ಅಕ್ಷರವಿಹಾರ
ಮಲೆನಾಡ ಮಡಿಲಿನಿಂದ ಹೊರಟ ವಾಕಿಂಗು...
ಪುರೋಹಿತ ಪುಡಾರಿಗಳು ಮತ್ತು ದೇವರು
(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ ಅವಹೇಳನ ಮಾಡುವ ಅಥವಾ ಯಾವುದೋ ಒಂದು ವರ್ಗದ ದ್ವೇಷಿಯಾಗಿ ಏಕಮುಖಿ ಚಿಂತನೆಯೊಂದಿಗೆ ಬರೆಯುತ್ತಿರುವ ಬರಹವಲ್ಲ. ಪ್ರಸ್ತುತದ ಒಂದು ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದರ ಎಡ ಬಲಗಳ ಸುತ್ತ ಅವಲೋಕಿಸಲು ಹೊರಟ್ಟಿದ್ದೇನೆ . ಇಲ್ಲಿ ಪರ ವಿರೋದಗಳ ದ್ವಂದ ಮಿಶ್ರಣದ ಎರಡು ಮಜಲುಗಳ ಅವಲೋಕನ ಇದೆ. ಆ ನಿಲುವು ನನ್ನೊಳಗಿನ ಗೊಂದಲ ಅಂತಾನೂ ನೀವು ಭಾವಿಸಬಹುದು. ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ. ಇಲ್ಲಿನ ಬರಹಕ್ಕಿಂತ ಭಿನ್ನವಾದೊಂದು ಆಲೋಚನೆ ನಿಮ್ಮಿಂದ ಹರಿದು ಬಂದರೆ ಖಂಡಿತಾ ಅದನ್ನು ನಾನು ಸ್ವೀಕರಿಸುತ್ತೇನೆ.)
ಅದ್ಯಾಕೋ ಬೆಂಗಳೂರೆಂಬ ಈ ಹಾಳು ಕಾಂಕ್ರೀಟು ಜಂಗಲ್ಲು ಸೇರಿದ ಮೇಲೆ ನನಗಂತೂ ದೇವರಿಗೆ ಕೈ ಮುಗಿಯಬೇಕು, ದೇವಸ್ಥಾನಕ್ಕೆ ಎಂಟ್ರಿಕೊಡಬೇಕು ಅಂತಾನೆ ಅನ್ನಿಸ್ತಾ ಇಲ್ಲ. ಮನೆಯಲ್ಲಿದ್ದರೆ ಕನಿಷ್ಟಪಕ್ಷ ಬೆಳಿಗ್ಗೆ ಎದ್ದವನಾದರೂ ದೇವರಿಗೆ ಕೈಮುಗಿಯುತ್ತಿದ್ದೆ. ಆದರೆ ಬೆಂಗಳೂರೆಂಬ ಮಹಾನಗರಿಯ ಒಂದಿಷ್ಟು ಪುಡಾರಿ ಪುರೋಹಿತರನ್ನು ಕಂಡ ಮೇಲೆ ಆ ಸಂಪ್ರದಾಯವೂ ನನ್ನಿಂದ ದೂರವಾಗಿದೆ. ನಿನ್ನಿಂದ ದೂರವಾಗಿರುವ ಸಂಪ್ರದಾಯವೊಂದಕ್ಕೆ ಬಡಪಾಯಿ ಪುರೋಹಿತನ್ನ ಯಾಕೆ ಬಲಿಪಶು ಮಾಡ್ತಿಯಾ ಅಂತಾ ಗೆಳೆಯನೊಬ್ಬ ಕೇಳಿದ್ದ. ಅಲ್ಲೋ ಆ ದೇವರಿಗೆ ತನ್ನ ಬಳಿಯಿರುವ ಅರ್ಚಕನೇ ದೇವರ ಹೆಸರುಹೇಳಿಕೊಂಡು ಲಫಡಾ ಮಾಡಲು ಹೊರಟಿರುವುದು ಕಣ್ಣೆದುರಿಗೆ ಕಾಣುತ್ತಿದ್ದರು ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಅಂತಾದರೆ ಅವನೆಂತಹ ದೇವರೋ! ಅಂತಾ ತಿರುಗಿ ಉತ್ತರ ನೀಡಿದ್ದೆ!
ಹೌದು ಇವತ್ತು ದೇವಸ್ಥಾನವೆಂಬುದು ಹಣಗಳಿಕೆಯ ಕೇಂದ್ರವಾಗಿದೆ! ಬೆಂಗಳುರಿನಲ್ಲಿ ಕೆಲ ಪುರೋಹಿತ ಪುಡಾರಿಗಳು ದೇವರ ಹೆಸರು ಹೇಳಿಕೊಂಡು, ಇಲ್ಲಸಲ್ಲದ ವಿಚಿತ್ರ ಕಥೆಗಳನ್ನೆಲ್ಲಾ ಹೇಳಿಕೊಂಡು ಅದ್ಯಾವ ಪರಿ ಹಣ ಮಾಡ್ತಾ ಇದ್ದಾರೆ ಅಂದ್ರೆ? ಅದನ್ನು ನೆನಸಿಕೊಂಡ್ರೇನೆ ಭಯವಾಗತ್ತೆ. ಇವತ್ತು ಪೂಜೆಗಳಿಗೂ ಕಾಂಟ್ರಾಕ್ಟ್ ಪದ್ದತಿ ತಂದಿದ್ದಾರೆ! ಅಂದರೆ ಯಾವುದೋ ಒಂದು ಕಾರ್ಯಕ್ರಮವನ್ನು ಇಡಿ ಇಡಿಯಾಗಿ ಕಂಟ್ರಾಕ್ಟ್ ತೆಗೆದುಕೋಳ್ಳೋದು! ಬಿಲ್ಡ್ರ್ಸ ಎಲ್ಲಾ ಬಿಲ್ಡಿಂಗ್ ಕಾಂಟ್ರಾಕ್ಟ್ ಹಿಡಿತಾರಲ್ಲ ಅಂತಹದ್ದೇ ಅದು! ಇನ್ನೂ ಅವರು ಬರೆದುಕೊಡುವ ಪೂಜಾ ಸಾಮಾಗ್ರಿಗಳ ಪಟ್ಟಿಯೋ! ಪುಜಾರಿ ಮನೆಯಲ್ಲಿ ಖಾಲಿಯಾದ ಬೇಳೆಕಾಳುಗಳೆಲ್ಲಾ ಆ ಪಟ್ಟಿಯಲ್ಲಿ ಇರತ್ತೆ ಅಂದ್ರೆ ತಪ್ಪಾಗಲಾರದೇನೋ! ದೇವರು ಇದ್ದಾನೋ, ಇಲ್ಲವೋ ಅನ್ನೋದು ಸೆಕೆಂಡರಿ ವಿಚಾರ. ಆದ್ರೆ ಆತನ್ನನ್ನು ನಂಬಿಕೊಂಡು ಆತನ ಆರಾಧನೆಗೆ ನಾವು ಅಳವಡಿಸಿಕೊಂಡ ಪೂಜಾವಿಧಾನಗಳಿದೆಯಲ್ಲಾ ಅವುಗಳ ಹಿಂದಿರುವ ಕಲ್ಪನೆ ನಿಜಕ್ಕೂ ಅದ್ಬುತ. ನಾನು ಒಂದ್ಸಾರಿ ಹೀಗೆ ಮೂರ್ತಿರಾಯರ “ದೇವರು” ಅನ್ನೋ ಪುಸ್ತಕ ಓದಿಕೊಂಡು ನಂತರ ಹಿರಿಯ ಸಂಸ್ಕೃತ ವಿದ್ವಾಂಸ ಹತ್ತಿರ ಸಾರ್ ನಂಗೆ ಆ ಪುಸ್ತಕದ ಕುರಿತಾಗಿ ನನ್ನಲೇ ಒಂದಿಷ್ಟು ಅನುಮಾನಗಳಿವೆ ಅಂತಾ ಕೇಳಿದೆ. ಅದ್ಕೆ ಅವರು ಕೊಟ್ಟಿದ್ದು ಒಂದೇ ಸಾಲಿನ ಉತ್ತರ. “ನೀನು ದೇವರ ಕುರಿತಾಗಿ ಎಷ್ಟು ಪುಸ್ತಕ ಓದಿದ್ದೀಯಪ್ಪಾ” ಅಂತಾ. ಅಷ್ಟೊತ್ತಿಗೆ ನಂಗೆ ನನ್ನ ಬಾಲಿಶತನದ ಅರಿವಾಗಿತ್ತು.
