ನೆಲದ ಮರೆಯ ನಿದಾನ

ನೆಲದ ಮರೆಯ ನಿದಾನ

ಕರ್ತೃ: ಎನ್ ಎ ಎಂ ಇಸ್ಮಾಯಿಲ್

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು

ಈ ಗಾದೆ ಕನ್ನಡಿಗರಿಗೆಲ್ಲಾ ಪರಿಚಿತ. ರೈತರಂತೂ ಇದನ್ನು ಅಕ್ಷರಾರ್ಥದಲ್ಲೇ ಕಲ್ಪಿಸಿಕೊಂಡು ಸ್ವಾರಸ್ಯವನ್ನು ಗ್ರಹಿಸಿಯಾರು. ಒಂದು ವಸ್ತುವನ್ನು ಇಬ್ಬರು ಎರಡು ಪರಸ್ಪರ ಭಿನ್ನ ದಿಕ್ಕುಗಳಿಗೆ ಎಳೆದರೆ ಅದು ಒಂದಿಂಚೂ ಅಲುಗದು ಎಂಬುದನ್ನು ಈ ಗಾದೆ ಧ್ವನಿಸುತ್ತದೆ. ಇನ್ನೂ ಸರಳಗೊಳಿಸಿದರೆ ಇಬ್ಬರ ಮೊಂಡುವಾದಗಳು ಅಥವಾ ಇಬ್ಬರ ವ್ಯರ್ಥ ಪ್ರಯತ್ನಗಳಿಗೆ ಇದು ರೂಪಕವಾಗಬಹುದು. ಈ ಸರಳ ಗ್ರಹಿಕೆಗಳ ಆಚೆಗೆ ಹೋಗಿ ಈ ಗಾದೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ...?

ಮೊದಲನೆಯದಾಗಿ ಎತ್ತು ಮತ್ತು ಕೋಣಗಳು ಏನನ್ನು ಎಳೆಯುತ್ತಿವೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ವಿಶ್ಲೇಷಣೆಯ ಅನುಕೂಲಕ್ಕೆ ಇವರೆಡೂ ಸೇರಿ ಒಂದು ಗಾಡಿಯನ್ನು ಎಳೆಯುತ್ತಿವೆ ಎಂದು ಭಾವಿಸಿ ಮುಂದುವರಿಯೋಣ.

ಮುಂದಿನ ಪ್ರಶ್ನೆ ಇರುವುದು ಕೋಣ-ಎತ್ತುಗಳ ಜೋಡಿಯನ್ನು ಗಾಡಿಗೆ ಕಟ್ಟಿ ನೀರಿರುವ ಜಾಗಕ್ಕೆ ಅದನ್ನು ತಂದದ್ದೇಕೆ?

ಏನೋ ಹಾಗಾಯಿತು ಎಂಬ ಸಮಜಾಯಿಶಿ ಕೊಟ್ಟೆವು ಎಂದುಕೊಳ್ಳೋಣ. ಮತ್ತೆಯೂ ಪ್ರಶ್ನೆಗಳು ಮುಗಿಯುವುದಿಲ್ಲ. ಎತ್ತು ಗಾಡಿಯನ್ನು ಎಳೆಯಲು ಪ್ರಯೋಗಿಸುತ್ತಿರುವ ಬಲದ ಪ್ರಮಾಣ, ಹಾಗೆಯೇ ಕೋಣದ ಬಲ ಇದಾದ ನಂತರ ಗಾಡಿಯ ಭಾರ, ಅದಕ್ಕೆ ಅಳವಡಿಸಲಾಗಿರುವ ಚಕ್ರದ ವ್ಯಾಸ. ಘರ್ಷಣೆ ಹೀಗೆ ಹಲವು ಸೂಕ್ಷ್ಮ ವಿಚಾರಗಳನ್ನು ಲೆಕ್ಕ ಹಾಕುತ್ತಲೇ ಹೋಗಬಹುದು. ಈ ಎಲ್ಲಾ ಲೆಕ್ಕಾಚಾರಗಳ ಫಲಿತಾಂಶವಾಗಿ ಗಾಡಿ ಏರಿಯ ಕಡೆಗೆ ಚಲಿಸಿತು ಅಥವಾ ನೀರಿನ ಕಡೆಗೆ ಚಲಿಸಿತು ಎಂಬ ಸ್ಪಷ್ಟ ಉತ್ತರ ಸಿಗುತ್ತದೆ. ಆದರೆ ಈ ಉತ್ತರದಿಂದ ಆದ ಪ್ರಯೋಜನವೇನು?

