ಈ ಪುಸ್ತಕದ ಪುಟಗಳನ್ನು ಇನ್ನೂ ಪೇರಿಸುತ್ತಿದ್ದೇವೆ.
'ಸಂಪದ'ದಲ್ಲಿ ಸೇರಿಸಲ್ಪಟ್ಟ ಉತ್ತಮ ಲೇಖನಗಳು ಈ ಪುಸ್ತಕದಲ್ಲಿ ಲಭ್ಯವಾಗುವುದು. ಪುಸ್ತಕ ಆನ್ಲೈನ್ ಓದಲು ಲಭ್ಯ.
This book is being prepared.
The book will constitute the best of Sampada articles. The book would be available for reading on-line. There are also plans of preparing a PDF ebook out of it.
© ಕೃತಿಸ್ವಾಮ್ಯ ಲೇಖಕರದ್ದು
© rest with respective authors
http://creativecommons.org/licenses/by-nc-nd/2.5
ಇಲ್ಲಿ ನಾನು ಏನನ್ನೂ ಉತ್ಪ್ರೇಕ್ಷೆ ಮಾಡಲು ಹೊರಟಿಲ್ಲ. ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ. ಇಲ್ಲಿರುವುದು ನನಗೆ ಅನ್ನಿಸಿದಂತೆ, ನಾ ಕಂಡಂತೆ ನನ್ನ ಜಾತಿಯ ಕೆಲವು ವಿಚಾರಗಳಷ್ಟೇ.ನ
ನಾನು ಮಲೆನಾಡಿನ ಸ್ಮಾರ್ತ ಬಬ್ಬೂರುಕಮ್ಮೆ ಬ್ರಾಹ್ಮಣ. ನಮ್ಮದು ಯಜುರ್ವೇದ. ನಮ್ಮ ಕಡೆ ಬಬ್ಬೂರುಕಮ್ಮೆ ಬ್ರಾಹ್ಮಣರು ಕಡಿಮೆಯಂತೆ. ಇದ್ದುದರಲ್ಲಿ ಹವ್ಯಕರೇ ಹೆಚ್ಚು ನಮ್ಮ ಕಡೆ. ಅವರನ್ನು ಬಿಟ್ಟರೆ ಕೋಟ, ಕಂದಾವರ, ಶಿವಳ್ಳಿ, ಅಥವ ಮಾಧ್ವಮಣಿಗಳು. ಹೊಯ್ಸಳ ಕರ್ನಾಟಕರು ಇಲ್ಲವೇ ಇಲ್ವಂತೆ...ಹೀಗೆ ಸಾಗುತ್ತದೆ ನಮ್ಮ ಮಲೆನಾಡಿನ ಬ್ರಾಹ್ಮಣ ಪುರಾಣ.
ಬ್ರಾಹ್ಮಣ ಸಾರಂಶ:
೧. ನಿಮಗೆ ಬೇಕೋ ಬೇಡವೋ, ಒಳ್ಳೇದಕ್ಕೋ ಕೆಟ್ಟದ್ದಕ್ಕೋ, ಬ್ರಾಹ್ಮಣರು ಕಳೆದ ಒಂದೆರೆಡು ಸಾವಿರ ವರ್ಷಗಳಿಂದ, ನಾವು ಇಂದು ತಿಳಿದ ಇತಿಹಾಸದಂತೆ, ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಪ್ರಮುಖ ಪಾತ್ರವನ್ನು ತೊಟ್ಟಿದ್ದಾರೆ. ಭಾರತೀಯ ಸಮಾಜವು ಯಾವುದಕ್ಕೆ ಸ್ಪಂದಿಸಿದರೂ, ಅದರಲ್ಲಿ ಬ್ರಾಹ್ಮಣರ ಪಾತ್ರ ಎದ್ದುಕಾಣುತ್ತದೆ.
೨. ಸಮಾಜದಲ್ಲೇ ಯಾವುದೇ ಬಗೆಯ ಹೊಸ ಪ್ರಗತಿಯುಂಟಾದರೂ ಅದರ ಉಪಯೋಗವನ್ನು ಪಡೆದವರ ಮಂಚೂಣಿಯಲ್ಲಿ ಬ್ರಾಹ್ಮಣರಿರುತ್ತಾರೆ.
೩. ಹಿಂದೆ ಜಾತಿ ಪದ್ಧತಿಯನ್ನು ನಿಯಂತ್ರಿಸುವ ಬಲವಿದ್ದಾಗ ನಾವು ಮಿಕ್ಕವರನ್ನು, ಅವರ ಯೋಚನಾಲಹರಿಯನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದೆವಂತೆ. ಕ್ಷತ್ರಿಯರಂತಲ್ಲದಿದ್ದರೂ, ತಕ್ಕಮಟ್ಟಿಗೆ ಕ್ರೌರ್ಯವನ್ನು ಪ್ರದರ್ಶಿಸುವ, ಇತರರಿಂದ ನಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಯುಕ್ತಿ ನಮಗಿತ್ತಂತೆ.
೪. ಇಂದಿಗೆ ಈ ಬಲವು ಕ್ಷೀಣಿಸಿರುವುದು ನಿಜವಾದರೂ ಪೂರ್ತಿ ನಶಿಸಿಲ್ಲವೆಂಬುದು ಕಣ್ಣೆದುರಿಗೇ ಇದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿಗೂ, ಸಾಹಿತ್ಯದಲ್ಲಿ ವಿಶ್ವವಿದ್ಯಾಲಯಗಳಲ್ಲಿ, ರಾಜಕೀಯಪಕ್ಷಗಳಲ್ಲಿ, ದಿನಪತ್ರಿಕೆಗಳಲ್ಲಿ, ಅಧಿಕಾರಿವರ್ಗದಲ್ಲಿ, ಕ್ರಿಕೆಟ್ಟಿನಲ್ಲಿ, ಸಾಫ್ಟ್-ವೇರಿನಲ್ಲಿ, ಸಾವಯವ ಕೃಷಿಯಲ್ಲಿ ನಮ್ಮ ಜನ ತುಸು ಹೆಚ್ಚೇ ಇದ್ದಾರೆ. ಸಮಾಜದಲ್ಲಿ ನಮ್ಮ ಸಂಖ್ಯೆ ಕಡಿಮೆಯಿದ್ದರೂ ಇವೆಲ್ಲದರಲ್ಲೂ ಹೆಚ್ಚಿನ ಸಂಖ್ಯಯಲ್ಲಿ ನಮ್ಮ ಪ್ರತಿನಿಧಿಗಳಿನ್ನೂ ಉಳಿದಿರುವುದು ಸತ್ಯ.
೫. ಹಲವು ಬ್ರಾಹ್ಮಣರು ಸಮುದ್ರೋಲ್ಲಂಘನ ಮಾಡಿಯೂ ಬ್ರಾಹ್ಮಣಿಕೆಯನ್ನು ಉಳಿಸಿಕೊಂಡಿರುವುದು ನಮಗೆಲ್ಲ ಖುಷಿ ತರುವ ವಿಷಯವಾಗಿದೆ. ಬ್ರಾಹ್ಮಣಿಕೆಯು ಬ್ರಾಹ್ಮಣರನ್ನು ಬಿಟ್ಟರೂ, ಬ್ರಾಹ್ಮಣನು ಜಾತಿಯನ್ನು ಬಿಡುವುದು ಅಪರೂಪ.
೬. ಕೌಟಿಲ್ಯನೂ ಬ್ರಾಹ್ಮಣನೇ, ಮನುವೂ ಬ್ರಾಹ್ಮಣನೇ, ಹೈದರಾಲಿಯ ಮುಖ್ಯಮಂತ್ರಿ ಕೂಡ ನಮ್ಮವನೇ. ಒಟ್ಟಿನಲ್ಲಿ ನಮ್ಮಲ್ಲೂ ಎಲ್ಲಾ ತರದವರಿದ್ದಾರೆ. ಒಳ್ಳೆಯವರು, ಕೆಟ್ಟವರು, ಆಸೆಬುರುಕರು, ಸಾಧ್ವಿಮಣಿಗಳು.. ಹೀಗೆ.
೭. ನಾವು ಭೌದ್ಧಿಕವಾಗಿ ಇತರರಿಗಿಂತ ಉನ್ನತರು ಎಂಬ ನಂಬಿಕೆ ನಮ್ಮಲ್ಲಿ ಈಗಲೂ ಇದೆ. ಅದನ್ನು ಈಗೀಗ ಬಾಹ್ಯವಾಗಿ ತೋರಿಸದೇ ಇರಬಹುದು.. ಆದರೆ ಇಬ್ಬರು ಬ್ರಾಹ್ಮಣರು ಆಗಾಗ ಭೇಟಿಯಾಗುತ್ತಿದ್ದರೆ, ಯಾವಾಗಲಾದರೊಮ್ಮೆ, ಸಮಯಸಿಕ್ಕಾಗ ಈ ಮಾತು ಖಂಡಿತ ಬರುತ್ತದೆ. ಅವರಿವರ ಜಾತಿಗಳನ್ನು ಬೈಯದಿದ್ದರೆ ಆಡಿಕೊಳ್ಳದಿದ್ದರೆ ನಮಗೆ ತಿಂದ 'ಹುಳಿ' ಅರಗುವುದಿಲ್ಲ.
೮. ಭಾರತದ ಹಲವು ಜಾತಿಗಳಂತೆಯೇ ಬ್ರಾಹ್ಮಣರಲ್ಲೂ ಹಲವು ಕಚ್ಚಾಡುವ ಉಪಜಾತಿಗಳಿವೆ. ನಮ್ಮಲ್ಲೂ ಒಗ್ಗಟ್ಟು ಇಲ್ಲ.
೯. ನಮ್ಮ ವಿವಿಧ ಉಪಜಾತಿಗಳ ಕಚ್ಚಾಟದಂತೆಯೇ ಬ್ರಾಹ್ಮಣರು ತಾತ್ವಿಕವಾಗಿಯೂ ಒಂದಲ್ಲ. ಬ್ರಾಹ್ಮಣ ಮೂಲಭೂತವಾದಿಗಳಿದ್ದಾರೆ, ನಕ್ಸಲೈಟ್ ಗಳಿದ್ದಾರೆ, ಆಷಾಡಭೂತಿಗಳಿದ್ದಾರೆ, ಸಮಾಜವಾದಿಗಳಿದ್ದಾರೆ, ಬಂಡವಾಳಶಾಹಿಗಳಿದ್ದಾರೆ, ಇವೆರೆಡನ್ನೂ ಪ್ರಯತ್ನಿಸಿದ/ಪ್ರಯತ್ನಿಸದ ಅಡ್ಡಗೋಡೆಯ ದೀಪಗಳೂ ಹಲವಿವೆ.
೧೦. ಇತ್ತೀಚಿನ ಬೆಳವಣಿಗೆಗಳು ಕುತೂಹಲ ಕೆರಳಿಸಬಹುದು: ಬ್ರಾಹ್ಮಣರು ಯಾರ ಯಾರ ವಿಷಯಕ್ಕೋ ತಮ್ಮ ತಮ್ಮೊಳಗೇ ಜಗಳವಾಡಿಕೊಳ್ಳುತ್ತಿರುತ್ತಾರೆ. ಮುಸ್ಲಿಮರು ಕೆಟ್ಟವರು ಎಂದು ಒಬ್ಬ ಬ್ರಾಹ್ಮಣ ಹೇಳಿದರೆ ಅವ ಪೆದ್ದ ಎಂದು ಮತ್ತೊಬ್ಬ ಬ್ರಾಹ್ಮಣ ಹೇಳುತ್ತಾನೆ. ಇವರಿಬ್ಬರ ಜಗಳವನ್ನು ನೋಡಿ ಮೂರನೆಯ ಬ್ರಾಹ್ಮಣನೊಬ್ಬ ಇದೇ ವಿವಾದವನ್ನು ಬಳಸಿ ಲಾಭ ಮಾಡುತ್ತಾನೆ. ಈ ಆಸೆಬುರುಕ ಬ್ರಾಹ್ಮಣನನ್ನು ಖಂಡಿಸಿ ಮತ್ತೊಬ್ಬ ಮಗದೊಬ್ಬ ಹೀಗೆ ಹಲವು ಬ್ರಾಹ್ಮಣರು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಬಾರುಗಳಲ್ಲಿ ಮತ್ತು ಸಿಕ್ಕಸಿಕ್ಕಲ್ಲೆಲ್ಲಾ ಚರ್ಚೆ ಮಾಡುತ್ತಾರೆ. ಒಟ್ಟಿನಲ್ಲಿ ಬ್ರಾಹ್ಮಣರು ಅಥವ ಯಾರದ್ದೋ ಬ್ರಾಹ್ಮಣಿಕೆ ಚರ್ಚೆಯಲ್ಲಿದ್ದೇ ಇರುತ್ತದೆ.
೧೧. ಬ್ರಾಹ್ಮಣರು ವಾದ ಮಾಡುವಾಗ ಇತರ ಜಾತಿಯವರನ್ನು ಸರಿಸಮಾನಾಗಿ ಕಾಣುವುದು ಕಡಿಮೆ. ಅವರನ್ನು ಸರಿಸಮಾನರಲ್ಲರೆಂದು ಬಿಟ್ಟು ವಿರುದ್ಧ ಬಣದಲ್ಲಿರುವ ಬ್ರಾಹ್ಮಣರನ್ನು ಆಯ್ಕೆಮಾಡಿ ಅವರ ವಿರುದ್ಧ ವಾದಮಾಡುವುದು ವಾಡಿಕೆ.
೧೨. ಸಮಾಜದಲ್ಲಿ ಯಾವುದೇ ಚರ್ಚೆ, ವಾದವಿವಾದ ನಡೆದರೂ, ಗೆಲ್ಲುವುದು/ಸೋಲುವುದು ಬ್ರಾಹ್ಮಣನೇ. ಖ್ಯಾತನೋ ಕುಖ್ಯಾತನೋ.. ಅವ ಬ್ರಾಹ್ಮಣನಾಗಿದ್ದರೆ ನಮಗೆ ನೆಮ್ಮದಿ.
೧೩. ಬ್ರಾಹ್ಮಣರು ಏನೇ ಚರ್ಚೆ ಮಾಡಲಿ, ಬ್ರಾಹ್ಮಣರು ಒಳ್ಳೆಯವರೇ ಕೆಟ್ಟವರೇ ಬ್ರಾಹ್ಮಣರ ಬಗ್ಗ್ಗೆ ಯಾರಿಗೆ ಕೂಲಂಕುಷವಾಗಿ ತಿಳಿದಿದೆ ಎಂಬುದೇ ಮುಖ್ಯವಿಷಯ. ಅದು ಆಡುವ ಮಾತಿನಲ್ಲಿಲ್ಲದಿದ್ದರೂ, ಗುಪ್ತಗಾಮಿನಿಯಾಗಾದರೂ ಹರಿಯುತ್ತಲೇ ಇರುತ್ತದೆ. ಬ್ರಾಹ್ಮಣಿಕೆಯಿಲ್ಲದ ವಿಷಯಗಳು ಇದ್ದದ್ದೇ ಆದರೆ, ಬ್ರಾಹ್ಮಣರಿಗೆ ಅದರಲ್ಲಿ ಆಸಕ್ತಿ ಕಡಿಮೆ.
೧೪. ಯಾವುದೇ ವಾದವಿರಲಿ, ವ್ಯಕ್ತಿಯ ನಿಲುವು ಏನೇ ಇರಲಿ, ಚರ್ಚಿಸುವಾಗ ಗೊತ್ತಿರಲೀ ಬಿಡಲಿ, ಬ್ರಾಹಣರು ಬ್ರಾಹ್ಮಣಿಕೆಯ ವಿವಿಧ ಅಭ್ಯಾಸಗಳನ್ನು, ವೇದಮಂತ್ರಗಳನ್ನು, ಪುಂಖಾನುಪುಂಕವಾಗಿ ಉದ್ಧರಿಸದೇ ಬಿಡುವುದು ಅಪರೂಪ. ವೇದಮಂತ್ರಗಳೂ ಕೂಡ, ಒಂದೊಂದು ಒಂದೊಂದು ಬಗೆಯಿದ್ದು ಯಾವ ನಿಲುವನ್ನು ಬೇಕಾದರೂ ಸಮರ್ಥಿಸಿಕೊಳ್ಳುವಂತೆ ರಚಿತವಾಗಿದೆ.
ಇದು ನನ್ನ ಜಾತಿ. ಮುಖ್ಯವಾದದ್ದೇನಾದರೂ ಬಿಟ್ಟಿದ್ದರೆ ಓದುಗರು ಸೇರಿಸಲಿ.
ಅನುಭವ ಕಥನ
ಆದಿತ್ಯವಾರಗಳಂದು ಯಾವುದೇ ಚಾರಣ ಇರದಿದ್ದರೆ ಸಂಜೆ ಆಗುಂಬೆಗೆ ಹೋಗುವುದು ರೂಢಿಯಾಗಿಬಿಟ್ಟಿದೆ. ಮಧ್ಯಾಹ್ನ ೩ಕ್ಕೆ ಉಡುಪಿಯಿಂದ ಹೊರಟು, ಸೋಮೇಶ್ವರದಲ್ಲಿ ಬಿಸಿ ಬಿಸಿ ನೀರ್ ದೋಸೆ ಅಥವಾ ಗೋಳಿಬಜೆ ತಿಂದು, ಆಗುಂಬೆ ಚೆಕ್-ಪೋಸ್ಟ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿರುವ ಪಡಿಯಾರ್-ಗೆ ವಿಶ್ ಮಾಡಿ ಸಂಜೆ ಸುಮಾರು ಐದಕ್ಕೆ ಆಗುಂಬೆಯ ಗೆಸ್ಟ್-ಹೌಸ್ ಮುಂದಿರುವ ಕಲ್ಲಿನ ಆಸನದ ಮೇಲೆ ಆಸೀನರಾದರೆ ಆಗುಂಬೆಯ ಸಂಜೆ ಸವಿಯುವ ಭಾಗ್ಯ ನಮ್ಮದು.
ಈ ಗೆಸ್ಟ್-ಹೌಸ್ ಸ್ವಲ್ಪ ಎತ್ತರದಲ್ಲಿರುವುದರಿಂದ ಆಗುಂಬೆಯ ಸುಂದರ ನೋಟ ಇಲ್ಲಿಂದ ಲಭ್ಯ. ಹಕ್ಕಿಗಳ ಚಿಲಿಪಿಲಿ, ಅಹ್ಲಾದಕರ ವಾತಾವರಣ, ಅನತಿ ದೂರದಲ್ಲಿ ಕಾಣುವ ರಸ್ತೆಯಲ್ಲಿ 'ಭರ್ರ್' ಎಂದು ಹಾದುಹೋಗುವ ಮಿನಿ ರಾಕ್ಷಸರು (ಮಿನಿ ಬಸ್ಸುಗಳು), 'ಕೋಳಿ ಮಾಡುವ ಸಾರ್, ಇರಿ ಊಟಕ್ಕೆ' ಎಂದು ಒತ್ತಾಯಿಸುವ ಅಲ್ಲಿನ ಮೇಟಿ, ಅಲ್ಲೇ ಸಮೀಪದಲ್ಲಿ ಕಾಣುವ ಶಾಲಾ ಮೈದಾನದಲ್ಲಿ ವಾಲಿಬಾಲ್, ಥ್ರೋಬಾಲ್ ಇತ್ಯಾದಿ ಆಡುವ ಹೆಣ್ಮಕ್ಕಳ ಕೂಗಾಟ ಮತ್ತು ಇವೆಲ್ಲದಕ್ಕೆ ತಕ್ಕಂತೆ ನಮ್ಮ ಹರಟೆ. ಕಡು ಬೇಸಿಗೆಯಲ್ಲೂ ಹಸಿರನ್ನು ಉಳಿಸಿಕೊಳ್ಳುವ ಆಗುಂಬೆಯ ಸಂಜೆ ಅದ್ಭುತ! ಆಗುಂಬೆಯ ಸಂಜೆಯ ವೈಶಿಷ್ಟ್ಯತೆ ಅನುಭವಿಸಿದವರಿಗೇ ಗೊತ್ತು.
ಬೇಸಗೆಯ ಹಿತವಾದ ಬಿಸಿಲು, ಚಳಿಗಾಲದ ಮೈ ನಡುಗಿಸುವ ಚಳಿ ಮತ್ತು ಮಳೆಗಾಲದ ಅಬ್ಬರದ ಮಳೆ ಇದನ್ನೆಲ್ಲಾ ಆಗುಂಬೆಯಲ್ಲಿ ಅನುಭವಿಸಿ ಮತ್ತೆ ಮತ್ತೆ ಅಲ್ಲಿಗೆ ತೆರಳುವ ತವಕ ನಮ್ಮ ಗುಂಪಿನ ಪ್ರತಿಯೊಬ್ಬನಿಗೆ. ಆ ಕಲ್ಲಿನ ಬೆಂಚಿನಲ್ಲಿ ಕುಳಿತು ವಿವಿಧ ಪಕ್ಷಿಗಳನ್ನು ಗುರುತಿಸುವ ಪ್ರಯತ್ನ, ಆಗುಂಬೆಯಲ್ಲಿ ಜಾಗ ಖರೀದಿಸುವ ಮಾತು ಇತ್ಯಾದಿಗಳ ಹರಟೆ. ಬೆನ್ನು ಬಿಡದಂತೆ ಬೆನ್ನು ಹತ್ತುವ ಮಳೆರಾಯನ ಆಗುಂಬೆಯ ಅವತಾರವನ್ನು ಒಮ್ಮೆಯಾದರೂ ನೋಡಬೇಕು. ಬೀಳುತ್ತಿರುವ ಮಳೆಯ ನಡುವೆ ರೈನ್ ಕೋಟ್ ಧರಿಸಿಯೇ ಆ ಕಲ್ಲಿನ ಬೆಂಚಿನಲ್ಲಿ ಆಸೀನರಾಗಿ 'ಮಳೆ ವೀಕ್ಷಣೆ' ಮಾಡುತ್ತಾ ಹರಟೆ ಹೊಡೆಯುವುದೇ ಮಜಾ.