ಮೊನ್ನೆ ಕಣ್ಣನ್ ಮಾಮ ನಮ್ಮ ಆಚರಣೆಗಳ ಹಿಂದಿರುವ ಸೂಕ್ಷ್ಮಗಳ ಕುರಿತಾಗಿ, ಸಂಸ್ಕೃತ ಮಂತ್ರಗಳ ಹಿಂದಿದ್ದ ಸಾಮಾಜಿಕ, ಪ್ರಾಕೃತಿಕ ಕಲ್ಪನೆಗಳ ಕುರಿತಾಗಿ ಪುಟ್ಟದಾಗಿ ಹೇಳಿದರು. ನಾವೇಕೆ ಸರ್ವಾಂತರಯಾಮಿ ಅನ್ನೋ ದೇವರನ್ನು ಹಲವು ಬಗೆಯಲ್ಲಿ ಆರಾಧಿಸುತ್ತೇವೆ ಅನ್ನೋದಕ್ಕೆ ಅವರು ರುದ್ರ ಮತ್ತು ಚಮಕದ ನಡುವಿನ ಪ್ರಾತಕ್ಷಿತೆಯೊಂದನ್ನು ನೀಡಿದರು. ಆವಾಗಲೇ ನನಗೆ ನಮ್ಮ ದೇವರ ಆರಾಧನೆಗಳು ಪೂಜೆಗಳು ಒಂದು ಕಡೆ ಮುರ್ಖತನ ಅಂತಾ ಅನ್ನಿಸಿದರು ಅದರ ಅಂತಾರಾಳದಲ್ಲಿ ಬೇರೆಯೇ ಆದ ಅರ್ಥವಿದೆ ಅನ್ನಿಸಿದ್ದು. ಆ ಕುರಿತಾಗಿ ಮಾತಾಡಲು ನನ್ನ ಬಳಿ ಹೆಚ್ಚಿನ ಅಧ್ಯಯನವಿಲ್ಲದೇ ಇರುವುದರಿಂದ ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಆ ಕುರಿತಾಗಿ ನನ್ನ ನಿಲುವು ಇಷ್ಟೆ ನಮ್ಮ ಪ್ರತಿಯೊಂದು ಆಚರಣೆ ಹಿಂದೆಯೂ ಒಂದೊಂದು ನಮ್ಮ ಜೀವನಕ್ಕೆ ತೀರಾ ಹತ್ತಿರವಾದ ಪರಿಕಲ್ಪನೆ ಇದೆ. ಅದನ್ನು ಅಧ್ಯಯನಹೀನ ನಮ್ಮಂತಹವರಿಂದ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಅವುಗಳೆಲ್ಲವು ಮೂಢ ಅನ್ನುತ್ತಿದ್ದೇವೆ!(ಎಲ್ಲ ಅಂದರೆ ಎಲ್ಲ ಆಚರಣೆಗಳು ಸರಿ ಅನ್ನುತ್ತಾ ಇಲ್ಲ. ಹೆಚ್ಚಿನವು ಸರಿಯಿವೆ. ಆ ಕುರಿತು ವಿಶೇಷ ಅಧ್ಯಯನ ನಡೆಸಿದ ಹಲವು ಮಂದಿ ನಮ್ಮ ನಡುವೆಯೇ ಇದ್ದಾರೆ)
ಅಂತಹದೊಂದು ಅದ್ಬುತ ಪರಿಕಲ್ಪನೆಯ ದೇವರನ್ನು, ಪೂಜೆಗಳನ್ನು ನಮ್ಮ ಪುರೋಹಿತಶಾಹಿಗಳು ಇಂದು ತೀರಾ ಹದಗೆಡಿಸುತ್ತಿದ್ದಾರೆ. ದೇವರು ಬ್ರಾಹ್ಮಣರ ಸ್ವತ್ತು, ಸಂಸ್ಕೃತ ಬ್ರಾಹ್ಮಣರ ಭಾಷೆ ಎಂಬಂತೆ ಸಮಾಜದ ಬ್ರಾಹ್ಮಣವರ್ಗ ಹಲವು ಶತಮಾನಗಳ ಕಾಲದಿಂದಲೂ ವರ್ತಿಸಿಕೊಂಡು ಬಂದಿದೆ ಎಂಬ ಗಂಭೀರ ಆರೋಪ ಬ್ರಾಹ್ಮಣರ ಮೇಲಿದೆ! ತಲತಲಾಂತರದಿಂದಲೂ ಜಾತಿ ಅನ್ನೋದು ಬಹುದೊಡ್ಡ ಚರ್ಚೆಯ ವಿಷಯವಾಗಿದೆ! ಆ ವಿಚಾರ ನನ್ನ ಈ ವ್ಯಾಪ್ತಿಯೊಳಗೆ ಬಾರದೇ ಇರುವುದರಿಂದ ಅದನ್ನು ನಾನಿಲ್ಲಿ ಚರ್ಚಿಸಲಾರೆ.
ಹಲವರು ಅದೆಂತೆಂತಹದ್ದೋ ಹಾದರ ಮಾಡಿ ದುಡ್ಡು ಮಾಡುತ್ತಾರೆ ಅಂತಹದ್ದರಲ್ಲಿ ಬಡ ಬ್ರಾಹ್ಮಣ ದೇವರ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಅನ್ನಿಸತ್ತೆ ಒಂದೊಂದ್ಸಾರಿ. ಆದ್ರೆ ಹಾಗೇ ದುಡ್ಡು ಮಾಡಲು ದೇವರಂತಹ ಪಾವಿತ್ರ್ಯಕಲ್ಪನೆಯನ್ನು ಬಲಿಕೊಡೋದು ಸರಿಯಲ್ಲ ಅಂತಾನೂ ಇನ್ನೊಂದು ಕಡೆ ಅನ್ನಿಸತ್ತೆ ನಂಗೆ.
ಗೆಳೆಯ ಶ್ರೀಕಾಂತ್ ಮೊನ್ನೆ ಸಿಕ್ಕಿದ್ದ. ಅವ ಇಲ್ಲೆ ಬೆಂಗಳೂರಿನಲ್ಲಿ ಪುರೋಹಿತನಂತೆ. ಇವತ್ತು ಅಪ್ಪಾ ಅಮ್ಮನಿಗೆ ಮೂರು ಹೊತ್ತು ಊಟ ಹಾಕ್ತಾ ಇದೀನಿ ಅನ್ನೋದೆ ನನ್ನ ಸಂತೋಷ ಮಾರಾಯ ಅಂತಿದ್ದ. ನಾನು ಹೈಸ್ಕೂಲ್ ಓದ್ತಾ ಇರೋವಾಗ ಇಕ್ಕೇರಿ ಪ್ರೌಡಶಾಲೆಯಲ್ಲಿ ನನ್ನ ಜೊತೆ ಓದಿದವನು ಆತ. ಅವನ ಕಷ್ಟ ನನಗೆ ಚೆನ್ನಾಗಿ ಗೊತ್ತು. ಅವ ಜಾತಿಯಿಂದ ಹವ್ಯಕ. ಅವನ ಅಪ್ಪಾ ಮೇಸ್ತ್ರಿ(ಗಾರೆ) ಕೆಲಸ ಮಾಡುತ್ತಿದ್ದರು. ಆವತ್ತು ಮಲೆನಾಡಿನಲ್ಲಿ ಹಳ್ಳಿಗಳಲ್ಲಿ ಗಾರೆ ಕೆಲಸ ಸಿಗುತ್ತಿದ್ದದ್ದು ಅಷ್ಟರಲ್ಲೇ ಇತ್ತು. ಸಿಕ್ಕರೂ ಕೈಗೆ ಬರುತ್ತಿದ್ದ ಸಂಬಳವೂ ಹಾಗೇ ಇತ್ತು. ಹಾಗಾಗಿ ಒಂದು ಹೊತ್ತು ಊಟಕ್ಕಿದ್ದರೆ ಮೂರು ಹೊತ್ತು ಊಟಕ್ಕಿಲ್ಲದ ಮನೆ ಗೆಳೆಯ ಶ್ರೀಕಾಂತ್ನದ್ದು. ಅದೂ ಅಲ್ಲದೇ ಅವರಪ್ಪನಿಗೆ ದುಡಿಯಲು ಆಗುತ್ತಿರಲಿಲ್ಲ. ಆದ್ರೂ ಹೊಟ್ಟೆಪಾಡಿಗಾಗಿ ದುಡಿಮೆ ಅನ್ನೋದು ಅವರಿಗೆ ಅನಿವಾರ್ಯವಾಗಿತ್ತು. ಅವನ್ನ ಕಂಡಗಲೆಲ್ಲಾ ನಂಗೆ ನೋವಾಗುತ್ತಿತ್ತು. ಅವನಿಗೆ ಸಹಾಯ ಮಾಡೋಣ ಅಂದ್ರೆ ನನ್ನಲ್ಲಿನ ಶ್ರ್ಈಮಂತಿಕೆಯೂ ಅಷ್ಟರಲ್ಲೇ ಇತ್ತು. ಅವ ಎಸ್ಸೆಸ್ಸೆಲ್ಸಿ ಮುಗಿಸಿ ಮನೆ ಬಿಟ್ಟ ಅದೇಗೋ ಮಂತ್ರ ಕಲಿತ ಬೆಂಗಳೂರಿಗೆ ಬಂದು ಪುರೋಹಿತ್ಯ ಆರಂಭಿಸಿದ. ಅಂತಹ ಗೆಳೆಯ ಅಪ್ಪಾ ಅಮ್ಮನಿಗೆ ಮೂರುಹೊತ್ತಿನ ಊಟ ಹಾಕುವಷ್ಟು ಶ್ರ್ಈಮಂತನಾಗಿದ್ದೇನೆ ಅಂದಾಗ ನನಗೆ ನಿಜಕ್ಕೂ ಸಂತಸವಾಯಿತು. ಹೌದು ಬೆಂಗಳೂರಿನ ಪುರೋಹಿತರನ್ನು ಕಂಡಾಗ ಮೈ ಉರಿಯತ್ತೆ ಆದ್ರೆ ಶ್ರೀಕಾಂತ್ನಂತಹ ಗೆಳೆಯರನ್ನು ಕಂಡಾಗ ಮಲೆನಾಡಿನ ಎಷ್ಟೋ ಜನರಿಗೆ ಅನ್ನಕೊಟ್ಟ ವೃತ್ತಿ ಅದು ಅಂತಾ ಸಂತಸವಾಗತ್ತೆ.