ವೈಜ್ಞಾನಿಕ ಕೃಷಿಯ ಆರಂಭದ ದಿನದಿಂದಲೂ ಇಂಥದ್ದೊಂದು ಪ್ರಶ್ನೆಯನ್ನು ನಾವು ಎದುರಿಸುತ್ತಲೇ ಇದ್ದೇವೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯುತ್ತದೆ ಎಂಬ ಸರಳ ಸತ್ಯವನ್ನು ಸಂಕೀರ್ಣವಾಗಿ ಗ್ರಹಿಸಲು ಹೊರಟೆವು. ಪರಿಣಾಮವಾಗಿ ನಾವು ಮಣ್ಣಿನಲ್ಲಿ ಇರಬೇಕಾದ ರಾಸಾಯನಿಕಗಳ ಬಗ್ಗೆ ತಿಳಿದುಕೊಂಡೆವು. ಮೊಳಕೆಯೊಡೆಯಲು ಅವಶ್ಯವಿರುವ ರಾಸಾಯನಿಕ ಇಲ್ಲ ಎಂದಾದಾಗ ಆ ರಾಸಾಯನಿಕವನ್ನು ಭೂಮಿಗೆ ಸೇರಿಸಿದೆವು. ಇವುಗಳ ಮಧ್ಯೆ ವೈಜ್ಞಾನಿಕ ಕೃಷಿಯನ್ನು ಆರಂಭಿಸುವ ಮೊದಲೂ ಕೃಷಿಯಿತ್ತು ಮತ್ತು ಆಗಲೂ ಬೀಜ ಮೊಳಕೆಯೊಡೆಯುತ್ತಿತ್ತು ಎಂಬುದನ್ನು ಮರೆತಿದ್ದೆವು.

ಈ ಬಗೆಯ ವಿಸ್ಮೃತಿ ಸೃಷ್ಟಿಸುವ ಗೊಂದಲಗಳು ಹೇಗಿವೆ ಎಂಬುದನ್ನು ಪ್ರತಿಯೊಬ್ಬರೂ ಅನುಭವಿಸುತ್ತಿದ್ದೇವೆ. ಈ ಗೊಂದಲದಿಂದ ಹೊರಬರಲು ಹೆಚ್ಚು ಕಷ್ಟ ಪಡಬೇಕಿಲ್ಲ. ಸಹಜವಾಗಿ ಇದ್ದುಬಿಟ್ಟರೆ ಸಾಕಾಗುತ್ತದೆ. ಹಾಗಾದರೆ ಪ್ರಕೃತಿ ಅಷ್ಟು ಸರಳವೇ? ಖಂಡಿತವಾಗಿಯೂ ಅಲ್ಲ. ಪ್ರಕೃತಿಯ ಕುರಿತ ನಮ್ಮ ಗ್ರಹಿಕೆಯನ್ನು ತಿರುಗು ಮುರುಗಾಗಿಸಿಕೊಂಡರೆ ಇದು ಅರ್ಥವಾಗುತ್ತದೆ.

ನಾಥ ಪಂಥದ ಸಂತರು ಈ ಬಗೆಯ ಹೇಳಿಕೆಗಳಿಗೆ ಪ್ರಸಿದ್ಧರು. ಇದನ್ನು ಉಲಟ್‌ ಭಾಂಸಿ ಎನ್ನುತ್ತಾರೆ. ಸಂತ ಕಬೀರನ ಉಲಟ್‌ ಭಾಂಸಿ ಪ್ರಕೃತಿಯ ಕುರಿತ ಗ್ರಹಿಕೆ ಹೇಗಿರಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಬಹುದು.

ಏಕ್‌ ಅಚಂಛಾ ದೇಖರೆ ಭಾಯಿ, ಠಾಢಾ ಸಿಂಹ ಚರಾವೈ ಗಾಇ
ಪಹಲೇ ಪೂತ ಪೀಚೆ ಮಾಇ ಭಾಯಿ, ಚೇಲಾಕೆ ಗುರು ಲಾಗೈ ಪಾಯಿ

ಹಸುವನ್ನು ಸಿಂಹ ಸಾಕುತ್ತದೆ. ಮಗನಿಂದಾಗಿ ತಾಯಿ ಇದ್ದಾಳೆ. ಶಿಷ್ಯನಿಂದಾಗಿ ಗುರುವಿದ್ದಾನೆ ಎನ್ನುವ ಈ ದ್ವಿಪದಿ ನೈಸರ್ಗಿಕ ಸಂಬಂಧಗಳನ್ನು ಸ್ಪಷ್ಟವಾಗಿ ಹೇಳುತ್ತದೆ. ಒಂದು ಸಿಂಹ ಬದುಕಿದೆ ಎಂದಾದರೆ ನೂರಾರು ಹಸುಗಳು, ಆ ಹಸುಗಳು ತಿನ್ನಲು ಬೇಕಿರುವ ಹುಲ್ಲು, ಆ ಹುಲ್ಲು ಬೆಳೆಯುವ ಭೂಮಿ ಎಲ್ಲವೂ ಇದೇ ಎಂದರ್ಥ. ಹಾಗಾಗಿಯೇ ಸಿಂಹ ಹಸುವನ್ನು ಸಾಕುತ್ತದೆ!