ಆಗುಂಬೆ ಚೆಕ್ ಪೋಸ್ಟ್ ಬಳಿಯ ತನ್ನ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಚಟ್ಟಂಬಡೆ ಮತ್ತು ಬಿಸ್ಕುಟಂಬಡೆ ಕರಿಯುವ ಪಡಿಯಾರ್, ಬಹುಶಃ ಆಗುಂಬೆಯಲ್ಲೇ ಇದ್ದು ಹೆಚ್ಚು ಕಮಾಯಿಸುವವರಲ್ಲೊಬ್ಬ. ಈತನ ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳ ರುಚಿಗೆ ಮಾರುಹೋಗದವರಿಲ್ಲ. ನಾವು ಆಗುಂಬೆಗೆ ತೆರಳುವಾಗ ಪಡಿಯಾರ್-ಗೆ 'ವಿಶ್' ಮಾಡುವ ಅರ್ಥವೇನೆಂದರೆ 'ಒಂದು ತಾಸಿನಲ್ಲಿ ಹಿಂತಿರುಗಿ ಬರಲಿದ್ದೇವೆ. ಒಂದಷ್ಟು ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳನ್ನು ನಮಗಾಗಿ ತೆಗೆದಿಡು'. ಆದ್ದರಿಂದ ಸಂಜೆ ಸುಮಾರು ೬ಕ್ಕೆ ಆಗುಂಬೆ ಗೆಸ್ಟ್ ಹೌಸ್-ನಿಂದ ಉಡುಪಿಗೆ ಹೊರಡುವಾಗ ನಮಗಿರುವ ಟೆನ್ಶನ್ ಚಟ್ಟಂಬಡೆ/ಬಿಸ್ಕುಟಂಬಡೆ ತಿನ್ನಲು ಸಿಗುತ್ತೊ ಇಲ್ವೋ ಎಂಬುದಲ್ಲ, ಬದಲಾಗಿ 'ಹ್ಹಿ ಹ್ಹಿ' ನೋಡಲು ಸಿಗುತ್ತಾನೋ ಇಲ್ವೋ ಎಂಬುದು. ಈ 'ಹ್ಹಿ ಹ್ಹಿ' ಅಲ್ಲೇ ಆಗುಂಬೆ 'ಚೆಕ್ ಪೋಸ್ಟ್'ನಲ್ಲಿ ವಾಸಿಸುವ ನಾಯಿ. ಎಲ್ಲಿಂದಲೋ ಬಂದು ಚೆಕ್-ಪೋಸ್ಟ್ ಬಳಿಯಲ್ಲಿ ಆಚೀಚೆ ಓಡಾಡುತ್ತಿರುವಾಗ, ಅಲ್ಲಿನ ಸಿಬ್ಬಂದಿ ಅದಕ್ಕೆ ಆಶ್ರಯ ನೀಡಿರುವುದರಿಂದ ಈಗ 'ಹ್ಹಿ ಹ್ಹಿ' ಅಲ್ಲೇ ಇರುತ್ತಾನೆ.
ಕೆಳ ದವಡೆಯ ಹಲ್ಲುಗಳು ಹೊರಚಾಚಿ ಮೇಲ್ತುಟಿಯನ್ನು ಮರೆಮಾಡಿರುವುದರಿಂದ ನಗುತ್ತಾ ಇರುವಂತೆ ಈ ನಾಯಿ ಕಾಣಿಸುತ್ತದೆ. ಈ 'ಹ್ಹಿ ಹ್ಹಿ' ಎಂದರೆ ನಮಗೆ ಬಹಳ ಪ್ರೀತಿ. ತೊಡೆಯ ಮೇಲೆ ಮುಂಗಾಲುಗಳನ್ನಿಟ್ಟು ಆಸೆಯಿಂದ ತಿಂಡಿ ಬೇಡುವ ಆತನ ಭಂಗಿ, ನಾವು ಕಿಸೆಯೊಳಗೆ ಕೈ ಹಾಕಿದರೆ ಆಸೆಯಿಂದ ನೋಡುವ ಆತನ ಕಣ್ಣುಗಳು, ಬಡಕಲು ದೇಹವಿದ್ದರೂ ಉತ್ಸಾಹದ ಚಿಲುಮೆಯಂತಿರುವ 'ಹ್ಹಿ ಹ್ಹಿ' ಯನ್ನು ನೋಡದೇ ನಮ್ಮ ಆಗುಂಬೆ ಭೇಟಿ ಅಪೂರ್ಣ. ಕಳೆದ ಅಗೋಸ್ಟ್ ತಿಂಗಳಂದು ನಗರಕ್ಕೆ ಹೋದಾಗ, ಹಿಂತಿರುಗಿ ಬರುವಾಗ ಆಗುಂಬೆಯ ಮೂಲಕ ಬಂದೆ. ಪಡಿಯಾರ್ ಅಂಗಡಿ ಮುಚ್ಚುತ್ತಿದ್ದ. ರುಚಿಯಾದ ಚಟ್ಟಂಬಡೆ ತಿನ್ನಲು ಸಿಗಲಿಲ್ಲ ಎಂದು ನಿರಾಸೆಯಾದರೂ, 'ಹ್ಹಿ ಹ್ಹಿ' ಯನ್ನು ನೋಡಿ ಸಂತೋಷವಾಯಿತು. ಇದ್ದ ಕೆಲವು ಬಿಸ್ಕಿಟ್ ಚೂರುಗಳನ್ನು ಕೊಟ್ಟಾಗ ಆನಂದದಿಂದ 'ಹ್ಹಿ ಹ್ಹಿ' ತಿಂದ. ಮೊನ್ನೆ ಸೆಪ್ಟೆಂಬರ್ ೧೬ರಂದು ಮತ್ತೊಮ್ಮೆ ಆಗುಂಬೆಗೆ ತೆರಳಿದಾಗ, 'ಹ್ಹಿ ಹ್ಹಿ' ನಾಪತ್ತೆ. ಐದಾರು ದಿನಗಳಿಂದ ಆತನ ಪತ್ತೆಯಿಲ್ಲ ಎಂದು ಪಡಿಯಾರ್ ಹಾಗೂ ಚೆಕ್-ಪೋಸ್ಟ್ ಸಿಬ್ಬಂದಿಗಳು ತಿಳಿಸಿದಾಗ ಏನೋ ಕಳವಳ. ಉಡುಪಿಯಲ್ಲಿ ಗೆಳೆಯರಿಗೆ 'ಹ್ಹಿ ಹ್ಹಿ' ನಾಪತ್ತೆಯಾಗಿರುವುದು ತಿಳಿಸಿದಾಗ 'ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅಲ್ಲೇ ಅಡ್ದಾಡುತ್ತಿರುವ ಚಿಟ್ಟೆ ಹುಲಿಗೆ ಬಲಿಯಾಗಿರಬಹುದು ಅಥವಾ ಸಂಗಾತಿಯನ್ನರಸಿ ಹೋಗಿರಬಹುದು' ಎಂಬ ಮಾತು. 'ಹ್ಹಿ ಹ್ಹಿ' ಎರಡು ಬಾರಿ ಆ ಚಿಟ್ಟೆ ಹುಲಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ. ಮೊರನೇ ಸಲ ಅದೃಷ್ಟ ಕೈಕೊಟ್ಟಿತೇ... ಅಥವಾ ಸಂಗಾತಿಯನ್ನರಸಿ ಹೋಗಿದ್ದನೇ..? ಎಂಬುದು ಮುಂದಿನ ಸಲ ಆಗುಂಬೆಗೆ ತೆರಳುವಾಗ ಉತ್ತರ ಸಿಗುವ ಪ್ರಶ್ನೆ.
'ಹ್ಹಿ ಹ್ಹಿ' ಯ ಚಿತ್ರ ನೋಡಲಿಚ್ಛಿಸುವವರು ಈ ಕೆಳಗಿನ ಕೊಂಡಿಗಳನ್ನು ಬಳಸಬಹುದು.
ಚಿಂತನೆ
ತೇಜಸ್ವಿಯವರನ್ನು ಸ್ಮರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅವರ ಚಿಂತನೆಗೆ ಕನ್ನಡಿ ಹಿಡಿಯುವಂತಹ ಅವರ ಈ ಬರಹ ಸದಸ್ಯರ ಮುಂದಿಡಲು ಬಯಸುತ್ತೇವೆ. ಈ ಬರಹ 'ಸಂಪದ'ದಲ್ಲಿ ಆಗಸ್ಟ್ ೨೦೦೫ರಂದು ಮೊದಲು ಪ್ರಕಟವಾಗಿತ್ತು.
ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ.
ಮೊಟ್ಟ ಮೊದಲನೆಯನದಾಗಿ ಮೀಸಲಾತಿಯ ಮೂಲ ಉದ್ದೇಶದ ಬಗ್ಗೆಯೇ ಗೊಂದಲಗಳು ಆರಂಭವಾಗಿರುವುದನ್ನು ಗಮನಿಸಬೇಕು. ಮೀಸಲಾತಿ ಜಾತಿಗಳನ್ನು ಸಮರ್ಥಿಸುವ ಜಾತೀಯತೆಯನ್ನು ಪ್ರೋತ್ಸಾಹಿಸುವ ಆಂದೋಳನವೇ? ಭಾರತದ ಸೆಕ್ಯುಲರ್ ಆಂದೋಲದ ಭಾಗವೇ? ಎಂಬುದನ್ನು ಈಗ ಸ್ಪಷ್ಟ ಪಡಿಸಬೇಕಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎಲ್.ಜಿ. ಹಾವನೂರ್ ಅವರು ಸಾರ್ವಜನಿಕ ಭಾಷಣವೊಂದರಲ್ಲಿ ಜಾತಿಗಳು ಶಾಶ್ವತ, ಇವು ಸೂರ್ಯ ಚಂದ್ರರಿರುವವರೆಗೂ ಇರುತ್ತವೆ ಎಂದಿದ್ದರು. ಜಾತಿಗಳು ಭವಿಷ್ಯದಲ್ಲೂ ಶಾಶ್ವತವಾಗಿ ಉಳಿಯುತ್ತವೆಯೋ ಇಲ್ಲವೋ ಭವಿಷ್ಯವನ್ನು ಬಲ್ಲವರಾರು? ಅದನ್ನು ಹಾವನೂರರೂ ಹೇಳಲಾರರು. ಆದರೆ ಈ ಹೇಳಿಕೆಯ ಮೂಲಕ ಹಾವನೂರರು ಪ್ರತಿನಿಧಿಸಿದ ಧೋರಣೆ ಮಾತ್ರ ಕಳವಳಕಾರಿಯಾದುದು. ಮೀಸಲಾತಿಯ ಮೂಲ ಆಶಯಗಳಲ್ಲೇ ಗೊಂದಲ ಪ್ರಾರಂಭವಾಗಿರುವುದರ ಮುನ್ಸೂಚನೆ ಇದೆಂದು ನನಗನ್ನಿಸುತ್ತದೆ.
ಕರ್ನಾಟಕದಲ್ಲಿ ಮೀಸಲಾತಿ ಜಾರಿಗೆ ಬಂದ ನಂತರ ಸಂಭವಿಸಿದ ಕೆಲವು ಚಾರಿತ್ರಿಕ ಬೆಳವಣಿಗೆಗಳೂ ಈ ಗೊಂದಲಕ್ಕೆ ಕಾರಣವೆಂದು ಹೇಳಬಹುದು. ಮೀಸಲಾತಿಯ ಪರಿಣಾಮವಾಗಿ ಜಾತೀಯ ಸಂಘಟನೆಗಳು ಶುರುವಾದುವು. ಅಸಂಘಟಿತರಾಗಿ ಕರ್ನಾಟಕಾದ್ಯಂತ ಚದುರಿದ್ದ ಪ್ರತಿಯೊಂದು ಜಾತಿಯೂ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ತಮತಮಗೆ ಒಂದು ಮಠವನ್ನೂ ಅದಕ್ಕೊಬ್ಬ ಜಗದ್ಗುರುವನ್ನೂ ನಿರ್ಮಿಸತೊಡಗಿದವು. ಇಷ್ಟಲ್ಲದೆ ಅನೇಕ ಜಾತಿಗಳೊಳಗೇ ಉಪ ಪಂಗಡಗಳೇರ್ಪಟ್ಟು ಅವು ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸತೊಡಗಿದವು. ಮುಸ್ಲಿಂ ಮತ್ತು ಲಿಂಗಾಯತ ಕೋಮಿನ ಉದಾಹರಣೆಗಳನ್ನು ಇಲ್ಲಿ ಪರಿಶೀಲಿಸಬಹುದು.
ಇದರೊಡನೆ ಭಾರತದಲ್ಲಿ ಜಾತಿ ಪದ್ಧತಿ ಕೆಳ ವರ್ಗಗಳಲ್ಲಿ ವೃತ್ತಿ ಮೂಲವಾಗಿ ರೂಪುಗೊಂಡಿದ್ದರಿಂದ ನೂರಾರು ಹೊಸಹೊಸ ವೃತ್ತಿಯ ಸಮುದಾಯಗಳು ಹುಟ್ಟಿಕೊಂಡು ತಾವೇ ಒಂದೊಂದು ಹೊಸ ಜಾತಿಗಳೆಂದು ಗುರುತಿಸಿಕೊಳ್ಳತೊಡಗಿದವು. ಈ ಎಲ್ಲಾ ಜಾತಿಗಳವರೂ ತಾವು ಅತ್ಯಂತ ಹಿಂದುಳಿದವರೆಂದು ಹೇಳಿಕೊಂಡು ಮೀಸಲಾತಿಯಲ್ಲಿ ಸ್ಥಾನ ಕೇಳುತ್ತಾ ಹಿಂದುಳಿಯಲು ಪೈಪೋಟಿ ಆರಂಭಿಸಿದವು. ಮೀಸಲಾತಿಯಿಂದ ಉದ್ಭವವಾದ ಈ ಬೆಳವಣಿಗೆಯನ್ನು ನಾನು ಅನಪೇಕ್ಷಣೀಯ ಬೆಳವಣಿಗೆಯೆಂದು ಆಕ್ಷೇಪಿಸುತ್ತಿಲ್ಲ ಅಥವಾ ಪ್ರೋತ್ಸಾಹಿಸಬೇಕೆಂಬುದೂ ನನ್ನ ಉದ್ದೇಶವಲ್ಲ. ಆದರೆ ಈ ಬೆಳವಣಿಗೆಯ ಅರ್ಥವೇನು? ಇದು ಮೀಸಲಾತಿಯ ಉದ್ದೇಶವೇ? ಎಂದು ವಿಶ್ಲೇಷಿಸ ಬಯಸುತ್ತೇನೆ. ಈ ಘಟ್ಟದಲ್ಲಿ ಯೋಚಿಸಿದಾಗ ಹಾವನೂರರ ಹೇಳಿಕೆ ಮತ್ತು ಆಶಯದಂತೆ ಮೀಸಲಾತಿ ಜಾತಿಗಳನ್ನೂ ಜಾತೀಯತೆಯನ್ನೂ ಪೋಷಿಸುವ ಮತ್ತು ಪ್ರತಿಪಾದಿಸುವ ಆಂದೋಳನದಂತೆಯೇ ಕಾಣುತ್ತದೆ.
ಆದರೆ ನಮ್ಮ ಸಂವಿಧಾನ ಕರ್ತೃ ಅಂಬೇಡ್ಕರ್ ಮೀಸಲಾತಿಯ ಹಿಂದೆ ಇಟ್ಟುಕೊಂಡಿದ್ದ ಉದ್ದೇಶ ಇದಲ್ಲವೆಂದು ನನ್ನ ದೃಢ ನಂಬಿಕೆ. ಜಾತ್ಯತೀತ ಭಾರತದ ನಿರ್ಮಾಣಕ್ಕಾಗಿಯೇ ಅವರು ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಿದುದು. ಜಾತೀಯ ಕಾರಣದಿಂದಲೇ ಹಿಂದುಳಿದ ವರ್ಗಗಳನ್ನು ಜಾತಿಗಳ ಮೂಲಕವೇ ಗುರುತಿಸಿ ಮೇಲೆತ್ತಬೇಕಾಗುತ್ತದೆಂದು ಅವರು ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸಿದರು. ಮೀಸಲಾತಿಯ ಹಿಂದಿನ ಅವರ ಉದ್ದೇಶ ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ರೂಪಿಸಬೇಕೆಂಬುದೇ ಹೊರತು ವರ್ಣಾಶ್ರಮ ಧರ್ಮದ ಜಾತೀಯ ರಾಷ್ಟ್ರವಾಗಿ ರೂಪಿಸಬೇಕೆಂಬುದಂತೂ ಅಲ್ಲ. ದೇಶ ವಿಭಜನೆಯಂಥ ಘಟನೆಗಳ ಘೋರ ಪರಿಣಾಮಗಳು ಕಣ್ಣೆದುರಿಗೇ ಇರುವಾಗ ಅವರ ಆದರ್ಶಗಳು ಜಾತ್ಯತೀತ ರಾಷ್ಟ್ರವಾಗಿತ್ತೆಂದು ನಿಸ್ಸಂಶಯವಾಗಿ ಹೇಳಬಹುದು.
ಮೀಸಲಾತಿಯ ಪೂರ್ವೋದ್ದೇಶ ಇದೆಂದು ಒಪ್ಪುವುದಾದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಳೆದ ಐದು ದಶಕಗಳಿಂದ ಇರುವ ಮೀಸಲಾತಿ ನಮ್ಮ ಸಂವಿಧಾನದ ಆಶೋತ್ತರಗಳ ದಿಕ್ಕಿನಲ್ಲಿ ಸಾಗುತ್ತಿಲ್ಲವೆಂದು ಹೇಳಬಹುದು. ಜಾತಿಗಳನ್ನು ಸಂಘಟಿಸುವುದು ಮತ್ತು ಜಾತಿಗಳಲ್ಲಿ ಮೂಲಭೂತವಾದವನ್ನು ಪ್ರಚೋದಿಸುವುದರ ಮುಖಾಂತರ ಹೆಚ್ಚು ಹೆಚ್ಚು ಉಪಜಾತಿಗಳನ್ನೂ ಹೊಸ ಹೊಸ ಜಾತಿಗಳನ್ನೂ ನಿರ್ಮಿಸುವುದರ ಮೂಲಕ ನಾವು ಜಾತ್ಯತೀತ ಸಮಾಜದತ್ತ ಸಾಗಲು ಸಾಧ್ಯವೇ ಇಲ್ಲ.
ನಾನು ಮೀಸಲಾತಿಯನ್ನು ತಿರಸ್ಕರಿಸುತ್ತಿಲ್ಲ. ನಿಷ್ಪ್ರಯೋಜಕವೆಂದು ಅಲ್ಲಗಳೆಯುತ್ತಲೂ ಇಲ್ಲ. ಹಿಂದುಳಿದ ಮೀಸಲಾತಿ ಇಲ್ಲದಿದ್ದರೆ ಹಿಂದುಳಿದ ಜಾತಿಗಳಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾನು ಸರ್ವಥಾ ಒಪ್ಪುತ್ತೇನೆ. ಅಂದರೆ ಮೀಸಲಾತಿ ಜಾತಿಗಳ ನಡುವೆ ಒಂದು ಮಟ್ಟದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ತರುವುದರಲ್ಲಿ ಸಫಲವಾಗಿದೆ. ಆದರೆ ಇದು ಜಾತ್ಯತೀತ ರಾಷ್ಟ್ರ ನಿರ್ಮಿಸುವತ್ತ ಸಾಗುತ್ತಿದೆಯೇ ಇಲ್ಲವೇ ಎಂಬುದೇ ಈಗಿರುವ ಪ್ರಶ್ನೆ.
ಹಾಗಿದ್ದರೆ ಮೀಸಲಾತಿ ನಮ್ಮ ಸಂವಿಧಾನ ಕರ್ತೃಗಳ ಮೂಲೋದ್ದೇಶಕ್ಕೆ ತದ್ವಿರುದ್ಧ ಪರಿಣಾಮಗಳನ್ನು ಏಕೆ ಮಾಡಿತು? ಕಳೆದ ಐದು ದಶಕಗಳ ಮೀಸಲಾತಿಯ ಪರಿಣಾಮವಾಗಿ ಜಾತೀಯತೆ ಸಡಿಲಗೊಳ್ಳುವುದರ ಬದಲು ಇನ್ನಷ್ಟು ಬಿಗಿಯಾಗುತ್ತಾ ಉಲ್ಭಣಗೊಳ್ಳುತ್ತಾ ಬಂದುದೇಕೆ?
ನಮ್ಮ ಸಂವಿಧಾನ ಕರ್ತೃಗಳಾದ ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮೊದಲಾದವರ ಕೆಲವು ಲೆಕ್ಕಾಚಾರಗಳು ತಪ್ಪಾದವೆಂದು ಕಳೆದ ಐದು ದಶಕಗಳ ಚರಿತ್ರೆಯನ್ನು ಅವಲೋಕಿಸಿದರೆ ತಿಳಿಯುತ್ತದೆ. ಇವರೆಲ್ಲಾ ಸಮಾಜದ ಕೆಳ ವರ್ಗಗಳಲ್ಲಿದ್ದ ಜಾತಿಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಿದರೆ ಅಂದರೆ ಜಾತಿಗಳ ನಡುವೆ ಒಂದು ಮಟ್ಟದ ಸಮಾನತೆಯನ್ನಾದರೂ ಸಾಧಿಸಿದರೆ ಜಾತಿ ಪದ್ಧತಿ ಮತ್ತು ಜಾತೀಯ ಸಂಕೋಲೆಗಳು ತನ್ನಿಂದ ತಾನೇ ಸಡಿಲಾಗುತ್ತಾ ವರ್ಣಾಶ್ರಮ ಮೂಲ ಸಮಾಜ ನಿಧಾನವಾಗಿ ವರ್ಗಮೂಲ ಸಮಾಜವಾಗಿ ರೂಪಾಂತರಗೊಳ್ಳುತ್ತದೆ ಎಂದು ಊಹಿಸಿದರು. ಇವರೆಲ್ಲರ ತಾತ್ವಿಕ ನಿಲುವಿಗೆ ಆ ಕಾಲದ ಚಿಂತನೆಗಳ ಮೇಲೇ ಪ್ರಭಾವ ಬೀರಿದ್ದ ಡೈಲಕ್ಟಿಕಲ್ ಮೆಟೀರಿಯಲಿಸಂ ಕೂಡಾ ಕಾರಣವಿರಬಹುದು. ಅವರು ಜಾತಿಗಳ ಆರ್ಥಿಕ ಸಮಾನತೆ ಸಾಧ್ಯವಾಗುತ್ತಲೂ ಅವು ತಮ್ಮ ವರ್ಣ ಸ್ವರೂಪವನ್ನು ಕಳೆದುಕೊಂಡು ಹೆಚ್ಚು ಚಲನಶೀಲವಾದ ವರ್ಗಗಳಾಗಿ ರೂಪುಗೊಳ್ಳುತ್ತವೆ. ಸ್ಥಗಿತಗೊಂಡಿರುವ ಜಾತಿಗಳು ಸಡಿಲಾಗುತ್ತಾ ಜಾತಿಗಳ ನಡುವಣ ಪ್ರತ್ಯೇಕತೆ ಕಡಿಮೆಯಾಗಿ ಒಂದರೊಳಗೊಂದು ವಿಲೀನವಾಗಲು ಶುರುವಾಗುತ್ತವೆ ಎಂದು ಭಾವಿಸಿದರು. ಇದು ತಂತಾನೇ ಸಂಭವಿಸುವ ಸಾಮಾಜಿಕ ಸ್ಥಿತ್ಯಂತರವಾದುದರಿಂದ ಅದಕ್ಕೊಂದು ಸಾಂವಿಧಾನಿಕ ಮಾರ್ಗ ಸೂಚಿಸಲಿಲ್ಲ ಅಥವಾ ಕಲ್ಪಿಸಲಿಲ್ಲ.