ಯಲ್ಲಾಪುರ, ಉತ್ತರಕನ್ನಡದ ಬಡತನ ನೋಡಿದರೆ ಸಾಗರದ ನಾವು ಎಷ್ಟೋ ವಾಸಿ ಅನ್ನಿಸತ್ತೆ. ಇವತ್ತಿಗೂ ತುತ್ತು ಕೂಳಿಗೆ ಗತಿಯಿಲ್ಲದ ಮಂದಿ ಆ ಭಾಗದಲ್ಲಿದ್ದಾರ್ಎ. ಜಾತಿಯಲ್ಲಿ ಬ್ರಾಹ್ಮಣ ಅನ್ನಿಸಿಕೊಂಡರೆ ಮುಗಿತು. ಅವ ಸಮಾಜದ ಲೆಕ್ಕದಲ್ಲಿ ಶ್ರೀಮಂತನೆ! ಒಂದು ಕಾಲದಲ್ಲಿ ಇತರೆ ವರ್ಗದವರ ಪಾಡು ಹೇಗಾಗಿತ್ತೋ ಅದೇ ಪಾಡು ಇವತ್ತು ಬ್ರಾಹ್ಮಣರದ್ದಾಗಿದೆ. ಬ್ರಾಹ್ಮಣರು ಅಂದ್ರೆ ಅದೆಂತದೋ ಮೂದಲಿಕೆ. ಶತಶತಮಾನಗಳ ಕಾಲ ಬ್ರಾಹ್ಮಣರು ಇತರೆ ಜನಾಂಗವನ್ನೂ ತುಳಿದರೂ ಅದಕ್ಕೆ ಪ್ರತಿಫಲ ಇವತ್ತು ಅನುಭವಿಸುತ್ತಿದ್ದಾರೆ ಅಂತಾ ಹೇಳೋದು ತುಂಬಾ ಸುಲಭ. ಯಾಕಂದರೆ ಹಾಗೇ ಹೇಳುವವರು ದಲಿತರ ನೋವನ್ನು ಕಂಡಿರುವುದಿಲ್ಲ. ಬಡ ಬ್ರಾಹ್ಮಣರ ನೋವನ್ನು ಕಂಡಿರುವುದಿಲ್ಲ! ಆ ಬಡತನದ ನೋವನ್ನು ತೀರಿಸಿಕೊಳ್ಳಲೆಂದೇ ಬ್ರಾಹ್ಮಣರು ತಮ್ಮ ಮೂಲ ಕಸುಬಾದ ಪುರೋಹಿತ್ಯವನ್ನು ಅರೆಸಿಕೊಂಡು ಬೆಂಗಳೂರಿಗೆ ಬರುತ್ತಿರುವುದು. ಹಳ್ಳಿಗಳ್ಳಲ್ಲಿ ಪುರೋಹಿತರಿಗೆ ಬೆಲೆಯಿಲ್ಲ. ಬೆಲೆಯಿದ್ದರೂ ಸಂಪಾದನೆ ತೀರಾ ಕಡಿಮೆ. ಓದಿ ದಡ ಸೇರಲು ಓದಬೇಕಾದ ಕಾಲದಲ್ಲಿ ಹಣವಿಲ್ಲ. ಪುಕ್ಕಟ್ಟೆ ಊಟ ಮಾಡಿಕೊಂಡು ಮಠದಗಳಲ್ಲಿ ಇದ್ದುಕೊಂಡು ಕಲಿಯಬಹುದಾದ ವಿದ್ಯೆಯೆಂದರೆ ಬ್ರಾಹ್ಮಣರ ಪಾಲಿಗೆ ಪೌರೋಹಿತ್ಯ ಹಾಗಾಗಿ ಬಡತನವಿದ್ದವರೆಲ್ಲಾ ಅದರತ್ತ ಲಗ್ಗೆ ಇಟ್ಟರು. ಒಳ್ಳೆ ಸಂಪಾದನೆ ಮಾಡಲೆಂದು ಬೆಂಗಳೂರಿಗೆ ಬಂದು ದುಡಿಮೆ ಶುರು ಹಚ್ಚಿಕೊಂಡರು ಅದರಲ್ಲಿ ತಪ್ಪೆನಿದೆ? ಪುರೋಹಿತ ದುಡ್ಡು ಮಾಡೋದು ವೇದಾಂತಿಗಳ, ಬರಗಾರರ ಕಣ್ಣು ಕುಕ್ಕಿಸತ್ತೆ. ಸಾಹಿತಿಗಳ ಬಾಯಿಗೆ ಆಹಾರವಾಗತ್ತೆ ಆದ್ರೆ ಇತರರು ಎಂತೆಂತಹದೋ ಹಾದರ ಮಾಡಿ ಹಣ ಸಂಪಾದಿಸುತ್ತಿದ್ದಾರಲ್ಲಾ? ಕೆಲ ಸಾಹಿತಿಗಳು ರಾಜಕಾರಣಿಗಳ ಸುತ್ತಾ ಸುತ್ತಾಡುತ್ತಿದ್ದಾರಲ್ಲಾ ಅವೆಲ್ಲಾ ತಪ್ಪಲ್ವಾ ಅಂದರೆ ನಮ್ಮಲ್ಲಿ ಉತ್ತರವಿಲ್ಲ.
ಹೌದು ಮಲೆನಾಡಿನಲ್ಲಿ ದಲಿತರ ಉದ್ದಾರ ಮಾಡಲೆಂದೇ ನಕ್ಸಲಿಸಂ ಹುಟ್ಟಿಕೊಂಡಿದೆ! ಇವತ್ತು ಶೃಂಗೇರಿ ಸುತ್ತಾ ಮುತ್ತಲಿನ ದಲಿತರೆಲ್ಲಾ ಮೂರು ಹೊತ್ತು ನೆಮ್ಮದಿಯ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಕ್ಸಲೀಯರೇ ಕಾರಣ(ಊಟ ಮಾಡುತ್ತಿದ್ದರೆ ಮಾತ್ರ!)ಊರಿಗೊಂದು ಬಾವಿಯಾಗಿದೆ, ರಸ್ತೆಯಾಗಿದೆ, ಶಾಲೆಯಾಗಿದೆ ಅಂದರೆ ಅದೆಲ್ಲಾ ನಕ್ಸಲೀಯರ ಶ್ರಮದ ಫಲ! ಇನ್ನೂ ದಲಿತ ಸಂಘರ್ಷ ಸಮಿತಿ, ದಲಿತ್ತೋದ್ದಾರಕ ಸಮಿತಿ.....ಹೀಗೆ ಹತ್ತಾರು ಸಂಸ್ಥೆಗಳು ದಲಿತರ ಒಳಿತಿಗಾಗಿ ದನಿ ಎತ್ತುತ್ತಿವೆ. ಅದೆಲ್ಲಕ್ಕಿಂತಾ ಮುಖ್ಯವಾಗಿ ಅನೇಕ ಸಾಹಿತಿಗಳು ದಲಿತರ ಪರ ಅನುಕಂಪದ ಮಾತಾಡುತ್ತಾ, ಕೃತಿ ರಚಿಸುತ್ತಾ ತಾವು ಗಳಿಸಿದ ಹಣದಲ್ಲಿ ಅವರಿಗೆ ಅರ್ಧ ನೀಡುತ್ತಾ ಇದ್ದಾರೆ! ಆದರೆ ಮಲೆನಾಡಿನ ಬಡ ಬ್ರಾಹ್ಮಣರ ಪರವಾಗಿ ಯಾರಿದ್ದಾರೆ. ದಲಿತರು ಬ್ರಾಹ್ಮಣರನ್ನು ನಿಂದಿಸುವುದಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣರೇ ಬ್ರಾಹ್ಮಣರನ್ನು ನಿಂದಿಸುತ್ತಾರೆ ಅದೆಂತದೋ ಒಂತರಹ ಜ್ಞಾನೋದಯವಾಗಿ!(ಬ್ರಾಹ್ಮಣರ ವಿರೋದಿ ಅಲೆ ತಪ್ಪು ಅಂತಾ ನಾನು ಇಲ್ಲಿ ಹೇಳುತ್ತಿಲ್ಲ. ದಲಿತ ಉದ್ದಾರ ಅನ್ನೋದು ಭಾಷಣಕ್ಕೆ ಮಾತ್ರ ಸೀಮಿತ. ಇವತ್ತಿಗೂ ಮಲೆನಾಡು ಭಾಗದಲ್ಲಿ ದಲಿತರು ಕಷ್ಟದ ಜೀವನ ನಡೆಸುತ್ತಿದ್ದಾರೆ. ದಲಿತರ ಹೆಸರು ಹೇಳಿಕೊಂಡು ಅವರ ಮೇಲೆ ಅನುಕಂಪ ತೋರುವ ನಾಟಕ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವವರು ಗಿಟ್ಟಿಸಿಕೊಳ್ಳುತ್ತಲೇ ಇದ್ದಾರೆ. ಆ ಬೇಸರದ ನುಡಿಗಳು ಮೇಲಿನವು. ಬಡವನಾದವ ಬ್ರಾಹ್ಮಣನಾದರೂ ಅಷ್ಟೇ, ದಲಿತನಾದರೂ ಅಷ್ಟೇ ಅವನ ಪಾಲಿಗೆ ಬೆನ್ನೆಲ್ಲಾ ಹೊಟ್ಟೆಯೇ!)