ಇಸ್ಮಾಯಿಲ್

ನೆಲದ ಮರೆಯ ನಿದಾನ-1

ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆಲದ ಮರೆಯ ನಿದಾನ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿಯ ಕೃಷಿ ಸಂಪದ ಪುಟದಲ್ಲಿ ಪ್ರಕಟವಾಗಿದ್ದವು. ಇವು ನಿಜಕ್ಕೂ ಏನು? ಅದು ನನಗೂ ಗೊತ್ತಿಲ್ಲ. ಇವುಗಳನ್ನು ಹರಿಪ್ರಸಾದ್‌ ಅವರಿಗೆ ಓದಲು ಕೊಟ್ಟಾಗ `ನನಗೆ ಇಷ್ಟವಾಗಲಿಲ್ಲ' ಎಂದಿದ್ದರು. ಹಾಗೆಯೇ ಇನ್ನು ಕೆಲವು ಗೆಳೆಯರು ಇಷ್ಟಪಟ್ಟಿದ್ದರು. ಈಗಲೂ ನಾನೊಂದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ದೇನೆ. ಎಲ್ಲರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ.

 

ಇದು ನಡೆದದ್ದು 50 ಕೋಟಿ ವರ್ಷಗಳ ಹಿಂದೆ. ಒಂದು ಹುಲ್ಲು ಕೂಡಾ ಗಾಳಿಗೆ ಅಲುಗುತ್ತಿರಲಿಲ್ಲ. ಹಕ್ಕಿಗಳ ಗುಂಪು ಆಕಾಶದಲ್ಲಿ ಚಿತ್ರ ಬರೆಯುತ್ತಿರಲಿಲ್ಲ. ಒಂದು ಜೀರುಂಡೆಯ ಸದ್ದೂ ಇರಲಿಲ್ಲ. ಇವೆಲ್ಲಾ ಕೋಟ್ಯಂತರ ವರ್ಷಗಳಷ್ಟು ಮುಂದಿನ ಭವಿಷ್ಯದ ಗರ್ಭದಲ್ಲಿ ಅಡಗಿದ್ದವು. ಮನುಷ್ಯನೆಂಬವನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲಡೆಯೂ ಗಾಳಿಗೆ ಹಾರುವ ದೂಳು ಮಾತ್ರ. ಇಂಥ ದಿನಗಳಲ್ಲಿ ಒಬ್ಬ ಮಾನವಶಾಸ್ತ್ರಜ್ಞ ಯಾರನ್ನಾದರೂ ಸಂದರ್ಶಿಸಿ ತನ್ನ ಸಂಶೋಧನೆ ಆರಂಭಿಸುವ ಉದ್ದೇಶದಿಂದ ಅಲೆಯುತ್ತಿದ್ದ.(ಮನುಷ್ಯ ಇರಲಿಲ್ಲ ಎಂದ ಮೇಲೆ ಈ ಮಾನವಶಾಸ್ತ್ರಜ್ಞ ಎಲ್ಲಿಂದ ಬಂದ ಎಂಬ ಪ್ರಶ್ನೆ ಬೇಡ. ಮಾನವಶಾಸ್ತ್ರಜ್ಞನಿಲ್ಲದೆ ಪ್ರಪಂಚ ಪೂರ್ಣವಾಗುವುದಿಲ್ಲ, ಅಷ್ಟೆ!)
ಹೀಗೆ ಅಲೆಯುತ್ತಿದ್ದ ಈ ಸಂಶೋಧಕನಿಗೆ ಸಿಕ್ಕದ್ದು ಲೋಳೆ ಮೀನು. ವಿಶಾಲವಾಗಿ ಹರಡಿದ್ದ ಸಮುದ್ರದ ದಂಡೆಯಲ್ಲಿ ಕಂಡ ಈ ಲೋಳೆ ಮೀನನ್ನು ಸಂಶೋಧಕ ಮಾತನಾಡಿಸಿದ. ಉಭಯ ಕುಶೋಲಪರಿ ಆಯಿತು. ಕೆಲವೇ ಕ್ಷಣಗಳಲ್ಲಿ ಇಬ್ಬರೂ ಗೆಳೆಯರಾಗಿಬಿಟ್ಟರು. ಸಂಶೋಧಕ ತನ್ನ ಪ್ರಶ್ನಾವಳಿಯನ್ನು ಹೊರತೆಗೆದು ವಿಜ್ಞಾನಿಯ ಗತ್ತಿನಲ್ಲಿ ಮಾತಿಗಾರಂಭಿಸಿದ.
`ನಾನೊಬ್ಬ ಅಂತ್ರೋಪಾಲಜಿಸ್ಟ್‌. ನನ್ನ ಪ್ರಶ್ನೆಗೆ ಉತ್ತರಿಸಿದರೆ ಸಂಶೋಧನೆಗೆ ಅನುಕೂಲವಾಗುತ್ತೆ'
`ಹೌದೇ, ಕೇಳಿ'