ಅವರ ಈ ನಿಲುವು ತಾತ್ವಿಕವಾಗಿ ತಪ್ಪೆಂದು ನಾನು ಭಾವಿಸುವುದಿಲ್ಲ. ಏಕೆಂದರೆ ವಾಸ್ತವವಾಗಿ ಜಾತಿಯ ವಜ್ರಮುಷ್ಠಿ ಸ್ವಾತಂತ್ರ್ಯಾನಂತರ ಸಡಿಲಾಗುತ್ತಾ ಬಂದಿದ್ದು ನಿಜ. ಜಾತಿಗಳು ಬೇರೆ ಬೇರೆಯಾದರೂ ಆರ್ಥಿಕವಾಗಿ ಒಂದೇ ವರ್ಗದಲ್ಲಿದ್ದ ಸಹಸ್ರಾರು ಯುವಕ ಯುವತಿಯರು ಅಂತರ್ಜಾತೀಯ ವಿವಾಹವಾಗತೊಡಗಿದ್ದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದು. ಆದರೆ ಈ ರೀತಿ ಜಾತಿಯ ಸಂಕೋಲೆಗಳನ್ನು ತ್ಯಜಿಸಿ ಮದುವೆಯಾಗಿದ್ದ, ಮದುವೆಯಾಗುತ್ತಿರುವ ಯುವಜನರಿಗೆ ಎದುರಾಗುವ ಮುಖ್ಯ ಪ್ರಶ್ನೆಯೆಂದರೆ ಮುಂದೇನು? ಎನ್ನುವುದು. ನಮ್ಮ ಸಂವಿಧಾನ ಕರ್ತೃಗಳ ಲೆಕ್ಕಾಚಾರ ತಪ್ಪಿದ್ದು ಇಲ್ಲೇ. ನಮ್ಮ ಸಂವಿಧಾನ ಜಾತ್ಯತೀತತೆಯ ಘೋಷಣೆ ಮಾಡಿತೇ ಹೊರತು ಜಾತಿ, ಧರ್ಮ, ಬುಡಕಟ್ಟುಗಳಿಂದ ತುಂಬಿದ್ದ ದೇಶದಲ್ಲಿ ಜಾತ್ಯತೀತರಾದವರು ಗುರುತಿಸಿಕೊಳ್ಳಲು, ಅನುಸರಿಸಲು ಯಾವ ನಾಗರಿಕ ಸಂಹಿತೆಯನ್ನೂ ಬದಲಿಯಾಗಿ ಕೊಟ್ಟಿಲ್ಲ. ಅಂತರ್ಜಾತೀಯ ವಿವಾಹವಾದವರಿಗೂ ಅವರ ಮಕ್ಕಳಿಗೂ ಉಳಿದಿರುವುದು ಒಂದೇ ದಾರಿ. ತಮ್ಮ ಗಂಡನ/ತಂದೆಯ ಜಾತಿಯೊಂದಿಗೆ ಗುರುತಿಸಿಕೊಳ್ಳುವುದು. ನಮ್ಮ ಸಂವಿಧಾನದಲ್ಲಿ ಅಂತರ್ಗತವಾಗಿರುವ ವೈರುದ್ಧ್ಯದ ದೆಸೆಯಿಂದ ಭಾರತದ ಜಾತ್ಯತೀತ ಆಂದೋಲನ ಕ್ಷುಲ್ಲಕ ಮತಾಂತರ ಆಂದೋಲನವಾಗಿ ಪರಿವರ್ತಿಸಲ್ಪಟ್ಟಿತು. ಗುರು ಹಿರಿಯರನ್ನೂ ಸಮಾಜವನ್ನೂ ಎದುರು ಹಾಕಿಕೊಂಡು ಅಂತರ್ಜಾತೀಯ ವಿವಾಹವಾದ ತರುಣ ತರುಣಿಯರು ಕೊನೆಗೆ ಎಲ್ಲೂ ಸಲ್ಲದ ತ್ರಿಶಂಕುಗಳಾಗಿ ಅನಾಥರಾಗಬೇಕಾದ ಪರಿಸ್ಥಿತಿ ಉಂಟಾಯಿತು.
ಈ ಪರಿಸ್ಥಿತಿಯ ಅರಿವು ಅಂಬೇಡ್ಕರ್ ಅವರಿಗೆ ಇರಲಿಲ್ಲವೆಂದು ನಾನು ನಂಬುವುದಿಲ್ಲ. ಏಕೆಂದರೆ ಹಿಂದೂ ಧರ್ಮವನ್ನೂ, ಅದು ಪ್ರತಿಪಾದಿಸುವ ವರ್ಣಾಶ್ರಮ ಧರ್ಮವನ್ನೂ ಸಂಪೂರ್ಣವಾಗಿ ತಿರಸ್ಕರಿಸಿದ ಮೇಲೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಯಾವುದಾರೂ ಒಂದು ಗುಂಪಿನ ಜೊತೆ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದುದರಿಂದಲೇ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು. ಇದರಿಂದ ತಮಗಿದ್ದ ಸಮಸ್ಯೆಯನ್ನು ವೈಯಕ್ತಿಕವಾಗಿ ಪರಿಹರಿಸಿಕೊಂಡರೇ ಹೊರತು ಜಾತ್ಯತೀತ ಆಂದೋಲನಕ್ಕೆ ಒಂದು ಸಂವಿಧಾನಾತ್ಮಕ ಅಸ್ತಿತ್ವವನ್ನು ಕೊಡಲಿಲ್ಲ. ಇಂದು ಬೌದ್ಧ ಧರ್ಮ ಜಗತ್ತಿನ ಅತ್ಯಂತ ಸೆಕ್ಯುಲರ್ ಧರ್ಮವಾಗಿದ್ದರೂ ಅದು ಜಾತ್ಯತೀತ ರಾಷ್ಟ್ರಕ್ಕೆ ಬದಲಿಯಾಗಲು ಸಾಧ್ಯವಿಲ್ಲ. ಸರಿಯಾದ ಬದಲಿಯೆಂದರೆ ‘ರಾಷ್ಟ್ರೀಯ ನಾಗರಿಕ ಸಂಹಿತೆ ’ ಮಾತ್ರ.
ಇವತ್ತು ಅಂತರ್ಜಾತೀಯ ವಿವಾಹವಾದ ಜಾತ್ಯತೀತರನ್ನು ಬಿಟ್ಟರೆ ‘ರಾಷ್ಟ್ರೀಯ ನಾಗರಿಕ ಸಂಹಿತೆ’ ಯಾರಿಗೂ ಬೇಡವಾಗಿದೆ. ಜಾತಿಯಿಂದ ದೊರಕುವ ಸವಲತ್ತುಗಳ ರುಚಿ ಹಿಡಿದಿರುವ ಪ್ರತಿಯೊಂದು ಜಾತಿ ಮತ್ತು ಧರ್ಮಗಳೂ ಇದನ್ನು ಉಗ್ರವಾಗಿ ವಿರೋಧಿಸುತ್ತವೆ. ಈಗಿರುವ ಒಂದೇ ದಾರಿಯೆಂದರೆ ಕೊನೆಯ ಪಕ್ಷ ಐಚ್ಛಿಕವಾಗಿ, ಇಷ್ಟವಿದ್ದವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದಾದ ಸವಲತ್ತನ್ನು ಸಂವಿಧಾನದಲ್ಲಿ ಕೊಡುವುದು. ಜಾತೀಯತೆಯ ಸಂಕೋಲೆಗಳಿಂದ ದೂರಾಗಲು ಹಂಬಲಿಸುವ ಆದರ್ಶವಾದಿಗಳಿಗಾದರೂ ಆಯ್ಕೆಯ ಸ್ವಾತಂತ್ರ್ಯ ನೀಡುವುದು.
ಸಂವಿಧಾನ ತಿದ್ದುಪಡಿಯಂಥ ಗುರುತರ ಹೊಣೆ ರಾಜ್ಯ ಸರಕಾರವೊಂದರ ಅಡಿಯಲ್ಲಿ ಬರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವ್ಯಾಪ್ತಿಯನ್ನು ಮೀರಿದ್ದೆಂದು ನನಗೆ ಗೊತ್ತು. ಆದರೆ ಈ ಆಯೋಗ ತನ್ನ ಪರಿಮಿತಿಯೊಳಗೇ ಅಂತರ್ಜಾತೀಯ ವಿವಾಹವಾದವರನ್ನು ಜಾತ್ಯತೀತ ಗುಂಪೆಂದು ಗುರುತಿಸಿ ಅವರಿಗೆ ಕೊಂಚವಾದರೂ ಪ್ರೋತ್ಸಾಹ ಕೊಟ್ಟರೆ ನಿಧಾನವಾಗಿಯಾದರೂ ಇದು ‘ಐಚ್ಛಿಕ ನಾಗರಿಕ ಸಂಹಿತೆ’ಯೊಂದನ್ನು ಸಂವಿಧಾನ ದತ್ತವಾಗಿ ಕೊಡಲು ಒತ್ತಡವಾಗಿ ಪರಿಣಮಿಸಬಹುದೆಂದು ತಿಳಿದಿದ್ದೇನೆ. ಈ ದಿಸೆಯಲ್ಲಿ ಆಯೋಗ ಇಡುವ ಸಣ್ಣ ಹೆಜ್ಜೆ ಮೀಸಲಾತಿಯ ಅರ್ಥವನ್ನೇ ಬದಲಿಸಿ ಪುನರ್ ವ್ಯಾಖ್ಯಾನ ಮಾಡುತ್ತದೆ. ಕರ್ನಾಟಕಾದ್ಯಂತ ಅಸಂಘಟಿತರಾಗಿ ಚದುರಿರುವ ಈ ಜಾತ್ಯತೀತರಿಗೆ ಪ್ರೋತ್ಸಾಹವನ್ನೂ ಹೊಸ ಹುರುಪನ್ನೂ ನೀಡುತ್ತದೆ. ಕರ್ನಾಟಕದಲ್ಲಿ ಅವ್ಯಕ್ತವಾಗಿ ನಡೆಯುತ್ತಿರುವ ಜಾತ್ಯತೀತ ಸೆಕ್ಯುಲರ್ ಆಂದೋಲನಕ್ಕೆ ಅಧಿಕೃತ ಸಮ್ಮತಿ ದೊರಕಿಸಿದಂತಾಗುತ್ತದೆ.
‘ಸಂಪದ’ದ ಸದಸ್ಯರಿಗೆ ಮತ್ತು ಓದುಗರಿಗೆ ತೇಜಸ್ವಿಯವರನ್ನು ಪರಿಚಯಿಸುವ ಅಗತ್ಯವಿಲ್ಲ. ಕನ್ನಡ ಕಂಡ ಅತಿ ವಿಶಿಷ್ಟ ಲೇಖಕರಲ್ಲಿ ಒಬ್ಬರಾದ ತೇಜಸ್ವಿ ಸದಾ ವರ್ತಮಾನದ ರಾಜಕಾರಣಕ್ಕೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದ್ದಾರೆ. ಅಂತರ್ಜಾತೀಯ ವಿವಾಹವಾಗಿ ಜಾತಿಯನ್ನೂ ಮೀರಿ ನಿಂತರೂ ಭಾರತೀಯ ಕಾನೂನುಗಳು ಮಾತ್ರ ಎಲ್ಲರನ್ನೂ ಒಂದು ಜಾತಿ ಇಲ್ಲವೇ ಧರ್ಮದ ಅನುಯಾಯಿಗಳನ್ನಾಗಿಯೇ ನೋಡುತ್ತದೆ. ಅಂತರ್ಜಾತೀಯ ವಿವಾಹವಾಗುವ ದಂಪತಿಗಳು ತಾತ್ವಿಕವಾಗಿ ಜಾತಿಯನ್ನು ಕಡೆಗಣಿಸುತ್ತಾರೆ. ಆದರೆ ಕಾನೂನಿನಂತೆ ಪತ್ನಿ ತನ್ನ ಪತಿಯ ಜಾತಿಗೆ ಇಲ್ಲವೇ ಧರ್ಮಕ್ಕೆ ಜಾತ್ಯಂತರ/ಮತಾಂತರಗೊಳ್ಳುತ್ತಾಳೆ. ಜಾತಿಯನ್ನು ನಾವು ಬಿಟ್ಟರೂ ಜಾತಿ ನಮ್ಮನ್ನು ಬಿಡದ ವಿಪರ್ಯಾಸವನ್ನು ತೇಜಸ್ವಿ ಇಲ್ಲಿ ಚರ್ಚಿಸಿದ್ದಾರೆ. ಈ ಬರೆಹ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ.ರವಿವರ್ಮ ಕುಮಾರ್ ಅವರಿಗೆ ಬರೆದ ಪತ್ರದ ರೂಪದಲ್ಲಿತ್ತು. ಅದರ ಸಂಪಾದಿತ ಆವೃತ್ತಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಲೇಖನದ ಹಿನ್ನೆಲೆಯ ಕುರಿತ ಹೆಚ್ಚಿನ ವಿವರಗಳಿಗೆ ನನ್ನ ಬ್ಲಾಗ್ ನೋಡಿ. - ಇಸ್ಮಾಯಿಲ್
"ನಮ್ಮ ದೇಶ ಜಾತ್ಯಾತೀತ ದೇಶ", ನಮ್ಮದು "ಧರ್ಮ ನಿರಪೇಕ್ಷ ದೇಶ", ನಾವು "ದೇಶದ ಹಿಂದುಳಿದವರನ್ನು ಉದ್ಧರಿಸಿಬೇಕು" ಎಂಬ ದೊಡ್ಡ ದೊಡ್ಡ ಮಾತುಗಳನ್ನು ಭಾರತದಲ್ಲಿ ಕೇಳುತ್ತಾ ಬೆಳೆಯದ ಮಕ್ಕಳೇ ಇಲ್ಲ ಎಂದುಕೊಳ್ಳುತ್ತೇನೆ. ತಾತ್ವಿಕವಾಗಿ ಇದು ತುಂಬಾ ಘನವಾದ ಮಾತು. ಈ ಮಾತಿನಲ್ಲಿ ತುಂಬಾ ಮೌಲಿಕವಾದ ವಿಚಾರಗಳಿವೆ. ನಮ್ಮನ್ನು ನಾವು ನೋಡಿಕೊಳ್ಳುವ ರೀತಿಯನ್ನು ಇದು ನಿರ್ದೇಶಿಸುತ್ತದೆ, ನಿರೂಪಿಸುತ್ತದೆ. ಯಾವುದೋ ಅಮೂರ್ತವಾದ ನೆಲೆಯಲ್ಲಿ ನಮ್ಮ ದೇಶದ ಹಿರಿಮೆಯನ್ನು ನಾವು ಅರಿಯುವಂತೆ, ಕೊಂಡಾಡುವಂತೆ, ಸಂಭ್ರಮಿಸುವಂತೆ ಪ್ರೇರೇಪಿಸುತ್ತದೆ. ನಮ್ಮ ಮನಸ್ಸಿನಲ್ಲಿ ದೇಶದ ಬಗ್ಗೆ ಅಮೂಲ್ಯವಾದ ಪರಿಕಲ್ಪನೆಗಳನ್ನು ಬಿತ್ತುತ್ತವೆ.
ಆದರೆ ಈ ಎಲ್ಲ ವಿಚಾರವಾಹಿನಿಗಳು ನಮ್ಮ ದೇಶದ ಜಾತಿಯತೆಯನ್ನು, ಜಾತಿವಾದವನ್ನು ಅಳಿಸಲು ಸಾಧ್ಯವಾಗಿದೆಯೆ ಎಂಬುದು ಪ್ರಶ್ನೆ. ಇಂದಿಗೂ ಜಾತೀಯ ರಾಜಕೀಯ ಫಲ ಕೊಡುತ್ತಲೇ ಇರುವುದು, ಮೀಸಲಾತಿಯಿದ್ದೂ ಹಿಂದುಳಿದ ಜನಾಂಗಗಳು ಹಿಂದುಳಿದೇ ಇರುವುದು, ದಲಿತರ ಮತ್ತು ಹಿಂದುಳಿದವರ ಮೇಲೆ ಸಣ್ಣಪುಟ್ಟ ವಿಷಯಕ್ಕೂ ದೌರ್ಜನ್ಯ ನಡೆಯುವುದು ನಮ್ಮ ದೇಶದಲ್ಲಿ ನಡೆಯುತ್ತಲೇ ಬಂದಿದೆ. ಇಪ್ಪತ್ತೊಂದನೆಯ ಶತಮಾನದಲ್ಲೂ ಜಾತೀಯತೆ ನಮ್ಮ ನಡುವೆ ಪಿಡುಗಾಗಿ ಉಳಿದೇ ಇದೆ. ವೈಜ್ಞಾನಿಕವಾಗಿ ಜಾತಿಯ ಅಸಂಬದ್ಧತೆ ಗೊತ್ತಿದ್ದೂ, ಸಾಮಾಜಿಕವಾಗಿ ಅದರ ಕ್ರೌರ ಗೊತ್ತಿದ್ದೂ, ವಯ್ಯುಕ್ತಿಕವಾಗಿ ಅದರ ಪರಿಣಾಮ ಗೊತ್ತಿದ್ದೂ ಯಾಕೆ ಜಾತಿ ಹಾಗೆಯೇ ಉಳಿದಿದೆ? ಬೆಂಕಿ ಸುಡುತ್ತದೆ ಎಂದು ಗೊತ್ತಿದ್ದೂ ಅದರಿಂದ ಯಾಕೆ ದೂರ ಸರಿಯುತ್ತಿಲ್ಲ?
ರಾಜಕೀಯವನ್ನು ದೂರುವ ಮಾತನ್ನು ಸದ್ಯಕ್ಕೆ ಪಕ್ಕಕ್ಕಿಡುತ್ತೇನೆ. ಏಕೆಂದರೆ, ಜಾತ್ಯಾಧಾರಿತ ರಾಜಕೀಯವನ್ನು ನಾವು ಗೊಣಗುತ್ತಾ ಸಹಿಸಿಕೊಂಡು ಬಂದಿರುವುದನ್ನು ಗಮನಿಸಿ. ಆಗೀಗ ಅದರ ಬಗ್ಗೆ ಬಯ್ಯುತ್ತಾ ಇದ್ದೇವೆಯೇ ಹೊರತು ಅದರ ಬಗ್ಗೆ ಗಂಭೀರವಾದ ಪ್ರತಿಕ್ರಿಯೆ ಬಂದಿರುವುದು ಕಾಣುವುದಿಲ್ಲ. ಪ್ರತಿಕ್ರಿಯೆ ಮಾತಿನಲ್ಲಿ ಬಂದಿರಬಹುದು, ಭಾಷಣ ಲೇಖನಗಳಲ್ಲಿ ಇರಬಹುದು. ಆದರೆ ಕ್ರಿಯೆಯಲ್ಲಿ ಏನಾಗಿದೆ ಎಂದು ನೋಡಿದಾಗ ನಿರಾಶೆಯಾಗದೆ ಇರಲಾರದು. ಆದ್ದರಿಂದ ಜಾತಿ ಪರಿಸ್ಥಿತಿಗೆ ರಾಜಕೀಯವೇ ಕಾರಣ ಎಂದು ಪರಿಗಣಿಸದೆ ಅದೂ ಕೂಡ ನಮ್ಮ ಮತ್ತಾವುದೋ ಸೋಲಿನ ಒಂದು ಪರಿಣಾಮ ಎಂದು ನೋಡುವುದು ಹೆಚ್ಚು ಸೂಕ್ತ ಅನಿಸುತ್ತದೆ. ಜಾತಿ ರಾಜಕೀಯ ಖಂಡಿತವಾಗಿಯೂ ಜಾತೀಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು, ಕಾಪಾಡಿ ಬೆಳೆಸುತ್ತಿರುವುದು ಒಂದು ಮಟ್ಟದಲ್ಲಿ ನಿಜ ಎಂದು ಅನ್ನಿಸಿಯೂ ಈ ಮಾತು ಹೇಳುತ್ತಿದ್ದೇನೆ.
ಜಾತ್ಯಾತೀತ ರಾಜಕೀಯ, ಮೀಸಲಾತಿ, ಅಂತರ್-ಜಾತೀಯ ವಿವಾಹ ಇತ್ಯಾದಿಗಳನ್ನು ಜಾತಿ ನಿವಾರಣೆಗೆ ಮುಖ್ಯವಾದ ಪರಿಹಾರ ಮಾರ್ಗಗಳೆಂದು ಪರಿಗಣಿಸುತ್ತೇವೆ. ಇದು ಒಂದು ಅರ್ಥದಲ್ಲಿ ನಿಜವೂ ಹೌದು. ಅವುಗಳಿಂದ ಸ್ವಲ್ಪ ಮಟ್ಟಿಗಾದರೂ ಜಾತಿನಿವಾರಣೆಯ ಕೆಲಸ ಆಗುತ್ತಿದೆ ಎನ್ನುವುದು ಸುಳ್ಳಲ್ಲ. ಆದರೆ ಇವುಗಳೆಲ್ಲಾ ಜಾತಿಯನ್ನು ಸಾಮಾಜಿಕ ಮತ್ತು ಸಾಮುದಾಯಿಕ ಸಮಸ್ಯೆಯಾಗಿ ಮಾತ್ರ ನೋಡುವುದರಿಂದ ಕಾಣುವ ಪರಿಹಾರ ಮಾರ್ಗಗಳು ಮತ್ತು ಜಾತೀಯ ಮನಸ್ಸಿನ ಜತೆಗಿನ ನಮ್ಮ ಸಂಘರ್ಷಕ್ಕೆ ತುಂಬಾ ತಡವಾದ ಪ್ರತಿಕ್ರಿಯೆ. ರಾಜಕೀಯ, ಮೀಸಲಾತಿ, ವಿವಾಹ ಇತ್ಯಾದಿಗಳ ಹಂತಕ್ಕೆ ಬರುವ ಎಷ್ಟೋ ಮುಂಚೆಯೇ ಆಗಬೇಕಾದ ಕೆಲಸವನ್ನು ನಾವು ಮರೆಯುತ್ತಿದ್ದೇವೆ. ಎಳೆಯ ಮನಸ್ಸುಗಳಲ್ಲೇ ಇದರ ವಿಚಾರವನ್ನು ಹುಟ್ಟು ಹಾಕುವುದು ಮುಖ್ಯವಲ್ಲವೆ? ಅದು ವಿಚಾರವಾದ ಆದರಷ್ಟೇ ಸಾಲದು. ಶಿಕ್ಷಣ, ವಿದ್ಯೆ ಆದರಷ್ಟೇ ಸಾಲದು. ಅದು ತರಬೇತಿಯಾಗಬೇಕು. ಅಂದರೆ ನಿಜ ಜೀವನದಲ್ಲಿ ಜಾತಿಯ ನಿಷ್ಫಲತೆಯನ್ನು ಮನಗಾಣಿಸಲು ಶಿಬಿರಗಳು, ಕಾರ್ಯಾಗಾರಗಳು ಬೇಕಾಗುತ್ತವೆ. ಅವು ಒಟ್ಟಾರೆ ಜಾತಿಬೇಧ, ವರ್ಣಬೇಧ, ಲಿಂಗಬೇಧ ಇತ್ಯಾದಿಯಾಗಿ ಎಲ್ಲ ರೀತಿಯ ಬೇಧಭಾವಗಳನ್ನು ಹೋಗಲಾಡಿಸುವ ಕಾರ್ಯಾಗಾರವಾಗಬೇಕಾಗುತ್ತದೆ.