ಹೀಗೆಲ್ಲಾ ಅವಲೋಕಿಸಿದಾಗ ಪುರೋಹಿತರು ಮಾಡುತ್ತಿರುವುದು ಸರಿ ಅನ್ನಿಸತ್ತಾದರೂ ಯಾರ್ಯಾರೋ ಎಂತೆತಹದ್ದೋ ಹಾದರ ಮಾಡುತ್ತಾರೆ ಅಂತಾ ದೇವರ ಹೆಸರಿನಲ್ಲು ಹಣಸುಲಿಗೆ ಮಾಡುವುದು ಸರಿಯಲ್ಲ. ದೇವರು ಭಾವದ ಒಂದು ಪ್ರತೀಕ ಹೊರತು ಮಾರಾಟದ ಸರಕಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದ ಮೇಲೆ ಇನ್ನೆನೂ ಮಾಡೋದು ಅದು ಬಡಬ್ರಾಹ್ಮಣನಾಗಿ.....! ಅಂದರೆ ನನ್ನ ಮಟ್ಟಿಗಂತೂ ಉತ್ತರವಿಲ್ಲ. ವೈಚಾರಿಕವಾಗಿ ದೇವರನ್ನು ಮಾರಾಟದ ಸರಕನ್ನಾಗಿಸೋದು ತಪ್ಪು. ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ ಹೊರತು ಶಂಕರ ಭವತಿ ಶಿಲಾ ಆಗಬಾರದು ಅಲ್ವಾ? ಆದ್ರೆ ದೇವರು ಎಂಬುದು ಹಣ ಮಾಡೋ ಸರಕಾದರೆ ಶಂಕರನೂ ಶಿಲೆ ಅನ್ನಿಸಿಬಿಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ. ಇಂತಹದೊಂದು ಸಮಸ್ಯೆ ತಪ್ಪಿಸಲು ಏನು ಮಾಡಬಹುದು ಅನ್ನೋದನ್ನಾ ನೀವೆ ತಿಳಿಸಿ.

- vinayaka ರವರ ಬ್ಲಾಗ್
- Login or register to post comments
- 601 hits
- Email this blog




RSS:
ಪ್ರತಿಕ್ರಿಯೆಗಳು
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಯಾರು ಸರಿನೋ ಯಾರು ತಪ್ಪೋ ಒಂದು ಅರ್ಥ ಆಯ್ತಾಯಿಲ್ಲ.. ಮನ್ಸ್ಯಾ ಮನ್ಸ್ಯನ್ ಮಾಲೆ ಅದು ಯಾಕಿಂಗಾಡತಾರೋ ನಾಕಾಣೆ.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಗುಱುಱಾಜ
www.kannadaguru.blogspot.com
ತಮ್ಮ ಮಾತು ನಿಜ ವಿನಾಯಕ ನಾನು ಕೂಡಾ ಯಲ್ಲಾಪುರದವನು.ನನ್ನ ಜೊತೆ ಓದಿದ ಎಷ್ಟೋ ಬಡ ಬ್ರಾಹ್ಮಣರ ಮಕ್ಕಳು ಅದ್ಭುತ ಪ್ರತಿಭಾವ೦ತರಾಗಿದ್ದರೂ,ಹಣಕಾಸಿನ ತೊ೦ದರೆಯಿ೦ದ ಹತ್ತನೇ ತರಗತಿ ಅಥವಾ ಪದವಿ ಪೂರ್ವ ತರಗತಿಗಳಲ್ಲೇ ವಿಧ್ಯಾಭ್ಯಾಸ ನಿಲ್ಲಿಸಿದ್ದನ್ನು ನೋಡಿದ್ದೇನೆ.ಆಗೆಲ್ಲಾ ಇವರು ಪೌರೋಹಿತ್ಯದಿ೦ದ ಸ೦ಪಾದಿಸಿದರೇ ತಪ್ಪಿಲ್ಲ ಬಿಡು ಅನ್ನಿಸಿದ್ದಿದೆ.
ಆದರೆ ಬೆ೦ಗಳೂರಿನ ಪುರೋಹಿತವರ್ಗ,ಇಸ್ಕಾನ್,ಮ೦ತ್ರಾಲಯದ೦ತಹ ಪುರೋಹಿತವರ್ಗ ನೋಡಿದಾಗ,"ಛೀ" ಎನಿಸುತ್ತದೆ.(ನೀವು ನ೦ಬಲಿಕ್ಕಿಲ್ಲ,ಮ೦ತ್ರಾಲಯದಲ್ಲಿ ಆರತಿ ತಟ್ಟೆ ಹಿಡಿದು ಬರುವ ಪೂಜಾರಿ ’ಭಟ್ಟರಿಗೆ ದಕ್ಷಿಣೆ ಕೊಟ್ಟು ಆರತಿ ತೆಗೆದುಕೊಳ್ಳಿ’ ಎ೦ದೇ ಹೇಳುತ್ತಾನೆ! ಇನ್ನೂ ಇಸ್ಕಾನ್ ಅದೊ೦ದು ದೇವಸ್ಥಾನ ಎನ್ನುವುದಕ್ಕಿ೦ತ ಫ್ಯಾಬ್ ಮಾಲ್ ಎನ್ನುವುದೇ ಉತ್ತಮ)
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ತನ್ನಾಶ್ರಯದ ರತಿ ಸುಖವನು , ತಾನುಂಬ ಊಟವನು ,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ ?!
ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ಹೊಬ್ಬರ ಕೈಯಲ್ಲಿ ಮಾಡಿಸಬಹುದೆ!!
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ !
ಉಂಡೂ ಹೋದ, ಕೊಂಡೂ ಹೋದ.
ಏನೂ ಲಾಭ ಇಲ್ಲ... ಸುಮ್ನೆ ಲಾಸು....
ಜನ ಯಾವಾಗ ಎಚ್ಚರ ಆಗ್ತಾರೋ ?
ಸವಿತೃ
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಲೇಖನ ಪೂರ್ತಿ ಓದಿದ್ರಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಬರಹ ದೊಡ್ಡದಾಗಿದೆ ಇನ್ನೂ ಪೂರ್ತಿ ಓದಿಲ್ಲ;
ಸವಿತೃ,
ಕರ್ಮಠ ತತ್ವದಲ್ಲಿ ಆಚಾರ್ಯ/ಪುರೋಹಿತ ಅನ್ನೋನು ಬೇಕು.. ಏಕೆಂದ್ರೆ ಎಲ್ಲರೂ ವೇದಾಗಮಶಾಸ್ತ್ರಗಳನ್ನು ಓದಲಾಗಲ್ಲ.. ! ಅಂತ ಯಾರೋ ಹೇಳಿದ್ದು ಕೇಳಿದ್ದೀನಿ...
ಇನ್ನ ಲಿಂಗಾಯತ ದರ್ಮದೋರು ನಂಬದೇ ಇರಬೋದು.. ಅದು ಅವತ ತತ್ವ...
ಆದರೆ ಗುಡಿಗೆ ಹೋಗಿ, ಒಂದು ರೂಪಾಯಿ ಮಂಗಳಾರತಿ ತಟ್ಟೆ ಹಾಕಿ, ಧನ್ಯಭಾವವನ್ನು ಭಕ್ತಿಯನ್ನು ಅನುಭವಿಸುವವರೂ ಇದ್ದಾರೆ...
ಅವರಿಗೆ ಭಕ್ತಿಯ ಅನುಭವ ಸೇವೆಗಳಿಂದ, ಅರ್ಚನೆ, ಹೋಮಗಳಿಂದ ಸಿಗುವುದು.. ಅದು ಅವರ ವಿಧಾನ..
ಹಾಗಂತ ಅದನ್ನೆಲ್ಲ ನಂಬದ ನಾವು ನೀವು ಹೋಗಿ ಬೋಳಿಸಿಕೊಳ್ಳೋದು ಬೇಡ!
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಪುರೋಹಿತರು ಬೆಂಗಲೂರಿನಲ್ಲಿ ಮಾತ್ರ ಹಣ ಮಾಡುತ್ತಾರೆ ಅನ್ನೋದು ಸರಿಯಲ್ಲ.ನಮ್ಮ ಕಡೇ 'ಅಷ್ಟ ಮಂಗಳ' ಎಲ್ಲಾ ಜೋರಾಗಿಯೇ ನಡೆಯುತ್ತದೆ..ಅದಕ್ಕೆ ಕೇರಳದ ಕೆಲವು ಸ್ಪೆಶಲಿಸ್ಟುಗಳ ಬರುತ್ತಾರೆ!ಇದೆಲ್ಲಾ ಸಾವಿರ ರೂಪಾಯಿಗಳ ವ್ಯವಹಾರ!ಸರಿಯೋ ತಪ್ಪೋ ಗೊತ್ತಿಲ್ಲ. ನಂಬುವವರಿದ್ದಾರೆ, ಹಣ ಕೊಡುವವರಿದ್ದಾರೆ.
ನಾನು ಗುಡಿಗಳಿಗೆ ಹೋಗುವುದಿಲ್ಲ.ಹೋದರೂ ಎಲ್ಲರೂ ಕೊಡುತ್ತಾರೆ ಅಂತ ೧ ರೂಪಾಯಿ ಕೋಡುತ್ತೇನೆ!
"ಆದರೆ ಹೊಟ್ಟೆಗೆ ಹಿಟ್ಟಿಲ್ಲದ ಮೇಲೆ ಇನ್ನೆನೂ ಮಾಡೋದು ಅದು ಬಡಬ್ರಾಹ್ಮಣನಾಗಿ.....!"
ಬಹುಶಃ ಬೇರೆಯವರು (ಬ್ರಾಹ್ಮಣರಲ್ಲದವರು) ಏನು ಮಾಡುತ್ತಾರೋ ಅದನ್ನು ಮಾಡಬಹುದು.ಅಥವಾ ಬ್ರಾಹ್ಮಣರಲ್ಲದವರು ಹೊಟ್ಟೆಗೆ ಹಿಟ್ಟಿಗಾಗಿ ಪುರೋಹಿತರಾಗಬಹುದೇನೋ! ಪುರೋಹಿತರಾಗಲು ಬಿಟ್ಟರೆ.