`ಜಗತ್ತಿನ ಸೃಷ್ಟಿಯ ಬಗ್ಗೆ ನಿಮಗೆ ಗೊತ್ತಿರುವ ಕಥೆ ಹೇಳಿ'
`ಕಥೆ...?'
`ಅದೇ ಜಗತ್ತು ಹೇಗೆ ಸೃಷ್ಟಿಯಾಯಿತು ಎಂಬುದರ ಬಗ್ಗೆ ನೀವು ಹೇಳುವ ಕಥೆಗಳು'
`ಅಂಥ ಕಥೆಗಳೇನೂ ಇಲ್ಲ. ಯಾಕೆಂದ್ರೆ ನಾವು ತುಂಬಾ ತಾರ್ಕಿಕರು. ನಮ್ಮದೇನಿದ್ದರೂ ವೈಜ್ಞಾನಿಕವಾದ ತಿಳುವಳಿಕೆ ಮಾತ್ರ'
`ಸರಿ ಅದನ್ನೇ ಹೇಳಿ'
`ಕೋಟ್ಯಂತರ ವರ್ಷಗಳ ಕಾಲ ಇಲ್ಲಿ ಯಾವ ಜೀವಿಗಳೂ ಇರಲಿಲ್ಲ. ಕೊನೆಗೆ ಜೀವಿ ಕಾಣಿಸಿಕೊಂಡಿತು'
`ಸರಿ ನಿಮ್ಮ ಕಥೆಯ ಪ್ರಕಾರ... ಕ್ಷಮಿಸಿ.. ನಿಮ್ಮ ವೈಜ್ಞಾನಿಕ ತಿಳುವಳಿಕೆಯ ಪ್ರಕಾರ ಆ ಜೀವಿ ಎಲ್ಲಿ ಕಾಣಿಸಿಕೊಂಡಿತು'
ಈ ಪ್ರಶ್ನೆಯಿಂದ ಸ್ವಲ್ಪ ಗೊಂದಲಕ್ಕೆ ಸಿಲುಕಿದ ಲೋಳೆ ಮೀನು `ಅಂದರೆ ನಿಖರವಾಗಿ ಯಾವ ಜಾಗದಲ್ಲಿ ಕಾಣಿಸಿಕೊಂಡಿತು ಎಂದೇ?' ಎಂದು ಪ್ರಶ್ನಿಸಿತು.
ಮಾನವಶಾಸ್ತ್ರಜ್ಞ ವಿವರಿಸಿದ; `ಹಾಗಲ್ಲ ಈ ಜೀವಿ ಕಾಣಿಸಿಕೊಂಡದ್ದು ನೀರಿನಲ್ಲೋ ಅಥವಾ ಭೂಮಿಯ ಮೇಲೋ?'
`ಭೂಮಿ..? ಹಾಗಂದ್ರೆ'
ಮಾನವ ಶಾಸ್ತ್ರಜ್ಞ ತಾನು ಕುಳಿತಿದ್ದ ನೆಲ ಮತ್ತು ಸುತ್ತ ಮುತ್ತಲಿನ ಪ್ರದೇಶವನ್ನು ತೋರಿಸಿ `ಅದು' ಎಂದ.
`ಓ ಅದನ್ನು ಭೂಮಿ ಎನ್ನುತ್ತೀರಾ... ಅದು ಈ ನೀರು ತುಂಬಿರುವ ಬೋಗುಣಿಯ ಅಂಚು'.
`ಸರಿ ಅಥವಾಯ್ತು. ಮುಂದುವರಿಸಿ...'
ಲಕ್ಷಾಂತರ ವರ್ಷಗಳ ಕಾಲ ಈ ಏಕಕೋಶ ಜೀವಿಗಳು ನೀರಿನಲ್ಲಿ ಅಸಹಾಯಕವಾಗಿ ಅಲೆಯುತ್ತಿದ್ದವು. ಅಮೀಬಾಗಳಂಥ ಜೀವಿಗಳು. ಮತ್ತೆ ನಿಧಾನವಾಗಿ ಸ್ವಲ್ಪ ಸಂಕೀರ್ಣ ಜೀವಿಗಳು ಬಂದವು ಹೀಗೆ... ಕೊನೆಗೊಮ್ಮೆ ಲೋಳೆಮೀನು ಬಂತು...'
ಮಾತು ಮುಗಿಯುವ ವೇಳೆಗೆ ಲೋಳೆ ಮೀನು ಹೆಮ್ಮೆಯಿಂದ ಬೀಗುತ್ತಿತ್ತು. ಇದು ಡ್ಯಾನಿಯಲ್‌ ಕ್ವಿನ್‌ನ ಕಾದಂಬರಿಯೊಂದರಲ್ಲಿರುವ ಕಥೆ. ಇದು ಕಥೆಯಷ್ಟೇ ವಾಸ್ತವ ಕೂಡಾ. ವೈಜ್ಞಾನಿಕವಾಗಿ ಚಿಂತಿಸುವ, ಕಾರ್ಯ ಕಾರಣಗಳನ್ನು ಹುಡುಕುವ ಮನುಷ್ಯ ವಿಶ್ವದ ಕುರಿತು ಅರಿತಿರುವುದು ಲೋಳೆಮೀನಿನಷ್ಟೇ. ಮನುಷ್ಯನ ವೈಜ್ಞಾನಿಕ ತಿಳುವಳಿಕೆಯಲ್ಲೂ ಕೊನೆಗೆ ಮನುಷ್ಯ ಬರುತ್ತಾನೆ. ಉಳಿದೆಲ್ಲವೂ ತನಗಾಗಿ ಸೃಷ್ಟಿಯಾಗಿವೆ ಎಂದು ಭಾವಿಸುತ್ತಾನೆ. ಇದಕ್ಕೆ ಭಿನ್ನವಾಗಿ ಅಖಿಲಾಂಡಕೋಟಿ ಬ್ರಹ್ಮಾಂಡದ ಒಂದು ಭಾಗವಾಗಿ ನಿಂತು ಗ್ರಹಿಸಹೊರಟರೆ ಅರ್ಥವಾಗುವುದೇ ಬೇರೆ.

ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?

ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು ಪ್ರಶ್ನೆ ಹಾಕಿದರೆ ನ್ಯೂಟನ್‌ನ ಗುರುತ್ವಾಕರ್ಷಣೆಯ ಸಿದ್ಧಾಂತಗಳ ವಿವರಣೆಯನ್ನು ಪಡೆಯಬಹುದು.

ನಮ್ಮ ಚರ್ಚೆಯ ವಿಷಯ ಅದಲ್ಲ. ಈ ಸಿದ್ಧಾಂತ ಎಲ್ಲಿತ್ತು? ನ್ಯೂಟನ್‌ ಇದನ್ನು ಕಂಡುಕೊಳ್ಳುವ ಮೊದಲು ಅದು ಅಸ್ತಿತ್ವದಲ್ಲಿ ಇರಲಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ `ಖಂಡಿತವಾಗಿಯೂ ಇತ್ತು' ಎಂಬ ಉತ್ತರ ಸಿಗುತ್ತದೆ. ಹಾಗಾದರೆ ಜಗತ್ತಿನಲ್ಲಿ ನಮಗೆ ತಿಳಿಯದ ಇನ್ನೂ ಸಾಕಷ್ಟು ಉಳಿದಿರಬಹುದು ಎಂಬುದನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಹಾಗಿದ್ದರೆ ಮಂಗ ವಿಕಾಸ ಹೊಂದಿ ಮನುಷ್ಯನಾಗಿ, ಮನುಷ್ಯ ವಿಕಾಸ ಹೊಂದಿ ಆಧುನಿಕ ಮನುಷ್ಯನಾಗುವ ಪ್ರಕ್ರಿಯೆಗಳಿಗೆ ಮೊದಲೂ ಬೇಸಾಯ ಇತ್ತೆ?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ ಹಲವು ಹೊಸ ವಿಷಯಗಳು ಅರ್ಥವಾಗ ತೊಡಗುತ್ತವೆ. ಮೊದಲನೆಯಾದಾಗಿ ಬೇಸಾಯ ಎಂದು ನಾವು ಹೇಳುತ್ತಿರುವ ಕಲ್ಪನೆ ಸಹಜವಾಗಿಯೇ ಈ ಭೂಮಿಯ ಮೇಲೆ ನಡೆಯುತ್ತಿದ್ದ ಒಂದು ವಿದ್ಯಮಾನ. ಇದನ್ನು ಮನುಷ್ಯ ತನ್ನ ಅನುಕೂಲಕ್ಕೆ ತಕ್ಕ ಹಾಗೆ ಮಾರ್ಪಡಿಸಿಕೊಂಡ. ಈ ಮಾರ್ಪಾಡು ಮೊದಲಿಗೆ ಸಹಜ ಕ್ರಿಯೆಯ ಜೊತೆ ಜೊತೆಗೇ ನಡೆಯುತ್ತಿತ್ತು. ಮನುಷ್ಯ `ಬುದ್ಧಿವಂತ'ನಾಗುತ್ತಾ ಸಾಗಿದಂತೆ ಸಹಜ ಕ್ರಿಯೆಯನ್ನು ತನಗೆ ಬೇಕಿರುವಂತೆ ಬಗ್ಗಿಸಲು ಪ್ರಯತ್ನಿಸಿದ. ಅಲ್ಲಿಂದ ಆರಂಭವಾದದ್ದು ಕೃಷಿ.

ಮನುಷ್ಯ ಚಕ್ರವನ್ನು ಕಂಡುಹಿಡಿದದ್ದು, ಬೆಂಕಿಯ ಬಳಕೆಯನ್ನು ತಿಳಿದದ್ದು, ಕೃಷಿಯನ್ನು ಆರಂಭಿಸಿದ್ದು ಮಾನವನ ವಿಕಾಸದ ಪ್ರಮುಖ ಘಟನೆಗಳೆಂದು ಭಾವಿಸುತ್ತೇವೆ. ಆದರೆ ಈ ಪ್ರಮುಖ ಘಟನೆಗಳು ಮನುಷ್ಯನನ್ನು ವಿಕಾಸದ ಹಾದಿಯಲ್ಲಿ ಕೊಂಡೊಯ್ದವೇ?