ಶಿಕ್ಷಣ, ವಿದ್ಯೆಗೂ ತರಬೇತಿಗೂ ಇರುವ ವ್ಯತ್ಯಾಸ ಎಲ್ಲರಿಗೂ ತಿಳಿದಿರುವಂಥದೇ. ತರಬೇತಿಯಲ್ಲಿ ಸಲಕರಣೆ ಸಾಧನಗಳು ಲಭ್ಯವಾಗುತ್ತದೆ. ಶಿಕ್ಷಣ, ವಿದ್ಯೆಯಲ್ಲಿ ಸಲಕರಣೆ ಸಾಧನಗಳ ಹಿಂದಿನ ತಿಳುವಳಿಕೆ ಮುಖ್ಯವಾಗುತ್ತದೆ. ಆದರೆ ಪ್ರತಿದಿನದ ಜೀವನದಲ್ಲಿ ಜಾತಿಬೇಧವನ್ನು ಎದುರಿಸಲು ನಮಗೆ ಇಲ್ಲದಿರುವ ಮುಖ್ಯ ಅಂಶ ಸಲಕರಣೆಗಳು. ಎದುರಿಸಬೇಕಾದ ಪರಿಸ್ಥಿತಿಗಳಲ್ಲಿ ನಾವು ಉಪಯೋಗಿಸಬೇಕಾದ ತಂತ್ರಗಳು. ನಮಗೆ ಅತಿ ಹತ್ತಿರದವರು, ನಮಗೆ ಜೀವನದಲ್ಲಿ ತುಂಬಾ ಸಹಾಯ ಮಾಡಿದವರು ಜಾತಿಬೇಧ ಮಾಡಿದಾಗ ಅದನ್ನು ಹೇಗೆ ಎದುರಿಸಬೇಕು? ಆಗ ನಮಗಾಗುವ ಮುಜುಗರವನ್ನು ಹೇಗೆ ವ್ಯಕ್ತಪಡಿಸುವುದು? ಜಾತಿಬೇಧಕ್ಕೆ ಗುರಿಯಾದವರಷ್ಟೇ ಅಲ್ಲ ಜಾತಿಬೇಧಮಾಡಿದವರಿಗೂ ಒಳ್ಳೆಯದಾಗುವಂತೆ ಹೇಗೆ ಪರಿಸ್ಥಿತಿಯನ್ನು ನಿಭಾಯಿಸುವುದು? ಜಾತೀಯ ಮನಸ್ಸುಗಳೊಂದಿಗೆ ವ್ಯವಹರಿಸಲು ಬೇಕಾದ ಅತಿಮುಖ್ಯವಾದ ವ್ಯಾವಹಾರಿಕ ಸಲಕರಣೆ ನಮಗೆ ಇಲ್ಲದಾಗಲೇ ಸಿಟ್ಟು, ಕೂಗಾಟ, ಜಗಳ ಇತ್ಯಾದಿಗಳಲ್ಲಿ ನಮ್ಮ ಮಾತು ಪರ್ಯಾವಸನಗೊಂಡು ದ್ವೇಷ, ಹಗೆತನದ ಪರಿಸ್ಥಿತಿ ಏರ್ಪಡುತ್ತದೆ.
ಆಡಿಕೊಂಡು ಖುಷಿಯಾಗಿರಬೇಕಾದ ಮನಸ್ಸುಗಳಲ್ಲಿ ಜಾತಿಯಂಥ ವಿಚಾರಗಳನ್ನು ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಏಳಬಹುದು. ಆದರೆ, ಬ್ರಾಹ್ಮಣ ಜಾತಿಯಲ್ಲಿ ಏಳೆಂಟು ವರ್ಷದವರಿಗೆ ಉಪನಯನ ಮಾಡುವುದು ನಮಗೆ ಗೊತ್ತಿದೆ. ಬೇರೆ ಬೇರೆ ಜಾತಿಗಳಲ್ಲಿ ಇಂತಹ ನೂರಾರು ಜಾತೀಯ ಆಚರಣೆಗಳು ಎಳೆಯ ಮನಸ್ಸುಗಳ ಮೇಲೆ ಪರಿಣಾಮ ಬೀರದೇ ಇರುತ್ತದೆಯೆ? ಮಕ್ಕಳ ಮನಸ್ಸುಗಳ ಉಪಪ್ರಜ್ಞೆಯಲ್ಲಿ ಸ್ಥಾಪಿತವಾಗುವ ಇಂಥ ಜಾತೀಯ ವಿಚಾರಗಳನ್ನು ಹೊರಗೆ ತಂದು ಚರ್ಚಿಸುವ ಕೆಲಸವೂ ಸಣ್ಣ ವಯಸ್ಸಲ್ಲೇ ಆಗಬೇಕಲ್ಲವೆ? ಇಂಥ ವ್ಯವಸ್ಥೆ ನಮ್ಮ ಶಾಲೆಗಳಲ್ಲಿ ಇರಬೇಕಲ್ಲವೆ?
ಈ ರೀತಿಯ ತರಬೇತಿಯ ಬಗ್ಗೆ ಯೋಚಿಸಿದಾಗ ಒಂದೆರಡು ಉದಾಹರಣೆಗಳು ನೆನಪಾದವು. ಮೊದಲನೆಯದು ಜೇನ್ ಎಲಿಯಟ್ ಎಂಬ ಶಾಲಾ ಶಿಕ್ಷಕಿ ೧೯೬೮ರಲ್ಲಿ ನಡೆಸಿದ ಪ್ರಯೋಗದ ಬಗ್ಗೆ ನಾನು ನೋಡಿದ ಒಂದು ಸಾಕ್ಷ್ಯಚಿತ್ರ. ಬರೀ ಬಿಳಿಯರೇ ಇರುವ ಪುಟ್ಟ ಮಕ್ಕಳ ಶಾಲಾ ತರಗತಿಯೊಂದಕ್ಕೆ ವರ್ಣಬೇಧವನ್ನು ತಿಳಿಹೇಳಲು ನಡೆಸಿದ ಪ್ರಯೋಗ ಅದು. ನೀಲಿಗಣ್ಣು ಮತ್ತು ಕಂದುಗಣ್ಣಿನ ಆಧಾರದ ಮೇಲೆ ಶಾಲಾ ಮಕ್ಕಳನ್ನು ಬೇರ್ಪಡಿಸಿ ಕರಿಜನರನ್ನು ಅಮೇರಿಕ ನಡೆಸಿಕೊಳ್ಳುತ್ತಿದ್ದ ರೀತಿಯಲ್ಲಿ ನೀಲಿಗಣ್ಣಿನ ಮಕ್ಕಳನ್ನು ನಡೆಸಿಕೊಂಡು, ಕಂದುಬಣ್ಣದವರನ್ನು ಬೇಕಂತಲೇ ನೀಲಿಗಣ್ಣಿನ ಮಕ್ಕಳಿಗಿಂತ ಉಚ್ಛವಾಗಿ ನಡೆಸಿಕೊಳ್ಳುವುದೇ ಆ ಪ್ರಯೋಗದ ಮೂಲ ರೂಪ. ಅಮೇರಿಕದಲ್ಲಿ ನೀಲಿಗಣ್ಣು ಬಿಳಿಯ ಜನರಲ್ಲೇ ಉತ್ಕೃಷ್ಟತೆಯ ಸಂಕೇವಾಗಿ ಪರಿಗಣಿಸಲ್ಪಡುವುದು ನಿಮಗೆ ತಿಳಿದಿರಬಹುದು. ಆಗ ತಿಳಿದುಬಂದ ಒಂದು ವಿಷಯವೆಂದರೆ ಪ್ರಯೋಗದ ವೇಳೆಯಲ್ಲಿ ಬೇರೆ ಕ್ಲಾಸಿನಲ್ಲೂ ಕಂದುಬಣ್ಣದ ಮಕ್ಕಳು ಚೆನ್ನಾಗಿ ಪಾಠವನ್ನು ಕಲಿಯುತ್ತಿದ್ದು, ನೀಲಿಗಣ್ಣಿನ ಮಕ್ಕಳು ಹಿಂದೆ ಬಿದ್ದದ್ದು. ಮುಂದೆ ಜೇನ್ ಎಲಿಯಟ್ ದೊಡ್ಡವರಿಗೂ ಇಂಥ ಕಾರ್ಯಾಗಾರವನ್ನು ನಡೆಸಿ ಈಗ ಕಂಪನಿಗಳ ಕೆಲಸಗಾರರಿಗೂ ಅದನ್ನು ನಡೆಸುತ್ತಾಳೆ. ಆಕೆಯ ಪ್ರಯೋಗಗಳ ಬಗ್ಗೆ, ಕಾರ್ಯಾಗಾರದ ಬಗ್ಗೆ ವಾದವಿವಾದಗಳು ಏನೇ ಇದ್ದರು ಆಕೆಯ ಮೂಲ ಆಶಯ ತುಂಬಾ ಘನವಾದುದು ಎಂದು ನನಗನಿಸುತ್ತದೆ. ಇಷ್ಟಾಗಿಯೂ ಇದು ಅಮೇರಿಕ/ಆಸ್ಟ್ರೇಲಿಯಾದಂಥ ದೇಶಗಳಲ್ಲಿ ಈಗಲೂ ಸಾಕಷ್ಟು ಪ್ರಚಲಿತದಲ್ಲಿರುವ ವರ್ಣಬೇಧದ ಬಗೆಗೆ ಅರಿವು ಮೂಡಿಸುವ, ಮಾನಸಿಕ ತಯಾರಿ ನಡೆಸುವ ಕಾರ್ಯಾಗಾರ ಅಷ್ಟೆ. ನಾವೇ ಬೇಧಕ್ಕೆ ಗುರಿಯಾದಾಗ ಅಥವಾ ನಮ್ಮ ಎದುರೇ ಬೇಧಕೃತ್ಯ ನಡೆದಾಗ ಅದನ್ನು ನಿಭಾಯಿಸಲು ಬೇಕಾದ ಸಾಧನ ಸಲಕರಣೆಗಳನ್ನು ನೀಡುವುದಿಲ್ಲ.
ಮತ್ತೊಂದು ಉದಾಹರಣೆ ಆಸ್ಟ್ರೇಲಿಯಾದ ಶಾಲೆಗಳಲ್ಲಿ ಆರೇಳು ವರ್ಷದ ಪುಟ್ಟ ಮಕ್ಕಳಿಗೆ ಲೈಂಗಿಕ ಬೋಧನೆಯ ತರಗತಿಗಳು ಇರುತ್ತವೆ. ಈ ತರಗತಿಗಳಿಗೆ ಮಕ್ಕಳನ್ನು ಕಳಿಸಲು ತಂದೆ-ತಾಯಂದರು ಒಪ್ಪಗೆ ಸೂಚಿಸಬೇಕು. ಈ ತರಗತಿಗಳಲ್ಲಿ ಮಕ್ಕಳಿಗೆ ಲೈಂಗಿಕ ಅಂದರೆ, ಲೈಂಗಿಕ ಅತಿಕ್ರಮಣದಿಂದ ತಮ್ಮನ್ನು ಕಾಪಾಡಿಕೊಳ್ಳವುದರ ಬಗ್ಗೆ ಬೋಧನೆಯಾಗುತ್ತದೆ. ಯಾರಾದರೂ ಹಿರಿಯರು ಮಕ್ಕಳ ಹತ್ತಿರ ಬಂದು ಮುಟ್ಟಬಾರದ ಮೈ ಭಾಗಗಳನ್ನು ಮುಟ್ಟಿದರೆ ಹೇಗೆ ಹುಷಾರಾಗಿರಬೇಕು. ಹೇಗೆ ತಂದೆ-ತಾಯಂದಿರಿಂದ ಸಹಾಯ ಪಡೆಯಬೇಕು ಎಂದೆಲ್ಲಾ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವ ಹಾಗೆ ತಿಳಿಹೇಳಲಾಗುತ್ತದೆ. ಇದು ಯಾಕೆ ಮುಖ್ಯವೆಂದರೆ ಮಕ್ಕಳ ಲೈಂಗಿಕ ಅತಿಕ್ರಮಣದ ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚಿನ ಸಂದರ್ಭಗಳಲ್ಲಿ ಅತಿಕ್ರಮಣಕಾರರು ಕುಟುಂಬದವರೋ, ಕುಟುಂಬದ ಪರಿಚಿತರೋ, ಒಟ್ಟಾರೆ ಮಕ್ಕಳಿಗೆ ಪರಿಚದವರೇ ಆಗಿರುತ್ತಾರೆ. ಆದ್ದರಿಂದ ಮಕ್ಕಳಿಗೆ ಅತಿಕ್ರಮಣ ನಡೆಸಿದವರ ಮೇಲೆ ದೂರು ಹೇಳಲು ಅಂಜಿಕೆ ಇರುತ್ತದೆ. ಅತಿಕ್ರಮಣಕಾರರೊಡನೆ ತಂದೆ-ತಾಯಂದಿರು ಚೆನ್ನಾಗಿ ನಡೆದುಕೊಳ್ಳುವುದು ಇವರಿಗೆ ಮಾನಸಿಕ ಗೊಂದಲ ಉಂಟು ಮಾಡುತ್ತದೆ. ಹಾಗಾಗಿಯೆ ಮಕ್ಕಳಿಗೆ ಇಂಥ ಬೋಧನೆಯ ಅಗತ್ಯ ತುಂಬಾ ಇರುತ್ತದೆ. ಭಾರತೀಯ ಸಮಾಜದಲ್ಲಿ ಮಕ್ಕಳಿಗೆ ಲೈಂಗಿಕ ಬೋಧನೆ ನಡೆಸಬೇಕಾದ ಅವಶ್ಯಕತೆ ಸದ್ಯಕ್ಕೆ ಇಲ್ಲದಿರಬಹುದು. ಏಕೆಂದರೆ ನಮ್ಮ ಸಮಾಜ ಪಾಶ್ಚಿಮಾತ್ಯ ಸಮಾಜದಷ್ಟು ಇನ್ನೂ ಲೈಂಗೀಕೃತಗೊಂಡಿಲ್ಲ. ಆದರೂ ಲೈಂಗಿಕ ವಿಕೃತಿ ಇಲ್ಲ್ಲಎಂದು ಹೇಳಲು ಬರುವುದಿಲ್ಲ. ಆದರೆ ಆರೋಗ್ಯಕರ ಲೈಂಗಿಕತೆಯ ಚರ್ಚೆಯ ಅನಿವಾರ್ಯತೆಯಂತೂ ಇದೆ. ನಾನಿಲ್ಲಿ ಉದಾಹರಣೆಯನ್ನು ಎತ್ತಿಕೊಂಡ ಕಾರಣ ಲೈಂಗಿಕ ಚರ್ಚೆಯಲ್ಲ. ಪುಟ್ಟ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಮಾರಕವಾಗುವಂಥ ಲೈಂಗಿಕ ಅತಿಕ್ರಮಣಗಳಿಂದ ಅವರನ್ನು ರಕ್ಷಿಸಲು ಅವರನ್ನು ತರಬೇತು ಮಾಡುವುದು, ತಮ್ಮನ್ನು ತಾವು ರಕ್ಷಿಸಿಕೊಳ್ಳವುದನ್ನು ಅವರಿಗೆ ಕಲಿಸುವುದು ಎಷ್ಟು ಮುಖ್ಯ ಮತ್ತು ಉಪಯುಕ್ತ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಜಾತಿಯ ವಿಷಯದಲ್ಲೂ ಕೂಡ ಸಣ್ಣ ವಯಸ್ಸಿನಲ್ಲೇ ಇಂಥ ತರಬೇತಿಯ ಅಗತ್ಯವಿದೆ. ದಿನವಹಿ ನಡೆಯುವ ಆಚರಣೆಗಳಲ್ಲಿ ಜಾತಿಬೇಧ ಹೇಗೆ ರೂಪ ಪಡೆಯುತ್ತಿದೆ ಎಂಬ ಅಂಶ. ಮನೆಯಲ್ಲಿ ಪ್ರೀತಿಪಾತ್ರರಾದ ತಂದೆ-ತಾಯಂದಿರು ಜಾತೀಯವಾಗಿ ನಡೆದುಕೊಂಡಾಗ ಮಕ್ಕಳು ಅದನ್ನು ಹೇಗೆ ನಿಭಾಯಿಸಬೇಕು. ತಮ್ಮ ಹತ್ತಿರದ ಸ್ನೇಹಿತರು ಒಡನಾಡಿಗಳು ಜಾತೀಯವಾಗಿ ನಡೆದುಕೊಂಡಾಗ ಹೇಗೆ ವ್ಯವಹರಿಸಬೇಕು ಎಂಬಂಥ ತರಬೇತಿ ತುಂಬಾ ಮುಖ್ಯ. ಇಂಥ ತರಬೇತಿ ಹೊಂದಿದ ಮನಸ್ಸು ಬೆಳೆದು ದೊಡ್ಡದಾದ ಮೇಲೆ ಸಿಟ್ಟು, ಕೂಗಾಟ ಜಗಳವನ್ನು ಸ್ವಲ್ಪ ಮಟ್ಟಿಗಾದರೂ ಹತ್ತಿಕ್ಕಿ ಮುಖ್ಯವಾದ ಅಂಶದತ್ತ ಗಮನ ಹರಿಸಲು ಸಾಧ್ಯವಾಗಬಹುದು. ರಾಜಕೀಯ ಅಂಥ ಮನಸ್ಸನ್ನು ಸ್ವಾಧೀನ ಮಾಡಿಕೊಳ್ಳುವುದು ಕಷ್ಟವಾಗಬಹುದು.
ಇಷ್ಟು ಆಶಯಗಳನ್ನು ನಿಮ್ಮ ಮುಂದಿಟ್ಟು, ನೆನದೊಡನೆ ನಿದ್ದೆಯಿಂದ ಧಿಗ್ಗನೆ ಎಚ್ಚರವಾಗುವಂಥ ಕಳವಳವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಇವು ಯಾವುದೂ ಭಾರತೀಯ ಮನಸ್ಸಿಗೆ ಹೊಳೆಯದಂಥ ವಿಷಯವೇನೂ ಅಲ್ಲ. ನಮ್ಮ ವಿಚಾರವಂತರಿಗೆ, ಸಾಹಿತಿಗಳಿಗೆ, ಸಾಮಾಜಿಕ ನೇತಾರರಿಗೆ ಗೊತ್ತಿರದ ವಿಷಯವೇನಲ್ಲ. ಆದರೆ ಆ ದಿಕ್ಕಿನಲ್ಲಿ ಬೇಕಾದ ಕೆಲಸವಾಗದೇ ಇರುವುದು ನೋಡಿದರೆ ನಮಗೆ ಜಾತಿ ಬಗೆಗೆ ನಿಜವಾದ ಆತಂಕವಿದೆಯೆ ಎಂದು ಯೋಚಿಸುತ್ತೇನೆ. ಸಂಸ್ಕೃತಿ ಪರಂಪರೆ ಎಂಬಿತ್ಯಾದಿ ಅಂಶಗಳನ್ನು ಜಾತೀಯತೆಯೊಂದಿಗೆ ಕಲಸುಮೇಲೋಗರ ಮಾಡಿ ಇಂಥ ಹೀನ ಆಚರಣೆಯನ್ನು ಕಾಪಾಡಿಕೊಂಡು ಬರುತ್ತಿದೇವಾ ಎಂದು ಚಿಂತೆಯಾಗುತ್ತದೆ.
ಕನ್ನಡವನ್ನು ಕಲಿತವರಿಗೆ, ಕಲಿಸುವವರಿಗೆ ಮತ್ತು ಇತರ ಆಸಕ್ತರಾದವರಿಗೆಂದು ಈ ಲೇಖನವನ್ನು ಇಲ್ಲಿ ಹಾಕಿದ್ದೇನೆ. ಪ್ರತಿಕ್ರಿಯೆಗಳಿಗೆ ಸ್ವಾಗತ.
ಪದವಿ ತರಗತಿಗಳಲ್ಲಿ ಭಾಷಾಶಿಕ್ಷಣ: ಕನ್ನಡ
ಈ ಬರವಣಿಗೆಯು , ಈ ಪುಸ್ತಕದಲ್ಲಿ ಇದೇ ವಿಷಯವನ್ನು ಕುರಿತಂತೆ ಬಂದಿರುವ ಇತರ ಲೇಖನಗಳ ಜೊತೆಯಲ್ಲಿ ಇರುತ್ತದೆ ಮತ್ತು ಅವುಗಳಿಗಿಂತ ಬೇರೆಯಾಗಿರುತ್ತದೆ. ಏಕೆಂದರೆ , ಕರ್ನಾಟಕದಲ್ಲಿಪದವಿ ತರಗತಿಗಳಲ್ಲಿ ಕನ್ನಡವನ್ನು ಓದುವ ಎಲ್ಲ ಹುಡುಗ-ಹುಡುಗಿಯರಿಗೂ ಕನ್ನಡವನ್ನುಮಾತನಾಡಲು ಬರುತ್ತದೆ. ಓದಲು ಮತ್ತು ಬರೆಯಲು ತಕ್ಕ ಮಟ್ಟಿಗೆ ಬರುತ್ತದೆ. ಆದರೆ , ಪಠ್ಯಪುಸ್ತಕಗಳನ್ನು ಬಿಟ್ಟರೆ , ಬೇರೆ ಏನನ್ನಾದರೂ ಅವರು ಓದುತ್ತಾರೆಯೇ , ಬರೆಯುತ್ತಾರೆಯೇ ? ಏನನ್ನು ಓದುತ್ತಾರೆ/ಬರೆಯುತ್ತಾರೆ ಎಂಬ ಪ್ರಶ್ನೆಗಳಿಗೆ ಸಂತೋಷಕರವಾದ ಉತ್ತರ ಸಿಕ್ಕುವುದಿಲ್ಲ. ನಮ್ಮ ಕಲಿಸುವಿಕೆಯು , ಭಾಷೆಯನ್ನು ಬಳಸುವ ಶಕ್ತಿಯನ್ನು ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸದೆ ಇದ್ದರೆ , ಅಥವಾಎಲ್ಲೋ ಅಲ್ಪ-ಸ್ವಲ್ಪ ಬೆಳೆಸಿದರೆ ನಮ್ಮ ಕೆಲಸದಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆಯುನನ್ನನ್ನು ಮೂವತ್ತಾರು ವರ್ಷಗಳಿಂದಲೂ ಕಾಡುತ್ತಿದೆ. ಇದಕ್ಕೆ ಉತ್ತರವನ್ನು ಹುಡುಕುವ , ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಈ ದಾರಿಯಲ್ಲಿ ಈ ಲೇಖನವು ಒಂದು ಪುಟ್ಟ ಹೆಜ್ಜೆ.
ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ನಮ್ಮ ಕನ್ನಡ ತರಗತಿಗಳ ಸ್ವರೂಪವು ಬದಲಾಗಿದೆ. ಅಲ್ಲಿ ಕಲಿಯಲೆಂದು ಬರುತ್ತಿರುವವರು , ನಮ್ಮ ಸಮಾಜದ ಬೇರೆ , ಬೇರೆಜಾತಿಗಳಿಗೆ ಸೇರಿದವರು. ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಮಾತನಾಡುವ ಬೇರೆ ಬೇರೆಕನ್ನಡವನ್ನು ಬಳಸುವವರು. ಓದುಬರಹದ ಅವಕಾಶವನ್ನೇ ಪಡೆಯದ ಕುಟುಂಬಗಳಿಂದ ಬಂದವರು.ಹೆಣ್ಣುಮಕ್ಕಳು , ಹಳ್ಳಿಗಳಿಂದ ಬಂದವರು ಬಹಳ ಜನ ಇದ್ದಾರೆ. ಇವರೆಲ್ಲರಿಗೂ ಶಾಲೆ-ಕಾಲೇಜುಗಳ ಮೆಟ್ಟಿಲು ಹತ್ತಿದ ಕೂಡಲೇ ಒಂದು ಸಮಸ್ಯೆಯು ಕಾಡುತ್ತದೆ. ತಾವು ಮನೆಯಲ್ಲಿ , ಬೀದಿಯಲ್ಲಿ ಬಳಸುವ ಕನ್ನಡಕ್ಕೂ ಇಲ್ಲಿ ಓದಬೇಕಾದ-ಬರೆಯಬೇಕಾದ ಕನ್ನಡಕ್ಕೂ ಬಹಳ ಅಂತರವಿದೆ ಎನ್ನುವುದು ಸಮಸ್ಯೆಯ ಮೊದಲ ಭಾಗ. ತಮ್ಮ ಕನ್ನಡ ಸರಿಯಲ್ಲ , ಪುಸ್ತಕಗಳಲ್ಲಿ ಇರುವ ಶಿಷ್ಟ ಕನ್ನಡ ಮಾತ್ರ ಸರಿ ಎನ್ನುವ ಉಪದೇಶವು ಎರಡನೆಯ ಭಾಗ. ಇದರಿಂದ ಅವರಲ್ಲಿ ಕೀಳರಿಮೆ ಮೂಡುತ್ತದೆ. ಮಾತನಾಡುವುದು , ಬರೆಯುವುದು ಬೇಡ ಎನ್ನಿಸಿಬಿಡುತ್ತದೆ. ಹೀಗಾಗಿ , ಮೊದಲೇಅರೆಮೂಕರಾದವರು ಸಂಪೂರ್ಣವಾಗಿ ಮೂಕರಾಗುತ್ತಾರೆ. ಹೇಗೋ ಪರೀಕ್ಷೆಯಲ್ಲಿ ಪಾಸಾಗಿ ಈಓದು-ಬರೆಹಗಳಿಗೆ ಶರಣು ಹೊಡೆಯೋಣ ಎಂಬ ತೀರ್ಮಾನಕ್ಕೆ ಬರುತ್ತಾರೆ. ಹೀಗೆ , ಸಮಾನತೆಯನ್ನು ತರಬೇಕಾದ ಶಿಕ್ಷಣವು ವ್ಯತ್ಯಾಸ ಹಾಗೂ ಭೇದ ಭಾವಗಳಿಗೆ ಕಾರಣವಾಗುತ್ತದೆ.
ಹೀಗೆಂದ ಮಾತ್ರಕ್ಕೆ , ಎಲ್ಲರಿಗೂ ಸಮಾನವಾದ ಬರವಣಿಗೆಯ ಭಾಷೆಯೊಂದು ಇರಬಾರದು , ಅದನ್ನು ಕಲಿಯಬಾರದು ಎಂದು ಅರ್ಥವಲ್ಲ. ಏಕೆಂದರೆ , ಭಾಷೆಯಿರುವುದು ಕೇವಲ ದಿನ ನಿತ್ಯದ ಅನುಭವಗಳ ಬಗ್ಗೆ ಮಾತನಾಡಲೆಂದಲ್ಲ. ನಾವು ಅನೇಕ ವಿಚಾರಗಳನ್ನು ಕುರಿತು ಆಲೋಚಿಸಬೇಕಾಗುತ್ತದೆ. ಸಾಹಿತ್ಯ ಮಾತ್ರವಲ್ಲ , ನಾವು ಕಲಿಯುವ ಇತರ ವಿಷಯಗಳಲ್ಲಿಯೂ ಇಂತಹ ಅನೇಕ ಅನಿಸಿಕೆಗಳು , ಪರಿಕಲ್ಪನೆಗಳು (ಐಡಿಯಾ ಮತ್ತು ಕಾನ್ಸೆಪ್ಟ್) ಇರುತ್ತವೆ.ಇವುಗಳನ್ನು ಅರಿಯಲು ಮತ್ತು ಇವುಗಳ ಬಗ್ಗೆ ತಿಳಿಸಲು ನಮಗೆ ಈಗಾಗಲೇ ಇರುವ ಭಾಷೆಯಶಕ್ತಿಯನ್ನು ಜಾಸ್ತಿಮಾಡಿಕೊಳ್ಳಬೇಕು. ನಮ್ಮ ಅನಂತರದ ಬದುಕಿನಲ್ಲಿಯೂ ಆ ಶಕ್ತಿಯನ್ನುಬಳಸುವಂತೆ ಆಗಬೇಕು. ಈಗ ಇದು ಆಗುತ್ತಿಲ್ಲ. ಒಂದು ವೇಳೆ ಆದರೂ ಕಾಲೇಜಿನಲ್ಲಿಕಲಿಸುತ್ತಿರುವ ಕನ್ನಡದಿಂದ ಆಗುತ್ತಿಲ್ಲ. ಇದು ಏಕೆ ಹೀಗೆ ಎಂದು ತಿಳಿಯಲು ನಾನುಪ್ರಯತ್ನಿಸುತ್ತೇನೆ.
ಮೊದಲನೆಯದಾಗಿನಾವು ಶಿಷ್ಟ ಭಾಷೆಯ ಬಳಕೆ ಮತ್ತು ದಬ್ಬಾಳಿಕೆಗಳ ನಡುವಿನ ಅಂತರವನ್ನುತಿಳಿದುಕೊಳ್ಳಬೇಕು. ನಮ್ಮ ತರಗತಿಗಳಲ್ಲಿ ಬರವಣಿಗೆಯ "ತಪ್ಪು-ಸರಿ"ಗಳಿಗೆ ಅಗತ್ಯಕ್ಕಿಂತಹೆಚ್ಚು ಮಹತ್ವವನ್ನು ನೀಡುತ್ತೇವೆ. ವಿದ್ಯಾರ್ಥಿಗಳ ಕಲ್ಪನಾಶಕ್ತಿ , ಅಲೋಚನಾ ಶಕ್ತಿ , ವಿಚಾರಶಕ್ತಿ ಮತ್ತು ಗ್ರಹಿಕೆಗಳಿಗಿಂತ ತಪ್ಪಿಲ್ಲದ ಕನ್ನಡವನ್ನು ಬರೆಯುವುದೇ ಮುಖ್ಯವಾಗಿಬಿಡುತ್ತದೆ. ಬರವಣಿಗೆಯ ಕನ್ನಡದಲ್ಲಿ , ಇಂಗ್ಲಿಷನ್ನುಬಳಸುವುದು ತಪ್ಪಾಗುತ್ತದೆ ಆದರೆ ಸಂಸ್ಕೃತವನ್ನು ಬಳಸುವುದು ಪಾಂಡಿತ್ಯದ ಪ್ರೌಢಿಮೆಯಗುರುತಾಗುತ್ತದೆ. ಹೀಗೆ ತಿಳಿಯಲು ಸರಿಯಾದ ಕಾರಣವೇನೂ ಇಲ್ಲ. ಸಂಸ್ಕೃತದ ಸುಭದ್ರಹಿನ್ನೆಲೆ ಇರುವವರು ಇಂತಹ ನಿಯಮಗಳನ್ನು ಮಾಡಿದರೆನ್ನುವುದು ಸ್ಪಷ್ಟವಾಗಿಯೇ ಇದೆ.ಇಂಗ್ಲಿಷಿನಿಂದ ತರ್ಜುಮೆ ಮಾಡುವುದೆಂದರೆ , ಇಂಗ್ಲಿಷ್ ಬದಲುಸಂಸ್ಕೃತಪದಗಳನ್ನು ಬಳಸುವುದೇ ಆಗಿಬಿಡುತ್ತದೆ. ಕನ್ನಡದ ಜಾಯಮಾನಕ್ಕೆ ಒಗ್ಗುವ ಹಳಗನ್ನಡಅಥವಾ ನಡುಗನ್ನಡ ಪದಗಳ ಕಡೆಗೂ ನಮ್ಮ ಗಮನ ಹರಿಯುವುದಿಲ್ಲ. ಅಷ್ಟೇ ಅಲ್ಲ , ಇಂಗ್ಲಿಷಿನಪದಗಳನ್ನು ತೆಗೆದುಕೊಳ್ಳುವಾಗ ಮಾಡುವಂತೆ ಕನ್ನಡದ ರಚನೆಗೆ ಸೂಕ್ತವಾದ ಬದಲಾವಣೆಗಳನ್ನೂಮಾಡಿಕೊಳ್ಳುವುದಿಲ್ಲ. (ಹಾಸ್ಪಿಟಲ್ -ಆಸ್ಪತ್ರೆ) ಹಿಂದೊಮ್ಮೆ ಆಗುತ್ತಿದ್ದಂತೆ ತದ್ಭವಪದಗಳ ರಚನೆಯಾಗುವುದು ಕಡಿಮೆಯಾಗಿದೆ. ಸರ್ಕಾರೀಭಾಷೆಯಲ್ಲಂತೂ ಸಂಸ್ಕೃತ ಪದಗಳು ಹಿಂದಿಯಬಾಗಿಲಿನ ಮೂಲಕ ಒಳಗೆ ನುಸುಳುತ್ತಿವೆ. (ಅಭಿಯಂತ್ರ , ಆರಕ್ಷಕ) ಇಂಥ ಸನ್ನಿವೇಶದಲ್ಲಿ , ನಾವುಕನ್ನಡ ಅಧ್ಯಾಪಕರು ಯಾವುದಕ್ಕೆ ಒತ್ತು ಕೊಡಬೇಕೆಂದು ಯೋಚಿಸಬೇಕು. ಬರವಣಿಗೆಗೆಅಗತ್ಯವಾದ ಭಾಷೆಯು ಕಲಿಕೆ ಮತ್ತು ಬಳಕೆ ಎಂಬ ಎರಡೂ ಹಂತಗಳಲ್ಲಿ ಎಲ್ಲರಿಗೂ ತಲುಪುವಂತೆಇರಬೇಕು ಎನ್ನುವುದೇ ನಾವು ಗಮನಿಸಬೇಕಾದ ವಿಷಯ.
ನಮ್ಮ ಬಳಿ ಕಲಿಯುವವರಲ್ಲಿ , ಎಲ್ಲ ವಿಷಯಗಳನ್ನೂ ಕನ್ನಡದ ಮೂಲಕ ಕಲಿತವರು ಹಲವರಾದರೆ , ಇಂಗ್ಲಿಷ್ಮೂಲಕ ಕಲಿಯುವವರು ಕೆಲವರು. ಬೆಂಗಳೂರಿನಲ್ಲಿ ಅನೇಕರು ಇಂಗ್ಲಿಷಿನಲ್ಲಿ ಕಲಿತುಕನ್ನಡದಲ್ಲಿ ಉತ್ತರ ಬರೆಯುತ್ತಾರೆ. ಅವರು ಸಾಮಾನ್ಯ ಮಟ್ಟದ ಗೈಡುಗಳಿಗಿಂತ ಸ್ವಲ್ಪವೇಉತ್ತಮವಾದ ಪಠ್ಯಪುಸ್ತಕಗಳನ್ನು ಬಳಸುತ್ತಾರೆ. ಆದರೆ ಅವರಿಗೂ ತಮ್ಮ ಆಯ್ಕೆಯ ವಿಷಯವನ್ನುಕುರಿತು ಕನ್ನಡದಲ್ಲಿ ಅಲೋಚಿಸುವ , ಬರೆಯುವ ಅವಕಾಶವಾಗಲೀ ಅಗತ್ಯವಾಗಲೀ ಉಂಟಾಗುವುದಿಲ್ಲ. ನಮ್ಮ ತರಗತಿಗಳಲ್ಲಿ ನಾವು ಈ ಸಂಗತಿಗಳ ಕಡೆಗೆ ಗಮನಹರಿಸುವದು ಬಹಳ ಕಡಿಮೆ.
ಕಾಲೇಜಿನತರಗತಿಗಳಲ್ಲಿ ಸಾಹಿತ್ಯಕ್ಕೆ ಭಾಷೆಗಿಂತ ಹೆಚ್ಚಿನ ಮಹತ್ವ ಸಿಕ್ಕಿರುವುದು ಬಹಳ ದೊಡ್ಡಸಮಸ್ಯೆಯೆಂದು ನನಗೆ ತೋರುತ್ತದೆ. ಸಾಹಿತ್ಯವು ಸಮಾಜ ಮತ್ತು ಜೀವನದ ಬಗ್ಗೆ ಅನೇಕಸಂಗತಿಗಳನ್ನು ತಿಳಿಸುವುದಾದರೂ ಮುಖ್ಯವಾಗಿ ಅದೊಂದು ಕಲೆ. ಸಂಗೀತದಿಂದ ಶಿಲ್ಪದವರೆಗಿನಅನೇಕ ಕಲೆಗಳಲ್ಲಿ ಅದೂ ಒಂದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಅದರಲ್ಲಿ ಬಹಳ ಆಸಕ್ತಿಹುಟ್ಟಬೇಕೆಂದು ನಾವು ತಿಳಿಯುವುದೇ ತಪ್ಪು. ಹಾಗೆ ಹುಟ್ಟುವುದಿಲ್ಲ ಎನ್ನುವುದುನಮಗೆಲ್ಲ ಗೊತ್ತಿರುವ ಗುಟ್ಟು. ನೂರರಲ್ಲಿ ಒಬ್ಬರಾದರೂ ಸಾಹಿತ್ಯದ ಗಂಭೀರ ಓದುಗರಾಗಿಬೆಳೆಯುವುದಿಲ್ಲ. ಅಷ್ಟೇಕೆ , ಎಷ್ಟೋ ಸಲ ಕಾಲೇಜುಗಳಲ್ಲಿ ಕನ್ನಡ ಕಲಿಸುವನಾವೇ ಸಾಹಿತ್ಯವನ್ನು ವಿಶೇಷವಾಗಿ ಓದುವುದಿಲ್ಲ. ಅದು ನಮಗೆ ಒಂದು ಕಸುಬು ಮಾತ್ರ.ಆದ್ದರಿಂದ ಕೆಲವರಿಗೆ ಮಾತ್ರ ಆಸಕ್ತಿ ಇರಬಹುದಾದ ಸಾಹಿತ್ಯವನ್ನು , ಎಲ್ಲರೂಕಲಿಯಬೇಕೆಂದು ಹಟ ಹಿಡಿದು ಕೊನೆಗೆ ಯಾರಿಗೂ ಕಲಿಸದಿರುವುದು ನಮ್ಮ ತರಗತಿಗಳ ದುರಂತ.ಹೀಗೆ ಸಾಹಿತ್ಯಕ್ಕೆ ಕೊಡುವ ಅತಿ ಗಮನದಿಂದ ಭಾಷೆಯ ಕಲಿಕೆಯು ಹಿಂದೆ ಬೀಳುತ್ತದೆ.
ಯಾಕೆಂದರೆ , ನಮ್ಮ ಪಾಠಗಳಲ್ಲಿ ಸಾಕಷ್ಟು ಭಾಗ ಹಳಗನ್ನಡ ಮತ್ತು ನಡುಗನ್ನಡಗಳಿಗೆ ಮೀಸಲಾಗಿರುತ್ತದೆ. ಪಂಪ , ರನ್ನ , ವಡ್ಡಾರಾಧನೆಗಳನ್ನು ಓದಿ ನಮ್ಮ ಕಾಲದಲ್ಲಿ ಬಳಸಬೇಕಾದ ಕನ್ನಡವನ್ನು ಕಲಿಯುವುದು ಎಷ್ಟರ ಮಟ್ಟಿಗೆ ಸಾಧ್ಯ ? ಆ ಪಠ್ಯಗಳ ಆಶಯಗಳಿಗೂ ನಮ್ಮ ಇಂದಿನ ಬದುಕಿಗೂ ಸಂಬಂಧಗಳನ್ನು ಹುಡುಕದೆ , ಕೇವಲ ಅದರ ಸಾರಾಂಶ , ಪಾತ್ರಚಿತ್ರಣಗಳನ್ನು ಹೇಳಿಕೊಡುವುದರಿಂದ ಆಗುವ ಪ್ರಯೋಜನವಾದರೂ ಏನು ? ಹಾಗೆ ನೋಡಿದರೆ , ನಾಡಿನಲ್ಲಿನೂರಕ್ಕೆ ತೊಂಬತ್ತರಷ್ಟು ಜನರು ರಚಿಸಿದ ಹಾಗೂ ಅರ್ಥ ಮಾಡಿಕೊಳ್ಳಬಹುದಾದ ಜನಪದಸಾಹಿತ್ಯಕ್ಕೆ ನಮ್ಮ ಪಠ್ಯಪುಸ್ತಕಗಳಲ್ಲಿ ಸಿಕ್ಕಿರುವ ಜಾಗ ಬಹಳ ಕಡಿಮೆ. ಅನೇಕಮೇಷ್ಟರುಗಳೇ ಅದರಲ್ಲಿ ಪಾಠ ಮಾಡುವುದು ಏನಿದೆ ಎಂದು ಕೇಳುವುದನ್ನು ನಾನು ಬಲ್ಲೆ.
ಭಾಷೆಯನ್ನು ಕಲಿಸುವುದರ ಮುಖ್ಯ ಉದ್ದೇಶವು , ಅದನ್ನು ಬಳಸಲು ನೆರವಾಗುವುದರಲ್ಲಿದೆ. ನಮ್ಮ ಹುಡುಗರು ಕಾಲೇಜಿಗೆ ಬರಲಿ , ಬಿಡಲಿ ಕನ್ನಡದಲ್ಲಿ ಮಾತನಾಡುತ್ತಿದ್ದರು , ಮಾತನಾಡುತ್ತಾರೆ. ಹಾಗೆ ಮಾಡುವುದು , ಉಳಿದವರೊಂದಿಗೆ ಸಂಭಾಷಣೆ ಮಾಡುವಾಗಲೇ ಹೊರತು , ವೇದಿಕೆಯ ಮೇಲೆ ನಿಂತು ಬಾಷಣ ಮಾಡುವುದರಲ್ಲಿ ಅಲ್ಲ. ನಮ್ಮ ತರಗತಿಗಳಲ್ಲಿ , ಅವರಿಗೆಮಾತನಾಡುವ ಅವಕಾಶವಾಗಲೀ ತರಬೇತಿಯಾಗಲೀ ಸಿಗುವುದಿಲ್ಲ. ಬರೆಯುವ ಅಭ್ಯಾಸವು ಪದವಿ ಪಡೆದಮರುಕ್ಷಣದಲ್ಲಿಯೇ ನಿಂತುಹೋಗುತ್ತದೆ. ಒಂದು ವೇಳೆ ಕನ್ನಡವನ್ನು ಬಳಸಲೇ ಬೇಕಾದ ಕೆಲಸವುಸಿಕ್ಕರೂ ಅಲ್ಲಿ ಹೇಗೆ , ಏನು ಬರೆಯಬೇಕು ಎನ್ನುವುದನ್ನು ಹೊಸದಾಗಿಯೇ ಕಲಿಯಬೇಕಾಗುತ್ತದೆ. ಬದಲಾಗಿ , ಅವರು ನಿಜವಾಗಿಯೂ ಕನ್ನಡ ಬರವಣಿಗೆಯನ್ನು ಮುಂದುವರಿಸಬೇಕಾದರೆ , ಅವರು ಚೆನ್ನಾಗಿಬಲ್ಲ , ಕೆಲಸ ಮಾಡುತ್ತಿರುವ ವಿಷಯವನ್ನು ಕನ್ನಡದಲ್ಲಿ ಬರೆಯುವ ಅವಕಾಶ ಸಿಗಬೇಕು. ಈ ಮಾತು ಒಬ್ಬ ರೈತ , ನೇಕಾರ , ಎಂಜಿನಿಯರ್ ಎಲ್ಲರಿಗೂ ಅನ್ವಯಿಸುತ್ತದೆ. ಇಂದಿನ ವೃತ್ತಪತ್ರಿಕೆಗಳು ಮತ್ತು ಮಾಧ್ಯಮಗಳು ಇದಕ್ಕೆ ಅವಕಾಶವನ್ನೂ ಕೊಡುತ್ತವೆ. ಇವರು ಯಾರೂ ಸಾಹಿತಿಗಳಲ್ಲ , ಆಗಬೇಕಾಗಿಯೂ ಇಲ್ಲ. ಆದರೆ , ಪದವಿಯನ್ನು ಪಡೆದು , ಕನ್ನಡವನ್ನು ಕಲಿತದ್ದಕ್ಕೆ ತಮಗೆ ತಿಳಿದಿರುವ ವಿಷಯವನ್ನು ಕುರಿತು ಕನ್ನಡದಲ್ಲಿ ಬರೆಯುವುದು ಮತ್ತು ಮಾತನಾಡುವುದು ಅವರಿಗೆ ಸಾಧ್ಯವಾಗಬೇಕು. ಇದು ನಮ್ಮ ಗುರಿ , ಬಹಳ ಮುಖ್ಯವಾದ ಗುರಿ. ಕನ್ನಡದಲ್ಲಿ ಬರೆಯುವುದು ಸಾಹಿತಿಗಳ ಮತ್ತು ಕನ್ನಡ ಮೇಷ್ಟ್ರುಗಳ ಕೆಲಸ ಎಂಬ ತಪ್ಪು ತಿಳಿವಳಿಕೆಯು ದೂರವಾಗಬೇಕು.