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ನನಗೆಷ್ಟೊ ಬಾರಿ ಅನ್ನಿಸಿರುವುದು, ಈ ದೇವಸ್ಥಾನಗಳನ್ನು ಅನಾಥಾಶ್ರಮಗಳನ್ನಾಗಿ ಪರಿವರ್ತಿಸಿದರೆ ಬಡಮಕ್ಕಳಿಗೆ ಆಶ್ರಯವಾದರೂ ಸಿಗುತ್ತೆ ಅಂತ. ಆದರೆ ದೇವಸ್ಸ್ಥಾನಕ್ಕೆ ಬರುವ ಜನಸಂದಣಿ ನೋಡಿದ್ರೆ, ಅವರೆಲ್ಲ ದೇವಸ್ಥಾನಗಳಿಲ್ಲದೆ ಬದುಕಲಾರರು
ನನ್ನ ಪ್ರಕಾರ ಪುರೋಹಿತರನ್ನು ನಾವು ದೇವರ ನಿಕಟವರ್ತಿಗಳು ಅಂತ ಗೌರವಿಸೋದು ತಪ್ಪು. ಬದಲಿಗೆ ಅವರನ್ನು ದಳ್ಳಾಳಿಗಳು ಅಂತ ತಿಳಿದರೆ, ದುಡ್ಡು ಕೊಡಲು ಬೇಜಾರಾಗುವುದಿಲ್ಲ. ಅದೂ ಒಂದು service industry. ಪುರೋಹಿತ, ಕ್ಷೌರಿಕರ ಹಾಗೆ, ಮಾಲಿಯ ಹಾಗೆ, ನಮಗೆ ಪೂಜೆ ಮಾಡಿಕೊಡುವ ವ್ಯಕ್ತಿ. ನಿಮಗೆ ಇದರಲ್ಲಿ ನಂಬಿಕೆ ಇಲ್ಲದಿದ್ದರೆ, ನೀವೇ ಹೇಗೆ ಬೇಕೋ ಹಾಗೆ ದೇವರಿಗೆ ಮನೆಯಲ್ಲಿ ಪೂಜೆ ಮಾಡಬಹುದಲ್ವೆ? ಬದಲಿಗೆ ಪುರೋಹಿತರನ್ನು ಬಳಸಿದ ಮೇಲೆ ಅವರಿಗೆ compensate ಮಾಡುವುದು ತಪ್ಪು ಅಂದರೆ, ಮನೆಕೆಲಸ ಮಾಡಿಸಿಕೊಂಡು ನಂತರ ಕೆಲಸದಾಕೆಗೆ ದುಡ್ಡು ಕೊಡುವುದೂ ತಪ್ಪಾಗುತ್ತದೆ!
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ವಿನಾಯಕರೇ, ಎಲ್ಲರೇ..
೧) ದೇವರು ಅನ್ನೋದು ಇದೆ. ಅದನ್ನ ನಂಬಬೇಕು.. ಅದನ್ನು ಅರಿವ ಬಲ್ಮೆ ನಮ್ಮಲ್ಲಿ ಇಲ್ಲ...ಈಗ ಗಟ್ಟಿಯಾಗಿ ನಂಬಿರುವ ಮನ್ಸ.. ನೆಲದ ಮೇಲೆ ನಿಂತು ನಾನು ನೀರಿನಲ್ಲಿ ಇದ್ದೀನಿ, ಅದಕ್ಕೆ ಈಜಬೇಕು, ಇಲ್ವೇ ದೋಣಿಹಿಡಿಯಬೇಕು ಎಂದು ಭ್ರಾಂತಿಗೊಂಡು ಇಲ್ಲದ ಶ್ರಮಪಟ್ಟಂತೆ.
ಮೊದಲಿಗೆ ದೇವರು ಇದೆಯಾ, ಇಲ್ವಾ.. ಅನ್ನೋದನ್ನು ಪೂರ್ತಿ ತಿರ್ಮಾನ ಮಾಡಿ ಬಳಿಕ ಅದರ ಪೂಜೆ-ಗೀಜೆ..
ಯಾರಿಗೆ ದೇವರು ಇಲ್ಲವೇ ಇಲ್ಲ ಅನ್ನುವ ನಂಬಿಕೆ ಬರುವುದೋ, ಅವನೆಂದೂ ದೇವರಿಗಾಗಿ[ಅದನ್ನ ದೇವರ ಹೆಸರಲ್ಲಿ ಅನ್ನೋದು ಒಂದೇ] ನಡೆಯುವ ಎಲ್ಲವನ್ನು ಹುಂಬತನ ಅಂತ ಸುಮ್ಮನಿರ್ತಾನೆ
ಯಾರಿಗೆ ದೇವರಲ್ಲಿ ಪೂರ್ಣ ನಂಬಿಕೆ ಇದೆ.. ಅವನು ದೇವರಿಗೆ ನಂಟಾದ ಯಾವುದನ್ನೂ ಪ್ರೆಶ್ನಿಸಲ್ಲ.. ಅದು ಅವನ ನಂಬಿಕೆಯನ್ನೇ ಪ್ರಶ್ನಿಸಿದಂತೆ.. ಅಂದ್ರೆ ಅವನಿಗೆ ಪೂರ್ಣ ನಂಬಿಕೆ ಇಲ್ಲ..
೨) ಬ್ರಾಹ್ಮಣರು, ದಲಿತರು..
ಜಗತ್ತಲ್ಲಿ ಬ್ರಾಹ್ಮಣರೂ ಇಲ್ಲ ದಲಿತರೂ ಇಲ್ಲ.. ಇರುವವರೆಲ್ಲ ಅವಕಾಶ ಸಿಕ್ಕಿದಾಗ ದೋಚುವವರು..
ಅವರವರ ಅವಕಾಶ ಅವರವರ ದೋಚು, ಮೋಜು...
ಇನ್ನು ಬ್ರಾಹ್ಮಣರನ್ನು ಬಡವತನದಲ್ಲಿರು ಎಂದೇನಿಲ್ಲ ದುಡಿಯಲು ಬೇಕಾದಶ್ಟು ಕೆಲಸಗಳೂ, ದಾರಿಗಳೂ ಇವೆ. ಅದು ಮಲೆನಾಡಿನ ಬ್ರಾಹ್ಮಣರಿಗೆ, ಬೆಂಗಳೂರಿನ ಪುರೋಹಿತರಿಗೆ ಸೀಮಿತವಲ್ಲ..
೩)ಪಾಪಾ ಬಡಬ್ರಾಹ್ಮಣ ಪುರೋಹಿತತನ ಅನ್ನೋ ಕಪಟ, ಮೋಸದಿಂದ ಬದುಕಿದರೇ, ಪಾಪಾ ತಪ್ಪೇನು.. ಈ ಮಾತಿದೆಯಲ್ಲ..
.. ಬ್ರಾಹ್ಮಣರನ್ನು ಅವರ ಕುಲಗಳನ್ನು ಹಾಳುಮಾಡುವ ಮಾತು..
ಹಾಗಾದರೆ ಬೇರೆ ಜಾತಿಯವರು ಬಡತನ ಎಂದು ಕಪಟ, ಮೋಸ ಮಾಡಬೋದೆ...?
ಬ್ರಾಹ್ಮಣರಿಗೆ ತಲೆತಲಾಂತರದಿಂದ ಬಂದಿರುವ ಮಾತಿನ ಜಾಣ್ಮೆ, ಯೋಚನೆ, ಸಂಸ್ಕೃತ, ವ್ಯಾಕರಣ ಇದೆ.. ಇದನ್ನೇ ಸರಿಯಾಗಿ ಬಳಸಿಕೊಂಡು ಕಪಟವಿಲ್ಲದ, ಮೋಸವಿಲ್ಲದ ಕೆಲಸದಿಂದೇ ಹಣಗಳಿಸಬೋದು..
ಅದಕ್ಕೆ ಸಾಪ್ಟ್ವೇರಲ್ಲಿ ಬ್ರಾಹ್ಮಣರು ತುಂಬಿಕೊಂಡಿಲ್ವೇ?ಆ ಕ್ಶೇತ್ರಕ್ಕೆ ಬಂದೋರಲ್ಲಿ ಹಲವರು ಬಡಕುಟುಂಬದವರೇ..!!
ನಿಮ್ಮ ಬರಹದಲ್ಲಿ ಬಡಬ್ರಾಹ್ಮಣರ ಮೇಲಿನ ಕನಿಕರ ಹೇಯ.. ನನಗೆ ಮೋಸ ಮಾಡೋದು ಬಿಟ್ಟು ಬೇರೆ ಕೆಲಸ ಬರಲ್ಲ ಅಂದ ಹಾಗೆ ಆಯ್ತು.!
ಪುರೋಹಿತತನದಲ್ಲಿ ಎಲ್ಲರೂ ಮೋಸ ಅಂತ ಹೇಳೋದು ತಪ್ಪು.
೪)ಬ್ರಾಹ್ಮಣರು ITTIAM
I think, therefore I am . ಅವರು ಬದುಕಲು ಬಲ್ಮೆ ಅವರ ತಲೆ, ಯೋಚನೆ. ಬೇರೆಯವರು IWIAM
I work, therefore I am.
ಅದ್ಯಾಕೋ ಜಗತ್ತಲ್ಲಿ ಹೆಚ್ಚು ITTIAMಗಳೇ ಮೆರೆಯೋದು, ಹೆಚ್ಚೆಚ್ಚು ದುಡ್ಡುಮಾಡೋದು.!
