೇ ತಿನ್ನಬೇಡಿ" :)
======================================

ಉ:

ಸಂಗನಗೌಡ's picture

Quote:
ಮಾನಿಸರು biologically ಬಾಡು(ಮಾಂಸ) ತಿನ್ನೋ ಜಂತುಗಳು.
ನಾನೂ ಹಂಗ ಅನ್ಕೊಂಡಿದ್ದೆ ಗುರು, ಆದರೆ ಇತ್ತೀಚೆಗ್ಯಾಗೋ ಇದರ ಬಗ್ಗೆ ಐಬು. ಅಲ್ಲ ಮಂಗನಿಂದ ಮಾನವ ಅಂತಾರೆ, ಹಣುಮಂತಣ್ಣ(ಮಂಗ) ನೋಡಿದ್ರೆ ಅಪ್ಪಟ ಸಸ್ಯಾಹಾರಿ. ಮಾನವನಿಗೆ intellectually ಬಾಳಾ ಹತ್ರ ಇರೋ ಚಿಂಪಾಂಜಿನೂ ಆಟೆ, ಮಾಂಸಾ-ಗೀಸಾ, ಬಾಡ್-ಗೀಡ್ ತಿನ್ನಲ್ಲಾ.

ಮನಸ್ಯಾ ಎಲ್ಲೋ ನಡ್ ಮದ್ಯೇನೇ ಇದನ್ನು ಸುರು ಹಚ್ಕೊಂಡ್ನಾ ಅಂತಾ....
ಹಸಿ ಮಾಂಸನ್ ಒಯ್ದು ಎರ್ಡ್ ವರ್ಸದ್ ಕೂಸಿನ್ ಮುಂದಿಟ್ರೆ ತಿನ್ನುತ್ತಾ?, ಅದೇ ಹುಲಿ ಸಿಮ್ಮದ ಮರಿಗಳಿಗೆ ಅದು ರುಚಿನೋ ರುಚಿ.
ಇತ್ತೀಚಿನ ಸಂಸೋದನೆಗಳ ಪ್ರಕಾರ, ಸಸ್ಯಾಹಾರ ಆರಿಸಿಕೊಳ್ಳೋರು, ಹೆಚ್ಹು ಶ್ಯಾಣಾ ಇರ್ತಾರಂತೆ. ಅಥವಾ ಚಿಕ್ಕಂದಿನಲ್ಲಿ ಶ್ಯಾಣ್ಯಾ ಇರೋ ಹೈಕ್ಳು, ದೊಡ್ಡವರಾದ ಮೇಲೆ ಸಸ್ಯಾಹಾರಿ ಆಗಿರೋಕೆ ಬಯಸ್ತಾರಂತೆ.
ಏನೋ ಬಿಡಿ, ಊಟದಲ್ಲೇನ್ ಬೇರೆ ಮಾಡೋದು, ಸಸ್ಯಗಳಿಗೂ ಜೀವ ಇರಲ್ವಾ, ಜೀವವನ್ನು ತಿಂದೇ ಇನ್ನೊಂದು ಜೀವ ಬದುಕಬೇಕು, ಅದು ಬೂಮ್-ತಾಯಿ ಕಟ್ಟಳೆ :-)