ಇದರ ಜೊತೆಗೆ ನಾವು ನಮ್ಮ ಶಾಲೆ ಕಾಲೇಜುಗಳಲ್ಲಿ ವ್ಯಾಕರಣ , ಛಂದಸ್ಸು ಮತ್ತು ಅಲಂಕಾರ ಮುಂತಾದ ವಿಷಯಗಳಿಗೆ ಅತಿ ಹೆಚ್ಚಿನ ಮಹತ್ವ ಸಿಗುತ್ತಿದೆ. ಯಾರೂ ಕೂಡ ವ್ಯಾಕರಣ ಓದಿ , ಮಾತು ಕಲಿಯುವುದಿಲ್ಲ. ಛಂದಸ್ಸು-ಅಲಂಕಾರ ಓದಿ ಕಥೆ , ಕವಿತೆ ಬರೆಯುವುದಿಲ್ಲ. ವಾಸ್ತವವಾಗಿ , ಹೆಚ್ಚುಹೆಚ್ಚಾಗಿ ಓದುವುದರಿಂದ , ಬೇರೆಯವರ ಮಾತುಗಳನ್ನು ಕೇಳಿ ನಾವೂ ಮಾತನಾಡುವುದರಿಂದ ಹಾಗೂ ಬರೆಯುವುದರಿಂದ ಮಾತು , ಓದು , ಬರೆಹ ಬರುತ್ತವೆ. ಬಳಕೆಯೊಂದೇ ಕಲಿಯುವ ದಾರಿ. ಬಾಯಿಪಾಠ ಮಾಡಿ , ಪರೀಕ್ಷೆಯಲ್ಲಿ ಬರೆದು ಪಾಸಾಗಿ ಮರೆಯುವುದರಿಂದ ಅಲ್ಲ. ಇಷ್ಟಕ್ಕೂ ನಾವು ಕಲಿಸುತ್ತಿರುವ ವ್ಯಾಕರಣ , ಛಂದಸ್ಸು , ಅಲಂಕಾರಗಳು , ದ್ರಾವಿಡಭಾಷೆಯಾದ ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ಬದಲಾಗಿ ಅವು ಸಂಸ್ಕೃತದ ಅಂಗಿಯಅಳತೆಗೆ ತಕ್ಕಂತೆ ಕನ್ನಡದ ಮೈಯನ್ನು ಮಾರ್ಪಡಿಸಲು ಪ್ರಯತ್ನಿಸುತ್ತವೆ. ಆದ್ದರಿಂದಲೇ ಡಾ || ಡಿ.ಎನ್.ಶಂಕರಭಟ್ ಅವರು "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಎಂಬ ಬಹಳ ಒಳ್ಳೆಯಪುಸ್ತಕವನ್ನು ಬರೆದಿದ್ದಾರೆ. ಅದರ ಸಂಗಡವೇ ಓದಬೇಕಾದ ಇನ್ನೊಂದು ಪುಸ್ತಕ , ಅವರೇ ಬರೆದಿರುವ "ಕನ್ನಡ ಬರಹವನ್ನು ಸರಿಪಡಿಸೋಣ" ಎನ್ನುವುದು. ಅವರು ಹೇಳುವ ಈ ಕೆಳಗಿನ ಮಾತುಗಳನ್ನು ನಾವೆಲ್ಲ ಗಮನಿಸಬೇಕು:
" ಕನ್ನಡಬರಹ ಸಂಸ್ಕೃತದ ಹಾದಿಯನ್ನು ಹಿಡಿಯದ ಹಾಗಾಗಬೇಕಾದಲ್ಲಿ ನಾವು ಬೇರೆಯೇ ಪರಿಹಾರವನ್ನುಕಂಡುಕೊಳ್ಳಬೇಕಾಗಿದೆ. ಈ ಪರಿಹಾರ ಎಂಥದು ಎಂಬುದನ್ನು ನಮಗೆ ಈಗಾಗಲೇ ವಚನಕಾರರು ಮತ್ತುದಾಸರು ತೋರಿಸಿಕೊಟ್ಟಿದ್ದಾರೆ. ಬರಹದ ಮೇಲೆ ಮಡಿವಂತಿಕೆಯನ್ನು ಹೊರಿಸಹೋಗದೆ , ಜೀವಂತಿಕೆಯನ್ನುತುಂಬುವುದರ ಮೂಲಕ ಅದು ಎಲ್ಲರಿಗೂ ಬೇಕಾಗುವ ಹಾಗೆ ಮಾಡಬಹುದು. ........ ಈಸಂಧಿಕಾಲದಲ್ಲಿ ನಮ್ಮ ಸಮಾಜ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆಕನ್ನಡ ಬರಹದ ಅಳಿವು ಇಲ್ಲವೇ ಉಳಿವು ಅವಲಂಬಿಸಿದೆ ಎಂದು ನನಗೆ ತೋರುತ್ತದೆ. "(ಡಿ.ಎನ್. ಶಂಕರ ಭಟ್ , " ಕನ್ನಡ ಬರಹವನ್ನು ಸರಿಪಡಿಸೋಣ" , ೨೦೦೫ , ಪುಟ ೬)
ಇವರುಹೇಳುವ ವಿಚಾರಗಳನ್ನು ಬೇರೆ ಬೇರೆ ತರಗತಿಗಳಲ್ಲಿ ಕನ್ನಡ ಕಲಿಸುವ ಎಲ್ಲರೂತಿಳಿದುಕೊಳ್ಳಬೇಕು. ಅದರ ಬಗ್ಗೆ ಆಲೋಚಿಸಬೇಕು. ಅದರಲ್ಲಿಯೂ ಶಾಲೆಗಳಲ್ಲಿ ಕಲಿಸುವಮೇಷ್ಟರುಗಳನ್ನು ` ತಯಾರು ' ಮಾಡುವ ಕಾಲೇಜು ಅಧ್ಯಾಪಕರು ಇನ್ನಷ್ಟು ಹೆಚ್ಚಾಗಿ ಯೋಚಿಸಬೇಕು.
ಪದವಿ ತರಗತಿಗಳಲ್ಲಿ ಕನ್ನಡ ಕಲಿಯುವವರ ಎರಡು ವಿಶೇಷ ಗುಂಪುಗಳಿವೆ. ಮೊದಲನೆಯದು ಐಚ್ಛಿಕ ಕನ್ನಡ ಕಲಿಯುವವರ ಗುಂಪು ಮತ್ತು ಎರಡನೆಯದು ಟಿ.ಸಿ.ಎಚ್. ಮತ್ತುಬಿ.ಈಡಿ. ತರಗತಿಗಳಲ್ಲಿ ಕಲಿಯುವ ಭಾವೀ ಮೇಷ್ಟರುಗಳ ಗುಂಪು. ಇಲ್ಲಿ ಕೆಲವು ಬೇರೆ ಬಗೆಯಸಮಸ್ಯೆಗಳಿವೆ. ಸಾಹಿತ್ಯವನ್ನು ಯಾರಿಗೆ , ಎಷ್ಟು , ಹೇಗೆ ಮತ್ತು ಯಾಕೆ ಕಲಿಸಬೇಕು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಇಲ್ಲಿ ಕಂಡುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ , ಸಾಹಿತ್ಯವನ್ನಲ್ಲಭಾಷೆಯನ್ನು ಹೇಗೆ ಕಲಿಸಬೇಕು ಎನ್ನುವುದು ಇಲ್ಲಿಯೇ ತೀರ್ಮಾನವಾಗಬೇಕು. ನಮ್ಮ ಸಾಹಿತ್ಯದಪರಂಪರೆಯ ತಿಳಿವಳಿಕೆ ಮಾತ್ರವಲ್ಲ ಅದರ ಬಹುಮುಖತೆ ಕೂಡ ಅವರಿಗೆ ತಿಳಿಯಬೇಕು. ನಮ್ಮಹಳ್ಳಿಯ ಜನ , ಹೆಣ್ಣುಮಕ್ಕಳು ಮತ್ತು ದಲಿತರು ನೂರಾರು ವರ್ಷಗಳಿಂದ ಬಹಳಒಳ್ಳೆಯ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಅದನ್ನು ನಾವು ಬೇರೆ ಬೇರೆ ಕಾರಣಗಳಿಗಾಗಿನಿರ್ಲಕ್ಷ್ಯ ಮಾಡಿದ್ದೇವೆ. ಇನ್ನು ಮೇಲಾದರೂ ಕನ್ನಡ ಅಧ್ಯಾಪಕರ ಸಮುದಾಯವು ಅದರ ಕಡೆಗೆಗಮನ ಹರಿಸಬೇಕು.
ಇನ್ನು ಮುಂದೆ , ನಮ್ಮ ಪದವಿ ತರಗತಿಗಳಲ್ಲಿ ಕನ್ನಡ ಕಲಿಸುವಾಗ , ಇಡಬಹುದಾದ ಕೆಲವು ಹೊಸ ಹೆಜ್ಜೆಗಳನ್ನು ಹೇಳಲು ಪ್ರಯತ್ನಿಸಿದ್ದೇನೆ. ಹಾಗೆಂದರೆ , ನಾನೇಹೊಸ ವಿಷಯಗಳನ್ನು ಹೇಳುತ್ತಿರುವೆನೆಂದು ಅರ್ಥವಲ್ಲ. ಒಟ್ಟು ಸಮುದಾಯಗಳಲ್ಲಿ ಅನೇಕಗೆಳೆಯರು ನಡೆಸಿರುವ ಆಲೋಚನೆಗಳು ಹಾಗೂ ಮಾಡುತ್ತಿರುವ ಕೆಲಸಗಳನ್ನು ನಾನು ಆದಷ್ಟುಚಿಕ್ಕದಾಗಿ ಸಂಗ್ರಹಿಸುತ್ತಿದ್ದೇನೆ.
೧. ಇಂದಿನನಮ್ಮ ತರಗತಿಗಳು ಬಹುಮಟ್ಟಿಗೆ ಅಧ್ಯಾಪಕಕೇಂದ್ರಿತವಾಗಿವೆ. ಅಲ್ಲಿ ಮೇಷ್ಟರುಗಳುಮಾತನಾಡುತ್ತಾರೆ. ಉಳಿದವರು ಕೇಳುತ್ತಾರೆ ಅಥವಾ ಕೇಳುವುದಿಲ್ಲ. ಹುಡುಗರು ಮಾತನಾಡಿದರೆಅದು ಗಲಾಟೆ ಇಲ್ಲವೇ ಅಧಿಕಪ್ರಸಂಗ ಎನ್ನಿಸಿಕೊಳ್ಳುತ್ತದೆ. ನಿಜವಾಗಿ ನಮ್ಮ ತರಗತಿಗಳಮಧ್ಯದಲ್ಲಿ ವಿದ್ಯಾರ್ಥಿಗಳು ಇರಬೇಕು. ನಾವಲ್ಲ. ನೂರಾರು ಜನ ಇರುವ ತರಗತಿಗಳಲ್ಲಿ ಎಲ್ಲವಿದ್ಯಾರ್ಥಿಗಳೂ ಪ್ರತಿದಿನವೂ ಮಾತನಾಡಲು ಆಗುವುದಿಲ್ಲ. ಆದರೆ ನಮ್ಮ ಪಾಠವು ಅವರನ್ನುಯೋಚನೆ ಮಾಡಲು ಪ್ರಚೋದಿಸಬೇಕು. "ಮೇಷ್ಟ್ರು ಕೂಡ ತಪ್ಪಿರಬಹುದು , ಅವರುಹೇಳಿದ್ದನ್ನು ನಮ್ಮ ಅನುಭವಗಳಿಗೆ ತಾಳೆಮಾಡಿ ನೋಡೋಣ" ಎಂಬ ತಿಳಿವಳಿಕೆ ಅವರಿಗೆ ಬಂದರೆಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ. ಅವರ ಅಂತಹ ಭಿನ್ನಾಭಿಪ್ರಾಯಗಳಿಗೆತರಗತಿಯಲ್ಲಿ ಹಾಗೂ ಪರೀಕ್ಷೆಗಳಲ್ಲಿ ಬೆಲೆ ಸಿಗಬೇಕು. ಡಿಕ್ಟೇಷನ್ ತಪ್ಪಾದರೂ ಉತ್ತರಸರಿ ಇರಬಹುದು ಎಂಬ ಎಚ್ಚರ ನಮ್ಮಲ್ಲಿ ಯಾವಾಗಲೂ ಇರಬೇಕು. ಚಿಕ್ಕ ಪುಟ್ಟತರಗತಿಗಳಲ್ಲಂತೂ ಅವರಿಗೆ ಧಾರಾಳವಾಗಿ ಮಾತನಾಡುವ ಅವಕಾಶ ಸಿಗಬೇಕು.
೨. ನಮ್ಮತರಗತಿಗಳಲ್ಲಿ ಹಾಗೂ ಪಠ್ಯವಸ್ತುವಿನಲ್ಲಿ ಸಾಹಿತ್ಯದ ಪ್ರಮಾಣ ಕಡಿಮೆಯಾಗಬೇಕು. ಯಾವಬಗೆಯ ಸಾಹಿತ್ಯ ಎಷ್ಟು ಬೇಕು ಎನ್ನುವುದನ್ನು ಕುರಿತು ಚರ್ಚೆ ನಡೆಯಬೇಕು. ಬದಲಾಗಿವಿಜ್ಞಾನ , ಸಮಾಜ ವಿಜ್ಞಾನಗಳು ಮತ್ತು ವಾಣಿಜ್ಯದ ವಿದ್ಯಾರ್ಥಿಗಳಿಗೆ ಅವರವರ ಆಯ್ಕೆಯ ವಿಷಯಗಳನ್ನು ಕುರಿತು ಮಾತನಾಡುವ , ಪಾಠಮಾಡುವಹಾಗೂ ಬರೆಯುವ ಶಕ್ತಿ ಅವರಿಗೆ ಬರುವಂತೆ ಮಾಡುವುದು ನಮ್ಮ ಮುಖ್ಯಗುರಿಯಾಗಬೇಕು.ಇದಕ್ಕಾಗಿ ಬೇರೆಬೇರೆ ಬಗೆಯ ಪಠ್ಯಗಳನ್ನು ತಯಾರು ಮಾಡಬೇಕು. ಎಂದರೆ ಚರಿತ್ರೆ , ರಸಾಯನಶಾಸ್ತ್ರಮತ್ತು ಮನಶ್ಶಾಸ್ತ್ರಗಳ ವಿದ್ಯಾರ್ಥಿಗಳು ತಮಗೆ ಅಗತ್ಯವಾದ ಹಲವು ವಿಷಯಗಳನ್ನು ಕನ್ನಡತರಗತಿಗಳಲ್ಲಿ ಕಲಿಯಬೇಕು. ಪರೀಕ್ಷೆಗಳಲ್ಲಿ ಅದರ ಬಗ್ಗೆ ಪ್ರಶ್ನೆಗಳಿರಬೇಕು.ಉದಾಹರಣೆಗೆ ಮೂರು ವರ್ಷಗಳ ಕಾಲ ರಾಜ್ಯಶಾಸ್ತ್ರವನ್ನು ಕಲಿತಿರುವ ಹುಡುಗರಿಗೆಪ್ರಜಾಪ್ರಭುತ್ವದ ಬಗ್ಗೆ ಮೂರು ಪುಟಗಳನ್ನು ಬರೆಯುವುದು ಮಕ್ಕಳಾಟವಾಗಬೇಕು.
೩. ನಮ್ಮಕ್ಲಾಸುಗಳಲ್ಲಿ ಪಾಠಕೇಳುವ ಹುಡುಗ ಹುಡುಗಿಯರಿಗೆ ಓದುವ ಹುಚ್ಚು ಹಿಡಿಯುವಂತೆ ಮಾಡುವುದುನಮ್ಮ ಮುಖ್ಯ ಕೆಲಸ. ಎಲ್ಲಕ್ಕೂ ಮೊದಲು ನಮಗೆ ಆ ಹುಚ್ಚಿರಬೇಕು. ಓದುವುದು ಎಂದರೆ ಒಂದುಹೊರೆಯಲ್ಲ , ಅದು ನಮ್ಮ ಮನಸ್ಸುಗಳನ್ನು ಅರಳಿಸುವ , ನಮಗೆಸಂತೋಷ ಕೊಡುವುದು ಕೆಲಸ ಎಂದು ನಮ್ಮ ವಿದ್ಯಾರ್ಥಿಗಳಿಗೆ ಅವರು ತಾವಾಗಿಯೇಓದತೊಡಗುತ್ತಾರೆ. ಬದುಕಿರುವ ತನಕ ಆ ಆಭ್ಯಾಸವನ್ನು ಕಾಪಾಡಿಕೊಳ್ಳುತ್ತಾರೆ. ಹಿಂದಿನಕಾಲದಲ್ಲಿ ಲೋಅರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದವರು ಓದುವಷ್ಟನ್ನೂ ನಮ್ಮಸ್ನಾತಕೋತ್ತರ ಪದವೀಧರರು ಓದದಿದ್ದರೆ ಎಂತಹ ಅನ್ಯಾಯ ಅಲ್ಲವೇ ?? ಆದರೆ ಹಾಗೆ ಅಗಿರುವುದೇ ಸತ್ಯ. ಇದು ನನ್ನ ಮನಸ್ಸಿಗೆ ತುಂಬಾ ನೋವನ್ನು ತಂದಿದೆ. ಪರಿಹಾರದ ಬಗ್ಗೆ ನಾವೆಲ್ಲರೂ ಯೋಚಿಸಬೇಕು.
೪. ಅವರಿಗೆ ಎಳ್ಳುಕಾಳಿನಷ್ಟೂ ಕೀಳರಿಮೆ ಹುಟ್ಟದಂತೆ , ಬರವಣಿಗೆಯ ಭಾಷೆಯನ್ನು ಕಲಿಸಲು ನಮಗೆ ಸಾಧ್ಯವಾಗಬೇಕು. ನಿಜ , ಮಾತನಾಡುವ ಭಾಷೆಗೂ ವ್ಯತ್ಯಾಸ ಇದೆ , ಇರಬೇಕು. ಆದರೆ ಒಂದು ಇನ್ನೊಂದರ ಕೂಸು. ಅವು ಶತ್ರುಗಳಲ್ಲ. ಕೊನೆಗೂ , ಕಣ್ಣಿಗೆಕಾಣದ ಇತರ ಇಂದ್ರಿಯಗಳಿಗೂ ಸಿಲುಕದ ವಿಚಾರಗಳ ಬಗ್ಗೆ ಆಲೋಚಿಸುವ ಶಕ್ತಿ ನಮ್ಮವಿದ್ಯಾರ್ಥಿಗಳಿಗೆ ಇರುತ್ತದೆ. ಅದನ್ನು ನಾವು ಒತ್ತಾಸೆಕೊಟ್ಟು ಚೆನ್ನಾಗಿ ಬೆಳೆಸಬೇಕು.ಇದು ನಮ್ಮ ಎದುರಿಗೆ ಇರುವ ಗುರಿ ಮತ್ತು ಸವಾಲು.
೫. ಕನ್ನಡ ಪಾಠ ಮಾಡುವಾಗ ಇನ್ನೊಂದು ಮುಖ್ಯ ಸಂಗತಿ ಇದೆ. ನಾವು ಕವಿತೆ , ಕಥೆ , ಕಾದಂಬರಿ ಅಥವಾ ನಾಟಕದ ವಸ್ತುವಿನ ಬಗ್ಗೆ ಹೆಚ್ಚಾಗಿ ಮಾತನಾಡಬೇಕೋ ಅಥವಾ ಆಕೃತಿಮತ್ತು ಭಾಷಿಕ ವಿವರಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಕಲಿಸಬೇಕೋ ಎನ್ನುವುದೇ ಆಪ್ರಶ್ನೆ. ಸಾಹಿತ್ಯದಲ್ಲಿ ಭಾಷೆಯನ್ನು ಬಳಸುವ ಬಗೆಯ ವಿಶೇಷ ಲಕ್ಷಣಗಳನ್ನು ತಿಳಿಸುವುದುನಮ್ಮ ಕೆಲಸವೇ. ಅದರ ಸಂಗಡವೇ ನಮ್ಮ ವಿದ್ಯಾರ್ಥಿಗಳ ಇಂದಿನ ಜೀವನಕ್ಕೂ ಇರುವ ಸಂಬಂಧಗಳಕಡೆಗೆ ಅವರ ಗಮನ ಸೆಳೆಯುವುದೂ ನಮ್ಮ ಕೆಲಸವೇ. ಕೊನೆಗೂ ಸಾಹಿತ್ಯವು ಜೀವನ ಮತ್ತುಸಮಾಜಗಳಿಗೆ ಕರೆದೊಯ್ಯುವ ಬಾಗಿಲು ಎನ್ನುವ ಸತ್ಯವು ಅವರಿಗೆ ತಿಳಿಯಬೇಕು. ಸಹಜವಾಗಿತಮಗೆ ಬರದೆ ಇರಬಹುದಾದ ಅನುಭವಗಳು , ಸಾಹಿತ್ಯದಲ್ಲಿ ಬಹಳ ವಿಶಿಷ್ಟವಾದ ರೀತಿಯಲ್ಲಿ ತಮ್ಮದಾಗುತ್ತವೆ ಎಂಬ ತಿಳಿವಳಿಕೆ ಅವರಲ್ಲಿ ಮೂಡುವುದು ಬಹಳ ಮುಖ್ಯ.