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ನಿಮ್ಮ ೧) ಗೆ ನನ್ನ ಪ್ರತಿಕ್ರಿಯೆ - ದೇವರು ಎನ್ನುವ ಅಗೋಚರ ಶಕ್ತಿಯಲ್ಲಿ ನಂಬಿಕೆ ಇದ್ದು ದೇವರ ಪ್ರತಿಮೆಯಲ್ಲಿ ನಂಬಿಕೆ ಇಲ್ಲದೆ ಇರಬಹುದಲ್ವೆ? ಆಗ ಆಚಾರ, ಮಡಿ, ಪೂಜೆ ಇವನ್ನು ಪ್ರಶ್ನಿಸಬಹುದಲ್ವೆ?
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ದೇವರಲ್ಲಿ ನಂಬಿಕೆ ಇದ್ದು.. ಅದು ಎಲ್ಲಬಲ್ಲ/ಸರ್ವಶಕ್ತಿ ಎಲ್ಲವರಿವ/ಸರ್ವಜ್ನಾತ ಅಂತ ನಂಬಿಕೆ ಇದ್ದರೆ...
ಆಚಾರ, ಮಡಿ, ಪೂಜೆ ಇವನ್ನು ದೇವರೇ ಬಕುತ ಒಳಿತಿಗೆ ಸರಿಪಡಿಸಬೇಕಿತ್ತು... ಬಕುತನದು ಬಕುತಿ ಅಶ್ಟೇ ಕೆಲಸ...
ದೇವರ ಸೃಷ್ಟಿ ಯಾವುದಾದರೇ ಆಗಲಿ, ಪೂಜೆ, ಆಚಾರ, ಮಡಿ ಇವು ಕೂಡ, ಪ್ರಶ್ನಿಸುವುದು ದೇವರಲ್ಲಿ ನಂಬಿಕೆಯ ಕೊರತೆ..
ಆ ಕೊರತೆಯ ಬಕುತಿಯನ್ನು ಮತ್ತೊಂದು ಮತ ಮಾಡಿಕೊಂಡ್ರೆ, ಅದು ಬೇರೆ ಸಂಗತಿ!
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಕ್ಷಮಿಸಿ, ನನಗೆ ಒಪ್ಪಲಾಗುತ್ತಿಲ್ಲ. ನನ್ನ ಮಟ್ಟಿಗೆ, ದೇವರಲ್ಲಿ ನಂಬಿಕೆ ಬೇರೆ, ದೇವರ ಪೂಜೆ,ಜಪ,ತಪದಲ್ಲಿ ನಂಬಿಕೆ ಬೇರೆ. ದೇವರ ಇರುವಿಕೆಯಲ್ಲಿ ನಂಬಿಕೆ ಇಟ್ಟ ಮಾತ್ರಕ್ಕೆ, ಅವನನ್ನು ಆರಾಧಿಸುವ ಬಗೆಯಲ್ಲೂ ನಂಬಿಕೆ ಇರಿಸಬೇಕೆಂದೇನಿಲ್ಲ. ಹಾಗಾದರೆ, ಮಾರಮ್ಮನನ್ನು ಪೂಜಿಸಲು ಕುರಿಬಲಿ, ದುರ್ಗಿಯನ್ನು ಪೂಜಿಸಲು ನರಬಲಿ- ಇವನ್ನೆಲ್ಲ ಪ್ರಶ್ನಿಸುವವರಿಗೆ ದೇವರಲ್ಲಿ ನಂಬಿಕೆ ಇಲ್ಲವೆಂದೇನು?
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಒಪ್ಪದೇ ಇರೋದು ನಿಮ್ಮ ಹಕ್ಕು.. ಅದಕ್ಕೆ ಕ್ಶಮೆ ಯಾಕ್ರೀ..
ನೀವು ನಂಬುತ್ತಿರುವ ದೇವರುಗಳು ಬೇರೆ ಬೇರೆ ಆಗಿದೆ.. ಅದಕ್ಕೆ ನಿಮ್ಮ ನಿಮ್ಮ ದೇವರುಗಳ ಬೆನ್ ಪಡೆ ಕಟ್ಟಿಕೊಂಡಿದ್ದೀರಿ...
ನೀವು ಮಾರಮ್ಮನಿಗೆ ಕುರಿಬಲಿ ಸಲ್ಲದು ಎಂದರೆ, ಮಾರಮ್ಮನ ಬಕುರು ನಿಮ್ಮ ಆಚರಣೆಯನ್ನು ತಪ್ಪು ಅನ್ನುವರು.
ದೇವರು ಅನ್ನೋದು ಬರೀ ನಂಬಿಕೆ, ಅದೂ ತೋರಲಾಗದ, ಇಂದ್ರಿಯಕ್ಕೆ ಗ್ರಾಹ್ಯಿಸಲಾಗದ, ಸಂಗತಿಯನ್ನು ಕಣ್ಮುಚ್ಚಿ ’ಇದೇ ಇದೇ’ ಎಂದು ನಂಬಿರುವಾಗ ಎಲ್ಲವು ಸರಿಯೇ.. ಅವರವರ ದೇವರ ರೂಪ ಅವರವರ ನಂಬಿಕೆಯಂತೆ.... ಮರುಳಿನ ಬಗೆಬಗೆ ಬಗೆಗಳು.
ನನ್ನ ಪ್ರಕಾರ ಬಲಿಯೂ ಒಪ್ಪಬೇಕಾದುದೇ.. ಈಗ ಮಾರಮ್ಮನೇ ಎಲ್ಲವನ್ನು ಸೃಷ್ಟಿಸಿರುವಾಗ, ಎಲ್ಲ ತನ್ನ ಸೃಷ್ಟಿಯ ಮೇಲೂ ಸರ್ವಾಧಿಕಾರವಿರುವಾಗ, ’ತೇನ ವಿನಾ ತೃಣಮಪಿ ನ ಚಲತಿ’ ಅಂತ ನಂಬಿಕೆ ಇರುವಾಗ, ಮಾರಮ್ಮನೇ ಯಾಕೆ ಬಕುತರಿಗೆ ಆ ಕುರಿ ಮುಕ್ತಿ ನೀಡುವ ಸದ್ಬುದ್ಧಿ ನೀಡಿರಬಾರದು.. ಆ ಕುರಿ ಮುಂದೇ ಯಾವ ನೋವಿಂದ ನರಳಿ ಸಾಯ್ತಿತ್ತೋ ನಾವು ತಿಳಿದವರೇ!
ಸಸ್ಯಾಹಾರಿಗಳೂ ಹೀಗೆ ಅಂದುಕೊಳ್ಳೋದು. ಮಾಂಸ ತಿನ್ನೋರು ದೇವರಿಂದ ದೂರ ಅಂತ.!
ಅದೂ ಒಂದು ಬಗೆಯಲ್ಲಿ ನನ್ ದೇವರು ದೊಡ್ಡದು ನಿನ್ನದಲ್ಲ.... [ ಇಬ್ರು ಮಕ್ಕಳೂ ಹೀಗೆ ಜಗಳ ಕಾಯ್ತಾರೆ, ನನ್ನ ಗೊಂಚೆ ಚಂದ, ನಿನ್ನದಲ್ಲ ಅಂತ ]
ದೇವರು ಅನ್ನೋದು ಬರೀ ನಂಬಿಕೆ ಮತ್ತು ಆ ನಂಬಿಕೆಗೆ ಕಾರಣ ಅನ್ನೋದೇ ಇಲ್ಲ..!!
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ನೀವು ಎಲ್ಲಿಂದಲೋ ಎಲ್ಲಿಗೋ ರೈಲು ಬಿಟ್ಕೊಂಡು ಹೋದ್ರಿ ಬಿಡಿ
ಸಾವಕಾಶವಾಗಿ ಕೂತು ಒಂದು ದಿನ ಚರ್ಚೆ ಮಾಡೋಣ, ಈಗ bandwidth ವ್ಯಯಿಸಿ ಪ್ರಯೋಜನವಿಲ್ಲ!
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಸರಿ.. ಆ ಸ ಅವಕಾಶ ಬೇಗಲೇ ಸಿಗಲಿ..
ಕ್ರಿಕೇಟ್ ಆಡ್ತಾ ಇರೋದು ನೀವಾ?
ಇಲ್ಲಿ ಬ್ಯಾಡ್-ವಿಡ್ತ್ ಬಿಟ್ಟಿ
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಮಾಯ್ಸ,
ಬಸವಣ್ಣನವರ ಒಂದು ವಚನವಿದೆ.
"ಕಾಸಿ ಕಮ್ಮಾರನಾದ
....
ವೇದವನೋದಿ ಹಾರುವನಾದ"
ವೇದವೋದುವುದು ಹಾರುವರ ಕುಲಕಸುಬು ಅಂತ ಬಸವಣ್ಣನವರ ಕಾಲದಲ್ಲೆ ಇತ್ತು. ಅದನ್ನು ಅವರು ಮುಂದುವರೆಸಲಿ ಬಿಡಿ ತಪ್ಪೇನು?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಬಸವಣ್ಣ ಹೇಳಿದ್ದು...
ವೇದವನೋದಿದವನು ಹಾರುವನಾದ... ಎಂದು ತಿಳಿಯಬೇಕು..
ಆಗ ಯಾರು ಬೇಕಾದರೂ ವೇದ ಓದಿ ಬ್ರಹ್ಮಚಿಂತನೆ ಮಾಡುವ ಬ್ರಾಹ್ಮಣರಾಗಬೋದು..
ಇದೇ ಬಸವಣ್ಣನವರು ಮಾತಿನ ತಿರುಳು ಎಂದು ನನ್ನ ಎಣಿಸು.
ಏಕೆಂದ್ರೆ.