ಇದು ವಿಜ್ಞಾನಿಗಳು ಮತ್ತು ಚಿಂತಕರ ಮಟ್ಟಿಗೆ ಬಹಳ ಸಂಕೀರ್ಣವಾದ ಪ್ರಶ್ನೆ. ಈ ಸಂಕೀರ್ಣವಾದ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ಅನೇಕ ತತ್ವಶಾಸ್ತ್ರಗಳು ಹುಟ್ಟಿದವು. ಮನುಷ್ಯ ಎಷ್ಟು ಮುಖ್ಯ, ಮನುಷ್ಯ ಜನ್ಮ ಎಷ್ಟು ಮುಖ್ಯ ಎಂಬ ಬಗ್ಗೆ ಬಹಳ ಚರ್ಚೆಗಳು ನಡೆದವು. ಇದರ ಜೊತೆ ಜೊತೆಗೇ ಇತರ ಜನ್ಮಗಳು ಅಥವಾ ಇತರ ಜೀವಿಗಳು ಎಷ್ಟು ಮುಖ್ಯ ಎಂಬ ವಿಷಯ ಚರ್ಚೆಯಾಗಲಿಲ್ಲ. ಕಾರಣ ಬಹಳ ಸರಳ ಎಲ್ಲ ತತ್ವಶಾಸ್ತ್ರಗಳೂ ಮನುಷ್ಯರ ಮಧ್ಯೆ ಹುಟ್ಟಿವೆ, ಹಾಗೆಯೇ ಉಳಿದ ಜೀವಿಗಳ ಮಧ್ಯೆ ಹುಟ್ಟಿರಬಹುದಾದ ತತ್ವಶಾಸ್ತ್ರಗಳ ಬಗ್ಗೆ ಮನುಷ್ಯನಿಗೆ ಏನೂ ತಿಳಿದಿಲ್ಲ.

ಈ ಸಂವಹನದ ಕೊರತೆ ಮನುಷ್ಯನನ್ನು ಯಾವ ಮಟ್ಟಿಗೆ ವಿಕಾಸಗೊಳಿಸಿದೆ ಎಂದರೆ ವಿಕಾಸದ ಅಂಚಿನಲ್ಲಿ ತಾನು ನಿಂತಿದ್ದೇನೆ ಎಂದು ಮನುಷ್ಯ ಭಾವಿಸುವಂತೆ ಮಾಡಿದೆ. ಮಾನವ ಜನ್ಮ ದೊಡ್ಡದು ಎಂಬ ಏಕೈಕ ಕಾರಣಕ್ಕಾಗಿ ಜೀವಕೋಶದ ವಿನ್ಯಾಸವನ್ನೂ ನಮಗೆ ಬೇಕಾದಂತೆ ಬದಲಾಯಿಸುತ್ತಿದ್ದೇವೆ. ಈ ಎಲ್ಲಾ ವಿಶ್ಲೇಷಣೆಗಳು ನಮಗೆ ಜಗತ್ತನ್ನು ಅರ್ಥ ಮಾಡಿಸಿಕೊಟ್ಟಾವೆ?

ಇದಕ್ಕೆ ಉತ್ತರವನ್ನು ಒಂದು ರೂಪಕದ ಮೂಲಕ ಹೇಳಬಹುದೇನೋ.

ಪ್ರೇಮಿ ಪ್ರಿಯತಮೆಯ ಬಾಗಿಲು ಬಡಿದ.

ಒಳಗಿನಿಂದ ಪ್ರಶ್ನೆ ಬಂತು `ಯಾರು?'

ಪ್ರೇಮಿ ಹೇಳಿದ `ನಾನು'

ಬಾಗಿಲು ಮುಚ್ಚಿಯೇ ಇದ್ದಂತೆ ಉತ್ತರ ಬಂತು `ಇಲ್ಲಿ ನಾನಿದ್ದೇನೆ. ಜೊತೆಗೊಂದು `ನಾನು' ಬೇಡ'.

ಪ್ರೇಮಿ ನಿರಾಶನಾಗಿ ಹಿಂತಿರುಗಿದ. ತಪಸ್ಸಿನಲ್ಲಿ ಮುಳುಗಿದ. ಕೊನೆಗೊಂದು ಮತ್ತೆ ಪ್ರಿಯತಮೆಯ ಮನೆಯ ಬಾಗಿಲು ಬಡಿದ.

`ಯಾರು?'

`ನೀನು'

ಬಾಗಿಲು ತೆರೆಯಿತು.

ಮನುಷ್ಯನಿನ್ನೂ ಬಾಗಿಲು ಬಡಿಯುತ್ತಿದ್ದಾನೆ!