ಆಗ ಮಾತ್ರವೇ ನಮ್ಮ ಬದುಕು ಕನ್ನಡವಾಗುವ ಹಾದಿಯಲ್ಲಿ ನಾವು ಮುಂದೆಹೋಗಲು ಸಾಧ್ಯ ಆಗುತ್ತದೆ. ಅದಕ್ಕೆ ರಾಜಕೀಯ , ಸಾಮಾಜಿಕ ಮತ್ತು ಆರ್ಥಿಕ ಅಡಚಣೆಗಳು ಇರಬಹುದು. ಅದೆಲ್ಲವನ್ನೂ ನೆಪವಾಗಿಟ್ಟುಕೊಂಡು ನಮ್ಮ ಕೆಲಸವನ್ನು ಮಾಡದೆ ಹೋಗುವುದು ಸರಿಯಲ್ಲ.
೨೨-೧೨-೨೦೦೫
ಈ ವಿಷಯ ಬರೆಯಲು ಹೊರಟಾಗ ನನಗೆ ಬಂದ ಮೊದಲ ಸಂಶಯ ಇದನ್ನು ಯಾವ ವರ್ಗದಲ್ಲಿ ಸೇರಿಸಬೇಕು ಎಂಬುದು. ರಾಜಕೀಯವೇ ಸೂಕ್ತ ಎಂದು ಅದಕ್ಕೆ ಸೇರಿಸಿದ್ದೇನೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ ತಮ್ಮ ನೂರೆಂಟು ಮಾತು ಅಂಕಣದಲ್ಲಿ ಕರ್ನಾಟಕದ ಮಠಗಳ ಬಗ್ಗೆ ಬರೆದಿದ್ದರು. ಈ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕಾಣಿಕೆಗಳು ಇತ್ಯಾದಿಗಳನ್ನು ವಿವರಿಸಿದ್ದ ಲೇಖನದಲ್ಲಿ ಮಠಗಳ ಸಾಧನೆಗಳನ್ನು ಪಟ್ಟಿ ಮಾಡಲಾಗಿತ್ತು.
ಈ ಲೇಖನ ಓದಿದಾಗ ಕೆಲಕಾಲದ ಹಿಂದೆ ನಮ್ಮ ಕಾಲೇಜಿನಲ್ಲಿ ಉಪನ್ಯಾಸ ನೀಡಿದ್ದ ಎ.ನಾರಾಯಣ ಅವರು ಎತ್ತಿದ್ದ ಪ್ರಶ್ನೆಯೊಂದು ನೆನಪಾಯಿತು. ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳಿಗಿರುವ ಇರುವ ಸ್ಥಾನ ಯಾವುದು? ಇವುಗಳನ್ನು ಎನ್.ಜಿ.ಓಗಳು ಎಂದು ಕರೆಯುವಂತೆ ಇಲ್ಲ. ಶಿಕ್ಷಣ ಸಂಸ್ಥೆಗಳೆಂದು ಹೇಳಲೂ ಸಾಧ್ಯವಿಲ್ಲ. ಇವು ರಾಜಕೀಯ ಪಕ್ಷಗಳೂ ಅಲ್ಲ. ಧರ್ಮ ಪ್ರಸಾರವನ್ನು ಮಾಡುವ ಸಂಸ್ಥೆಗಳೆಂದು ವರ್ಗೀಕರಿಸಲೂ ಸಾಧ್ಯವಿಲ್ಲ. ಏಕೆಂದರೆ ಕರ್ನಾಟಕದಲ್ಲಿ ಇರುವ ಎಲ್ಲಾ ಪ್ರಭಾವೀ ಮಠಗಳೂ ರಾಜಕೀಯದಲ್ಲೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿವೆ. ಕೆಲವು ಮಠಗಳಂತೂ ಅಭ್ಯರ್ಥಿಗಳ ಸೋಲು ಗೆಲುವನ್ನು ನಿರ್ಧರಿಸುವಷ್ಟು ಪ್ರಬಲ ಎನ್ನಲಾಗುತ್ತಿದೆ. ಹಾಗಿದ್ದರೆ ಈ ಮಠಗಳು ಏನು?
ಡೆವಲಪ್ ಮೆಂಟ್ ಸ್ಟಡೀಸ್ ಎಂದು ಕರೆಯುವ ಅಧ್ಯಯನ ವಿಭಾಗದಲ್ಲಿ ಈಗ ರಿಲಿಜನ್ ಮತ್ತು ಡೆವಲಪ್ ಮೆಂಟ್ ಗಳ ಮಧ್ಯೆ ಇರುವ ಸಂಬಂಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳ ಸ್ಥಾನ ಏನು ಎಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ. ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡುತ್ತಿವೆ ಎಂಬುದು ನಿಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸ ಮಾಡಬೇಕಿರುವುದು ಸರಕಾರ. ಸರಕಾರ ಅದನ್ನು ಮಾಡದೇ ಇದ್ದರೆ ಅದು ಅದರ ವೈಫಲ್ಯವನ್ನು ಸೂಚಿಸುತ್ತದೆ. ಈ ವೈಫಲ್ಯವನ್ನು ಸರಿಪಡಿಸುವಂತೆ ಒತ್ತಡ ಹೇರಬೇಕಾದ ಸಮುದಾಯಕ್ಕೆ ಚಾರಿಟಿಯ ಮೂಲಕ ಆ ಸವಲತ್ತನ್ನು ಒದಗಿಸುವುದು ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಸಡಿಲಗೊಳಿಸುವುದಿಲ್ಲವೇ?
ಉದಾಹರಣೆಗೆ ಒಂದು ಊರಿನಲ್ಲಿ ಶಾಲೆ ಇಲ್ಲ ಎಂದು ಭಾವಿಸೋಣ. ಇಲ್ಲಿ ಸರಕಾರ ಒಂದು ಶಾಲೆಯನ್ನು ಸ್ಥಾಪಿಸಬೇಕು. ಅದಕ್ಕೆ ಬೇಕಾದ ಒತ್ತಡವನ್ನು ಊರಿನವರು ಹೇರಬೇಕು. ಮಠವೊಂದು ಬಂದು ಇಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರೆ ಆ ಊರಿನಲ್ಲಿ ಶಾಲೆಯೇ ಒಂದು ಕಾರಣವಾಗಿ ಮೂಡಬಹುದಾಗಿದ್ದ ರಾಜಕೀಯ ಪ್ರಜ್ಞೆಯೇ ಇಲ್ಲವಾಗುತ್ತದೆ.
ಇದು ಸಮಸ್ಯೆಯ ಒಂದು ಮುಖ. ಈಗ ಕರ್ನಾಟಕದ ವಿಷಯವನ್ನೇ ಪರಿಗಣಿಸುವುದಾದರೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮಠಗಳು ಕುರುಡರಿಗೆ ಶಿಕ್ಷಣ ನೀಡುವ ಸಂಸ್ಥೆಗಳು, ಉಚಿತ ವಸತಿ ನಿಲಯ, ಉಚಿತ ಪ್ರಾಥಮಿಕ ಶಿಕ್ಷಣಗಳನ್ನು ನೀಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಪಿಟೇಷನ್ ಸಂಸ್ಥೆಗಳನ್ನೂ ಸ್ಥಾಪಿಸಿಕೊಂಡಿಲ್ಲವೇ?
ತಾತ್ವಿಕವಾಗಿ ನೋಡುವುದಾದರೆ ವಿರಕ್ತಿ ಇರಬೇಕಾದ ಜಾಗದಲ್ಲಿ ಐಷಾರಾಮ ತುಂಬಿಲ್ಲವೇ? ಧರ್ಮ ಸಂಸ್ಥಾಪನೆ ಅಥವಾ ನೀತಿ ಬದ್ಧ ಜೀವನವೊಂದನ್ನು ಬೋಧಿಸಬೇಕಾದ ಯತಿಗಳು ತಮ್ಮದೇ ಆದ ರಾಜಕೀಯ ಒಲವುಗಳನ್ನು ಪ್ರತಿಪಾದಿಸುತ್ತಿದ್ದಾರಲ್ಲವೇ? ಆದರೆ ರಾಜಕೀಯ ಪಕ್ಷವಾಗದೆ, ಎನ್ ಜಿ ಓವೂ ಆಗದೆ ಈ ಎಲ್ಲವುಗಳ ಅನುಕೂಲಗಳನ್ನು ಅನುಭವಿಸುವ ಮಠಗಳು ಸಮಾಜದ ಮೇಲೆ ನಿಜಕ್ಕೂ ಬೀರುತ್ತಿರುವ ಪರಿಣಾಮ ಏನು ಮತ್ತು ಆದುನಿಕ ಪ್ರಜಾಪ್ರಭುತ್ವದಲ್ಲಿ ಅವುಗಳ ಸ್ಥಾನವನ್ನು ಹೊಸತಾಗಿ ನಿರ್ಧರಿಸುವ ಅಗತ್ಯವಿಲ್ಲವೇ?
ದಿನನಿತ್ಯದ ಜೀವನದಲ್ಲಿ ನಾವು ತೊಂದರೆಗಳಾದಾಗ ಹಲವು ಬಾರಿ ಸರ್ಕಾರವನ್ನು, ಸುತ್ತಮುತ್ತವಿರುವವರನ್ನು ಆಗಾಗ ದೂಷಿಸುತ್ತ, ಬೈದುಕೊಳ್ಳುತ್ತಾ ಇರುವುದು ಸರ್ವೇಸಾಮಾನ್ಯ. ತಕ್ಷಣದ ವಿವೇಚನೆಗೆ, ಕಾಮನ್ ಸೆನ್ಸಿಗೆ ಇವುಗಳಿಗೆಲ್ಲ ನಾವು ಜವಾಬ್ದಾರರಲ್ಲ ಅನ್ನಿಸುತ್ತದೆ, ಉದಾಹರಣೆಗೆ ನೀರು ಪೋಲು ಮಾಡುವುದು, ರಸ್ತೆಯನ್ನು ಅಗೆದು ಸರಿಯಾಗಿ ಮುಚ್ಚದೇ ಹೋಗುವುದು, ಕಂಡ ಕಂಡ ಹೊತ್ತಿನಲ್ಲಿ ವಿದ್ಯುತ್ ಕಡಿತ, ವಾಹನ ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಇತ್ಯಾದಿ..
ಆದರೆ ಅವುಗಳ ಬಗ್ಗೆ ಸ್ವಲ್ಪ ನಿಧಾನಕ್ಕೆ ಯೋಚಿಸಿದಾಗ ನೇರವಾಗಿಯೋ/ಪರೋಕ್ಷವಾಗಿಯೋ ಇದೇ ಆರೋಪಗಳಲ್ಲಿ ದೋಷಮುಕ್ತರಲ್ಲವೆನ್ನುವುದು ನಾಗರೀಕರಿಗೆ ಸುಮಾರು ಪಾಲಿಗೆ ಸತ್ಯ.
ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ.
೧. ಮನೆಯಲ್ಲಿನ ಬೋರ್ವೆಲ್ ನೀರಿನ ಬಳಕೆಯನ್ನು ಗಮನಿಸಿ: ಸೈಟ್ ನಿಮ್ಮದೇ, ಬಾವಿ ತೆಗೆಸಿದ್ದು ನೀವೇ , ಪಂಪು ವಿದ್ಯುತ್ತಿನ ಖರ್ಚು ನಿಮ್ಮದೇ ಇರಬಹುದು,ಆದರೆ ಅಂತರ್ಜಲ ನಿಮ್ಮದೇ? ಅದನ್ನು ಸ್ವಂತ ಆಸ್ತಿಯಂತೆ ಉಪಯೋಗಿಸುವುದು ಎಷ್ಟು ಸರಿ, ಅದೂ ಅಲ್ಲದೆ ಅಂತರ್ಜಲಕ್ಕೆ ನೀರು ವಾಪಾಸಾಗಲು ನಿಮ್ಮ ಯಾವುದೇ ಚಟುವಟಿಕೆ ಕಾರಣವಲ್ಲದಿದ್ದಾಗ ಎಲ್ಲರಿಗೂ ಸೇರಬೇಕಾಗಿರುವ ಅಂತರ್ಜಲವನ್ನು ಬೋರಿನ ಒಡೆಯಾರಿಗಿ ನಾವು ಒಬ್ಬರೇ ದೋಚಿದಂತಾಗುವುದಿಲ್ಲವೇ? ಬೇಕಿದ್ದರೆ ಎಲ್ಲರೂ ಹಾಗೆಯೇ ಉಪಯೋಗಿಸಿಕೊಳ್ಳಲಿ ಎನ್ನುವುದು ಧಿಮಾಕಿನ ಮಾತಲ್ಲವೇ?
೨. ಪದೇ ಪದೇ ಕರೆಂಟ್ ಹೋಗುತ್ತದೆ, ಇನ್ವರ್ಟರ್/ಬ್ಯಾಟರಿ ಉಪಯೋಗಿಸುತ್ತೇವೆ: ಅಲ್ಲ, ಲೋಡ್ ಶೆಡ್ಡಿಂಗ್ ಮಾಡುವುದು ಯಾಕೆ? ನಮ್ಮಲ್ಲಿರುವ ಸಂಪನ್ಮೂಲಗಳು ಕೆಲವೊಮ್ಮೆ ನಮ್ಮ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ, ಅದಕ್ಕೆ
ವಿದ್ಯುತ್ ಬಳಕೆಯನ್ನು ಕಡಿತಗೊಳಿಸಬೇಕೆಂದಲ್ಲವೇ. ಹಾಗಿರುವಾಗ ಬೇರೆಯವರು ದೀಪ ಆರಿಸಲ್ಲ, ಸುಮ್ಮನೆ ಉರಿಸುತ್ತಾರೆಂದು ಗೊಣಗುವ ನಾವು ಕರೆಂಟ್ ಹೋದಾಗ ಮೊದಲೆ ಚಾರ್ಜ್ ಆಗಿರುವ ಬ್ಯಾಟರಿಯನ್ನುಪಯೋಗಿಸಿ ಕರೆಂಟ್ ಹೋದರೂ ದೀಪ ಆರದ ಹಾಗೆ ನೋಡಿಕೊಂಡರೆ ವಿದ್ಯುತ್ ಬಳಕೆಯಲ್ಲಿ ಕಡಿತವಾದರೂ ಎಲ್ಲಾಯಿತು ಸ್ವಾಮಿ? ಬಳಸುವುದಕ್ಕಿಂತ ಹೆಚ್ಚಾಗಿಯೇ ಉಪಯೋಗಿಸಿಕೊಳ್ಳಲಿಲ್ಲವೆ? ಹೀಗಿದ್ದೂ ಕರೆಂಟ್ ತೆಗೀತಾರೆ ಅನ್ನುವುದು ಎಷ್ಟು ಸರಿ?
೩. ಹಳ್ಳಿ ಕಡೆ ಜನ ಅನಧಿಕೃತವಾಗಿ ಕಾಡು ಕಡಿದೋ ಕಂಡವರ ಜಮೀನನ್ನು ಕಬಳಿಸಿ ಖಾಸಗೀ ಆಸ್ತಿ ಮಾಡಿಕೊಂಡರೆಂದು ಪತ್ರಿಕೆಗಳಲ್ಲಿ ಓದುತ್ತೇವೆ, ರಸ್ತೆ ಬದಿಯ ಗಾಡಿ ಅಂಗಡಿಯವರಿಂದ ಓಡಾಡುವುದೇ ಕಷ್ಟ ಅಂತ ಬೈಕೋತೀವಿ, ಆದರೆ ನಮ್ಮ ಮನೆಯೆದುರು ಸುಂದರವಾಗಿ ನಾಲ್ಕು ಗಿಡ ಹಾಕಿಬಿಡುವ ಅಂತ ರೋಡಿನ ಅಂಚಿನ ತನಕ ಒಂದು ೭-೮ ಅಡಿ ಅಗಲದ ಫುಟ್ಪಾತನ್ನು ಕಬಳಿಸಿ ಹೂಗಿಡ ನಿಟ್ಟು ಖಾಸಗಿ ಉದ್ಯ್ಯಾನ ನಿರ್ಮಿಸುತ್ತೇವೆ, ಬೇರೆಯವರು ಹೂಕೀಳುತ್ತಾರೆ ಅಂತ ಹೊಯ್ಕತೀವಿ, ಇಲ್ಲ, ಮನೆ ಮುಂದೇನೆ ವಾಹನಗಳನ್ನು ರೋಡಿನ ತನಕ ನಿಲ್ಲಿಸಿ ಆರಾಮಾಗಿ ಮನೆಗೆ ಹೋಗಿಬಿಡ್ತೀವಿ, ಇಲ್ಲ ಅಂದರೆ, ಗಾಡಿಗಳು ಮನೆಯಿಂದ ನೆಟ್ಟಗೆ ರೋಡಿಗೇ ಇಳಿಯಬೇಕು, ಹಾಗೆ ಗೇಟಿಂದ ರೋಡಿಗೆ ಕಲ್ಲು ಚಪ್ಪಡಿ ಹಾಕ್ಬಿಡ್ತೀವಿ, ಇದು ಕಬಳಿಕೆ ಅಲ್ವಾ ಸ್ವಾಮಿ? ಇದ್ಯಾವುದೂ ಇಲ್ಲ ಅಂದರೆ ರೋಡಿನ ತನಕ ಶ್ಯಾಮಿಯಾನ ಹಾಕಿರುವ ಹೋಟೆಲ್ಗಳಲ್ಲಿ ಫುಟ್ಪಾತ್ನಲ್ಲಿ ನಿಂತುಕೊಂಡು ದೋಸೇ ತಿನ್ನೋಲ್ವ?
೪. ರೋಡ್ ಸರಿಯಿಲ್ಲ, ರಿಪೇರಿ ಮಾಡಿಲ್ಲ, ತೊಟ್ಟಿ ಕ್ಲೀನ್ ಮಾಡಿಲ್ಲ ಹೀಗೆ ನೂರೆಂಟು ತೊಂದರೆಗಳನ್ನು ಕಂಡವರ ಮುಂದೆಲ್ಲ ಹೇಳ್ಕೋತಾನೆ ಇರ್ತೀವಿ, ಒಮ್ಮೆಯಾದರೂ ಸಂಘಟಿತರಾಗಿ ಹೋಗಿ ವಾರ್ಡ್ ಸದಸ್ಯರ ಹತ್ತಿರ ಹೋಗಿ ಜಾಣ್ಮೆಯಿಂದ ಕೆಲಸ ಸಾಧಿಸಿಕೊಂಡು ಬರುತ್ತೇವೆಯೇ?
ಹೀಗೆ ಸುಮಾರು ಉದಾಹರಣೆಗಳನ್ನು ಕೊಡಬಹುದು, ದೈನಂದಿನ ಬದುಕಿನಲ್ಲಿ ಜವಾಬ್ದಾರಿನೇ ಇಲ್ಲದ ನಮ್ಮ ನಡುವಳಿಕೆಯಿಂದ ನಾವು ನಮ್ಮ ದೇಶದ ಸಮಸ್ತ ಜನರ ಆಸ್ತಿ ಮತ್ತು ಪರಿಸರವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ನುಂಗುಹಾಕ್ತಿದ್ದೇವೆ. ಬೇಜವಾಬ್ದಾರಿಯಿಂದ ನುಸುಳಿಕೊಳ್ಳುವುದು ಬೇಡ, ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದು ಬೇಡ, ಇವುಗಳನ್ನೇ ದೇಶಕ್ಕೆ ಮಾಡುವ ಸೇವೆ ಅಂತಾನೋ ಅಥವ ಇದೇ ತ್ಯಾಗಾನೋ ಅನ್ಕೊಂಡೋ ಮನಸ್ಸಿನಲ್ಲಿ ಬೈಕಂಡಾದರೂ ಪರವಾಗಿಲ್ಲ, ಈ ತರಹದ ಕೆಲಸಗಳನ್ನೆಸಗುವುದು ಬೇಡ, ಬದಲಾಗೋಣ, ಕಾರ್ಯತತ್ಪರರಾಗೋಣ. ಬದಲಾಗದಿದ್ದವರಿಗೆ ತಿಳಿಸೋಣ,ಕೇಳದಿದ್ದರೆ ಕೈಲಾಗುವ ಮಟ್ಟಿಗೆ ಚುನಾವಣೆಯಲ್ಲಿ ಸೋಲಿಸುವುದು, ಅವರ ದುಖಾನಿಗೇ ಹೋಗದೇ ಬುದ್ಧಿ ಕಲಿಸುವ.
ನಮ್ಮದು ಪ್ರಗತಿಶೀಲ ದೇಶ. ಪ್ರಗತಿಶೀಲ ದೇಶದ ಪ್ರಜೆಗಳಾದ್ದರಿಂದ ಅಮೇರಿಕದವರಂತೆಯೋ ಪಶ್ಚಿಮ ಯೂರೋಪಿನ ದೇಶಗಳಂತೆಯೋ ನಾವು ಆರಾಮಾಗಿರುವುದು ತಪ್ಪಾಗುತ್ತದೆ. ಮುಂದೆ ಹೋಗಬೇಕು, ಮುಂದಿನ ಜನಾಂಗಕ್ಕೂ ಸ್ವಲ್ಪ ಉಳಿಸಬೇಕೆಂದಾದರೆ ಇಷ್ಟರ ಮಟ್ಟಿಗೆ ಕಾಳಜಿವಹಿಸಬೇಕು, ತೊಂದರೆ/ಕಷ್ಟ ಅನುಭವಿಸಬೇಕು, ತ್ಯಾಗ ಮಾಡಬೇಕು - ನಮ್ಮ ದೇಶ ಅಂತ ಇದ್ದರೆ.
ಪ್ರವಾಸ ಕಥನ
ಸುಮಾರು ೩ ವರ್ಷಗಳ ಹಿಂದೆ ಉದಯವಾಣಿಯಲ್ಲಿ ದೇವಕಾರದ ಬಗ್ಗೆ ಸೀತಾರಾಮ ಭಟ್ಟರ ಲೇಖನವೊಂದು ಬಂದಿತ್ತು. ದೇವಕಾರಿಗೆ ಭೇಟಿ ನೀಡಬೇಕೆಂದು ಅಂದೇ ನಿರ್ಧರಿಸಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕದ್ರಾದಿಂದ ೨೫ಕಿಮಿ ದೂರದಲ್ಲಿದೆ ದೇವಕಾರು. ಕದ್ರಾ ಜಲಾಶಯದ ಒಂದು ಮಗ್ಗುಲಲ್ಲಿ ದೇವಕಾರಿದ್ದರೆ ಮತ್ತೊಂದು ಮಗ್ಗುಲಲ್ಲಿರುವುದು ಕೈಗಾ.