ಬಸವಣ್ಣ ಹುಟ್ಟಿನಿಂದ ಬಂದ ವರ್ಗ/ವರ್ಣವನ್ನು ಒಪ್ಪದೇ, ಅಲ್ಲಗಳೆದು.. ಕಾಯಕಧರ್ಮ( ನಾವು ಮಾಡುವ ಕೆಲಸದಿಂದ ವರ್ಣ)ವನ್ನು ಸಾರಿದವರಲ್ವ?
ಇನ್ನು ವೇದವನ್ನು ಓದೋದು ಕಸುಬೇ? ವೇದ ಓದಿದೋರೆಲ್ಲ ಪುರೋಹಿತರಾಗಬೇಕೇ?
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ನಮಸ್ತೇ
ಈ ವಿಚಾರವನ್ನು ಈ ಪರಿ ಚರ್ಚಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಿನ್ನೆ ಮೊನ್ನೆ ನಾನು ಒಂಚೂರು ಬ್ಯುಸಿ ಇದ್ದುದ್ದರಿಂದ ಚರ್ಚೆಯಲ್ಲಿ ಪಾಲ್ಗೊಳಲ್ಲು ಸಾಧ್ಯವಾಗಲಿಲ್ಲ ಕ್ಷಮೆ ಇರಲಿ
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
@ಮಹೇಶ್,
ಮಹೇಶರೇ ತಾವು ಲೇಖನವನ್ನು ಸರಿಯಾಗಿ ಅರ್ಥೈಸಿಕೊಂಡಂತೆ ತೋರುತ್ತಿಲ್ಲ. ನಾನು ಬ್ರಾಹ್ಮಣ ಬಡವ ಅಂತಾ ಮೋಸ ಮಾಡಬೇಕು ಅಂದಿಲ್ಲ. ಹಾಗಿದ್ದರೆ ಪುರೋಹಿತರನ್ನು ಪುಡಾರಿಗಳು ಅಂತಾ ಸಂಭೋದಿಸುತ್ತಿರಲಿಲ್ಲ. ಒಂದು ವಿಚಾರ ತಿಳಿದುಕೊಳ್ಳಿ ಇಂದು ಪ್ರತಿಷ್ಠಿತ ಕ್ಷೇತ್ರದಲ್ಲಿನ ಉನ್ನತ ಹುದ್ದೆಯಲ್ಲಿರುವ ಬಹುಮಂದಿ ಬ್ರಾಹ್ಮಣರೆ. ಇತರೆ ವರ್ಗಕ್ಕೆ ಮೀಸಲಾತಿನೀಡಿದರೂ ಕೂಡಾ! ಇಲ್ಲಿ ನಾನು ಜಾತಿಯನ್ನು ಎತ್ತಿಕೊಂಡು ವಾದಮಾಡಲು ಬಯಸುವುದಿಲ್ಲ. ಸಮಸ್ಯೆಯ ಕುರಿತಾದ ವಾದಕ್ಕೆ ತಾವು ಒಗ್ಗಿಕೊಂಡರೆ ಚೆನ್ನಾಗಿತ್ತು.
ಇಂತಿ ವಿನಾಯಕ
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಸರಿ ....
ನಿಮ್ಮ ಬರಹ ಒಂದು ನಿಲುವಿನಲ್ಲಿ ನಿಂತಿಲ್ಲ.. ಬರೀ ಗೊಂದಲ.. ಅಂತ ನನಗೆ ಅನ್ನಿಸಿದೆ..
ನೀವು ಏನನ್ನೋ ಹೇಳಲು ಹೋಗಿ ಏನೋ ಹೇಳಿ ಮುಗಿಸಿದ್ದೀರಿ...
ಇರಲಿ.. ನನಗೆ ಅರ್ತ ಆಗದೇ ಇರಲೂ ಬೋದು... ಅದು ಅಲ್ಲಗೆಳೆಯುವಂತಿಲ್ಲ ದಿಟ...!!
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಯಾಕ್ರಿ ಹಾಗೆಲ್ಲ ಕೇಳಿ ನನ್ನ ಹೊಟ್ಟೆ ಉರಿಸ್ತೀರ? ನಾನು ಬರೆಯೋದು ಅಡುಗೂಲಜ್ಜಿ ತರ ಇರಬಹುದು ಆದ್ರೆ ಅಷ್ಟು ವಯಸ್ಸಾಗಿಲ್ಲ ಕಣ್ರಿ! ಇರ್ಲಿ, ನಾನು ಅದನ್ನು ನನ್ನ ಜ್ಞಾನಶಕ್ತಿಯನ್ನು ಮೆಚ್ಚಿ ನೀವು ಮಾಡಿದ ಕಾಮೆಂಟ್ ಅಂತ ಪರಿಗಣಿಸ್ತಿನಿ
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಪ್ರತಿಕ್ರಿಯೆ ಮಹೇಶನ ಕಾಮೆಂಟ್ ಕೆಳಗೇ ಬರಬೇಕಿತ್ತು (ಆಯಾ ಕಾಮೆಂಟಿನಲ್ಲಿರುವ ಪ್ರತಿಕ್ರಿಯೆ ಸೇರಿಸಿ ಆಯ್ಕೆಯನ್ನೇ ಕ್ಲಿಕ್ ಮಾಡ್ಬೇಕು).
ಅದೇನೆ ಇರಲಿ, ಬೇಗ ನಿಮ್ಮ ಚಿತ್ರ ಬದಲಾಯಿಸಿಬಿಡಿ. ಮತ್ತಷ್ಟು ಜನ ನಿಮ್ಮನ್ನು ವಯೋವೃದ್ಧರನ್ನಾಗಿಸೋಕೆ ಮುಂಚೆ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ನಾನ್ ಹಾಗೇ ಮಾಡಿದ್ದು. ಆದ್ರೆ, ಮಹೇಶರವರು ಮಾಡಿದ more recent ಕಾಮೆಂಟ್ ಕೆಳಗೆ ಬಂದ್ಬಿಡ್ತು. ಈಗ್ನೋಡಿ, ನೀವು, ನಿಮ್ಮ ಅ.ಚಿ.ಕ. ಲೇಖನದಲ್ಲಿ ನನ್ನ ಕಾಮೆಂಟಿಗೆ ಪ್ರತಿಕ್ರಿಯಿಸಿದ್ದೀರಲ್ವೆ? ಆದರೆ, ಅದು ನನ್ನ ಕಾಮೆಂಟ್ ಕೆಳಗೆ ಬಂದಿಲ್ಲ! ಯಾರೋ QA ಸರಿಯಾಗಿ ಮಾಡಿಲ್ಲ?
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಇಲ್ರೀ. ಅಮರಚಿತ್ರಕಥೆ ಕುರಿತ ಲೇಖನದಲ್ಲಿ ಸರಿಯಾಗಿಯೇ ಇದೆ. ಇಲ್ಲಿ ನೋಡಿ:
http://sampada.net/files/images/sampada-comments-hierarchy.png
ಇದು ಸಂಪದದಲ್ಲಿ ಕಾಮೆಂಟುಗಳು ಹೇಗೆ ಜೋಡಿಸಲ್ಪಡುತ್ತವೆ ಎಂಬುದು (ಪ್ರತಿಕ್ರಿಯೆ ಹಾಕುವವರು ಸರಿಯಾಗಿ ನೋಡಿಕೊಂಡು ಪ್ರತಿಕ್ರಿಯೆ ಹಾಕಿದರೆ).
ಮೇಲಿನದ್ದನ್ನು ನೋಡಿ ಅಮರ ಚಿತ್ರ ಕಥೆ ಕುರಿತ ಪುಟದಲ್ಲಿ ನೋಡಿ:
http://sampada.net/files/images/amar-chitra-katha-discussion.png
(ವಿನಾಯಕರಿಗೆ ಅವರ ಲೇಖನದ ಚರ್ಚೆಯಲ್ಲಿ ಬೇರೇನೋ ಮಾತನಾಡುತ್ತಿರುವುದರಿಂದ ಕಿರಿಕಿರಿಯಾಗಬಹುದು. ವಿನಾಯಕರೆ, ಮನ್ನಿಸಿ
)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಅಡಗೂಲಜ್ಜಿಯರು ಈಗ ಬಲು ಕಡಮೆ ( ಅಡು + ಕೂಲು + ಅಜ್ಜಿ, ಕೋಲು ಹಿಡಿದು ಅಡುವವಳು )
ನಿಮ್ ಹೊಟ್ಟೆ ಉರಿಸಲು ಕೇಳಿದ್ನೇ? ಪೋಟೋ ಚನ್ನಾಗಿದೆ ಎಂದು ಹೇಳಲು ಕೇಳಿದ್ದು..
ನಿಮ್ ಹೊಟ್ಟೆ ಉರಿಸದಕ್ಕೆ ನನಗೆ ಅದು ಯಾವ ಪಾಪ ಗಂಟು ಬಿತ್ತೋ..!! ಇರಲಿ..