ಇಸ್ಮಾಯಿಲ್‌

ಮುಗ್ಧತೆಯ ಅಂತ್ಯವೇ ಕೃಷಿಯ ಆರಂಭ

ಲೈಂಗಿಕತೆಯ ಅವಶ್ಯಕತೆಯೇ ಇಲ್ಲದೇ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಪ್ರಾಚೀನ ಭಾರತೀಯರು, ಗ್ರೀಕರು ನಂಬಿದ್ದರು. ತಾಪದ ಪ್ರಭಾವದಿಂದ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಗ್ರೀಕ್‌ ಚಿಂತಕ, ಗುರು ತೇಲ್ಸ್‌ ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದ. ಮಣ್ಣು ಯಾವ ಬಾಹ್ಯ ನೆರವೂ ಇಲ್ಲದೆ ಸೃಷ್ಟಿಸುವ ಶಕ್ತಿ ಹೊಂದಿದೆ ಎಂಬ ವಾದವನ್ನು ತತ್ವಜ್ಞಾನಿ ಅರಿಸ್ಟಾಟಲ್‌ ಮಂಡಿಸಿದ್ದ.

ಮಣ್ಣಿನ ಶಕ್ತಿಯ ಕುರಿತ ಇಂಥ ಪರಿಕಲ್ಪನೆಗಳು ದಾಖಲಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಕೃಷಿ ಹುಟ್ಟಿತ್ತು. ಕೃಷಿಯ ಹುಟ್ಟಿನ ಬಗ್ಗೆ ಎರಡು ಬಗೆಯ ಕಥನಗಳಿವೆ. ಮೊದಲನೆಯದ್ದು ನಾವೆಲ್ಲರೂ ಶಾಲೆಯಲ್ಲಿ ಅರಿಯುವುದು. ಎರಡನೆಯದ್ದು ನಮ್ಮ ಧಾರ್ಮಿಕ ನಂಬಿಕೆಗಳಿಂದ ಬಂದದ್ದು. ಶಾಲೆಯಲ್ಲಿ ಹೇಳುವಂತೆ ಸುಮಾರು 10,000 ವರ್ಷಗಳ ಹಿಂದೆ ಕೃಷಿ ಆರಂಭವಾಯಿತು. ಇದು ಮನುಷ್ಯನನ್ನು ನಾಗರಿಕನನ್ನಾಗಿಸಿತು. ಅವನ ಅಲೆಮಾರಿ ಬದುಕನ್ನು ಕೊನೆಗೊಳಿಸಿ `ನಿವಾಸಿ'ಯಾಗುವಂತೆ ಮಾಡಿತು. ಚಕ್ರದಿಂದ ಆರಂಭಿಸಿ ಅತ್ಯಾಧುನಿಕ ಸೂಪರ್‌ ಕಂಪ್ಯೂಟರ್‌ಗಳವರೆಗಿನ ಎಲ್ಲ ಆವಿಷ್ಕಾರಗಳಿಗೂ ಬೇಸಾಯವೇ ಮೂಲ.

ಈ ವೈಜ್ಞಾನಿಕ ಕಥನದ ಹುಟ್ಟಿಗೆ ಕಾರಣವಾದದ್ದು ಡಾರ್ವಿನ್‌ನ ವಿಕಾಸವಾದ. ಈ ಕಥನವನ್ನು ಸೃಷ್ಟಿಸಿದ ಪ್ರದೇಶದಲ್ಲಿರುವ ಧಾರ್ಮಿಕ ನಂಬಿಕೆಗಳು ಬೇಸಾಯದ ಹುಟ್ಟಿಗೆ ಸಂಬಂಧಿಸಿದಂತೆ ಬೇರೊಂದು ಕಥೆಯನ್ನು ಹೇಳುತ್ತವೆ. ಆದಿ ಪುರುಷ ಆಡಂ ಮತ್ತು ಆದಿ ಮಾತೆ ಈವ್‌ ಇದ್ದದ್ದು ಏಡನ್‌ ಉದ್ಯಾನವನದಲ್ಲಿ. ಅಲ್ಲಿದ್ದ ಜ್ಞಾನವೃಕ್ಷದ ಹಣ್ಣನ್ನು ಹೊರತು ಪಡಿಸಿದರೆ ಎಲ್ಲಾ ಮರ, ಗಿಡಗಳನ್ನೂ ಇವರಿಬ್ಬರೂ ಆಹಾರವಾಗಿ ಬಳಸುವ ಅನುಮತಿಯನ್ನು ದೇವರು ನೀಡಿದ್ದ. ಈವ್‌ ಒಂದು ದಿನ ಚಪಲಕ್ಕೆ ಬಲಿಯಾಗಿ ಜ್ಞಾನವೃಕ್ಷದ ಹಣ್ಣನ್ನು ತಿನ್ನುತ್ತಾಳೆ. ಆಡಂ ಆಕೆಯನ್ನು ಅನುಸರಿಸುತ್ತಾನೆ. ಆಜ್ಞೆಯನ್ನು ಪಾಲಿಸದ ಈ ತಪ್ಪಿಗಾಗಿ ದೇವರು ಅವರಿಗೆ ಶಿಕ್ಷೆ ವಿಧಿಸುತ್ತಾನೆ. ಅದರಂತೆ ಅವರು ಬೆವರು ಸುರಿಸಿ ದುಡಿದು ಬದುಕಬೇಕು. ಹಾಗೆ ಕೃಷಿ ಆರಂಭವಾಗುತ್ತದೆ.