ನನ್ನ ೩ ಭೇಟಿಗಳಲ್ಲಿ ಮೊದಲ ಭೇಟಿಯೇ ಅವಿಸ್ಮರಣೀಯ. ಅಕ್ಟೋಬರ್ ೨, ೨೦೦೪ರಂದು ನಾವು ದೇವಕಾರ ಕಡವು ತಲುಪಿದಾಗ ಸಂಜೆ ೫ ಆಗಿತ್ತು. ದೋಣಿಯವನಿಗೆ 'ಕೂ' ಹಾಕಿ, ಆತ ಬಂದು ನಮ್ಮನ್ನು ಕದ್ರಾ ಹಿನ್ನೀರು ದಾಟಿಸಿ, ನಾವು ದೇವಕಾರ ಹಳ್ಳಿಯೊಳಗೆ ಪ್ರವೇಶಿಸಿದಾಗ ೬.೦೦ ದಾಟಿತ್ತು. ಗೆಳೆಯ ಲಕ್ಷ್ಮೀನಾರಾಯಣನಿಗೆ ರಾತ್ರಿಯ ಊಟ ಮತ್ತು ಮಲಗುವ ಸ್ಥಳದ ಬಗ್ಗೆ ಚಿಂತೆ. ದೋಣಿಯವನಲ್ಲಿ 'ಮಧುಕರ್ ಕಳಸ್' ಬಗ್ಗೆ ಕೇಳಿದಾಗ ಆತ ಮುಂದೆ ಹೋಗಿ ಅಲ್ಲಿ ಸಿಗುತ್ತಾರೆ ಎಂದು ನಮ್ಮನ್ನು ಸಾಗಹಾಕಿದ.
ಮುಂದೆ ಮನೆಯೊಂದರಿಂದ ಹತ್ತಾರು ಜನರು ಜೋರಾಗಿ ಮಾತಾಡುವ ಸದ್ದು. ನಮ್ಮನ್ನು ನೋಡಿದ ಕೂಡಲೇ ಮಾತು ಬಂದ್. ಸುಮಾರು ೨೦ರಷ್ಟು ಕಣ್ಣುಗಳು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದವು. ಮಧುಕರ್ ಅಲ್ಲೇ ಇದ್ದರು. ಅವರ ಪರಿಚಯವಾಗಿ ನಂತರ ನಮ್ಮನ್ನೂ ಅಲ್ಲೇ ಕುತ್ಕೊಳ್ಳಿಸಿ ಮಾತುಕತೆ ಮುಂದುವರಿಯಿತು. ಮಾತುಕತೆ ನಿಧಾನವಾಗಿ ದೇವಕಾರದ ಕಡೆ ತಿರುಗಿತು.
ದೇವಕಾರಿನಲ್ಲಿ ರಸ್ತೆಗಳಿಲ್ಲ, ಅಂಗಡಿಗಳಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ವಾಹನಗಳಿಲ್ಲ, ದೂರವಾಣಿ ಇಲ್ಲ, ಆಸ್ಪತ್ರೆಯಿಲ್ಲ ಮತ್ತು ನಾಲ್ಕನೇ ತರಗತಿಯ ನಂತರ ಶಾಲೆಯಿಲ್ಲ. ಹೆಚ್ಚಿನ ಹಳ್ಳಿಗರು ನಾಲ್ಕನೆ ತರಗತಿಯ ತನಕ ಓದಿದವರು. ಸುಮಾರು ೩೫೦ರಷ್ಟು ಜನಸಂಖ್ಯೆಯುಳ್ಳ ಪುಟ್ಟ ಗ್ರಾಮವಿದು. ಒಂದು ಕಡೆಯಿಂದ ಕದ್ರಾ ಜಲಾಶಯದ ಹಿನ್ನೀರು, ಮತ್ತೊಂದು ಕಡೆಯಿಂದ ಕೊಡಸಳ್ಳಿ ಜಲಾಶಯದ ಹಿನ್ನೀರು ಮತ್ತು ಮಗದೊಂದು ಕಡೆಯಿರುವುದೇ ಕೈಗಾ ಎಂಬ ಅಣುಭೂತ. ಯಲ್ಲಾಪುರ ತಾಲೂಕಿನ ಬಾರೆ ಸಮೀಪದಿಂದ ೩ ತಾಸುಗಳ ಕಾಲುದಾರಿಯಿದೆ ದೇವಕಾರಿಗೆ. ಇರುವ ನೇರ ಸಂಪರ್ಕವೆಂದರೆ ಇದೊಂದೆ. ಹಳ್ಳಿಗರ ಜೀವನ ಭತ್ತದ ಒಂದು ಬೆಳೆಯ ಮೇಲೆ ನಿರ್ಭರ. ಕೈಗಾದಿಂದ ವಿದ್ಯುತ್ ತಂತಿಗಳು 'ಸುಂಯ್' ಎಂದು ಶಬ್ದ ಮಾಡುತ್ತಾ ದೇವಕಾರ್ ಮೂಲಕ ಹಾದುಹೋದರೂ ಇಲ್ಲಿ ವಿದ್ಯುತ್ ಸಂಪರ್ಕ ಇಲ್ಲ!
ಇಲ್ಲಿಗಿರುವುದು ಕೂಡಾ ಒಂದೇ ಬಸ್. ರಾತ್ರಿ ೮-೮.೩೦ ರ ಸುಮಾರಿಗೆ ಕದ್ರಾದಿಂದ ಹೊರಡುವ ಈ ಬಸ್ಸು ಸುಮಾರು ೯-೯.೧೫ಕ್ಕೆ ದೇವಕಾರು ಕಡವಿನಿಂದ ಒಂದು ಕಿಮಿ ದೂರವಿರುವ ಬಸ್ ನಿಲ್ದಾಣದಲ್ಲಿ ಹಳ್ಳಿಗರನ್ನು ಇಳಿಸಿ ಹಾಗೆ ಮುಂದೆ ಕೊಡಸಳ್ಳಿಗೆ ತೆರಳಿ ಅಲ್ಲೇ ಹಾಲ್ಟ್. ಮರುದಿನ ಮುಂಜಾನೆ ೬.೧೫ರ ಸುಮಾರಿಗೆ ದೇವಕಾರು ಕಡವಿನ ಸಮೀಪದಿಂದ ಹಾದುಹೋಗುತ್ತದೆ. ಮುಂಜಾನೆಯ ಈ ಬಸ್ಸಿಗಾಗಿ ೫ ಗಂಟೆಗೇ ದೋಣಿಯವನನ್ನು ಎಬ್ಬಿಸಿ ಕರ್ರಗೆ ಭಯಾನಕವಾಗಿ ಕಾಣುವ ಕಾಳಿ ಹಿನ್ನೀರನ್ನು ದಾಟಿ ನಂತರ ೧ ಕಿಮಿ ನಡೆದು ರಸ್ತೆಯ ಬಳಿ ಬರಬೇಕು. ಈ ಬಸ್ಸು ಎಲ್ಲಾದರೂ ತಪ್ಪಿದರೆ ೨೫ಕಿಮಿ ನಡೆದೇ ಕದ್ರಾ ತಲುಪಬೇಕು ಅಥವಾ ಮರಳಿ ನಾಳೆ ಬರಬೇಕು. ಈ ಬಸ್ಸಿನಲ್ಲಿ ಕದ್ರಾಕ್ಕೆ ತೆರಳಿ ಮುಂಜಾನೆ ೧೦-೧೧ರ ಹಾಗೆ ತಮಗಿದ್ದ ಎಲ್ಲಾ ಕೆಲಸಗಳನ್ನು ಮುಗಿಸಿ ಮರಳಿ ಬರಲು ಹಳ್ಳಿಗರು ಮತ್ತೆ ರಾತ್ರಿ ೮.೩೦ರ ವರೆಗೆ ಕಾಯಬೇಕು! ರಾತ್ರಿ ಸುಮಾರು ೯.೩೦ಕ್ಕೆ ಕಡವಿನ ಬಳಿ ಆಗಮಿಸಿ ಮತ್ತದೇ ಪೆಟ್ರೊಮ್ಯಾಕ್ಸ್ ದೀಪದ ಸಹಾಯದಿಂದ ಕತ್ತಲಲ್ಲಿ ದೋಣಿಯಲ್ಲಿ ಹಿನ್ನೀರು ದಾಟುವುದು.
ಸಂಸದರಾಗಿದ್ದ ದಿವಂಗತ ವಸಂತ ಕುಮಾರ್ ಅಸ್ನೋಟಿಯವರು ದೇವಕಾರಿನ ಪುನರ್ವಸತಿಗೆ ಪ್ರಯತ್ನ ಮಾಡುತ್ತಿದ್ದರು. ಅವರ ಮರಣದ ನಂತರ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರಾಕೇಶ್ ಶರ್ಮರವರು ಜನರ ಪುನರ್ವಸತಿಗೆ ಯತ್ನಿಸುತ್ತಿದ್ದರು. ಇವರಿಗೆ ವರ್ಗವಾದ ನಂತರ ಯಾರಿಗೂ ದೇವಕಾರದಲ್ಲಿರುವವರ ಬಗ್ಗೆ ಆಸಕ್ತಿ ಇಲ್ಲ. ಹತ್ತು ವರ್ಷಗಳ ಮೊದಲು ಕೈಗಾ ಕೇವಲ ಒಂದು ತಾಸಿನ ನಡಿಗೆಯಾಗಿತ್ತು. ಆದರೆ ಅಣುಸ್ಥಾವರ ಬಂದ ಮೇಲೆ ಆ ದಾರಿಯಲ್ಲಿ ತಿರುಗಾಟ ನಿಷೇಧಿಸಲಾಗಿದೆ. ಕದ್ರಾಗೆ ಇದ್ದ ನೇರ ರಸ್ತೆ ಸಂಪರ್ಕವನ್ನು ಕದ್ರಾ ಆಣೆಕಟ್ಟು ನುಂಗಿಹಾಕಿತು. ಯಲ್ಲಾಪುರಕ್ಕೆ ಇದ್ದ ಸಂಪರ್ಕ ಕೊಡಸಳ್ಳಿ ಆಣೆಕಟ್ಟಿನಿಂದ ಕಡಿದುಹೋಯಿತು. ದೇವಕಾರದ ಈ ತ್ರಿಶಂಕು ಸ್ಥಿತಿಗೆ ತನ್ನ ಆಣುಸ್ಥಾವರ ಪರೋಕ್ಷವಾಗಿ ಕಾರ್ಅಣವಾಗಿದೆ ಎಂಬುದನ್ನು ಅರಿತಿರುವ ಕೈಗಾ ಅಣುಸ್ಥಾವರ ಸಂಸ್ಥೆ ಒಂದಷ್ಟು ಮೊತ್ತವನ್ನು ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಡುಗಂಟು ರೂಪದಲ್ಲಿ, ಪುನರ್ವಸತಿ ಸಮಯದಲ್ಲಿ ಬಳಸುವ ಸಲುವಾಗಿ ಇರಿಸಿದೆ. ಆದರೆ ಎರಡು ಆಣೆಕಟ್ಟುಗಳನ್ನು ನಿರ್ಮಿಸಿ ದೇವಕಾರಿನ ಇಂದಿನ ಸ್ಥಿತಿಗೆ ಪ್ರತ್ಯಕ್ಷವಾಗಿ ಕಾರಣವಾಗಿರುವ ಕರ್ನಾಟಕ ವಿದ್ಯುತ್ ನಿಗಮ ಮಾತ್ರ ತೆಪ್ಪಗೆ ಕುಳಿತಿದೆ. ಇರುವ ಒಂದೇ ಬಸ್ಸನ್ನು ರದ್ದುಮಾಡಲು ಕ.ರಾ.ರ.ಸಾ.ಸಂ ಕಾರಣವನ್ನು ಹುಡುಕುತ್ತಿದೆ.
ನಂತರ ಮಧುಕರ್ ನಮ್ಮನ್ನು ಅವರ ಮನೆಗೆ ಕರೆದೊಯ್ದು, ಭರ್ಜರಿ ಉಪಚಾರ ಮಾಡಿದರು. ಆ ಊಟದ ರುಚಿಯನ್ನು ಈಗಲೂ ಮರೆಯಲಾಗುತ್ತಿಲ್ಲ. ಮರುದಿನ ಮುಂಜಾನೆಯ ನೋಟ ಅದ್ಭುತ. ಎಲ್ಲಾ ಕಡೆಗಳಿಂದಲೂ ಬೆಟ್ಟಗಳಿಂದ ಆವೃತವಾಗಿರುವ ದೇವಕಾರು ಮುಂಜಾನೆಯ ಸಮಯ ಮಂಜಿನಲ್ಲಿ ಮುಳುಗಿ ಸ್ವರ್ಗಲೋಕದಲ್ಲಿ ನಡೆಯುವ ಅನುಭವ ನೀಡುತ್ತಿತ್ತು. ಮಂತ್ರಮುಗ್ಧರಂತೆ ನಾವಿಬ್ಬರು ಮಧುಕರ್ ರವರ ಮನೆಯಿಂದ ಸ್ವಲ್ಪ ದೂರ ಹರಿಯುವ ದೇವಕಾರ ಹಳ್ಳದ ದಂಡೆಯಲ್ಲಿರುವ ಬಂಡೆಯ ಮೇಲೆ ಕುಳಿತು ದೇವಕಾರದ ಸೌಂದರ್ಯವನ್ನು ಸವಿಯುತ್ತಿದ್ದೆವು. ಹಸಿರು ತುಂಬಿ ತುಳುಕುತ್ತಿದ್ದ ಗದ್ದೆಗಳ ಪರಿಧಿಯ ಆಚೆ ಹಸಿರಿನ ಮತ್ತೊಂದು ರಂಗನ್ನು ಹೊತ್ತು ನಿಂತಿರುವ ಬೆಟ್ಟಗಳು. ಆ ಬೆಟ್ಟಗಳನ್ನು ಅರ್ಧದಷ್ಟು ಮರೆಮಾಚಿರುವ ಮುಂಜಾನೆಯ ಮಂಜು. ಸುಮಾರು ೪೫ ನಿಮಿಷ ಹಾಗೇ ಮಾತನಾಡದೇ ಪ್ರಕೃತಿಯ ಪವಿತ್ರತೆಯನ್ನು ಆರಾಧಿಸುತ್ತ ಕುಳಿತ ನಮಗೆ ಮಧುಕರ್ 'ಕೂ' ಹಾಕಿ ಬೆಳಗ್ಗಿನ ಉಪಹಾರಕ್ಕಾಗಿ ಕೈ ಬೀಸಿ ಕರೆದಾಗಲೇ ಎಚ್ಚರವಾದದ್ದು.
ನೀರು ದೋಸೆಯ ಜೊತೆಗೆ ಬೆಲ್ಲ, ತುಪ್ಪದ ಮುಂಜಾನೆಯ ಉಪಹಾರ ರುಚಿಯೋ ರುಚಿ. ನಾವಿಬ್ಬರೂ ಸಿಕ್ಕಿದ್ದೇ ಅವಕಾಶ ಎಂದು ಭರ್ಜರಿಯಾಗಿ ಕಟದೇಬಿಟ್ಟೆವು. ನಂತರ ಮಧುಕರ್ ನಮ್ಮನ್ನು ದೇವಕಾರ ಜಲಪಾತ ನೋಡಲು ಕರೆದೊಯ್ದರು. ಸುಮಾರು ೭೫ ನಿಮಿಷಗಳ ಚಾರಣ. ೩೦೦ ಅಡಿಯಷ್ಟು ಎತ್ತರವಿರುವ ದೇವಕಾರ ಜಲಪಾತವನ್ನು ಅಕ್ಟೋಬರ್ ನಿಂದ ಜನವರಿಯವರೆಗೆ ಸಂದರ್ಶಿಸಬಹುದು. ನಂತರ ಮನೆಗೆ ಮರಳಿದ ಬಳಿಕ ನಮಗೆ ಬಿಸಿನೀರಿನ ಸ್ನಾನದ ವ್ಯವಸ್ಥೆ. ನಂತರ ಮತ್ತೆ ಊಟ. ಮಧುಕರ್ ಮತ್ತು ಅವರ ಮಡದಿ ನಮ್ಮನ್ನು ಉಪಚರಿಸಿದ ರೀತಿಗೆ ಹೇಗೆ ಧನ್ಯವಾದಗಳನ್ನು ತಿಳಿಸುವುದೆಂದು ಅರ್ಥವಾಗದೇ ಚಡಪಡಿಸುತ್ತಿದ್ದೆವು. ಹಣ ನೀಡಲು ಇಚ್ಛಿಸಿದಾಗ ಅವರು ತೆಗೆದುಕೊಳ್ಳಲು ನಿರಾಕರಿಸಿದರು. ಆದರೂ ಬಲವಂತದಿಂದ ಅವರ ಕಿಸೆಗೆ ತುರುಕಿ ಅಲ್ಲಿಂದ ಹೊರಟೆವು.
ಆನಂತರ ಗೆಳೆಯರೊಂದಿಗೆ ಗುಂಪು ಕಟ್ಟಿ ಫೆಬ್ರವರಿ ೨೦೦೫ ಮತ್ತು ಮಾರ್ಚ್ ೨೦೦೬ರಲ್ಲಿ ಮತ್ತೆ ದೇವಕಾರಿಗೆ ತೆರಳಿದ್ದೇನೆ. ಈ ಎರಡೂ ಸಂದರ್ಭಗಳಲ್ಲಿ ದೇವಕಾರ ಹಳ್ಳದ ದಂಡೆಯಲ್ಲಿ ನಾವು ಡೇರೆ ಹಾಕಿ ರಾತ್ರಿ ಕಳೆದಿದ್ದೆವು. ಕಳೆದ ವರ್ಷ ೩ನೇ ಬಾರಿ ತೆರಳಿದಾಗ ಮಧುಕರ್ ಅವರ ಮೊಬೈಲ್ ನಂಬ್ರ ನೀಡಿದರು. ಕೈಗಾದಲ್ಲಿ ಬಿ.ಎಸ್.ಎನ್.ಎಲ್ ಟವರ್ ಸ್ಥಾಪನೆಯಾಗಿದ್ದರಿಂದ ಸಿಗ್ನಲ್ ಈಗ ಸಿಗುತ್ತೆ ಎಂದು ಸಂತೋಷದಿಂದ ನುಡಿದರು. ಈಗ ಎಲ್ಲಾದರೂ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದರೆ, ಕದ್ರಾಗೆ ದೂರವಾಣಿ ಕರೆ ಮಾಡಿ ರಿಕ್ಷಾ/ಟೆಂಪೊ ವನ್ನು ಬರಹೇಳಿದರೆ, ಇತ್ತ ದೋಣಿ ದಾಟಿ ಆ ಕಡೆ ಕಡವು ತಲುಪುವಷ್ಟರಲ್ಲಿ ಆತ್ತ ಕದ್ರಾದಿಂದ ವಾಹನ ಬಂದಿರುತ್ತದೆ. ಮಧುಕರ್ ಮುಖದ ಮೇಲಿನ ಸಂತೋಷಕ್ಕೆ ಇದೇ ಪ್ರಮುಖ ಕಾರಣವಾಗಿತ್ತು.
ಕಳೆದ ನವೆಂಬರ್ ತಿಂಗಳಲ್ಲಿ ಬಾರೆಯ ಮೂಲಕ ದೇವಕಾರಿಗೆ ಚಾರಣ ಮಾಡುವ ಉದ್ದೇಶದಿಂದ ಬಾರೆಗೆ ತೆರಳಿದರೆ ಅಲ್ಲಿದ್ದರು ಸೇನಾ ಜವಾನರು. ದೇವಕಾರಿಗೆ ಇದ್ದದ್ದೇ ಒಂದು ನೇರ ಸಂಪರ್ಕ. ಈಗ ಇದೂ ಬಂದ್. ಕೆಲವು ತಿಂಗಳುಗಳ ಹಿಂದೆ ಮುಂಬೈ ರೈಲುಗಳಲ್ಲಿ ಬಾಂಬ್ ಸ್ಫೋಟ ಬಳಿಕ ಭಯೋತ್ಪಾದಕರ ದಾಳಿಯ ಮುನ್ನೆಚ್ಚರಿಕೆ ಕ್ರಮವಾಗಿ ಕೈಗಾ ಸುತ್ತಮುತ್ತಲಿನ ಪ್ರದೇಶಗಳು ಈಗ ಸೇನೆಯ ವಶಕ್ಕೆ. ಬಾರೆಯಿಂದ ಮುಂದಕ್ಕೆ ಯಾರಿಗೂ ಪ್ರವೇಶವಿಲ್ಲ.
ಅಂದ ಹಾಗೆ ಮೊನ್ನೆ ಮುಂಗಾರು ಮಳೆ ಚಿತ್ರ ನೋಡಲು ತೆರಳಿದ್ದೆ. ಚಿತ್ರದಲ್ಲಿ ಪ್ರಕೃತಿಯ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. 'ಕುಣಿದು ಕುಣಿದು ಬಾರೆ..' ಹಾಡಿನ ವೇಳೆಯಲ್ಲಿ ದೇವಕಾರ ಮತ್ತೆ ಮತ್ತೆ ನೆನಪು ಬರುತ್ತಿತ್ತು. ಹಾಗಾಗಿಯೇ ಈ ಲೇಖನವನ್ನು ಬರೆದಿದ್ದು.
ಫಿನ್ಲೆಂಡ್ ಪ್ರವಾಸ ಕಥನ
ಇದೊಂದು ವಿಶಿಷ್ಟ ಪ್ರವಾಸ ಕಥನ. ಕೇವಲ ಸ್ಥಳಪುರಾಣಕ್ಕೋ, ಊಟ ತಿಂಡಿಗಳ ವರ್ಣನೆಗೋ ಕಥನವನ್ನು ಸೀಮಿತಗೊಳಿಸದೆ ಆದರೆ ಅವನ್ನೂ ಉಳಿಸಿಕೊಂಡು ಫಿನ್ಲೆಂಡ್ ಕನ್ನಡದ ಸಂಸ್ಕೃತಿಗಳ ನಡುವಣ ತುಲನೆ ಮತ್ತು ವಿಶ್ಲೇಷಣೆಗಳ ಜತೆಗೆ ಸಾಗುವ ಕಥನ ಇದು. ಇದು ಕನಿಷ್ಠ ಹತ್ತು ಭಾಗಗಳಲ್ಲಿ ಪ್ರಕಟವಾಗಲಿದೆ.
-ಸಂಪದ ನಿರ್ವಾಹಕ ಬಳಗ
ಸ್ಥಳ: ಫಿನ್ಲೆಂಡ್. ೨೦೦೪ರ ಏಪ್ರಿಲ್ ಎರಡು. ಸ್ಟುಡಿಯೊ ಒಳಕ್ಕಿರಲಿ ಫಿನ್ಲೆಂಡ್ ದೇಶದೊಳಕ್ಕೆ ಕಾಲಿಟ್ಟೇ ಕೇವಲ ಎರಡು ಗಂಟೆ ಕಾಲವಾಗಿತ್ತು. ಫೋನ್ ರಿಂಗಾಯಿತು. ಪರವಾಗಿಲ್ಲ