ಓ ದೇವರೇ ನಿನಾವ
]
ಪೂಜೆ ಅರ್ಚನೆ ಮಾಡಿಲಿ[ ಅಲ್ಲ ಮಾಡಿಸಲಿ
ಆ ಹೊಟ್ಟಿಯುರಿಸಿದ
ಮಾಪಾಪದಿಂದ ಪಾರಾಗಲು
ಕರುಣೆಯಿರಲಿ ಸದಾ
ನಿನ್ನ ಕರಳುಕುಡಿಯಾದ
ಎನ್ನ ಮೇಲೆ ಇಂದೂ
ಮುಂದೂ ಎಂದೆಂದೂ
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಮಹೇಶ್, ಅಡುಗೂಲಜ್ಜಿ ಬಗ್ಗೆ ನೀವು ಬರೆದ ವಿವರಣೆ ತಪ್ಪು. ಆ ಪದಪ್ರಯೋಗ ಅಡುಗೂಳಜ್ಜಿ ಎಂಬುದರಿಂದ ಬಂದಿದ್ದು. ಇಲ್ಲಿ ಕೋಲಿನ ಪ್ರಸ್ತಾಪಕ್ಕಿಂತ ಕೂಳಿನ ಪ್ರಸ್ತಾಪ ಇದೆ. ಹಿಂದಿನ ಕಾಲದಲ್ಲಿ ಬೇರೆ ಜೀವನೋಪಾಯವಿಲ್ಲದೆ ಕಂಡವರ ಮನೆಯಲ್ಲಿ ಅಡುಗೆ ಮಾಡಿಕೊಂಡು ಹೊಟ್ಟೆಪಾಡು ಸಾಗಿಸುತ್ತಿದ್ದ ಮುದುಕಿಯರಿಗೆ "ಅಡುಗೂಳಜ್ಜಿ" ಎಂಬ ಹೆಸರು. ನೀವು ಚಂದಮಾಮದ ಹಳೆಯ ಕತೆಗಳನ್ನು ಓದಿದ್ದರೆ ತಿಳಿಯುತ್ತಿತ್ತು. ನೀವು ಸುಮ್ಮನೆ leg pull ಮಾಡುವುದಕ್ಕೆ ಈ ವಿವರಣೆ ಕೊಟ್ಟಿದ್ದರೆ ನನ್ನ ಈ ವಿವರಣೆ ಅನಗತ್ಯ.
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಅಡಗೂಲಜ್ಜಿಯರು ಈಗ ಬಲು ಕಡಮೆ ( ಅಡು + ಕೂಲು + ಅಜ್ಜಿ, ಕೋಲು ಹಿಡಿದು ಅಡುವವಳು )
ನಿಮ್ ಹೊಟ್ಟೆ ಉರಿಸಲು ಕೇಳಿದ್ನೇ? ಪೋಟೋ ಚನ್ನಾಗಿದೆ ಎಂದು ಹೇಳಲು ಕೇಳಿದ್ದು..
ನಿಮ್ ಹೊಟ್ಟೆ ಉರಿಸದಕ್ಕೆ ನನಗೆ ಅದು ಯಾವ ಪಾಪ ಗಂಟು ಬಿತ್ತೋ..!! ಇರಲಿ..
ಓ ದೇವರೇ ನಿನಾವ
]
ಪೂಜೆ ಅರ್ಚನೆ ಮಾಡಿಲಿ[ ಅಲ್ಲ ಮಾಡಿಸಲಿ
ಆ ಹೊಟ್ಟಿಯುರಿಸಿದ
ಮಾಪಾಪದಿಂದ ಪಾರಾಗಲು
ಕರುಣೆಯಿರಲಿ ಸದಾ
ನಿನ್ನ ಕರಳುಕುಡಿಯಾದ
ಎನ್ನ ಮೇಲೆ ಇಂದೂ
ಮುಂದೂ ಎಂದೆಂದೂ
[ ಯಾವುದೋ ಕ್ರಿಶ್ಚಿಯನ್ ಹಾಡು ಇದ್ದ ಹಾಗಿದೆ.. ಎಂದು ಹಲವರು ಎಣಿಸಬೋದು ]
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ನಿಮ್ಮ ವಿಮರ್ಶೆಯಲ್ಲಿ ಪ್ರಸ್ತುತ ದೇಶದ ಅಭಿವೃದ್ದಿಗೆ ಕಳ೦ಕವಾಗಿರುವ , ಎಲ್ಲರನ್ನು ಸಮಾನರಾಗಿ ಕಣದ ವಿಚಾರ ಅರಿವಾಗುತ್ತದೆ.
ಸೇಡು ! ತು೦ಬಾ ಕೆಟ್ಟದಾದ ಒ೦ದು ಸ೦ಗತಿ. ಅ೦ದು ಆ ವಿಪ್ರರು ಮಾಡಿದರೆನ್ನಲಾದ ಆಪಾದನೆಗೆ ಇ೦ದಿನ ಈ ವಿಪ್ರೆರು ಹಪ-ಹಪಿಸುತ್ತಿದ್ದಾರೆ.
ಹಾಗ೦ತಾ ದಲಿತರು( ಸರ್ಕಾರ ಇದನ್ನು ಕೂಗಿ ಕರೆಯುತ್ತೆ ಮತ್ತ್ಯಾರು ಅಲ್ಲಾ) ಇಗ ಸುಖವಾಗಿಯು ಇದ್ದಾರೆ.
ಶ್ರೀಮ೦ತರಿದ್ದರು ಸರ್ಕಾರದ( ದೇವರ) ಹಣವನ್ನು ಮೀಸಲಾತಿ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದರೆ.
ಹಾಗೆ ನೋಡಿದರೆ ಬ್ರಾಹ್ಮಣರು ದೇವರ ಹೆಸರು ಹೇಳಿ ಹೊಟ್ಟೆ ತು೦ಬಿಸಿಕೊ೦ದರೆ ತಪ್ಪಲ್ಲಾ.
ಹಿ೦ದೆ ವಿಪ್ರರನ್ನು ಉತ್ತಮರೆ೦ದು ಮತ್ತು ದಲಿತರನ್ನು ತುಳಿದವರೆ೦ದು ಹೇಳಿದರೆ ಅದಕ್ಕೆ ಕಾರಣ ಆಗಿನ ರಾಜ್ಯಭಾರ ಮಾಡುವ ರಾಜನದು.
ಹೀಗೆ ವಿಚಾರ ಮಾಡಿದರೆ ನಾವು ಹಾಗೆ ಮಾಡಬೇಕೆ? ಇವತ್ತಿನ ರಾಜಕಾರಣದಲ್ಲಿ ವಿಪ್ರರಿಗೆ ಅನ್ಯಾಯವಗುವ೦ತೆ ರಾಜಕೀಯ ಮಾಡಬೇಕೆ?
ಎಲ್ಲರು ಸಮ್ಮಾನ ಎ೦ದು ಹೇಳುವ ಭ್ಹಾರತ ಎಕೆ ಈ ಮೀಸಲಾತಿ ಇನ್ನು ಇಟ್ಟಿದೆ?
ಬಡವರಿಗೆ ಧನ ಸಹಾಯ ಮಾಡಲಿ ಆದರೆ ಇದರಿ೦ದ ಪ್ರತಿಭಾವ೦ತ ಬಡ ವಿಧ್ಯಾರ್ಥಿಗಳಿಗೆ ಅನ್ನ್ಯಾಯ ಮತ್ತು ದೇಶಕ್ಕೆ ಹಾನಿ.
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
"...ಅದ್ಯಾಕೋ ಬೆಂಗಳೂರೆಂಬ ಈ ಹಾಳು ಕಾಂಕ್ರೀಟು ಜಂಗಲ್ಲು.. "
ರೀ ವಿನಾಯಕ, ನೀವು ಬೆಂಗಳೂರಿಗೆ ಹೀಗೆಲ್ಲ 'ಹಾಳು' ಅನ್ನಬೇಡಿ. ನೋವಾಗುತ್ತದೆ. ನೀವು ಲಾಲ್ ಬಾಗ್, ಬಸವನಗುಡಿ, ಜಯನಗರ, ವಿಜಯನಗರ ಎಲ್ಲ ನೋಡಿ. ಬೆಂಗಳೂರ್ ಹತ್ರ ಇರೋ ದೊಡ್ಡಾಲದ ಮರ,ಅರ್ಕಾವತಿ ಅಣೆಕಟ್ಟು ಇವೆಲ್ಲ ನೋಡಿ. ಬೆಂಗಳೂರಿನ ಹಿರಿಮೆಯ ಬಗ್ಗೆ ತಿಳಿದು ಮಾತನಾಡಿ.
ನಿಮ್ಗೆ ಯಾರಾದ್ರು 'ಬರ್ರಪ್ಪ, ಬೆಂಗಳೂರಿಗೆ" ಅಂತ ಹೇಳಿದ್ರಾ. ನೀವಾಗಿ ಬಂದ್ ಹೀಗೆ ಬೆಂಗಳೂರಿನೆಲ್ಲ ಅನ್ಬೋದಾ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಮತ್ತೆ ನನ್ನದೇ ಆದ ಒಂದಿಷ್ಟು ಕಾರ್ಯಗಳಿಂದ ಬ್ಲಾಗ್ನಿಂದ ದೂರ ಉಳಿದಿದ್ದ್ದಕ್ಕೆ ಕ್ಷಮೆ ಇರಲಿ. ಕಮೆಂಟ್ ಮಾಡುವವರಿಗೆ ಒಂದು ವಿನಂತಿ ಲೇಖನ ಸರಿಯಾಗಿ ಓದಿಕೊಂಡು ಲೇಖಕನ ನಿಲುವನ್ನು ಅರ್ಥೈಸಿಕೊಂಡು ಪ್ರತಿಕ್ರಿಯಿಸಿ. ಅಥವ ನಿಮ್ಮದೇ ಆದ ಹೊಸದೊಂದು ಆಲೋಚನೆ ಇದ್ದರೆ ಅದನ್ನು ತಿಳಿಸಿ ಹೊರತಾಗಿ ಕಾಲುಕೆರೆದು ಜಗಳವಾಡುವ ಚರ್ಚೆ ಇಲ್ಲಿ ಬೇಡ.
ಇಂತಿ ನಿಮ್ಮವ