ಅತ್ಯಂತ `ವೈಜ್ಞಾನಿಕ'ವಾಗಿರುವ ಮೊದಲ ಕಥನ ಮತ್ತು ಕೇವಲ ನಂಬಿಕೆಯನ್ನಷ್ಟೇ ಆಧಾರವಾಗಿ ಇಟ್ಟುಕೊಂಡಿರುವ ಎರಡನೇ ಕಥನಗಳ ಮಧ್ಯೆ ಮೂಲಭೂತವಾದ ವ್ಯತ್ಯಾಸಗಳೇನೂ ಇಲ್ಲ. ಮನುಷ್ಯ ನಿಸರ್ಗದಲ್ಲಿ ಆಹಾರವನ್ನು ಕಂಡುಕೊಳ್ಳುವುದರ ಬದಲಿಗೆ ಆಹಾರವನ್ನು ಸೃಷ್ಟಿಸುವ ಪ್ರಯತ್ನ ಆರಂಭಿಸಿದ ಎಂಬುದನ್ನು ಎರಡೂ ಕಥನಗಳು ಹೇಳುತ್ತಿವೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನಿಸರ್ಗವನ್ನು ತನಗೆ ಬೇಕಿರುವಂತೆ ಬದಲಾಯಿಸುವ ಪ್ರಯತ್ನಗಳನ್ನು ಮನುಷ್ಯ ಆರಂಭಿಸಿದ. ಆಡಂ ಮತ್ತು ಈವ್‌ರ ಕಥೆಯನ್ನು ಸೂಕ್ಷ್ಮವಾಗಿ ನೋಡಿದರೆ ಇದು ಅರ್ಥವಾಗುತ್ತದೆ.

ಜ್ಞಾನವೃಕ್ಷದ ಹಣ್ಣನ್ನು ತಿಂದದ್ದರಿಂದ ಅವರಲ್ಲಿ ಒಳಿತು-ಕೆಡುಕುಗಳ ಅರಿವುಂಟಾಯಿತು. ಅಂದರೆ ಅವರು ತಮ್ಮ ಮುಗ್ಧತೆಯನ್ನು ಕಳೆದುಕೊಂಡರು. ಈ ಮುಗ್ಧತೆಯನ್ನು ಕಳೆದುಕೊಳ್ಳುವುದರ ಜೊತೆಗೆ ಮನುಷ್ಯನ `ನಾಗರಿಕ'ನಾಗುವ ಪ್ರಕ್ರಿಯೆ ಆರಂಭಗೊಂಡಿತು. ಇದೇ ಕಾರಣಕ್ಕೆ ಚಾರ್ಲ್ಸ್‌ ಡಾರ್ವಿನ್‌ನ ಬಲವಿದ್ದವನಷ್ಟೇ ಉಳಿದುಕೊಳ್ಳುತ್ತಾನೆ ಎಂಬ ಸಿದ್ಧಾಂತ ಬಹಳ ತರ್ಕಬದ್ಧವಾಗಿ ಕಾಣಿಸಿದ್ದು. ಹಾಗೆಯೇ ಡಾರ್ವಿನ್‌ ಪ್ರಸಿದ್ಧನಾದ ಹೊತ್ತಿನಲ್ಲೇ ಸಸ್ಯವಿಜ್ಞಾನಿ ಆಂಟನ್‌ ಡಿ ಬಾರಿ ಮಂಡಿಸಿದ `ಕೂಡುಬಾಳುವೆ'ಯ ಸಿದ್ಧಾಂತ ಇನ್ನೂ ಅರ್ಥವಾಗದೇ ಹೋಗಿರುವುದು. ಆಂಟನ್‌ ಡಿ ಬಾರಿ ಹೇಳುವಂತೆ ತನ್ನಿಂದ ತಾನೇ ಪೂರ್ಣವಾಗುವ ಯಾವ ಜೀವಿಯೂ ಇಲ್ಲ. ಯಾರು ಯಾರನ್ನು ಕೊಲ್ಲುತ್ತಾರೆ ಎನ್ನುವುದಕ್ಕಿಂತ ಯಾರು ಬದುಕಬೇಕಾದರೆ ಯಾರಿರಬೇಕು ಎಂಬುದು ಬಹಳ ಮುಖ್ಯ. ನಮ್ಮ ಕಾಡುಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಬಲಶಾಲಿಯಷ್ಟೇ ಬದುಕುವುದಾದರೆ ಪೊದೆ, ಹುಲ್ಲುಗಳು ಇರುತ್ತಿರಲಿಲ್ಲ.

-ಇಸ್ಮಾಯಿಲ್‌